Oppanna.com

ಪರ್ವ-ಸಾರ್ಥ-ಆವರಣ; ಭರತಪರ್ವದ ಸಾರ್ಥಕತೆಯ ಅನಾವರಣ..!

ಬರದೋರು :   ಒಪ್ಪಣ್ಣ    on   25/06/2010    65 ಒಪ್ಪಂಗೊ

ಮಾಷ್ಟ್ರುಮಾವನ ಮನೆಲಿ ಓ ಮೊನ್ನೆ ಒಂದು ಜೆಂಬ್ರ ಕಳಾತು!
ನಿಂಗೊಗೆಲ್ಲ ಗೊಂತಿಕ್ಕು, ಅಮೇರಿಕಲ್ಲಿಪ್ಪ ಅವರ ಮಗ° ಅಂಬೆರ್ಪಿಲಿ ಬಂದು, ಮತ್ತೂ ಅಂಬೆರ್ಪಿಲಿ ಮದುವೆ ಆಗಿ, ಅದರಿಂದಲೂ ಅಂಬೆರ್ಪಿಲಿ ಒಪಾಸು ಹೆರಟಾಯಿದು..
ಎಂಗೊ ಎಲ್ಲ ಎಂತ ಆವುತ್ತಾ ಇದ್ದು ಹೇಳಿ ನೋಡುವಗ ಮದುವೆ ಕಳುದು ಬಾಳೆಲಿ ನಾಕು ನಾಕು ಹೋಳಿಗೆ ಬಿದ್ದಿತ್ತಿದ್ದು!! ತಿನ್ನದ್ದೆ ಪೋಕಿಲ್ಲೆ, ಇನ್ನೊಂದು ಬೀಳುಗು.
ಕಟ್ಟಿಕೊಡಿ; ತೆಕ್ಕೊಂಡೋವುತ್ತೆ – ಹೇಳಿದ° ಅಜ್ಜಕಾನಬಾವ° – ಅವಂಗೆ ಆರರಿಂದ ಹೆಚ್ಚಿಗೆ ಒಂದೇ ಸರ್ತಿ ತಿಂಬಲೆಡಿಗಾಯಿದಿಲ್ಲೆಡ.. ಪ್ರುಠ್‌ಸಲಾಡು ಇತ್ತಡ, ಹಾಂಗೆ. ಎಲ್ಲ ಬಿರುದ ಮತ್ತೆ ಹೇಳಿದ°. 🙁
ಅದಿರಳಿ, ಎಂತದೋ ಹೇಳುಲೆ ಹೆರಟು ಎಲ್ಲೆಲ್ಲಿಗೋ ಎತ್ತುತ್ತು!
~

ಮದುವೆ ಕಳಾತು, ಮತ್ತೆ ಒಂದು ವಾರಲ್ಲಿ ಮಾಣಿ ಹೆರಟ°.
ಮಾಷ್ಟುಮಾವನ ಸೊಸಗೆ ಅಷ್ಟು ಬೇಗ ಟಿಕೇಟು ಸಿಕ್ಕೆಕ್ಕೆ – ರಜಾ ಮೊದಲೇ ಮಾಡೆಕ್ಕಡ ಅಲ್ಲದೋ.. ಹಾಂಗೆ ಮಾಣಿ ಒಬ್ಬನೇ ಹೋದ್ದದು, ಪಾಪ!
ಹೋಪ ದಿನ ಹೆರಡಾಣ. ಬೀಳ್ಕೊಡುಗೆಗೆ ಬೈಲಿನ ಕೆಲವು ಜೆನ ಹೋಗಿತ್ತಿದ್ದೆಯೊ° – ಅಜ್ಜಕಾನಬಾವ°, ಗಣೇಶಮಾವ°, ಬೆಂಗುಳೂರಿಂದ ಬಂದಿದ್ದ ಪೆರ್ಲದಣ್ಣ – ಎಲ್ಲ..
ಈ ಸರ್ತಿ ತುಂಬುಸಿಕೊಡ್ಳೆ ಜೆನ ವಿಶೇಷವಾಗಿ ಇತ್ತಿದ್ದವಿದಾ – ಹಾಂಗಾಗಿ ಮಾಣಿ ಆರಾಮಲ್ಲಿ ರಜ ಕರೆಲಿ ಕೂದುಗೊಂಡು ಒಂದಟ್ಟಿ ಪುಸ್ತಕಂಗಳ ನೋಡಿಗೊಂಡು ಇತ್ತಿದ್ದ°.
ಎಂಗೊ ನೋಡುವಗ ಬೇರೆಬೇರೆ ಪುಸ್ತಕಂಗಳ ಒಂದೊಂದು ಅಟ್ಟಿ ಮಡಿಕ್ಕೊಂಡು ಯೇವ ಪುಸ್ತಕ ತೆಕ್ಕೊಂಡೋಪದು – Replica Rolex Watches ಬೇಡ ಹೇಳ್ತದರ ಮಾಷ್ಟ್ರುಮಾವನತ್ರೆ ಮಾತಾಡಿಗೊಂಡು ಇತ್ತಿದ್ದ°!

ಮಾಷ್ಟ್ರುಮಾವನ  ಮನೆಲಿ ಮದಲಿಂಗೇ ಹಾಂಗೆ-
ಒಂದು ಕಪಾಟು ಪುಸ್ತಕಕ್ಕೇ ಹೇಳಿಯೇ ಇದ್ದು, ಹೆಮ್ಮಕ್ಕಳ ಒಸ್ತ್ರದ ಕವಾಟು ಅಲ್ಲದ್ದೆ.
ಪುಸ್ತಕದ ಕವಾಟಿಂಗೆ ಬೀಗ ಹಾಕಲಿಲ್ಲೆ – ಎಂಗೊ ಆರು ಬೇಕಾರುದೇ ಹೋಗಿ, ಬಾಗಿಲು ತೆಗದು ನೋಡ್ಳಕ್ಕು.
ಎಂತಾರು ಸಂಶಯ ಕೇಳುಲೆ ಹೋದರೆ ಗೊಂತಿದ್ದರೆ ಹೇಳುಗು, ಅಲ್ಲದ್ದರೆ – ಇದಾ, ಇಂತಾ ಪುಸ್ತಕಲ್ಲಿ ಇದ್ದು; ನೋಡು – ಹೇಳುಗು ಮಾಷ್ಟ್ರುಮಾವ°.
ಅಲ್ಲಿ ಪುಸ್ತಕಂಗಳೂ ಹಾಂಗೇ, ಕಾದಂಬರಿ, ಸಣ್ಣ ಕತೆ, ಚಂದಮಾಮ, ಭಾರತ-ಭಾರತಿಯ ಪಿಟ್ಟೆ ಪುಸ್ತಕಂಗೊ, ಭಾರತದ ಕತೆ – ದೊಡ್ಡ ದೊಡ್ಡ ಪುಸ್ತಕಂಗೊ, ಮಂತ್ರ,  ಜ್ಯೋತಿಷ್ಯದ ಪುಸ್ತಕಂಗೊ, ತಾಳೆಗರಿಗೊ – ಓದುತ್ತವಂಗೆ ಎಲ್ಲವೂ ಇರ್ತು!
ಅದೆಲ್ಲ ಮಾಷ್ಟ್ರುಮಾವಂಗೇ ಅಕ್ಕಷ್ಟೆ. ನವಗೆ ಬೇರೆ ಒಯಿವಾಟಿಪ್ಪಗ ಅದರ ನೋಡ್ಳೇ ಪುರುಸೊತ್ತಾಗ. 😉 😐

ಆಚಕವಾಟಿನ ಹಾಂಗೆಲ್ಲ ಮುಟ್ಟಿರಾಗ ಇದಾ – ರಜ ಮುಟ್ಟಿ ಹೋದರೆ ಇಡೀ ಒಸ್ತ್ರವ ಪುನಾ ಒಂದರಿ ಒಗದು ಮಡುಗ್ಗೋ ಏನೋ; ಉಮ್ಮಪ್ಪ..
ನೋಡ್ಳೆ ಹೋಯಿದಿಲ್ಲೆ, ಸುಮ್ಮನೆ ಆರು ಬೈಗಳು ತಿಂಬದು ಮತ್ತೆ! 😉
~

ಹ್ಮ್, ನಾವು ಪುಸ್ತಕದ ಬಗ್ಗೆ ಮಾತಾಡಿಗೊಂಡು ಇತ್ತು. ಆ ಕವಾಟಿಂದ ಮೂರು ಪುಸ್ತಕ ತೆಗದು ತುಂಬುಸಿಗೊಂಡು ಇತ್ತಿದ್ದ° ಮಾಣಿ.

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (S.L.Bhyrappa)

ಮೂರಕ್ಕೂ ಕಾಕಿ ಬೈಂಡು ಹಾಕಿ, ಕೋಪಿಲಿ ಹೆಸರು ಬರೆತ್ತ ಹಾಂಗೆ ಹೆಸರು ಬರದು ಮಡಗಿದ್ದು, ಮಾಷ್ಟ್ರಮನೆ ಅತ್ತೆ!
ದೊಡ್ಡಕ್ಷರಲ್ಲಿ ಪುಸ್ತಕದ ಹೆಸರೂ, ರಜಾ ಸಣ್ಣ ಅಕ್ಷರಲ್ಲಿ ಅದರ ಬರದವರ ಹೆಸರೂ, ಅದರಿಂದಲೂ ಸಣ್ಣಕೆ ಮಾಷ್ಟ್ರುಮಾವನ ಹೆಸರೂ ಬರಕ್ಕೊಂಡಿತ್ತು – ಯೇವತ್ತಿನ ಹಾಂಗೇ!
ಚಾಯ ಬಪ್ಪಲೆ ರಜಾ ಪುರುಸೊತ್ತು ಇತ್ತು! ಅಟ್ಟಿ ಹತ್ತರೇ ಇದ್ದ ಕಾರಣ ಮೆಲ್ಲಂಗೆ ಇತ್ಲಾಗಿ ಜಾರುಸಿ ಒಂದೊಂದೇ ತೆಗದು ನೋಡಿದೆಯೊ°.
ಮೂರುದೇ ಹೆರಂದ ಕಾಂಬಲೆ ಒಂದೇ ನಮುನೆ, ಹಣ್ಣಡಕ್ಕೆಯಷ್ಟು ದಪ್ಪದ ಪುಸ್ತಕಂಗೊ!!
ಹಾ°…..! ಇದರ ಓದಲಿದ್ದೋ ಮಾಣೀ..!!’ – ಹೇಳಿ ಎಂಗೊಗೆ ಕೇಳಿ ಹೋತು ಪಕ್ಕನೆ! “ಹ್ಮ್, ಇದ್ದಿದ್ದು!” – ಹೇಳಿ ಓರೆತೊಡಿಲಿ ನೆಗೆಮಾಡಿದ° ಮಾಣಿ!

ಪುಸ್ತಕ ಒಂದೊಂದೇ ಬಿಡುಸಿ ನೋಡಿದೆ. ಮೂರನ್ನೂ ಬರದ್ದದು ಒಬ್ಬನೇ! ಎಸ್.ಎಲ್.ಭೈರಪ್ಪ – ಹೇಳಿ ಕಂಡತ್ತು!
ಆರಿದು, ಯೇವ ಜೆನ?, ಎಂತಕೆ ಇಷ್ಟಿಷ್ಟು ದೊಡ್ಡದು ಪುಸ್ತಕಂಗೊ ಬರೆತ್ತ° – ಹೇಳಿ ಎಲ್ಲ ಕೇಳಿದೆ…
ಮಾಷ್ಟ್ರುಮಾವ°- ವಿವರುಸುಲೆ ಸುರು ಮಾಡಿದವು, ಒಟ್ಟೊಟ್ಟಿಂಗೆ ಮಾಷ್ಟ್ರುಮಾವನ ಮಗನೂ – ಸಾಮಾನು ಪೇಕು ಮಾಡ್ತದರ ಒಟ್ಟಿಂಗೇ ಸೇರಿಗೊಂಡ°…

~
ಸಣ್ಣ ಇಪ್ಪಗಳೇ ಭಾರೀ ಕಷ್ಟಲ್ಲಿ ಬೆಳದು ಬಂದು, ಮುಂದೆ ಅದೇ ಕಷ್ಟಲ್ಲಿ ಓದಿ, ಬೆಳದು, ದೊಡ್ಡ ಕ್ಲಾಸುಗಳ ಮುಗುಶಿ, ಬರವಣಿಗೆ ಸುರು ಮಾಡಿದ್ದು ಈ ಎಸ್ಸೆಲ್ ಬೈರಪ್ಪ° ಅಡ.
ಆ ಕಾಲಲ್ಲಿ ಬಂದ ಪ್ಲೇಗು ಪೀಡೆಗೆ ಊರಿಂಗೆ ಊರೇ ರೋಗಕ್ಕೆ  ಸಿಕ್ಕಿಪ್ಪಗ ಈ ಜನ ಬದುಕ್ಕಿ ಒಳುದ್ದಡ..
ಇದೇ ಪ್ಲೇಗು ಮಾರಿಗೆ – ಪ್ರೀತಿಯ ತಮ್ಮಂದೇ, ತಂಗೆದೇ ಎರಡೇ ಗಂಟೆಯ ಅವಧಿಲಿ ತೀರಿ ಹೋದವಡ. ಕುಟುಂಬದ ಪ್ರೀತಿಯನ್ನೇ ಕಳಕ್ಕೊಂಡ ಈ ಜೆನ ಮುಂದೆ ಮನೆ-ಮಟ ಎಲ್ಲವನ್ನೂ ಕಳಕ್ಕೊಂಡು ಬಂಙ ಬಂದವಡ.
ಮುಂದೆ ಎಂತೆಂತದೋ ಕೆಲಸ ಮಾಡಿಗೊಂಡು ದೊಡ್ಡ ಕ್ಲಾಸುಗಳ ಮಯಿಸೂರಿಲಿ ಓದಿಗೊಂಡು ಹೋದ್ದಡ.
ತರ್ಕಶಾಸ್ತ್ರಲ್ಲಿ ಎಮ್ಮೆ ಮಾಡಿ, ಮುಂದೆ ಅದೇ ವಿಚಾರಲ್ಲಿ ಪಚ್ಚಡಿ (Ph.D) ಕಡದ್ದಡ!
ನಮ್ಮ ಸಂಸ್ಕೃತಿ, ತರ್ಕಶಾಸ್ತ್ರ, ಪುರಾಣ, ಇತಿಹಾಸಂಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಜ್ಞಾನ ಸಂಪತ್ತು ಗಳುಸಿಗೊಂಡಿದವಡ.
ಈ ವಿಶಯಂಗೊ ಅವರ ಆತ್ಮಕತೆ ಭಿತ್ತಿ ಹೇಳ್ತ ಪುಸ್ತಕಲ್ಲಿ ಬರದ್ದವಡ- ಇನ್ನೂ ಎಂತೆಂತದೋ ಹೇಳಿದ° ಮಾಷ್ಟ್ರುಮಾವನ ಮಗ°.

ಹಲಸಿನ ಸೋಂಟೆಯೊಟ್ಟಿಂಗೆ ಒಂದೊಂದು ಗ್ಲಾಸು ಕಾಪಿ ಬಂತು, ಒಳಂದ!

~
ಸುಮಾರು ನಲುವತ್ತು ಒರಿಶ ಮೊದಲೇ ನಮ್ಮ ಮಾಷ್ಟ್ರುಮಾವ° ಭೈರಪ್ಪನ ಕಾದಂಬರಿ ಓದಲೆ ಸುರು ಮಾಡಿದ್ದವಡ.
ವಂಶವೃಕ್ಷ, ಗೃಹಭಂಗ – ಹೇಳ್ತ ಎರಡು ಅವರ ಅತಿ ಪ್ರಸಿದ್ಧ ಕಾದಂಬರಿಗೊ ಅಡ.
ವಂಶವೃಕ್ಷಲ್ಲಿ ಬತ್ತ ನಂಜನಗೂಡಿನ ಶ್ರೋತ್ರಿಗೊ ಹೇಳ್ತ ವೆಗ್ತಿ ನಮ್ಮ ಗುರ್ತದ ಜೆನವೇಯೋ – ಹೇಳಿ ಅನುಸಿ ಹೋವುತ್ತಡ.
ಅವರ ಮನೆ ಎಲ್ಲಿ ಹೇಳ್ತದರ ವಿವರುಸುವಗ ಅಲ್ಲಿಗೇ ಹುಡ್ಕಿಯೊಂಡು ಹೋಪೊ° – ಹೇಳಿ ಕಾಣ್ತಡ. ಗೃಹಭಂಗಲ್ಲಿ ಬಡತನದ ಮನೆ ನಡೆಶುವ ಕಷ್ಟಂಗೊ, ಮನೆ ಒಡವ ಸನ್ನಿವೇಶಂಗೊ ಓದಿರೆ ಎಂತವಂಗೂ ಜೀವನಲ್ಲಿ ಉದ್ಧಾರ ಆಯೆಕ್ಕು – ಹೇಳಿ ಕಾಣ್ತಡ.
ಅಷ್ಟೊಂದು ಆಪ್ತ ವರ್ಣನೆಗೊ ಅಡ! ಮಾಷ್ಟ್ರುಮಾವ° ಆಪ್ತವಾಗಿ ಹೇಳಿದವು!
~
ಈಗ ಎಂತಕಪ್ಪಾ, ಇಷ್ಟು ದೊಡ್ಡ ಪುಸ್ತಕಂಗಳ ಹಿಡ್ಕೊಂಡು ಹೆರಟದು – ಇದರ ಇಡೀ ಓದುಲಿದ್ದೋ – ಪುನಾ ಕೇಳಿದ ಅಜ್ಜಕಾನಬಾವ° ನೆಗೆಮಾಡಿಗೊಂಡು.
ಹ್ಮ್, ಈ ಮೂರು ಪುಸ್ತಕವ ಮದಲೇ ಧಾರಾಳ ಓದಿದ್ದೆ; ಈಗ ಪುನಾ ಒಂದರಿ ಓದೆಕ್ಕು – ಹೇಳಿದ° ಮಾಣಿ.
ಹಾಂಗುದೇ ಒಂದು ಕೊದಿ ಹಿಡುದು ಓದಲೆ ಎಂತ ಇದ್ದಪ್ಪಾ ಅದರ್ಲಿ, ಹೇಳಿ ಹೋತು ನವಗೆ, ಪಕ್ಕನೆ!
ಅಷ್ಟಪ್ಪಗ ಮಾಷ್ಟ್ರುಮಾವ° ಆ ಮೂರು ಪುಸ್ತಕದ ಬಗ್ಗೆ ರಜ್ಜ ಹೇಳಿದವು:
~

ಪರ್ವ:
ಹದಿನೆಂಟು ಪರ್ವದ ಮಹಾಭಾರತದ ಕತೆಯ ಓದಿ, ಏಳೆಂಟೊರಿಶ ಸಂಪೂರ್ಣ ಅಧ್ಯಯನ ಮಾಡಿ, ಅದರ ಬಗೆಗೆ ಹಿಡಿತ ಸಾಧಿಸಿ ಬರದ ಕಾದಂಬರಿ ಅಡ ಇದು.
ಮಹಾಭಾರತವೇ ಕತೆ ಆದ ಕಾರಣ ಪರ್ವ ಹೇಳಿಯೇ ಹೆಸರು ಮಡಗಿದವಡ.
ಮಹಾಭಾರತಲ್ಲಿ ಬತ್ತ ಎಲ್ಲಾ ವೆಗ್ತಿ, ವೆಗ್ತಿತ್ವಕ್ಕೆ ಮನುಷ್ಯರ ರೂಪ ಕೊಟ್ಟು, ಅಸಾಧ್ಯ ಹೇಳಿ ಅನುಸುವ ಎಲ್ಲ ಸನ್ನಿವೇಶಂಗಳ “ನೆಡದ್ದು ಆದಿಕ್ಕೊ ಅಂಬಗ” ಹೇಳಿ ಅನುಸುವಷ್ಟಕೆ ಬರದ್ದವಡ.

ಭಾರತದ ಛಪ್ಪನ್ನೈವತ್ತಾರು ದೇಶಂಗೊ! - ಬೈರಪ್ಪಜ್ಜಂಗೆ ಇದನ್ನೇ ಕಂಡದು!
ಭಾರತದ ಛಪ್ಪನ್ನೈವತ್ತಾರು ದೇಶಂಗೊ! – ಬೈರಪ್ಪಜ್ಜಂಗೆ ಇದನ್ನೇ ಕಂಡದು!

ಯುದ್ಧದ ಸನ್ನಿವೇಶದ ಪೂರ್ವಭಾವಿಯಾಗಿ ಆರಂಭ ಅಪ್ಪ ಈ ಕಾದಂಬರಿಲಿ ಒಬ್ಬೊಬ್ಬನೇ ಅವರವರ ದೃಷ್ಟಿಲಿ ಅಂಬಗಾಣ ಸಮಾಜ ಹೇಂಗೆ ಹೇಳ್ತದರ ವಿವರುಸಿಗೊಂಡು ಹೋಪದಡ..
ಶಲ್ಯ, ಕುಂತಿ, ಭೀಮ, ಅರ್ಜುನ, ದ್ರೌಪದಿ – ಎಲ್ಲೊರುದೇ ಆ ಸಂದರ್ಭಲ್ಲಿ ಯೋಚಿಸಿಗೊಂಡು ಹೋಪದಡ.
ಪರಮಾಯುಷ್ಯದ ಭೀಷ್ಮಂಗೆ ನೂರಿಪ್ಪತ್ತು ಒರಿಷ (ಮನುಶ್ಶರಿಂಗೆ ಅಸಾಧ್ಯದ ಎಂಟುನೂರು ಅಲ್ಲ!). ಅವನ ಪುಳ್ಯಕ್ಕೊಗೆ ಅವ ನೀತಿ ಕತೆ ಹೇಳುದು- ಹೇಳಿದವು ಮಾಷ್ಟ್ರುಮಾವ°!
ಹಿಮಾಲಯದ ಪ್ರದೇಶಲ್ಲಿಪ್ಪ ಜೀವನವ ವರ್ಣನೆ ಮಾಡ್ಳೆ ಸ್ವತಃ ಆ ಪ್ರದೇಶಕ್ಕೆ ಹೋಗಿ, ಉದೆಕಾಲ ನಾಕು ಗಂಟಗೆ ತಣ್ಣೀರಿಲಿ ಮಿಂದು, ಹಸಿ ಬಟಾಟೆ ತಿಂದು, ಅನುಬವಿಸಿ ಬಯಿಂದನಡ ಈ ಅಜ್ಜಯ್ಯ! ಬೇರೆ ಆರು ಬರಗು ಹಾಂಗೆಲ್ಲ – ಕೇಳಿದ° ಮಾಣಿ.
ಎಂಗೊಗೆ ಕೂದಲ್ಲೇ ಒಂದರಿ ಚಳಿ ಆತು! ಬೆಶಿಗೆ ಎರಡು ಸೋಂಟೆ ಬಾಯಿಗೆ ಹಾಕಿಗೊಂಡೆಯೊ°!
ಬೆಂಗುಳೂರಿನ ಏಸಿಯ ತಣ್ಣಂಗೆಲಿ ಕೂದಂಡು ಹೋತಗೆಡ್ಡ ಬಿಟ್ಟೊಂಡು ’ಸಮಾಜದಲ್ಲಿ ಅಸಮಾನತೆ’ ಹೇಳಿ ಬರೆತ್ತವಡ ಕೆಲವು ಜೆನ, ಅವರೆದುರು ಈ ಜೆನ ಎಷ್ಟು ದೊಡ್ಡ ಕಾಣ್ತು, ಅಲ್ಲದೊ?

ಈ ಪುಸ್ತಕದ ಒಂದೊಂದು ಪೇರಾಗ್ರಾಪು ಓದುವಗಳೂ ಶೇಣಿಅಜ್ಜನ ಅರ್ತ ಕೇಳಿದ ಅನುಭವ ಆವುತ್ತಡ!
ಅಷ್ಟೊಂದು ಪಕ್ವ ಬರವಣಿಗೆ, ಜ್ಞಾನ! ಅಧ್ಯಯನಂದಲೇ ಜ್ಞಾನ ಬಪ್ಪದಡ – ಹೇಳಿದವು ಮಾಷ್ಟ್ರುಮಾವ°!
ಕುಂತಿ, ಪಾಂಡು, ಮಾದ್ರಿ – ಇವರ ಸಂಬಂಧದ ಸೂಕ್ಷ್ಮತೆಗೊ, ಪರ ವಿರೋಧ ಅಭಿಪ್ರಾಯ ಬೇಧದ ವರ್ಣನೆಗೊ, ಅರ್ಜುನನ ಕಲಾ ಕೌಶಲಂಗೊ, ಧುರ್ಯೋದನನ ಚಂಚಲತೆಗೊ  – ಎಲ್ಲವನ್ನೊ ಎಳೆ ಎಳೆ ಆಗಿ ವಿವರುಸಿಗೊಂಡು ಹೋಯಿದವಡ!
ಅಂಬಗಾಣ ಜೀವನ ಪದ್ಧತಿ, ಆಹಾರ ಪದ್ಧತಿ, ಸಂಸ್ಕೃತಿ – ಎಲ್ಲವನ್ನುದೇ ಸ್ಪಷ್ಟವಾಗಿ ನಮ್ಮ ಕಣ್ಣೆದುರು ಕಟ್ಟಿಗೊಂಡು ಹೋವುತ್ತವಡ ಭೈರಪ್ಪಜ್ಜ…

ಸುಮಾರು ಎರಡು-ಮೂರನೇ ಶತಮಾನದ ಭಾರತದ ಜೀವನಪದ್ಧತಿಯ ಆಳವಾಗಿ ಅಧ್ಯಯನ ಮಾಡಿ, ಭಾರತದ ಕತೆಯ ಅದೇ ಜೀವನಕ್ಕೆ ಹೊಂದುಸಿಗೊಂಡು, ತನ್ಮೂಲಕವಾಗಿ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡದಾದ ಕಾಣಿಕೆ ಕೊಟ್ಟಿದವಡ ಭೈರಪ್ಪಜ್ಜ.
ಇಂಗ್ಳೀಶಿಲಿ ಗ್ರೀಕುಸಂಸ್ಕೃತಿಯ ಮಹಾ ಪುರಾಣಂಗಳ ತೋರುಸುತ್ತ ಕತೆಗೊ, ಸಿನೆಮಂಗೊ ಬಯಿಂದಡ. ಕನ್ನಡಲ್ಲಿ ಈ ಕಾದಂಬರಿ ಓದಿರೆ ಬೇರೆ ಸಿನೆಮ ನೋಡೆಕ್ಕೂಳಿ ಇಲ್ಲೆಡ- ಮಾಣಿ  ಹೇಳಿದ°.
ಒಟ್ಟಾಗಿ ಹೇಳುದಾದರೆ, ಎರಡು-ಮೂರನೇ ಶತಮಾನದ ಜೀವನಪದ್ಧತಿಯ ಸಮಗ್ರ ಚಿತ್ರಣವ ಈ ಪರ್ವ ಕಾದಂಬರಿ ಪರ್ವಪರ್ವವಾಗಿ ವಿವರುಸಿ ಕೊಡ್ತಡ…

ಕಾಪಿ ಮುಗುತ್ತು, ಸೋಂಟೆ ಇನ್ನೂ ಇದ್ದು…

ಸಾರ್ಥ:
ಪರ್ವದ ಕತೆ ಮಾತಾಡಿ ಅಪ್ಪಗಳೇ, ಆ ಅಟ್ಟಿಲಿ ಇದ್ದ ಮತ್ತಾಣ ಪುಸ್ತಕ ’ಸಾರ್ಥ’ ದ ಶುದ್ದಿ ತೆಗದ° ಮಾಣಿ.
ಇದು ಏಳು-ಎಂಟನೇ ಶತಮಾನದ ಕತೆ ಅಡ.

ಅಂಬಗ ಭಾರತಲ್ಲಿ ಇದ್ದಿದ್ದ ವ್ಯಾಪಾರ, ವ್ಯವಹಾರ, ಬೌದ್ಧ ಧರ್ಮದ ಪ್ರಸಾರ, ವೈದಿಕ ಧರ್ಮದ ಪುನರುತ್ಥಾನ, ಶಂಕರಾಚಾರ್ಯರ ಯಾತ್ರೆ – ಇದೆಲ್ಲವೂ ನಿಂಗೊಗೆ ಶಾಲೆಯ ಪಾಟಪುಸ್ತಕಲ್ಲಿ ಸಿಕ್ಕುತ್ತಿಲ್ಲೆ, ಆದರೆ ಈ ಸಾರ್ಥ ಲ್ಲಿ ಸಿಕ್ಕುತ್ತು – ಹೇಳಿದವು ಮಾಷ್ಟ್ರುಮಾವ°.
ಒಂದು ಊರಿಂದ ಚಿನ್ನ, ಆಭರಣ, ಮುತ್ತು, ರತ್ನ, ಸಾಂಬಾರ ಪದಾರ್ಥ, ಉಪ್ಪು-ಮೆಣಸು ಎಲ್ಲ ವ್ಯಾಪಾರದ ಉದ್ದೇಶಲ್ಲಿ ತೆಕ್ಕೊಂಡು ಎಷ್ಟೋ ದೂರದ ಇನ್ನೊಂದು ಊರಿಂಗೆ ಹೋಪ ದೊಡಾ ಜಾತ್ರೆಗೆ ಸಾರ್ಥ (ಸ-ಅರ್ಥ) ಹೇಳಿ ಹೆಸರಡ.
ಉದಾಹರಣೆಗೆ, ದಕ್ಷಿಣದ ಒಂದು ರಾಜ್ಯಂದ ದೊಡ್ಡದೊಡ್ಡ ವೈಶ್ಯರು ಅವರವರ ಗಾಡಿ ತೆಕ್ಕೊಂಡು ಈ ಸಾರ್ಥಕ್ಕೆ ಸೇರಿರೆ, ಉತ್ತರಕ್ಕೆ ಎತ್ತಿ, ಅಲ್ಲಿಂದ ಕೆಲವು ಸಿಂಧೂ ದೇಶಕ್ಕೋ- ಅಲ್ಲ ಹಿಮಾಲಯದ ದೇಶಂಗೊಕ್ಕೊ – ಮಣ್ಣ ಹೋತಿಕ್ಕುಗು.
ಕೇವಲ ವ್ಯಾಪಾರಿಗೊ ಮಾಂತ್ರ ಅಲ್ಲದ್ದೆ, ಅವರೊಟ್ಟಿಂಗೆ ಕಾಶೀ, ವಾರಣಾಸಿಗೆ ಹೋವುತ್ತ ತೀರ್ಥಯಾತ್ರಿಗೊ, ಜ್ಞಾನಾರ್ಜನೆಗೆ ಹೋವುತ್ತ ವಿದ್ಯಾರ್ಥಿಗೊ – ಎಲ್ಲೊರೂ ಸೇರಿಗೊಂಡು ಇತ್ತಿದ್ದವು.
ಹೇಂಗೂ ಗಾಡಿಗಳ ರಕ್ಷಣೆಗೆ ಸೈನಿಕರುದೇ ಇತ್ತಿದ್ದವನ್ನೇ! ಹಾಂಗಾಗಿ, ಊರೂರಿನ ಸಂಪರ್ಕಕ್ಕೆ ಈ ಸಾರ್ಥದ ಸಮಯ ನೋಡಿ ಹೆರಟೋಂಡಿತ್ತಿದ್ದವು – ಈಗ ಕೃಷ್ಣಬಸ್ಸಿನ ಹೊತ್ತು ನೋಡಿ ಹೆರಟ ಹಾಂಗೆ!

ಹಾಂಗೇ ಹೆರಟ ಒಬ್ಬ ವೆಗ್ತಿ ಎಲ್ಲೆಲ್ಲೋ ಹೋಗಿ, ಆರಾರನ್ನೋ ಕಂಡು, ಶಂಕರಾಚಾರ್ಯ, ನಾಲಂದ ವಿದ್ಯಾಲಯ, ಮಾಟ, ಮಂತ್ರ, ನಾಟಕ, ಸಂಗೀತ, ಅಭಿನಯ ಎಲ್ಲವನ್ನುದೇ ಅನುಭವಿಸುತ್ತನಡ.
ಅವ° ಅನುಭವಿಸಿದ ಹಾಂಗೇ ಅವಂಗೆ ಅಂಬಗಾಣ ಜೀವನದ ಕೌತುಕ ಕಂಡೋಂಡು ಹೋವುತ್ತು. ಅವಂಗೆ ಕೌತುಕ ಕಂಡ ಹಾಂಗೆ ನವಗೆ ಆಶ್ಚರ್ಯ ಆವುತ್ತಾ ಹೋವುತ್ತು – ಹೇಳಿದವು ಮಾಷ್ಟ್ರುಮಾವ°!

ಆ ಸುಂದರ ಶಾಂತಿಪ್ರಿಯ ಸಮೆಯಲ್ಲಿ, ಸಿಂಧೂದೇಶಲ್ಲಿ ಯವನರ ದಾಳಿಯ ಆರಂಭ, ಮಾಪಳೆಗಳ ವಿನಾಶಕಾರಿ ಸಂಸ್ಕೃತಿಯ ಚಿಗುರು, ಚೆಂದದ ಒಂದು ಮನೆಯ ಒಡವಲೆ ಸುರುಮಾಡಿದ ಆಘಾತ – ಎಲ್ಲವೂ ಸಿಕ್ಕಿಯೋಂಡು ಹೋವುತ್ತಡ ಈ ಕಾದಂಬರಿಲಿ.
ಒಟ್ಟಾಗಿ, ಏಳು, ಎಂಟನೇ ಶತಮಾನಲ್ಲಿದ್ದ ಭಾರತದ ಸಮೃದ್ಧಿಯ, ಸಂಪತ್ತಿನ ಸಾರ್ಥತೆಯ ತೋರುಸುತ್ತಡ, ಈ ಸಾರ್ಥ ಕಾದಂಬರಿ…
~

ಸೋಂಟೆ ಒಂದರಿಯಾಣದ್ದು ಮುಗಾತು ಹೇಳಿದ ಅಜ್ಜಕಾನ ಬಾವ!
ಎರಡ್ಣೇ ಸರ್ತಿಯಾಣ ಹಲಸಿನ ಸೋಂಟೆ ಶರಣಾಗತಿ ಆಗಿ ಎಂಗಳ ಎದುರು ತಟ್ಟೆಲಿ ನೀಟಂಪ ಬಿದ್ದತ್ತು…
~
ಮಹಾಭಾರತದ ಅದ್ಭುತ ಜೀವನಶೈಲಿ, ಸಾಂಸ್ಕೃತಿಕ ಚೌಕಟ್ಟು, ಶಂಕರಾಚಾರ್ಯರ ಕಾಲದ ಸಾಧನೆಯ ಪಾರಮಾರ್ಥಿಕ ಜೀವನ, ವ್ಯವಹಾರದ ಆರ್ಥಿಕ ಜೀವನ, ಅತ್ಯದ್ಭುತ ಧಾರ್ಮಿಕ ಚಿಂತನೆಯ ನೆಲೆಗಟ್ಟುಗೊ ಎಲ್ಲವೂ ಈ ಎರಡು ಕಾದಂಬರಿಲಿ ಬಂದಾಯಿದು.
ಒಂದೊಂದು ಕಾದಂಬರಿಗೂ ಏಳೆಂಟೊರಿಶ ಅಧ್ಯಯನ ಮಾಡಿತ್ತಿದ್ದವಡ ಬೈರಪ್ಪಜ್ಜ°.
ಅದಾದ ಮತ್ತೆ ಈಗಾಣ ಕಾಲದ ಶುದ್ದಿಗ ಇರ್ತ ಕೆಲವು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಸಂಗೀತದ ಬಗ್ಗೆ ಕಲಾತ್ಮಕ ಕಾದಂಬರಿಗೊ – ಇತ್ಯಾದಿ ಎಲ್ಲ ಬರದವಡ.
ಮತ್ತೆ ತುಂಬ ಸಮಯ ಆದ ಮತ್ತೆ ಮೊನ್ನೆಮೊನ್ನೆ ಒಂದು ಕಾದಂಬರಿ ಬಂತಡ, ಮತ್ತೊಂದರಿ ಭಾರತದ ಇತಿಹಾಸಕ್ಕೆ ಸಂಬಂದ ಪಟ್ಟ ಹಾಂಗೆ!
ಅದುವೇ ಆವರಣ.
~

ಆವರಣ:
ಹದಿನೈದು – ಹದಿನಾರನೇ ಶತಮಾನಲ್ಲಿ ಭಾರತಲ್ಲಿ ಮೊಗಲರು ಉತ್ತುಂಗಲ್ಲಿ ಇತ್ತಿದ್ದವು.
ಇಡಿಯ ಉತ್ತರ ಭಾರತಲ್ಲಿ ಅವರ ಆಳ್ವಿಕೆ. ಅವರದ್ದೇ ನಿಯಮಂಗೊ, ಅವರದ್ದೇ ಕಾನೂನುಗೊ, ಅವರದ್ದೇ ಜೆನಂಗೊ.

ಆವರಣ - ಬೈರಪ್ಪಜ್ಜನ ಕ್ರಾಂತಿಕಾರಿ ಕಾದಂಬರಿ
ಆವರಣ – ಬೈರಪ್ಪಜ್ಜನ ಕ್ರಾಂತಿಕಾರಿ ಕಾದಂಬರಿ

ಮಾಡಿದ್ದೇ ಆಟ, ಕೊಟ್ಟದೇ ಕಾಟ! ಈಗಾಣ ಕಾಸ್ರೋಡಿನ ಕೆಲವು ಸಂತಾನಂಗಳ ಕಂಡ್ರೆ ಅಂದಾಜಿ ಮಾಡ್ಳಕ್ಕು!

ಅಷ್ಟ್ರಒರೆಂಗೆ ನಮ್ಮ ಭಾರತಲ್ಲಿ ಇದ್ದಿದ್ದ – ತತ್ವ, ಧರ್ಮ, ನ್ಯಾಯ -ನೀತಿ -ನಿಯಮ, ಕನಿಕರ ಎಲ್ಲವೂ ನೀರಿಲಿ ಮಾಡಿದ ಹೋಮದಾಂಗೆ ಆಗಿತ್ತು.
ಭವ್ಯ ಪರಂಪರೆಯ ದೇವಸ್ಥಾನಂಗೊ, ಶ್ರದ್ಧಾಕೇಂದ್ರಂಗೊ, ವಿದ್ಯಾಲಯಂಗೊ ಎಲ್ಲವೂ ಇದ್ದ ಭಾರತ ಬಳುಸಿ ಮಡಗಿದ ಬಾಳೆಯ ಹಾಂಗಿತ್ತು.
ಬಂದು ಉಂಬದೊಂದೇ ಬಾಕಿ! ಆ ಕೆಲಸವ ಮೊಘಲರು ಮಾಡಿದವು.

ಮೊಘಲ ಜಾತಿಯ ಬಾಬರು ಹೇಳ್ತದು ಬಂತು – ಸುರೂವಿಂಗೆ ಪಿರೆಂಗಿ ತೆಕ್ಕೊಂಡು. ಅಷ್ಟ್ರೊರೆಂಗೆ ನಮ್ಮಲ್ಲಿ ಇದ್ದದು ಕೋಲುಕೊದಂಟಿ ಮಾಂತ್ರ. ಪಿರೆಂಗಿಲಿ ಇಡೀ ದೊಡ್ಡದೊಡ್ಡ ಸೈನ್ಯವೇ ದಿಕ್ಕಾಪಾಲಾಗಿ ಬಿದ್ದತ್ತು!
ಪ್ರತಿರೋಧವೇ ಇಲ್ಲದ್ದೆ ಭಾರತ ಅವಕ್ಕೆ ಶರಣಾತು. ಅಲ್ಲಿಂದ ಅದರ ಪಿಂಡಂಗಳದ್ದೇ ಕಾರ್ಬಾರು – ಮೊನ್ನೆ ಮೊನ್ನೆ ಬ್ರಿಟೀಶರ ಒರೆಂಗುದೇ..

ಮೊಘಲರ ಸಮಗ್ರ ಆಡಳಿತ ಚಕ್ರವ ನೋಡಿತ್ತುಕಂಡ್ರೆ ಬಹುದೊಡ್ಡ ಬೇಜಾರದ ಸಂಗತಿ ಕಾಣ್ತು! ಒಂದರಿ ಬಂದು ಊರ್ಲೆ ತಕ್ಕ ಜಾಗೆಸಿಕ್ಕಿದ ಕೂಡ್ಳೇ ಸಾಮ್ರಾಜ್ಯ ವಿಸ್ತಾರದ ಬಗ್ಗೆ ಚಿಂತನೆ ಮಾಡಿದವು.
ಅದಾದ ಮತ್ತೆ ಅವರ ಧರ್ಮವಿಸ್ತಾರ ಮಾಡಿದವು. ಅವರ ಧರ್ಮ ಒಳ್ಳೆದು ಹೇಳಿ ಮಾಂತ್ರ ಹೇಳಿರೆ ಸಂಗತಿ ಇಲ್ಲೆ, ಬಾಕಿದ್ದದು ಏನಕ್ಕೂ ಆಗದ್ದು – ಹೇಳ್ತದರ ಪ್ರಚಾರ ಮಾಡಿಗೊಂಡು ಬಂದವು.
ಒಂದೋ ಅಲ್ಲಾಹು, ಅಲ್ಲದ್ರೆ ಮರಣ – ಎರಡೇ ಅವಕಾಶಂಗೊ. ಈ ಕಾರ್ಯಲ್ಲಿ ಸುಂದರ ಸಮಾಜವ ಹಾಳಾಳು ಮಾಡಿ ಹರುದು ತಿಂದದು.
ಧರ್ಮದ ಹೆಸರಿಲಿ ದೇವಸ್ಥಾನವ ಹೊಡಿಮಾಡಿದವು. ಅಲ್ಲಿಪ್ಪ ಚಿನ್ನವ ತೆಕ್ಕೊಂಡೋಗಿ ಹೆಂಡತ್ತಿ ತಲಗೆ ಹಾಕಿದವು, ಅಲ್ಲಿಪ್ಪ ಶಿವಲಿಂಗಕ್ಕೆ ಪಿರೆಂಗಿ ಮಡಗಿದವು, ಏನೆಲ್ಲಾ ಅನಾಚಾರ ಮಾಡಿಹಾಕಿದವು!

ಎಷ್ಟೋ ನಿಷ್ಟೆಯ ಬಟ್ಟಕ್ಕಳ ಕಡುದು ಕೊಂದವು, ವೇದಪುಸ್ತಕಂಗಳ ಹೊತ್ತುಸಿ ಮಣ್ಣು ಮಾಡಿದವು. ಧರ್ಮನಿಷ್ಟರ ಕೊಂದವು, ಒಳುದವ ಧರ್ಮಾಂತರ ಮಾಡಿದವು – ಮಾಷ್ಟ್ರುಮಾವ° ಇನ್ನೂ ಹೇಳಿಗೊಂಡೇ ಹೋದವು..

ರೋಮಕುತ್ತ ಅಪ್ಪಲೆ ಸುರು ಆತು.
ಒಂದು ನಿಮಿಶ ಕಳುದಮತ್ತೆ ಮಾಣಿ ಹೇಳಿದ – ಅದೇ ಈ ಆವರಣದ ಕತೆ! ಹೇಳಿಗೊಂಡು.
ಇತಿಹಾಸ ಇಷ್ಟು ಕ್ರೂರ – ಹೇಳ್ತದು ನವಗೆ ಗೊಂತಿದ್ದು, ಆದರೆ ಅದರ ಆರುದೇ ಬರದು ಪುಸ್ತಕ ಮಾಡ್ತ ಧೈರ್ಯ ಮಾಡಿದ್ದವಿಲ್ಲೆ!
ಈ ಭೈರಪ್ಪಜ್ಜ ಮಾಡಿದವಡ!

ಅದೂ, ಒಂದು ಹೊಸಕಾಲದ ಕತೆಯ ಒಳ ಒಂದು ಹಳೆಕಾಲದ ಕತೆ ಬಪ್ಪದಡ. ಎರಡುದೇ ಮಾಪ್ಳೆಗೊಕ್ಕೆ ಸಂಬಂಧಪಟ್ಟ ಹಾಂಗೆಯೇ ಅಡ. ಕತೆಯ ನಾಯಕಿ ಒಂದು ಬಟ್ಟೆತ್ತಿ ಅಡ, ಅದೊಂದು ಮಾಪುಳೆಯ ಮದುವೆ ಆಗಿರ್ತು!
ಆ ಮಾಪ್ಳೆಗೆ ನಿಜವಾದ ಮಾಪುಳ್ಚಿ ಒಂದು ಸಿಕ್ಕಿ ಅಪ್ಪಗ ಇದಕ್ಕೆ ತಲಾಕು ಕೊಟ್ಟಿರ್ತು. ಅಷ್ಟರಒರೆಂಗೆ ಇಸ್ಲಾಮಿನ ನಂಬಿ, ನೆಚ್ಚಿ ನೆಡಕ್ಕೊಂಡಿದ್ದ ಹೆಮ್ಮಕ್ಕೊ ಅದರಿಂದ ನಂತರ ಅಧ್ಯಯನ ಮಾಡ್ಳೆ ಸುರು ಮಾಡುದಡ!
ಯೇವದೋ ಒಂದು ಮೊಘಲು ರಾಜನ ಕಾಲಲ್ಲಿ ಒಂದು ಹಿಂದು ರಾಜಕುಮಾರನ ಅಪಹರುಸಿ, ಅಮಾನುಷವಾಗಿ ಬಳಸಿಗೊಂಡು, ಅದರ ಸಂತಾನವ ನಿರ್ಣಾಮ ಮಾಡಿ – ರೌದ್ರಾವತಾರ ತೋರುಸುತ್ತ ಕತೆ ಅಡ ಅದು – ಮಾಷ್ಟ್ರುಮಾವ° ಹೇಳಿದವು.

ಇಡೀ ಕಾದಂಬರಿ ಓದಿರೆ ಚರಿತ್ರೆ ಇನ್ನೂ ಸ್ಪಷ್ಟವಾಗಿ ಅರ್ತ ಆವುತ್ತಡ!
ಇದರ ಬಗ್ಗೆ ಬೆಂಗುಳೂರಿಲಿ ದೊಡಾ ಚರ್ಚೆ ಎಲ್ಲ ಆಯಿದಡ – ಪೆರ್ಲದಣ್ಣ ಹೇಳಿದ°.!

ಒಟ್ಟಾರೆಯಾಗಿ ಭವ್ಯಭಾರತದ ರಾಜಕೀಯ ಉನ್ನತಿ, ಸಾಂಸ್ಕೃತಿಕ ಅವಸಾನ – ಎರಡನ್ನೂ ಅನಾವರಣ ಮಾಡಿ ತೋರುಸುತ್ತ ಕಾದಂಬರಿ ಅಡ ಇದು!
~

ಭಾರತದ ನಾಗರೀಕತೆ ಶುರು ಆದಲ್ಲಿಂದ ಪೌರಾಣಿಕ ಜೀವನದ ಒರೆಗಾಣ ಪರ್ವ,
ಆ ಕಾಲಘಟ್ಟಂದ ಸಾಮಾನ್ಯ ಜನಜೀವನದ ಒರೆಗಾಣ ಸಾರ್ಥ,
ನೆಮ್ಮದಿಯ ಸಾಮಾನ್ಯ ಜೆನಜೀವನಂದ ನೈತಿಕ ಆಘಾತ ಆದ ಮೊಘಲ ದರ್ಬಾರಿನ ವರೆಗಾಣ ಆವರಣ!
ಪರ್ವ, ಸಾರ್ಥ, ಆವರಣ – ಈ ಮೂರು ಕಾದಂಬರಿ ಓದಿರೆ ಭಾರತದ ಸಾರ್ಥಕತೆಯ ಅರ್ತ ಮಾಡಿಗೊಂಬಲಕ್ಕು – ಹೇಳಿದವು ಮಾಷ್ಟ್ರುಮಾವ°.
ಮಾಷ್ಟ್ರುಮಾವ° ಇತಿಹಾಸ ಕಲ್ತಕಾರಣ ಈ ಎಲ್ಲ ಪುಸ್ತಕಂಗಳ ಬಗ್ಗೆ ತುಂಬ ಆಸಕ್ತಿಲಿ ಹೇಳಿಕೊಟ್ಟವು.
~

ಕಣ್ಣಿಂಗೆ ಕಂಡೇ ಗೊಂತಿಲ್ಲದ್ದ ಒಂದು ಹಳೆಕಾಲದ ವಾತಾವರಣವ ಓದುತ್ತವಂಗೆ ಚಿತ್ರಿಸಿ ಕೊಟ್ಟು, ಅಲ್ಲಿ ಹಲವಾರು ಚಿಂತನೆಗಳ ಹುಟ್ಟುಸಿ, ಅದರನ್ನೇ ಓದುಸಿಗೊಂಡು ಹೋಪ ಹಾಂಗೆ ಬರೆತ್ತದು ಸಾದಾರ್ಣದ ಕೆಲಸ ಅಲ್ಲಡ!
ಆ ಕೆಲಸ ಕನ್ನಡದ ಮಟ್ಟಿಂಗೆ ಅದ್ಭುತ ಸೃಷ್ಟಿ ಅಡ… ಮಾಣಿ ಹೇಳಿದ°… ಹಾಂಗೆ ಆ ಮೂರು ಪುಸ್ತಕವನ್ನುದೇ ಮತ್ತೊಂದರಿ ಓದಲೆ ಈಗ ತುಂಬುಸಿಗೊಂಡದಡ.
ಹೇಂಗೂ ಒಂದು ತಿಂಗಳು ಪುರುಸೊತ್ತಿದಾ, ಒಂದರಿ ಓದಿಕ್ಕುವ ಹೇಳಿಗೋಂಡು. ಒಪ್ಪಣ್ಣ ಓದಲೆ ಸುರು ಮಾಡಿರೆ ಪುನಾ ಬೈರಪ್ಪ ಬರದಷ್ಟೇ ಒರಿಶ ಬೇಕೋ ಏನೋ – ಕಂಡತ್ತು!
~
ಈ ಅಜ್ಜ° ಬೇಕಾಬಿಟ್ಟಿ ಬರದು ಹಾಕುತ್ತವಿಲ್ಲೆಡ.
ಕಾದಂಬರಿ ಬರೇಕಾರೆ, ಅದರ ಹಿಂದೆ ಮುಂದೆ ಸರಿಯಾಗಿ ನೋಡಿ, ಅದರ ಸತ್ಯಾಸತ್ಯತೆಯ ಅಳದು, ಸರಿಯಾಗಿ ಸಮಾದಾನ ಆದ ಮತ್ತೆಯೇ ಬರವಲೆ ಸುರು ಮಾಡುದಡ. ಹಾಂಗಾಗಿ ಒಂದು ಕಾದಂಬರಿಗೆ ಏಳೆಂಟು ಒರಿಶ ಹಿಡಿವದೂ ಇದ್ದಡ.
ಒಂದೊಂದು ಕಾದಂಬರಿ ಬಪ್ಪಗಳೂ ಸಾವಿರಾರು ಜೆನ ಅದರ ಕಾದೊಂಡು ಇರ್ತವಡ. ಬಿಡುಗಡೆಯ ದಿನವೇ ತೆಗೇಕು ಹೇಳ್ತ ಉತ್ಸಾಹಲ್ಲಿರ್ತವಡ.
ಕೆಲವೆಲ್ಲ ಪುಸ್ತಕ ಮೂವತ್ತು, ನಲುವತ್ತು ಒರಿಶ ಮೊದಲು ಬರದ್ದಾಗಿದ್ದರೂ, ಈಗಳೂ ಬೆಶಿ ದೋಸೆಯ ನಮುನೆ ಮಾರಾಟ ಆವುತ್ತಡ!
ಅದದಾ ಬೈರಪ್ಪಜ್ಜನ ಪವರು – ಹೇಳಿದವು ಗಣೇಶಮಾವ°! – ಅವಂಗೆ ಬೆಂಗುಳೂರಿನ ಪುಸ್ತಕದಂಗುಡಿಗಳ ಪರಿಚಯ ಇದ್ದಿದಾ!!

ಇಷ್ಟೆಲ್ಲ ಬರದರೂ ಆ ಜೆನಕ್ಕೆ ಸಿಕ್ಕುಲಕ್ಕಾದ ಪ್ರಶಸ್ತಿಗೊ ಸಿಕ್ಕಿದ್ದಿಲ್ಲೆಡ. ಜ್ಞಾನಪೀಟ, ಅಕಾಡೆಮಿ – ಹೀಂಗಿರ್ತ ಎಷ್ಟೋ ಪುರಸ್ಕಾರಂಗೊ ಇವರ ಹತ್ತರಂಗೂ ಬಯಿಂದಿಲ್ಲೆಡ!
ಲಕ್ಕಿಡಿಪ್ಪು ಪುಸ್ತಕದಷ್ಟು ತೆಳುವಿನ ನಾಟಕ ಬರದೋರಿಂಗೆ ಸಿಕ್ಕಿದ್ದಡ, ಇಂತಾ ಮಹಾಕೃತಿಗಳ ಬರದೋರಿಂಗೆ ಎಂತದೂ ಸಿಕ್ಕಿದ್ದಿಲ್ಲೆ – ಹೇಳಿದ° ಪೆರ್ಲದಣ್ಣ.
ಈ ಜೆನಕ್ಕೆ ಜ್ಞಾನಪೀಟ ಸಿಕ್ಕೇಕು ಹೇಳಿ ಬೆಂಗುಳೂರಿಲಿಪ್ಪ ಬುದ್ಧಿವಂತರು ಎಲ್ಲೊರುದೇ ಹೇಳ್ತವಡ, ಆದರೆ ಬುದ್ಧಿಜೀವಿಗೊ ಬಿಡ್ತವಿಲ್ಲೆಡ!
ಪೆರ್ಲದಣ್ಣಂಗೆ ಅದು ಒಳ್ಳೆತ ಕೋಪ ಇದ್ದು!
~

ಕಳುದೊರಿಶ ಈ ಜೆನಕ್ಕೆ ನಮ್ಮ ಕೋಣೆತ್ತೋಟ ದೊಡ್ಡಪ್ಪನವರ ಉಸ್ತುವಾರಿಲಿ ಕೊಡ್ತ ಧರ್ಮಶ್ರೀ ಪ್ರಶಸ್ತಿ ಸಿಕ್ಕಿದ್ದಡ.
ನಮ್ಮ ಗುರುಗಳೇ ಆ ಪ್ರಶಸ್ತಿ ಕೊಟ್ಟು ಮಂತ್ರಾಕ್ಷತೆ ಕೊಟ್ಟದಡ.,
– ಗಣೇಶಮಾವ° ಹೇಳಿದವು. ಆ ದಿನ ಮಾಷ್ಟ್ರುಮಾವ°, ನೆಕ್ರಾಜೆ ಅಪ್ಪಚ್ಚಿಯ ಒಟ್ಟಿಂಗೆ ಹೋಯಿದವಡ, ಗಣೇಶಮಾವಂದೇ.
~
ಅದೆಲ್ಲ ಇರಳಿ, ಈ ಸರ್ತಿ ಒಂದು ಹೊಸ ಶುದ್ದಿ ಇದ್ದಡ! ಈ ಭೈರಪ್ಪಜ್ಜನ ಇನ್ನೊಂದು ಕಾದಂಬರಿ ಬತ್ತಾ ಇದ್ದಡ.
ಅದರ ಹೆಸರೇ ಕವಲು – ಹೇಳಿಗೊಂಡು!

ಈಗಾಣ ಅಂಬೆರ್ಪಿನ ಜೀವನಲ್ಲಿ ಕೌಟುಂಬಿಕ ಕಲಹ ಇತ್ಯಾದಿಗೊ ಜೋರು!
ಹಾಂಗಾಗಿ ಈ ಮಾರಾಮಾರಿ, ಕೋರ್ಟು, ಡಯಿವೋರ್ಸು ಅದು ಇದು ಎಲ್ಲ ಸುರು ಆಯಿದಿದಾ. ಅದನ್ನೇ ಕತೆ ಆಗಿ ಮಡಿಕ್ಕೊಂಡು ಒಂದು ಕಾದಂಬರಿ ಬರದ್ದಡ.
ಯೇವದೇ ವಿಶಯ ಆಗಿರಲಿ, ಅದರ ಮನಸ್ಸು ಮುಟ್ಟುತ್ತ ಹಾಂಗೆ ಬರೆತ್ತದು ಭೈರಪ್ಪಜ್ಜನ ತಾಕತ್ತು!
ಇಷ್ಟ್ರ ವರೆಗುದೇ ಅದೇ ನಮುನೆ ಆಯಿದು, ಇನ್ನುದೇ ಹಾಂಗೇ ಅಕ್ಕಿದಾ.. ಇದನ್ನುದೇ ಸುರೂವಾಣ ದಿನವೇ ತೆಗದು ಓದೆಕು – ಹೇಳಿಗೊಂಡ° – ಮಾಣಿ.
ಮದುವೆ ಆದ ಹೊಸತ್ತರಲ್ಲಿದೇ ಇಂತಾ ಕತೆ ಓದೆಕು ಹೇಳಿ ಅನುಸಿತ್ತದಾ ಈ ಮಾಣಿಗೆ! ಅಂಬಗ ಬೈರಪ್ಪನ ಪವರು ಎಂತಾ ಷ್ಟ್ರೋಂಗು!! ಹೇಳಿ ಅನುಸಿ ಹೋತು ಒಂದರಿ!!
~
ಇಷ್ಟೆಲ್ಲ ಮಾತಾಡುವಗ ಅಜ್ಜಕಾನಬಾವ° ಸೋಂಟೆಯ ಬಿಟ್ಟು ಒಂದು ಕಾದಂಬರಿ ಹಿಡ್ಕೊಂಡ°, ಅವಂಗೇ ಗೊಂತಿಲ್ಲದ್ದೆ!!

ಒಂದೊಪ್ಪ: ಪ್ರಾಚೀನ ಭಾರತದ ಸಾರ್ಥಕತೆಯ ತೋರುಸಿದ ಭೈರಪ್ಪಜ್ಜಂಗೇ ಗೌರವ ಕೊಡದ್ದರೆ ಆಧುನಿಕ ಭಾರತಕ್ಕೆ ಸಾರ್ಥಕತೆ ಇದ್ದೋ?

ಸೂ:  ಬೈರಪ್ಪಜ್ಜನ ಕಾದಂಬರಿ “ಕವಲು” ಬಿಡುಗಡೆಯ ಶುದ್ದಿ ವಿಜಯಕರ್ನಾಟಕಲ್ಲಿ ಬಂದ ಶುದ್ದಿ ಇಲ್ಲಿದ್ದು: (ಪುಟ 1) & ( ಪುಟ 10 )

65 thoughts on “ಪರ್ವ-ಸಾರ್ಥ-ಆವರಣ; ಭರತಪರ್ವದ ಸಾರ್ಥಕತೆಯ ಅನಾವರಣ..!

  1. ಎಸ್.ಎಲ್.ಭೈರಪ್ಪನ ಸಾರ್ಥ,ಪರ್ವ ,ಆವರಣ ಕಾದಂಬರಿಗಳ ಬಗ್ಗೆ ಇಷ್ಟು ಸರಳವಾಗಿ ಸಾರವ ಹೇಳಿದ್ದರ ಆನೆಲ್ಲೂ ಕೇಳಿದ್ದಿಲ್ಲೇ/ಓದಿದ್ದಿಲ್ಲೆ.ಕೃತಿಂದ ಹೆಚ್ಚು ದೊಡ್ಡಕೆ ವಿಮರ್ಶಾತ್ಮಕ ಹೇಳಿ ಗೊಂಡು ಬರದ ಬರಹಂಗಳ ಓದಿ ಗೊಂದಲ ಆಗಿ ಆನು ಮತ್ತೆ ಕೃತಿಗಳ ಸುರುವಿಂದ ಓದಿದ್ದು ಇದ್ದು

  2. ಅಯ್ಯಾ ಮಾರಾಯ ನಾನು ನಮ್ ಭೈರಪ್ಪ ಬಗ್ಗೆ ಏನು ಬರೆದಿದ್ದಾರೆ ಅಂತ ನಿನ್ನ ಬ್ಲಾಗಿಗೆ ಬಂದರೆ ನನಗೆ ತಿಳಿಯದ ಭಾಷೆಯಲ್ಲಿ ಬರೆದಿರುವೆಯಲ್ಲಪ್ಪಾ? ನಮ್ ಬಿಜಾಪೂರದ ಜವಾರಿ ಮಂದಿದೂ ಮಂಡೆ ಬಿಸಿ ಮಾಡಿದೆ ನೋಡು ಮತ್ತೆ.

  3. ಎಸ್.ಎಲ್.ಭೈರಪ್ಪನ ಸಾರ್ಥ,ಪರ್ವ ,ಆವರಣ ಕಾದಂಬರಿಗಳ ಬಗ್ಗೆ ಇಷ್ಟು ಸರಳವಾಗಿ ಸಾರವ ಹೇಳಿದ್ದರ ಆನೆಲ್ಲೂ ಕೇಳಿದ್ದಿಲ್ಲೇ/ಓದಿದ್ದಿಲ್ಲೆ.ಕೃತಿಂದ ಹೆಚ್ಚು ದೊಡ್ಡಕೆ ವಿಮರ್ಶಾತ್ಮಕ ಹೇಳಿ ಗೊಂಡು ಬರದ ಬರಹಂಗಳ ಓದಿ ಗೊಂದಲ ಆಗಿ ಆನು ಮತ್ತೆ ಕೃತಿಗಳ ಸುರುವಿಂದ ಓದಿದ್ದು ಇದ್ದು
    .
    ಬರದ್ದು ಭಾರ ಆಗದ್ದೆ ಸರಳವಾಗಿ ಭೈರಪ್ಪನ ಕೃತಿಗಳ ಸಾರವ ತಿಳುಸಿದ್ದಕ್ಕೆ ಧನ್ಯವಾದಂಗ ಒಪ್ಪಣ್ಣಂಗೆ

  4. ಭೈರಪ್ಪನ ಕಾದಂಬರಿಗಳಲ್ಲಿ ತುತ್ತ ತುದಿಯಲ್ಲಿಪ್ಪದು “ಪರ್ವ”
    ಅವರ ಹೆಚ್ಚಿನೆಲ್ಲ ಕಾದಂಬರಿಗಳ ಆನು ಓದಿದ್ದೆ.
    ಅವಕ್ಕೆ ಜ್ಞಾನಪೀಠ ಬಾರದ್ದದು ನಿಜಕ್ಕೂ ವಿಪರ್ಯಾಸ….
    (ಪರ್ವ ಓದದ್ದವು ಕಂಡಿತ ಓದಿ)

    1. Please send me also One copy My email id ಇಸ್ ಅಕ್ಷಯಕುಮಾರ್@ಥೊಉಘ್ತ್ಬೆರ್ರ್ಯ್.com

  5. ಪ್ರತಿ ಕಳಿಸಿದ್ದಕ್ಕೆ ಮುರಳಿ ಅಪ್ಪಚ್ಚಿಗೆ ಧನ್ಯವಾದಗಳು.

  6. Dear ‘Oppanna’,

    Ushari Iddeya?

    SL Bhyrappa na monne bidugade aada ‘KAVALU’ odi aata?
    Aanu indu pustaka khareedi madidde.
    Ninna website nodutta ippadu indu suru.Ella nodiddille. Purusottu appaga innondari nodutte!
    SHRIDHAR BHAT

    1. ನಮಸ್ಕಾರ, ಬಡೆಕ್ಕಿಲ ಅಪ್ಪಚ್ಚಿಗೆ!
      (ಹ್ಮ್, ಹೇಳಿದಾಂಗೆ – ಇಲ್ಲಿ ನಾವು ಅಪ್ಪಚ್ಚಿ-ದೊಡ್ಡಪ್ಪ° ಹೇಳಿಯೇ ಮಾತಾಡುದಿದಾ.. )

      ನಿಂಗಳೂ ಬೈಲಿಂಗೆ ಬಂದಿರೋ? – ಒಳ್ಳೆದಾತು!
      ಓದಿ, ಸುಮಾರು ಜೆನ ಒಪ್ಪಣ್ಣ / ಒಪ್ಪಕ್ಕಂದ್ರು ಇಲ್ಲಿ ಶುದ್ದಿ ಹೇಳ್ತವು.
      ಅವರ ಶುದ್ದಿಗೊಕ್ಕುದೇ ಒಪ್ಪ ಕೊಡಿ.

  7. ಪುರುಸೋತ್ತೆ ಇಲ್ಲೆ ಈ ಜೆಂಬ್ರಂಗಳ ಎಡೆಲಿ… ಬಾವಾ ಕವಲೊಡೆದ ಸಂದರ್ಭಲ್ಲಿ ಬಂದ ಲೇಖನ ಲಾಯ್ಕಾಯಿದು..

  8. ಸಾಂದರ್ಭಿಕ ಲೇಖನ,, ಆನು ರಜ ನಿಧಾನಲ್ಲಿ ಓದಿದೆ,, ಭೈರಪ್ಪನವರ ಬಗ್ಗೆ ಗೊಂತಿಲ್ಲದ್ದ ಸುಮಾರು ವಿಷಯ ತಿಳ್ಕೊಂಡೆ,, ಎನಗೆ ಓದುವ ಮರ್ಲಿದ್ದು,, ಆದರೆ ಭೈರಪ್ಪನವರ ಕಾದಂಬರಿ ಎನ್ನ ಕೈಗಿನ್ನು ಬಯಿಂದಿಲ್ಲೆ.. 🙂 ಎಲ್ಲಿಯಾದರು ಓಸಿ ಪುಸ್ತಕ ಸಿಕ್ಕುಗಾ ಹೇಳಿ ನೋಡ್ತಾ ಇದ್ದೆ… 🙂

  9. nijakkoo bhairappajja great. pratiyondannoo tumba adhyana maadi manthana madi baradda…
    kavalu odule kayta idde….
    olle lekhana …

  10. Hello Murali,

    Can you please send me the pdf of “Anveshana” or atleast the link to download?

    Dhanyavadagalu.

    Ithi,
    Narendra

  11. kavalu bagge baraddu bhaari laayika aathu. b.c.roadli road maaduvaga cable kattarsi ondu tingalu enage bsnl broadband ittille. sumaaru vishayangala iga odide ashte.

  12. ಮುರಳಿ ಅಪ್ಪಚ್ಚಿ, ಎನಗೆ ಒಂದು ಪ್ರತಿ ಕಳಿಸುವಿರಾ? ಎನ್ನ್ನ ಇ-ಅಂಚೆ ವಿಳಾಸ: gmahesha@gmail.com

  13. ಭೈರಪ್ಪಜ್ಜ ತಾತ್ವಿಕವಾಗಿ ಭಾರೀ ಗಟ್ಟಿ ಮನುಷ್ಯ.. ಎಂತಕೆ ಹೇಳಿದರೆ ಸಮಾಜಲ್ಲಿ ನೆಡವ ವಾಸ್ತವಾಂಶ ಸಕಾಲಕ್ಕೆ ಯಾವುದೇ ಅಂಜಿಕೆ ಇಲ್ಲದ್ದೆ ತಿಳಿಸುತ್ತವು.. ಈ ಗಟ್ಟಿತನ ಅವರ ಕಾದಂಬರಿಲಿ ಎದ್ದು ಕಾಣ್ತು. ಕನ್ನಡ ಬರಹಗಾರರ ಪೈಕಿ ಎನ್ನ ಮೆಚ್ಚುಗೆಯ ಕೆಲವೇ ಕೆಲವು ಬರಹಗಾರರಲ್ಲಿ ಬೈರಪ್ಪ ಕೂಡ ಒಬ್ಬ. . ಸನಾತನ ಪರಂಪರೆಗಳ ಬದುಕಿಂಗೆ ಒಗ್ಗುಸಿ ನೋಡುಲೆ ಕಲ್ಸಿದವು ಭೈರಪ್ಪ.
    ಕವಲಿನ ದಾರಿ ಕಾಯ್ತಾ ಇದ್ದೆ.

    1. ಗಣೇಶಮಾವ°, ಅಪುರೂಪಲ್ಲಿ ಬಂದಿರಾ, ನಿಂಗಳದಾರಿ ಕಾಯ್ತಾ ಇತ್ತಿದ್ದೆ. 😉
      ಕವಲಿನ ದಾರಿಲಿ ದಾರಿತಪ್ಪಿತ್ತೋ ಗ್ರೇಶಿದೆಯೊ°..
      ಮತ್ತೆ ಹಸಿಮಡಲಿನ ಸೂಟೆಯೇ ಆಯೆಕ್ಕಷ್ಟೆ.

  14. ಏನು ಸಾರ್ಥಕ ಮನೆಯ ಮಕ್ಕಳೆ ಮಲಗಿ ನಿದ್ರಿಸುತಿದ್ದರೆ..?

    1. ಹರೇರಾಮ ಗುರುಗಳೇ.
      ಹೊಡಾಡ್ತೆಯೊ°.

      ಬೈಲಿಂಗೆ ಬಂದು ಶುದ್ದಿಗೆ ಆಶೀರ್ವಾದ ಮಾಡಿದ್ದು ಒಪ್ಪಣ್ಣ, ಒಪ್ಪಕ್ಕಂದ್ರಿಂಗೆ ತುಂಬಾ ಸಂತೋಷ ಆತು.
      ನಿಂಗೊ ಹೇಳಿದ ಒಂದು ಮಾತಿಲಿ ಇಡೀ ವ್ಯವಸ್ಥೆಲಿಪ್ಪ ದೋಷವ ತಿಳುಸಿದಿ.

      ಎಂಗೊಗೆ ಅರ್ತ ಆತು.
      ಗುರುಗಳೇ, ಬಂದೋಂಡಿರಿ, ಆಶೀರ್ವಾದ ಮಾಡಿಗೊಂಡಿರಿ.
      ತುಂಬಾ ಒಪ್ಪಣ್ಣ ಒಪ್ಪಕ್ಕಂದ್ರು ಇಲ್ಲಿ ಶುದ್ದಿಗಳ ಹೇಳ್ತಾ ಇದ್ದವು.
      ಆಶೀರ್ವಾದ ಮಾಡಿ.
      ~
      ಹರೇರಾಮ.

  15. ಮುರಳಿ ಅಣ್ಣೊ ಎನಗೂ ಒಂದು copy ಕಳಿಸಿ ಕೊಡೆಕ್ಕಾತ..

  16. ಆನೆಂತ ಒಪ್ಪ ಕೊಡುದು ಹೇಳಿ ಗೊಂತಾವುತ್ತಿಲ್ಲೆ. ಆನು ಕೊಡೆಕ್ಕೂ ಹೇಳ್ತದರ ಮೇಲೆ ಒಪ್ಪ ಕೊಟ್ಟವು ಹೇಳಿದ್ದವು, ಅವರೊಟ್ಟಿಂಗೆ ಎನ್ನ ಹೆಸರು ಹಾಕಿ ಓದಿಕ್ಕು ಏ°..
    ಲಾಯ್ಕಾ ಆಯಿದು ಮಿನಿಯಾ○
    ಭೈರಪ್ಪನ ಸಾಕ್ಷಿ ಮತ್ತೆ ನಾಯಿ ನೆರಳು ಕಾದಂಬರಿಯ ಆನು ಓದಿದ್ದೆ.. ಒಳುದ್ದರ ಇನ್ನು ಓದೆಕ್ಕು ಖಂಡಿತಾ ಓದುತ್ತೆ…
    ಕವಲುದೆ ಬರಲಿ, ಕದಲದ್ದೆ ಆನು ಅದರ ಓದುತ್ತೆ …..

  17. oppanna…
    oppango ondarinda ondu sooperiddu…adu odusiyondu hovuttu.
    adu devi saraswathiya gift heli kaanuttu…
    bhairappana kadambariga odida hange aatu.avara kaadambarigo hechhindu maastru mava makko ella odiddara nodida nempu aavuttu.
    avara ”kavalu”kaadambari bidugadeya hottili idara baraddu olleya vishaya.
    ajjakana bava halasina sonte hidukondu kaadu kooidano heli kaantu.
    devi sharade ninagoliyali.innu olleya oppango ninna kainda moodi barali.
    good luck oppanno.

  18. ಲೇಖನ ಭಾರಿ ಲಾಯ್ಕಾಯಿದು.
    ಎನ್ನ ಹತ್ತರೆ “ಅನ್ವೇಷಣೆ” ಯ pdf ಪ್ರತಿ ಇದ್ದು. ಅರಿಂಗಾರು ಬೇಕಾರೆ ಇಲ್ಲಿ ಒಂದು ಒಪ್ಪ ಹಾಕಿ ಅಥವಾ ಒಪ್ಪಣ್ಣ ನ್ಗೆ ಒಂದು ಮಿಂಚೆ ಕಳುಸಿ. ಅವ ಎನಗೆ ಹೇಳುಗು.
    ಅದು digital library ಇಂದ ಇಳುಸಿಯೊಂಡದು.

    ಮುರಳಿ

    1. ಮುರಳಿ…. ಎನಗೊಂದು ಪ್ರತಿ ಇರಳಿ….

      1. ಮುರಳಿ ಅಣ್ಣ.. ಎನಗೂ ಒಂದು ಪ್ರತಿ ಕಳ್ಸಿ ಕೊಡಿ…
        ಭೈರಪ್ಪಜ್ಜನ ’ತಬ್ಬಲಿಯು ನೀನಾದೆ ಮಗನೆ’ ಹೇಳುವ ಕಥೆ ಓದಿದ್ದೆ ಆನು… ಮನಸ್ಸಿಂಗೆ ತುಂಬಾ ನಾಟುತ್ತು.. ಅದರಲ್ಲಿ ಕಾಮಧೇನುವಿನ ಕಥೆ ಹೇಳಿದ್ದವು… ಅದರ ಸುತ್ತಲೂ ಕಥೆಯ ತೆಕ್ಕೊಂಡು ಹೋದ ರೀತಿ ಅದ್ಭುತ…

        1. ಎನ್ನ ಮಿಂಚಂಚೆ ವಿಳಾಸ-sowbhat27@yahoo.co.in
          ಕಾದಂಬರಿಯ ಒಂದು ಪ್ರತಿ ಕಳ್ಸಿಕ್ಕಿ…. ಧನ್ಯವಾದ….

    2. ನಿಂಗೊ http://www.ziddu.com ಗೆ file ನ upload ಮಾಡಿ link ನ ಇಲ್ಲಿ (ಅಥವಾ ಎನ್ನ e-mailಗೆ) ಕಳಿಸಿದರೆ ಎಲ್ಲರಿಂಗೂ ಉಪಯೋಗಕ್ಕೆ ಬಕ್ಕು.link ಕೊಡುವದು allowedo ಹೇಳಿ ಒಪ್ಪಣ್ಣನೇ ಹೇಳಕಷ್ಟೆ. (psshnkr@gmail.com)

      1. ಹೇಂಗೆ, ಒಳ್ಳೆ ವ್ಯಾಪಾರ, ಅಲ್ಲದೋ? 😉
        ಇನ್ನೂ ಬೇಕಾದೋರು ಕೇಳ್ಳಕ್ಕು, ಇದಕ್ಕೆಂತ ಕ್ರಯ ಮಡಗಿದ್ದನಿಲ್ಲೆ ಮಾಣಿ!

        1. ಕೆಲವು ಸೈಟ್ ಗಳಲ್ಲಿ ಲಿಂಕ್ ಕೊಡುವದು not allowed.pdf ಪ್ರತಿ ಮಾಡಿ ಹಂಚುವದು ಕಾನೂನಿನ ಪ್ರಕಾರ ಕಾಪಿರೈಟ್ violation ಅಲ್ಲದೋ? ನಾಳೆ ಭೈರಪ್ಪಜ್ಜ ನಮ್ಮ ಮೇಲೆ ಕೇಸ್ ಹಾಕಿದರೆ ನಾವು ಮತ್ತೆ k.s.bhat ರ ಹಿಡಿಯಕಕ್ಕು!!

  19. ಒಪ್ಪಣ್ಣ, ಭಾರಿ ಲಾಯಿಕ್ಕಿದ್ದು ಬರವಣಿಗೆ. ಓದಿ ಖುಷಿ ಆತು. ಅಲ್ಲಲ್ಲಿ ತೆಳು ಹಾಸ್ಯ ಮನಸಿಗೆ ಮುದ ಕೊಡ್ತು. ೩ ಕಾದಂಬರಿಗಳ ಬಗ್ಗೆ ಚೆಂದದ ಚಿತ್ರಣ. -(ಲಕ್ಕಿಡಿಪ್ಪು ಪುಸ್ತಕದಷ್ಟು ತೆಳುವಿನ ನಾಟಕ ಬರದೋರಿಂಗೆ ಸಿಕ್ಕಿದ್ದಡ, ಇಂತಾ ಮಹಾಕೃತಿಗಳ ಬರದೋರಿಂಗೆ ಎಂತದೂ ಸಿಕ್ಕಿದ್ದಿಲ್ಲೆ – ಹೇಳಿದ° ಪೆರ್ಲದಣ್ಣ. ಈ ಜೆನಕ್ಕೆ ಜ್ಞಾನಪೀಟ ಸಿಕ್ಕೇಕು ಹೇಳಿ ಬೆಂಗುಳೂರಿಲಿಪ್ಪ ಬುದ್ಧಿವಂತರು ಎಲ್ಲೊರುದೇ ಹೇಳ್ತವಡ, ಆದರೆ ಬುದ್ಧಿಜೀವಿಗೊ ಬಿಡ್ತವಿಲ್ಲೆಡ!
    ಪೆರ್ಲದಣ್ಣಂಗೆ ಅದು ಒಳ್ಳೆತ ಕೋಪ ಇದ್ದು!)– ಓದಿ ಮನಸು ತುಂಬಾ ನಕ್ಕುಬಿಟ್ಟೆ. ಇದರ ಜತೆ ‘ಧರ್ಮಶ್ರೀ ‘ ಹಾಗೂ ‘ತಬ್ಬಲಿಯು ನೀನಾದೆ ಮಗನೆ’ ಕೂಡಾ ಭಾರತೀಯ ಜನಜೀವನದ ನಂಬಿಕೆ ಹಾಗೂ ಮತಾಂತರದ ಗೋಸುಂಬೆ ತಾಣದ ಬಗ್ಗೆ ಬಹಳ ಚೆನ್ನಾಗಿ ವಿವರಿಸುತ್ತದೆ. ಧರ್ಮಶ್ರೀ ಕೂಡಾ ದಾಖಲೆ ನಿರ್ಮಿಸಿದ ಪುಸ್ತಕ. ಭೈರಪ್ಪ ನವರು ತಮ್ಮ ಮೊದಲ ಕಾದಂಬರಿಯನ್ನು ಅವರ ಹದಿನೆಂಟನೆ ವರ್ಷದಲ್ಲಿ ಮೊದಲ ಪಿ.ಯು.ಸಿ ಓದುವ ಸಮಯದಲ್ಲಿ ಬರೆದದ್ದು. ಅದೂ ಒಂದು ದಾಖಲೆಯೇ. ಅವರ ಹಲವು ಕಾದಂಬರಿಗಳು ದೇಶದ ಹದಿನಾಲ್ಕಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿದೆ. ಬಹುತೇಕ ಎಲ್ಲ ಕಾದಂಬರಿಗಳು ೧೨ ಕ್ಕೂ ಹೆಚ್ಚು ಮುದ್ರಣ ಕಂಡಿವೆ. ‘ಆವರಣ’ ಕನ್ನಡ ಪುಸ್ತಕ ಕಾದಂಬರಿ ಇತಿಹಾಸದಲ್ಲೇ ದಾಖಲೆ ೨೨ ಮುದ್ರಣ ಕಂಡಿದೆ, ಇನ್ನೂ ಕಾಣುತ್ತಲೇ ಇದೆ. ಇನ್ನು ಬರುತ್ತಿರುವ ಹೊಸ ಕಾದಂಬರಿ ‘ಕವಲು’ ಬಿಡುಗಡೆಗೆ ಮುನ್ನವೇ ಎರಡನೇ ಮುದ್ರಣ ಕಾಣುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಮೊದಲ ಮುದ್ರಣದ ೫೦೦೦ ಪ್ರತಿಗಳಿಗೆ ಈಗಾಗಲೇ ೫೭೦೦ ಪ್ರತಿಗಳ ಬೇಡಿಕೆ ಬಂದಿದ್ದು, ಈಗಾಗಲೇ ಎರಡನೆ ಮುದ್ರಣ ಆಗುತ್ತಿದೆ. ಈ ಟಿವಿ ಯುಗದಲ್ಲಿ ಈ ಪ್ರಮಾಣದಲ್ಲಿ ಓದುಗರನ್ನು ಹೊಂದಿರುವುದು ಅಚ್ಚರಿ ಮತ್ತು ಅವರ ತಾಕತ್ತು ಅದು. ಸಿನೆಮಾದ ಮೊದಲ ಶೋ ಮುಗಿಬಿದ್ದು ನೋಡ್ತಾರಲ್ಲಾ ಹಾಗೆ ಬೈರಪ್ಪನವರ ಕಾದಂಬರಿ ಮೊದಲ ವಾರಕ್ಕೆ ಖಾಲಿ ಆಗಿ, ಜನ ಬ್ಲಾಕ್ ನಲ್ಲಿ ಓದಬೇಕು ಹಾಗಾಗುತ್ತದೆ!. ಅಲ್ಲದೆ ಭೈರಪ್ಪನವರ ಕಾದಂಬರಿ ಬಂದ ೨ ವಾರದಲ್ಲೇ ಅದರ ಕುರಿತು ಖುದ್ದು ಭೈರಪ್ಪನವರೊಂದಿಗೆ ಓದುಗರ ಸಂವಾದ ನಡೆಯುತ್ತದೆ. ಅದಕ್ಕೂ ಸಿಕ್ಕಾಪಟ್ಟೆ ರಶ್. ಸೀಟ್ ಸಿಗಲ್ಲ. ಕಳೆದ ಬಾರಿ ಆವರಣದ ಬಗ್ಗೆ ರಾಜ್ಯದ ಹಲವು ಕಡೆ ಅವರೊಂದಿಗೆ ಸಂವಾದ ನಡೆಯಿತು. ಬೆಂಗಳೂರಲ್ಲಿ ನಾಲ್ಕು ಸಂವಾದ ಆಯ್ತು. ನಾನು ಎಲ್ಲದಕ್ಕೂ ಹೋಗಿದ್ದೆ. ಚರ್ಚೆಯಲ್ಲೂ ಭಾಗವಹಿಸಿದ್ದೆ. ಗೋಖಲೆ ಸಂಸ್ಥೆಯಲ್ಲಿ ನಡೆದ ಸಂವಾದ ಕ್ಕೆ ಇನ್ಫೋಸಿಸ್ ನ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಬಂದಿದ್ದರು. ಈ ಎಪ್ಪತ್ತಾರರ ಇಳಿ ವಯಸ್ಸಲ್ಲೂ ಭೈರಪ್ಪನವರು ತಾವೇ ಓಡಾಡಿ ಅಧ್ಯಯನ ಮಾಡಿ ಕಾದಂಬರಿ ಬರೆದು, ಓದುಗರೊಂದಿಗೆ ನೇರ ಸಂವಾದದಲ್ಲೂ ಭಾಗವಹಿಸುತ್ತಾರೆ. ಕನ್ನಡದಲ್ಲಿ ಯಾರ ಕಾದಂಬರಿಗೆ ಇಂತಹ ಸಂವಾದ ನಡೆಯುತ್ತೆ ಹೇಳಿ. ಅದಕ್ಕೆ ಅವರು ಮೈ ಪರಚಿಕೊಳ್ಳುತ್ತಾರೆ ಅಷ್ಟೇ. ದೇಶಾದ್ಯಂತ ಭೈರಪ್ಪನವರ ಕಾದಂಬರಿಗೆ ಕೋಟ್ಯಾಂತರ ಓದುಗರಿದ್ದಾರೆ. ಭೈರಪ್ಪನವರಿಗೆ ಜ್ಞಾನಪೀಟ ಬರದಿದ್ದರೆ ಬೇಡ, ಅವರು ಜನರ ಹೃದಯ ಪೀಠ ದಲ್ಲಿ ಸದಾ ಇದ್ದೆ ಇರುತ್ತಾರೆ. (ಪೆರ್ಲದಣ್ಣಂಗೆ ಕೋಪ ಕಡಿಮೆ ಮಾಡಿಕೊಳ್ಳಲು ಹೇಳಿ!)
    ‘ಕವಲು’ ಮೊದಲ ದಿನವೇ ಓದಿ ಮುಗಿಸಲು ಕಾತರದಿಂದ ಕಾಯುತ್ತಿದ್ದೇನೆ. ವಂದೇ ….ರಾಚಂ

    1. ನಮಸ್ತೇ ರಾಚಂ!
      ಶುದ್ದಿಗೆ ಒಪ್ಪ ಕೊಟ್ಟದು ತುಂಬಾ ಕೊಶೀ ಆತು.
      ಬಂದೋಂಡಿರಿ, ಬೈಲಿಲಿ ಇಪ್ಪ ಎಲ್ಲಾ ಶುದ್ದಿಗಳ ಓದಿಗೊಂಡಿರಿ.

      ಚೈತ್ರಕಾಲದ ರಶ್ಮಿಯ ಹಾಂಗೆ ನಿಂಗಳ ಒಪ್ಪಂಗೊ ಮಿಂಚಲಿ!!!

  20. ಭೈರಪ್ಪಂಗೆ ಭೈರಪ್ಪನೆe ಸಾಟಿ…ನಿಜವಾಗಿಯೂ ತರ್ಕ ಶಾಸ್ತ್ರ ಪ್ರವೀಣ ..
    ಆವರಣ ಭಾರೀ ಲಾಯ್ಕಿದ್ದು …ಒಂದು ವೇಳೆ ನಿಂಗೊಗೆ ಹೇಳಿದ ವಿಷಯ ಸರಿ ಆಯ್ದಿಲ್ಲೆ ಹೇಳಿ ಕಂಡ್ರುದೆ ಎಂತ ಮಾಡ್ಲೆ ಎಡಿಯ …ಮೈ ಕೈ ಪರಂಕಿಗೊಳೆಕ್ಕಷ್ಟೇ..
    ಎಂತ ಮಾಡ್ಲೆ ಎಡಿಯ ಅಷ್ಟು ಲಾಯಕ ಉದ್ದರಣೆಗೋ..reference ನಂಬರುಗೊ.. 🙂 ಎಲ್ಲಾ ಸರಿ ಆಯ್ದಿಲ್ಲೆ ಹೇಳಿ ಪರಂಕಿಗೊoಡದೆ ಬಂತು..ವಿರುದ್ಧ ವಿಚಾರವಾದಿಗೋ..
    ಎಲ್ಲಾ ಕಾದಂಬರಿಗಳೂ ಹಾಂಗೆ ಸರಿಯೋ ತಪ್ಪೋ ಹೇಳಿ ತರ್ಕಕ್ಕೆ ಓದುವವರನ್ನೂ ೭ ರಸಂಗಳ ಒಟ್ಟಿoಗೆ ಕರಕ್ಕೊಂಡು ಹೋವ್ತು..ಓದುವವರನ್ನೂ..

  21. ಭೈರಪ್ಪನ ಬಗ್ಗೆ ಇದುವರೆಗೆ ಈ ಬಗೆ ವಿವರಣೆ ಬಯಿಂದಿಲ್ಲೆಯಾ ಹೇಳಿ ಆತು.. ತುಂಬಾ ಚೆಂದಲ್ಲಿ ಪೋಣಿಸಿದ್ದೆ ಒಪ್ಪಣ್ಣ, ಭೈರಪ್ಪನವರ ಕಾದಂಬರಿಗಳ ಸರಣಿಯ… ಇನ್ನುದೆ ಅವರ ಕೃತಿಗಳ ಬಗ್ಗೆ ನಿನಗೆ ಹೇಳುದಿಕ್ಕು ಅಲ್ಲದಾ..? ಆಗಲಿ ರಜ ರಜವೇ ಅನಾವರಣಗೊಳ್ಳಲಿ… ಬಹುಷಃ ಪ್ಲೇಗು ಹೇಳ್ತ ಮಹಾಮಾರಿ ಈ ಮಹಾನ್ ವ್ಯಕ್ತಿಯ ಒಳಿಶಿದ್ದು ಸಾರ್ಥಕ ಆತಾ ಹೇಳಿ ಕಾಣ್ತು.. ನಮ್ಮ ಪುಣ್ಯ… ಇಂಥಾ ಒಳ್ಳೆಯ ಕೃತಿಗ ಓದುವ ಭಾಗ್ಯ ಸಿಕ್ಕಿತ್ತು .. ನೀನು ಹೇಳಿದ ಹಾಂಗೆ ಏಸಿಲಿ ತಣ್ಣನ್ಗೆ ಕೂದಂಡು ಬರವವ್ವು ತುಂಬಾ ಜೆನ ಇಕ್ಕು… ಆದರೆ ಬರವ ಮೊದಲು ಸ್ವತಃ ಆ ಜಾಗೆಗೆ ಹೋಗಿ ಅಧ್ಯಯನ ಮಾಡಿ ಬರವವ್ವು ಇವರ ಬಿಟ್ಟರೆ ಬೇರೆ ಸಿಕ್ಕವಾ ಹೇಳಿ ಅಲ್ಲದಾ? ಅನುಭವದ ಸಾರವ ಜನಂಗಳ ಮನಸ್ಸಿಂಗೆ ಮುಟ್ಟುವ ಹಾಂಗೆ ಬರವದೂ ಒಂದು ಕಲೆಯೇ.. ಪೈಸೆ ಕೊಟ್ಟೋ, ಶಿಫಾರಸಿಲೋ ಸಿಕ್ಕುವ ಹಾಂಗಿರ್ತ ಪುರಸ್ಕಾರಂಗ ಹೀಂಗಿಪ್ಪ ವ್ಯಕ್ತಿಗೊಕ್ಕೆ ಸಿಕ್ಕಿದರೆ ಅದು ಸರಸ್ವತಿ ದೇವಿಗೆ ಅವಮಾನ ಅಕ್ಕು.. ಇವಕ್ಕೆ ಜನಂಗಳ ಪುರಸ್ಕಾರವೇ ಅಕ್ಕು.. ಅದರಿಂದ ಅವು ಇನ್ನುದೆ ಸಾರಸ್ವತ ಸೇವೆ ಮಾಡುವ ಹಾಂಗಕ್ಕು… ಸರಸ್ವತಿಯ ಉಪಾಸಕನ ಸಾರಸ್ವತ ಸೇವೆಯ ಎಂಗೊಗೆಲ್ಲಾ ಸಾರ್ಥಕತೆಂದ ಅನಾವರಣ ಮಾಡಿದ್ದೆ ನಿನ್ನ ಮುಂದಾಣ ಪರ್ವನ್ಗ ಚೆಂದಲ್ಲಿ ಕವಲೊಡೆಯಲಿ.. ಒಳ್ಳೆದಾಗಲಿ…

  22. : Bhirappa hindhu dharmada pratinidhi………
    pustakanda pustakake hosaloka kantu…………
    eega “kavalu” bappa samayalli janara dari “kavalu “……..
    tappada hange ninna blogu upayoga aku?……..

  23. ಒಪ್ಪಣ್ಣ….. ಈ ಲೇಖನ ಅವರ “ಕವಲು” ಕಾದಂಬರಿ ಅನಾವರಣಗೊಳ್ಳುತ್ತಿರುವ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತದೆ.

    ಒಂದು ದೇಶದ ಸಂಸ್ಕೃತಿ, ಮೌಲ್ಯಗಳು ಸಾಹಿತ್ಯದ ಮುಖಾಂತರ ಜನರ ಮನ ಮುಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ರೀತಿಯ ಉತ್ತಮ ಕೃತಿಗಳು ದೇಶದ ಜನರ ಮನ ಮುಟ್ಟುವಂತೆ ಬೇರೆ ಯಾವುದರಿಂದಲೂ ಅಷ್ಟು ಪರಿಣಾಮವಾಗುವುದಿಲ್ಲ. ಸಾಹಿತ್ಯದಿಂದ ಓದುಗನ ಮನಸ್ಸಿನ ಮೇಲೆ ನೇರ ಪರಿಣಾಮವಾಗುತ್ತದೆ. ಇತ್ತೀಚಿನ ಸಾಹಿತ್ಯಗಳು ಬರೀ ಪಾಶ್ಚಾತ್ಯ ದೃಷ್ಟಿಕೋನದಿಂದಲೇ ಬರೆಯಲಾಗುತ್ತಿದೆ. ಭಾರತೀಯತೆ ಕಾಣಸಿಗುವುದಿಲ್ಲ.

    ಈ ನೆಲದ ಮೌಲ್ಯ, ಜೀವನ ವಿಧಾನ, ಸಂಸ್ಕೃತಿಗಳನ್ನು ಸಾಹಿತ್ಯದಲ್ಲಿ ವ್ಯಕ್ತಗೋಳಿಸಿದಂತೆ ಬೆರೆ ಯಾವುದರಲ್ಲೂ ಸಮರ್ಥವಾಗಿ ಪ್ರಕಟಮಾಡಲು ಆಗುವುದಿಲ್ಲ. ನಮಗೆ ಸಿಗುವ ಸಾಹಿತ್ಯವೆಲ್ಲವೂ ಪಾಶ್ಚಾತ್ಯ ದೃಷ್ಟಿಕೋನ ಹೊಂದಿದ್ದರೆ ನಮ್ಮ ಮೌಲ್ಯಗಳನ್ನು ಜನರಿಗೆ ತಲಿಪಿಸುವುದಾದರೂ ಹೇಗೆ??

    ಆದರೆ ಎಸ್. ಎಲ್. ಭೈರಪ್ಪನವರ ಕೃತಿಗಳಲ್ಲಿ ಭಾರತೀಯತೆ ಎದ್ದು ಕಾಣುತ್ತದೆ. ಓದುವಾಗ ನಮ್ಮ ನಾಡಿನ, ಧರ್ಮ, ಸಂಸ್ಕೃತಿಗಳ ಪರಿಚಯವಾಗುತ್ತದೆ. ನಮ್ಮ ಜನರ ಮೇಲೆ ಆದ ಅನ್ಯಾಯದ ಚಿತ್ರಣ ಕಣ್ಣಿಗೆ ಕಾಣುತ್ತದೆ. ಎಸ್. ಎಲ್. ಭೈರಪ್ಪನವರ ಕೃತಿಗಳಲ್ಲಿ ಬೇರೆ ಬೇರೆ ಪಾತ್ರಗಳು ಮೂಡಿಬಂದರೂ ಅದರ ಹಿಂದೆ ಎಸ್. ಎಲ್. ಭೈರಪ್ಪನವರ ಅಧ್ಯಯನ ಎದ್ದು ಕಾಣುತ್ತದೆ. ಅವರ “ಆವರಣ” ಕಾದಂಬರಿಯಲ್ಲಂತೂ ಸ್ವತಃ ಅವರು ಅನೇಕ ದಿನಗಳ ಕಾಲ ಅಧ್ಯಯನಕ್ಕಾಗಿ ಹೊರದೇಶಗಳಿಗೂ ಹೋಗಿ ಅಲ್ಲೇ ಇದ್ದು, ವಾಸ್ತವವನ್ನು ಓದುಗನ ಎದುರು ತರುವಲ್ಲಿ ಸಫಲರಾಗಿದ್ದರೆ.

    ನಮ್ಮ ದೇಶದಲ್ಲಿ ಲೇಖಕರ ಇನ್ನೋಂದು ವರ್ಗವಿದೆ. ಅವರನ್ನು ಸಾಮನ್ಯವಾಗಿ “ಬುದ್ದಿಜೀವಿ”ಗಳೆಂದು ಕರೆಯಿತ್ತಾರೆ. “ಆವರಣ” ಕಾದಂಬರಿ ಬಿಡುಗಡೆಯಾದಾಗ ಈ ನಾಡಿನ ಅನೇಕ “ಬುದ್ದಿಜೀವಿ”ಗಳು ಎಂದು ಕರೆಯಿಸಿಕೊಳ್ಳುವವರು ನಾನಾ ರೀತಿಯಲ್ಲಿ ಟೀಕೆ ಟಿಪ್ಪಣಿಗಳನ್ನು ಮಾಡಿದರು. ಈ “ಬುದ್ದಿಜೀವಿ”ಗಳೆಂದು ಕರೆಯಿಸಿಕೊಳ್ಳುವ ಬಹಳಷ್ಟು ಜನ ಈ ದೇಶ, ಸಂಸ್ಕೃತಿ, ಹಿಂದುತ್ವ ಹಾಗೂ ರಾಷ್ತ್ರೀಯ ವಿಚಾರಗಳನ್ನು ವಿರೋಧಿಸುವವರೇ ಆಗಿದ್ದಾರೆ. ಅದೇ ರೀತಿಯ ಬುದ್ಧಿಯನ್ನು “ಆವರಣ” ಕಾದಂಬರಿಯು ಬಿಡುಗಡೆಯಾದ ಸಂದರ್ಭದಲ್ಲಿ ಅವರೆಲ್ಲ ತೋರಿಸಿದರು. ಅದಕ್ಕೆ ಸರಿಯಾದ ಉತ್ತರವನ್ನು ಎಸ್. ಎಲ್. ಭೈರಪ್ಪನವರು ತಮ್ಮ ಹರಿತವಾದ ಮಾತುಗಳ ಮುಖಾಂತರ ನಿಡಿದ್ದಾರೆ ಮತ್ತು ನಾಡಿನ ಅನೇಕರು ವಿಜಯಕರ್ನಾಟಕ ಪತ್ರಿಕೆಯಲ್ಲಿ ಈ ವಿಷಯ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ.

    ನಿಜವಾಗಿ ಎಸ್. ಎಲ್. ಭೈರಪ್ಪನವರು ಈ ದೇಶದ ಬಗ್ಗೆ ಕಾಳಜಿ ಹೊಂದಿರುವ ಒಬ್ಬ ಶ್ರೇಷ್ಥ ಸಾಹಿತಿ ಎಂದೇ ಹೇಳಬಹುದು. ಅದು ಅವರ ಕಾದಂಬರಿ ಹಾಗು ವ್ಯಕ್ತಿತ್ವದಲ್ಲೇ ತಿಳಿಯುತ್ತದೆ. ಇಂತಹ ಮಹನ್ ಲೇಖಕ ಕನ್ನಡ ನಾಡಿನಲ್ಲಿರುವುದು ನಮಗೆಲ್ಲ ಹೆಮ್ಮೆಯ ವಿಷಯವೇ ಸರಿ. ಒಂದು ಕಾದಂಬರಿ ಬರೆಯಲು ಎಸ್. ಎಲ್. ಭೈರಪ್ಪನವರು ಅತ್ಯಂತ ಪರಿಶ್ರಮ ಹಾಕುತ್ತಾರೆ. ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತುರೆ, ಅಪಾಯಗಳನ್ನೂ ಎದುರಿಸುತ್ತರೆ. ಇಷ್ಟೆಲ್ಲಾ ಕಷ್ಟಪಟ್ಟು ಕಾದಂಬರಿಯನ್ನು ಪ್ರಕಟಮಾಡುವುದರ ಹಿಂದೆ ಇರುವ ಕಾಳಜಿಯನ್ನು ನಾವೆಲ್ಲ ಅರ್ಥ ಮಾಡಿಕೋಂಡು ಅವರ ಎಲ್ಲಾ ಕಾದ್ಂಬರಿ ಆಗದಿದ್ರೂ 1-2 (ಆವರಣ ಹಾಗೂ ಪರ್ವ) ಆದರೂ ಓದಿದರೆ, ಈ ಮಹಾನ್ ಲೇಖಕನಿಗೆ ನಾವು ಕೊಡುವ ದೊಡ್ಡ ಗೌರವ ಎಂದು ಕಾಣುತ್ತದೆ.

  24. ಒಪ್ಪಣ್ಣ, ಭೈರಪ್ಪನ 3 ಗ್ರಂಥಂಗಳ ಸಾರವ ಅನಾವರಣ ಮಾಡಿದ್ದು ಲಾಯಿಕ್ ಅಯಿದು.
    ಭೈರಪ್ಪಂಗೆ ಭೈರಪ್ಪನೇ ಸಾಟಿ. ಕೂಲಂಕುಷ ಅಧ್ಯಯನ ಮಾಡಿ ಈ ರೀತಿ ಬರವವು ಬಹಳ ಕಮ್ಮಿ.
    ಇವಕ್ಕೆ ಓದುಗರ ಮೆಚ್ಚುಗೆಯೇ ಪ್ರಶಸ್ತಿ.
    ಸರ್ಕಾರ ಆಯೋಜಿತ ಪ್ರಶಸ್ತಿಗೊ ಸಿಕ್ಕೆಕ್ಕಾರೆ ಬೇಕಾದ್ದು ಪಾಂಡಿತ್ಯ ಅಲ್ಲ. ವಶೀಲಿ ಮಾಡುವ ಬುದ್ದಿ ಅಥವಾ ಹಿಂದೂ ಪದ್ಧತಿಯ ಹೀಯಾಳುಸುವ ಚಾಳಿ.ಹೀಂಗಿಪ್ಪಬುದ್ಧಿ ಜೀವಿಗಳ ಬುದ್ಧಿ ಇಪ್ಪದು ಚೀಲಲ್ಲಿ, ಮಂಡೆ ಒಳದಿಕೆ ಅಲ್ಲ.
    ಭೈರಪ್ಪನವರಿಂದ ಇನ್ನೂ ಒಳ್ಳೊಳ್ಳೆ ಗ್ರಂಥಂಗೊ ಬರಲಿ ಹೇಳಿ ಹಾರೈಸುವೊ

  25. ಇಂದ್ರಾಣ ಕಾಲಲ್ಲಿ ಪ್ರಶಸ್ತಿ ಸಿಕ್ಕಿದ ಪುಸ್ತಕಂಗೊ ಎಲ್ಲ ಒಳ್ಳೆದಿದ್ದು ಹೇಳ್ಳೆ ಸಾಧ್ಯ ಇಲ್ಲೆ. ಇದು ಎಲ್ಲಾ ಕ್ಷೇತ್ರಲ್ಲಿಯೂ ಸತ್ಯ. ಭೈರಪ್ಪಂಗೆ
    ಓದುಗರ ಮೆಚ್ಚುಗೆಯೇ ಪ್ರಶಸ್ತಿ.
    ಬಹುಮಾನ, ಪ್ರಶಸ್ತಿ ಎಲ್ಲಾ ಸಿಕ್ಕಿದ ಎಷ್ಟೋ ಪುಸ್ತಕಂಗಳ ಓದುವಾಗ ಆಶ್ಚರ್ಯ ಆವುತ್ತು, ಹೇಂಗೆ ಪ್ರಶಸ್ತಿ ಬಂತು ಹೇಳಿ. ನಮ್ಮ ಅರವಿಂದ ಅಡಿಗನ ವೈಟ್ ಟೈಗರ್‍ಂಗೆ ಬುಕರ್ ಪ್ರಶಸ್ತಿ ಸಿಕ್ಕಿದ್ದೇ ಇದಕ್ಕೆ ಉದಾಹರಣೆ. ಬುಕರಿಂಗೆ ಆಯ್ಕೆ ಮಾಡ್ಳೆ ಸಣ್ಣ ಪಟ್ಟಿ(ಶೋರ್ಟ್ ಲಿಸ್ಟ್) ಪ್ರಕಟ ಆದ ಕೂಡ್ಳೇ ಅದರ ಓದಿದ್ದೆ. ಅಂಬಗಳೇ ಇದು ಹೇಂಗೆ ಈ ಲಿಸ್ಟಿಂಗೆ ಸೇರಿತ್ತು ಹೇಳಿ ಆಶ್ಚರ್ಯ ಆಯಿದು. ಮತ್ತೆ ಪ್ರಶಸ್ತಿಯೂ ಬಂತನ್ನೆ!
    ಜ್ಞಾನಪೀಠದ ಹಾಂಗಿಪ್ಪ ಪುರಸ್ಕಾರಂಗಳ ಕತೆಯೂ ಇಂದು ಹೀಂಗೆ ಆದ ಹಾಂಗೆ ಕಾಣ್ತು. ಕೆಲವು ಜೆನಕ್ಕೆ ಬುದ್ಧಿಜೀವಿ, ಚಿಂತಕ, ಪ್ರಗತಿಶೀಲ ಹೇಳಿ ಹೆಸರು ಕೊಡುವದು ಆರು? ಎಂತಗೆ?

  26. Bhyrappa na innondu kadambari “Tabbaliyu neenaade magane”

    Especially “Gruhabhanga” mattu “Tabbaliyu neenaade magane” kadambariga odida nantara ondu namooneya teevra vishannataa bhava untu madtu odugange

    Ee eradu kadambarigalallidda jeevaLa oduganaagi enage “AvaraNa” kadambarili sikkiddille. AvaraNa yavade udwega illadde kelavondu satyangala anavaraNa madtu. Adare Mele heLida eradu kadambariga oduganagi enna kaadidastu “AvaraNa” kadiddille.
    Byrappa great!

  27. ಈ ಮಳಗೆ ಹೆರ ಇಳಿವಲೇ ಮನಸ್ಸಾವುತ್ತಿಲ್ಲೆ. ಮನೆಲಿ ಹಲಸಿನ ಸೊಳೆ ಹೊರುದ್ದದು ಅಥವಾ ಉಂಡ್ಳಕಾಳುದೆ ಬೆಶಿ ಕಾಫಿಯೂ ಮಡಿಕ್ಕೊಂಡು ಒಂದು ಕಾದಂಬರಿ ಹಿಡುಕ್ಕೊಂಡು ಓದಲೆ ಎಷ್ಟು ಕೊಶಿ!

    1. ಎಂಗಳ ಮಾಷ್ಟ್ರುಮಾವನ ಮಗ ಹೀಂಗೇ ಓದಿದ್ದರ್ಲಿ ಎಷ್ಟೋ ಕಾದಂಬರಿಯ ಕಾಗತ ತಿಂದು ಮುಗುದ್ದು!
      ಉಂಡ್ಳಕಾಳು ಹಾಂಗೇ ಬಾಕಿ! 😉 🙁

    2. maava helida haange male joru bappaga beshi kaapi kudukkondu bhairappajjana kadambari odle suru maadidare oodinabharalli kaapi kailee baaki akku…….. ashtu chintege ……..allalla chinthanege todagusuva pusthakango……….aanu ella pustakango oodadru nayineralu dhrmasree ella oodidde……….. samajada podumbugala virodhisuva prayatna avana kadambarigalalli khandita aydu… Sthree Shoshaneya bagge. jathi vyavasheya bagge katuvagi teekisidda matte horatada manasthithiya huttu hakuva olle prayatnavuu illi aaydu

  28. ಭ್ಹೈರಪ್ಪ, ಕಾರಂತ – ಇವಿಬ್ಬರ ಎಲ್ಲಾ ಕಾದಂಬರಿಗಳ ಓದಿದ್ದೆ. ಇಬ್ಬರದ್ದೂ ಅವರವರದ್ದೇ ಶೈಲಿ. ಎನಗೆ ಈ ಕಾದಂಬರಿ ಓದುವ ಅಭ್ಯಾಸ ಪೆರ್ಲ ಶಾಲೆಲಿ ಕಲಿವಾಗ ಸುರುವಾದ್ದು. ಕನ್ನಡಲ್ಲಿ ಆ ಕಾಲದ ಹೆಚ್ಚಿನ ಕಾದಂಬರಿಕಾರರ ( ಅ.ನ.ಕೃ., ತ.ರಾ.ಸು., ತ್ರಿವೇಣಿ, ನರಸಿಂಹಯ್ಯ, ಗಳಗನಾಥ, ಇತ್ಯಾದಿ) ಕಾದಂಬರಿಗಳ ಓದಿದರೂ, ಆ ಮೇಲೆ ಓದುವ ಆಸಕ್ತಿ ಒಳುದ್ದದು ಇವಿಬ್ಬರ ಪುಸ್ತಕಂಗಳಲ್ಲಿ ಮಾಂತ್ರ. ತೇಜಸ್ವಿಯ ಕತೆ, ಕಾದಂಬರಿಗಳೂ ಖುಷಿ ಕೊಡುತ್ತು.
    ಒಪ್ಪಣ್ಣ ಬರದ್ದರ ಓದಿ ಇನ್ನೊಂದರಿ ಭೈರಪ್ಪನ ಓದುವ ಮನಸ್ಸಾಯಿದು. ಭೈರಪ್ಪನ ಓದುವದು ಬರೇ ಕತಗಲ್ಲ; ಕತೆ ಓದಿದ ಹಾಂಗೆ ಓದಿದರೆ ಸಾಲ. ವಿಮರ್ಶೆ ಮಾಡುವಂತ ವಿಷಯಂಗೊ ಬೇಕಾದಷ್ಟಿರುತ್ತು. ಭ್ಹೈರಪ್ಪ ಅಂತೆ ಅಂಬ್ರೇಪ್ಪಿಲ್ಲಿ ಗೀಚಿದ್ದಲ್ಲ. ಆದ ಕಾರಣ ಓದುವಾಗಲೂ ನಿದಾನಕ್ಕೆ, ಜೀರ್ಣಿಸೆಂಡು ಓದಿದರೆ ಒಳ್ಳೆದು.
    ಹೇಳಿದ ಹಾಂಗೆ ಒಪ್ಪಣ್ಣ ಮಂದ್ರವ ಓದಿದ್ದಿಲ್ಲೆಯೊ? ಪರ್ವ, ಸಾರ್ಥ, ಆವರಣದೊಟ್ಟಿಂಗೆ ಮಂದ್ರವನ್ನೂ ಸೇರುಸಲೆ ಆವುತಿತ್ತು. ಒಪ್ಪಣ್ಣಂಗೆ ರಜ್ಜ ಸಂಗೀತದ ರಾಗಂಗಳ ಪರಿಚಯ ಇದ್ದಲ್ಲದೋ? ಎನಗೆ ಸಂಗೀತ ಗೊಂತಿಲ್ಲದ್ದ ಕಾರಣ ಮಂದ್ರ ಪೂರ್ತಿ ಜೀರ್ಣಿಸಲೆ ಆಯಿದಿಲ್ಲೆ. ಓದದ್ದರೆ ಒಪ್ಪಣ್ಣ ಓದಲೇ ಬೇಕು. ಓದಿ ಮಾಣಿಗೂ ಕಳಿಸಿಕ್ಕು.

    1. ಒಪ್ಪಣ್ಣಂಗೆ ಸಂಗೀತ ಅರಡಿಗೋ?
      ಚೆ ಚೆ! ಸಾಪಾಸ ಹೇಳುಲೂ ಸರಿ ಬತ್ತಿಲ್ಲೆ.

      ಅಮೇಯಿ ಅತ್ತೆಯಲ್ಲಿಗೆ ಕಲಿವಲೆ ಹೋಯೆಕ್ಕೂಳಿ ಇದ್ದು, ಅವಕ್ಕೆ ಪುರುಸೊತ್ತಿಲ್ಲದ್ದೆ ಬಾಕಿ ಆದ್ದು! 😉
      ಸಂಗೀತ ಕಲ್ತಮತ್ತೆ ಮಂದ್ರ ಓದುದೋ, ಮಂದ್ರ ಓದಿಕ್ಕಿ ಸಂಗೀತ ಕಲಿವದೋ – ದೊಡಾ ಕನುಪ್ಯೂಸು!! 😐

  29. ಭೈರಪ್ಪನ ಪ್ರಸಿದ್ಧ ಕಾದಂಬರಿಗಳ ವಿಮರ್ಶೆ ಹವ್ಯಕ ಭಾಷೆಲಿ ಓದಿ ಭಾರಿ ಕೊಶಿ ಆತು. ಹಲಸಿನ ಸೋಂಟೆ ಒಟ್ಟಿಂಗೆ ಕಾದಂಬರಿಯ ವಿವರಣೆ ಒಳ್ಳೆ ರುಚಿ ಕೊಟ್ಟತ್ತು. ಒಪ್ಪಣ್ಣನ ಬರಹದ ಶೈಲಿ ಏವತ್ರಾಣ ಹಾಂಗೆ ಲಾಯಕಾಯಿದು. ಭೈರಪ್ಪನ ಆವರಣ ಕಾದಂಬರಿ ಓದಿದ್ದೆ. ಯಬ್ಬಾ, ಒಪ್ಪಣ್ಣ ಹೇಳಿದ ಹಾಂಗೆ ಮೈ ರೋಮ ಕುತ್ತ ಆವುತ್ತು. ಅವರ ಎಲ್ಲ ಪುಸ್ತಕವನ್ನು ಪುರುಸೊತ್ತಿಲ್ಲಿ ಓದೆಕು.

    ಹೇಳಿದ ಹಾಂಗೆ, ನಮ್ಮ ಒಪ್ಪಣ್ಣನೂ ಬರೆತ್ತರಲ್ಲಿ ಎಂತೂ ಕಡಮ್ಮೆ ಅಲ್ಲ, “ಒಪ್ಪಣ್ಣನ ಒಪ್ಪಂಗ”ಳ ಪುಸ್ತಕರೂಪಲ್ಲಿ ಪ್ರಕಟ ಮಾಡಿರೆ ಇನ್ನೂ ತುಂಬ ಜೆನಕ್ಕೆ ಎತ್ತುಗು ಹೇಳಿ ಎನ್ನ ಅಭಿಪ್ರಾಯ. ಎಂತ ಹೇಳ್ತಿ ?

    1. ಬೊಳುಂಬುಮಾವ, ಸರಿಯಾಗಿ ಹೇಳಿದಿ.
      ಎಂಗಳ ಗುಣಾಜೆ ಕುಂಞಿಮಾಣಿ ಅಂತೂ ಆವರಣ ಓದಿ ಕತ್ತಿ ಮಸವಲೆ ಹೆರಟಿದನಡ!! 😉

  30. ಈ ಶುದ್ದಿ ತುಂಬಾ ಲಾಯ್ಕಿದ್ದು, ಬುದ್ಧಿಗೆ ಒಳ್ಳೆ ಆಹಾರ!! ವಿಚಾರ ಮಾಡ್ಲೆ ಸರಿಯಾದ ವಿಷಯ 🙂

  31. ಭೈರಪ್ಪಜ್ಜನ ಬಗ್ಗೆ ನೆನಪು ಆಗಿ ಕುಶಿ ಆತು..

    ಶೇಣಿ ಅಜ್ಜನ ಅರ್ಥ ಹೇಳುವಗ ನೆನಪ್ಪಾತು.. ಶೇಣಿ ಭಾರತ, ಶೇಣಿ ರಾಮಾಯಣ ಹೇಳಿ ೨ ಪುಸ್ತಕ ಬಯಿ೦ದು.. ಮಹಾಭರತ-ರಾಮಾಯಣ ಪಾತ್ರ೦ಗೊಕ್ಕೆ ಶೇಣಿ ಅಜ್ಜ ಹೇಳಿದ ಅರ್ಥ೦ಗಳ ಸೇರ್ಸಿ ಮಾಡಿದ ಪುಸ್ತಕ.. ಪರ್ವ ಓದಿ ಕುಶಿ ಆದರೆ ಇದರ ಓದಿಯೂ ಅಷ್ಟೆ ಕುಶಿ ಅಕ್ಕು ಹೇಳಿ ಕಾಣುತ್ತು..

    ಭೈರಪ್ಪಜ್ಜ ಪರ್ವಲ್ಲಿ ಬರದ ಪ್ರಕಾರ ಆ ಕಾಲಲ್ಲಿ ಬ್ರಾ೦ಬರೂ ಕ್ಷತ್ರಿಯರೂ ದನ/ಎತ್ತಿನ ಮಾ೦ಸ ತಿ೦ದುಗೊ೦ಡಿತ್ತಿದ್ದವಡ.. ಅದರ ಎಲ್ಲ ಯಾವಗ ನಿಲ್ಸಿದ್ದು ಹೇಳಿ ಅ೦ದಾಜಿಲ್ಲೆ!..

    1. ಶೇಣಿ ಅಜ್ಜನ ಬಗ್ಗೆ ತುಂಬಾ ವಿಶಯಂಗೊ ಇದ್ದಡ, ಬಾಯಾರು ರಾಜಣ್ಣನ ಕೇಸೆಟ್ಟಿನ ಕಟ್ಟಲ್ಲಿ.
      ಪುರುಸೋತಿಲಿ ಕೇಳೆಕ್ಕೊಂದರಿ!

      ಎತ್ತಿನ ಮಾಂಸದ ಬಗ್ಗೆ ಒಪ್ಪಣ್ಣಂಗರಡಿಯ! 😐

      1. ಎತ್ತಿನ ಮಾ೦ಸದ ಬಗ್ಗೆ ಎನಗೂ ಅರಡಿಯ.. ಭೈರಪ್ಪಜ್ಜ ಎಲ್ಲಿಯದರೂ ಸಿಕ್ಕಿರೆ ಕೇಳೆಕ್ಕು ಹೇಳಿ ಇದ್ದೆ 🙂

        ಬಾಯಾರು ರಾಜಣ್ಣನ ಕೆಸೆಟ್ಟಿನ ಕಟ್ಟಕ್ಕೆ ಕಣ್ಣು ಹಾಕಿದ್ದೆ ಅಲ್ಲದ 🙂

  32. ಭೈರಪ್ಪನ ಹೊಸ ಕಾದಂಬರಿ ಬಪ್ಪ ಹೊತ್ತಿಂಗೆ ಸರಿಯಾಗಿ ಬಂದ ಒಪ್ಪಣ್ಣನ ಲೇಖನ ಓದಿ ಕೊಶಿ ಆತು. ಆನು ಅವರ ಎಲ್ಲ ಕಾದಂಬರಿ ಓದಿದ್ದಿಲ್ಲೆ. ಅವಕಾಶ ಸಿಕ್ಕಿರೆ ಓದೆಕ್ಕು ಹೇಳಿ ಇದ್ದು. ಕಳುದ ಸರ್ತಿ ಬಂದ ‘ಆವರಣ’ ಮೂರು ದಿನಲ್ಲಿ ಓದಿ ಮುಗುಶಿದ್ದೆ. ಭಾರೀ ಲಾಯ್ಕ ಆಯಿದು. ಒಳ್ಳೆ ಸಂಗ್ರಹ ಯೋಗ್ಯ ಪುಸ್ತಕಂಗೊ.

    1. ಓದಿ ಓದಿ!
      ಓದಲೆ ಪುರುಸೊತ್ತು ಸಿಕ್ಕದ್ರೆ ಅಂಬೆರ್ಪಿಲಿ ಪಟ ಆದರೂ ತೆಗದು ಮಡಗಿ.
      ಮತ್ತೆ ಮನೆಗೆ ಬಂದು ಪುರುಸೋತಿಲಿ ಓದಲಕ್ಕಿದಾ, ಮನೆಯೋರು ಕೆಲಸ ಹೇಳದ್ರೆ 😉

  33. ಅದ್ಭುತ ಲೇಖನ. ಭೈರಪ್ಪಜ್ಜಂಗೆ ಸಾರ್ಥಕ ನುಡಿನಮನ.
    ಅವರ ಕಾದಂಬರಿಗೊ ಬಿಡುಗಡೆ ಆದ ದಿನವೇ ಪೂರ ಕಾಲಿ ಅಪ್ಪಷ್ಟು ಪ್ರಸಿದ್ಧ ಆಗಿದ್ದರೂ ಅದರ ಬಗ್ಗೆ ಬರವವ್ವು ಕಮ್ಮಿ. ತುಂಬಾ ಖುಷಿ ಆತು. ಒಳ್ಳೆ ಶುದ್ದಿ ಮಾಡಿದ್ದಿ.
    ಗಂಭೀರ ವಿಚಾರಂಗಳ ನಡುಕೆ ನೆಗೆಯನ್ನೂ ಸೇರ್ಸಿ ಬರದ ಶೈಲಿದೇ ಭಾರೀ ಲಾಯ್ಕಾಯಿದು.
    ಹಿಂದೆ ಇಲ್ಲದ್ದ, ಮುಂದೆ ಬಾರದ್ದ ಅಪ್ರತಿಮ ಕಾದಂಬರಿಕಾರ ಭೈರಪ್ಪಜ್ಜ ಅಲ್ದಾ?
    ಚೆ, ಇಷ್ಟೆಲ್ಲ ಅಧ್ಯಯನ ಮಾಡಿ, ಅಷ್ಟು ಒಳ್ಳೊಳ್ಳೆ ಕಾದಂಬರಿಗಳ ಕೊಟ್ಟವಕ್ಕೆ ಜ್ಞಾನಪೀಠಂದಲೂ ದೊಡ್ಡ ಪ್ರಶಸ್ತಿ ಸಿಕ್ಕೆಕ್ಕಾತು ಸತ್ಯಕ್ಕಾರೆ.
    ಆದರೆ ಅವಕ್ಕೆ ಈ ಯಾವ ಪ್ರಶಸ್ತಿಗಳಲ್ಲೂ ನಂಬಿಕೆ ಇಲ್ಲೆಡ. “ಸೃಜನಶೀಲ ಪ್ರೊಸೆಸ್ ಮುಂದೆ ಯಾವ ಪ್ರಶಸ್ತಿಗೂ ಬೆಲೆ ಇಲ್ಲ. ಜ್ಞಾನಪೀಠಕ್ಕೂ.” – ಹೇಳಿ ಹೇಳಿದ್ದವಡ ಅವು. ಅಪ್ಪಾದ ಮಾತೇ ಅಲ್ಲದಾ?

    1. ಬಂಡಾಡಿ ಅಜ್ಜಿ ಮಾಡಿದ ಹಸರಸೀವು ಕುಡುದಷ್ಟು ಕೊಶಿ ಆತು ಒಪ್ಪಣ್ಣಂಗೆ 🙂
      ಬೈರಪ್ಪಜ್ಜಂಗೆ ಇನ್ನೂ ನೂರೊರಿಶ ಆಯಿಶ್ಯ ಇರಳಿ, ಅಲ್ಲದೋ?

    2. I have lot of Kannada Novel soft copies (Authors: Triveni,BV Ananthram, SLB, Yandamuri, Saisute, MK Indira, KP Tejaswi, Karant, etc etc), If anyone want please send me mail at basusg@gmail.com, i will send download links

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×