Oppanna.com

ದೇಶಲ್ಲಿ ಸುರು ಆತು ಬೆಳಿ ಕ್ರಾಂತಿ!!!

ಬರದೋರು :   ಒಪ್ಪಣ್ಣ    on   11/11/2016    4 ಒಪ್ಪಂಗೊ

ದೇಶ ಇಡೀ ತೋಟ ಗೆದ್ದೆ ಮಾಡ್ತಕ್ಕೆ ಹಸಿರು ಕ್ರಾಂತಿ ಹೇಳ್ತದು ನವಗೆ ಗೊಂತಿದ್ದು. ಹಾಂಗೇ, ಇದೊಂದು – ಬೆಳಿ ಕ್ರಾಂತಿ ಹೇದು ಹೆಸರು ಮಡಗುತ್ತರೆ ಹೇಂಗೇ’ದು – ಆಲೋಚನೆ ಮಾಡ್ತಾ ಇದ್ದವು ಬೈಲಿನ ಬೇಲೆನ್ಸು ಪಂಡಿತರು.
ಎಂತರ ಕತೆ? ಅದೇ – ಮೋದಿ ಅಜ್ಜ° ಎಲ್ಲೋರಿಂಗೂ ಕೊಟ್ಟ ಕೈಕ್ಕೆ ಮದ್ದು.
~
ಮೊನ್ನೆ, ಎಂಟನೇ ತಾರೀಕಿಂಗೆ ಹೊತ್ತೋಪಗ. ಹಾಲು ತಪ್ಪಲೆ ಹೇದು ತರವಾಡು ಮನೆಗೆ ಹೋಗಿತ್ತಿದ್ದೆ.
ಒಂದರಿಯೇ ಟೀವಿಲಿ ಬಂದ ಮೋದಿ ಅಜ್ಜ° ಮಾತಾಡ್ಳೆ ಸುರು ಮಾಡಿದ್ದೇ ಮಾಡಿದ್ದು.
ಆರಿಂಗೂ ಎಂತ ಸಂಗತಿ ಹೇದು ಅರಡಿಯ.
ನಮ್ಮ ದೇಶದ ಅರ್ಥ ವ್ಯವಸ್ಥೆ – ಹಾಂಗೆ ಹೀಂಗೆ ಹೇಳುಲೆ ಸುರು ಮಾಡುವಾಗ, ಶಾಂಬಾವಂಗೆ ಬಾಯಿ ಒಡದು ಆವಳಿಗೆ ಸುರು ಆತು. ಹೋವುತ್ತಾ ಹೋವುತ್ತಾ ಕಪ್ಪು ಹಣ ಹೇದು ಸುದ್ದಿ ಬಪ್ಪಲೆ ಸುರು ಆತು.
ಹೇಂ! – ಎಂತ ಕತೆ ಹೇದು ಗಮನ ಕೊಡ್ಳೆ ಸುರು ಮಾಡಿದ ಶ್ಯಾಂಬಾವ°.
ಅಷ್ಟಪ್ಪಗ ಅದಾ – ಬೋಂಬು ಬಿದ್ದದು.
ದೇಶದ ಕಳ್ಳನೋಟು, ಕಪ್ಪು ನೋಟುಗೊ ಹೆಚ್ಚಾಗಿ ನೆಡವದು ಪೂರ ಐನ್ನೂರು, ಸಾವಿರಂಗಳಲ್ಲಿ. ಪ್ರತಿಶತ ೮೬% ನಿಂದಿಪ್ಪದು ಈ ಮೌಲ್ಯಲ್ಲಿ. ಕಾಳಧನ ತಡವಲೆ ಆ ನೋಟುಗಳ ನಿಲ್ಲುಸುತ್ತೆಯೊ° – ಹೇದು ಮೋದಿ ಅಜ್ಜ° ಒಂದರಿಯೇ ಹೇಳಿದ್ದದಲ್ಲದೊ!
ಶಾಂಬಾವಂಗೆ ಗಾಬರಿಯೊ, ಆಶ್ಚರ್ಯವೊ, ಕೊಶಿಯೋ, ಬೇಜಾರವೋ – ಎಲ್ಲ ಒಂದರಿಯೇ ಎಳಗಿತ್ತು.
ಚೆಲಾ – ಹೀಂಗೊಂದು ಇದ್ದೊ, ಓಡ್ತಾ ಇಪ್ಪ ಆನೆಯ ಒಂದರಿಯೇ ನಿಲ್ಲುಸುತ್ತ ಸಾಹಸ ಮಾಡ್ತವೋ ಆರಾರು – ಹೇದು ಎರಡೆರಡು ಚಾನೆಲ್ ಹಾಕಿ ಧೃಡ ಮಾಡಿಗೊಂಡ. ನಿಜ ಹೇಳಿಯೇ ಗೊಂತಪ್ಪಲೆ, ಅವನ ತಲೆ ಒಳ ಹೊಗ್ಗಲೆ ಹತ್ತು ನಿಮಿಷ ಬೇಕಾತು ಅವಂಗೆ.
~
ಈಗ ಚಲಾವಣೆಲಿ ಇಪ್ಪ ಐನ್ನೂರು, ಒಂದು ಸಾವಿರದ ನೋಟುಗಳ ಕೂಡ್ಳೇ ಅನ್ವಯ ಅಪ್ಪ ಹಾಂಗೆ ತಡದತ್ತು ಕೇಂದ್ರ ಸರ್ಕಾರ.
ಎರಡೂ ದಿನ ಪೈಸೆ ಮಿಷನ್ ಆಫ಼್, ಬೇಂಕುದೇ ರಜೆ.
ಕೈಲಿ ಇಪ್ಪ ೫೦೦, ೧೦೦೦ ಗಳ ಕೂಡ್ಳೇ ಬೇಂಕಿಲಿ ಬದಲುಸಿ ಬರೆಕ್ಕು. ಅಲ್ಲದ್ದರೆ ಬೇಂಕಿನ ನಮ್ಮ ಎಕೌಂಟಿಂಗೆ ಹಾಕೆಕ್ಕು.
ಅಲ್ಲದ್ದರೆ, ನಮ್ಮ ಕೈಲಿ ಇಪ್ಪ ಪೈಸೆ – ಕಸವಿಂದ ಕಡೆ – ಅಪ್ಪದು ನಿಘಂಟು.
ಆತನ್ನೆ! ಕಷ್ಟಕ್ಕೆ ಬಂತನ್ನೇ ಭಾವಯ್ಯಾ – ಹೇದು ಶಾಂಬಾವಂಗೆ ತಲೆಬೆಶಿ ಸುರು ಆತು.
ಎಂತಕೆ?
~
ಎಂತಕೆ ಕೇಳಿದ್ದಕ್ಕೆ ಶಾಂಬಾವ° ಒಂದೊಂದೇ ಆಗಿ ವಿವರ್ಸಿದ°:
ಮೋದಿ ಅಜ್ಜ° ಬಂದು ಹೊತ್ತುಕಂತಿದ ಮತ್ತೆ ಹೇಳಿದ ಕಾರಣ ಯೇವ ಅಂಗುಡಿಯೂ ಇಲ್ಲೆ; ಯೇವ ಬೇಂಕುದೇ ಇಲ್ಲೆ – ಅರ್ಜೆಂಟಿಂಗೆ ಹೋಗಿ ಪೈಶೆ ಹಾಕುವೊ° ಹೇದರೆ! ಹಾಂಗಾಗಿ, ಈಗ ಕೈಲಿಪ್ಪ ಕಟ್ಟ ಪೂರ ಇನ್ನು ಎರಡು ದಿನ ಬಿಟ್ಟು ಬೇಂಕಿಂಗೆ ಬೀಳುದು.
ಇನ್ನು ಬೇಂಕಿಂಗೆ ಒಂದ್ರುಪಾಯಿ ಹಾಕುತ್ತರೂ – ನಮ್ಮ ದಾಖಲೆಗಳ, ಮೂಲಂಗಳ ತೋರ್ಸೆಕ್ಕಾವುತ್ತು.
ಶ್ಯಾಂಬಾವ° ಒಯಿವಾಟಿಲಿ ಇಪ್ಪ ಕಾರಣ, ಹಲವು ಕುಳವಾರುಗೊ ಗುರ್ತಲ್ಲಿ ಇದ್ದವು.
ಅವಕ್ಕೆಲ್ಲ ದೊಡ್ಡ ದೊಡ್ಡ ಒಯಿವಾಟು ಆದ ಕಾರಣ ದೊಡ್ಡ ಪೈಶೆಲೇ ಮಾತಾಡ್ಸು.
ದೊಡ್ಡ ಪೈಶೆ ಆದ ಕಾರಣ ದೊಡ್ಡ ನೋಟುಗಳೇ ಇರ್ತು. ಈಗ ಒಂದರಿಯೇ ಅದರ ಬೇಂಕಿಂಗೆ ತನ್ನಿ ಹೇದರೆ – ಅವರ ಬಣ್ಣ ಹೆರ ಬೀಳದೋ!?
ಕೆಲವು ಜೆನ ಅವರ ಕಳ್ಳಮೂಲಂದ ಬಂದ ಪೈಶೆಯ ಮನೆಲಿ ಅಟ್ಟಿ ಅಟ್ಟಿ ಮಡಗಿದ್ದವು, ಅದರ ಬೇಂಕಿಂಗೆ ಹೋಗಿ ಹಾಕದ್ದೆ ಬೇರೆ ವಿಧಿಯೇ ಇಲ್ಲೆ. ಬೇಂಕಿಂಗೆ ಹಾಕುವಗ ಅವರ ಜೊಟ್ಟೂ ಹಿಡದ್ದೆ ಬಿಡ್ತವೂ ಇಲ್ಲೆ.
ಒಟ್ಟಾರೆ ಕಷ್ಟ ಅವಕ್ಕೆ!
ಭಾರತದ ನೋಟು ಪ್ರಿಂಟು ಮಾಡ್ತದು ಮೂರೇ ದಿಕ್ಕೆ ಅಡ – ಹೇದು ಕೊಳಚ್ಚಿಪ್ಪು ಭಾವ° ಒಂದೊಂದರಿ ನೆಗೆಮಾಡ್ಳಿದ್ದು. ಒಂದು ಮೈಸೂರು, ಒಂದು ಮಸ್ಸೂರಿ, ಮತ್ತೊಂದು – ಪಾತಕಿಸ್ತಾನ! 🙂
ಅಪ್ಪಡ, ನಮ್ಮ ನೋಟುಗೊ ಅಲ್ಲಿಂದಲೇ ಪ್ರಿಂಟಾಗಿ ನಮ್ಮ ದೇಶಕ್ಕೆ ಎತ್ತುತ್ತ ಬಗ್ಗೆ ಅಧಿಕೃತ ಮಾಹಿತಿಗೊ ಇದ್ದು. ಈಗ ಒಂದರಿಯೇ ಈ ನೋಟಿನ ಕೇನ್ಸಲು ಮಾಡಿದ ಕಾರಣ – ಅದರ ಪ್ರಿಂಟು ಮಾಡ್ತ ನಮ್ಮ ದೇಶದ ಆಪೀಸುಗೊಕ್ಕೆ ತೊಂದರೆ ಆಗ; ಆಚೋರಿಂಗೆ – ಹೊಟ್ಟಗೆ ಪೀಶಕತ್ತಿ ಹಾಕಿದಾಂಗೆ ಅಕ್ಕಿದಾ.
ಅವು ಪ್ರಿಂಟು ಮಾಡಿದ ಪೈಶೆಲಿ ಬಂದ ಲಾಭಾಂಶ ವಿನಿಯೋಗ ಅಪ್ಪದು ನಮ್ಮ ದೇಶಲ್ಲಿ ಬೋಂಬು ಮಡಗಲೆ. ನಮ್ಮ ದೇಶದ ಮತ್ತೊಂದು ದೊಡ್ಡ ತಲೆಬೇನೆ ಅದು. ಅದಕ್ಕೆ ಮೂಲ ಪೈಶೆ ಬಪ್ಪದೇ ಈ ಕಳ್ಳನೋಟಿಂದ. ಹಾಂಗಾಗಿ – ಒಂದರಿಯೇ ಅದರ ಬೆನ್ನು ಮುರುದ ಹಾಂಗಕ್ಕು ಅಪ್ಪೋ.
~
ಕಪ್ಪು ಪೈಶೆಲಿ ಬದ್ಕುತ್ತ ಕಳ್ಳಂಗೊಕ್ಕೆ ಕಷ್ಟ. ಬೆಳಿ ಜೀವನ ಮಾಡ್ತೋರಿಂಗೆ ಏನೂ ತೊಂದರೆ ಆಗ – ಹೇಳ್ತದು ಶಾಮಣ್ಣನ ಅಂಬೋಣ.
ಇನ್ನು ಬೈಲ ಭಾವಯ್ಯಂದ್ರು ಅವರ ಹಳೆ ಮಾರಾಪುಗಳಲ್ಲಿ ಹುಡ್ಕಿ, ಐನ್ನೂರು ಒಂದುಸಾವಿರಂಗಳ ತೆಗದು ಮಡಗಿದ್ದರ ಬಿಡುಸಿ ಪೂರಾ ನೋಡಿಗೊಂಡು, ಅದರ ಬೇಂಕಿಂಗೆ ಬಲುಗೆಕ್ಕು.
ಅದಕ್ಕೂ ಪ್ರಮಾಣ ಇದ್ದು, ಬೇಂಕಿಲಿ – ಎಲ್ಲಿಂದ ಬಂತು, ಎಷ್ಟು ಬಂತು – ಹೇದು ಹೇಳಿಕೊಡೆಕ್ಕು ಇದಾ.
ಹಾಂಗೂ ಬೆಳಿ ಮಾಡ್ಳೆ ಎಡಿಯದ್ದರೆ ಮತ್ತೆ ತಿರುಪತಿ ತಿಮ್ಮಪ್ಪಂಗೇ ಹಾಕೆಕ್ಕಷ್ಟೆ – ಹೇದು ರಂಗಮಾವ° ನೆಗೆಮಾಡಿದವು. ತಿರುಪತಿ ಹೇಳುವಾಗ ಅವಕ್ಕೇ ನೆಂಪಾತು – ಈ ಸರ್ತಿ ಮುಡಿಪ್ಪು ಬಿಡುಸೆಕ್ಕಷ್ಟೇ – ಹೇದು.
ಆಚೊರಿಶ ನಾಕಾಣೆ ನಿಷೇಧ ಆಯಿದು; ಇದರಿಂದ ಒಂಜಿರುಪಾಯಿ-ನಾಲಾಣೆ ಸ್ವಸ್ತಿಕ ಮಡಗುತ್ತ ಬಟ್ಯಂಗೆ ಬಾರೀ ಉಪದ್ರ ಆತು.
ಈ ಸರ್ತಿ ದೊಡ್ಡ ನೋಟು ನಿಷೇಧ ಆಗಿ, ಪೂಜೆ ಮಾಡ್ತ ಬಟ್ಟಮಾವಂಗೇ ಉಪದ್ರ ಆತು – ಹೇದು ಒಪ್ಪಣ್ಣಂಗೆ ಅನುಸಿ ಹೋತೊಂದರಿ.
~
ಹೋ, ಒಂದು ಕಾನೂನಿಲಿ ಎಲ್ಲೆಲ್ಲಿಂದ ಎಲ್ಲಿಗೆ ಸಂಕೊಲೆ ಇರ್ತಪ್ಪೋ. ಆಗಲಿ, ಅಪ್ಪದೆಲ್ಲ ಒಳ್ಳೆದಕ್ಕೆ.
ಕಪ್ಪು ದೇಶ ಇಪ್ಪದು ಬೆಳಿ ದೇಶ ಆಗಲಿ. ಕಳ್ಳ ಪೈಶೆಗೊ ಎಲ್ಲ ಹೆರ ಬಂದು ಸ್ವಸ್ಥ ಸಮಾಜ ನಿರ್ಮಾಣ ಆಗಲಿ – ಹೇಳ್ತದು ಬೈಲಿನ ಎಲ್ಲೋರ ಹಾರೈಕೆ.
~
ಒಂದೊಪ್ಪ: ಮೊನ್ನೆ ದೇಶಂದ ಹೆರ ಇಪ್ಪ ಉಗ್ರಗಾಮಿಗಳ ಬಡುದತ್ತು; ಈ ಸರ್ತಿ ದೇಶದ ಒಳ ಇಪ್ಪೋರನ್ನೇ ಬಡಿತ್ತಾ ಇದ್ದು ಭಾರತ. ಬೆಳಗಲಿ!

4 thoughts on “ದೇಶಲ್ಲಿ ಸುರು ಆತು ಬೆಳಿ ಕ್ರಾಂತಿ!!!

  1. ಎಂತೆಂತದೋ ಕ್ರಾಂತಿ ಮಾಡಿ ಪೀಡೆ ಕೊಡ್ವದರಿಂದ ಹೀಂಗಿರ್ತ ಕ್ರಾಂತಿ ಮಾಡಿ ಅಭಿಮಾನದ ಭವಿಷ್ಯ ನಿರ್ಮಾಣ ಮಾಡ್ಳೆ ಅಪರೂಪಲ್ಲಿ ಹೀಂಗೊಬ್ಬ ಹುಟ್ಟಿ ಬಯಿಂದ° ಹೇಳ್ಸು ಆಶಾಭಾವ ನಿಜವಾಗಿ ಮೂಡಿದ್ದಪ್ಪೋ

  2. ವಾಹ್. ಭಾರೀ ಒಳ್ಳೆ ಶುದ್ದಿ. ರಾಮರಾಜ್ಯ ಬೇಗನೆ ಆಗಲಿ. ಆದಾಯ ತೆರಿಗೆ ಕಟ್ಟದ್ದೆ, ಕಟ್ಟ ಕಟ್ಟ ನೋಟು ಮಡಗಿದವಕ್ಕೆ, ಹತ್ತು ಬೆರಳಿಂಗೂ ದೊಡ್ಡ ದೊಡ್ಡ ಉಂಗಿಲು ಹಾಕಿ, ಬಾವಿ ಬಳ್ಳಿ ಹಾಂಗಿಪ್ಪ್ಪ ಚಿನ್ನದ ಸರ ಹಾಕುತ್ತವಕ್ಕೆ ಎಲ್ಲೋರಿಂಗು ಬೆಶಿ ತಾಗುಸಿದ್ದು ಲಾಯಕಾಯಿದು.

  3. ಅ೦ದು ದ್ರೋಣ ದರ್ಬೆ ಬಿಟ್ಟು ಬಾವಿ೦ದ ಉ೦ಡೆ ತೆಗೆದ್ದವಡ .ಇ೦ದು ಡ್ರೊಣ ಬಿಟ್ಟು ಪಾತಾಳಗರಡಿ ಬಪ್ಪ ಕಾಲವ ಏನೋ .

  4. ಕಳ್ಳವೈವಾಟಿಂಗೆ ಕೆಟ್ಟ ಕಾಲ ಬಂದರೆ ಒಳ್ಳೆಯವಕ್ಕೆ ನೆಮ್ಮದಿ!. “ಎಂದೂ ಹೀಗೇ ಇರದು ” ಶ್ರೀ ಗುರುವಾಣಿ ನೆಂಪಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×