Oppanna.com

ಮತ್ತೆ ಸೂರ್ಯನ ಬೆಣಚ್ಚು ಕಂಡ ಸೂರ್ಯ ದೇವಾಲಯ..

ಬರದೋರು :   ಒಪ್ಪಣ್ಣ    on   19/09/2014    9 ಒಪ್ಪಂಗೊ

ಜೀವದ ಪ್ರಭೆಗೆ ಸೂರ್ಯನೇ ಆಧಾರ. ಸೂರ್ಯ ಇಲ್ಲದ್ದರೆ ಲೋಕವೇ ಇಲ್ಲೆ – ಹೇದು ನಮ್ಮ ಹೆರಿಯೋರು ಸೂರ್ಯಾರಾಧನೆಲಿ ತೊಡಗಿದ್ಸು ನವಗೆಲ್ಲೋರಿಂಗೂ ಅರಡಿಗು. ಗಾಡಾಂಧಕಾರಲ್ಲಿ ಇರ್ತಿತು ಈ ಲೋಕ – ಸೂರ್ಯನಿಂದಾಗಿ ಬೆಣಚ್ಚು ಬಂತು. ಸೂರ್ಯನಿಂದಾಗಿ ಸಕಲ ಜೀವಿಗೊ ಉಂಟಾತು. ಸೂರ್ಯನೇ ಈ ಜೀವಿಗಳ ಅಧಿಪತಿ. ಸೂರ್ಯನೇ ಈ ಮನಸ್ಸುಗಳ ಅಧಿಪತಿ. ವಿಶ್ವಾಮಿತ್ರ ಋಷಿಯ ಮನಸ್ಸಿಂಗೆ ಬಂದ ಗಾಯತ್ರೀ ಮಂತ್ರವೂ ಇದೇ ಸೂರ್ಯನ ಧೇನುಸಿಯೇ ಇರ್ಸು. ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ – ಹೇಳ್ತವಲ್ಲದೋ; ಬೆಣಚ್ಚು ಕೊಡ್ತೋನೇ ಗುರು ಹೇಳ್ತ ಅರ್ಥಲ್ಲಿ. ಅಂತೂ – ಜೀವಕ್ಕೂ ಸೂರ್ಯಂಗೂ ಅವಿನಾಭಾವ ಸಂಬಂಧ ಇದ್ದು.

ವೈಜ್ಞಾನಿಕವಾಗಿ ನೋಡಿರೂ – ಹೈಡ್ರೋಜನು, ನೈಟ್ರೋಜನು ಓಕ್ಸೀಜನು ಹೀಂಗಿರ್ಸ ಡಜನುಗಟ್ಳೆ ಹರುದು ಬೀಳ್ಳೆ ಕಾರಣ ಆದ್ಸು ಸೂರ್ಯ ಹೇಳ್ತ ನಕ್ಷತ್ರದ ಮೈಲ್ಮೈ ಆಡ. ಅಲ್ಲಿಂದ ರಟ್ಟಿದ ಚೆಪ್ಪೆಗೊ ಮುಂದೊ ಬೇರೆಬೇರೆ ಗ್ರಹ ಆಗಿ, ಭೂಮಿಯೂ ಅದರಲ್ಲೊಂದು ಗ್ರಹ ಆಗಿ – ಅದರ್ಲಿಪ್ಪ ಡಜನುಗಟ್ಳೆ ಮಿಶ್ರಣಂಗೊ ಸೇರಿ ಜೀವಿ ಉಂಟಾತು ಹೇದು ನಂಬುತ್ತವಾಡ ವಿಜ್ಞಾನಿಗೊ – ಕೊಳಚ್ಚಿಪ್ಪು ಭಾವಯ್ಯ° ಒಂದೊಂದರಿ ಹೇಳುಗು.

ನಮ್ಮ ಬೈಲಿಂಗೂ ಹಾಂಗೇ. ಬೈಲಿಲಿಯೂ ಸೂರ್ಯನ ಪ್ರಕಾಶ ಒಳ್ಳೆತ ಇದ್ದು – ಹೇಳ್ತವು ಕೊಣಾಜೆ ಹೊಡೆಂದ ಅತ್ತೆಗಳು – ಡೈಮಂಡು ಭಾವನ ಮದುವೆ ಆಲ್ಬಮು ನೋಡಿಗೋಂಡು! 😉

ಅದಿರಳಿ

~

ಇಂಥಾ ಸೂರ್ಯಂಗೆ ದೇವತಾ ಸ್ಥಾನ ಕಲ್ಪಿಸಿ, ಅವಂಗೊಂದು ದೇವಾಲಯ ಕಟ್ಟಿದ್ದವು ನಮ್ಮ ಹೆರಿಯೋರು. ಭಾರತದ ಕೆಲವೇ ಕೆಲವು ಸೂರ್ಯದೇವಸ್ಥಾನಂಗಳಲ್ಲಿ ಒಂದು – ನಮ್ಮ ಅರ್ಕ ದೇವಸ್ಥಾನ. ಕೋನಾರ್ಕ ದೇವಸ್ಥಾನ. ಕೋನಾರ್ಕ ಸೂರ್ಯ ದೇವಸ್ಥಾನ. ಸ್ಥಳೀಯರು ಅರ್ಕ ಕ್ಷೇತ್ರ ಅಥವಾ ವಿರಿಂಚಿನಾರಾಯಣ ಕ್ಷೇತ್ರ ಹೇಳಿಯೂ ಹೇಳ್ತವಾಡ ಇದಕ್ಕೆ. ಪುರಿ, ಭುವನೇಶ್ವರ, ಮಹಾವಿನಾಯಕ, ಜೈಪುರ, ಕೋನಾರ್ಕ – ಪಂಚ ಮಹಾ ಕ್ಷೇತ್ರಂಗಳಲ್ಲಿ ಈ ಕೋನಾರ್ಕವೂ ಒಂದಾಗಿತ್ತಾಡ.

ಈಗಾಣ ಒರಿಸ್ಸಾ ರಾಜ್ಯದ ಪೂರ್ವಕರಾವಳಿಯ – ಸಮುದ್ರ ಕರೆಯ ಜಾಗೆಲಿ ಇಪ್ಪದು ಈ ಸೂರ್ಯದೇವಸ್ಥಾನ. ಪೂರ್ವ ಕರಾವಳಿ ಆದ ಕಾರಣ ಇದು ಸೂರ್ಯನ ಹೆಬ್ಬಾಗಿಲು ಹೇಳಿರೂ ಸತ್ಯವೇ. ಅಲ್ಲಿ ಬೆಣ್ಚಿ ಬಂದ ಮತ್ತೆಯೇ ಭಾರತ ಉದಿ ಅಪ್ಪದಿದಾ. ಸೂರ್ಯನ ಬೆಣ್ಚಿಂಗೆ ಹೊಸ್ತಿಲಿನ ಹಾಂಗೇ ಕಟ್ಟಿದ್ದವು ಈ ದೇವಸ್ಥಾನವ. ಮುಂದೆ ಮಧ್ಯಕಾಲಲ್ಲಿ ಭಾರತಕ್ಕೆ ಬಂದ ಕಷ್ಟದ ದಿನಂಗಳಲ್ಲಿ ಈ ದೇವಸ್ಥಾನ ಜೀರ್ಣ ಆತು. ಮತ್ತೆ ಆರಿಂಗೂ ಇದರ ಜೀರ್ಣೋದ್ಧಾರ ಮಾಡ್ಳೆ ಎಡಿಗಾಗದ್ದೆ ಹೋತು.

ವೇದ ಕಾಲಂದಲೇ ಈ ಜಾಗೆ ವಿಶೇಷವೇ. ಇಲ್ಲಿಪ್ಪ ದೇವಸ್ಥಾನದ ಬಗ್ಗೆ ಋಕ್ಕುಗೊ, ಮಂತ್ರಂಗೊ ಇದ್ದು.
ಬ್ರಹ್ಮಪುರಾಣಲ್ಲಿ ಸೂರ್ಯನ ಬಗ್ಗೆ ಕೋನಾದಿತ್ಯ ಹೇದು ಹೇಳ್ತವಾಡ. ಅರ್ಕ ಹೇದರೆ ಸೂರ್ಯ ಹೇಳಿಯೇ ಅರ್ತ ಇದಾ.

ಕಾಲಕಾಲಕ್ಕೆ ಜೀರ್ಣ ಆಗಿಂಡು, ಜೀರ್ಣೋದ್ಧಾರ ಆಗಿಂಡು ಮುಂದುವರುಕ್ಕೊಂಡು ಇದ್ದತ್ತು. ಅಧಿಕೃತವಾದ ದಾಖಲೆಯೊಂದರ ಪ್ರಕಾರ ಸುಮಾರು ಆರುನೂರು ಒರಿಶ ಹಿಂದೆ ಗಂಗವಂಶದ ಮೂರನೇ ನರಸಿಂಹನ ಆಳ್ವಿಕೆಲಿ ಈ ದೇವಸ್ಥಾನ ಜೀರ್ಣೋದ್ಧಾರ ಆದ್ಸು ಅಖೇರಿ ಅಡ. ಈಗ ಇಪ್ಪ ಕುರುಹುಗೊ, ಗುಡಿಗೊ ಮುರ್ಕಟೆ ಗೋಪುರಂಗೊ – ಎಲ್ಲವುದೇ ಅವನೇ ಕಟ್ಟಿದ್ದದು. ಅಂಬಗ ಅದು ಜೀರ್ಣ ಆದ್ಸು ಎಂತಗೆ? ಕಾಲನೇ ಹೇಳೇಕಟ್ಟೆ.

~

1847 ರಲ್ಲಿ ತೆಗದ ಚಿತ್ರಲ್ಲಿ ಹೀಂಗೆ ಕಾಣ್ತಡ!
1847 ರಲ್ಲಿ ತೆಗದ ಚಿತ್ರಲ್ಲಿ ಹೀಂಗೆ ಕಾಣ್ತಡ!

ದೇವಸ್ಥಾನ ಹೇಂಗಿದ್ದು?
ಬಂಗಾಳ ಕೊಲ್ಲಿಯ ಕರೆಯ ಒಂದು ಊರು.
ಅಲ್ಲಿ ಚಂದ್ರಭಾಗಾ ನದೀ ದಂಡೆಯ ಮೇಗೆ, ಸೂರ್ಯಂಗೆ ಬೇಕಾಗಿ ನಿಲ್ಲುಸಿ ಮಡಗಿದ ರಥದ ಹಾಂಗೆ – ಒಂದು ದೇವಸ್ಥಾನ.
ರಥದ ಹಾಂಗೆ?
ಅಪ್ಪು. ದೂರಂದ ನೋಡಿರೆ ಒಂದು ರಥದ ಹಾಂಗೇ – ಎಂಟು ಕುದುರೆಗೊ ಎಳೆತ್ತ ರಥ ಅದು.
ಆ ರಥಕ್ಕೆ ಹನ್ನೆರಡು ಜೊತೆ ಚಕ್ರದ್ದು.
ಕಲ್ಲಿನ ಚಕ್ರಂಗೊ. ವಜ್ರದ ಹಾಂಗೆ ಗಟ್ಟಿ, ರೂಪತ್ತೆಯ ಹಾಂಗೆ ಉರೂಟು.
ದೂರಂದ ನೋಡಿರೆ ಅದು ನಿಜವಾದ ಚಕ್ರವೇಯೋ ಏನೋ – ಹೇಳ್ತಷ್ಟು ಚೆಂದದ್ದು; ಕೆಂಪಟೆ ಕಲ್ಲಿಲಿ ಕೆತ್ತಿದ ಕೆತ್ತನೆ ತುಂಬಿದ ಚಕ್ರ ಅದು.
ರಥಲ್ಲಿ ಎರಡು ಹಂತಂಗೊ. ಒಂದು ಮುಖಮಂಟಪ, ಅದರ ಒತ್ತಕ್ಕೇ ಗರ್ಭಗುಡಿ.
ಮುಖಮಂಟಪ 128 ಅಡಿ, ಗರ್ಭಗುಡಿಯ ಗೋಪುರ 229 ಅಡಿ!
ಆದರೆ, ಇಂದು – ಮುಖಮಂಟಪ ಮಾಂತ್ರ ಇದ್ದಷ್ಟೆ. ನಿಜವಾದ ಗರ್ಭಗುಡಿ ಜೀರ್ಣ ಆಯಿದು.

ಆ ಮುಖಮಂಟಪಲ್ಲಿ ನವಗ್ರಹ ಮಂಟಪ ಇದ್ದಾಡ.
ಸೂರ್ಯ° ಇಪ್ಪ ದೇವಸ್ಥಾನ ಆದರೆ ಅಲ್ಲಿ ಒಳುದ ನವಗ್ರಹಂಗೊ ಇಲ್ಲದ್ದೆ ಇಕ್ಕೋ – ಹಾಂಗೆ ಸೋಮ ಮಂಗಳ ಬುಧ ಗುರು ಇತ್ಯಾದಿ ಆಗಿ ರಾಹು ಕೇತುವನ್ನೂ ಒಳಗೊಂಡ ನವಗ್ರಹ ಮಂಟಪ.

ಕರೆಲಿ ನಾಟ್ಯಮಂದಿರ – ನೃತ್ಯಗಾತಿಗೊಕ್ಕೆ ಬಂದು ನೃತ್ಯಸೇವೆ ಕೊಡ್ಳೆ.

ಮುಖ್ಯಮಂಟಪದ ಕರೆಲಿ –ಸೂರ್ಯನ ಹೆಂಡತ್ತಿ – ಮಾಯಾದೇವಿಯ ಮಂದಿರವೂ ಇದ್ದಾಡ.

~

ಇಷ್ಟೆಲ್ಲ ಇಪ್ಪ ಈ ಮಂದಿರದ ಅವಸಾನ ಎಂತಗೆ ಆತು?
ಅದೇ ದೊಡ್ಡ ಚಿಂತೆ- ಚಿಂತನೆ! ಸುಮಾರು ಜೆನ ಆಲೋಚನೆ ಮಾಡಿರೂ – ಇಂದಿಂಗೂ ಇದಕ್ಕೊಂದು ನಿರ್ದಿಷ್ಟ ಉತ್ತರ ಕೊಡ್ಳೆ ಆರಿಂಗೂ ಎಡಿಗಾಯಿದಿಲ್ಲೇಡ.
ಕೆಲವು ಜೆನ ಕೆಲವು ಬಗೆಲಿ ಹೇಳ್ತವು.
ದೊಡಾ ಭೂಕಂಪ ಆಗಿ ಹರುದು ಬಿದ್ದದು – ಹೇಳ್ತವು ಕೆಲವು ಜೆನಂಗೊ. ಅಲ್ಲ, ದೊಡ್ಡ ಮಿಂಚು ಬಡುದು ಕಲ್ಲಕಂಬಂಗೊ ಪೂರ ಒಡದು ಹೋತು – ಹೇದು ಕೆಲವು ಜೆನರ ವಾದ. ಅದೂ ಅಲ್ಲ, ಚಂದ್ರಭಾಗಾ ಹೊಳೆಕ್ಕರೆ ಹೊಯಿಗೆ ಆದ ಕಾರಣ ಪಾಯ ಗಟ್ಟಿ ಸಾಕಾಗದ್ದೆ ಹೋದ್ಸು – ಹೇಳ್ತದು ಮತ್ತೆ ಕೆಲವು ಜೆನರ ತಿಳಿವಳಿಕೆ; ವಾಸ್ತು-ಆಯ-ಪಾಯ ಸರಿ ಆಗದ್ದೆ ಉದುರಿದ್ದಾಯಿಕ್ಕು – ಹೇಳ್ತವು ಇನ್ನೂ ಕೆಲವು ಜೆನ. ಒಟ್ಟಿಲಿ – ಅದೆಂತಕೆ ಉದುರಿತ್ತು? ದೇವರಿಂಗೇ ಗೊಂತು.
ನಿಜವಾಗಿಯೂ ಆ ದೇವಸ್ಥಾನ ಉದುರಿದ್ದು ಹೇಂಗೆ? ಸತ್ಯ – ಆ ಸೂರ್ಯದೇವರಿಂಗೇ ಗೊಂತು.

ದೇವಸ್ಥಾನ ಪೂರ್ಣ ಜೀರ್ಣ ಆದ ಮತ್ತೆ ಅಲ್ಯಾಣ ಪೂಜಾ ಪರಿಕ್ರಮಂಗೊ ನಿಂದತ್ತಾಡ. ಪ್ರಾಣಪ್ರತಿಷ್ಠೆ ಆದ ದೇವಸ್ಥಾನಲ್ಲಿ ಪೂಜೆ ನಿಂಬದು ಅತ್ಯಂತ ಬೇಜಾರದ ಸಂಗತಿ. ಹಾಂಗಾಗಿ, ಸೂರ್ಯದೇವನ ಎದ್ದುರೆ ಇದ್ದಿದ್ದ ಅರುಣಕಂಭವ ( ಗರುಡಗಂಬ ಇಲ್ಲೆಯೋ, ಅದುವೇ) ಅಲ್ಲಿಂದ ಪೊಕ್ಕುಸಿ ಸೀತ ತಂದು ಪುರಿ ಜಗನ್ನಾಥನ ಆವರಣಲ್ಲಿ ಪ್ರತಿಷ್ಠೆ ಮಾಡಿದವಾಡ ಅಜ್ಜಂದ್ರು. ಅಷ್ಟಾದರೂ ಸಲ್ಲಲಿ – ಹೇದು. ಅಂದಿಂದ ಆ ಅರುಣಕಂಬ ಜಗನ್ನಾಥನ ಆಶ್ರಯಲ್ಲಿ ಇದ್ದಾಡ.
~

ಇಷ್ಟೆಲ್ಲ ಅಪ್ಪಗ, ಅಂಬಗಾಣ ಅಜ್ಜಂದ್ರು – ಈ ದೇವಸ್ಥಾನವ ಒಳಿಶೇಕು – ಹೇದು ಕೇಳಿಗೊಂಡವಾಡ ಸರಕಾರದ ಹತ್ತರೆ. ಇಂಗ್ಳೀಶು ಸರ್ಕಾರ ಅಲ್ಲದೋ – “ಒಳಿಶಲೀ ಹೇದು ಎಂತೂ ಮಾಡ್ಳಿಲ್ಲೆ, ಆದರೆ ಮನುಷ್ಯರು ಮುಟ್ಟದ್ದ ಹಾಂಗೆ ಮಾಡ್ತೆಯೊ°” – ಹೇದು ನಿಜಮಾಡಿದವು. ಇದರಿಂದಾಗಿ ಅಂಬಗಳೇ ಜೀರ್ಣ ಆದ ದೇವಸ್ಥಾನದ ಗರ್ಭಗುಡಿ ಬಿದ್ದತ್ತು.
ಮತ್ತೆ ಇಪ್ಪ ಮುಖಮಂಟಪವೂ ಬೀಳುಸ್ಸು ಬೇಡ ಹೇದು ಅದರ ಒಳ ಪೂರ್ತ ಹೊಯಿಗೆ ತುಂಬುಸಿ ಮಡಗಿದವಾಡ.
ಹಾಂಗೆ ಹೊಯಿಗೆ ತುಂಬುಸಿದ್ದ ಕಾರಣ ಈಗ ಅದರ ತೆಗದಪ್ಪಗ ಅಷ್ಟಾರೂ ಕಾಂಬಲೆ ಸಿಕ್ಕಿತ್ತು ನವಗೆ. ಅಲ್ಲದೋ?

ಕೋನಾರ್ಕ ದೇವಸ್ಥಾನ ಈಗ ಹೀಂಗೆ ಕಾಣ್ತಡ!
ಕೋನಾರ್ಕ ದೇವಸ್ಥಾನ ಈಗ ಹೀಂಗೆ ಕಾಣ್ತಡ!

ಮುಂದೆ ಸಾರ್ವಜನಿಕರ ದರ್ಶನಂದ ಸಂಪೂರ್ಣವಾಗಿ ನಿಷೇಧಿಸಿ ಬೇಲಿ ಕಟ್ಟಿ ಮಡಗಿತ್ತಿದ್ದವಾಡ ಆ ದೇವಸ್ಥಾನಕ್ಕೆ.
ಇದಕ್ಕೆ “ವಿಶ್ವ ಪರಂಪರೆಯ ಕ್ಷೇತ್ರ” ಹೇದು ಗುರ್ತ ಮಾಡಿದವಾಡ. ಹಾಂಗಾಗಿ, ವಿಶ್ವಸಂಸ್ಥೆಯ ಲೆಕ್ಕಲ್ಲಿ ಈ ದೇವಸ್ಥಾನವ ನೋಡಿಗೊಂಬಲೆ ವೆವಸ್ತೆ ಆವುತ್ತು ಹೇಳ್ತದು ಕೊಶಿಯ ಸಂಗತಿ. ಆದರೆ? ದೇವಸ್ಥಾನ ದೇವಸ್ಥಾನ ಆಗಿಯೇ ಇರೆಡದೋ? ಅದರ ವಸ್ತುಸಂಗ್ರಹಾಲಯವೋ, ಇನ್ನೊಂದೋ ಮಾಡಿರೆ ಆವುತ್ತೋ?

~

ಹಾಂಗೆ ಸರಿಸುಮಾರು ಒಂದು ಶತಮಾನದ ಕಾಲ ಮನುಷ್ಯಸಂಚಾರ ಇಲ್ಲದ್ದ ಆ ದೇವಸ್ಥಾನಕ್ಕೆ – ಈ ಒರಿಶಂದ ಪುನಾ ಮನುಷ್ಯಸಂಚಾರ ಆವುತ್ತಾಡ. ಅಪ್ಪು, ಭಾರತದ ಪುರಾತತ್ವ ಇಲಾಖೆಯ ಮೂಲಕ ಆ ದೇವಸ್ಥಾನವ ಇಪ್ಪಲ್ಲಿಗೇ ಸರಿ ಮಾಡಿ ಭಕ್ತರ ದರ್ಶನಕ್ಕೆ ಮುಕ್ತವಾಗಿ ತೆಗದ್ದವಾಡ.
ಭಕ್ತರೆಲ್ಲರೂ ಕೋನಾರ್ಕದ ಸೂರ್ಯದೇವಸ್ಥಾನಕ್ಕೆ ಹೊಗಿ, ದರ್ಶನ ಪಡಕ್ಕೊಂಡು ಬಪ್ಪಲಕ್ಕು.
~
ದೇಶದ ಭವಿಷ್ಯ ಗಟ್ಟಿ ಆಯೇಕಾರೆ ಭೂತಕಾಲದ ನೆಂಪು ಸರೀ ಇರೆಕ್ಕು – ಹೇಳ್ತವು ಮಾಷ್ಟ್ರುಮಾವ°.
ಹಾಂಗೇ, ನಳಂದಾ ವಿಶ್ವವಿದ್ಯಾಲಯದ ಪುನರುತ್ಥಾನ, ಅಯೋಧ್ಯಾ, ಮಥುರಾ,ಕಾಶೀ ದೇವಸ್ಥಾನದ ಮರುಸ್ಥಾಪನೆ, ಕೋನಾರ್ಕದ ಹಾಂಗಿಪ್ಪ ಜೀರ್ಣ ದೇವಸ್ಥಾನಂಗಳ ಪುನರುಜ್ಜೀವನ ಭಾರತದ ಭೂತಕಾಲದ ನೆಂಪು ಮಾಡ್ತರಲ್ಲಿ ಸಂಶಯ ಇಲ್ಲೆ.

ಆದಷ್ಟು ಬೇಗ – ಈ ಕೋನಾರ್ಕದ ಪಳೆಯುಳಿಕೆ ಜೀವಂತ ದೇವಸ್ಥಾನ ಆಗಲಿ – ಹೇಳ್ತದು ಬೈಲಿನ ಹಾರೈಕೆ.

~

ಒಂದೊಪ್ಪ: ಸೂರ್ಯದೇವಾಲಯದ ಜೀರ್ಣೋದ್ಧಾರ ಭಾರತದ ಜೀರ್ಣೋದ್ಧಾರಕ್ಕೆ ಮುನ್ನುಡಿಯಾಗಲಿ.

 

9 thoughts on “ಮತ್ತೆ ಸೂರ್ಯನ ಬೆಣಚ್ಚು ಕಂಡ ಸೂರ್ಯ ದೇವಾಲಯ..

  1. ಒಳ್ಳೆ ಶುದ್ದಿ ಒಪ್ಪಣ್ಣ .ಅದ್ಭುತವಾದ ಶಿಲ್ಪಕಲಾ ಚಾತುರ್ಯದ ದೇವಾಲಯದ ಚಿತ್ರ ವನ್ನುದೆ ಕೊಟ್ಟದಕ್ಕೆ ಧನ್ಯವಾದಂಗೊ. ೧೮೪೭ ರಲ್ಲಿ ತೆಗದ
    ‘ಫೊಟೊ’ ಅಲ್ಲ ಅದು. ಆರೋ ಚತುರ ಕಲಾವಿದ ಬರದ ರೇಖಾ ಚಿತ್ರ -ಎಷ್ಟು ಚೆಂದ ಬೈಂದು ಹೇಳಿರೆ ಫೊಟೊ ದ ಹಾಂಗೆಯೇ ಕಾಣುತ್ತು ಆರೋ ಬ್ರಿಟಿಶ್ ಕಲಾವಿದ ಬರದ ಹಾಂಗೆ ಕಾಣುತ್ತು . ಪೂರ್ತಿ ಚಿತ್ರಲ್ಲಿ ಅವನ ಹೆಸರುದೇ ಇಕ್ಕು ಹೇಳಿ ಎನ್ನ ಅಂದಾಜು.

  2. ಒಳ್ಳೆ ಮಾಹಿತಿ ಸಿಕ್ಕಿತ್ತು.ಧನ್ಯವಾದ೦ಗೊ.ಒ೦ದು ಸ೦ಶಯ.ಈ ಮಾಯಾದೇವಿ ಆರು?ಛಾಯಾ ಹಾ೦ಗೂ ಸ೦ಜ್ಞಾ ಎರಡು ಜೆನ ಸೂರ್ಯನ ಹೆ೦ಡತಿಯಕ್ಕೊ ಹೇದು ಪುರಾಣೋಕ್ತಿ.ಇನ್ನು ಮಾಯಾ ದೇವಿಯ ಸ೦ಮ೦ಧ ಹೇ೦ಗೆ? ಗೊ೦ತ್ತಿಲ್ಲೆ.

  3. ಒಪ್ಪಣ್ಣಾ!
    ಹೊಸ ವಿಷಯ ಗೊಂತಾತದ! (ಗೊಂತಿಲ್ಲದ್ದ ಹಳೇ ವಿಷಯಂಗ ಈಗ ಹೊಸತ್ತಾಗಿ ಗೊಂತಾದ್ದದು!). ಧನ್ಯವಾದ.
    ಒಂದು ಸಂಶಯ –
    ಮುಖ್ಯಮಂಟಪದ ಕರೆಲ್ಲಿಪ್ಪದು ಮಾಯಾದೇವಿಯ ಮಂದಿರವೊ? ಅದು ಛಾಯಾದೇವಿ ಮಂದಿರ ಆಗಿಕ್ಕೋ ಕಾಣ್ತು.

    ಜಗಚ್ಚಕ್ಷುವಿನ ಸೂರ್ಯನ ಆರಾಧನೆಯ ಸ್ಥಾನ ಪ್ರಶಸ್ತವಾಗಲಿ!

  4. ಹತ್ತು ವರ್ಷದ ಮದಲು ಕೋನಾರ್ಕದ ಹತ್ತರೆ ಸಮುದ್ರದ ಕರೆಲಿ ನಿ೦ದು ಉದೆಗಾಲಲ್ಲಿ ಸೂರ್ಯೋದಯವ ನೋಡಿ, ಮೀನುಗಾರರ ನೂರಾರು ದೋಣಿಗೊ ನೀರಿ೦ಗಿಳಿವ ರಭಸವ ನೋಡಿ,ಈ ದೇವಸ್ಥಾನವ ನೋಡಿದ ನೆ೦ಪು ಸದಾ ಹೊಸತ್ತಾಗಿದ್ದು.
    ಅದ್ಭುತ ಕೆತ್ತನೆಗೊ ಇಪ್ಪ ದೊಡ್ಡ ದೇವಸ್ಥಾನದ ಗರ್ಭಗುಡಿಯ ಒಳ ಗೋಪುರದ ವರೆಗೆ ಕಲ್ಲುಗಳ ರಾಶಿ ಹಾಕಿ ಬಾಗಿಲು ಮುಚ್ಚಿ ಮಡಗಿತ್ತಿದ್ದವು.ಕಾರಣ ಕೇಳಿರೆ ಶಿಥಿಲ ಆದ ದೇವಸ್ಥಾನ ಬೀಳದ್ದ ಹಾ೦ಗೆ ಈ ವೆವಸ್ತೆ ಹೇಳಿ ಗೊ೦ತಾತು.
    ಇಲ್ಲಿ ವರ್ಷಕ್ಕೊ೦ದರಿ ಭಾರತದ ಎಲ್ಲಾ ಪ್ರಸಿದ್ಧ ನೃತ್ಯ ಕಲಾವಿದರು ಬ೦ದು ಕಾರ್ಯಕ್ರಮ ನೆಡೆಶುತ್ತವು ಹೇಳಿಯೂ ಗೊ೦ತಾಗಿತ್ತು.
    ಸೂರ್ಯ ದೇವಾಲಯ ಜೀರ್ಣೋದ್ಧಾರ ಆದರೆ ಭಾರತದ ಬೆಣಚ್ಚು ವಿಶ್ವವ್ಯಾಪಿ ಅಕ್ಕು.
    ಒಳ್ಳೆ ಶುದ್ದಿ ಒಪ್ಪಣ್ಣಾ.

  5. ಒಳ್ಳೇದು ಆಗಲಿ ಅಪ್ಪಾ.
    ಹೇ0ಗೂ ಫೀಡ್ ಶಕಟ ಬಿಡುತ್ತವಡ .ಒ೦ದಾರಿ ನೋಡಿ ಬಪ್ಪದು.ಮೂಡ್ಲಾಗಿ ಭಾವನ ಕ೦ಡಾ೦ಗೂ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×