Oppanna.com

ಜಯದೇವನ ಗೀತೆ ಇಡೀ ಗೋವಿಂದನ ಲೀಲೆಗೊ..!

ಬರದೋರು :   ಒಪ್ಪಣ್ಣ    on   23/03/2012    19 ಒಪ್ಪಂಗೊ

ಕಳುದವಾರ ಕೊಡೆಯಾಲಕ್ಕೆ ಹೋದ್ಸು ಹೇಳಿದ್ದನೋ? ಇಲ್ಲೆ ತೋರ್ತು!
ಅಪ್ಪು, ಕಳುದವಾರ ಕೊಡೆಯಾಲಕ್ಕೆ ಹೋದ್ಸು.

ನಮ್ಮ ಹಳೆಮನೆತಂಗೆ ಪ್ರೈಸಿಲಿ ಪಷ್ಟಲ್ಲದೋ – ಆ ಲೆಕ್ಕಲ್ಲಿ ಒಂದರಿ ಬಾಯಿಚೀಪೆ ಆಯೇಕು ಹೇಳಿ ಹಟ ಶರ್ಮಪ್ಪಚ್ಚಿಯ ಕೈಲಿ ಹೇಳಿದ್ದಕ್ಕೆ ಆತಂಬಗ ಹೇಳಿ ಒಪ್ಪಿದವು.
ಓಯ್ ಭಾವ°, ಹೋಪನೋ? ಕೇಳಿದೆ ಅಭಾವನ ಹತ್ತರೆ.
ತಂಗೆ ಪಷ್ಟು ಬಂದದು ಕೊಶಿಯೇ ಆದರೂ – ಒಂದು ಊಟಕ್ಕೆ ಕೊಡೆಯಾಲಕ್ಕೆ ಹೋದರೆ ಅಸಲು ಬೀಳುಗೋ?
ಆರಾರು ಒಟ್ಟಿಂಗೆ ಹೋಪೋರಿದ್ದವೋ ಕಾದುನೋಡ್ಳೆ ಹೇಳಿದ. ಅವನ ಬೈಕ್ಕಿಂದ ಇನ್ನೊಬ್ಬರ ಕಾರಿಲಿ ಹೋದರೆ ಅಸಲು ಕಮ್ಮಿ ಆವುತ್ತಿದಾ! 😉

ಶ್ರೀಅಕ್ಕ° ಬತ್ತವೂದು ಗೊಂತಾತು. ಶ್ರೀಅಕ್ಕ° ಹೋವುತ್ತರೆ ಎರಡು ಗುಜ್ಜೆಯನ್ನೂ ತೆಕ್ಕೊಳ್ತ ಕಾರಣ ಬಸ್ಸಿಲಿ ಹೋಗವು; ಕಾರಿಲೇ ಹೋಕಟ್ಟೆ.
ಈ ಸರ್ತಿ ಗುಜ್ಜೆ ಮಾಂತ್ರ ಅಲ್ಲದ್ದೆ ಕಾನಾವಣ್ಣಂದೇ ಸೇರಿಗೊಂಡಿದ°! 😉
ಬೈಲಿಂದಲೇ ವಾಹನ ವೆವಸ್ತೆ ಇದ್ದ ಕಾರಣ ಮಾಷ್ಟ್ರುಮಾವಂದೇ ಬಂದವು.
ಸುಭಗಣ್ಣಂದೇ ಒಟ್ಟಿಂಗೆ ಬಪ್ಪದೂ ಹೇಳಿ ಇತ್ತು; ಆದರೆ – ಮಾರ್ಗದಕರೆ ಮಾವಿನಕಾಯಿ ಕೊಯಿಕ್ಕೊಂಬಲೆ ಇದ್ದ ಕಾರಣ “ಬೈಕ್ಕಿಲೇ ಬತ್ತೇ” – ಹೇದವು.
ಸರಿಯಾಗಿ ಒಂಭತ್ತೂವರೆಗೆ ಕಾರು ಹೆರಟತ್ತು.
~

ರಜ ಹೊತ್ತು ಮಾತಾಡಿ ಅಪ್ಪಗ ಒಂದರಿಯಾಣ ವಿಶೇಷಂಗೊ ಎಲ್ಲ ಮುಗಾತು. ಲೋಕಾಭಿರಾಮ ಆದರೂ ಎಷ್ಟೊತ್ತು ಮಾತಾಡ್ಳೆಡಿಗು?
ಮಾಷ್ಟ್ರುಮಾವ° ಪರಪರನೆ ಎಲೆತೊಟ್ಟೆ ಬಿಡುಸಿದವು – ಇನ್ನು ಅರ್ಧಗಂಟೆ ಮೌನ ವ್ರತ.
ಶ್ರೀಅಕ್ಕನ ಹತ್ತರೆ ಪೆರೆಪೆರೆ ಮಾತಾಡಿಗೊಂಡಿದ್ದ ಕಾನಾವಣ್ಣಂಗೆ ಬಾಯಿ ಬಚ್ಚಿ ಆವಳಿಗೆ ಸುರು ಆತು.
ಅಭಾವಂಗೆ ಮೊಬಿಳಿಲಿ ಸಮೋಸ ಪೂರ ಕಾಲಿ ಆತು.
ರೂಪತ್ತೆ ಆದರೆ ಸ್ವತಃ ಕಾರು ಬಿಡುಗು, ಆದರೆ ಶ್ರೀಅಕ್ಕಂಗೆ ಅದೆಲ್ಲ ಅರಡಿಯ – ಹಾಂಗೆ ಡ್ರೈವರ ಬಂದಿತ್ತು.
ಪಾಪ, ಎಷ್ಟೇ ಸರುವೀಸು ಇಪ್ಪ ಜೆನ ಆದರೂ ಗುಂಡಾಗುಂಡಿ ಮಾರ್ಗಲ್ಲಿ ಕಾರು ಬಿಡುವಗ ಸಾಕೋಸಾಕಾತು. ದೊಡ್ಡಬಾವನೂ ಈಗ ಕಾರು ಬಿಡ್ತ ಜೆನ ಅಪ್ಪೋ – ಎಷ್ಟು ಬಚ್ಚುಗೋ ಏನೋ!
ಅದಿರಳಿ.
ಆತನ್ನೇ – ಇನ್ನೆಂತ ಮಾಡುದು? ಡ್ರೈವರು ಒಬ್ಬಂಗೇ ಉದಾಸನ ಅಪ್ಪದಕ್ಕೆ ಟೇಪ್ರೆಕಾರ್ಡಿಲಿ ಪದ ಮಡಗಿತ್ತು.
ಅದರೊಳ ಇದ್ದಿದ್ದ ಸುರೂವಾಣ ಪದ್ಯ ತಿರುಗಲೆ ಸುರು ಆತು.
ಟಿಂ-ಟಿಂ-ಟಿಂ – ಜಲತರಂಗದ ನಾದಲ್ಲಿ ಹಾಡು ಸುರು ಆತು.
ಭಜನೆಯ ಹಾಂಗೆ ಕೇಳ್ತ ಆ ಪದ – ಸಣ್ಣ ಕೊಚಕ್ಕ ಹೇಳಿದ – ಚೆಂದದ ಪದ್ಯ. ಕೂಚಕ್ಕನೂ ಚೆಂದದ್ದೇ ಆಯಿಕ್ಕಟ್ಟೆ – ಗ್ರೇಶುಗು ಅಭಾವ! 😉
ಏರು ಶೃತಿಯ (ಸುಬಗಣ್ಣಂಗೆ ಸಾರಡಿಪುಳ್ಳಿಯನ್ನೇ ನೆಂಪಕ್ಕು) ಒಟ್ಟಿಂಗೆ ಬೀಸಬೀಸದ ತಾಳವೂ ಇದ್ದತ್ತು. ಕೇಳ್ತೋನಿಂಗೂ ಒಂದರಿ ತಲೆತೂಗಿ ತಾಳ ಹಾಕೇಕಾದ ಆಶೆ.
ಪದ ಸುರು ಅಪ್ಪದೇ – ಒಂದು ವಿಶೇಷ ಅನುಸಿತ್ತು.
ಅದೆಂತರ?
~

ಸಾಮಾನ್ಯ ಆ ನಮುನೆ ಸಂಗೀತದ ಪದಂಗೊ ಕನ್ನಡವೋ, ತುಳುವೋ, ಮಲೆಯಾಳವೋ – ಹೀಂಗೆಂತಾರಾಯಿಕ್ಕಟ್ಟೆ.
ಆದರೆ ಈ ಹಾಡು ಇದ್ದದು ಕನ್ನಡಲ್ಲಿಯೂ ಅಲ್ಲ, ಮಲೆಯಾಳವೂ ಅಲ್ಲ – ತೆಮುಳೂ ಅಲ್ಲ!
ಅದು ಸಂಸ್ಕೃತಲ್ಲಿ!!

ಸಂಸ್ಕೃತದ ಕೆಲವು ರಾಗದ ಶ್ಲೋಕಂಗಳೋ, ಕಷ್ಟದ ಉಚ್ಛಾರದ ಮಂತ್ರಂಗಳೋ, ಅಲ್ಲ ಸ್ವಸ್ತಿವಾಚನವೋ – ಹೀಂಗೆಂತಾರು ಕೇಳ್ತು ನಾವು.
ಆದರೆ ಇದು – ತಾಳ, ರಾಗ ಎಲ್ಲ ಸೇರಿಗೊಂಡ ಭಕ್ತಿಗೀತೆ / ಭಾವಾಭಿವ್ಯಕ್ತಿಗೀತೆ.
ಸಂಸ್ಕೃತದ ಭಕ್ತಿಗೀತೆ ಇದ್ದೋಂಬಗ?
ಚೆಲ! ಆರು ಬರದ್ದಾಯಿಕ್ಕು? ಆರು ಹಾಡಿದ್ದಪ್ಪಾ! ಯೇವ ದೇವರದ್ದು? ಕೃಷ್ಣಂದೋ? ಅಂಬಗ – ಇಸ್ಕೋನಿನವೋ?
ಇದು ಸಂಸ್ಕೃತಲ್ಲಿ ಇಪ್ಪ ಹಾಡುಗೊ; ದೀಪಿಅಕ್ಕ° ಕೊಟ್ಟದು – ಹೇಳಿದವು ಶ್ರೀಅಕ್ಕ°.
~

ಮಂಜೇಶ್ವರ ಪೋಷ್ಟಾಪೀಸಿನ ಎದುರೆ ಮಾರ್ಗರಿಪೇರಿಯವು ಕಲ್ಲು ಸೊರಿಗಿಂಡಿದ್ದ ಕಾರಣ – ಒಂದರಿ ಕಾರು ನಿಂದತ್ತು; ಎದುರಾಣ ಸೀಟಿಲಿದ್ದ ಮಾಷ್ಟ್ರುಮಾವ° ಒಂದರಿ ತಲೆ ಹೆರಹಾಕಿ ಎಲೆತುಪ್ಪಿಗೊಂಡವು.
ಸಾಮಾನ್ಯವಾಗಿ ಅವು ಎಲೆ ತುಪ್ಪಿದವು ಹೇಳಿ ಆದರೆ ಮೂರೇ ಕಾರಣ
– ಒಂದೋ ಏನಾರು ಅಗತ್ಯದ್ದು ಮಾತಾಡ್ಳೆ,
– ಅಲ್ಲದ್ದರೆ ಊಟವೋ-ತಿಂಡಿಯೋ ಎಂತಾರು ತೆಕ್ಕೊಂಬಲೆ,
– ಅದೂ ಅಲ್ಲದ್ದರೆ ಇನ್ನೊಂದರಿ ಎಲೆ ತಿಂಬಲೆ!! 🙂
~
ಈಗ ಮಾತಾಡ್ಳೇ ಸುರುಮಾಡಿದವು.
ಇದು ಗೀತಗೋವಿಂದ ಅಲ್ಲದೋ? ಕೇಳಿದವು.
ಗೀತನೋ – ಗೋವಿಂದನೋ? – ಒಪ್ಪಣ್ಣಂಗೆ ಇಬ್ರನ್ನೂ ಕಂಡು ಅರಡಿಗು – ದೊಡ್ಡಜ್ಜನ ಮನೆಲಿ! ಆದರೆ ಇದೆಂತರ ಗೀತಗೋವಿಂದ – ಹೇದು ಅಂದಾಜಿ ಆಯಿದಿಲ್ಲೆ. 😉
‘ಏ°? ಯೇವದು?’ – ಕೇಟೆ ಪುನಾ.
ಜಯದೇವಂದಲ್ಲದೋ – ಗೀತಗೋವಿಂದ – ಹೇಳಿದವು.
ಇದಾರು ಜಯದೇವ? ಎಂತರ ಗೀತಗೋವಿಂದ – ಚೆಂದಕೆ ಕತೆ ಹೇಳಿ ವಿವರುಸಿದವು.
~
ಮಾಷ್ಟ್ರುಮಾವ° ಪಾಟ ಮಾಡುದೇ ಚೆಂದ. ಅವು ಕತೆ ಹೇಳುದು ಇನ್ನೂ ಚೆಂದ; ಅದರ ಕೇಳುದು ಮತ್ತೂ ಚೆಂದ.
ಆರು ಆರಿಂಗೆ ಎಂತ ಹೇಳಿದವೋ – ಅದೇ ಭಾವನೆ, ಅದೇ ಧಾಟಿಲಿ ಮಕ್ಕೊಗೆ ಅರ್ತ ಅಪ್ಪಹಾಂಗೆ ನಮ್ಮ ಭಾಶೆಲಿ ವಾಕ್ಯರಚನೆ ಮಾಡಿ ವಿವರುಸುವಗ
ಮದಲಿಂಗೆ ಅವು ಧಾರಾಳ ಕತೆ ಹೇಳುಗು.
ಈಗ ಕೇಳೇಕಾದೋರಿಂಗೇ ಲೇಬು, ಪರೀಕ್ಷೆ ಹೇದು ಪುರುಸೊತ್ತಿಲ್ಲದ್ದೆ ಹೋತಷ್ಟೇ, ಅಲ್ಲದ್ದರೆ ಸಂದರ್ಭ ಬಂದರೆ ಈಗಳೂ ಹೇಳ್ತವು. ಅದಿರಳಿ.
ಇಂದು ಎದುರಾಣ ಸೀಟಿಲಿ ಅವು ಕಾಲುನೀಡಿ ಕತೆ ಹೇಳುಲೆ ಸುರುಮಾಡುವಗ ನಾವು, ಹತ್ತರೆ ಅಭಾವ°, ಅತ್ಲಾಗಿ ಕಿಟುಕಿಕರೆಲಿ ಶ್ರೀಅಕ್ಕ° – ಶ್ರೀಅಕ್ಕನ ಕಾಲಿಲಿ ಕಾನಾವಣ್ಣ – ಕೂದುಗೊಂಡು ಕೇಳುದು.
ಎದುರಾಣ ಬಲತ್ತಿಂಗೆ ಕೂದ ಡ್ರೈವರು ಕತೆ ಕೇಳುಲೆ ಸುರುಮಾಡಿರೆ ಕತೆಕೆಡುಗಿದಾ!
~

ಜಯದೇವ – ಗೀತಗೋವಿಂದ:
ಪುರಿ ದೇವಸ್ಥಾನಲ್ಲಿ ಜಗನ್ನಾಥ ಕೃಷ್ಣ ದೇವರು.
ಎಷ್ಟೋ ಶತಮಾನಂದ ಆ ದೇವಸ್ಥಾನ ಹೆಸರುವಾಸಿ. ವೈಷ್ಣವರ ದೊಡ್ಡ ಸಂಕ್ಯೆಯೇ ಆ ದೇವರಿಂಗೆ ನೆಡಕ್ಕೊಂಡಿದ್ದತ್ತು.
ನಮ್ಮ ಕಣಿಯಾರ ದೇವಸ್ಥಾನದ ಹಾಂಗೆ ಶುದ್ಧಲ್ಲಿ ಮಿಂದು, ಹೋಮ-ಧೂಮ, ಅಭಿಷೇಕ ಮಂತ್ರ – ಹೇದು ನೆಡಕ್ಕೊಂಬ ಕ್ರಮ ಅಲ್ಲ ಅಲ್ಲಿ; ಬದಲಾಗಿ – ಭಕ್ತಿ ಪಂಥ ಅಡ.
ಕೃಷ್ಣನೇ ಮೈತುಂಬಾ ನಂಬಿಗೊಂಡು – ತಾಳವಾದ್ಯ, ನಾಟ್ಯ ನೃತ್ಯದ ಒಟ್ಟಿಂಗೆ ಗಂಟೆಗಟ್ಳೆ ಭಜನೆಮಾಡಿ ಬೆಗರರಿಶಿ ಭಕ್ತಿಪರವಶವಾಗಿ ಕೊಣುದು – ಈ ನಮುನೆ ಅಡ.
ಈಗಾಣ ಇಸ್ಕಾನಿನವುದೇ ಅದೇ ಊರಿನ ಸಂಸ್ಕಾರವ ಪಡಕ್ಕೊಂಡು ಬೆಳೆಶಿಂಡು ಬಂದದು – ಹೇಳಿದವು. ಅದಿರಳಿ.

ಆ ಊರಿಲಿ ಹನ್ನೆರಡ್ಣೇ ಶತಮಾನಲ್ಲಿ ಗಂಗರ ಆಳ್ವಿಕೆ ಅಡ.
ಪುರಿ ಜಗನ್ನಾಥನ ಊರಿನ ಒಂದು ಬಡ ಬ್ರಾಹ್ಮಣ ಕುಟುಂಬಲ್ಲಿ ಜಯದೇವ ಹೇಳ್ತ ಕವಿಯ ಉಗಮ ಆವುತ್ತು.
ವೈಷ್ಣವ ಕುಟುಂಬಲ್ಲಿ ಹುಟ್ಟಿದ ಅವನ ಬಾಲ್ಯಂದಲೇ ಗೀತಸಂಸ್ಕಾರವ ಪಡಕ್ಕೊಂಡು, ಮುಂದೆ ಕೋನಾರ್ಕಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಪಡಕ್ಕೊಳ್ತನಡ. ಅಧ್ಯಯನ ಆದ ಮೇಗೆ ಅಲ್ಲಿಯೇ ಅಧ್ಯಾಪನ ಸುರುಮಾಡಿದನಡ.
ಮುಂದೆ ಪುರಿ ದೇವಸ್ಥಾನಲ್ಲಿ ನಾಟ್ಯಮಾಡಿಂಡಿದ್ದ ’ಪದ್ಮಾವತಿ’ ಹೇಳ್ತರ ಪರಿಚಯ ಆವುತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಆವುತ್ತಡ.

ಜಯದೇವ ಕವಿಗೆ ವೈಷ್ಣವ ಸಂಸ್ಕಾರಂದ ಬಂದ ಜಯದೇವಂಗೆ ಕೃಷ್ಣ ಭಕ್ತಿ ಅರಡಿಗು,
ನೃತ್ಯ ಭಜನೆಂದಾಗಿ ರಾಗತಾಳಲಯಂಗಳೂ ಅರಡಿಗು,
ಸ್ವತಃ ಅಧ್ಯಯನ ಮಾಡಿ ಸಂಸ್ಕೃತವೂ ಅರಡಿಗು,
ಪ್ರೇಮಿಸಿ ಮದುವೆ ಆದ ಕಾರಣ ಪ್ರೀತಿಯ ಬಗ್ಗೆಯೂ ಅರಡಿಗು.
ಇದೆಲ್ಲವೂ ಸೇರಿ ಭಗವಾನ್ ಶ್ರೀಕೃಷ್ಣನ ಪ್ರೇಮಕಾವ್ಯ ಆಗಿ “ಗೀತಗೋವಿಂದ” ರಚನೆ ಆತಡ.
ಸರಳಸಂಸ್ಕೃತಲ್ಲಿಪ್ಪ ಮಹತ್ತರ ಕಾವ್ಯಂಗಳಲ್ಲಿ ಅದುದೇ ಒಂದಡ.
ಈ ಗೀತಗೋವಿಂದ ಹೇಳಿದರೆ, ಬರೇ ಒಂದು ಕಾವ್ಯ ಆಗಿರದ್ದೇ, ಮುಂದೆ ಭಕ್ತಿಪಂಥದ ಬೆಳವಣಿಗೆಲಿ ದೊಡ್ಡ ವಸ್ತು ಆಗಿತ್ತಡ.
ಅಂಬಗಾಣ ಭಕ್ತಿಪಂಥದ ಪ್ರಭಾವಂದ ಹುಟ್ಟಿದ ಈ ಕಾವ್ಯ, ಅದೇ ಭಕ್ತಿಪಂಥದ ಬೆಳವಣಿಗೆ ಕಾರಣ ಆತಡ – ಹೇಳಿದವು.
~
ಗೀತಗೋವಿಂದ ಹೇದರೆ ಗೋಪಾಲ ಕೃಷ್ಣನ – ಮತ್ತೆ ಗೋಪಿಕಾ ಸ್ತ್ರೀ ರಾಧೆಯ ನಡುವೆ ಇಪ್ಪ ಪ್ರೇಮಾನುಬಂಧದ ಎಳೆ ಎಳೆಯ ವರ್ಣನೆ ಅಡ.
ಒಡಿಸ್ಸಿ – ಭರತನಾಟ್ಯಂಗಳಲ್ಲಿ ಈ ಘಟನೆಗಳ ಚೆಂದಕೆ ಅಭಿನಯಿಸಿ ತೋರುಸುತ್ತವಡ.
ಭರತನಾಟ್ಯಕ್ಕೆ ಹೊಂದುವ ಹಾಂಗೇ ವಾಕ್ಯರಚನೆಗೊ ಇದ್ದಡ. ಎಂಟೆಂಟು ಸಾಲಿನ ಅಷ್ಟಪದಿಗೊ ಇಪ್ಪದಡ.
ಗೀತಗೋವಿಂದಲ್ಲಿ ಹನ್ನೆರಡು ಅಧ್ಯಾಯ ಇದ್ದಡ. ಪ್ರತಿ ಅಧ್ಯಾಯಲ್ಲಿಯೂ ಹತ್ತು ಪ್ರಬಂಧಂಗೊ ಇದ್ದಡ. ಒಂದೊಂದು ಪ್ರಬಂಧಲ್ಲಿಯೂ ಎಂಟೆಂಟು ಗೆರೆಯ ಅಷ್ಟಪದಿಗೊ ಇಪ್ಪದಡ.
ಅಂಬಗ ಒಟ್ಟೆಷ್ಟು ಗೆರೆ ಆತು – ಹನ್ನೆರಡು ಹತ್ಲಿ – ನೂರಿಪ್ಪತ್ತು; ನೂರಿಪ್ಪತ್ತು ಎಂಟ್ಳಿ – ಕೇಲ್ಕುಲೇಟು ಮಾಡ್ಳೆ ಅಭಾವ ಮೊಬಿಳಿ ತೆಗದ; ಅಷ್ಟಪ್ಪಗ ಹೊಸತ್ತು ಬಂದ ಸಮೋಸ ಒಂದರ ಕಂಡು ನೆಗೆ ಸುರುಮಾಡಿದ°.

ಪದಲಾಲಿತ್ಯಂಗಳ, ಅಕ್ಷರ ಜೋಡಣೆಗೊ, ಅದರ ಪ್ರಾಸಂಗಳ ಕಾಂಬಗ ಒಂದೊಂದರಿ ಆ ಮಹಾಕವಿ ಕಾಳಿದಾಸನ ನೆಂಪಾವುತ್ತಡ ಮಾಷ್ಟ್ರುಮಾವಂಗೆ.
ಅವನ ಕಾವ್ಯಲ್ಲಿಡೀ ಗೋವಿಂದನ ಲೀಲೆಗಳೇ ತುಂಬಿದ್ದಡ. ಮೈಮನಸ್ಸಿಲಿ ಗೋವಿಂದನನ್ನೇ ತುಂಬುಸಿಂಡು, ಅವನ ಲೀಲೆಗೊ ಇವಂಗೆ ಕಂಡ ಹಾಂಗೇ ಬರಕ್ಕೊಂಡು ಹೋಯಿದನಡ.
ಸಂಸ್ಕೃತದ ಸುಲಲಿತ ಶಬ್ದಂಗಳ ಸರಳವಾಗಿ ಜೋಡುಸಿ ಕೃಷ್ಣ-ರಾಧೆಯರ ಪ್ರೇಮವ ಅಮರವಾಗುಸಿದನಡ ಜಯದೇವ.

~

ಇದಾ, ಈಗ ಕೇಳ್ತಾ ಇಪ್ಪ ಅಷ್ಟಪದಿಯ ತೆಕ್ಕೊಂಡು ನೋಡುವೊ° – ಹೇಳಿ ಗೀತಗೋವಿಂದದ ಪದಲಾಲಿತ್ಯವ ವಿವರುಸುಲೆ ಸುರುಮಾಡಿದವು.
ಕೃಷ್ಣನ ರೂಪದ ವರ್ಣನೆ ಇಪ್ಪ ಸಾಲು ಇದು.

ಚಂದನ ಚರ್ಚಿತ ನೀಲ ಕಲೇಬರ ಪೀತವಸನ ವನಮಾಲೀ ಹೇಳಿ ಸುರು ಅಪ್ಪದು ಈ ಅಷ್ಟಪದಿ.
ಚಂದನ ಚರ್ಚಿತ – ಅರದ ಗಂಧವ ಉದ್ದಿಗೊಂಡು, ನೀಲ ಕಲೇಬರ- ಕಪ್ಪು ಮೈಯೋನು, ಪೀತ ವಸನ – ಅರುಶಿನ ಪಟ್ಟೆಯ ಸುತ್ತಿಗೊಂಡ, ವೈಜಯಂತೀ ಮಾಲೆ / ಹೂಮಾಲೆ ಹಾಕಿಂಡ – ವನಮಾಲೀ;
ಗಂಧವ ಮೈಗೆ ಉದ್ದಿಗೊಂಡು, ಹೂಮಾಲೆ ಹಾಕಿಂಡು ಅರುಶಿನ ಪಟ್ಟೆಲಿ ಶೋಭಾಯಮಾನ ಆಗಿಪ್ಪ ಕಪ್ಪುಮೈಯ ಮಾಣಿ – ಹೇಳ್ತದರ ಒಂದೇ ಒಂದು ಕಷ್ಟದ ಒತ್ತಕ್ಷರ ಇಲ್ಲದ್ದೆ ಎಷ್ಟು ಚೆಂದಕೆ ಪೋಣುಸಿದ್ದ ಹೇಳಿದವು!
ಒಂದರಿ ಓದಿರೇ ನಮ್ಮ ತಲೆಲಿ ನೆಂಪೊಳಿವ ಹಾಂಗಿದ್ದು.

ಓಹ್ – ಇದರ್ಲಿಯೂ ಒತ್ತಕ್ಷರ ಇಲ್ಲೆಪ್ಪೋ – ಹೇಳಿದೆ. ಅಂಬಗ ಜಯದೇವಂಗೂ ಕೊಕ್ಕಳಿಕೆ ಇದ್ದಿಕ್ಕೋ – ಕೇಳುಗು ಅಭಾವ°. 😉

ಕೇಲಿ ಚಲನ್ಮಣಿ ಕುಂಡಲ ಮಂಡಿತ ಗಂಡಯುಗಸ್ಮಿತಶಾಲಿ –
ಕೇಲಿ ಚಲತ್- ಆಡಿಂಡಿಪ್ಪ; ಮಣಿ ಕುಂಡಲ – (ಕುಂಡಲ ಮಣಿ) ಕೆಮಿಯ ಆಭರಣ; ಮಂಡಿತ – ಹೊಂದಿಂಡಿಪ್ಪ / ಅಲಂಕೃತವಾಗಿಪ್ಪ; ಗಂಡ ಯುಗ – ಎರಡು ಕೆಪ್ಪಟೆ, ಸ್ಮಿತ ಶಾಲೀ – ನೆಗೆ ಮಾಡಿಂಡಿಪ್ಪ.
ಕೆಮಿಯ ಆಭರಣಂದ ಅಲಂಕೃತವಾಗಿಪ್ಪ ಎರಡು ಕೆಪ್ಪಟೆಲಿ ತುಂಬ ಮುಗುಳ್ನಗೆಯ ಹೊಂದಿಂಡು ಆಡಿಂಡಿಪ್ಪ ಶ್ರೀಕೃಷ್ಣನ ಮೂರ್ತಿ ನಮ್ಮೆದುರು ಕಂಡು ನಿಲ್ಲುತ್ತು!

ಹರಿರಿಹ ಮುಗ್ಧವಧೂನಿಕರೇ
ವಿಲಾಸಿನಿ ವಿಲಸತಿ ಕೇಲಿಪರೇ!

ಹರಿ – ಕೃಷ್ಣ; ಇಹ – ಈಗ; ಮುಗ್ಧ ವಧೂನಿಕರೇ – ಮುಗ್ಧವಾದ ಗೋಪಿಕಾ ಸ್ತ್ರೀಯರ ಒಟ್ಟಿಂಗೆ; ವಿಲಾಸಿನಿ – ಸಂತೋಷಲ್ಲಿಪ್ಪ; ವಿಲಸತಿ – ಆನಂದಪಟ್ಟುಗೊಂಡು; ಕೇಲಿಪರೇ – ಆಟಲ್ಲಿ ತೊಡಗಿದೋನು!
ಸಂತೋಷವಾದ, ಮುಗ್ಧ ಗೋಪಿಕಾ ಸ್ತ್ರೀಯರೊಟ್ಟಿಂಗೆ ಆನಂದಪಟ್ಟುಗೊಂಡ ಕೃಷ್ಣ ಆಟಲ್ಲಿ ತೊಡಗಿಂಡಿದ್ದ.

~

ನೀಲಕಲೇಬರ - ಪೀತವಸನ - ವನಮಾಲೀ... (ಚಿತ್ರ: ಅಂತರ್ಜಾಲ)

ಜಯದೇವನ ಬಗ್ಗೆ ಹಲವಾರು ದಂತಕತೆಗೊ ಪ್ರಚಲಿತಲ್ಲಿ ಇತ್ತಾಡ; ಅದರ್ಲಿ ಒಂದರ ನೆಂಪುಮಾಡಿ ಹೇಳಿದವು.

ಈ ಗೀತಗೋವಿಂದ ಬರಕ್ಕೊಂಡಿದ್ದಿದ್ದ ಸಮೆಯಲ್ಲಿ – ರಾಧೆಯ ಒಟ್ಟಿಂಗೆ ಕೃಷ್ಣನ ಒಡನಾಟವ ವರ್ಣನೆ ಮಾಡುವ ಶೃಂಗಾರದ ಅಮಲಿಲಿ ಇದ್ದಿದ್ದ ಜಯದೇವಂಗೆ
– ತಲಗೆ ಹೊಳದ ಎರಡು ಶೃಂಗಾರ ವಾಕ್ಯವ ಇನ್ನೇನೋ ಬರೇಕು – ಹೇದು ಆಲೋಚನೆ ಮಾಡುವಗ…
ಛೇ, ದೇವರ ಹಾಂಗೆಲ್ಲ ಬರವದೋ – ಹೇದು ಅಪರಾಧೀ ಭಾವನೆಯೂ ಬಂತಡ.
ಆಲೋಚನೆ ಮಾಡಿದ°, ಮಾಡಿದ°, ಅದರಿಂದ ಲಾಯಿಕದ ಗೆರೆಗೊ ಹೊಳೆತ್ತೇ ಇಲ್ಲೆ ತಲಗೆ! ಎಂತ ಮಾಡುದು?
ಹೊತ್ತು ಮದ್ಯಾನ್ನ ಆತು – ಮೀವಲಾತು.
ಮಿಂದಿಕ್ಕಿ ಬಂದೀತೆ, ಇದರ ಒಳ ಮಡಗು – ಹೇದು ಆ ತಾಳೆಗರಿಯ ಪದ್ಮಾವತಿಯ ಹತ್ತರೆ ಕೊಟ್ಟನಡ. ಅದು ತೆಗದು ದೇವರೊಳ ಮಡಗಿಕ್ಕಿ ಅದರ ಕೆಲಸಲ್ಲಿ ಮುಂದುವರುತ್ತು.
ಎಣ್ಣೆ ಕಿಟ್ಟಿಗೊಂಡು ದೂರದ ಕೆರೆಗೆ ಮೀವಲೆ ನೆಡಕ್ಕೊಂಡು ಹೆರಟನಡ…

ರಜ್ಜ ಹೊತ್ತಪ್ಪಗ ಬುರುಬುರುನೆ ಓಡಿಗೊಂಡು ಬಂದು – ಪದ್ಮಾವತೀ, ಆ ಪುಸ್ತಕ ತಾ, ತುಂಬ ಹೊತ್ತು ಆಲೋಚನೆ ಮಾಡಿದ ಆ ಗೆರೆ ಹೊಳದತ್ತು – ಹೇಳಿದನಡ.
ಹೋ ಇವರ ಅಂಬೆರ್ಪೇ – ಹೇದು ಗ್ರೇಶಿತ್ತೋ ಏನೋ, ಅರ್ದ ಬರದು ಮಡಗಿದರ ತಂದು ಕೊಟ್ಟತ್ತು.
ಎಣ್ಣೆಪಸೆ ಬೇರೆ, ಅದರ ಮೇಗಂದ ಓಡಿಂಡು ಬಂದ ಬೆಗರು!!
ಬೆಗರು ಇನ್ನು ತಾಳೆಗರಿಗೆ ಬೀಳುಸ್ಸು ಬೇಡ – ಹೇಳಿಗೊಂಡು ಅದರ ಸೆರಗಿಲಿ ಉದ್ದಿತ್ತಡ.
ಬರದೇ ಬರದ°. ಪುಸ್ತಕವ ಒಪಾಸು ಒಳ ಮಡುಗಲೆ ಕೊಟ್ಟಿಕ್ಕಿ ಮೀವಲೆ ಹೋದ°.

ಜಯದೇವ ಮಿಂದಿಕ್ಕಿ ಬಂದ°. ಬಂದ ಕೂಡ್ಳೇ ಉಂಡ.
ಊಟ ಆಗಿ ಕಾಲುನೀಡಿ ಕೂದುಗೊಂಡು ’ಪದ್ಮಾವತೀ, ಆ ಪುಸ್ತಕ ತಾ. ಆಗಂದ ಆಲೋಚನೆ ಮಾಡಿದ ಆ ಗೆರೆಯ ಎಂತಾರು ಮಾಡಿ ಬರದು ಮುಗುಶೀತೆ’ ಹೇಳಿದನಡ ಬೇಜಾರಲ್ಲಿ.
ಅರೆ! ಯಾವ ಗೆರೆ? ನಿಂಗೊ ಅಲ್ಲದೋ ಆಗ ಮೀವಲೆ ಹೆರಟೋರು ಇರುವಾರ ಬಂದು ಬರದ್ಸು – ಕೇಳಿತ್ತಡ.
ಆನೆಲ್ಲಿ ಬಯಿಂದೆ? ಮೀವಲೆ ಹೆರಟೋನು ಮಿಂದಿಕ್ಕಿಯೇ ಬಂದದು; ಈಗ ಉಂಡಿಕ್ಕಿ ಕೂಯಿದೆ ಇದಾ – ಹೇಳಿದನಡ.
ನಿಂಗಳ ಮೈಲಿ ಬೆಗರು-ಎಣ್ಣೆಪಸೆ ಅರುಕ್ಕೊಂಡಿತ್ತಲ್ಲದೋ – ಇದಾ – ಆನು ಎನ್ನ ಸೆರಗಿಲಿಯೇ ಉದ್ದಿತ್ತಿದ್ದೆ – ಹೇಳಿ ಸೆರಗಿನ ತೋರುಸುವಗ… ಚಿನ್ನದ ಹೊಡಿಗೊ ಕಂಡತ್ತಡ!!!
ಬಂದಿದ್ದದು ಸಾಕ್ಷಾತ್ ಪರಮಾತ್ಮನೇ ಆಗಿತ್ತಡ!
ಹೋ, ನಿನಗೆ ಅವ ಸಾಕ್ಷಾತ್ ಕಂಡ, ನೀನೇ ಭಾಗ್ಯವಂತೆ – ಹೇದು ಹೆಂಡತ್ತಿಯ ಹೇಳಿದನಡ.
ನೋಡೊ°, ಆ ಪುಸ್ತಕ ತಾ, ಎಂತ ಬರದ್ದದು ನೋಡಿಕುತ್ತೆ – ಹೇಳಿದನಡ. ನೋಡುವಗ ಇವನ ತಲಗೆ ಹೊಳದಿದ್ದ ಅದೇ ಎರಡು ಗೆರೆಯ ದೇವರು ಬರದಿಕ್ಕಿ ಹೋಯಿದನಡ.
ಶೃಂಗಾರವ ವರ್ಣನೆ ಮಾಡುವಗ ಹಾಂಗೆ ಹೇಳಿರೆ ದೇವರಿಂಗೇ ಅಕ್ಕು ಹೇಳಿ ಆಯಿದಂಬಗ – ಅಲ್ಲದೋ – ಹೇಳಿ ಜಯದೇವ ಹೇಳಿಗೊಂಡನಡ.

ಮಾಷ್ಟ್ರುಮಾವ° ಇಷ್ಟು ವಿವರ್ಸಿ ಪುನಾ ಎಲೆಯಿಂಬಲೆ ಸುರುಮಾಡಿದವು. 😉
~

ಚೆಂದದ ರಾಗಲ್ಲಿ ಹಾಡಿದ ಆ ಪದವ ಕೇಳಿಅಪ್ಪಗ ಮನಸ್ಸು ಉಲ್ಲಸಿತ ಅಪ್ಪದಂತೂ ನಿಜ.
ಇಷ್ಟೆಲ್ಲ ಮಾತಾಡಿಂಡಿಪ್ಪಗ ಕಾನಾವಣ್ಣನ ಪರಪರ ಎಡೆಲಿಯೂ ಶ್ರೀಅಕ್ಕ° ಒಂದರಿ ಮಾತಾಡಿದವು –
ಆರೋ – ಸುಭಿಕ್ಷಾ ಹೇಳಿ ಒಂದು ಸಣ್ಣ ಪ್ರಾಯದ ಕೂಸು ಹಾಡಿದ್ದದು. ಇದರ ಅವಕ್ಕೆ ದೀಪಿಅಕ್ಕ° ಕೊಟ್ಟದಡ.
ಮೋಹನ ರಾಗಲ್ಲಿ ಇದ್ದಡ; ದೀಪಿಅಕ್ಕಂಗೆ ಸಂಗೀತ ಅರಡಿಗು ಇದಾ!
~
ಪದ ತಿರುಗೆಂಡೇ ಇದ್ದತ್ತು.. ಸುಮಾರು ಸರ್ತಿ.
ಕಾನಾವಣ್ಣಂಗೆ ಒರಕ್ಕು ಬಪ್ಪಗಳೂ ನಿಂದಿದಿಲ್ಲೆ; ಕೊಡೆಯಾಲ ಎತ್ತುವಗಳೂ ನಿಂದಿದಿಲ್ಲೆ.
ನವಗೆ ಸುರುವಿಂಗೆ ಕೇಳಿ ಅಪ್ಪಗಳೇ ಕೊಶಿ ಆಗಿತ್ತು.
ಮೋಹನರಾಗ ಹೇದು ಗೊಂತಪ್ಪಗ ಮತ್ತೂ ಕೊಶಿ ಆತು.
ಈ ಪದದ ಹಿಂದಾಣ ಕತೆ ಕೇಳಿ ಅಪ್ಪಗ ಮತ್ತೂ ಕೊಶಿ ಆತು.
ಕುಶಿಲೇ ಕೊಡೆಯಾಲಕ್ಕೆ ಹೋಗಿ, ಕೊಶಿಲೇ ಉಂಡಿಕ್ಕಿ – ಹಳೆಮನೆ ತಂಗೆಗೆ ಕೊಶಿಲೇ ಶುಭಾಶಯ ಹೇಳಿಕ್ಕಿ ಬಂದಾತು; ಆ ವಿವರ ಇನ್ನೊಂದರಿ ಮಾತಾಡುವೊ°.
~

ಒಂದೊಪ್ಪ: ಭಾವ ಪ್ರಕಟ ಆದ ಪದ್ಯವ ಕೇಳುವಗಳೂ ಅದೇ ನಮುನೆ ಭಾವಾಭಿವ್ಯಕ್ತಿ ಆವುತ್ತಲ್ಲದೋ?

ಸೂ:
ಅಂತರ್ಜಾಲ ಕೃಪೆ:

ಗೀತಗೋವಿಂದ ಕೇಳುಲೆ:
ದಕ್ಷಿಣಾದಿ ಶೈಲಿಲಿ ಸುಭಿಕ್ಷಾ ಹಾಡಿದ ಪದ : http://www.muzigle.com/track/chandana-charchita

ಉತ್ತರ ಭಾರತದ ಶೈಲಿಲಿ ಹಾಡಿದ ಪದ: http://soundcloud.com/jha_sk/gita-govinda-song04-harir-iha

ಗೀತಗೋವಿಂದ, ಓದಲೆ:

http://www.scribd.com/doc/47105173/1/Chapter-Sarga-1-UTF-enabled-text-All-pervasive-Exuberant-Krishna
http://www.doc-txt.com/Gita-Govinda-Jayadeva.pdf

ಗೀತಗೋವಿಂದ – ನಾಟ್ಯ (ನೋಡುಲೆ):

(ತೆನಾಲಿ ರಾಮ ಸಿನೆಮಲ್ಲಿ ಪಿ.ಸುಶೀಲಮ್ಮ ಹಾಡಿದ್ದದು)

19 thoughts on “ಜಯದೇವನ ಗೀತೆ ಇಡೀ ಗೋವಿಂದನ ಲೀಲೆಗೊ..!

  1. ಒಪ್ಪಣ್ಣಾ….ಅಯ್ಯೋ…ಆನು ಇದರ ನೋಡುವಾಗ… ಹಳತ್ತಿಂಗೆ ಬಿದ್ದತ್ತನ್ನೆ…!! ಆದರೂ….ಹಳತ್ತಿಂಗೆ ಬಿದ್ದದು ಕೆಲವೆಲ್ಲಾ ಬಾರೀ ಒಳ್ಳೆದಡ……
    ಇರಲಿ…. ಬರದ ಕ್ರಮ ಲಾಯಿಕ ಆಯಿದು….ಎಂತ ಲಾಯಿಕ ಹೇಳಿ ಕೇಳಿದರೆ ಹೇಳುಲೆ ಎನಗರಡಿಯ….ಒಟ್ಟಾರೆ ಮೇಲೆ…ಲಾಯಿಕಿದ್ದು….ಒಟ್ಟಿಂಗೆ ಸಿಕ್ಕುಸಿದ ಕೊಳಿಕ್ಕೆಯೂ….ಅಲ್ಲಲ್ಲ…ಕೊಂಡಿಯೂ ಲಾಯಿಕವೆ….(ಕೊಳಿಕ್ಕೆ ಹೇಳಿದರೆ ಅಪಾರ್ಥ ಅಪ್ಪಲೂ ಸಾಕು…ಅಲ್ಲದೋ….)

    ಮೂರು-ನಾಕು ವರ್ಷಕ್ಕೆ ಮದಲು ಎಂಗಳ ಚೊಕ್ಕಾಡಿಲಿ ರಾಮನವಮಿ ಜಾತ್ರೆಗೆ…ಈ ತಾಯಂಬಕಂ ಹೇಳಿ ತೆಂಕ್ಲಾಗಿಂದ ಬತ್ತವದ..! ಅವರೊಟ್ಟಿಂಗೆ ಒಬ್ಬ ಪದ ಹೇಳುವಂವ ಇತ್ತಿದ್ದ°…. ಗೀತಗೋವಿಂದ ಹಾಡಿತ್ತಿದ್ದ°…..
    ಓ..ಎಂತಾ ಚೆಂದ……..ದೇವಸ್ಥಾನಕ್ಕೆ ಸುತ್ತ ಬಂದುಕೊಂಡು ಹೇಳಿದ್ದದ….ಹಿಮ್ಮೇಳವೂ ಇಲ್ಲೆ…. ಈಗಾಣ…ಬಿ.ಜಿ.ಎಂ.ಹೇಳ್ತದೂ ಇಲ್ಲೆ… ಮೈಕವೂ ಇಲ್ಲೆ ಅವಂಗೆ ಹಾಡುದು ಹೇಳುವ ನೆನಪ್ಪೂ ಇಲ್ಲೆ…. ಚೊಕ್ಕಾಡಿಯ “ಸಂಗೀತ ಮರ್ಲರೂ” …..ಕಂಗಾಲು… ರಿಕಾರ್ಡು ಮಾಡ್ಲಾಯಿದಿಲ್ಲೆನ್ನೇ…ಹೇಳಿ ಎಷ್ಟೋ ಸರ್ತಿ ಕಂಡಿದು…… ಆದರೆ ರಿಕಾರ್ಡು ಮಾಡದ್ದದೇ ಒಳ್ಳೆದಾತೋ ಏನೋ…!! ಯಂತ್ರಲ್ಲಿ ಕೇಳುದು ಎಷ್ಟಾದರೂ ಅಷ್ಟೆ…. ಈಗ ಆ ಅಂದ್ರಾಣ ಪದವ, ಆಗ ಆದ ಖೊಷಿಯ …!! ನೆನಪ್ಪು ಮಾಡಿಕೊಂಬಲೆ… ಒಂದು “ಕೊಂಡಿ” ಕೊಟ್ಟದಕ್ಕೆ…. ಒಂದು “ಒಪ್ಪ” ಸಾಲ…..

  2. ಲೆಖನಕ್ಕೊಪ್ಪಿದ ವಿಶಯವೊ? ವಿಶಯಕ್ಕೊಪ್ಪಿದ ಲೆಖನವೊ?
    ಭಕ್ಥನ್ಗೆ ಒಲಿದ ಭಾವವೊ? ಭಾವಕ್ಕೊಲಿದ ಭಕ್ಥನೊ?
    ಚಿತ್ರಕ್ಕೆ ಒಲುದ ಚಿತ್ರಗಾರನೊ?ಚಿತ್ರಗಾರನ್ಗೆ ಒಲುದ ಚಿತ್ರವೊ? …..ವಿದ್ಯೆ,ಭಕ್ಥಿ, ಭಾವ, ಅಭಿವ್ಯಕ್ಥಿ ಎಲ್ಲವೊ ಅ೦ತರ೦ಗವನ್ನೇ ಜಾಲಾಡುವ ಹಾ೦ಗಿಪ್ಪ ಲೇಖನ.

  3. ಒಪ್ಪಣ್ಣ,
    ಶ್ರೀನಂದನ ಸಂವತ್ಸರ ಆರಂಭದ ದಿನ ನಂದನಂದನನ ಜೀವನಲಾಸ್ಯದ ನಂದನೀಯ ಕೃತಿಯ ವಿವರಣೆ ಮಾಷ್ಟ್ರುಮಾವ° ವಿವರಿಸಿದ ಹಾಂಗೇ ಯಥಾವತ್ತು ಬಂದು ತುಂಬಾ ಚೆಂದ ಆಯಿದು.
    ಸರಳ ಸಂಸ್ಕೃತಲ್ಲಿ ಕೃಷ್ಣನ ಪ್ರೇಮಕಾವ್ಯ ಭಕ್ತಿಪಂಥದೋರಿಂಗೆ ಒಂದು ಪವಿತ್ರ ಗ್ರಂಥವೇ. ಕೃಷ್ಣನ ಮೈಮನಸ್ಸಿಲಿ ತುಂಬುಸಿ ಆ ಲಹರಿಲಿ, ಭಕ್ತಿಲಿ, ಕೃಷ್ಣ ರಾಧೆಯರ ಲೀಲಾಲಾಸ್ಯಲ್ಲಿ ಮೈಮರದು ನರ್ತನ ಮಾಡಿ ಕೃಷ್ಣ ಸಾಕ್ಷಾತ್ಕಾರ ಪಡಕ್ಕೊಂಬದು ಒಂದು ಅಪೂರ್ವ ಸಂದರ್ಭವೇ! ಜಯದೇವ ಕವಿ ಬರದ ರೀತಿ ತುಂಬಾ ಲಾಯ್ಕಾಯಿದು. ಅಷ್ಟಪದಿಗಳ ಮೂಲಕ ಪ್ರೀತಿಯ ಭಾವಲ್ಲಿ ದೇವರ ಕಾಂಬದು ಹೇಂಗೆ ಹೇಳುದರ ಚೆಂದಕ್ಕೆ ವಿವರ್ಸಿದ್ದ. ಸಮರ್ಪಿತ ಮನಸ್ಸಿಂದ ಬರವವಕ್ಕೆ, ಕೆಲಸ ಮಾಡುವವಕ್ಕೆ, ಪ್ರೀತಿ ಮಾಡುವವಕ್ಕೆ ದೇವರು ತಾನಾಗಿಯೇ ಒಲಿದು ಬತ್ತ° ಹೇಳುದು ಜಯದೇವನ ಕತೆಲಿ ನವಗೆ ಗೊಂತಾವುತ್ತು.

    ಒಪ್ಪಣ್ಣ,
    ಪ್ರೀತಿಯ ಅಭಿವ್ಯಕ್ತಿ ಮನಸ್ಸಿಂದ ಹೆರ ಬಪ್ಪಲೆ ಭಕ್ತಿಯ ದಾರಿ ಕಂಡುಗೊಂಡಿದು ಜಯದೇವನ ಕೃತಿಲಿ. ಎಲ್ಲರಲ್ಲಿಯೂ ದೇವರ ಮೇಲಿನ ಪ್ರೀತಿ,ಭಕ್ತಿ ನಾನಾ ನಮುನೆಲಿ ಹೆರ ಬತ್ತು.
    ಹೊಸ ವರ್ಷದ ಸುರುವಿಂಗೆ ಒಳ್ಳೆಯ ವಿಚಾರವ ನೀನು ಎದುರು ಮಡುಗಿದ ಕಾರಣ ವರ್ಷ ಇಡೀ ಆನಂದ ತುಂಬಿಪ್ಪ ಹಾಂಗೆ ಆಗಲಿ..
    ನಂದನಕಂದ ಮುಕುಂದನ ಕೃಪೆಲಿ ಎಲ್ಲರಿಂಗೂ ಒಳ್ಳೆದಾಗಲಿ..
    ಬೈಲಿಲಿ ಹರಿಭಕ್ತಿ ರಸ ಹರಿಯಲಿ..

  4. ತುಂಬ ಚೆಂದದ ಪದ್ಯ ಒಪ್ಪಾಣ್ಣಾ..
    ಓ ಕಳುದೊರುಶ ಆಚಕರೆ ಮಾಣಿ ಕೊಟ್ಟಿತ್ತಿದ್ದ°…
    ಎನಗೆ ಭಾರೀ ಕೊಶಿ ಈ ಪದ್ಯಂಗಳ ಕೇಳುದೂ ಹೇಳರೆ.. 🙂

    ಜಯದೇವನ ಬಗ್ಗೆ ಗೊಂತಿತ್ತಿಲ್ಲೆ.
    ತಿಳುಶಿಕೊಟ್ಟದಕ್ಕೆ ಧನ್ಯವಾದ 🙂

    ಒಪ್ಪ :*

  5. ಲೇಕನ ಲಾಯ್ಕಯಿದು, ಗೀತ ಗೋವಿಂದದ ಹಾಂಗೆ ಬಟ್ಟಾತ್ರಿಪಾದ್ ಬರದ ” ನಾರಾಯಣಿಯಮ್” ಕೂಡ ಅದ್ಬುತ ಕ್ರುತಿ

  6. ಒಪ್ಪಣ್ಣೋ, ಗೀತಗೋವಿಂದದ ಬಗ್ಗೆ ಇಷ್ಟು ವಿವರವಾಗಿ ಬರದ್ದು ತುಂಬ ಕುಷಿ ಆತು. ಸಂಸ್ಕೃತ – ಸಂಗೀತಂಗಳೆರಡ್ರಲ್ಲೂ ಈ ಅಷ್ಟಪದಿಗೊಕ್ಕೆ ಒಂದು ವಿಶಿಷ್ಟ ಸ್ಥಾನ ಇದ್ದು. ಎನಗಂತೂ ಗೀತಗೋವಿಂದ ಹಾಡುಲೆ ತುಂಬ ಪ್ರೀತಿ. ಕರ್ನಾಟಕ ಸಂಗೀತಲ್ಲಿ ಈ ಪದ್ಯಂಗಳ ಜನಪ್ರಿಯಗೊಳಿಸಿದೋರಲ್ಲಿ ಮದುರೈ ಟಿ.ಎನ್. ಶೇಷಗೋಪಾಲನ್ ಒಬ್ಬ. ಅವನ ರೆಕಾರ್ಡಿಂಗ್ ಸಿಕ್ಕಿದರೆ ಕೇಳಿ.
    ಒಪ್ಪಕ್ಕ ಆಶಿಸಿದ ಹಾಂಗೆ ನಂದನ ಸಂವತ್ಸರ ಎಲ್ಲೋರಿಂಗೂ ಆನಂದ ತರಲಿ.

  7. ಶುದ್ದಿ ಸೂಪರ್ ಆಯ್ದು ಒಪ್ಪಣ್ಣ…
    [ಸಾಮಾನ್ಯವಾಗಿ ಅವು ಎಲೆ ತುಪ್ಪಿದವು ಹೇಳಿ ಆದರೆ ಮೂರೇ ಕಾರಣ
    – ಒಂದೋ ಏನಾರು ಅಗತ್ಯದ್ದು ಮಾತಾಡ್ಳೆ,
    – ಅಲ್ಲದ್ದರೆ ಊಟವೋ-ತಿಂಡಿಯೋ ಎಂತಾರು ತೆಕ್ಕೊಂಬಲೆ,
    – ಅದೂ ಅಲ್ಲದ್ದರೆ ಇನ್ನೊಂದರಿ ಎಲೆ ತಿಂಬಲೆ!! :-)] -ಇದು ಚೆಂದ ಆಯ್ದು..
    ಚಾಮಿಯೆ ಬಂದು ಪದ್ಯ ಬರದ ಕಥೆಯ ಲಾಯ್ಕ ಹೆಳಿದ್ದೆ…

    ಶುದ್ದಿ ಓದುವಾಗ ಮಾಷ್ಟ್ರುಮಾವ ಇತ್ತಿದ್ದವು ಇಲ್ಲಿ….ಖುಶಿ ಅಯ್ದು ನಿನ್ನ ವಿವರಣೆ ಎಲ್ಲ.. ಭಾವನೆಗಳ ಎಲ್ಲ ಲಾಯ್ಕಲ್ಲಿ ವ್ಯಕ್ತಪಡುಸಿದ್ದ ಒಪ್ಪಣ್ಣ ಹೇಳಿದವು.. 🙂

    ನಂದನ ಎಲ್ಲೊರಿಂಗೂ ಆನಂದ ತರಳಿ. 🙂

  8. ಲಾಯಕ ಆಯಿದು ಒಪ್ಪಣ್ಣಾ. ಎಲ್ಲೊರಿ೦ಗೂ ನ೦ದನ ಸ೦ವತ್ಸರದ ಶುಭಾಶಯ೦ಗೊ…

  9. ಸ್ವತಃ ಕೃಷ್ಣ ಚಾಮಿಯೇ ಬಂದು ಪದ್ಯದ ಎರಡು ಗೆರೆಯ ಬರದು ಕೊಟ್ಟದು ಕೇಳಿ ಮೈ ರೋಮಾಂಚನ ಆತು. ಎಂತಾ ಕೊಶಿಯ ಕ್ಷಣಂಗೊ. ಜಯದೇವ ಕವಿಯ ಕತೆ, ಗೀತಗೋವಿಂದ ಒಪ್ಪಣ್ಣನ ಕೈಗೆ ಸಿಕ್ಕಿ ಚೆಂದಕೆ ಬಂತು.

    ಎಣ್ಣೆ ಕಿಟ್ಟಿ ಮೀಯಲೆ ಹೆರಟ ಜಯದೇವ ಪುನಃ ಹಿಂದೆ ಬಂದು ಒಂದೆರಡು ಗೆರೆ ನೆಂಪಾತು, ಈಗಲೆ ಬರೆತ್ತೆ, ತಾಳೆ ಗರಿಕೊಡು ಹೇಳಿ ಹೆಂಡತ್ತಿಯ ದಿನಿಗೇಳಿದ ವಿಚಾರ ಬಂದಪ್ಪಗ, ನಮ್ಮ ಬೈಲಿನ ಕೆಲವು ಕವಿಗಳನ್ನುದೆ ನೆಂಪಾತು. ಹಾಂಗೆ ಅಪ್ಪಲುದೆ ಸಾಧ್ಯತೆ ಇದ್ದು ಎಂತ ಹೇಳ್ತಿ ? ಅನುಭವದ ಮಾತಿದು !!

    ಅಜ್ಜಕಾನ ಭಾವ ಕಾಲ್ಕುಲೇಟು ಮಾಡ್ಳೆ ಮೊಬೈಲ್ ತೆಗದು, ಬೇರೂಂದು ಸಮೋಸ ಕಂಡು ನೆಗೆ ಮಾಡಿದ್ದು ನೈಜವಾಗಿದ್ದು.

    ಮಾಷ್ಟ್ರುಮಾವ ಪಾಟ ಮಾಡುದೇ ಚೆಂದ. ಅವು ಕತೆ ಹೇಳುದು ಇನ್ನೂ ಚೆಂದ; ಅದರ ಕೇಳುದು ಮತ್ತೂ ಚೆಂದ. ಇದೇ ಗುಣ ನಮ್ಮ ಒಪ್ಪಣ್ಣನಲ್ಲಿಯುದೆ ತುಂಬಾ ಕಾಣ್ತು. ಅಭಿನಂದನೆಗೊ.

  10. ಒಪ್ಪಣ್ಣೋ ಲೇಖನ ಭಾರಿ ಒಳ್ಳೆದಾಯಿದು.
    ಜಯದೇವನ ಗೀತಗೋವಿಂದ ಎನಗೆ ತುಂಬ ಇಷ್ಟ . ಅಷ್ಟಪದಿಲಿ ಅಭಿನಯಕ್ಕೆ ತುಂಬ ಅವಕಾಶ ಇದ್ದು.ಎನಗೆ ಭರತನಾಟ್ಯ ವಿದ್ವತ್ ಪರೀಕ್ಷೆಲಿ ಒಂದು ಅಷ್ಟಪದಿ ಮಾಡ್ಲೆ ಇತ್ತು. ಅದರಲ್ಲಿ ಎನಗೆ ಒಳ್ಳೆ ಮಾರ್ಕ್ ಸಿಕ್ಕಿದ್ದು. ಜಯಗೋವಿಂದ ಕವಿಯ ಬಗ್ಗೆ ,ಅಷ್ಟಪದಿಯ ಬಗ್ಗೆ ಬರವಲೆ ಇದ್ದತ್ತು. ನಿಂಗಳ ಲೇಖನ ಓದುಗ ಆನು ಪರೀಕ್ಷೆಗೆ ತಯಾರಿ ನಡೆಸಿದ್ದು ನೆಂಪಾತು….

  11. ಊತ್ತಮ ಲೇಖನ, ಉತ್ತಮ ಮಾಹಿತಿ. ಧನ್ಯವಾದಗಳು.

  12. ನಂದನ ಸಂವತ್ಸರದ ಶುಭಾಶಯಂಗೊ ಎಲ್ಲೋರಿಂಗೂ..
    ಒಪ್ಪಣ್ಣಾ,
    ಗೀತ ಗೋವಿಂದದ ಬಗ್ಗೆ ಬರದ್ಸರ ಓದಿ ಕೊಶಿ ಆತು.

  13. ನಂದನ ಸಂವತ್ಸರಲ್ಲಿ ಆನಂದ ತಪ್ಪ ಗೋವಿಂದನ ಲೀಲೆಗಳ ಗೀತಗೋವಿಂದದ ವಿವರಣೆ ತುಂಬಾ ಇಷ್ಟ ಆತು…
    ಒಪ್ಪಣ್ಣ೦ಗೂ ಬೈಲಿನ ಎಲ್ಲ ಒಪ್ಪಣ್ಣ ಒಪ್ಪಕ್ಕಂದ್ರಿ೦ಗೂ ನಂದನ ಸಂವತ್ಸರ ಆನಂದ ಉಂಟುಮಾಡಲಿ…

  14. ಇದರ ಫುಲ್ ಸಿ.ಡಿ. ಇದ್ದು ಎನ್ನ ಹತ್ತರೆ. ತುಂಬಾ ತುಂಬಾ ಚೆಂದ ಪದ್ಯಂಗೊ… ಎಷ್ಟು ಕೇಳಿದರೂ ಬೊಡಿತ್ತಿಲ್ಲೆ….. ಆನು ಸರಾಸರಿ ದಿನಕ್ಕೆ ೫-೬ ಸರ್ತಿ ಕೇಳ್ತಾ ಇತ್ತಿದ್ದೆ… ಈಗ ರಜ್ಜ ಸಮಯ ಆತು ಕೇಳದ್ದೆ.

    ಇದರ ಹಿನ್ನೆಲೆ ವಿವರ್ಸಿದ ಒಪ್ಪಣ್ಣನ ಒಪ್ಪ ಕೆಲಸಕ್ಕೆ ಹೊಗಳೆಕ್ಕಾದ್ದೇ….

  15. ಈ ಒಪ್ಪಣ್ಣನೇ ಹೀ೦ಗೆ.. ರಜಾ ಕುಶಾಲು,ಮತ್ತೆ ವಿಷಯಕ್ಕೆ ಬ೦ದರೆ ಆಸಗ್ತಿ ಹುಟ್ತುವ ಹಾ೦ಗೆ ಹೇದೊ೦ಡು ಹೋಕು..ಮಾಷ್ಟ್ರು ಮಾವ ಎಲೆ ತುಪ್ಪಲೆ ಇಪ್ಪ ಕಾರಣ೦ಗಳ ಪಟ್ಟಿ ಕೇಳಿಯಪ್ಪಗ ನೆಗೆ ತಡೆಯ.ಅಭಾವ ಮೊಬಿಲು ನೋಡಿ ನೆಗೆ ಮಾಡಿದ ಹಾ೦ಗೆ ಈ ಕ೦ಪುಟರು ನೋಡ್ಯೊ೦೦ಡು ನೆಗೆ ಮಾಡುತ್ಸೂ ಹೊಸ ಬಗೆ ರೋಗವೋ ಕೇಳುಗು..

    ಜಯದೇವಕವಿಯ ಪರಿಚಯವೂ ಗೀತಗೋವಿ೦ದದ ವಿವರಣೆಯೂ ಆನ೦ದ ಕೊಟ್ತತ್ತು.ಪರ್ವ ಕಾಲಲ್ಲಿ ಶ್ರೀಕೃಷ್ಣನ ಲೀಲೆಯ ವರ್ಣನೆ ಓದುವ ಯೋಗವೂ ಸಿಕ್ಕಿತ್ತು.
    ಬೈಲು ಸತ್+ ಚಿತ್+ ಆನ೦ದದ ನ೦ದನವನವಾಗಿ ಹಬ್ಬಲಿ ಹೇಳುವ ಹಾರೈಕೆಗೊ.

  16. ಗೀತಗೋವಿಂದ ಒಂದು ಗೇಯ ಕಾವ್ಯ-ಬಹಳ ಭಾವಪೂರ್ಣವಾಗಿ ಇದ್ದು.ಯುಗಾದಿಗೆ ಈ ಬಗ್ಗೆ ಬರೆದ್ದಕ್ಕೆ ಒಪ್ಪಣ್ಣಂಗೆ ಅಭಿನಂದನೆ.

  17. ಲಾಯ್ಕಾಯಿದು ಬರಹ.. ಬೈಲಿನ ಎಲ್ಲರಿಂಗುದೆ ನಂದನದ ಹಾರ್ದಿಕ ಶುಭಾಶಯ..

    ಜಯದೇವನ ಗೀತಗೋವಿಂದದ ಬಗ್ಗೆ ಮನೋಜ್ಞವಾಗಿ ಬರದ್ದೆ ಒಪ್ಪಣ್ಣ.. ನಿಂಗೊಗೆ ತುಂಬಾ ಆಭಾರಿ.. ಇರುಳಾದ ಕಾರಣ ಪದ್ಯದ ಸಂಕೋಲೆ ನೋಡಿದ್ದಿಲ್ಲೆ.. ನಾಳೆ ನೋಡುವ.. ಶುಭರಾತ್ರಿ 🙂

  18. ಬೈಲ ಸಮಸ್ತರಿಂಗೂ ನಂದನ ಸಂವತ್ಸರ ಯುಗಾದಿಯ ಶುಭಾಶಯಂಗೊ.

    ಯುಗಾದಿಯ ಸವಿದಿನಲ್ಲಿ ಮನೋಹರ ಈ ಶುದ್ದಿಯ ಓದಿ ಮಹದಾನಂದ ಆತು. ಗೀತಿಯ ಕೇಳಿ ಕರ್ಣಾನಂದವೂ, ಗೋತಾಗೋವಿಂದ ನಾಟ್ಯವ ಕಣ್ಣಿಲಿ ನೋಡಿಯೋಡಿಯೊಂಡು ಕೆಮಿಲಿ ಕೇಳ್ಳೂ ಸುಮಧುರ ಆಗಿದ್ದು.

    ಸುದ್ದಿ ಸೈ ಸೈ ಹೇಳಿ ಒಪ್ಪ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×