Oppanna.com

ಮನೆ ಮುಚ್ಚುವ ಮದಲು ಮನಸ್ಸು ಮುಚ್ಚಿರ್ತು…!

ಬರದೋರು :   ಒಪ್ಪಣ್ಣ    on   05/10/2012    16 ಒಪ್ಪಂಗೊ

ತರವಾಡುಮನೆ ಶಂಭಜ್ಜ ಈಗ ಇಲ್ಲದ್ದರೂ, ಅವು ಕಟ್ಟಿದ ಭವ್ಯ ಆಡಳ್ತೆಯ ಸಾರೂಪ ಈಗಳೂ ಇದ್ದು.
ಅಪ್ಪ ಎಂಕಪ್ಪಜ್ಜನ ಪೂರ್ಣಾಶೀರ್ವಾದಲ್ಲಿ ಪಡಕ್ಕೊಂಡ ದೇವರು, ಮನೆ, ಜಾಗೆ, ಒಯಿವಾಟು – ಎಲ್ಲವನ್ನೂ ಚೆಂದಕೆ ಕೊಡಿ ಎತ್ತುಸೆಂಡು, ಕಾಂಬುಅಜ್ಜಿಯ ಒಟ್ಟಿಂಗೆ ಸಂಸಾರ ನೆಡೆಶಿ ರಂಗಮಾವ°, ಮಾಲಚಿಕ್ಕಮ್ಮ- ಇಬ್ರು ಮಕ್ಕಳನ್ನೂ ಪಡದು ಕೃತಾರ್ಥರಾಯಿದವು.
ಶಂಬಜ್ಜ° ಕಾಲ ಆಗಿ ಅದಾಗಳೇ ಹತ್ತಿಪ್ಪತ್ತೊರಿಶ ಕಳಿವಲಾತು; ನಂಬಲೇ ಎಡಿತ್ತಿಲ್ಲೆ!
~
ಮನೆ ಕಟ್ಟಿನೋಡು, ಮದುವೆ ಮಾಡಿನೋಡು – ಹೇದು ಒಂದು ಗಾದೆ ಇಪ್ಪದು ನಿಂಗೊಗೆ ಅರಡಿಗು.
ಸಾರ್ಥಕ ಗೃಹಸ್ಥ ಜೀವನದ ಎರಡು ಅಂಶಂಗೊ ಅದು.
ಎಲ್ಲೋರಿಂಗೂ ಆ ಎರಡೂ ಯೋಗಂಗೊ ಬಂದು ಒದಗುತ್ತಿಲ್ಲೆಡ, ಆದರೆ ಶಂಭಜ್ಜಂಗೆ ಎರಡೂ ಸಿಕ್ಕಿದ್ದು.
ರಂಗಮಾವ°, ಮಾಲಚಿಕ್ಕಮ್ಮನ ಮದುವೆ ಮಾಂತ್ರ ಅಲ್ಲದ್ದೇ, ಶಂಬಜ್ಜನ ತಂಗೆ ಲಿಂಗುಅಜ್ಜಿ ಇಲ್ಲೆಯೋ – ಅದರ ವೈಧವ್ಯಲ್ಲಿ – ಅದರ ಒಂದೇ ಮಗಳು ಶುಭತ್ತೆಯನ್ನೂ ಬೆಂಗ್ಳೂರಿಂಗೆ ಧಾರೆ ಎರದು ಕೊಟ್ಟಿದವು.
ಮದುವೆಯ ವಿಚಾರ ಹಾಂಗಿರಳಿ, ಮನೆಯ ಶುದ್ದಿಗೆ ಬಪ್ಪೊ°.
~
ಭಾರತದ ಸೊತಂತ್ರಕ್ಕೆ ಮದಲು – ನಲುವತ್ಮೂರರಲ್ಲಿ ಹೇದು ಕಾಣ್ತು, ವೆಂಕಪ್ಪಜ್ಜನ ಹೆರಿಯೋರ ಕಾಲದ ಆ ಮನೆಮಾಡು ನಟ್ಟ-ನೆಡುಮಳೆಗಾಲ ಜಗ್ಗಿ ಕೂದತ್ತಡ. ಮಳೆ ಹೇದರೆ ಎಂತಾ ಮಳೆ – ಈಗಾಣ ನಮುನೆದಲ್ಲ, ಬಂದರೆ ವಾರಗಟ್ಳೆ ಬಿಡದ್ದೇ ಬಪ್ಪ ದೀರ್ಘಕಾಲದ ಮಳೆಗೊ ಅಂಬಗ!
ಮರಂಗೊ ಕುಂಬಾಗಿತ್ತೋ , ಮುಳಿಮಾಡಿಂಗೆ ಹಂಚು ಹೊದೆಶಿದ್ದು ತಾಂಗಲೆಡಿಗಾತಿಲ್ಲೆಯೋ, ಗೋಡೆಗೆ ಒರಳೆ ಬಂದಿತ್ತೋ – ಅಂತೂ ಒಟ್ಟಿಲಿ ಆ ಮನೆಯ ಜೀರ್ಣೋದ್ಧಾರದ ಸಮೆಯ ಆಗಿತ್ತು.
ಜಡಿ ಕುಟ್ಟಿ ಮಳೆ, ಅಟ್ಟ, ಅದರಿಂದ ಕೆಳ ಉಪ್ಪರಿಗೆ, ಅದರಿಂದ ಕೆಳ ಕೋಣೆಗೊ – ಎಲ್ಲವೂ ಬೊದುಳಿತ್ತು!
ಅಂಬಗಾಣ ಊರ ಜವ್ವನಿಗರು ಮಳೆ, ಛಳಿ ಲೆಕ್ಕುಸದ್ದೆ ಮಾಡಿದ ಕಾರ್ಯವ – ಬಟ್ಯ° ಒಂದೊಂದರಿ ಕೂದು ಕತೆ ಹೇಳುಲಿದ್ದು, ತರವಾಡುಮನೆಯ ಈಗಾಣ ಪುಳ್ಳಿ – ವಿನುವಿಂಗೆ ಅದರ ಕೇಳುವಗ ಅದೇ ಛಳಿ-ಮಳೆಗೆ ಬೊದುಳಿದ ಹಾಂಗೇ ರೋಮ ಕುತ್ತ ಆವುತ್ತು!
~
ಊರವೆಲ್ಲ ಸೇರಿಗೊಂಡು ಆ ಗೋಡೆಯ ಮೇಗೆ ಜಗ್ಗಿ ಕೂದ ಹಂಚಿನ ಮಾಡಿನ ಮೇಗೆ ಸೋಗೆಯಮಾಡು ಮಾಡಿದವಡ; ತತ್ಕಾಲಕ್ಕೆ – ಮಳೆಗಾಲದ ಮಳೆಗೆ ತಕ್ಕ.
ಅಲ್ಲಿಂದಿಲ್ಲಿಂದ ಊರೊಳಂದ ಸಿಕ್ಕಿದ ಮುಳಿ, ಸೋಗೆ, ಮಡಲು, ತಟ್ಟಿ,– ಟಾರ್ಪಲು ಇದ್ದಿದ್ದೋ ಒಪ್ಪಣ್ಣಂಗರಡಿಯ; ಅಂಬಗ ಸಿಕ್ಕಿಂಡಿದ್ದದರ ಎಲ್ಲ ತಂದು – ಮಾಡಿಂಗೆ ಸಿಕ್ಕುಸಿ, ಮನೆ ಒಳಿಶಿಕ್ಕಿದವಡ.
ಚೆಂಡಿ ಆದ ಮಣ್ಣಿನ ಗೋಡೆ ಗಟ್ಟಿಯ ಬಾಬ್ತು ಅಲ್ಲ, ಯೇವತ್ತಿಂಗೂ ಅಪಾಯ ತಪ್ಪಿದ್ದಲ್ಲ – ಹೇಳ್ತದು ಸ್ವತಃ ಶಂಭಜ್ಜಂಗೇ ಅರಡಿಗು.

ಮನೆಯೊಳ ಸಂಸಾರ ಇಪ್ಪದು ಬೇಡ – ಹೆರ ಕೊಟ್ಟಗೆಲಿ ಮನುಗಿ; ಅಲ್ಲದ್ದರೆ ಎಂಗಳಲ್ಲಿಗೆ ಬನ್ನಿ ಹೇದು ಊರ ಹಲವರು ಸಲಹೆ ಕೊಟ್ಟಿದವಾಡ ಆ ಕಾಲಲ್ಲಿ. ಶಿವಲಿಂಗ, ಸಾಲಿಗ್ರಾಮ ದೇವರುಗಳ ಮನೆಯೊಳ ಮಾಡಿಕ್ಕಿ ನಾವು ಹೆರ ಹೋಪದು ಅಸಾಧು ಹೇಳ್ತ ಅಭಿಪ್ರಾಯಲ್ಲಿ – ಜೀವಭಯ ಇದ್ದರೂ – ದೇವರ ನಂಬಿಗೊಂಡು ದೇವರ ಒಟ್ಟಿಂಗೇ ಅಲ್ಲೇ ವಾಸ ಮಾಡಿದವು ಆ ಮಳೆಗಾಲ ಪೂರ್ತಕೆ.
ಇದ್ದರೂ ದೇವರ ಬುಡಲ್ಲಿ, ಹೋದರೂ ದೇವರ ಬುಡಲ್ಲಿ; ಆ ಮನೆಯೇ ಅವರ ಸರ್ವಸ್ವ ಹೇಳ್ತದು ಅವರ ಏಕಮಾತ್ರ ನಂಬಿಕೆ.
ದೇವರು ಕೈ ಬಿಟ್ಟಿದನಿಲ್ಲೆ, ಮಳೆಗಾಲ ನಿಂಬನ್ನಾರವೂ ಆ ಮನೆಯ ಒಳಿಶಿಕೊಟ್ಟಿದ.

ಮಳೆಗಾಲ ತೀರಿ ಹಬ್ಬದ ಸಮೆಯಕ್ಕಪ್ಪಗ ಬೆಶಿಲು ಕಾಂಬಲೆ ಸುರು ಆತು.
ಬಾಳಪ್ಪಾಚಾರಿ – ಈಗಾಣ ಕೊಗ್ಗು ಆಚಾರಿಯ ಅಜ್ಜ – ಅಂಬಗಾಣ ಹೆಸರು ಹೋದ ಆಚಾರಿ – ಬರುಸಿ ಮನೆ ಮುರುದವು.
ಆ ಹಳೆಮನೆಯ ಮುರುದ ಮರಂಗಳ, ಕುಂಬಾದ ಮಟ್ಟುಗಳ ತೆಗದು, ಹೊಸ ಮರಂಗಳ ಜೋಡುಸಿ ಗಟ್ಟಿಗೆ ಮತ್ತೊಂದರಿ ಮಾಡು ಹೊದೆಶಿದವು ಶಂಬಜ್ಜ. (ಮರಮಟ್ಟುಗಳ ಬಗ್ಗೆ ಅಂದೊಂದರಿ ಮಾತಾಡಿದ್ದು; ನೆಂಪಿದ್ದನ್ನೇ?
https://oppanna.com/oppa/adda-pakkasu-bertolu)

ರೋಮಾಂಚನ ಅಪ್ಪ ಈ ಸಂಗತಿಯ ವಿವರವಾಗಿ ಇನ್ನೊಂದರಿ ಮಾತಾಡುವೊ.
ಆ ಮನೆಯ ಬಗ್ಗೆ ಅವಕ್ಕಿದ್ದಿದ್ದ ಪ್ರೀತಿಯ ಗಮನುಸೇಕು ನಾವು. ಮನೆ ಹೇದರೆ ತನ್ನ ಜೀವವೇ – ಹೇಳ್ತ ಹಾಂಗೇ ತಿಳ್ಕೊಂಡು, ಹಾಂಗೇ ನೆಡಕ್ಕೊಂಡು ಬದ್ಕಿದೋರು ಆ ಶಂಭಜ್ಜ!
ಇದೆಲ್ಲ ಈಗ ಎಂತಗೆ ನೆಂಪಾತು ಈ ಒಪ್ಪಣ್ಣಂಗೆ – ಕೇಳುವಿ ನಿಂಗೊ. ಹೇಳ್ತೆ, ಕೇಳಿ.
~

ಮನೆ ಒಂದರಿಂಗೆ ಮುಚ್ಚಿರೂ, ಮನಸ್ಸು ಮುಚ್ಚದ್ದರೆ ಹೆದರಿಕೆ ಇಲ್ಲೆ!

ಮನ್ನೆ, ದೊಡ್ಡಜ್ಜನಲ್ಲಿಯಾಣ ಕಾರ್ಯಕ್ರಮಕ್ಕೆ ಹೋಪಲೆ ದೊಡ್ಡಬಾವನ ಬೈಕ್ಕಿನ ಹಿಂದಾಣ ಸೀಟು ಮಾತಾಡಿ ಮಡಗಿತ್ತಿದ್ದೆ. ನೋಡಿಂಡಿದ್ದ ಹಾಂಗೇ ಚೆಲಾ; ಎಲ್ಲಿದ್ದಿದ್ದನೋ – ಅಭಾವ ಬಂದು ಕೂದೊಂಡ°!
ಎತಾರ್ತಕ್ಕೂ ನವಗೆ ರಜ ಹುಳಿಹುಳಿ ಆಯಿದು – ಆದರೆ ಎಲ್ಲೋರ ಎದುರು ಲಡಾಯಿ ಮಾಡಿ ಇನ್ನು – ದೊಡ್ಡಳಿಯನ ಬಾಯಿಲಿ “ಹುಳಿಮಾವ°” ಹೇಳುಸಿಗೊಂಬದು ಬೇಡ ಹೇದು; ಬೇರೆ ಏರ್ಪಾಡು ಏನಾರು ಇದ್ದೋದು ನೋಡಿಂಡಿಪ್ಪಗಳೇ – ದೊಡ್ಡಭಾವನೇ ಹೇಯಿದ° – “ಓಟೆದೊಡ್ಡಪ್ಪ ಹೋಕಲ್ಲದೋ, ಅವರ ಮಿಳ್ಟ್ರಿಜೀಪಿಲಿ ಜಾಗೆ ಇಕ್ಕು” ಹೇದು.
ಅದಪ್ಪು; ಜೀಪು ಗಟ್ಟಿ ಇಪ್ಪ ಕಾರಣ ಅಟ್ಟಲ್ಲಿ ಆದರೂ ಕೂದೊಂಡು ಹೋಪಲಕ್ಕು.
ಹಾಂಗೆ ಈ ಸರ್ತಿ ಓಟೆದೊಡ್ಡಪ್ಪನ ಜೀಪಿಲೇ ಹೋದ್ಸು – ಅಟ್ಟಲ್ಲಿ ಅಲ್ಲ; ಸೀಟಿಲಿಯೇ!
~

ಮದಲೇ ಮಾತಾಡಿಗೊಂಡ ಹಾಂಗೆ ನಾವು ಬದಿಯೆಡ್ಕ ಪೆಟ್ರೋಲುಪಂಪಿನ ಎದುರೆ ಸಿಕ್ಕಲೆ.
ಮಾತಾಡಿದ ಹೊತ್ತಿಂಗೇ ಜೀಪು ಬಂತು – ಮಿಳ್ಟ್ರಿ ಜೀಪಲ್ಲದೋ; ಹೊತ್ತುಗೊತ್ತು ಅದಕ್ಕೆ ನಾವು ಹೇಳಿ ಆಯೇಕೋ!?
ನಾವುದೇ ಅಲ್ಲೇ ಇದ್ದ ಕಾರಣ ಆರುದೇ ಕಾಯೇಕಾಯಿದಿಲ್ಲೆ! ಓಟೆ ದೊಡ್ಡಪ್ಪನ ಬಿಟ್ಟು ಮನೆಂದ ಒಳುದೋರೆಲ್ಲ ಮುನ್ನಾದಿನವೇ ಹೋಯಿದವಾಡ; ಹಾಂಗಾಗಿ ಜೀಪಿಲಿ ಜಾಗೆ ಇದ್ದತ್ತು. ಚೆಕ್ಕೆಮನೆ ಮಾಷ್ಟ್ರಣ್ಣ – ಪೆರ್ಲಲ್ಲಿ ಸಿಕ್ಕಿದೋರು – ಎದುರಾಣ ಸೀಟಿಲಿ ಇದ್ದಿದ್ದವು. ದೊಡ್ಡಪ್ಪನೂ ಮಾಷ್ಟ್ರೇ ಆದ ಕಾರಣ – ಮಾಷ್ಟ್ರಕ್ಕಳ ಎಡಕ್ಕಿಲಿ ಸಿಕ್ಕಿಹಾಕಿಂಬದು ಬೇಡ ಹೇದು ನಾವು ಹಿಂದಾಣ ಸೀಟು ಹಿಡುದತ್ತು.

ಬದಿಯೆಡ್ಕ ಕಳುದು ಉಡುಪಮೂಲೆಯ ಜಾಗೆ ಕರೇಲಿ ಆಗಿ, ಚೆರುಕಳ ಇಳುದು ಚಂದ್ರಗಿರಿ ಕಂಡು ಗುಡ್ಡೆ ಹತ್ತಿ ಮಲೆಯಾಳ ದೇಶಲ್ಲೆ ಹೋವುತ್ತಾ ಇತ್ತು ಜೀಪು. ಯೇವ ಹೊಂಡಗುಂಡಿ ಆದರೂ ಲೆಕ್ಕವೇ ಇಲ್ಲೆ.
ಮಾಷ್ಟ್ರಕ್ಕೊ ಮಾತಾಡಿಗೊಂಡೇ ಇತ್ತಿದ್ದವು. ಜೀಪಿಲಿಪ್ಪದು ಮೂರೇ ಜೆನ ಆದರೂ – ನೂರು ಜೆನರ ಕ್ಲಾಸಿಲಿ ಮಾತಾಡಿ ಅದೇ ಅಭ್ಯಾಸ ಅಲ್ಲದೋ! 😉
~
ಅವಿಬ್ರು ಮಾತಾಡುವಗ ಹಲವಾರು ವಿಶಯಂಗೊ ಬಂದಿತ್ತು. ಮಾಷ್ಟ್ರತ್ತಿಗೆಗೆ ಸಮ್ಮಂದ ಪಟ್ಟದು, ಶಾಲಗೆ ಸಮ್ಮಂದ ಪಟ್ಟದು ನವಗೆ ತಲಗೆ ಹೊಕ್ಕಿದಿಲ್ಲೆ. ಆದರೆ ಹಳ್ಳಿಯೊಳದಿಕಾಣ ಸಂಗತಿಗೊ ನವಗೂ ಆಸಕ್ತಿಯೇ ಇದಾ – ಎಡೆಲಿ ಮಾತಾಡದ್ದರೂ ಬಾಯಿಮುಚ್ಚಿ ಕೇಳಿಂಡಿದ್ದತ್ತು.
ಹಾಂಗೆ, ವಾಟೆದೊಡ್ಡಪ್ಪ – ಚೆಕ್ಕೆಮನೆ ಮಾಷ್ಟ್ರಣ್ಣನ ಮಾತುಕತೆಲಿ ಬಂದ ಒಂದು ವಿಶಯವೇ ನವಗೆ ಈ ವಾರಕ್ಕೆ ಶುದ್ದಿ. ಅದುವೇ ಒಪ್ಪಣ್ಣಂಗೆ ಶಂಬಜ್ಜನ ನೆಂಪು ತರುಸಿದ್ದು.
ಅದೆಂತರ?
~

ಓಟೆದೊಡ್ಡಪ್ಪನೂ ಚೆಕ್ಕೆಮನೆ ಮಾಷ್ಟ್ರಣ್ಣನೂ ವಿಶಯ ಮಾತಾಡುವಗ ನೆರೆಕರೆಯ ಕೆಲವು ಶುದ್ದಿಗೊ ಬಂತು.
ಮನೆಗಳ ಬಗ್ಗೆ – ಹಳೆಕಾಲಲ್ಲಿ ತುಂಬಿದ – ಈಗ ಕಾಲಿ ಆದ ಮನೆಗಳ ಬಗ್ಗೆ ಶುದ್ದಿ ಬಂತು.
ಈಗಾಣದ್ದು ಸಂಪಾದನೆಯ ಕಾಲ. ಸಂಪಾದನೆ ಒಂದಿದ್ದರಾತು. ಮಾನವೀಯ ಸಮ್ಮಂದಂಗೊ; ಇತಿಗೊ-ಮಿತಿಗೊ – ಎಂತದೂ ಲೆಕ್ಕ ಇಲ್ಲೆ.  ಪೈಶೆ ಒಂದಿದ್ದರೆ ಸಾಕು; ಬೇರೆ ಎಂತ ಬಿಡ್ಳೂ ತಯಾರೇ.
ಹಳ್ಳಿ ಬೇಡ, ಭಾಷೆ ಬೇಡ, ಕನ್ನಡ ಬೇಡ, ಸಾಹಿತ್ಯ ಬೇಡ, ಸಂಸ್ಕಾರ ಬೇಡ – ಎಂತದೂ ಬೇಡ ಈಗಾಣೋರಿಂಗೆ!
ಓಟೆದೊಡ್ಡಪ್ಪ ಬೇಜಾರುಮಾಡಿಗೊಂಡವು.
ಕನ್ನಡನಾಡಿಲಿ ಮಾಷ್ಟ್ರ ಆಗಿ ಈಗ ಕ್ರಮೇಣ ಮಲೆಯಾಳಿಗರ ರುದ್ರನರ್ತನ ಅವರ ಕಣ್ಣುಮುಂದೆಯೇ ಅಪ್ಪದರ ಕಂಡ್ರೆ ಪಿಸುರು ಏರಿಏರಿ ಬತ್ತೋ ತೋರ್ತು ಅವಕ್ಕೆ!
ಅವು ಹೇಳಿದ್ದೂ ಅಪ್ಪಾದ್ದೇ; ಚೆಕ್ಕೆಮನೆ ಮಾಷ್ಟ್ರಣ್ಣನೂ ಇದರ ಒಪ್ಪುಗು.

ಇದರ್ಲಿಯೂ ಅವಕ್ಕೆ ತುಂಬ ಬೇಜಾರಾದ ಸಂಗತಿ ಎಂತ್ಸರ ಹೇದರೆ, ಸಂಪಾದನೆಯ ಭರಲ್ಲಿ ಮದಲಾಣ ಹಳ್ಳಿಜೀವನವ ಸುಮಾರು ಕಡೆಗಣುಸಿದ್ದು. ಮದಲಾಣ ಹಳ್ಳಿ ಮನೆಗೊ, ಅಲ್ಯಾಣ ಸುಮಧುರ ಬಾಂಧವ್ಯಂಗೊ, ಪರಿಪೂರ್ಣ ದಾಂಪತ್ಯಂಗೊ – ಯೇವದಕ್ಕೂ ಇನ್ನು ದಿಕ್ಕಿಲ್ಲೆ. ಒಬ್ಬನೋ ಇಬ್ರೋ ಮಕ್ಕೊ ಇಪ್ಪೋರೆಲ್ಲ ದೂರದೂರಕ್ಕೆ ಹೋಗಿ – ಅಲ್ಲೇ ನೆಲೆ ಆದರೆ ಮತ್ತೆ ಮುಂದಂಗೆಂತರ? ಸಂಪಾದನೆಗೆ ದೂರ ಹೋದರೆ ಸಮಸ್ಯೆ ಅಲ್ಲ; ಒಪಾಸು ಊರಿಂಗೆ ಬಾರದ್ದೆ ಅಲ್ಲೇ ಬಾಕಿ ಆದರೆ ಈ ಹಳ್ಳಿಮನೆಗೆಂತರ ವೆವಸ್ತೆ? ಹೇಳ್ಸು ದೊಡ್ಡಪ್ಪನ ಬೇಜಾರು.

ಚೆಕ್ಕೆಮನೆ ಮಾಷ್ಟ್ರಣ್ಣನೂ ಅವಕ್ಕೆ ಗೊಂತಿಪ್ಪ ಹಲವು ಮನೆಗಳ ಕತೆಗಳ ವಿವರ್ಸೆಂಡು ಹೋದವು.
ಎಲ್ಲ ಮನೆಲಿಯೂ ದೋಸೆ ಒಟ್ಟೆಯೇ ಆದರೂ – ಕೆಲವು ದಿಕ್ಕೆ ದೋಸೆಒಲೆ ಹೊತ್ತುತ್ತೇ ಇಲ್ಲೆ ಇದಾ!

ದೊಡ್ಡಾ ಮನೆಗೊ ಕೆಲವು ಜೆನಂಗಳೇ ಇಲ್ಲದ್ದೆ ಕಾಲಿಕಾಲಿ ಇದ್ದು. ಜೆನಂಗೊ ಇದ್ದರೂ – ಮದಲಿಂಗೆ ಮೂವತ್ತು-ನಲುವತ್ತು ಜೆನ ಉಂಬ ಮನೆಲಿ ಈಗ ಮೂರು-ನಾಕು ಜೆನ ಬದ್ಕುದು. ಇನ್ನೊಂದು ತಲೆಮಾರು ಕಳುದರೆ ಅದುದೇ ಮುಚ್ಚುಗು – ಹೀಂಗೆ ಮನೆ ಮುಚ್ಚುಸ್ಸು ಒಳ್ಳೆ ಲಕ್ಷಣ ಅಲ್ಲ – ಹೇಳ್ತದು ಒಂದು ಅಭಿಪ್ರಾಯ.

~

ಮನೆ ಮುಚ್ಚುದು ನವಗೆ ಕಂಡ್ರೂ – ಮನೆ ಮುಚ್ಚುತ್ತ ಪೂರ್ವಭಾವಿಯಾಗಿ ಅದರಿಂದ ಎಷ್ಟೋ ಮದಲೇ ಮನಸ್ಸು ಮುಚ್ಚಿರ್ತು.
ಆ ಮನೆಯ, ಆ ಜಾಗೆಯ ಬಗ್ಗೆ ಪ್ರೀತಿ ಸಂಪೂರ್ಣವಾಗಿ ಕಳದು ಹೋದರೆ ಮಾಂತ್ರವೇ ಮನೆ ಮುಚ್ಚುದು. ಸಂಪಾದನೆಗಾಗಿ ಊರು ಬಿಟ್ಟರೂ ಮನೆಯ ಒಳಿಶಿಂಡು ಬಪ್ಪಲೆಡಿಗು; ಮನಸ್ಸು ಬೇಕಪ್ಪದಷ್ಟೆ. ಮನೆ-ಜಾಗಿ ಮಾರಿಕ್ಕಿ ಪೇಟೆಲಿ ಕೂದರೆ ಮಾಂತ್ರ ಸಂಪಾದನೆ ಮಾಡ್ಳೆ ಎಡಿವದಲ್ಲ; ಊರಿಲಿಯೂ ಒಳಿಶಿಂಡು ಸಂಪಾದನೆಯೂ ಮಾಡಿಂಡು ಬಂದರೆ ಚೆಂದ.
ಹಳಬ್ಬರ ಹಾಂಗೆ ಮನೆಯ ಮೆಚ್ಚಿ ಬದ್ಕಿರೆ ಹಾಂಗೆಲ್ಲ ಹಳ್ಳಿಗೊ, ಹಳ್ಳಿಮನೆಗೊ ಮುಚ್ಚಿ ಹೋಗದ್ದ ಹಾಂಗೆ ನೋಡಿಗೊಂಬಲೆಡಿಗು.

ಒಂದು ಮನೆ ಹೇದರೆ ಒಂದು ಸಂಸ್ಕಾರ; ಒಂದು ಇತಿಹಾಸ. ಮನೆ ಮುಚ್ಚಿತ್ತು ಹೇದರೆ ಆ ಗಾಢ – ಗೂಢ ಇತಿಹಾಸವೇ ಮುಚ್ಚಿತ್ತು ಹೇದು ಅರ್ಥ. ಹಾಂಗಾಗಿ, ಮನೆಯೊಂದರ ಮೇಗೆ ಗೌರವಲ್ಲೇ ತಿಳ್ಕೊಂಡ್ರೆ, ಅದು ನಂದದ್ದ ಹಾಂಗೆ ನೋಡಿಗೊಂಡ್ರೆ ಒಳಿಶಿಕ್ಕಲೆ ಎಡಿಗು – ಹೇದು ಓಟೆದೊಡ್ಡಪ್ಪ ಹೇಳಿದವು.

~

ಅಷ್ಟಪ್ಪಗಳೇ ಅದಾ – ನವಗೆ ತರವಾಡುಮನೆ ಶಂಬಜ್ಜನ ಸಂಗತಿ ನೆಂಪಾದ್ಸು.
ಎಂಕಪ್ಪಜ್ಜನ ಕಾಲದ ಮನೆಯೇ ಆದರೂ – ಒಂದರಿ ಮುರುದು ಕೂದರೂ- ಯೇವ ಜೀವಭಯ ಇದ್ದರೂ ಆ ಮನೆಯ ಬಿಟ್ಟು ಹೆರ ಬಯಿಂದವಿಲ್ಲೆ.

ಅಲ್ಯಾಣ ಜಾಗೆಲಿ ಸಿಕ್ಕಿದ್ಸರ ಅಲ್ಯಾಣ ದೇವರಿಂಗೆ ಕೊಟ್ಟು, ಹೊಟ್ಟೆ ತುಂಬ ಉಂಡುಗೊಂಡು – ಆ ಮನೆಲೇ ಬದ್ಕಿದ್ದವು.
ಮತ್ತೆ ಮನೆಯ ಸರಿಮಾಡಿಕ್ಕಿ, ಅದೇ ಆಯಲ್ಲಿ ಪುನಾ ಬೆಳಗಿದವು. ಹಾಂಗೆ ಮಾಡಿದ ಕೂದ ಕಾರಣ ಇಂದಿಂಗೂ – ರಂಗಮಾವನ ಎಜಮಾಂತಿಕೆಲಿ “ತರವಾಡುಮನೆ” ಚೆಂದಕೆ ಇದ್ದು.
ಅಂಥಾ ಗಾಢ ಪ್ರೀತಿ ಇದ್ದರೆ ಮಾಂತ್ರ ಮನೆಯ ಒಳಿಶಲೆಡಿಗಷ್ಟೆ. ಅಲ್ಲದೋ?

ಪ್ರತಿ ಮನೆಲಿಯೂ ಹೀಂಗೆ ಹಟಹಿಡುದು ಕೂದರೆ, ತ್ಯಾಗ ಮಾಡಿರೆ ಹೆರಾಣೋನು ಬಂದು “ಹಳ್ಳಿ ಒಳಿಶಿ” ಹೇಳೇಕಾದ್ಸಿಲ್ಲೆ; ತನ್ನಿಂದತಾನಾಗಿಯೇ ಒಳ್ಕೊಂಡು ಮುಂದೆ ಹೋವುತ್ತು – ಹೇಳ್ತದು ಓಟೆದೊಡ್ಡಪ್ಪನ ಅಭಿಪ್ರಾಯ.

ದೊಡ್ಡಜ್ಜನ ಮನೆ ಎತ್ತುವನ್ನಾರವೂ ಹೀಂಗಿರ್ತ ಹಲವು ಸಂಗತಿಗೊ ಮಾತಿಂಗೆ ಬಂದುಗೊಂಡಿದ್ದತ್ತು.
ಎಲ್ಲವೂ ಒಟ್ಟಿಂಗೆ ಹೇಳುಲೆ ಒಪ್ಪಣ್ಣಂಗೂ ಪಕ್ಕನೆ ನೆಂಪಾವುತ್ತಿಲ್ಲೆ; ನೋಡೊ° – ಒಂದೊಂದಾಗಿ ನಿಧಾನಕ್ಕೆ ಮಾತಾಡುವೊ°.
~

ನಮ್ಮ ನೆರೆಕರೆಲಿ ಎಷ್ಟೋ ಜೆನ ಇದ್ದವು – ಒಳ್ಳೆತ ಕೆಲಿವಿಕೆ ಆದರೂ – ಮನೆ ಬೆಳಗೇಕು ಹೇಳ್ತ ಲೆಕ್ಕಲ್ಲಿ ಬಂದು ನಿಂದೋರು.
ಉದಾಹರಣೆಗೆ ನಮ್ಮ ದೊಡ್ಡಜ್ಜ – ಅವಕ್ಕೆ ಆ ಕಾಲಲ್ಲೇ ಹತ್ತನೇ ಕ್ಲಾಸು ಪಾಸಾಯಿದು. ಕೆಲಸಕ್ಕೆ ಹೋವುತಿತರೆ ಬೇಂಕಿಲಿಯೋ – ಹೈಸ್ಕೊಲ್ಲು ಮಾಷ್ಟ್ರ ಆಗಿಯೋ ಮತ್ತೊ ಕೆಲಸ ಮಾಡ್ಳಾವುತಿತು. ಆದರೆ ಮನೆ ಒಳಿಶಲೆ ಬೇಕಾಗಿ ಅವರ ವೃತ್ತಿಜೀವನವನ್ನೇ ಬಿಡೇಕಾಗಿ ಬಂತು.

ಅಷ್ಟು ಹಿಂದಾಣ ಕತೆ ಬೇಡ, ನಮ್ಮ ಜಾಲ್ಸೂರು ನಾಣಣ್ಣ ಇಲ್ಲೆಯೋ – ಡಿಗ್ರಿಲಿ ಒಳ್ಳೆಮಾರ್ಕು ಬಂದರೂ – ಮುಂದಾಣದ್ದರ ಕಲಿಯಲೆ ಸೀಟು ಸಿಕ್ಕಿದ್ದರೂ – ಮನೆ ನೋಡಿಗೊಂಬಲೆ ಆರೂ ಇಲ್ಲೆ ಹೇಳ್ತ ಲೆಕ್ಕಲ್ಲಿ ಮುಂದುವರುಸಿದ್ದವಿಲ್ಲೇಡ.
ಒಂದು ವೇಳೆ ನಾಣಣ್ಣ ಕಲ್ತಿದ್ದಿದ್ದರೆ; ಕಲ್ತು ಕೆಲಸಕ್ಕೆ ಹೋಗಿತ್ತಿದ್ದರೆ ಸೈಂಟಿಷ್ಟೋ ಮಣ್ಣ ಆಗಿಂಡು ಬೆಂಗ್ಳೂರಿಲಿ ಇಪ್ಪಲಾವುತಿತು- ಅವರ ಕ್ಲಾಸಿಲಿದ್ದೋರ ನಮುನೆಲಿ! ಆದರೆ, ಅಂದು ಮನೆಗೋಸ್ಕರ, ಮನೆಯೋರಿಂಗೋಸ್ಕರ ಅವು ಮಾಡಿದ ತ್ಯಾಗವೇ ಇಂದು ಅವರ ವೆಗ್ತಿತ್ವವ ಅಷ್ಟೆತ್ತರ ನಿಲ್ಲುಸುತ್ತು.

ಇನ್ನು ಕೆಲವು ಜೆನ ಸಂಪಾದನೆ,ಅವರವರ ವ್ಯಾಪ್ತಿ ಮಾಡಿಂಡೇ ಮನೆ ಒಳಿಶಿಂಡು ಬಯಿಂದವು.
ಹಾಂಗಿರ್ತೋರಲ್ಲಿ ಓಟೆದೊಡ್ಡಪ್ಪನೂ ಒಬ್ಬರು. ಮಾಷ್ಟ್ರತ್ತಿಕೆ ಎಡಕ್ಕಿಲಿಯೂ ಮನೆ – ತೋಟ ನೋಡಿಂಡು ಚೆಂದಕೆ ಬೆಳೆಶಿಂಡು ಬಯಿಂದವಿಲ್ಲೆಯೋ?! ಅವರ ಮನಸ್ಸು ಮುಚ್ಚದ್ದ ಕಾರಣ ಆ ಮನೆ ಒಳುತ್ತು; ಅಲ್ಲದ್ದರೆ ಎಲ್ಲವನ್ನೂ ಮಾರಿಕ್ಕಿ ಪೇಟೆಲಿ ಹೋಗಿ ಕೂರ್ತಿತವು!

ಮನೆತನದ ಬಟ್ಟಮಾವಂದ್ರುದೇ ಹಾಂಗೇ – ಒಂದೂರಿಂದ ಇನ್ನೊಂದೂರಿಂಗೆ ತಿರ್ಗಾಟವೇ ಇದ್ದರೂ – ಹೋಗಿಬಪ್ಪಲೆ ಸುಲಬ ಆಗಲಿ ಹೇಳಿಗೊಂಡು ಪೇಟೆಲಿ ಕೂದು ಹಳ್ಳಿ ಬಿಟ್ಟಿದವಿಲ್ಲೆ. ಹಳೆಕಾಲದ ಮನೆ, ಮನೆದೇವರ ಒಳಿಶಿಂಡೇ ಅವರ ವ್ಯಾಪ್ತಿ ಮಾಡಿಗೊಂಡು ಬಯಿಂದವು.

ಅಲ್ಲದೋ?

~

ಓಟೆದೊಡ್ಡಪ್ಪನ ಮಾತುಕತೆಲಿ ಬಂದ ಸಾರವೂ ಇದುವೇ.
ಗಂಡ-ಹೆಂಡತ್ತಿ ಬಾಂಧವ್ಯ, ಸಂಸಾರದ ಸಾರ, ಸಂಬಂಧಂಗಳ ಬಂಧ – ಎಲ್ಲವೂ ಚೆಂದಲ್ಲಿ ಒಳಿಯೇಕಾರೆ ಹಳ್ಳಿಯೇ ಚೆಂದ. ನಮ್ಮ ತಾಯಿಬೇರು ಇಪ್ಪದು ಹಳ್ಳಿಗಳಲ್ಲೇ. ಅದರ್ಲಿಯೂ, ನಮ್ಮ ನಮ್ಮ ಮೂಲ ಮನೆಗೊ.
ಒಂದೊಂದು ಮನೆ ಹೇದರೂ ಒಂದೊಂದು ಸಂಸ್ಕಾರ / ಇತಿಹಾಸ.
ಹಾಂಗಾಗಿ ಈ ಮನೆಗಳ ಬಾಗಿಲು ಮುಚ್ಚದ್ದ ಹಾಂಗೆ, ನಿತ್ಯವೂ ನಿತ್ಯದೀಪ ಹೊತ್ತುತ್ತ ಹಾಂಗೆ- ನಮ್ಮಂದ ಹಿಂದಾಣೋರು ಬೆಳಗಿಂಡು ಬಂದದರ – ಮುಂದಂಗೂ ಬೆಳಗುತ್ತ ಹಾಂಗೆ ನೋಡಿಗೊಂಬದು ಈಗಾಣೋರ ಕರ್ತವ್ಯ.
ಒಂದರಿಂಗೆ ಮುಚ್ಚಿರೂ, ಆ ಮನೆಯೋರಿಂಗೆ ಅದರ ಬಗ್ಗೆ ಮನಸ್ಸು ಮುಚ್ಚದ್ದ ಹಾಂಗೆ, ಪುನಾ ಬಾಗಿಲು ತೆಗದು ಮನೆ ಬೆಳಗುತ್ತ ಹಾಂಗೆ – ನಮ್ಮ ನೆರೆಕರೆಯೋರ ನಾವು ನೋಡಿಗೊಳೇಕು.
ಎಷ್ಟೋ ಎಂಕಪ್ಪಜ್ಜಂದ್ರು ಕಟ್ಟಿ ಬೆಳಗಿದ ಮನೆಯ ಒಳಿಶುವ ಶಂಬಜ್ಜಂದ್ರು ನಾವಾಯೇಕು.

ಎಂತ ಹೇಳ್ತಿ?

~

ಒಂದೊಪ್ಪ: ಮನೆ ಮುರುದು ಬಿದ್ದರೆ ಮತ್ತೆ ಕಟ್ಳಕ್ಕು; ಮನಸ್ಸು ಮುರುದು ಬಿದ್ದರೆ ಮತ್ತೆ ಕಷ್ಟ ಇದ್ದು.

16 thoughts on “ಮನೆ ಮುಚ್ಚುವ ಮದಲು ಮನಸ್ಸು ಮುಚ್ಚಿರ್ತು…!

  1. ಮನೆ ಒಳುಶುಲೆ ಮನಸ್ಸು ಮುಖ್ಯ ಹೇಳುದರ ಲಾಯ್ಕಕ್ಕೆ ವಿವರ್ಸಿದ್ದಿ 🙂

  2. ಶುದ್ಧಿ ಒಳ್ಲೆದಾಯಿದು., ಇನ್ನು ಮುನ್ದೆ ಹೀನ್ಗೆ ಸುದ್ದಿ ಒದೇಕಶ್ಟೆ., ನೊದ್ಲೆ ಸಿಕ್ಕ.

  3. ಚಿ೦ತನೆಗೆ ಹಚ್ಚುವ೦ಥಹ ಬರಹ ಒಪ್ಪಣ್ಣಾ…

  4. ಮನಮುಟ್ಟುವ ಶುಧ್ಧಿ ಒಪ್ಪಣ್ಣಾ…

  5. ಪರಸ್ಪರ ಪ್ರೀತಿ ವಿಶ್ವಾಸ ಇಲ್ಲದ್ದಲ್ಲಿ, ಮನಸ್ಸು ಮುಚ್ಚುತ್ತು. ಅಲ್ಲಿಗೆ ಸಂಬಂಧವೂ ಹಳಸಿತ್ತು. ಇದು ಒಡದ ಕನ್ನಾಟಿ ಹಾಂಗೆ. ಸರಿ ಮಾಡುವದು ಸುಲಭದ ಕೆಲಸ ಅಲ್ಲ. ಕೂಡು ಕುಟುಂಬ ಒಳಿಯೆಕ್ಕಾರೆ ಎಲ್ಲರನ್ನೂ ಒಂದೇ ತಕ್ಕಡಿಲಿ ತೂಗಿ ಕೊಂಡೋಪ ಯಜಮಾನ ಬೇಕು (ದೊಡ್ಡಜ್ಜನ ಹಾಂಗಿಪ್ಪವು)
    ಶುದ್ದಿ ಲಾಯಿಕ ಆಯಿದು

  6. ಮನಸ್ಸಿ೦ಗೆ ಮುಟ್ಟಿದ ಶುದ್ದಿ… ಒಪ್ಪ೦ಗೊ ಒಪ್ಪಣ್ಣಾ..

  7. ಮನೆ ಇದ್ದರೆ ಮನಸ್ಸು ಒಳ್ಳೆದು ಇರ್ತು. ಮನೆ ಮಾರಿದರೆ ಸಮಸ್ಯೆ. ಮನೆ ಈದ್ದರೆ ಹಿಂದಾಣ ಕಾಲದ ಹಾಂಗೆ ಯಾವುದೇ ಜೆಂಬರ ಆವುತ್ತರುದೇ ಮನೆ ಮಕ್ಕ, ಪುಳ್ಯಕ್ಕ ನಾಲ್ಕು ದಿನ ಮೊದಲೇ ಸೇರುದು, ಗೌಜಿ, ಆ ಮಜವೇ ಬೇರೆ. ಈಗ ಅದೆಲ್ಲಾ ಮುಗುದು ಹೋದ ಕತೆ. ಒಪ್ಪ ಒಪ್ಪ ಇದ್ದುತ್ತು. ಧನ್ಯವಾದಂಗ.

  8. ಅದ್ಭುತವಾದ ಶುದ್ಧಿ..ಮನೆ ಮನಗಳ ಮುಟ್ಟಲಿ..ನಮ್ಮ ನೆರೆಕೆರೆಲಿ ಇಪ್ಪ ಸುಮಾರು ಜೆನಂಗಳ ಇಂತಹ ಆಶಯ ಹಸಿರಾಗಿ ಇರಲಿ..ಪೇಟೆ ಹೇಳಿ ನಮ್ಮ ತರವಾಡು ಮರವ ಭಾವಂದ್ರಿಗೆ ಒಂದು ಪಾಠ ಆಗಲಿ..

  9. ಮನೆ ಮನಗಳ ಸಂಬಂಧ ಬಿಡುಸಲೆಡಿಯದ್ದ ಸಂಬಂಧ. ಒಂದು ಹಾರ್ಡುವೇರು, ಒಂದು ಸೋಫ್ಟ್ ವೇರು. ಎರಡುದೆ ಬೇಕೇ ಬೇಕು. ಅದರಲ್ಲೂ ಮನದ ಮೃದುವಾದ ಬೇರಿಂಗೆ ವೈರಸ್ಸು ಬಾರದ್ದ ಹಾಂಗೆ ನೋಡ್ಯೊಳೆಕಾದ್ದು ಎಲ್ಲೋರ ಧರ್ಮ. ಮನಸ್ಸು ಮುರಿಯದ್ದೇ ಇರಳಿ ಹೇಳುವ ಒಪ್ಪಣ್ಣನ ಕಡೆಯೊಪ್ಪ ಒಪ್ಪ ಇದ್ದು.

  10. ಲಾಯ್ಕಾಯ್ದು ಒಪ್ಪಣ್ಣ..
    {ಮನಸ್ಸು ಮುರುದು ಬಿದ್ದರೆ ಮತ್ತೆ ಕಷ್ಟ ಇದ್ದು.}
    ಈಗೀಗ, ಟ್ಯಾರೀಸಿನ ಮನೆಗೊ ಜಾಸ್ತಿ ಆಗಿ ಭಾರೀ ಗಟ್ಟಿ ಅಡ…ಮನಸ್ಸುಗೊ ಮಾತ್ರ ಮುರಿವದು ಸೋರುದು.. !

  11. ಒಪ್ಪ ಫರ್ಸ್ತ್ ಅಯ್ದು ಒಪ್ಪಣ್ಣ…

  12. ನೀರು ಕೆಳ೦ಗೆ ಹರಿದು ಹೋದರೂ ,ಮೇಲೆ ಬತ್ತ ಇಲ್ಲೆಯೋ?ಆದ್ರೆ ಎಲ್ಲೆ ಇದ್ರೂ ಚೆ.ಭಾವನ ಆಶಯದ ನದಿ ಈ ಬೈಲಿ೦ಗೆ ಹರಿದು ಬಾರದ್ದಿರ!

  13. ಮನ ಮುಟ್ಟುವ ಶುದ್ದಿ, ಒಪ್ಪಣ್ಣ.

  14. ಮನೆ ಒಳುಶುದು ಹೇಳಿರೆ ಒಂದು ಸಂಸ್ಕಾರ ಒಳುಶಿದ ಹಾಂಗೆ!

  15. ಇತಿಹಾಸ (ಇತಿ+ಹ+ಆಸ) ಚಿಂತನೆ ಲಾಯಕ ಆಯ್ದು. ಇತಿಹಾಸವ ಮುಚ್ಚಲಾಗ ಹೇಳ್ತ ಕಳಕಳಿ ಉತ್ತಮ ಆಶಯವೂ. ಅಕೇರ್ಯಾಣ ಒಂದೊಪ್ಪವೂ ಒಪ್ಪ ಆಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×