Oppanna.com

ಮಗಳಾಗಿ ಹುಟ್ಟಿ, ಸೊಸೆಯಾಗಿ ಬೆಳಗುವ ಕಾವೇರಿ…

ಬರದೋರು :   ಒಪ್ಪಣ್ಣ    on   12/10/2012    18 ಒಪ್ಪಂಗೊ

ಕನ್ನೆತಿಂಗಳು ಮುಗುದು ತುಲೆ ಬರೆಕ್ಕಾರೆ “ಕಾವೇರಿ” ಸಂಕ್ರಮಣದ ಗವುಜಿ ಇಪ್ಪದು ಎಲ್ಲೋರಿಂಗೂ ಅರಡಿಗು.
ತುಲಾಮಾಸ ಶುಭಮಾಸವೇ ಆದ ಕಾರಣ ಬಟ್ಟಮಾವಂದ್ರಿಂಗೂ ಪುರುಸೊತ್ತಿರ!
ತೆಂಕ್ಲಾಗಿ ಮಲೆಯಾಳಿಗೊಕ್ಕೂ ತುಲಾಮಾಸಂ ಹೇದರೆ ಭಯಂಗರ ವಿಶೇಷವೇ ಆಡ – ವೈನಾಡುಮಾವ ಹೇಳಿತ್ತಿದ್ದವು.
~

ಅದಪ್ಪು; ತುಲಾ ಶೆಂಕ್ರಾಂತಿಯ ಕಾವೇರಿ ಸಂಕ್ರಮಣ ಹೇಳ್ತದು ಎಂತಕೆ? ಆ ದಿನ ಕಾವೇರಿ ತೀರ್ಥೋದ್ಭವ ಆವುತ್ತ ಕಾರಣ ಅಲ್ಲದೋ? ಕಾವೇರಿಯ ತಲೆ ಸುರೂವಿಂಗೆ ಕಾಣ್ತ ತಲಕಾವೇರಿಲಿ ಆ ದಿನ ಶುಭಘಳಿಗೆಲಿ ತೀರ್ಥ ಉದ್ಭವ ಆವುತ್ತಾಡ!
ಬಾಳೆಗುಂಡಿಯಷ್ಟು ದೊಡ್ಡ ತೀರ್ಥಗುಂಡಿಲಿ ಕಾವೇರಿ ಉದ್ಭವ ಆಗಿ, ಅದರ ಎಲ್ಲೋರುದೇ ಸೇವನೆ ಮಾಡ್ತವಾಡ.
ನಿತ್ಯವೂ ತೀರ್ಥ ತೆಕ್ಕೊಳ್ತ ಕೊಡವರಿಂಗೆ ಆ ದಿನ “ಕಾವೇರಿ ತೀರ್ಥ” ತುಂಬಾ ವಿಶೇಷ ಆಡ – ಚುಬ್ಬಣ್ಣ ಹೇಳಿತ್ತಿದ್ದ.  😉

ಆ ದಿನದ ಕಾವೇರಿ ತೀರ್ಥವ ಮದಲಿಂಗೆ ಬೆದುರ ಓಟೆಲಿ ತುಂಬುಸೆಂಡು ಮನೆಗೆ ಹಿಡ್ಕೊಂಡು ಬಕ್ಕಾಡ.
ಇದು ಮದಲಾಣ ಕತೆ; ಈಗ ಆದರೆ ಅವರ ಕೈಲಿ ಕುಪ್ಪಿ ಧಾರಾಳ ಇಕ್ಕು.
ಮನೆ ಮನೆಗೆ ಕಾವೇರಿಮ್ಮನ ಕರಕ್ಕೊಂಡು ಹೋಗಿ – ಮರದಿನ ಗವುಜಿಲಿ ಪೂಜೆ ಮಾಡ್ಳೆ ಇದ್ದಾಡ; ಅಮ್ಮ ಬಂದ ಲೆಕ್ಕದ್ದು.
ಪ್ರತಿನಿತ್ಯವೂ ಕೊಡಗಿನ ಪ್ರತಿ ಮನೆಲಿಯೂ ಕಾವೇರಿ ಅಮ್ಮ ಗಂಗೆಯ ರೂಪಲ್ಲಿ ಇಕ್ಕಾಡ – ಹೇಳ್ತದು ಮಾಷ್ಟ್ರುಮಾವನ ಅಭಿಪ್ರಾಯ. ಮಾಷ್ಟ್ರುಮಾವ ಅತ್ಲಾಗಿಯೂ ರಜ ಸಮೆಯ ಮಾಷ್ಟ್ರ ಆಗಿ ಇದ್ದ ಕಾರಣ ಅಲ್ಯಾಣ ಹಲವು ಸಂಗತಿಗೊ ಅರಡಿಗು ಇದಾ.
~
ಅಷ್ಟು ದೂರ ಬೇಡ; ನಮ್ಮದೇ ಬೈಲಿನ ಮುಜುಂಗಾವಿನ “ಕೆರೆ” – ಮುಜುಂಗೆರೆಲಿಯೂ ಆ ದಿನ ಕಾವೇರಿ ಸಂಕ್ರಮಣದ ಬೆಶಿ. ಗವುಜಿ ಹೇದರೆ ಭಯಂಕರ ಗವುಜಿಯೇ.
ಆ ಕೆರೆಲಿ ಇಪ್ಪದು ಅಲ್ಯಾಣ ಪಾರೆ ನೀರು ಹೇದರೆ ಆರೂ ನಂಬವು – ಆ ದಿನಕ್ಕೆ – ಅಲ್ಲಿ ಸಾಕ್ಷಾತ್ ಕಾವೇರಿಯೇ ಬಪ್ಪದು ಹೇದು ಲೆಕ್ಖ. ಆ ದಿನ ಕುಡು ಹಾಕಿ ಮಿಂದರೆ ತುಂಬ ವಿಶೇಷ. ಮೈ-ಚರ್ಮ ರೋಗಂಗೊ ಸಂಪೂರ್ಣ ವಾಸಿ ಆವುತ್ತು ಹೇಳ್ತದು ಅಲ್ಯಾಣ ಜೆನಂಗಳ ನಂಬಿಕೆ. ಮುನ್ನಾದಿನ ಒರೆಂಗೆ ಜೆನವೇ ಇಲ್ಲದ್ದರೂ ಆ ದಿನ ಸಾವಿರಗಟ್ಳೆಲಿ ಜೆನ ಬತ್ತವಾಡ; ಬೆಟ್ಟುಕಜೆ ಮಾಣಿ ಹೇಳಿತ್ತಿದ್ದ. ಅಡಿಗೆ ರಾಜಣ್ಣ ಅಂತೂ ಅವರಿಂದಲೂ ಎತ್ತರದ ಕೊಪ್ಪರಿಗ್ಗೆ ಉಪ್ಪುಮೆಣಸು ಹಾಕುಸ್ಸು ಕಾಂಗಡ!

~

ನಮ್ಮ ಧರ್ಮವೇ ಹೀಂಗೇ – ಕಣ್ಣೆದುರು ಕಾಂಬ ಕಲ್ಲುಗೊ, ಮರಂಗೊ – ಎಲ್ಲವೂ ಪವಿತ್ರ; ಎಲ್ಲವೂ ದೇವರೇ.
ನೀರುಗೊ ಎಲ್ಲವೂ ಗಂಗೆಗಳೇ; ಕಾವೇರಿಗಳೇ. ಹಾಂಗಾದ ಕಾರಣವೇ – ಪ್ರಕೃತಿಪ್ರೇಮದೊಟ್ಟಿಂಗೆ ಬೆಳದು ಇಷ್ಟೂ ಸಮೆಯ ನಮ್ಮ ಊರು ಹಸುರಾಗಿ ಒಳುದ್ದು; ನಮ್ಮ ನದಿಗೊ ಶುದ್ಧವಾಗಿ ಒಳುದ್ಸು. ರಜ ಆದರೂ ಮಲಂಪು ಕುರೆ ಆಯೇಕಾರೆ ಆಧುನಿಕತೆಯ ಅಂಶ ಇಪ್ಪಲ್ಲಿಯೇ ಆಯೇಕಟ್ಟೆ ಇದಾ. ಅದಿರಳಿ.

~
ಈ ಕಾವೇರಿ ಹೇಳುವಗ ಒಪ್ಪಣ್ಣಂಗೆ ಪಕ್ಕನೆ ನೆಂಪಪ್ಪದು ಕೊಳಚ್ಚಿಪ್ಪುಬಾವ ಹೇಳಿದ “ಕಾವೇರಿ ನೀರು” ಗಲಾಟೆಯೇ.
ಮನ್ನೆ ಕೊಳಚ್ಚಿಪ್ಪು ಭಾವನ ಅಜ್ಜನಮನೆಲಿ ತಿತಿ ಕಳಾತಲ್ಲದೊ – ಅದಕ್ಕೆ ಬಂದಿತ್ತಿದ್ದ°.
ಕಳುದವಾರ ಅಷ್ಟೇ ಎಮ್ಮೆಕಟ್ಟಿ ಪಾಸು ಮಾಡಿಂಡ ಕೊಶಿಲಿ ಇತ್ತಿದ್ದ°. ಮಾಷ್ಟ್ರುಮಾವನ ಹತ್ತರೆ ಮುಖತಾ ಹೇಳುವೊ° ಹೇದು ಕಾದು ವಿಶಯ ಹೇಳಿಕ್ಕಿದ°. ಒಂದು ಕಾಲಲ್ಲಿ ಮಾಷ್ಟ್ರುಮಾವಂದೇ ಎಮ್ಮೆಕಟ್ಟಿದ್ದವು ಇದಾ!
ಇಬ್ರಿಂಗೂ ಎಮ್ಮೆ ಕಟ್ಟಿ ಅಭ್ಯಾಸ ಇಪ್ಪಗ ನಾವೊಂದು ಪುಚ್ಚೆ ಕಟ್ಳೂ ಅರಡಿಯದ್ದೋನು – ಅದಿರಳಿ.

ಹಾಂಗೇ – ಕೊಳಚ್ಚಿಪ್ಪುಭಾವ ಮಾತಾಡುವಗ ಮೈಸೂರಿನ ಶುದ್ದಿಗೊ ಧಾರಾಳ ಬತ್ತಿದಾ – ಮೈಸೂರಿಲಿಪ್ಪ ಊರೋರ ಶುದ್ದಿ, ಮೈಸೂರಿನ ಊರೋರ ಶುದ್ದಿ, ಎಲ್ಲವುದೇ ಬಂತು. ಈ ಸರ್ತಿ ಕೃಷ್ಣರಾಜಸಾಗರ ಅಣೆಕಟ್ಟಿನ ಒಟ್ಟಿಂಗೆ – ಕಾವೇರಿ ಗಲಾಟೆಯ ಶುದ್ದಿಯೂ ಬಂತು.
ನಾವು ಪೇಪರು ಓದುಸ್ಸೇ ಕಮ್ಮಿ; ಮುಳಿಯಾಲದಪ್ಪಚ್ಚಿ ಸಿಕ್ಕಿರೆ “ಇಂದ್ರಾಣದ್ದೆಂತರ ಶುದ್ದಿ” ಕೇಳ್ತದು ಮಾಂತ್ರ ಗೊಂತು.
ಹಾಂಗೆ, ಇದುದೇ – ವಿಚಾರ ಎಂತರ ಹೇಳ್ತದು ಸಮಗಟ್ಟು ನವಗೆ ಅರಡಿಗಾಯಿದಿಲ್ಲೆ.
ಕೊಳಚಿಪ್ಪುಭಾವ ಮೊನ್ನೆಮೊನ್ನೆ ಎಲ್ಲವನ್ನೂ ಪರೀಕ್ಷೆಗೆ ಓದಿರ್ತ; ಅವಂಗೆ ಖಂಡಿತಾ ಗೊಂತಿರ್ತು – ಹೇದು ಅವನ ಹತ್ತರೆ ಕೇಳಿಯೇಬಿಟ್ಟೆ.
~
ಎಂತ ಮಾಡುಸ್ಸು – ಹೇಳಿರೆ ಮನಸ್ಸಿಂಗೆ ಬೇಜಾರಾವುತ್ತು; ಹೇಳದ್ದರೂ ಮನಸ್ಸಿಂಗೆ ಬೇಜಾರಾವುತ್ತು – ಹೇಳಿಗೊಂಡೇ ವಿಶಯ ಸುರು ಮಾಡಿದ ಭಾವಯ್ಯ!
ಪಶ್ಚಿಮಘಟ್ಟಲ್ಲಿ ಹುಟ್ಟಿ ಪೂರ್ವಕರಾವಳಿಗೆ ಹರಿವ ದಕ್ಷಿಣ ಭಾರತದ ಬಹುಮುಖ್ಯ ನದಿ ಅಡ ಈ ಕಾವೇರಿ.
ಇದಿಪ್ಪ ಕಾರಣ ಎಷ್ಟು ಉಪಕಾರ ಆತು ಹೇಳ್ತದು ಸರೀ ಅರಡಿಯೇಕಾರೆ – ಕಾವೇರಿ ಇಲ್ಲದ್ದರೆ ಎಂತಾವುತಿತು – ತಲಕಾವೇರಿಲಿ ಹುಟ್ಟಿ ಅಲ್ಲಿಂದಲೇ ತುಳುಂಕನೆ ದೊಡ್ಡಜ್ಜನ ಮನೆ ಹತ್ತರೆ ಆಗಿ ಪಶ್ಚಿಮ ಕರಾವಳಿಗೆ ಸೇರಿದ್ದರೆ ಎಂತಾವುತಿತು ಹೇದು ಆಲೋಚನೆ ಮಾಡೇಕಡ. ನೂರಾರು ಸಣ್ಣ ಹಳ್ಳ ಒಂದು ಹುಟ್ಟಿ ಸಮುದ್ರಲ್ಲಿ ಕರಗಿದ ಹಾಂಗೆ ಆವುತಿತು ಅಷ್ಟೆ; ಹತ್ತಾರು ದೊಡ್ಡ ನದಿಯ ಹಾಂಗೆ ಆವುತಿತಿಲ್ಲೆ.
ಪಡುಕಡಲಿನ ಬಹು ಹತ್ತರೆ ಹುಟ್ಟಿ; ಅಲ್ಲಿಂದ ಮೂಡಂತಾಗಿ ಘಟ್ಟ ಇಳುದು – ಬಯಲು ಸೀಮೆ ಆಗಿಂಡು – ಜಲಪಾತ ಹಾರಿ ತೆಮುಳುನಾಡಿಂಗೆ ಹೋಗಿ, ಅಲ್ಲಿ ಲಕ್ಷಾಂತರ ಎಕ್ರೆ ಜಾಗೆಯ ಚೆಂಡಿಮಾಡಿಂಡು, ಹತ್ತನ್ನೆರಡು ಕವಲಾಗಿ – ಬೇರೆಬೇರೆ ಊರಿಲೆ ಆಗಿ ಹೋಗಿ ಅಕೇರಿಗೆ ಮೂಡುಕಡಲಿಂಗೆ ಸೇರಿದ್ದಾಡ. ಕಾವೇರಿ ಹೋಪ ದಾರಿ ಉದ್ದಕ್ಕೂ ದೊಡ್ಡಕ್ಕನ ಹಾಂಗೆ ಹಲವಾರು ತಂಗೆಕ್ಕಳ ಕೂಡಿಂಡೇ ಹೋಪದಾಡ. ಹಾಂಗಡ, ಹೀಂಗಡ – ಇನ್ನೂ ಸುಮಾರು ಶುದ್ದಿಗಳ ಹೇಳಿಂಡೇ ಹೋದ, ಕಾವೇರಿ ಬಗ್ಗೆ.
~
ಈ ಕಾವೇರಿ ನದಿ ಮಡಿಕೇರಿಲಿ ಹುಟ್ಟಿ ಮಯಿಸೂರಿಂಗೆ ಎತ್ತುವನ್ನಾರ ಯೇವ ಗಲಾಟೆ, ಗಡಿಬಿಡಿಯೂ ಇಲ್ಲೆ – ಚೆಂದಕೆ ಬತ್ತಾ ಇದ್ದು. ರಗಳೆ ಸುರುಅಪ್ಪದೇ ಕರ್ನಾಟಕ ರಾಜ್ಯದ ಗಡಿ ಕಳುದ ಮತ್ತೆಯೇ. ಮಡಿಕ್ಕೇರಿಯ ಜೆನಂಗೊಕ್ಕೂ – ಮೈಸೂರಿನ ಜೆನಂಗೊಕ್ಕೂ ಇಪ್ಪ ಸಾಹೋದರ್ಯ ಮೈಸೂರಿನೋರಿಂಗೂ – ತೆಮುಳುನಾಡಿನೋರಿಂಗೂ ಇಲ್ಲೆಯೋ – ಕೇಳಿರೆ; ಇದ್ದು.
ಆದರೆ ಜಗಳ ಎಂತಗೆ?
– ಎತಾರ್ತಕ್ಕೂ ಈ ಜಗಳಕ್ಕೆ ನೀರಿನ ಕೊರತೆ ಕಾರಣ ಅಲ್ಲ; ಮನುಷ್ಯರ ದುರಾಸೆಯೂ; ಅದರೊಟ್ಟಿಂಗೆ ಚಿಲ್ಲರೆ ರಾಜಕೀಯವೂ ಕಾರಣ – ಹೇಳ್ತದು ಕೊಳಚ್ಚಿಪ್ಪು ಭಾವನ ಅಭಿಪ್ರಾಯ.

ಕಾವೇರಿ ತೀರದ ಎಲ್ಲ ಜೆನರಿಂಗೂ, ಕೃಷೀಕರಿಂಗೂ – ಅಗತ್ಯ ತೀರುಸುವಷ್ಟು ನೀರು ಕಾವೇರಿ ನದಿಲೇ ಇದ್ದಾಡ.
ಎಲ್ಲೋರ ಆಶೆ ತೀರ್ಸಲೆಡಿಗು; ಆದರೆ ಎಲ್ಲೋರ ದುರಾಸೆ ತೀರುಸುವಷ್ಟು ನೀರು ನಮ್ಮ ಕಾವೇರಿಲಿ ಇಲ್ಲೆನ್ನೇ ಒಪ್ಪಣ್ಣಾ?
ಕಾವೇರಿಲಿ ಮಾಂತ್ರ ಅಲ್ಲ; ಬಂಗಾಳ ಕೊಲ್ಲಿ, ಹಿಂದೂಮಹಾಸಾಗರಲ್ಲೇ ಇಲ್ಲೆ – ಹೇಳಿದ°.

~

ಮದಲಿಂಗೆ ಮದ್ರಾಸು ಪ್ರೆಸಿಡೆನ್ಸಿ ಹೇದು ಬ್ರಿಟಿಷು ಆಡಳ್ತೆ ಇದ್ದತ್ತಾಡ ಅಲ್ಲದೋ – ನಮ್ಮ ಊರೆಲ್ಲ ಅದರ ಅಧೀನಲ್ಲೇ ಇದ್ದದು.
ಆ ಕಾಲಲ್ಲಿ ಮೈಸೂರು ರಾಜ್ಯ ಹೇದು ಸಾಮಂತ ರಾಜ್ಯ – ಬೆಕ್ಕಿನ ಬಿಡಾರ ಇತ್ತಿದಾ; ಅದುದೇ ಬ್ರಿಟೀಷರ ಅಧೀನಲ್ಲೇ  ಇದ್ದದಾದರೂ – ಅದಕ್ಕೆ ಹೆಸರು ಮೈಸೂರು ರಾಜ್ಯ ಹೇದು. ಕಾಲಕಾಲಕ್ಕೆ ಕಪ್ಪ ಕೊಟ್ಟುಗೊಂಡಿದ್ದಷ್ಟು ಸಮಯ ಬ್ರಿಟಿಷರುದೇ ಒಪ್ಪಕೊಟ್ಟುಗೊಂಡಿತ್ತಿದ್ದವಾಡ. ಕಾವೇರಿ ನದಿ ಮೈಸೂರಿಲೇ ಇದ್ದ ಕಾರಣ ತಕ್ಕಮಟ್ಟಿಂಗೆ ನೆಮ್ಮದಿಲೇ ಇದ್ದತ್ತು.

ಈಗ ಬೀದರು ಬಿಜಾಪುರ ಎಲ್ಲ ಇಲ್ಲೆಯೋ – ಆ ನಮುನೆ ಒಣಕ್ಕಟೆ ಪ್ರದೇಶ ಆಗಿತ್ತಾಡ ನಮ್ಮ ಮಂಡ್ಯ-ಮದ್ದೂರುಗೊ.
ಎಲ್ಲ ಒಣಕ್ಕಟೆ, ಬರಗಾಲ; ಬೇಕಷ್ಟು ಧವಸಧಾನ್ಯ ಬೆಳೆತ್ತಿಲ್ಲೆ; ನೀರಿಲ್ಲೆ. ಕಾವೇರಿ ಇಪ್ಪಲ್ಲಿಗೆ ಇದ್ದು – ಬಾಕಿದ್ದಲ್ಲಿಗೆ ನೀರಿಲ್ಲೆ!
ವಿಶ್ವೇಶರಯ್ಯನ ಹಾಂಗಿರ್ತ ನಿಸ್ವಾರ್ಥ ಮಂತ್ರಿಗೊ ಇದರ ಕಂಡು ಒಂದು ಮಹದಾಲೋಚನೆ ಮಾಡಿದವಾಡ – ಕನ್ನಂಬಾಡಿ ಕಟ್ಟೆ ಕಟ್ಟಿರೆ, ಆ ಕಟ್ಟೆಲಿ ನೀರು ಎರ್ಕುಸಿ, ಆ ನೀರಿನ ಕಾಲುವೆ ಮೂಲಕ ಮಂಡ್ಯ, ಮದ್ದೂರುಗೊಕ್ಕೆ ಬಿಟ್ರೆ – ಏನಾರು ಬೆಳೆ ತೆಗವಲಕ್ಕನ್ನೇ ಹೇದು. ರಾಜರೂ ಒಪ್ಪಿ, ಖುದ್ದಾಗಿ ಎದುರುನಿಂದು ಕಟ್ಟೆ ಕಟ್ಟುಸಿಯೇ ಬಿಟ್ಟವು.
ಅದುವೇ “ಕನ್ನಂಬಾಡಿ ಕಟ್ಟೆ”.
ಕಾವೇರಿ ಕೈ ಕೊಟ್ಟಿದಿಲ್ಲೆ; ಒಣಗಿದ್ದ ಮಂಡ್ಯ ಫಲವತ್ತಾದ ಸಕ್ಕರೆ ನಾಡು ಆತು. ಮೈಸೂರು ರಾಜ್ಯ ಹಸುರು ಬೆಳಗಿತ್ತು. ಅಲ್ಯಾಣ ಜೆನಂಗೊ ಈಗಳೂ ಆ ರಾಜರ-ಮಂತ್ರಿ ವಿಶ್ವೇಶ್ವರಯ್ಯನ ಪಟ ಮಡಗಿ ದೀಪ ಹೊತ್ತುಸುತ್ತವಾಡ. ಆ ರಾಜರ ನೆಂಪಿಗೋಸ್ಕರವೇ “ಕೃಷ್ಣರಾಜ ಸಾಗರ” ಹೇಳಿಯೇ ದಿನಿಗೆಳಿದವಾಡ ಮತ್ತೆ. ಅದಿರಳಿ.

ಇದು ಆದ್ದದು ಸಾವಿರದ ಒಂಭೈನೂರ ಇಪ್ಪತ್ತನಾಕು – ಶಂಬಜ್ಜಂಗೆ ಹತ್ತೊರಿಶವೋ – ಇಪ್ಪತ್ತೊರಿಶವೋ ಮಣ್ಣ ಆಗಿಪ್ಪಾಗ ಆಯಿಕ್ಕು. ಮತ್ತೆ ಹತ್ತೊರಿಶ ಕಳುದು –ಸಾವಿರದ ಒಂಭೈನೂರ ಮೂವತ್ನಾಕಕ್ಕೆ – ಇದೇ ನದಿಗೆ, ಮೈಸೂರು ರಾಜ್ಯ ಕಳುದ ಮತ್ತೆ ಒಂದು ಕಟ್ಟೆ ಕಟ್ಟುವೊ° – ಹೇದು ಕಂಡತ್ತು ಬ್ರಿಟಿಷರಿಂಗೆ.
ಇಂಜಿನಿಯರು ಬೇರೆ ಹುಡ್ಕುಸ್ಸು ಎಂತಗೆ, ಮೈಸೂರಿನೋರೇ ಇದ್ದವನ್ನೇ ಹೇದು, ಇದೇ ವಿಶ್ವೇಶ್ವರಯ್ಯನ ದಿನಿಗೆಳಿ ಗೆರೆಚಿತ್ರಬರೆಶಿದವಾಡ. ಹಾಂಗೆ, ಮೆಟ್ಟೂರು ಹೇಳ್ತಲ್ಲಿ ಇರುವಾರ ಕಟ್ಟೆ ಬಂತು.
ಕಾವೇರಿ ಅಲ್ಯಾಣೋರನ್ನೂ ಬಿಟ್ಟಿದಿಲ್ಲೆ.
ಮೆಟ್ಟೂರಿನ ಸುತ್ತಮುತ್ತಲಿನ ನಾಕೈದು ಜಿಲ್ಲೆ ಹಸುರಾತಡ. ಮಂಡ್ಯದ ಜೆನರ ಹಾಂಗೇ ಅಲ್ಯಾಣೋರಿಂಗೂ ಜೀವನದಿ ಆತು ಕಾವೇರಿ.

~
ಮೇಗಾಣ ಕಟ್ಟೆಂದ ಬಿಟ್ರಲ್ಲದೋ – ಎರಡ್ಣೇದಕ್ಕೆ ನೀರು? ಹಾಂಗಾಗಿ ಈ ಮೈಸೂರು ರಾಜ್ಯದೋರ ಅಮರ್ಸಿ ಹಿಡಿಯೇಕು ಹೇದು ಬ್ರಿಟಿಷರು “ಒರಿಶಕ್ಕೆ ಇಂತಿಷ್ಟು ನೀರು ನಿಂಗೊ ಬಿಡೆಕು” ಹೇದು ಹುಕುಂ ಹಾಕಿದವಾಡ. ಪಾಪ –ಸಾಮಂತ ರಾಜರುಗೊ ಇಲ್ಲೆ ಹೇದರೆ ಒಳಿಗೋ? ಅಕ್ಕಕ್ಕು – ಹೇಳಿ ಒಪ್ಪಿಗೊಂಡವು.
~

ವರ್ಷದ ಕೊಡಿಯಂದ ಕಡೆ ಒರೆಂಗೂ – ನದಿಯ ಕೊಡಿಯಂದ ಕಡೆ ಒರೆಂಗೂ – ನೀರು ತುಂಬಿ ಸಮಲಲಿ; ಕಾವೇರಿಲಿ!

ಒರಿಶಂಗೊ ಹಲವು ಹೋತು; ಸೊತಂತ್ರವೂ ಬಂತು.
ಭಾಷಾವಾರು ಪ್ರಾಂತ್ಯ ಬಂತು. ಕನ್ನಡ ಮಾತಾಡ್ತ ಮೈಸೂರು ಕರ್ನಾಟಕ ರಾಜ್ಯ ಆತು.
ಮದ್ರಾಸಿನ ದೊಡ್ಡ ತುಂಡು ತೆಮುಳುನಾಡು ಆತು. ದೇಶದ ಭಾವೈಕ್ಯತೆ ಆಡುಭಾಷೆಂದಾಗಿ ಹರುದು ಹಂಚಿ ಹೋತು.
ನಮ್ಮ ಕಾಸ್ರೋಡುದೇ ಮಲೆಯಾಳಿಗಳ ಪಾಲು ಆದ ಅನ್ಯಾಯ ನಮ್ಮ ಮೈಂದ ಮರವಲೆಡಿಯ ಇದಾ. ಅದಿರಳಿ.
ಮದಲು ಬ್ರಿಟಿಷರಿಂಗೂ ಮೈಸೂರಿಂಗೂ ಇದ್ದಿದ್ದ ವಿಭಾಗ ವಿಂಗಡಣೆ ಈಗ ಕನ್ನಡಿಗರಿಂಗೂ – ತೆಮುಳರಿಂಗೂ ಆತು.

ಅಂದು ಮಾಡಿದ ಒಪ್ಪಂದವೇ ಈಗಳೂ ಇಪ್ಪದು. ಇಂತಿಷ್ಟು ನೀರು ಬ್ರಿಟಿಷರಿಂಗೆ ಬಿಡೆಕಾದ್ಸರ ಈಗ ತೆಮುಳರಿಂಗೆ ಬಿಡೇಕೆ.
ಕಟ್ಟೆಲಿ ನೀರಿದ್ದೋ, ಇಲ್ಲೆಯೋ – ಮೈಸೂರಿನೋರಿಂಗೆ ಕುಡಿಯಲೆ ನೀರಿದ್ದೋ – ಅದು ಲೆಕ್ಕವೇ ಅಲ್ಲ, ಅಂದು ಮಾಡಿದ ಒಪ್ಪಂದ ಪ್ರಕಾರ ಒರಿಶಂಪ್ರತಿ ನೀರು ಬಿಡೆಕ್ಕೇ. ಅದಲ್ಲದ್ದರೆ?
ಅದಲ್ಲದ್ದರೆ ತೆಮುಳುನಾಡಿಲಿಡೀ ತೆಮುಳುಭಾಷೆಲಿ ಭಾಷಣ ಮಾಡಿ ಬಪ್ಪೊರಿಶ ಅಪ್ಪ ಓಟಿಲಿ ಓಟು ಪಡಕ್ಕೊಂಬದು.
ಈಚೋರು? ನೀರಿಲ್ಲ, ನೀರು ಬಿಡುವುದಿಲ್ಲ – ಹೇದು ಭಾಷಣ ಮಾಡಿಂಡು ಓಟು ಪಡಕ್ಕೊಂಬದು!
ಇಲ್ಲಿಯೇ ಆದ್ದಿದಾ ಮಿಷ್ಟಿಂಗು.
ಆ ಒರಿಶ ನೀರು ಹೇಂಗಿದ್ದೋ – ಮಳೆ ಹೇಂಗಿದ್ದೋ – ಅದರ ನೋಡಿಗೊಂಡು ನೀರು ಹಂಚೇಕೇ ಹೊರತು; ಆ ಒರಿಶ ಬಪ್ಪೊರಿಶ ಓಟು ಹೇಂಗಿದ್ದು ನೋಡಿಗೊಂಡು ನೀರು ಹಂಚಲಾಗ.
ಒಂದು ಲೆಕ್ಕಲ್ಲಿ ನೋಡಿರೆ – ಕಾವೇರಿ ನದಿಗೆ ಕಟ್ಟ ಕಟ್ಟದ್ದರೇ ಒಳ್ಳೆದಿತ್ತು. ತಲಕಾವೇರಿಂದ ಮೂಡುಕಡಲೊರೆಗೆ ಅದರಷ್ಟಕೇ ಹರ್ಕೊಂಡು ಹೋವುತಿತು. ಈಗ ಕಟ್ಟಿದ ಕಾರಣ ಹೀಂಗಾತಿದಾ – ಹೇದು ಕೊಳಚ್ಚಿಪ್ಪು ಭಾವ ಮಾತಾಡುದು ನಿಲ್ಲುಸಿದ.

~

ಇಷ್ಟೊತ್ತು ಮಾತಾಡದ್ದೆ ಕೂದ ಮಾಷ್ಟ್ರುಮಾವ° ಒಂದು ವಿಷಯ ಹೇಳಿದವು.

ಕೂಸಿನ ಜೀವನ ಹೇಂಗೆ?
ಒಂದು ಮನೆಲಿ ಹುಟ್ಟುತ್ತು; ಕೊಂಡಾಟಲ್ಲಿ ಬೆಳೆತ್ತು; ಚೆಂದಲ್ಲಿ ಬದ್ಕುತ್ತು, ಸಂಸ್ಕಾರಂಗಳ ಕಲಿತ್ತು. ಆ ಮನೆಯ ಬೆಳಗುತ್ತು.
ಅಷ್ಟಪ್ಪಗ ಅದರ ಪೊದು ನೋಡಿ ಇನ್ನೊಂದು ಮನೆಗೆ ಕಳುಸಿ ಕೊಟ್ಟಾವುತ್ತು. ಹುಟ್ಟಿದ ಮನೆಂದ ಸೇರಿದ ಮನೆಗೆ ಹೋವುತ್ತು; ಅಲ್ಯಾಣ ಸಂಸ್ಕಾರಂಗಳನ್ನೂ ಕಲ್ತು, ಹಳತ್ತರನ್ನೂ ಸೇರ್ಸಿಂಡು – ಆ ಮನೆಯನ್ನೂ ಬೆಳಗುತ್ತು.

ಆ ಕೂಸು ಯೇವ ಮನೆಯ ಸೊತ್ತು?
ಅಪ್ಪನ ಮನೆಯೋರಿಂಗೂ ಅದರ ಮೇಗೆ ಪ್ರೀತಿಯೇ, ಗೆಂಡನ ಮನೆಯೋರಿಂಗೂ ಅದರ ಮೇಗೆ ಪ್ರೀತಿಯೇ.
ಆ ಕೂಸು ಎರಡೂ ಮನೆಯ ಬೆಳಗುತ್ತು. ಯೇವ ಮನೆಯನ್ನೂ ಬೆಳಗದ್ದೆ ಇರ್ತಿಲ್ಲೆ.
ಗೆಂಡನ ಮನೆಗೆ ಎಂತದೂ ಕೊಡೆಡ ಹೇಳಿರೆ ಅಪ್ಪನ ಮನೆಯೋರದ್ದು ತಪ್ಪಾವುತ್ತು;
ಅಪ್ಪನ ಮನೆಂದ ಪೂರಾ ಬಾಚಿಂಡು ಬಾ – ಹೇದರೆ ಗೆಂಡನ ಮನೆಯೋರದ್ದು ತಪ್ಪಾವುತ್ತು.

ಇವುದೇ ಹತ್ತರಾಣೋರೇ, ಅವುದೇ ಹತ್ತರಾಣೋರೇ. ಆರನ್ನೂ ಬಿಟ್ಟು ಹಾಕಲಾಗ; ಎರಡೂ ಮನೆಯ ದೀಪ ಬೆಳಗೇಕಾದ ಕೂಸು ಅದು. ಹಾಂಗೆಯೇ ಈ ಕಾವೇರಿಯುದೇ.
ಅದು ಇಬ್ರಿಂಗೂ ಸೇರಿದ್ದದು.

ಕರ್ನಾಟಕಲ್ಲಿಪ್ಪ ಸಹೋದರರೂ – ತೆಮುಳುನಾಡಿಲಿಪ್ಪ ಸಹೋದರರೂ; ಇಬ್ರುದೇ ಆ ಕಾವೇರಿ ಮಾತೆಯ ಆಶೀರ್ವಾದಲ್ಲಿಪ್ಪೋರು.
ಹಾಂಗಪ್ಪಗ, ಪೂರ್ತಿ ಎಂಗೊಗೆ, ಪೂರ್ತಿ ನಿಂಗೊಗೆ ಹೇದು ಲಡಾಯಿ ಮಾಡ್ತದಕ್ಕೆ ಅರ್ಥ ಇಲ್ಲೆ – ಹೇಳಿದವು ಮಾಷ್ಟ್ರುಮಾವ°.

~

ಅಪ್ಪನ ಮನೆ ಮಗಳಾಗಿ, ಗೆಂಡನ ಮನೆಲಿ “ಸೊಸೆಯಾಗಿ” ಎರಡೂ ಮನೆಯ ಬೆಳಗುತ್ತ ಕಲ್ಪನೆ ಒಪ್ಪಣ್ಣಂಗೆ ಭಾರೀ ಕೊಶಿ ಆತು.
ಕರ್ನಾಟಕ – ತೆಮುಳುನಾಡು ಎರಡೂ ರಾಜ್ಯಲ್ಲಿಪ್ಪೋರು ಮುಖ್ಯವಾಗಿ ಭಾರತೀಯರೇ ಹೇಳ್ತ ಸಂಗತಿಯ ನಾವು ಅರಿಯೇಕು.
ಹಾಂಗಾದರೆ ಮಾಂತ್ರ ಸಾಹೋದರ್ಯ ಬೆಳಗು.
ಒಬ್ಬನ ಹೊಟ್ಟೆ ಬಡುದು ಇನ್ನೊಬ್ಬ ಉಂಬಲಾಗ; ಆದರೆ ಆಚವಂಗೂ ಹಶು ಅಡಗೇಕು ಹೇಳ್ತದರ ಅರ್ತು ಬದ್ಕೇಕು – ಹೇಳ್ತದು ಮಾಷ್ಟ್ರುಮಾವ ಹೇಳಿದ್ಸರ ಸಾರ.
ಜಗಳವೇ ಇಲ್ಲದ್ದೆ, ಎಲ್ಲೋರಿಂಗೂ ಕಾವೇರಿನೀರು ಸಿಕ್ಕಲಿ ಹೇಳ್ತದು ನಮ್ಮ ಆಶಯ.

ಎಂತ ಹೇಳ್ತಿ?

ಒಂದೊಪ್ಪ: ಅಪ್ಪನ ಮನೆಯೂ – ಗೆಂಡನ ಮನೆಯೂ ಎರಡನ್ನೂ ಬೆಳಗಿರೇ ಕೂಸಿನ ಮನಸ್ಸು ಕೊಶಿಲಿಕ್ಕಷ್ಟೆ.

18 thoughts on “ಮಗಳಾಗಿ ಹುಟ್ಟಿ, ಸೊಸೆಯಾಗಿ ಬೆಳಗುವ ಕಾವೇರಿ…

  1. ಮಗಳಾಗಿ ಸೊಸೆಯಾಗಿ ಮನೆಗಳ ಬೆಳಗುವ ಒಂದು ಕೂಸಿನ ಜೀವನವ ಕಾವೇರಿಯ ಹರಿವಿಂಗೆ ಹೋಲಿಸಿದ್ದು ಲಾಯ್ಕಾಯ್ದು…
    ಕಾವೇರಿ ಹೇಳಿರೆ ನದಿ…ನದಿಗೆ ಗಡಿ ಇದ್ದೋ? ಪ್ರಕೃತಿಗೆ ಗಡಿ ಇದ್ದೋ? ಅದು ಇಪ್ಪದು ಮನೂಷ್ಯರ ಮನಸ್ಸಿಲ್ಲಿ ಮಾಂತ್ರ…. ಅದು ದೂರಾಯಕು..ನಮ್ಮದರ ಬಗ್ಗೆ ಅಭಿಮಾನ..ಇನ್ನೊಂದರ ಬಗ್ಗೆ ಗೌರವ ಇರೆಕ್ಕು. ಆದರೆ ನಮ್ಮದರ ಬಗ್ಗೆ ದುರಭಿಮಾನ..ಇನ್ನೊಂದರ ಬಗ್ಗೆ ಅಗೌರವ ಹೆಚ್ಚಾವ್ತದೇ ಎಲ್ಲ ಜಗಳ ಗಲಭೆಗೊಕ್ಕೆ ಕಾರಣ.

  2. ಒಪ್ಭಣ್ಣೋ, ಆಭಾವ್ತ,
    ತಮಿಳುನಾಡಿನ ಮುಖ್ಯಮಂತ್ರಿಗೆ ಮುಜುಂಗಾವಿಲ್ಲಿ ಕಾವೇರಿಸಿಕ್ಕುಗು ಬನ್ನಿ ಹೇಳಿ ವಿಜಯತ್ತೆ ಬರದ್ದು ಕಂಡರೆ ಅದರಲ್ಲೂ ಪಾಲು ಕೇಳುಗೋ ಹೇಳಿ ಕಾಣ್ತು.:)

  3. ತುಂಬಾ ಚೆಂದಕೆ ಬರದ್ದೆ ಒಪ್ಪಣ್ಣಾ.

  4. ಒಪ್ಪಣ್ಣಾ, ಎಲ್ಲೊರ ಲಡಾಯಿಲಿ ಕಾವೇರಿಯ ಕಾವು ಏರಿ ಹೋಪಲಾಗನ್ನೆ ಆ ಲಡಾಯಿ ಅಲ್ಲಿರಲಿ ನಾಳೆ ಮುಜುಂಗಾವಿಲ್ಲಿ ಕಾವೇರಿಸಿಕ್ಕುಗು ಬನ್ನಿಎಲ್ಲೊರು ಮಿಂದು ಮನಸ್ಸು ಮೈಯು ತಂಪು ಮಾಡಿಗೊ೦ಬೊ ಬತ್ತಿರನ್ನೆ;?

  5. ಭಾರೀ ಒಳ್ಳೇದಾಯಿದು ಒಪ್ಪಣ್ಣಾ.. ಒಪ್ಪ೦ಗೊ.
    ಸರ್ವೇ ಭವ೦ತು ಸುಖಿನಃ
    ಸರ್ವೇ ಸ೦ತು ನಿರಾಮಯಾಃ
    ಸರ್ವೇ ಭದ್ರಾಣಿ ಪಶ್ಯ೦ತು,
    ಮಾ ಕಶ್ಚಿದ್ ದುಃಖಭಾಗ್ ಭವೇತ್.

  6. ತೆಂಕ್ಲಾಗಿ ಕೊಡಪಾನ ತುಂಬ ನೀರಿದ್ದರೂ, ಅಲ್ಯಾಣ “ಡ್ರಮ್ಮು” ತುಂಬುಸುಲೆ ಇತ್ಲಾಗಿಂದ ಕಟ್ಟ ಬಿಡುಸಿಯೇ ಆಯೆಕ್ಕಡ, ಹಾಂಗೆ ಮನ್ನೆ ಓ ಆ ಜೆನ ಸಿಕ್ಕಿಪ್ಪಗ ಹೇಳಿಯೊಂಡಿತ್ತಿದ್ದ. ಎಲ್ಲಿಯವರೆಗೆ ‘ಓಟಿನ ರಾಜಕೀಯ’ ಇರ್ತೋ, ಅಲ್ಲಿವರೆಗೆ ‘ಕಾವೇರಿ ಪ್ರಶ್ನೆ’ ಇತ್ಯರ್ತ ಆಗ.

  7. ಸಮಯೋಚಿತ ಲೇಖನ. ಲಾಯಕ ಆಯಿದು.ಧನ್ಯವಾದ೦ಗೊ……

  8. ಮೇಲಾಣದ್ದು ತಮಾಷೆಗೆ ಆತು. ಈಗ ಕಾರ್ಯಕ್ಕೆ ಹೇಳುದು-
    ನೀರಿನ ಕೊರತೆ ಎರಡೂ ರಾಜ್ಯಲ್ಲಿ ಇಪ್ಪಾಗ ಕೊರತೆಯನ್ನೂ ಹಂಚಿಕೊಳ್ಳದ್ದೆ ಕಳಿಗೊ?ತಮಿಳುನಾಡಿಲಿ ಇನ್ನೂ ಮಳೆ ಬಪ್ಪಲೆ ಇದ್ದು. ಆವಾಗ ತಂಪಕ್ಕಾದಿಕ್ಕು.

  9. ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ,ಕನ್ನಂಬಾಡಿಯ ಕಟ್ಟದಿದ್ದರೆ ಆಗುತ್ತಿತ್ತೇ ಈ ಬಂದು?[ಬಂದ್]
    ಗಲಾಟೆ ಬೆಳೆಯುವ ಹಾಗಿಂದು।,ಕೋರ್ಟಿನ ಕೇಸಿಂದು। ಸುಪ್ರೀಮ್। ಕೋರ್ಟಿನ ಕೇಸಿಂದು?
    [ಕೊಳಚಿಪ್ಪು ಭಾವನ ಮಾತು ಹೇಳಿ ಒಪ್ಪಣ್ಣ ಬರದ್ದಕ್ಕೆ,ಇಬ್ಬರಿಂಗೂ ಬೇಕಾಗಿ ಈ ಪದ್ಯ!]

  10. ಸಮಯೋಚಿತ ಶುದ್ದಿ.
    ಕಾವೇರಿ ನೀರಿನ ವಿವಾದ ಮುಗುಶಲೆ ಆರೂದೆ ತಯಾರಿ ಇಲ್ಲೆ. ವೋಟ್ ಸಿಕ್ಕೆಕ್ಕಾರೆ ರಾಜಕೀಯ ಮಾಡ್ಲೆ ಇದು ಬೇಕೇ ಬೇಕು.
    ಪ್ರಕೃತಿಲಿ ಸಿಕ್ಕುವದರ ಎಷ್ಟು ಸಿಕ್ಕಿದ್ದು ನೋಡಿ ವಿತರಣೆ ಮಾಡೆಕ್ಕಲ್ಲದ್ದೆ, ಮಳೆ ಬರಲಿ ಬಾರದ್ದಿರಲಿ, ಇಂತಿಷ್ಟು ಅವಕ್ಕೆ ಕೊಡೆಕು ಹೇಳಿರೆ ಎಲ್ಲಿಂದ ಕೊಡ್ಲೆ ಸಾಧ್ಯ.
    ಎರಡು ಕಡೆಯವು ಅರ್ಥ ಮಾಡಿಯೊಂಗು, ಆದರೆ ರಾಜಕೀಯ ಮಾಡ್ತವು ಅರ್ಥ ಆದರೂ ಅರ್ಥ ಆಗದ್ದ ಹಾಂಗೆ ನಟನೆ ಮಾಡುಗು. ಒರಗಿದವರ ಏಳುಸಲೆ ಎಡಿಗು, ಒರಗುತ್ತ ಹಾಂಗೆ ನಟನೆ ಮಾಡ್ತವರ ಏಳುಸಲೆ ಎಡಿಯ ಹೇಳ್ತದು ಇಲ್ಲಿ ಸೂಕ್ತ.

  11. ಕೆಲವು ಸರ್ತಿ ,ಕೆಲವರ ಹಾರಾಟ ,ನೋಡಿದರೆ,ಗುಡ್ಡೆಕೆಳಇಪ್ಪ ಜಾಗೆಗೆ ,ಮೆ ಟ್ರೋ ಕೆಲಸ ಮುಗಿದ ಕೂಡಲೆ,ರಿಗ್ ನ ಬಪ್ಪ ಲೆ ಹೇಳಿ, ಒ೦ದು ಮಾಟೆ ,ಮಾಡಿಸಿ,ತೆ೦ಕ್ಲಾಗಿ ನೀರು ಬಪ್ಪ ಹಾ೦ಗೆ ಮಾಡಿದರೆ ಎ೦ತ?

  12. “ಕಾವೇರಿ” ಅಕ್ಕನ ಸೊಸೆಯ ಮನೇಲಿ ಇಪ್ಪ ಸೋದರತ್ತೆಯೇ — ” ಡೌರೀ ” ಗಾಗಿ ಬೋಡಿಸುತ್ತಾ ಇದ್ದವನ್ನೇ ||

  13. ಬಹುಜನರಿ೦ಗೆ ಪ್ರಭಾವ ಬೀರುವ ವಿಶಯ..
    ಮಗಳು ಸೊಸೆ ವ್ಯಾಖ್ಯಾನ ಕಾವೇರಿಯ ಸಂದರ್ಭಲ್ಲಿ ಲಾಯಕ್ಕಾಯಿದು.

  14. ಸೂಕ್ತ ಲೇಖನ ಒಪ್ಪಣ್ಣ. ಇಂದು ನಮ್ಮ ರಾಜಕೀಯಂದಾಗಿ ಎಲ್ಲವೂ ಹಾಳಯಿದು. ಅಬ್ಬಗೆ ಹೆಂಗೆ ಬೇಕೋ ಹಾಂಗೆ ಅಕ್ಕು.. ಕಾಡು ನೋಡುವೋ

  15. ಸಪ್ತಮಹಾನದಿಗಳಲ್ಲಿ ಒಂದಾದ ಆ ಕೊಡಗಿನ ಕಾವೇರಿ ಹೇಂಗಾರು ಎಲ್ಲೋರನ್ನೂ ಕಾಪಾಡ್ಳಿ. ಮತ್ತೆಲ್ಲ ಆ ಕಾವೇರಿ ಇಚ್ಛೆ.

  16. ನಿಜವಾಗಿದೆ ಎಲ್ಲರೂ ಈ ಶುಧ್ಧಿಲಿ ಬರದ ಹಾಂಗೆ ನಡಕ್ಕೊಂಡರೆ ಎಷ್ಟು ಲಾಯಿಕ ಅಲ್ಲದಾ?
    ಸರಿಯಾಗಿ ಎಲ್ಲೋರುದೆ ಲಾಯಿಕಲ್ಲಿ ಹಂಚಿ ತೆಕ್ಕೊಳಲಿ ಕಾವೇರಿ ನೀರು.
    ಎಲ್ಲರಿಂಗೂ ಬೇಕಾಷ್ಟು ನೀರು ಸಿಕ್ಕಲಿ, ಲೋಕಲ್ಲಿ ಎಲ್ಲರುದೆ ಸಂತೋಷಲ್ಲಿ ಇರಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×