Oppanna.com

ಪಾತಾಳ ಗಂಗೆಯ ತೆಗದರೆ ನಾವುದೇ ಪಾತಾಳಕ್ಕೇ ಎತ್ತುಗು!

ಬರದೋರು :   ಒಪ್ಪಣ್ಣ    on   12/05/2017    6 ಒಪ್ಪಂಗೊ

ಮೊನ್ನೆ ಹೊತ್ತೋಪಗ ಮಾಷ್ಟ್ರುಮಾವನಲ್ಲಿಗೆ ಹೋಗಿತ್ತಿದ್ದೆ. ಅತ್ತೆ ಮಾಂಬುಳ ಮಾಡುವ ಕಾರಣ ಒಂದು ದಿನ ಆದರೂ ಮಾವಿನಣ್ಣು ಹೆರ್ಕಿ ಕೊಡದ್ದರೆ ಮಳೆಗಾಲ ಒಂದು ತುಂಡಾದರೂ ಸಿಕ್ಕೆಡದೋ. ಹಾಂಗೆ ಮಾವಿನಣ್ಣು ಹೆರ್ಕಲೆ ಹೇದು ಹೋಪಾಗ, ಅಲ್ಲೇ ಮಾರ್ಗದ ಕರೆಲಿ ಇದ್ದಿದ್ದ ಪೇರಳ ಸೆಸಿ ಮುರುದು ಬಿದ್ದುಗೊಂಡು ಕಂಡತ್ತು. ಆ ಸೆಸಿಂದ ಕೆಂಪು ತಿರುಳಿನ ಪೇರಳೆ ಹಲವೂ ತಿಂದ ನೆಂಪು ಒಪ್ಪಣ್ಣಂಗೆ ಇದ್ದು, ಇದೆಂತ ಸಂಗತಿ ಮುರುದ್ದಪ್ಪಾ – ಹೇದು ಕಂಡತ್ತು.

ಮಾವಿನಣ್ಣು ಹೆರ್ಕಿಗೊಂಡಿಪ್ಪಾಗ ಮಾಷ್ಟ್ರುಮಾವ ಇರುಳಾಣ ದೇವರ ಪೂಜೆಗೆ ಹೂಗು ಕೊಯಿವಲೆ ಹೇದು ಬಂದವು. ಅಷ್ಟಪ್ಪಾಗ ಕೇಳಿದೆ – ಇದೆಂತ ಮಾಷ್ಟ್ರುಮಾವಾ, ಪೇರಳೆ ಗೆಡು ಲಾಯ್ಕಿತ್ತು, ತುಂಡಾತಪ್ಪೋ – ಹೇದು.
ಅಷ್ಟಪ್ಪಾಗ – ಅಪ್ಪು ಒಪ್ಪಣ್ಣ, ಮೊನ್ನೆ ಬೆಳುಲು ತಂದಿತ್ತಲ್ಲದೋ ಮೊಯಿದುಞ್ಞಿ, ಅದರ ಭೀಮಗಾತ್ರದ ಲೋರಿ ರಿವರ್ಸು ತೆಗವಾಗ ಈ ಪೇರಳೆ ಗೆಡು ಅಡಿಯಂಗೆ ಹಾಕಿತ್ತು – ಹೇದವು.
ಅಪ್ಪೋ, ಛೇ – ಹೇದು ಒಪ್ಪಣ್ಣಂಗೆ ಬೇಜಾರಾತು.

ಅಷ್ಟು ಮಾಂತ್ರ ಅಲ್ಲ, ಆ ಪೇರಳೆ ಗೆಡುವಿಂಗೆ ಒಂದು ಜಾಜಿಮಲ್ಲಿಗೆ ಗೆಡು ಹಬ್ಬಿತ್ತು; ಹಳೇ ಬಳ್ಳಿ – ಹಣ್ಣಡಕ್ಕೆಯಷ್ಟು ತೋರ ಆಗಿದ್ದತ್ತು. ಪೇರಳೆ ಮರ ಅಡ್ಡ ಬಿದ್ದ ಕಾರಣ – ಬಳ್ಳಿಗೆ ಏನು ಆಗದ್ದೆ ಇದ್ದರೂ – ಅದುದೇ ಅಡ್ಡ ಬಿದ್ದಿತ್ತು. ಈಗ ರಜ ಹೂಗು-ಮುಕುಟು ಇಪ್ಪ ಕಾರಣ ಅದನ್ನೇ ಕೊಯಿವಲೆ ಮಾಷ್ಟ್ರುಮಾವ ಬಂದದು.
ಒಪ್ಪಣ್ಣ ಮಾವಿನಣ್ಣು ಹೆರ್ಕಿಗೊಂಡು ಇತ್ತಿದ್ದೆ, ಮಾಷ್ಟ್ರುಮಾವ ಹೂಗು ಕೊಯಿಕ್ಕೊಂಡು ಇತ್ತಿದ್ದವು. ಇಬ್ರೂ ಅವರವರ ಕೆಲಸ ಮಾಡಿಗೊಂಡು ಇಪ್ಪಾಗ – ಮಾಷ್ಟ್ರುಮಾವ ಹೇಳಿದವು – ನೋಡು ಒಪ್ಪಣ್ಣಾ, ಮನುಷ್ಯ ಪ್ರಕೃತಿಗೆ ಕೈ ಹಾಕಲಾಗ. ಒಂದು ವಿತ್ಯಾಸ ಮಾಡ್ತೆ ಹೇದು ಹೆರಟ್ರೆ ಅದನ್ನೇ ನಂಬಿದ್ದ ಇನ್ನೊಂದನ್ನೂ ವಿತ್ಯಾಸ ಮಾಡಿಗೊಂಡೇ ಮುಂದರಿತ್ತು – ಹೇದವು.
~
ಅಪ್ಪನ್ನೇ ಕಂಡತ್ತು.
ಆ ಜಾಜಿ ಮಲ್ಲಿಗೆ ಗೆಡು ಪೇರಳೆ ಮರವ ನಂಬಿ ಬದ್ಕಿದ್ದತ್ತು. ಇಬ್ರಿಂಗೂ ಪರಸ್ಪರ ಹಾನಿ ಇದ್ದತ್ತಿಲ್ಲೆ. ಆದರೆ ಯೇವಾಗ ಬೆಳುಲಿನ ಲೋರಿ ಪೇರಳೆ ಮರವ ತುಂಡು ಮಾಡಿತ್ತೋ, ಅಷ್ಟಪ್ಪಾಗ, ಅದನ್ನೇ ನಂಬಿದ್ದ ಜಾಜಿ ಮಲ್ಲಿಗೆಯೂ ಬೀಳೆಕ್ಕಾಗಿ ಬಂತು. ಇನ್ನು ಜಾಜಿಮಲ್ಲಿಗೆ ಗೆಡುವಿಂಗೆ ಸೂರ್ಯನ ನೋಡ್ಳೆ ಎಂತ ಗೆತಿ? ಅನಿವಾರ್ಯವಾಗಿ ಒಂದೋ ಬೇರೆ ಮರಕ್ಕೆ ಹತ್ತುಸಿ ಬಿಡೆಕ್ಕು – ಅಲ್ಲದ್ದರೆ ಅದನ್ನೇ ಪೊರ್ಪಿ ಬೇರೆ ದಿಕ್ಕೆ ನೆಡೇಕು. ಅಲ್ದೋ?
ಈಗಾಣ ಸುಮಾರು ಸಂಗತಿಗಳ ನೋಡುವಾಗ ಮಾಷ್ಟ್ರುಮಾವ ಹೇಳಿದ್ದು ನೆಂಪಾವುತ್ತು.
~
ಕರ್ನಾಟ ಸರಕಾರದ್ದು ಪಾತಾಳಗಂಗೆ – ಹೇದು ಒಂದು ಯೋಜನೆ ಇದ್ದಾಡ. ಕುಡಿವ ನೀರಿಂಗೆ ತತ್ವಾರ ಆದ ಹೊಡೆಲಿ ಪಾತಾಳಂದ ನೀರು ಎಳೆತ್ತ ಯೋಜನೆ ಅಡ. ಎಷ್ಟು ಅಡಿಯಂದ? – ಸುಮಾರು ಮೂರು ಕಿಲೋಮೀಟ್ರು ಅಡಿಯಂದ!!
ಅಲ್ಲಿಂದ ಭೂಗರ್ಭಕ್ಕೆ ತುಂಬ ದೂರ ಇಲ್ಲೆ!

ಮದಲಿಂಗೆ ಬಿಡು ನೀರು ಇದ್ದತ್ತು ನಮ್ಮ ಜಾಗೆಗಳಲ್ಲಿ. ಹೇದರೆ, ಒರತ್ತೆ, ಬೆಟ್ಟೊರತ್ತೆ ಹೇದು ಧಾರಾಳ ನೀರು ಹರ್ಕೊಂಡು ಇತ್ತು.
ಕ್ರಮೇಣ ಬಾವಿ ತೆಗದಪ್ಪಗ ಬಾವಿಗಳಲ್ಲಿ ನೀರು ಕಾಂಬಲೆ ಸುರು ಆತು. ಅಲ್ಲಿ ಖಾಲಿ ಮಾಡಿದಷ್ಟೂ ತುಂಬಿತ್ತು.
ಮತ್ತೂ ಮುಂದುವರುದು ಬೋರು-ವೆಲ್ಲು ತೆಗದವು. ಭೂಮಿಗೇ ಇಂಜೆಕ್ಷನು ಕೊಡುವ ಹಾಂಗೆ. ಬೊಂಡಕ್ಕೆ ಷ್ಟ್ರಾ ಹಾಕಿದ ಹಾಂಗೆ ಅಡೀಯಂದ ಎಳದವು. ಎನಗೆ ಆರಿಂಚು ನೀರು, ಮೂರಿಂಚು ನೀರು ಹೇದು ಖುಷಿ ಪಟ್ಟವು. ಆದರೆ, ಅಡಿಲಿಪ್ಪ ಬೊಂಡ ನೀರು ಮುಗಿತ್ತು ಹೇಳ್ತ ಬೊಂಡು ನವಗೂ ಬೇಡದೋ!?
ಈಗ, ಅದರಿಂದಲೂ ಅಡಿಲಿಪ್ಪ ನೀರಿಂಗೆ ಕೈ ಹಾಕಿದ್ದು ಸರ್ಕಾರದ ಯೋಜನೆ!
~
ಸಮುದ್ರದ ನೀರು ಭೂಪರದಲ್ಲೆ ಆಗಿ ಕೆಳ ಇಳುದು, ಅಡಿ ಅಡಿ ಅಡಿಯಂಗೆ ಹೋಗಿ ಅಪ್ಪಾಗ, ಭೂಗರ್ಭದ ಬೆಷಿಗೆ ಆವಿ ಆಗಿ ಆ ಪದರಂಗಳಲ್ಲಿ ಶೇಖರಣೆ ಆದ ನೀರು ಅದು. ಅದಕ್ಕೇ ಕೈ ಹಾಗಿ ಎಳವ ಯೋಜನೆ. ಬೋರುವೆಲ್ಲಿನ ಹಾಂಗೇ ಇನ್ನೊಂದು ದೊಡ್ಡ ಬೋರುವೆಲ್ಲು ಅಷ್ಟೆ.
ಇಂದಲ್ಲ ನಾಳೆ ಇದಕ್ಕೂ ಬೊಂಡನೀರಿನ ಗೆತಿಯೇ ಬಕ್ಕು- ಹೇದು ಏಕೆ ಆಲೋಚನೆ ಬತ್ತಿಲ್ಲೆ ನವಗೆ!

ಭೂಗರ್ಭಕ್ಕೆ ಕೈ ಹಾಕಿರೆ ಮತ್ತೆ ಇನ್ನೇನಾರು ಅನಾಹುತ ಆದರೆ!
ಅಥವಾ ಅಲ್ಲಿಯಾಣ ನೀರು ಮುಗುಶಿ ಅಲ್ಲಿಯಾಣ ಬೇಲೆನ್ಸು ವಿತ್ಯಾಸ ಆದರೆ!
ಪೇರಳ ಮರ ಬೀಳುವಾಗ ಜಾಜಿ ಮಲ್ಲಿಗೆಯನ್ನೂ ಬೀಳುಸಿದ ಹಾಂಗೆ ಈ ನೀರು ತೆಗವಾಗ ಇನ್ನೇನಾರು ಆದರೆ!?

~
ಹಾಂಗಾಗಿ – ನೀರಿನನ ಪ್ರಥಮ & ಕೊನೆಯ ಆಯ್ಕೆ – ಮಳೆನೀರಿನ ಸಂಗ್ರಹವೇ – ಹೇಳ್ತರ ನಾವು ಯೋಚನೆ ಮಾಡೇಕು. ಆಕಾಶಂದ ಬೀಳ್ತ ನೀರಿನ ಹಿಡುದು ಮಡುಗೇಕು.
ಓಡ್ತ ನೀರಿನ ನಿಲ್ಲುಸೇಕು, ನಿಂದ ನೀರಿನ ಒರಗುಸೇಕು – ಇದುವೇ ಇಂಗುಸುವ ಚಿಂತನೆ.

ಪೊಟ್ಟು ಬಾವಿಗೆ ನೀರು ತುಂಬುಸಿರೆ ಅದು ಹಿಡುದು ಮಡಿಕ್ಕೊಳ್ತು.
ಪೊಟ್ಟು ಕೆರೆಗೆ ಕಟ್ಟೆ ಕಟ್ಟಿ ನೀರು ಇಳುಸಿದರೆ ಬೇಸಗೆಲಿ ಕೊಡ್ತು.
ಪೊಟ್ಟು ಬೋರುವೆಲ್ಲಿನ ಮುಚ್ಚುದಲ್ಲ, ಅದಕ್ಕೆ ನೀರು ನಾಕೊರಿಶ ತುಂಬುಸಿದರೆ ಐದನೇ ಒರಿಶ ಅದು ಒಪಾಸು ಚಿಗುರುತ್ತು!
ಮೊದಲು ಪೊಟ್ಟು ಅಪ್ಪಲೆ ಕಾರಣವೂ ನಾವೇ. ಈಗ ಅದಕ್ಕೆ ಪುನಾ ನೀರು ತುಂಬುಸೆಕ್ಕಾದೋರೂ ನಾವೇ!
ಅಲ್ದೋ?
~
ಜೆಂಬ್ರಲ್ಲಿ ಉಂಡಿಕ್ಕಿ ಕೈತೊಳವಲೆ ನವಗೆ ಇನ್ನೊಬ್ಬರು ನೀರು ತುಂಬಿದ ಪಾಟೆ ಕೊಡ್ತವು. ನಾವುದೇ ಕೈತೊಳದ ಮತ್ತೆ ಮತ್ತಾಣೋರಿಂಗೆ ನೀರು ತುಂಬುಸಿ ಕೊಡ್ತು. ಇದೇ ರೀತಿ – ನಮ್ಮ ಹೆರಿಯೋರು ಒಳುಶಿಕೊಟ್ಟ ನೀರಿನ ನಮ್ಮ ಮತ್ತಾಣೋರಿಂಗೆ ತುಂಬುಸಿ ಕೊಡುವೊ. ಅಲ್ದೋ?

ಒಂದೊಪ್ಪ: ಪಾತಾಳ ಹುಡ್ಕಿರೆ ನಾವುದೇ ಪಾತಾಳಕ್ಕೆ ಎತ್ತುಗು. ಆಕಾಶ ಹುಡ್ಕಿರೆ ನಾವುದೇ ಆಕಾಶ ಎತ್ತುಗು. ಎಂತ ಹೇಳ್ತಿ?

6 thoughts on “ಪಾತಾಳ ಗಂಗೆಯ ತೆಗದರೆ ನಾವುದೇ ಪಾತಾಳಕ್ಕೇ ಎತ್ತುಗು!

  1. ಎಲ್ಲ ಬೋರೆವೆಲ್ಲಿಂಗು (ಪೊಟ್ಟು, ಸರಿಇಪ್ಪದು) ಕಡ್ಡಾಯವಾಗಿ ಮಳೆ ನೀರಿಂಗಿಸುವ ಕಾನೂನು ದೇಶಾದ್ಯಂತ ತಪ್ಪ ಹಾಂಗೆ ಮೋದಿ ಅಜ್ಜಂಗೆ ಬರೆವ ಎಲ್ಲೋರುದೆ…. ಯಾವ ಬೋರೆವೆಲ್ಲಿಂಗೆ ಮಳೆ ನೀರಿಂಗಿಸುವ ವ್ಯವಸ್ಥೆ ಇಲ್ಲೆಯೋ, ಹಾಂಗಿಪ್ಪ ಬೋರೆವೆಲ್ಲಿಂಗೆ ಕರೆಂಟ್ ಕನೆಕ್ಷನ್ ಕೋಡ್ಲಾಗ ಸರ್ಕಾರ.. ಅಂಬಗ ಎಲ್ಲೋರುದೆ ಈ ವ್ಯವಸ್ಥೆಯ ಕಡ್ಡಾಯವಾಗಿ ಪಾಲಿಸುಗು

  2. ಗಲ್ಫಿನೋರ ಹಾಂಗೆ ಸಮುದ್ರನೀರು ಉಯೋಗುಸುಲಾಗದ ಇವಕ್ಕೆ?
    ಯಾವತ್ತೂ ಖಾಲಿಯಾಗದ ಜಲಸಂಪನ್ಮೂಲ ಅದು.
    ಎಲ್ಲಾ ತುಘಲಕ್ ರಾಜ್ಯಭಾರ.

  3. ಮೂರು ಕಿಲೋಮೀಟರ್ ಹೊಂಡ ತೋಡಿರೆ ಲಾವಾರಸ ಮೇಲೆ ಹಾರುಗು ಮಿನಿಯಾ, ಜಾಗ್ರತೆ. ಯೋಚನೆ ಇಲ್ಲದ್ದ ಯೋಜನೆಗಳ ಒಂದೊಂದು ಮಾಡ್ತವು ಇವು. ಯೋ ರಾಮಾ.

  4. ಸರ್ಕಾರದ ಒಂದೊಂದು ಯೋಜನೆಗಳ ಕಾಂಬಗ ಇದು ಆರಿಂಗೆ ಬೇಕಾಗಿ ಮಾಡುವದು ಗೊಂತಾವ್ತಿಲ್ಲೆ.
    ನೇತ್ರಾವತಿ ತಿರುವು ಯೋಜನೆ, ಈಗ ಪಾತಾಳಗಂಗೆ ಯೋಜನೆ.
    ಗಂಗೆ ಪಾತಾಳಲ್ಲಿ ಇಪ್ಪದು ಅಲ್ಲ ಹೇಳಿ ಏಕೆ ಅರ್ಥ ಆವ್ತಿಲ್ಲೆ ಗೊಂತಿಲ್ಲೆ,
    ೨೦೦-೩೦೦ ಅಡಿಂದ ಸಿಕ್ಕುವ ಬೋರ್ ವೆಲ್ ನೀರೇ ಕುಡಿವಲೆ ಯೋಗ್ಯ ಆಗಿರ್ತಿಲ್ಲೆ. ಇನ್ನು ಕಿಲೋಮೀಟರ್ ಅಡಿಂದ ಸಿಕ್ಕುವ ನೀರು ಹೇಂಗಿಕ್ಕು?ಲವಣಯುಕ್ತ ನೀರು ಕುಡಿವಲಂತೂ ಯೋಗ್ಯವಾಗಿರ ಹೇಳುವದು ಸತ್ಯ

  5. ಅಪ್ಪಪ್ಪು…. ನಿಂಗ ಎಲ್ಲ ನೀರು ಇಂಗುಸಿ ಆತ… ಆನೊಂದು ಬೋರು ಹೊಡೆಶುತ್ತೆ…

  6. ಒಟ್ಟಾರೆ ಅಂಬಗಂಬಾಣ ವಿಲೆವಾರಿ ಆದರಾತು ಹೇದಿದ್ದರೆ ಎಂತರ ಮಾಡ್ಸು! ಸರಕಾರ ಹೇದು ಒಂದು ಇಪ್ಪದು ದೀರ್ಘಾಲೋಚನೆ ಮಾಡ್ಳೆ ಇಪ್ಪದು. ಅದರೆ ಅದರ ಚುಕ್ಕಾಣಿ ಹಿಡುದವು ಮಾರಾಪು ಹೆಗಲ್ಲಿ ನೇಲ್ಸಿ ನಿಂದೊಂಡಿದ್ದರೆ ಮಾರಾಪಿನ ಜಾಗ್ರತೆ ಮಾಡ್ಸೋ ಜನರ ಸರಕಾರ ಭದ್ರೋ ಮಾಡ್ಸೋ ಹೇದು ಗೊಂತಾಗೆಡದೊ ಬಾವಾ. ಶುದ್ದಿಗೊಂದೊಪ್ಪ ಹೇತು ಚೆನ್ನೈವಾಣಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×