Oppanna.com

ಹೊತ್ತು ಕಳಿವ ಮೊದಲು ಬತ್ತ “ಪತ್ತನಾಜೆ” ತಂಬಲ!!

ಬರದೋರು :   ಒಪ್ಪಣ್ಣ    on   27/05/2011    41 ಒಪ್ಪಂಗೊ

ದೊಡ್ಡಜ್ಜನ ಮನೆಲಿ ದೊಡ್ಡಮಾವನ ದೊಡ್ಡಪುಳ್ಳಿಗೆ ಉಪ್ನಾನ ಮೊನ್ನೆ ಕಳುದ್ದಷ್ಟೆ.
ಅದರ ಮರದಿನವೇ ದೊಡ್ಡಬಾವನ ದೊಡ್ಡಮನೆಯ ದೊಡ್ಡಜಾಲಿಲಿ ದೊಡ್ಡಮಾಣಿಗೆ ಉಪ್ನಾನ!
‘ಮೇಗಂದ ಮೇಗೆ ಹೋಳಿಗೆ ತಿನುಸಿ ನೆರೆಕರೆಯೋರ ಸೋಲುಸೇಕುಹೇಳಿ ಅತ್ತಿತ್ತೆ ಮಾತಾಡಿಗೊಂಡೇ ಮಾಡಿದ ಹಾಂಗಿತ್ತು’ ಹೇಳಿ ನೆಗೆಮಾಣಿ ಬೇಜಾರ ಮಾಡಿತ್ತಿದ್ದ°.
ಆದರೆ, ಆರುದೇ ಸೋತಿದವಿಲ್ಲೆ ಮಾಂತ್ರ! ಜೆಂಬ್ರದ ಮನೆಯೋರುದೇ ಗೆದ್ದವು – ನೆರೆಕರೆಯೋರುದೇ ಗೆದ್ದವು.
ಎಲ್ಲೋರುದೇ ಗೆದ್ದು ಕೊಶಿಲಿದ್ದರೂ, ನೆಗೆಮಾಣಿ ಮಾಂತ್ರ ಬೇಜಾರೇ ಬೇಜಾರು – ‘ಬೆನ್ನು ಬೆನ್ನು ಜೆಂಬ್ರಂಗೊ ಬಂದ ಕಾರಣ ಹೋಳಿಗೆ ತಿಂಬಲಾಯಿದಿಲ್ಲೇ’ ಹೇದು. ಅದಿರಳಿ.

ಅಲ್ಲದ್ರೂ, ಶಾಕಪಾಕಂಗೊ ನೋಡಿರೆ ಅತ್ತಿತ್ತೆ ಮಾತಾಡಿಗೊಂಡೇ ಮಾಡಿದ ಹಾಂಗಿತ್ತು.
ಜೆಂಬ್ರದ್ದಿನದ ದೇವರು – ಹೋಳಿಗೆ ಎರಡೂ ದಿಕ್ಕೆ ಇದ್ದದು ಬಿಟ್ರೆ ಬೇರೇವದೂ ಎರಡೂ ದಿಕ್ಕೆ ಇದ್ದತ್ತಿಲ್ಲೆ.
ಒಂದಿಕ್ಕೆ ಬಾಳೆಣ್ಣು ಹಲ್ವ, ಇನ್ನೊಂದಿಕ್ಕೆ ಮಯಿಸೂರುಪಾಕು.
ಒಂದಿಕ್ಕೆ ಜೀಗುಜ್ಜೆಪೋಡಿ, ಇನ್ನೊಂದಿಕ್ಕೆ ಮೆಣಸಿನಪೋಡಿ. ಒಂದಿಕ್ಕೆ ಲಾಡು, ಇನ್ನೊಂದಿಕ್ಕೆ ಪ್ರುಟ್ಸಲಾಡು!
ಸುಬಗಣ್ಣಂಗೆ ಅಂತೂ ಪ್ರುಟ್ಸಲಾಡು – ಅಯಿಸ್ಕ್ರೀಮು ಎರಡರದ್ದೂ ರುಚಿ ನೋಡೇಕಾಗಿ ಬಂದು – ‘ಮನೆದೇವರಿಂಗೆ ಗೊಂತಾದರೆ ಬಯ್ಯದ್ದೆ ಇರವು’ ಹೇಳಿ ಹೆದರುಸಿದ ಮತ್ತೆಯೇ ನಿಲ್ಲುಸಿದ್ದು!!
ಈಗ ಶೀತ ಹೇಳಿಗೊಂಡು ಕುಣಿಯ ಹೊಗೆಸೊಪ್ಪು ತುಂಬ ಬೇಕಾವುತ್ತು! ಅದಿರಳಿ.
~

ಜೆಂಬ್ರದ್ದಿನ ಹೇಳಿರೆ ಎಷ್ಟು ಗೌಜಿಯೋ, ಜೆಂಬ್ರದ ಮರದಿನ ಹೇಳಿರೆ ಅಷ್ಟೇ ಬಂಙ ಹೇಳಿ ರಂಗಮಾವ ಒಂದೊಂದರಿ ನೆಗೆಮಾಡ್ಳಿದ್ದು! 😉
ಅಪ್ಪು, ಬೆಣ್ತಕ್ಕಿ ಅಶನ ಉಂಡ್ರೆ ಕುಚ್ಚಿಲು ಹೆಜ್ಜೆ ಉಂಡಾಂಗೆ ಆವುತ್ತೋ? ಜಾಸ್ತಿ ಗೇಸಿನ ಹೋಳಿಗೆಯೂ ತಿಂದ ಕಾರಣ ಹೊಟ್ಟೆ ವಿತ್ಯಾಸ ಬಪ್ಪದೂ ಇದ್ದು.
ಬೈಲಿನ ಎಲ್ಲೋರಿಂಗೂ ಜೆಂಬ್ರದೂಟ ಉಣ್ತ ಕೆಲಸ. ದಿನಮರದಿನ ಆಗಿ ತಿಂದ ಕಾರಣ ದಶಮೂಲ ಕುಡಿತ್ತ ಕೆಲಸ!
ಕೆಲವು ಜೆನ ಅವರದ್ದೇ ದಶಮೂಲ ಕುಪ್ಪಿಯನ್ನೂ ಚೀಲಲ್ಲಿ ತುಂಬುಸಿ ತೆಕ್ಕೊಂಡಿದವಡ, ಚೆನ್ನೈಭಾವ ಹೇಳಿತ್ತಿದ್ದವು.

ಜೆಂಬ್ರದೂಟ ಉಂಡಿಕ್ಕಿ ಹೊಟ್ಟೆ ತಂಪಾಯೇಕಾರೆ ಎಂತ ಮಾಡೇಕು? ಬೈಲಿಲಿ ಅದೂ ಒಂದು ಚರ್ಚೆಯೇ ಈಗ!
ಮೊನ್ನೆ ಹೊತ್ತೋಪಗ ಬೈಲಿನೋರೆಲ್ಲ ಕೂದೊಂಡು ಮಾತಾಡುವಗ ರಜ ಕುಶಾಲು ಬಂತು.
ಸುಬ್ರಾಯನ ಅಂಗುಡಿಲಿ ಸೋಡ ಕುಡಿಯೇಕು – ಕೆಲವು ಜೆನ ಹೇಳುಗು. ಇನ್ನೂ ಕೆಲವು ಜೆನ ನಿಂಬೆಹುಳಿ ಶರ್ಬತ್ತು ಉಪ್ಪಾಕಿ ಕುಡಿಯೇಕು – ಹೇಳುಗು!
ಅತವಾ ಬಚ್ಚಂಗಾಯಿಯ ನಮುನೆ ನೀರಟೆ ತಿಂದರೂ ಹೊಟ್ಟೆ ಸರಿ ಆವುತ್ತು ಹೇಳ್ತವು. ಯೇವದೂ ಬೇಡ, ಬರೇ ನೀರು ಒಂದು ಚೆಂಬು ಕುಡುದರೆ ಸಾಕು ಹೇಳುಗು ಮತ್ತೆ ಕೆಲವು ಜೆನ.
ಅದೂ ಅಲ್ಲದ್ದರೆ ಬೊಂಡ ಕುಡುದರೆ ಸಾಕು – ಹೇಳುಗು ಕೆಲವು ಜೆನ.
ಬೇರೆಲ್ಲವೂ ಅಕ್ಕು, ಬೊಂಡ ಕುಡಿಯೇಕಾರೆ ಬಾಬು ತೆಗದುಕೊಟ್ಟೇ ಆಯೆಕ್ಕಟ್ಟೆ, ಅಲ್ಲದೋ? ಕೇಳಿದೆ.
ಹ್ಮ್, ಬೈಲಮೂಲೆಗೆ ಹೋದರೆ ಪತ್ತನಾಜೆ ತಂಬಲಕ್ಕೆ ಬಾಬು ತೆಗದು ಮಡಗಿದ ಬೊಂಡ ಸುಮಾರು ಇಕ್ಕು, ಹೇಳಿದವು ಗಣೇಶಮಾವ°.
ಎಲ್ಲೊರು ಒಂದರಿ ನೆಗೆಹೊಟ್ಟುಸಿದವು!
~
ಅಪ್ಪು, ಬೈಲಮೂಲೆಲಿ ಮೋಹನಬಂಟ ಇದ್ದು. ಮೋಹನ ಬಂಟ ಬಪ್ಪ ಮೊದಲೇ ಬೈಲಮೂಲೆ ಜಾಗೆ ಇದ್ದು.
ಆ ಜಾಗೆಗೆ ಸಮ್ಮಂದಪಟ್ಟ ಒಂದು ಬೂತಸ್ತಾನ ಇದ್ದು. ಆ ಬೂತಸ್ಥಾನಲ್ಲಿ ಒಂದಷ್ಟು ಬೂತಂಗಳೂ ಇದ್ದು.
ಬೈಲಮೂಲೆ ಜಾಗೆಯ ಈಗ ಎಷ್ಟು ತುಂಡುಮಾಡಿ ಹೆರಾಣೋರಿಂಗೆ ಕೊಟ್ರೂ, ’ಆ ಸಮಸ್ತ ಜಾಗೆಯ ಅಧಿಪತಿ, ರಕ್ಷಕ ಈ ಬೂತಸ್ಥಾನದ ಒಳದಿಕೆ ಕೂದಿಪ್ಪ ಬೂತಂಗೊ’ ಹೇಳ್ತದು ಅಂದಿಂದ ನೆಡಕ್ಕೊಂಡು ಬಂದ ಅಚಲ ನಂಬಿಕೆ.

ಜಾಗೆಯ ಅಧಿಪತಿ ಬೂತಂಗೊ ಆದರೂ, ಅವು ಜಾಗೆಂದ ಉದ್ಪತ್ತಿ ಏನೂ ತೆಕ್ಕೊಳವು.
ಜಾಗೆಂದ ಬಪ್ಪ ಸಮಸ್ತ ಉದುಪ್ಪತ್ತಿಯೂ ಜಾಗೆಯ ಆರು ವಹಿಸಿಗೊಂಡಿದನೋ, ಅವಂಗೇ ಇಪ್ಪದು. ಅದು ಗೊಂತಿಪ್ಪದೇ.
ಆದರೆ, ಆ ಜಾಗೆಯ ರಕ್ಷಣಾಧಿಪತಿಗೊ ಆದ ಆ ಭೂತಂಗೊಕ್ಕೆ ಏನಾರು ಕೊಟ್ಟು ಕೃತಜ್ಞತೆ ತೋರುಸೆಡದೋ?
ಅವು ಕಾದ ಕಾರಣ ಅಲ್ಲದೋ, ಅಲ್ಲಿ ಕೃಷಿಮಾಡ್ತೋರಿಂಗೆ ಏನಾರು ಸಿಕ್ಕುತ್ತದು? ಅದು ಕಾದ ಕಾರಣ ಅಲ್ಲದೋ – ಆ ಜಾಗೆಲಿ ಎಂತದೂ ಉಪದ್ರ ಇಲ್ಲದ್ದೆ ಜೆನಂಗೊ ಬದುಕ್ಕುದು?
ಅಪ್ಪು. ಹಾಂಗೆ ನಮ್ಮ ನಂಬಿಕೆ.
ಹಾಂಗಾಗಿ, ಆ ಬೈಲಮೂಲೆ ಬೂತಸ್ತಾನದ ಒಳ ಇರ್ತ ಬೂತಂಗೊಕ್ಕೆ ಆ ಜಾಗೆಂದಲೇ ಸಿಕ್ಕಿದ ಫಲವಸ್ತು ಬೊಂಡವ ಕೊಟ್ಟು, ಮುಂದಂಗೂ ಹೀಂಗೇ ಕಾಪಾಡು ದೈವವೇ – ಹೇಳಿ ಪ್ರಾರ್ಥನೆ ಮಾಡ್ತದು ಒರಿಶವೂ ಇದ್ದು.
ಒಂದು ಸಣ್ಣ ಭಗ್ತಿಕಾರ್ಯದ ಮೂಲಕ ಈ ಸಮರ್ಪಣೆಯ ಮಾಡ್ತದು ನಮ್ಮ ಸಂಸ್ಕಾರಲ್ಲಿ ನೆಡಕ್ಕೊಂಡು ಬಯಿಂದು.
ಮೊನ್ನೆ ನೆರೆಕರೆಲಿ ಮಾತಾಡುವಗಳೂ ಈ ಶುದ್ದಿ ಬಂತು.
ಆ ಕ್ರಿಯೆಯ ಹೆಸರೆಂತರ? ಅದರ ಮಾಡುದು ಆರು? ಯೇವತ್ತು? ಅದರ ವಿಧಿವಿಧಾನಂಗೊ ಎಂತರ?
~
ತುಳುನಾಡಿಲಿ ಬೂತಂಗೊ ಧಾರಾಳ.
ಬೂತ ಹೇಳಿರೆ ಪೊರ್ಬುಗಳ ಕತೆಗಳಲ್ಲಿ ಬತ್ತ ಪ್ರೇತಂಗೊ ಅಲ್ಲ; ಇವು ಉಪ-ದೇವರುಗೊ.
ದೇವರುಗೊ ಕೊಟ್ಟ ಆಜ್ಞೆಗಳ ನೆಡೆಶುತ್ತ ನಿಷ್ಠೆಯ ಆಳುಗೊ.
ಪ್ರತಿ ತರವಾಡಿಂಗೊಂದೊಂದು, ಪ್ರತಿ ಕುಲಕ್ಕೊಂದೊಂದು ಮುಖ್ಯ ಬೂತ ಇರ್ತು. ಅದರೊಟ್ಟಿಂಗೆ ಸುಮಾರು ಉಪ ಬೂತಂಗೊ.
ದೇವರ ಕೋಪ ಕಾಂಬಲೆ ಎರಡು ತಲೆಮಾರು ಕಾಣೆಕ್ಕಾರೆ, ಬೂತದ ಕೋಪ ಕಾಂಬಲೆ ಪುರ್ಸೊತ್ತಿಲ್ಲೆ, ಅದೇ ತಲೆಮಾರಿಲಿ ಕಂಡಾವುತ್ತು – ಹೇಳುಗು ಬಟ್ಯ.

ಈಗೀಗ ಬೂತಸ್ಥಾನಂಗೊಕ್ಕೆ ಭರ್ಜರಿ ಬೂತಸ್ಥಾನಂಗೊ ಕಟ್ಟಿ ಬೆಳದರೂ, ಮದಲಿಂಗೆ ಅವಕ್ಕೆ ದೊಡ್ಡ ಉಪಚಾರ ಏನಿತ್ತಿಲ್ಲೆ.
ಓ ಅಲ್ಲಿ, ತೋಟದ ಮೂಲೆಯ ತೋಡಕರೆಲಿ ಒಂದು ಕಲ್ಲಿಂಗೆ ಆವಾಹನೆ ಮಾಡುಗು, ಅಷ್ಟೆ. ಕೆಲವು ಬೂತಂಗೊಕ್ಕೆ ಮುರಕಲ್ಲುದೇ ಸಾಕಾವುತ್ತು.
ಕೆಲವು ದಿಕ್ಕೆ ತ್ರಿಶೂಲ, ಕಡ್ತಲೆ (ಕಡ್ಪಕತ್ತಿ) ಎಲ್ಲ ಮಡಗ್ಗು.
ಸಾಮಾನ್ಯವಾಗಿ ಈ ಬೂತದ ಕಲ್ಲಿಪ್ಪಲ್ಲಿ ದೊಡಾ ಮರ ಇಕ್ಕು. ಅದರ ಸುತ್ತುಮುತ್ತ ರಜ ಬಲ್ಲೆಯೂ.
ಅಷ್ಟು ಜಾಗೆ ಆ ಭೂತದ್ದೇ. ಅದಕ್ಕೆ ಜೆನಂಗೊ ಸರಾಗ ಹೋಪಲಿಲ್ಲೆ. ಯೇವ ಮರ ಕಡುದರೂ ಆ ಮರ ಕಡಿವಲಿಲ್ಲೆ. ಅದರ್ಲಿಯೂ ಬೂತ ಇದ್ದು ಹೇಳಿ ನಂಬಿಕೆ ಇದಾ!
ಒಟ್ಟಾಗಿ ಇದಕ್ಕೆ “ಬನ” (/ ವನ) ಹೇಳುಗು ಊರಿಲಿ.
~
ಬೂತಂಗಳ ದಿನಿಗೇಳಿ, ಒಂದು ನೈವೇದ್ಯ ಮಾಡಿ ಸಂತೃಪ್ತಿ ಮಾಡಿ ಕಳುಸುತ್ತದೇ “ತಂಬಲ”.
ತಂಬಲ ಶಬ್ದದ ಮೂಲ ಸಂಸ್ಕೃತ ಎಂತಾರಿಕ್ಕೋ – ಒಪ್ಪಣ್ಣಂಗರಡಿಯ! ಡಾಮಹೇಶಣ್ಣನ ಕೈಲಿಯೋ, ವಿದ್ವಾನಣ್ಣನ ಕೈಲಿಯೋ ಮತ್ತೊ ಕೇಳೆಕ್ಕಟ್ಟೆ.
ತಂಬಲ, ತಂಬಿಲ – ಹೇಳಿ ಹೇಳ್ತವು. ಬಟ್ಯ° ಇದರ ತಂಬಿಲೊ – ಹೇಳುಗು, ತುಳುವಿನ ಪ್ರಭಾವಲ್ಲಿ.

ಮಂತ್ರ – ತಂತ್ರಕ್ಕೆ ಪ್ರಾಧಾನ್ಯತೆ ಇಪ್ಪ ವೈದಿಕ ವಿಧಿವಿಧಾನಂಗೊ ಅಲ್ಲಿ ಇಪ್ಪದಲ್ಲ, ಮಂತ್ರವೇ ಇಲ್ಲದ್ದೆ ಮೌನಲ್ಲೇ ಮಾಡ್ಳಾವುತ್ತ ಕಾರ್ಯಂಗೊ ಇಪ್ಪದು.
ಮದಲಿಂಗೆ ಬಟ್ಟಮಾವಂದ್ರು ಹೋಯೇಕು ಹೇಳಿ ಇಲ್ಲೆ; ಬೂತದ ಪೂಜಾರಿ ಬಂದರೆ ಸಾಕಕ್ಕು.
ಅಪ್ಪು, ವೈದಿಕರು ಮಾಡುದರಿಂದ ಮದಲಿಂಗೆ ಇದರ ಅವ್ವೇ ಮಾಡಿಗೊಂಡಿತ್ತಿದ್ದವು.
ಪಟ್ಟೆ ಸುತ್ತಿಂಡು, ಗೋಪಿ ನಾಮ ಎಳಕ್ಕೊಂಡು ಇರೆಕ್ಕಾದ ಶುದ್ಧ ಮುಖ್ಯ ಅಲ್ಲ, ಬದಲಾಗಿ ಶುಚಿಯಾಗಿ ಶ್ರದ್ಧೆಲಿ ಇದ್ದರೆ ಸಾಕು.
ಈಗೀಗ ಈ ಕಾರ್ಯ ಒಯಿದೀಕರಿಂದ ಮಾಡಲ್ಪಡ್ತರೂ, ಮೂಲತಃ ಮದಲಿಂಗೆ ಅದೊಂದು ಶುದ್ಧ ದ್ರಾವಿಡ ಆಚರಣೆ ಅಡ, ಮಾಷ್ಟ್ರುಮಾವ° ಹೇಳುಗು.
~
ಜಾಗೆಗೇ ಸಮ್ಮಂದಪಟ್ಟ ಇನ್ನೊಂದು ಶೆಗ್ತಿ – ನಾಗಂಗೊ.
ಕೊಡೆಯಾಲ ಹೋಬಳಿಯ ಜಾಗೆಗೆ ಪರಶುರಾಮ ಸೃಷ್ಠಿ ಹೇಳ್ತವು. ಪರಶುರಾಮ ಆ ಜಾಗೆಯ ನವಗೆ ಕೊಡುವ ಮದಲಿಂಗೆ ಅಲ್ಲಿ ನಾಗಂಗಳೇ ಇದ್ದದಡ.
ಅವರ ಹತ್ತರೆ ಕೇಳಿ ನವಗೆ ಕೊಟ್ಟ ಕಾರಣ, ನಾವು ಆ ಜಾಗೆಯ ಮಹಾಧಿಪತಿ ನಾಗದೇವರ ನೆಂಪುಮಾಡೇಕು ಹೇಳ್ತದು ನಂಬಿಕೆ.
ಹಾಂಗಾಗಿ ನಾಗಂಗೊಕ್ಕೂ ಅದೇ ತತ್ವಲ್ಲಿ ಆವಾಹನೆ, ಪ್ರತಿಷ್ಠೆ, ತಂಬಲ ನೆಡೆತ್ತು ಬೈಲಿಲಿ.
ತೋಟದಕರೆ ಒಂದು ಕಲ್ಲಿಂಗೆ ಅನಂತಾದ್ಯಷ್ಟಕುಲ ನಾಗದೇವರ ಆವಾಹನೆ ಮಾಡಿರ್ತವು. ದೊಡಾ ಮರದ ಬುಡಲ್ಲಿ ಬಲ್ಲೆ ಬೆಳದಿರ್ತಿದಾ, ಒಟ್ಟಾಗಿ ನಾಗಬನ ಹೇಳ್ತವು ಅದಕ್ಕೆ!
ನಾಗ ಹೇಳಿರೆ ನೇರವಾಗಿ ದೇವರ ಅಂಶವೇ ಆದ ಕಾರಣ ನಾಗನ ಎಲ್ಲಾ ಕ್ರಿಯೆಯನ್ನೂ ಬ್ರಹ್ಮಸಮಾಜವೇ ಮಾಡ್ತು.
ನಮ್ಮ ಬೈಲಿಲಿಯೂ ನಾಗದೇವರಿಂಗೆ ಹಾಲೆರದು ತಂಬಲ ಕೊಡ್ಳೆ ಒಯಿದೀಕರು ಹೋವುತ್ತವು. ಇದೊಂದು ವೈದೀಕ ಆಚರಣೆಯೇ ಹೇಳ್ತದರ ಮಾಷ್ಟ್ರುಮಾವ ಒಪ್ಪುತ್ತವು.
ಒಟ್ಟಿಲಿ ತಂಬಲ ಹೇಳಿರೆ ದ್ರಾವಿಡ ಆಚರಣೆಯ ವೈದಿಕ ರೂಪಲ್ಲಿ ಮಾಡ್ತ ಸುಂದರ ಕಾರ್ಯ.
~
ನಮ್ಮ ಬೈಲಮೂಲೆಲಿ ಇರ್ತ ಮೋಹನಬಂಟನಲ್ಲಿಯೂ ತಂಬಲ ನೆಡೆತ್ತು. ಯೇವತ್ತು? ಅದೇ, ಪತ್ತನಾಜೆ ದಿನ!!
ಪತ್ತನಾಜೆ – ಹೇಳಿರೆ ಶುದ್ಧತುಳು ಶೆಬ್ದ.
ಬೇಸಗೆ ತಿಂಗಳಿನ (ವೃಷಭಮಾಸ) ಹತ್ತನೇ ಹೊದ್ದು (ದಿನ) ಅಲ್ಲದೋ ಈ ಪತ್ತನಾಜೆ – ಹಾಂಗಾಗಿ ಪತ್ತನೇ ಆಜೆ (ಹತ್ತನೇ ದಿನ) ಹೇಳುಗು ಇದರ.
ಆ ಜಾಗಗೆ ಸಮ್ಮಂದಪಡ್ತ ಒಂದು ನಾಗನ ಕಟ್ಟೆಯೂ, ಬೂತಸ್ಥಾನವೂ ಇದ್ದಲ್ಲದೋ – ಆ ಶೆಗ್ತಿಗೊಕ್ಕೆ ಸೇವೆಮಾಡ್ತ ದಿನ.
ನಾಗನಕಟ್ಟೆ ಇದ್ದಕಾರಣ ಅಲ್ಲಿ ಒಯಿದಿಕ ರೀತಿಲೇ ಅಪ್ಪದು.
ಮದಲಿಂಗೆ ಸಣ್ಣ ನಾಗನ ಕಟ್ಟೆಯೂ, ಬೂತದ ಕಲ್ಲುದೇ ಮರಂಗಳ ಎಡೆಲಿ ಸ್ವಾಭಾವಿಕವಾಗಿ ಇದ್ದತ್ತು.
ಪತ್ನಾಜೆಮುನ್ನಾಣದಿನ ಬನದ ಹತ್ತರೆ ಬೆಳದ ಬಲ್ಲೆಯ ರಜರಜ ಕಡುದು ಬಟ್ಟಮಾವಂಗೂ, ನಾಕುಜೆನ ಬೈಲಿನೋರು ಬತ್ತವಕ್ಕೂ ನಿಂಬ ನಮುನೆ ಮುನ್ನಾಣದಿನವೇ ಮಾಡುಸಿಗೊಂಡು ಇತ್ತು ಮೋಹನಬಂಟ.
ಆಚೊರಿಶ ಆ ಮರಂಗೊ ಪೂರ ಕಡುದು, ತಂತ್ರಿಗೊ ಬಂದು ಗವೂಜಿಲಿ ಕಟ್ಟೆಯೂ, ಬೂತಸ್ಥಾನವೂ ಮಾಡಿದವು.
ಈಗ ಸಿಮೆಂಟಿನ ಬೆಶಿಲಿ ನಿಂಬಲೆಡಿತ್ತಿಲ್ಲೆ – ಹೇಳ್ತ ಆಚಮನೆ ದೊಡ್ಡಣ್ಣ! ಅದಿರಳಿ.
~
ಪತ್ನಾಜೆದಿನ ಉದಿಯಪ್ಪಗಳೇ ಬಟ್ಟಮಾವ ಹೋಕು, “ಪತ್ನಾಜೆ ತಂಬಲ” ನಡೆಶಿಕೊಡ್ಳೆ.
ಮದಾಲು ನಾಗನ ಕಟ್ಟೆಯ ಹತ್ತರೆ ಬಂದು ತಂಬಲ ಕಾರ್ಯ ಮಾಡುಗು.

ನಾಗತಂಬಿಲ:
ಆಗಲೇ ಹೇಳಿದಾಂಗೆ, ನಾಗನ ಸೇವೆಗೆ ರಜರಜ ಒಯಿದೀಕ ಕ್ರಮಂಗೊ ಇರ್ತು.
ಸಣ್ಣ ಕೌಳಿಗೆಲಿ ಪಂಚಗವ್ಯ ಮಾಡಿದ ಬಟ್ಟಮಾವ ಸಣ್ಣಕೆ ’ಆಪೋಹಿಷ್ಠಾ..’ ಮಂತ್ರ ಹೇಳಿಗೊಂಡು ಪ್ರೋಕ್ಷಣೆ ಮಾಡುಗು.
ಹೀಂಗೆ ಪ್ರೋಕ್ಷಣಾಭಿಶೇಕ ಆದ ಮತ್ತೆ, ನಾಗನ ತಲಗೆ ಎರಡು ಹೂಗು ಮಡಗ್ಗು. ಸಣ್ಣ ಸಂಕಲ್ಪವೂ ಮಾಡುಗು.
ಇಂತಾ ದಿನ, ಇಂತಾ ಕಾರ್ಯ ಮಾಡ್ತೆ ಹೇಳಿ ನಾಗನ ಹತ್ತರೆ ಹೇಳಿದ ಮತ್ತೆಯೇ, ಅಂದ್ರಾಣ ತಂಬಿಲ ಸುರು.

ಸುರೂವಿಂಗೆ ನಾಗನ ಸರೀ ಮೀಶುಗು ಒಂದರಿ.
ಕಳುದೊರಿಶ ಪತ್ನಾಜೆಗಲ್ಲದೋ ಮೀಶಿದ್ದು, ಹಾಂಗಾಗಿ ಒಂದೊರಿಶದ ಹಾಮಾಸು ಎಲ್ಲ ಇರ್ತು ಅದರ್ಲಿ!
ನಾಗಂಗೆ ಮಿಂದಪ್ಪದ್ದೇ, ಬೊಂಡಾಭಿಷೇಕ ಸುರು!
ಬೊಂಡವುದೇ ಹಾಂಗೆ, ಆ ಜಾಗೆಲಿ ಆರೆಲ್ಲ ಅಶನಮಾಡಿ ಉಣ್ತವೋ, ಆ ಎಲ್ಲೋರುದೇ ಒಂದೊಂದಾರೂ ಬೊಂಡ ತೆಕ್ಕೊಂಡು ಬಕ್ಕು.
ಹಾಂಗಾಗಿ, ಬೈಲಮೂಲೆ ಜಾಗೆಗೆ ಸಮ್ಮಂದಪಟ್ಟ ಹತ್ತಿಪ್ಪತ್ತು ಬೊಂಡಂಗೊ ಇರ್ತು, ಅಭಿಷೇಕಕ್ಕೆ.
ನಾಗನ ತಲಗೆ ಅಭಿಷೇಕ ಆದ ಬೊಂಡದ ನೀರು, ಆಚೊಡೆಲಿ ಸಣ್ಣ ಪೈಪಿಲಿ ತೀರ್ಥ ಆಗಿ ಬತ್ತು – ಬೊಂಡ ತಂದ ನೆರೆಕರೆಯೋರು ಒಂದು ಕುಪ್ಪಿಯೂ ತಂದಿರ್ತವಿದಾ!

ಬೊಂಡಾಭಿಷೇಕ ಆದ ಮೇಗೆ ಪುನಾ ಒಂದರಿ ನೀರಿಲಿ ಮೀಶಲಿದ್ದು! ಅಷ್ಟು ಆದ ಮತ್ತೆ ಹಾಲಿನ ಅಭಿಷೇಕ. ನಾಗಂಗೆ ಹಾಲು ಹೇಳಿರೆ ಭಾರೀ ಇಷ್ಟ ಅಡ.
ಹಾಂಗೆ, ಒಂದು ಸೂಕ್ತ ಹೇಳಿಗೊಂಡು ’ನಾಗಂಗೆ ಹಾಲೆರವ’ ಕಾರ್ಯ ನೆಡೆಶುಗು ಬಟ್ಟಮಾವ.
ಹಾಲಭಿಷೇಕ ಆದ ಮತ್ತೆ ಪುನಾ ಒಂದರಿ “ಶುದ್ಧೋದಕ ಸ್ನಾನಂ” ಹೇಳಿ ನೀರಿಲಿ ಮೀಶುಗು.
ಅಭಿಷೇಕ ಎಲ್ಲ ಸ್ವೀಕಾರ ಆದ ಮೇಗೆ, ಅರ್ಚನೆ ಅಲ್ಲದೋ?

ನಾಗದೇವರಿಂಗೆ ತಂಬಿಲದ ಅಗೇಲು ಮಡಗಿದ್ದು!

ನಾಗಂಗೆ ವಿಶೇಷವಾದ ಅರಿಶಿನಹೊಡಿಯ ಮೈ ಇಡೀಕ ಕಾಂಬ ಹಾಂಗೆ ಅರ್ಚನೆ ಮಾಡುಗು ಬಟ್ಟಮಾವ.
ಅರ್ಚನೆ ಆದ ಮತ್ತೆ ಒಂದರಿ ಮೈಯ ಉದ್ದುಗು. ನಾಗನ ಮೈಯ ವೃತ್ತಂಗಳ ಕಲ್ಲಿಲೇ ಕೆತ್ತುತ್ತವಲ್ಲದೋ – ಆ ಚಡಿಗಳಲ್ಲಿ ಅರುಶಿನ ಹೊಡಿ ನಿಂದು ತುಂಬ ಚೆಂದ ಕಾಣ್ತ ಅಷ್ಟಪ್ಪಗ.
ಅರ್ಚನೆ ಮುಗುದ ಮತ್ತೆ ಅಲಂಕಾರ ಅಲ್ಲದೋ?
ನಾಗಂಗೆ ಸಿಂಗಾರ ವಿಶೇಷ. ಹಾಂಗಾಗಿ ನೆರೆಕರೆಯೋರು ಬೊಂಡದೊಟ್ಟಿಂಗೆ ಸಿಂಗಾರವೂ ತಕ್ಕಿದಾ, ಧಾರಾಳ ಸಿಂಗಾರಲ್ಲಿ ಚೆಂದಕೆ ಅಲಂಕಾರ ಮಾಡುಗು.

ಇಷ್ಟಪ್ಪಗ ಇನ್ನು ನೈವೇದ್ಯದ ಸರದಿ!
ಎರಡು ಬಾಳೆಲೆ ಮಡಗಿ, ಅದಕ್ಕೆ ಒಂದು ನಾಕು ಮುಷ್ಟಿ ಹೊದಳು ಹಾಕಿ, ಎರಡು ಬಾಳೆ ಹಣ್ಣುದೂ, ಒಂತುಂಡು ಬೆಲ್ಲದೂ ಮಡಗಿ, ಒಂದು ಬೊಂಡವೂ ಮಡಗ್ಗು.
ಇದಕ್ಕೆ “ಅಗೇಲು” ಹೇಳುಗು ಬಟ್ಯ! ತಂದ ಎಲ್ಲ ನೈವೇದ್ಯ ಹಣ್ಣುಕಾಯಿಗಳನ್ನೂ ಸಮರ್ಪಣೆ ಮಾಡ್ಳೆ ಮಡಗ್ಗು. ಒಟ್ಟಿಂಗೆ ಒಂದು ನೈವೇದ್ಯ ಮಾಡುಗು.
ಒಂದು ಮಂಗಳಾರತಿ ಕೊಟ್ಟು, ತುಳುವಿಲಿ ಸಣ್ಣ ಪ್ರಾರ್ತನೆ ಮಾಡಿ ಪ್ರಸಾದ ತೆಕ್ಕೊಂಡ್ರೆ ಆ ಒರಿಶದ ನಾಗನ ತಂಬಿಲ ಮುಗಾತು.

ಮತ್ತೆ ಹೋಪದು ಬೂತಸ್ಥಾನಕ್ಕೆ.

ಭೂತ ತಂಬಲ:
ಅದೊಂದು ಬೂತಸ್ಥಾನಲ್ಲಿ ನಾಕು ಬೂತಂಗೊ ಇದ್ದಾಡ.
ಲಕ್ಕೇಸಿರಿ (ರಕ್ತೇಶ್ವರಿ), ಜುಮಾದಿ (ಧೂಮಾವತಿ), ಪಂಜುರುಳಿ ( / ಪಂಜುರ್ಲಿ) (ಹಂದಿಮೋರೆ ಇರ್ತದು), ಪಿಲಿಚ್ಚಾಮುಂಡಿ (ಹುಲಿ ಮೇಲಿಪ್ಪ ಚಾಮುಂಡಿ).

ಬೂತಸ್ಥಾನದ ಗಂಟೆ ಬಡುದು ಬಾಗಿಲು ತೆಗದ್ದೇ, ಒಂದರಿ ಎಲ್ಲ ಮೂರ್ತಿ, ಕಡ್ತಲೆಗಳ ಭಗ್ತೀಲಿ ನೋಡುಗು.
ಸಣ್ಣ ಗ್ಳಾಸಿಲಿ ತೆಗದು ಮಡಗಿದ ಗೋಮೂತ್ರವೂ, ಸಣ್ಣ ಬಾಳೆಲೆಲಿ ತಂದ ಗೋಮಯವನ್ನೂ ಸೇರುಸಿ ಒಂದು ಕೌಳಿಗೆ ನೀರೆರದು ’ಪುಣ್ಯ ನೀರು’ ಮಾಡುಗು ಬಟ್ಟಮಾವ.
ಮತ್ತೆ ಒಂದು ಮಾವಿನ ಕೊಡಿ ಕೈಲಿ ಹಿಡ್ಕೊಂಡು ಇಡೀ ಆವರಣಕ್ಕೆ ತಳಿಗು. ಸ್ವಚ್ಛ ಪರಿಸರವ ಇನ್ನೂ ಶುದ್ಧ ಮಾಡುಗು.
ತಳಿವಗ ಮಂತ್ರ ಹೇಳಿಯೇ ಹೇಳೆಕ್ಕು ಹೇಳಿ ಏನಿಲ್ಲೆ ಇದಾ!
ಮತ್ತೆ ಒಳ ಒಂದರಿ ಇಪ್ಪ ದೀಪಂಗಳ ಹೊತ್ತುಸಿ, ರಜ ಸಿಂಗಾರವ ಎಲ್ಲ ಮಡಗಿ ಅಲಂಕರುಸಿ, ಒಂದು ಪೆಕೆಟು ಕುಂಕುಮವನ್ನುದೇ ಬಿಡುಸಿ ಎದುರೆ ಮಡಗಿ ವೆವಸ್ತೆ ಮಾಡುಗು.
ಪಂಜುರ್ಲಿ ಒಂದು ಬಿಟ್ರೆ, ಮತ್ತೆಲ್ಲ ದೇವಿಯ ಅಂಶ ಅನ್ನೇ, ಹಾಂಗೆ ಬಟ್ಟಮಾವ ದೇವಿಯನ್ನೇ ಗ್ರೇಶಿಗೊಂಬದು.
ಪಂಜುರುಳಿಗಪ್ಪಗ ಶಿವನನ್ನೋ, ವಿಷ್ಣುವನ್ನೋ ಮಣ್ಣ ಗ್ರೇಶಿಗೊಂಗು.

ಶುದ್ಧ ಮಾಡಿ, ಅಲಂಕಾರಮಾಡಿ ಎಲ್ಲ ಅಪ್ಪಗ, ಅಗೇಲು ಮಡಗಲೆ ಸರೀ ಆವುತ್ತು.
ಒಂದೊಂದು ಬೂತಕ್ಕೂ ಎರಡೆರಡರ ಹಾಂಗೆ, ಒಟ್ಟು ಎಂಟು ಅಗೇಲು.
ಎರಡೆರಡು ಬಾಳೆಯ ಮೇಗೆ ಅರ್ದರ್ದಸೇರು ಹೊದಳು ಹಾಕಿ, ಅದರ ಹತ್ತರೆ ಒಂದೊಂದು ಬೊಂಡ ಮಡಗಿ, ಹೊದಳಿನ ಮೇಗೆ ಬೆಲ್ಲವೂ, ಬಾಳೆಹಣ್ಣೂ ಮಡಗಿ, ಎರಡೆರಡು ಸಿಂಗಾರ ಬಿಕ್ಕಿ – ಎರಡು ನಿಮಿಶಲ್ಲಿ ಅಗೇಲು ತೆಯಾರಕ್ಕು.
ಹಾಂ! ಬೂತಸ್ತಾನಂದಲೇ ಹೆರದಿಕೆ ಒಂದು ಕಲ್ಲಿನ ಕಟ್ಟೆಲಿ ಕಾಲ್ಲಾಳ್ತಗುಳಿಗ್ಗ ಇದ್ದಲ್ದೋ – ಅದಕ್ಕೂ ಒಂದು ಅಗೇಲು. ಇಲ್ಲಿಂದಲೇ ತಯಾರುಮಾಡಿ ಅಲ್ಲಿ ಕೊಂಡೋಗಿ ಮಡಗ್ಗು, ಅಷ್ಟೇ.
ಬಟ್ಟಮಾವ ಈ ಗುರುಟುವ ಕೆಲಸ ಮಾಡುವಗ ಸೇರಿದ ಎಲ್ಲೋರುದೇ ಮವುನಲ್ಲೇ ನಿಂದು ನೋಡುಗು. ಆರಿಂಗೂ ಅಂಬೆರ್ಪೂ ಇರ, ಆರುದೇ ಮಾತಾಡುಸುಲೂ ಬಾರವು.
ಎಲ್ಲವನ್ನುದೇ ಜೋಡುಸಿ, ಎದುರೆ ಮಡಗಿ ಅಪ್ಪಗ ಒಂದುತಟ್ಟೆಲಿ ತೆಂಗಿನ ಕಾಯಿಯೂ, ಬಾಳೆ ಹಣ್ಣುದೇ ಮಡಗ್ಗು.

ಒರಿಷಾವಧಿ ಮಾಡ್ತ ನಮುನೆಲಿ ಪತ್ನಾಜೆ ತಂಬಲ ಇಂದು ಮಾಡ್ಳೆ ಒದಗಿ ಬಂತು. ಇಲ್ಲಿಪ್ಪ ಎಲ್ಲ ಬೂತಂಗಳೂ ಬಂದು, ಇಂದು ಕೊಡ್ತದರ ಸಂತೋಷಲ್ಲಿ ಸ್ವೀಕರಿಸಿ, ಈ ಜಾಗೆಗೆ ಸಮ್ಮಂದಪಟ್ಟ ಎಲ್ಲೋರಿಂಗೂ, ಇಂದು ಇಲ್ಲಿ ಬಂದ ಎಲ್ಲೋರಿಂಗೊ, ಹಾಂಗೂ ದೂರಂದಲೇ ನೆನೆಸಿಗೊಂಡ ಎಲ್ಲೋರಿಂಗೂ ಸುಖಶಾಂತಿನೆಮ್ಮದಿ ಕೊಟ್ಟು ಆಯುಸ್ಸುಆರೋಗ್ಯಕೃಷಿನೆಮ್ಮದಿಶಾಂತಿ ಎಲ್ಲವನ್ನುದೇ ಕೊಟ್ಟು ಹರಸೇಕು
– ಹೇಳಿ ಒಂದು ದೊಡ್ಡ ಪ್ರಾರ್ತನೆ ಮಾಡುಗು, ಬಗ್ತೀಲಿ.

ಸಾಮಾನ್ಯವಾಗಿ ಬಟ್ಟಮಾವನ ಪ್ರಾರ್ತನೆ ಮುಗೀವಗ ಬೂತದ ಪೂಜಾರಿಗೆ ದರ್ಶನ ಹಿಡಿವದು ಪರಿವಾಡಿ.ಅದು ಸೇರಿದೋರಿಂಗೂ ಹೊಸತ್ತಲ್ಲ, ಬಟ್ಟಮಾವಂಗೂ ಹೊಸತ್ತಲ್ಲ.
ಒಂದೈದು ನಿಮಿಷ ದರ್ಶನಲ್ಲೇ ಮಾತಾಡಿ, ಈ ಒಂದೊರಿಶ ಎಲ್ಲೋರುದೇ ಬಂದು ಸೇರಿಗೊಂಡಿದಿ, ಎಂಗೊ ಎಲ್ಲರಿಂಗೂ ಕೊಶಿ ಆತು, ನಾಗ ದೇವರೂ ಸಂತೋಷಲ್ಲೇ ಇದ್ದವು, ಎಲ್ಲೋರಿಂಗೂ ಒಳ್ಳೆದಾಗಲಿ – ಹೇಳಿ ನೆರೆಕರೆಯೋರ ನೋಡಿಕ್ಕಿ, ಜೋರು ಬೊಬ್ಬೆ ಹೊಡಕ್ಕೊಂಡು ಬಾಯಿ ಒಡಗು. ಬಟ್ಟಮಾವ ಅರ್ದಕೌಳಿಗೆ ನೀರೆರವಗಳೇ ಅದರೊಳ ಇಪ್ಪ ಬೂತಂಗೊಕ್ಕೆ ಸಮದಾನ ಅಕ್ಕಷ್ಟೆ! ಬಿರುದ ಕೂಡ್ಳೆ ಎಲ್ಲೊರಂತೆ ನೆರೆಕರೆಯೋರಲ್ಲಿ ಒಂದಾಗಿ ನಿಂಗು.
ಕೆಲವು ಜೆನ ಇದರ ನೆಗೆಮಾಡುಗು. ಅಂದೊಂದರಿ ಬಿಂಗಿಮಾಣಿ ಬಟ್ಟಮಾವನತ್ರೆ ಕೇಳಿದ್ದಕ್ಕೆ ’ಹಾಂಗೆ ಹೇಳ್ತರೆ ನಮ್ಮದೂ ಲೊಟ್ಟೆಯೇ ಅಲ್ಲದೋ, ಅವಕ್ಕಪ್ಪಗ ಅವರದ್ದು ಸರಿ. ಅದವರ ಆಚಾರ’ – ಹೇಳಿದವಡ. ಬಟ್ಟಮಾವ° ಇವರನ್ನೂ ಗೌರವಿಸುಗು.

ಇಷ್ಟೆಲ್ಲ ಆದ ಮೇಲೆ ಒಂದು ಮಂಗಳಾರತಿ ಮಾಡುಗು. ಎಲ್ಲೋರೂ ಶ್ರದ್ಧೇಲಿ ಕೈಮುಗುದು ನಿಂಗು. ತೀರ್ತಪ್ರಸಾದ ಆದ ಮತ್ತೆ ಎಲ್ಲೋರುದೇ ಬಿರಿವಲಾತು ಹೇಳಿ ಅರ್ತ.
ಬಟ್ಟಮಾವ ಬೇಕಾದಷ್ಟು ಬೊಂಡತೀರ್ತ ತೆಕ್ಕೊಂಡಾದ ಮೇಗೆ ನೆರೆಕರೆಯೋರಿಂಗೆ ಕೊಡುಗು. ಅವ್ವವ್ವು ಅವರವರ ಕುಪ್ಪಿಲಿ ಯೆತಾಶೆಗ್ತಿ ತುಂಬುಸಿಂಡು, ಇನ್ನೊಬ್ಬಂಗೂ ತುಂಬುಸಿ ಕೊಟ್ಟೊಂಗು.

ದೈವಸ್ಥಾನದ ಆಸುಪಾಸಿಲಿ ತಂಬಲದ ಗವುಜಿ

ನೆರೆಕರೆಯೋರು ಬಟ್ಟಮಾವಂಗೆ ಒಂದು ಬೊಂಡಕೆತ್ತಿ ತಂದು ಕೊಡುಗು, ಕತ್ತಿಯೊಟ್ಟಿಂಗೆ.
ಅದರ ಒಟ್ಟೆ ಮಾಡಿ ಕುಡುದಾದ ಮತ್ತೆಯೇ ಬಟ್ಟಮಾವ ಲೋಕಾಬಿರಾಮ ಮಾತಾಡುಗಷ್ಟೆ. ಅಷ್ಟು ಹೊತ್ತುದೇ ಕ್ರಿಯಕ್ಕೆ ಸಮ್ಮಂದಪಟ್ಟದು ಏನಾರಿದ್ದರೆ ಮಾಂತ್ರ ಮಾತಾಡುಗಷ್ಟೆ!
~
ಇದು ನಮ್ಮ ಬೈಲಮೂಲೆಯ ಪತ್ನಾಜೆಯ ದೃಶ್ಯ.
ಈ ನಮುನೆ ಪ್ರತಿ ಒರಿಶವೂ ಆವುತ್ತಲ್ಲಿ. ಈ ಪತ್ನಾಜೆಗೂ ಆಯಿದು. ಇನ್ನು ಮುಂದೆಯೂ ನೆಡೆತ್ತು, ವಿಶೇಷ ಏನಿಲ್ಲೆ.
ಬಟ್ಟಮಾವ ಬದಲಕ್ಕು, ಮೋಹನಬಂಟ ಬದಲಕ್ಕು, ಪೂಜಾರಿ ಬದಲಕ್ಕು, ಬೊಂಡ ತೆಗೆತ್ತ ಬಾಬು ಬದಲಕ್ಕು, ನೆರೆಕರೆಯೋರು ಬದಲಕ್ಕು!
ಆದರೆ ಆ ಮಹಾಶೆಗ್ತಿ ಬದಲಾಗ. ಅಚಲವಾಗಿ ಅಂದಿಂದ ಇಂದಿನ ಒರೆಂಗೂ ಸೇವೆ ಸ್ವೀಕರುಸಿಗೊಂಡು ಬತ್ತಾ ಇದ್ದವು.
~
ಅದಿರಳಿ,
ಈ ತಂಬಲ ಕೆಲವು ದಿಕ್ಕೆ ಕೆಲವು ದಿನ ಮಾಡ್ತವು. ಅವರ ವಿಶೇಷ ಕೂಡಿ ಬತ್ತ ದಿನ, ನಾಗರ ಪಂಚಮಿ ದಿನ, ಬ್ರಮ್ಮಕಲಶ ಆದ ದಿನ – ಹೀಂಗೇನಾರು.
ಯೇವ ದಿನವೂ ಕೂಡಿ ಬಾರದ್ರೆ ಮತ್ತೆ ಪತ್ನಾಜೆ ದಿನ ಮಾಡ್ಳಕ್ಕು – ಹೇಳ್ತದು ನಮ್ಮ ಬೈಲಿನ ವಾಡಿಕೆ.
ಅದಕ್ಕೇ ಹೇಳುದು, ಒರಿಶಾವಧಿಯ ಈ ಒರಿಶದ ಹೊತ್ತು ಕಳಿವ ಗಡು ಪತ್ನಾಜೆ.

ದೀಪಾವಳಿಂದ ಪತ್ನಾಜೆ ಒರೆಂಗೆ ದೈವೀಕ ಕಾರ್ಯ ಮಾಡ್ಳೆ ಇಪ್ಪ ಅವಧಿ – ಹೇಳ್ತದು ಕ್ರಮ.
ಯಕ್ಷಗಾನದ ಮೇಳಂಗಳಲ್ಲಿಯೂ ಈ ವಾಡಿಕೆ ಇದ್ದಡ, ಚೆಂಬರ್ಪು ಅಣ್ಣ ಹೇಳಿತ್ತಿದ್ದವು. ಹಬ್ಬಕ್ಕೆ ( ದೀಪಾವಳಿ) ಗೆಜ್ಜೆಕಟ್ಟಿದರೆ ಪತ್ನಾಜೆಗೆ ಬಿಡುಸುದು – ಹೇಳ್ತದು ಬಾಯಿಮಾತು.
ನಿತ್ಯಬಲಿ ಇಪ್ಪ ಸೀಮೆದೇವಸ್ಥಾನಂಗಳಲ್ಲೂ ಹಾಂಗೇ, ಪತ್ನಾಜೆಗೆ ದೇವರು ಒಳ ಹೋದರೆ ಮತ್ತೆ ಹಬ್ಬಕ್ಕೇ ಹೆರ ಬಪ್ಪದು. ಅಷ್ಟು ಸಮೆಯ ನಿತ್ಯಬಲಿ ಇಲ್ಲೆ!
~
ಈಗಾಣ ಮಕ್ಕೊಗೆ ಇದೆಲ್ಲ ಅರಡಿಗೋ?
ಬನ್ನಿ, ನಮ್ಮ ಮುಂದಾಣೋರಿಂಗೆ ತಿಳಿಶಿ ಕೊಡುವೊ. ಬೈಲಿನ ಆಚಾರ ವಿಚಾರಂಗಳ ನೆಂಪುಮಾಡುಸಿ ಬಿಡುವೊ.
ಕೆಡ್ವಾಸ, ಪತ್ನಾಜೆ ಹೀಂಗಿರ್ತ ಸ್ಥಳೀಯ ಆಚರಣೆಗಳ ಹೆರ ಗೊಂತಪ್ಪ ಹಾಂಗೆ ಮಾಡುವೊ.

ಪ್ರೇಮದ ದಿನ, ಪ್ರೀತಿಯ ದಿನ, ಅಜ್ಜಿಯ ದಿನ, ಪಿಜ್ಜಿಯ ದಿನ, ಹಾರ್ತ ದಿನ – ಹೇಳಿ ಪತ್ತಕ್ಕೆ ಸಿಕ್ಕದ್ದ ಆಚರಣೆಗಳ ಅನುಸರಣೆ ಮಾಡ್ತು.
ನಮ್ಮದೇ ಆದ “ನಮ್ಮ ರಕ್ಷಣೆ ಮಾಡುವ ಬೂತಂಗಳ ನೆಂಪು ಮಾಡುವ ದಿನ” ಪತ್ತನಾಜೆಯನ್ನೂ ಆಚರುಸಿರೆ ಒಳ್ಳೆದಲ್ಲದೋ?

ಒಂದೊಪ್ಪ: ಪತ್ತನಾಜೆಯ ತಂಬಲವ ಹೊತ್ತುಹೋಪ ಮೊದಲೇ ನೆಂಪುಮಾಡಿರೆ, ಹತ್ತು ತಲೆಮಾರಿಂಗೂ ಒಳುದು ಮುಂದುವರಿಗಲ್ಲದೋ?

41 thoughts on “ಹೊತ್ತು ಕಳಿವ ಮೊದಲು ಬತ್ತ “ಪತ್ತನಾಜೆ” ತಂಬಲ!!

  1. ಹರೇ ರಾಮ

    ಶುದ್ದಿ ಲಾಯಿಕ ಆಯಿದು ಒಪ್ಪಣ್ಣೋ, ಬಹುಷಃ ‘ತಾಂಬೂಲಾರಾಧನಮ್’ ಹೇಳುವ ಶಬ್ದಂದ ತಂಬಿಲ ಹೇಳಿ ಬಂದಿರೆಕ್ಕು ಅಲ್ಲದಾ? ಎಲ್ಲಿಯೋ ಕೇಳಿದ ನೆನಪು.

  2. engala tootada kayyale kareliyude ondu bana eddu bava, ……….

    nadtinge alli tambala addaa.

  3. laaikaidu oppanno shuddi.
    pata kaambaga aachakaredo heli kanekku allada.
    bhatta mavanu oorili ippaga homa, pooje, tambala heligondu
    maadusugu.eega oorili illenne.
    shuddigo samayakke sariyagi baretta idde allada oppanno.
    good luck.

    1. ಸಮಯಕ್ಕೆ ಪೂರಕ ಶುದ್ದಿ ಬರೆತ್ತದಕ್ಕೆ, ಶುದ್ದಿಗೆ ಪೂರಕ ಒಪ್ಪ ಕೊಟ್ಟು ಆಶೀರ್ವಾದ ಮಾಡ್ತದು ಕಂಡು ಒಪ್ಪಣ್ಣಂಗೆ ಮಹದಾನಂದ ಆವುತ್ತು.

      ಹರೇರಾಮ

  4. ಒಪ್ಪಣ್ಣಾ………………..,

    ಎಷ್ಟು ಚೆಂದದ ಶುದ್ಧಿ!!!! ತುಂಬಾ ಲಾಯ್ಕಾಯಿದು ತಂಬಲದ ಬಗ್ಗೆ ವಿವರಣೆ. ಪ್ರತಿಯೊಂದನ್ನೂ ಎಷ್ಟು ಚೆಂದಲ್ಲಿ ವಿವರ್ಸಿದ್ದೆ ಹೇಳಿದರೆ ಅಲ್ಲಿಯೇ ನಿಂದು ನೋಡಿದ ಹಾಂಗೆ ಆತು. ನಮ್ಮ ಬೈಲಿನ ಬಟ್ಟಮಾವ° ಪ್ರತಿವರ್ಷ ಮಾಡುವ ಪ್ರಕ್ರಿಯೆಯ ಎಂಗೊಗೆ ವಿವರುಸಿ ಕೊಟ್ಟದಕ್ಕೆ ತುಂಬಾ ತುಂಬಾ ಧನ್ಯವಾದಂಗ. ಪ್ರತಿಯೊಂದು ವಿಷಯವನ್ನುದೇ ಎಂತರ, ಎಂತಕ್ಕೆ, ಹೇಂಗೆ ಹೇಳಿ ಲಾಯ್ಕಲ್ಲಿ ವಿವರ್ಸಿದ್ದೆ.

    ನೀನು ಹೇಳಿದ ಹಾಂಗೆ ದೇವರ ಕಾರ್ಯವ ನಿರ್ವಹಿಸುವ ನಿಷ್ಠೆಯ ಬಂಟಂಗೊ ಈ ದೈವಂಗೊ. ಪ್ರತಿ ಕುಲಕ್ಕೆ ಒಂದು ಬೂತ ಇರ್ತನ್ನೆ. ನಾವು ಕುಲದೇವರ ಸ್ಮರಣೆ ಮಾಡ್ತು, ಆದರೆ ಅದರ ಒಟ್ಟಿಂಗೆ ದೈವವ ಮರೆತ್ತು. ದೈವವ ಮರದರೆ ಅದರ ಫಲವ ತೋರ್ಸದ್ದೆ ಇರ್ತಿಲ್ಲೆನ್ನೆ!! ಕಂಡೇ ಕಾಣ್ತು. ನವಗೆ ಸಿಕ್ಕುವ ಫಲಂಗಳ ನೋಡುವ ಕಣ್ಣು ಬೇಕು ಅಷ್ಟೇ!!!

    ಪ್ರತಿಯೊಂದು ಬೂತಕ್ಕೂ ಅದರದ್ದೇ ಆದ ಹಿನ್ನೆಲೆ ಇರ್ತು ಅಲ್ಲದಾ? ಆಯಾ ಬೂತದ್ದುದೇ ಒಂದೊಂದು ಬನ ಇರ್ತು ಅಲ್ಲದಾ?
    ಹಾಂಗೆಯೇ ಎಷ್ಟೋ ಊರುಗ ಆಯಾ ದೈವಂದಾಗಿಯೇ ಹೆಸರಾದ್ದದುದೇ ಇದ್ದಲ್ಲದಾ? ನಮ್ಮ ಹಿರಿಯೋರು ಬೂತ, ನಾಗನ ಬನಂಗಳಲ್ಲಿ ಆದರೂ ಪ್ರಾಣಿಸಂಕುಲಂಗ, ಸಸ್ಯವೈವಿಧ್ಯಂಗ ಬೆಳೆಯಲಿ, ಅವಕ್ಕೆ ಅನುಕೂಲ ವಾತಾವರಣ ಸಿಕ್ಕಲಿ ಹೇಳ್ತ ಆಶಯಲ್ಲಿಯೇ ಅಲ್ಲದಾ ನಡೆಶಿಗೊಂಡು ಬಂದದು.

    ನಮ್ಮ ಭೂಮಿಯ ಆದಿಶೇಷ ಹೊತ್ತುಗೊಂಡಿಪ್ಪದು ಹೇಳ್ತ ಕಾರಣಕ್ಕೂ ಆದಿಕ್ಕು ಅಲ್ಲದಾ ನಾವು ನಾಗಕುಲವ ಆರಾಧನೆ ಮಾಡುದು. ನಾವು ಮಾಡುವ ಎಲ್ಲಾ ದೇವ ಸಂಬಂಧಿ ಕ್ರಿಯೆಗಳಲ್ಲಿ ಪ್ರಕೃತಿಗೆ ಧನ್ಯವಾದ ಹೇಳುದು ಇದ್ದೇ ಇದ್ದಲ್ಲದಾ?

    ಒಪ್ಪಣ್ಣೋ, ನಾಗನ ಪೂಜೆಯ ಹಂತ ಹಂತ ವಿವರಣೆ ಲಾಯ್ಕಲ್ಲಿ ಬಯಿಂದು ಆತಾ. ಬಟ್ಟಮಾವ° ಮಾಡ್ತ ಎಲ್ಲ ಕ್ರಮಂಗಳನ್ನೂ ವಿವರುಸಿ ಹೇಳಿದ್ದೆ. ಸಣ್ಣಾದಿಪ್ಪಗ ಅಪ್ಪ° ಮಾಡಿಗೊಂಡಿದ್ದ ತಂಬಲ ನೋಡಿದ ಹಾಂಗೇ ಆತು. ಹಳೆನೆನಪುಗಳ ಮಧುರ ಮಾಡಿ ಕೊಟ್ಟದಕ್ಕೆ ಧನ್ಯವಾದಂಗ.

    ಬೂತಸ್ಥಾನಲ್ಲಿ ನಡೆತ್ತ ಪೂಜೆಯ ವಿವರ ಕೊಟ್ಟದು ತುಂಬಾ ಲಾಯ್ಕಾಯಿದು. ಪಾರೆ ಅಜ್ಜಿಯ ಪೂಜೆಯ ವೈಭವ ನೋಡಿದ ಹಾಂಗೆ ಆತು. ಪ್ರಾರ್ಥನೆಯ ಬರದ್ದದು ತುಂಬಾ ಒಳ್ಳೆದಾತು. ಅಲ್ಲಿ ನಡೆತ್ತ ಎಲ್ಲದರ ವಿವರ ಸಿಕ್ಕಿತ್ತು. ಸುಮಾರು ವಿಷಯ ಗೊಂತಾತು.

    ಒಪ್ಪಣ್ಣ, ನೀನು ಹೇಳಿದ ಹಾಂಗೆ ನಾವೆಲ್ಲ ಬದಲುಗು. ಆದರೆ ಅಲ್ಲಿಪ್ಪ ಆ ದೈವ ಶೆಗ್ತಿ, ದೈವೀಕ ಶೆಗ್ತಿ ಯಾವ ಕಾಲಕ್ಕೂ ಬದಲ ಅಲ್ಲದಾ? ನಂಬಿದೋರಿಂಗೆ ಹಿಂದೆಯೂ, ಇಂದೂ, ನಾಳೆಯೂ ಅಭಯ ಕೊಡುಗಲ್ಲದಾ? ತನ್ನಲ್ಲಿಗೆ ಮನಸ್ಸು ಶುದ್ಧನಾಗಿ, ಎಲ್ಲವನ್ನೂ ಸಮರ್ಪಿಸಿ ಬಂದವಕ್ಕೆ ಅವು ನೆನೆಸಿದ್ದದರ ಎಲ್ಲವನ್ನೂ ಉಡಿ ತುಂಬಿ ಕೊಡ್ತವಲ್ಲದಾ?

    ಒಪ್ಪಣ್ಣ, ನಮ್ಮ ಮುಂದಾಣ ಪೀಳಿಗೆಗೆ ಹೀಂಗಿಪ್ಪ ಆಚರಣೆಗ ಗೊಂತು ಮಾಡೆಕ್ಕು. ನಮ್ಮ ಹಿರಿಯೋರು ಮಾಡಿದ ಕಾರಣ ನಾವಿದ್ದು. ನಾವು ಮಾಡಿದರೆ ನಮ್ಮ ಮಕ್ಕೊ ಮುಂದರಿಗು. ನಮ್ಮ ಮಕ್ಕೊ ಮುಂದರಿಶಿದರೆ ನಮ್ಮ ವಂಶಂಗ ಮುಂದರಿಗು ಅಲ್ಲದಾ?

    ಒಪ್ಪಣ್ಣೋ,

    ಮಾಷ್ಟ್ರುಮಾವನ ಅಪ್ಪ° ಮೊದಲು ಪಾರೆ ಅಜ್ಜಿಯ ಪೂಜೆ ಹೀಂಗೇ ಮಾಡುಗಡ ಅಲ್ಲದಾ? ಅವರ ಹಾಂಗೇ ಭಗ್ತೀಲಿ, ಶ್ರದ್ಧೇಲಿ ಅವರ ಸಣ್ಣಪುಳ್ಳಿದೇ ಅದರ ಹಾಂಗೇ ಮುಂದರಿಶಿಗೊಂಡು ಬಯಿಂದನಡ್ಡ. ಇದುವರೆಗೆ ಅವ° ಪಾರೆ ಅಜ್ಜಿಯ ಪೂಜಾಸೇವೆ ಮಾಡುದರ ನೋಡ್ಲೆ ಸಿಕ್ಕಿದ್ದಿಲ್ಲೆ, ಜೀವಮಾನಲ್ಲಿ ಒಂದರಿ ಆದರೂ ಆ ಭಾಗ್ಯ ಎನಗೆ ಸಿಕ್ಕಲಿ ಹೇಳ್ತ ಆಸೆ ಇದ್ದು ಪಾರೆ ಅಜ್ಜಿ ಅನುಗ್ರಹಿಸೆಕ್ಕು ಅಷ್ಟೇ!!!!

    ಒಂದೊಪ್ಪ ಲಾಯ್ಕಾಯಿದು.

    1. ಅಕ್ಕಾ,
      { ನವಗೆ ಸಿಕ್ಕುವ ಫಲಂಗಳ ನೋಡುವ ಕಣ್ಣು ಬೇಕು ಅಷ್ಟೇ }
      ಎಂತಾ ಒಳ್ಳೆ ಮಾತು! ತುಂಬ ಕೊಶಿ ಆತು.
      ಅಲ್ಲದ್ದರುದೇ ಹಾಂಗೇ ಅಲ್ಲದೋ – ದೇವರು ಕೊಡುದು ಕೊಟ್ಟೇ ಕೊಡ್ತ°, ಆದರೆ ನವಗೆ ಅದರ ಕಾಂಬ ದೃಷ್ಟಿ ಬೇಕು. ಅಷ್ಟೇ.
      ಉಡಿತುಂಬಿ ಕೊಡ್ತದರ ಬಗ್ಗೆ ವಿವರುಸಿದ್ದು ಶುದ್ದಿಂದಲೂ ಚೆಂದ ಆಯಿದು.

      ಮಾಷ್ಟ್ರುಮಾವನ ಅಪ್ಪನ ಶುದ್ದಿ ತೆಗದು ಒಂದರಿ ಮೈ ರೋಮಾಂಚನ ಆತು ಅಕ್ಕ°.
      ಧರ್ಮದೊಳವೇ ಇಳುದು ಆಳದ ಜ್ಞಾನ ಹೊಂದಿದ್ದ ಮೇಧಾವಿ ಅವು!

  5. ನಮ್ಮ ಸಂಸ್ಕೃತಿಯ ಆಚರಣೆಲಿ ಪತ್ತನಾಜೆಯ ಹಬ್ಬವೂ ಒಂದು…ತುಳುನಾಡಿಲಿ ದೈವಂಗಳ ಆರಾಧನೆಯ ಪ್ರಕೃತಿಯ ಪೂಜೆ ಹೇಳಿಯೇ ಆರಾಧನೆ ಮಾಡ್ತವು..ಪತ್ತನಾಜೆ ಕಳುದರೆ ಮತ್ತೆ ಭೂತ ಕಟ್ಟುತ್ತ ಕೋಟಿಗೆ ಹಬ್ಬ ಬಪ್ಪನ್ನಾರ ಪುರುಸೊತ್ತು ಇರ್ತಡ.ಪತ್ತನಾಜೆಲಿ ದೈವಂಗಳ ತಂಬಿಲ ಮಾಡಿ ಅರಿಶಿನಪ್ರಸಾದ,ಬೊಂಡ,ಹೊದಳು ಇತ್ಯಾದಿ ದ್ರವ್ಯಂಗಳ ದೈವದ ಸನ್ನ್ಧಿಗೆ ಸಮರ್ಪಣೆ ಮಾಡಿ ನಾವು ಪ್ರಸಾದ ಹೇಳಿ ಸ್ವೀಕಾರ ಮಾಡುದು ನಮ್ಮ ಹೆರಿಯೋರಿಂದ ನೆಡಕ್ಕೊಂಡು ಬಂದ ಪದ್ಧತಿ..ಈ ಆಚರಣೆಗಳ ನಾವು ಒಳಿಶಿಗೊಂಡು ಹೋಪ…ಶುದ್ಧಿ ಒಳ್ಳೆದಾಯಿದು..ಧನ್ಯವಾದ!!!!!!!

    1. ಗಣೇಶಮಾವಾ°..
      ನಮ್ಮ ಊರಿನ ಆಚರಣೆಗಳ ಒಳಿಶುತ್ತರಲ್ಲಿ ನಿಂಗಳ ಪಾತ್ರ ದೊಡ್ಡದಿದ್ದು.
      ಎಷ್ಟೋ ಭೂತಸ್ಥಾನದ ಒಕ್ಕಲು ಮಾಡುಸಿದ ನಿಂಗಳ ಅನುಭವ ಬೈಲಿಂಗೆ ಹರುದು ಬರಲಿ.

  6. ಒಪ್ಪಣ್ಣನ ಒಪ್ಪವಾದ ಒಪ್ಪ ಓದಿ ಕೊಶಿ ಆತು………. ಎನಗೆ ಗೊಂತಿಲ್ಲದ್ದ ಎಷ್ಟೋ ವಿಶಯಂಗಳ ತಿಳ್ಕೊಂಡ ಹಾಂಗಾತು………..

    1. ವಿದ್ಯಕ್ಕಾ,
      ಅಪುರೂಪಲ್ಲಿ ಆದರೂ ಬೈಲಿಂಗೆ ಬಂದದು ಕಂಡು ಕೊಶಿ ಆತು.
      ಇಷ್ಟು ಅಪುರೂಪ ಆಗೆಡಿ ಅಕ್ಕಾ..
      ಬೈಲಿಂಗೆ ಶುದ್ದಿ ಹೇಳಿ, ನಿಂಗೊಗೆ ಗೊಂತಿಪ್ಪ ವಿಶಯಲ್ಲಿ! 🙂

      ಕಾದೊಂಡಿರ್ತೆ. ಆತೋ?

  7. ದ್ರಾವಿಡ ನಾಗರಂಗಳ ಸಮನ್ವಯ ಆಗಿಂಡಿಪ್ಪ ನಮ್ಮ ಸ್ಥಳಿಕ ಸಂಸ್ಕೃತಿಯ ಒಂದು ಭಾಗವಾದ ಪತ್ತನಾಜೆಯ ಸುವಿಸ್ತರವಾದ ಪರಿಚಯ ಮಾಡಿಕೊಟ್ಟಿದೆ. ‘ಅವಕ್ಕವಕ್ಕೆ ಅವರವರದ್ದು ಸರಿ’ ಹೇಳ್ತ ಗುಣ ಇಪ್ಪ ವಿಶಾಲವಾದ ಸಂಸ್ಕೃತಿ ನಮ್ಮದು.

    1. ಕೃಷ್ಣಭಾವಾ..
      “ಅವಕ್ಕವಕ್ಕೆ ಸರಿ” ಹೇಳ್ತ ಮನೋಭಾವ ನಮ್ಮೋರಿಂಗೆ ಇದ್ದು. ಆದರೆ “ಆಚವಕ್ಕೆ” ಇದ್ದೋ?
      ಅಲ್ಲದೋ?

  8. ಬರದ ವಿಷಯದೆ ಕ್ರಮದೆ – ಎರಡುದೇ ಬಾರೀ ಲಾಯಕ ಆಯಿದು.
    ಹೀಂಗೆ ಇಪ್ಪ ಲೇಖನಗಳಿಂದ ನಮ್ಮ ಆಚರಣೆಯ ಬಗೆಗೆ ಮುಂದಾಣ ಜನಂಗೊಕ್ಕೆ ಗೊಂತಾಯೆಕ್ಕಷ್ಟೆ

    1. ಪ್ರದೀಪ ಡಾಗುಟ್ರಿಂಗೆ ಬೈಲಿಂಗೆ ಸ್ವಾಗತ.
      ಸಣ್ಣ ಒಪ್ಪ ಓದಿ ಕೊಶಿ ಆತು.

      ಬೈಲಿಂಗೆ ಬತ್ತಿರೋ?

  9. ಸಣ್ಣ ಇಪ್ಪಗ ಪತ್ತನಾಜೆ ದಿನ ಎಂಗಳ ಜಾಗೆಲಿದ್ದ “ಬನ”ಕ್ಕೆ ಅಪ್ಪ, ಅಣ್ಣಂದ್ರ ಒಟ್ಟಿಂಗೆ ಹೋಗೆಂಡಿದ್ದದು ನೆಂಪಾತು. (ಹೆಮ್ಮಕ್ಕೊ ಅಲ್ಲಿಗೆ ಹೋವ್ತ ಕ್ರಮ ಇಲ್ಲೆ ಹೇಳಿ ಕಾಣ್ತು). ಅಪ್ಪ, ಅಲ್ಯಾಣ ಬಲ್ಲೆಯ ಎಲ್ಲ ಕತ್ತಿಲಿ ಕಡುದು, ಕಸವಿನ ಎಲ್ಲ ಕೆಳ ದೂಡುಗು. ಹಾಂಗೆ ಮಾಡುವಗ ಚೋರಟೆಗೊ, ಬಾಯಡೆಗಂಗೆ (ಉಂಡ್ಳ ಕಾಳಿನ ಹಾಂಗಿರುತ್ತ ಕಪ್ಪು ಗಟ್ಟಿ ಹುಳ) ಎಲ್ಲ ತುಂಬಾ ಕಾಂಬಲೆ ಸಿಕ್ಕುಗು. ಅದರ ಎಲ್ಲ ಕರೆಂಗೆ ಮಾಡಿ, ನೀರೆರದು ಕಲ್ಲಿನ ಶುದ್ದ ಮಾಡಿ, ಒಂದೆರಡು ಹೂಗು ಮಡಗಿ, ಕುರುದಿ ನೀರಿನ (ಮಸಿ ಮಿಶ್ರ ಮಾಡಿದ ಕಪ್ಪು ನೀರುದೆ, ಅರುಶಿನ ಸುಣ್ಣ ಮಿಶ್ರ ಮಾಡಿದ ಕೆಂಪು ನೀರು) ಹಾಳೆ ಪಡಿಗೆಲಿ ಮಡಗಿ, ಎಣ್ಣೆ ನೆಣೆ, ಕೋಲ್ತಿರಿ ಹೊತ್ತುಸಿ ಪಡಿಗೆ ಕರೆಂಗೆ ಕುತ್ತಿ ಮಡಗಿ, ಹೊದಳು (ಕುರುದಿ ನೀರಿನ ಇದಕ್ಕುದೆ ಮಿಶ್ರ ಮಾಡ್ಳಿದ್ದು), ಬೊಂಡ ಬಾರಣೆ ಮಡಗಿ ಮಾಡೆಂಡಿದ್ದದ ತಂಬಿಲ ನೆಂಪಾತು. ಒಪ್ಪಣ್ಣ ಹೇಳಿದ ಹಾಂಗೆ, ಈಗಾಣ ಮಕ್ಕೊಗೆ ಇದೆಲ್ಲ ಕಂಡಲ್ಲ, ಕೇಳಿಯೇ ಗೊಂತಿರ. ಪೇಟೆ ದೇವಸ್ಥಾನಂಗಳಲ್ಲಿ ನಾಗರಪಂಚಮಿ ಸಮೆಲಿ ನೆಡೆತ್ತ ನಾಗನ ಆರಾಧನೆ ಮಾಂತ್ರ ಪೇಟೆಯ ಮಕ್ಕೊಗೆ ಕಂಡು ಗೊಂತು. ಉತ್ತಮ ಮಾಹಿತಿ ಕೊಟ್ಟ ಲೇಖನ.

    ಏವ ವಿಷಯನ್ನಾದರುದೆ ಒಪ್ಪಣ್ಣ ವಿವರುಸುತ್ತ ಶೈಲಿ ತುಂಬಾ ಚೆಂದ. ಅವ ಬರೆತ್ತ ವಸ್ತು ವಿಷಯಂಗಳಲ್ಲಿ ವೈವಿಧ್ಯತೆ ಇರ್ತದು ಇನ್ನುದೆ ಚೆಂದ. ಲಾಡನ್ನಿನ ವಿಷಯ ಆದರು, ಕಿರಿಕೆಟ್ಟಾದರು, ಅದರ ನಮ್ಮ ಬೈಲಿಂಗೆ ಹೊಂದುಸಿ, ಬೈಲಿನವಕ್ಕೆ ರಂಜನೆ ಕೊಟ್ಟು ಅವಕ್ಕೆ ಅರ್ಥ ಆವ್ತ ಹಾಂಗೆ ವಿವರುಸುತ್ತ ಅವನ ಕ್ರಮವ ಆನು ಮೆಚ್ಚುತ್ತೆ.

    1. ಬೊಳುಂಬುಮಾವಾ…
      {ಹಾಂಗೆ ಮಾಡುವಗ ಚೋರಟೆಗೊ, ಬಾಯಡೆಗಂಗೆ}
      – ಇದರ ಎಲ್ಲ ಕರೆಂಗೆ ಮಾಡುವಗ ಪಕ್ಕನೆ ಗೊಂತಾಗದ್ದೆ ಒಂದರ ಚರಕ್ಕನೆ ಮೆಟ್ಟಿಹೋಪದಿದ್ದಲ್ಲದೋ – ಅದರಿಂದ ಮತ್ತೆ ಮಕ್ಕಳ ಮೋರೆಅಪ್ಪದರ ನೋಡುದೇ ಗಮ್ಮತ್ತು!
      ಬಾರಣೆ ಮಡುಗುತ್ತರ ಬಗ್ಗೆ ಹೇಳಿದ್ದು ಲಾಯಿಕಾಯಿದು ಮಾವ.
      ಒಪ್ಪ ಒಪ್ಪಕ್ಕೆ ಒಪ್ಪಂಗೊ.

  10. ಒಪ್ಪಣ್ಣನ ಲೇಖನ ಓದಿದ ಮೇಲೆ ಬರೆದ ಪದ್ಯ ‘ಪತ್ತನಾಜೆ ಕಳ್ತು’-ಈಗ ಹಾಕಿದ್ದೆ.

  11. ವರುಷಾವಧಿ ಭೂತಕೋಲಂಗಳ ಕಡೆಯ ದಿನ ಪತ್ತನಾಜೆ.ತುಳುನಾಡಿಲಿ ಮಳೆಗಾಲದ ಆರಂಭದ ಸೂಚನೆ-ಪತ್ತನಾಜೆ.ಯಕ್ಷಗಾನದ ಮೇಳಂಗಳ ತಿರುಗಾಟದ ಕೊನೆಯ ದಿನ.
    ಈಗೀಗ ಕೆಲವರು ಹತ್ತನಾವಧಿ ಹೇಳಿ ಬರೆತ್ತವು.[ಸರಿಯೊ ಗೊಂತಿಲ್ಲೆ].
    ಇದೇ ರೀತಿ ಪಗ್ಗು ಪದಿನೆಣ್ಮೊ[ಮೇಷ ೧೮ ನೇ ದಿನ]ಮುಖ್ಯ.ಬೇಸಾಯಕ್ಕೆ ಬೀಜ ಬಿತ್ತಲೆ ಸುರು ಮಾಡುವ ದಿನ ಅಡ ಇದು.
    ಕೇರಳಲ್ಲಿ ಎಡವಪ್ಪಾದಿ ಯಾ ಇಡವಪಗುದಿ ಮುಖ್ಯ.ಇದು ವೃಷಭದ ಅರ್ಧ[೧೫ ನೆ ದಿನ].ಆ ದಿನ ಮಳೆಗಾಲ ಸುರು ಹೇಳಿ ಲೆಕ್ಕ.ಪರ್ಯಾಯವಾಗಿ,ಇಡವಪಗುದಿ ಹೇಳಿದರೆ ಮಾನ್ಸೂನು ಸುರು ಅಪ್ಪದು ಹೇಳಿಯೆ ಅವು ಅರ್ಥ ಮಾಡಿಕೊಳ್ತವು.
    ಕೃತ್ತಿಕೆ ಮಹಾನಕ್ಷತ್ರ [ಮೇ ೧೧ ರಿಂದ ೨೫ ಕ್ಕೆ ವರೆಗೆ ಹೆಚ್ಚಾಗಿ ಬತ್ತು] ಸರೀ ಬೆಶಿಲು ಕಾಯೆಕ್ಕು ಹೇಳಿ ಮೊದಲಾಣವರ ಲೆಕ್ಕ.ಪತ್ತನಾಜೆ ಮತ್ತೆ ರೋಹಿಣಿ ನಕ್ಷತ್ರ ಸುರು ಅಪ್ಪ ದಿನ ಹೆಚ್ಚಾಗಿ ಒಂದೆ.ಈ ನಕ್ಷತ್ರಲ್ಲಿ ಮಳೆ ಸುರು ಆದರೆ ಎಲ್ಲಾ ಸರಿ ಅಕ್ಕು. ಹೀಂಗೆ ಪತ್ತನಾಜೆಗೆ ತುಂಬಾ ವೈಶಿಷ್ಟ್ಯ ಇದ್ದು.
    ಒಪ್ಪಣ್ಣಂಗೆ ಅಭಿನಂದನೆ-ಲಾಯ್ಕ ಆಯಿದು.

    1. ಗೋಪಾಲಣ್ಣಾ..
      ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿ.
      {ಎಡವಪ್ಪಾದಿ ಯಾ ಇಡವಪಗುದಿ } – ಇದರ ಬಗ್ಗೆ ಬೈಲಿಂಗೆ ಹೇಳಿದ್ದು ಒಳ್ಳೆದಾತು.

      ಕೃತಿಕೆ ಕಾವದರ ನೆಂಪುಮಾಡಿದಿ, ಒಳ್ಳೆದಾತು.

      ಪತ್ತನಾಜೆ ಬಗ್ಗೆ ಬರದ ಪದ್ಯ ಭಾರೀ ಕೊಶಿ ಆತು.

  12. ಉತ್ತಮ ಶುದ್ದಿಗೆ ಒಪ್ಪ೦ಗೊ ಒಪ್ಪಣ್ಣಾ..
    ಎನಗೆ ಏರಿಕ್ಕಳದ ನೆ೦ಪಾತು..

    1. ಪೆರುವದಣ್ಣಾ..
      ಒಪ್ಪಕಂಡು ಕೊಶಿ ಆತು.

      ಏರಿಕ್ಕಳದ ಶುದ್ದಿ ಎಂತರ? ಬೈಲಿಂಗೆ ಹೇಳ್ತಿರೋ? 🙂

  13. ಕಳುದ ನಾಲ್ಕೈದು ವಾರದ ಬೇಜಾರ ಹೋತು! ನಮ್ಮ ” ಒರಿಜಿನಲ್ ” ಒಪ್ಪಣ್ಣನೇ ತಿರುಗ ಬಂದದು ನೋಡಿ! ಒಂದು ತಿಂಗಳಿಂದ ನವಗೆ ಬೇಡದ್ದ ಲಾಡನ್ ಲಡಾಯಿ, ಐ.ಪಿ.ಎಲ್., ಓಟು, ಕಮ್ಮಿನಿಷ್ಟೆ, – ಹೀಂಗಿಪ್ಪದರೆಲ್ಲ ಬೈಲಿಂಗೆ (ಒಪ್ಪಣ್ಣನೇ) ತಂದು ಹಾಕಿದ್ದು ನೋಡಿ ರಜ ಆಶ್ಚರ್ಯವೂ, ಬೇಜಾರವೂ ಆದ್ದದು ನಿಜವೆ. ಬೈಲು ಬೆಳೆಯಲಿ; ಆದರೆ ನಮ್ಮವರ ಬೈಲು ನಮ್ಮವರದ್ದೇ, ನಮ್ಮ ಪರಿಸರದ್ಡೇ ಆಗಿರಲಿ, ನವಗಾಗಿಯೇ ಇರಲಿ, ಹೇಳಿ ಎನ್ನ ಅಭಿಪ್ರಾಯ.
    ಕೆಡ್ವಾಸ, ಪತ್ತನಾಜೆ – ಹೀಂಗಿಪ್ಪ ಬೇರೆ ಬೇರೆ ಆಚರಣಗಳ ಬಗ್ಗೆ ಒಪ್ಪಣ್ಣನ ಶುದ್ದಿಗೊ ಬರೇ ಶುದ್ದಿಗೊ ಅಲ್ಲ; ಅದು ತುಂಬ ಮಾಹಿತಿ ಕೊಡುವ, ಸಂಗ್ರಹಿಸಿ ಮಡಿಕ್ಕೊಂಬಲೆ ಯೋಗ್ಯವಾದ ಬರವಣಿಗಗೊ. ಅಲ್ಲದ್ದೆ ಓದಲೆ ಕೊಶಿಯೂ ಆವುತ್ತು; ತಿಳುಕ್ಕೊಂಬಲೆ ಸುಲಬವೂ ಆವುತ್ತು!

    1. ಮಾವಾ,
      ನಿಂಗೊಗೆ ಪಿಸರು ಬರುಸುವ ಸಲಿಗೆಯ ಮಡಿಕ್ಕೊಂಬದು ಒಪ್ಪಣ್ಣಂಗೆ ಕೊಶಿಯ ವಿಶಯವೇ. 🙂
      ಅಂತೇ ಅಂತೇ ಪಿಸುರು ಬಾರ, ಬೈಲಿನ ಮೇಗಾಣ ಪ್ರೀತಿ, ಬೈಲು ಒಳುದು ಬೆಳೇಕು ಹೇಳ್ತ ಆಶಯವೇ ನಿಂಗೊಗೆ ಬೇಜಾರಪ್ಪಲೆ ಕಾರಣ.

      ಆದರೆ, ಬೈಲಿಲಿ ಎಡೆಡೆಲಿ ಒಗ್ಗರಣೆ, ಖಾರ, ಮುರ್ಕುಗೊ ಬರಳಿ ಹೇಳ್ತ ಕಾರಣಂದಾಗಿಯೇ ಹಾಂಗಿರ್ತ ಶುದ್ದಿಗಳ ಹೇಳುದಷ್ಟೇ ಹೊರತು, ಗುಣಮಟ್ಟ ಇಳಿತ್ತ ಯೇವದೇ ಕಾರಣಂದಾಗಿ ಅಲ್ಲ ಮಾವ.

      ನಿಂಗಳ ಪ್ರೀತಿ, ಪ್ರೀತಿಂದಾಗಿ ಬಂದ ಮಾರ್ಗದರ್ಶನ ಒಪ್ಪಣ್ಣಂಗೆ ಅತ್ಯಂತ ಕೊಶಿ ಆವುತ್ತು. ಬಂದು ಮಾರ್ಗದರ್ಶನ ಕೊಟ್ಟುಗೊಂಡಿರಿ ಮಾವಾ..
      ಹರೇರಾಮ

  14. ಒಂದು ಸಂಸ್ಕೃತಿ ಬಗ್ಗೆ ವಿವರವಾಗಿ ತಿಳಿಶಿಕೊಟ್ಟದು ಲಾಯಿಕ ಆಯಿದು.
    ತರವಾಡು ಮನೆ ಸಂಪರ್ಕಲ್ಲಿ ಇಪ್ಪವಕ್ಕೆ ಇದರ ಬಗ್ಗೆ ತಿಳುವಳಿಕೆ ಇಕ್ಕು. ಇಲ್ಲದ್ದವಕ್ಕೆ ಇದೆಲ್ಲಾ ಇಂತದೋ ಹೊಸತು ಹೇಳಿ ಅನ್ಸುಗು. ಪ್ರಕೃತಿಲಿ ಇಪ್ಪ ಶಕ್ತಿಗಳ ನಂಬಿಗೊಂಡು, ಒಂದಲ್ಲದ್ದರೆ ಒಂದು ರೀತಿಲಿ ಅದರ ಪೂಜೆ ಮಾಡುವದೇ ನಮ್ಮ ಸಂಸ್ಕೃತಿ. ಅದರಲ್ಲಿಯೇ ಸುಖ, ನೆಮ್ಮದಿ, ಸಂತೃಪ್ತಿ ಹೊಂದುವದು ನಮ್ಮ ಗುಣ.
    ನಮ್ಮ ಮುಂದಿನವಕ್ಕೆ ಇದರ ತಿಳುವಳಿಕೆ ಸಿಕ್ಕೆಕ್ಕಾರೆ, ಈಗಾಣ ಮಕ್ಕಳ ಹೀಂಗಿಪ್ಪ ಕಾರ್ಯಕ್ರಮಲ್ಲಿ ಭಾಗವಹಿಸುಲೆ ಪ್ರೇರಣೆ ಕೊಡೆಕು. ಅವಕ್ಕೆ ಓದ್ಲೆ ಇದ್ದು ಬರವಲೆ ಇದ್ದು ಹೇಳಿ ಅವರ, ಇದರಿಂದ ದೂರ ನಿಲ್ಲುಸಲೆ ಆಗ.
    ಇತ್ತೀಚೆಗೆ ಜೆಂಬಾರಂಗಳಲ್ಲಿಯೂ ಮಕ್ಕಳ ಭಾಗವಹಿಸುವಿಕೆ ಕಮ್ಮಿ ಆವ್ತಾ ಬತ್ತು. ಹಾಂಗಾಗಿ ಮುಂದೊಂದು ದಿನ ಜೆಂಬಾರ ಹೇಳಿರೆ ಸಮಯಕ್ಕಪ್ಪಗ ಹೋಗಿ ಉಂಡಿಕ್ಕಿಯೋ, ಫಲಾಹಾರ ಮಾಡಿಕ್ಕಿಯೋ ಬಂದರೆ ಆತು ಹೇಳ್ತ ಕಲ್ಪನೆಯೇ ಒಳಿಗಷ್ಟೆ.

    1. ಶರ್ಮಪ್ಪಚ್ಚೀ..
      { ಅವಕ್ಕೆ ಓದ್ಲೆ ಇದ್ದು ಬರವಲೆ ಇದ್ದು ಹೇಳಿ ಅವರ, ಇದರಿಂದ ದೂರ ನಿಲ್ಲುಸಲೆ ಆಗ. }
      ಎನಗೆ ಈ ಮಾತು ತುಂಬ ಕೊಶಿ ಆತು ಅಪ್ಪಚ್ಚಿ.

      ಮಕ್ಕೊಗೆ ನಮ್ಮ ಕ್ರಮಂಗೊ ಅರಡಿಯದ್ದೆ ಅಪ್ಪದೇ ಅವರ ಓದುವಿಕೆಂದಲೋ ಹೇಳಿ ಅನುಸುತ್ತು ಒಂದೊಂದರಿ. ಪರೀಕ್ಷೆಯೋ ಮತ್ತೊ ಇದ್ದರೆ ಹೀಂಗಿತ್ತ ತಂಬಲಕ್ಕೆ ಆರು ಹೋವುತ್ತ? ಹೋಗದ್ದರೆ ಮತ್ತೆ ನಮ್ಮ ಕ್ರಮಂಗೊ ಅರಡಿವದು ಹೇಂಗೆ, ಅಲ್ಲದೋ?

      ಯೇವ ಪರೀಕ್ಷೆಇದ್ದರೂ ಆಚವು ಪಳ್ಳಿಗೆ ಹೋವುತ್ತವಿಲ್ಲೆಯೋ? 🙂

      1. [ಯೇವ ಪರೀಕ್ಷೆಇದ್ದರೂ ಆಚವು ಪಳ್ಳಿಗೆ ಹೋವುತ್ತವಿಲ್ಲೆಯೋ?]- ಬಹಳ ಸರಿಯಾದ ಮಾತು. ಅದೇ ದಿನ ಐ.ಪ್.ಎಲ್ ಇದ್ದರೆ ಪುಸ್ತಕ ಕೈಲಿ ಹಿಡ್ಕೊಂಡು ಟಿವಿ ನೋಡಿಯೊಂಡೇ ಓದಲೆ ಕೂರುತ್ತು.!!

        ನಿನ್ನೆ (ಶುಕ್ರವಾರ) , ಹೈದರಾಬಾದಿಂದ ಒಂದು ಮನುಷ್ಯ ಅದರ ಉದ್ಯೋಗ ನಿಮಿತ್ತ ಹಲವು ಕೆಲಸಕ್ಕೆ ಚೆನ್ನೈ ಬಂದಿತ್ತು. ಎಂಗಳಲಲ್ಲಿಯೂ ರಜಾ ಕೆಲಸ ಇತ್ತು. ಎಡಕ್ಕಿಲ್ಲಿ, ಮಧ್ಯಾನ್ನ 12 ವರೆ ಅಪ್ಪಗ ಎನಗೀಗ ನಮಾಸು ಮಾಡ್ಲೆ ಹೋಯೇಕು, ಮತ್ತೆ ಹೊತ್ತೋಪಗ ವಾಪಾಸು ಬತ್ತೆ ಹೇಳಿಕ್ಕಿ ಹೆರಟತ್ತು. ನಾವಾಗಿದ್ರೆ ಅಲ್ಲಿ ಬಾಳೆ ಹಾಕಲಾತು ಹೇಳಿ ಹೆರಡುತಿತ್ತೋ ಹತ್ರೆ ಕಳೀಯಬಾರದ್ದ ಜೆಂಬ್ರ ಇತ್ತಿದ್ದ್ರೆ ಅಷ್ಟೇ!! ಅದು ಯೇವುದೋ ಊರಿನ ಮನುಷ್ಯ, ಪರ ಊರಿಂಗೆ ಹೋದರೂ ಅದರ ವಾರದ ಹೊತ್ತಿಂಗೆ ಅಲ್ಲಿಗೆ ಹೋಯೇಕು ಹೇಳ್ವ ನಿರ್ಧಾರ !. ನಾವೆಂತ ಹೇಳೆಕು ಅಂಬಗ?!

    1. ರಮೇಶಬಾವಾ..
      ಒಪ್ಪ ಒಪ್ಪವ ಕಂಡು ಕೊಶಿ ಆತು.

      ನಿಂಗಳ ವಿವರ ಹೇಳ್ತರೋ? ಮನೆ ಎಲ್ಲಿ? ಎಂತ ಮಾಡ್ತಾ ಇದ್ದಿ?

  15. ಹರೇ ರಾಮ

    ಬರದ ವಿಷಯದೆ ಕ್ರಮದೆ – ಎರಡುದೇ ಬಾರೀ ಲಾಯಕ ಆಯಿದು.
    ಹೀಂಗೆ ಇಪ್ಪ ಲೇಖನಗಳಿಂದ ನಮ್ಮ ಆಚರಣೆಯ ಬಗೆಗೆ ಮುಂದಾಣ ಜನಂಗೊಕ್ಕೆ ಗೊಂತಾಯೆಕ್ಕಷ್ಟೆ.

    ಹೇಳಿದ ಹಾಂಗೆ ಪೇಟೆಲಿ ಈಗೀಗ ಅಪ್ಪ ಜೆಂಬ್ರಂಗಳಲ್ಲಿ ಊಟದ ಮೊದಲು ಬೆರಳೆಣಿಕೆಯ ಜೆನ ಮಾತ್ರ ಕಾಂಗು. ಊಟ ಆದ ಕೂಡಲೇ ಚೆಪ್ಪರ ಖಾಲಿ.
    ಎಲ್ಲರುದೇ ತುಂಬಾ ಬಿಸಿ. ಹಾಂಗಾದ ಕಾರಣ ಊಟದ ಹೊತ್ತಿಂಗೆ ಒಂದು ಹಾಜರಿ ಹಾಕಿ ಬಪ್ಪದು.
    ಇದರ ನೋಡಿದ ನಮ್ಮ ಮುಂದಿನ ಜನಾಂಗ ಜೆಂಬ್ರಕ್ಕೆ ಹೋಪದು ಹೇಳಿದರೆ ಊಟದ ಹೊತ್ತಿಂಗೆ ಸರಿಯಾಗಿ ಹೋಗಿ ಊಟ ಆದಕೂಡ್ಲೆ ಜಾಗೆ ಖಾಲೆ ಮಾಡೆಕ್ಕು ಹೇಳಿ ತಿಳಿವ ಸಾಧ್ಯತೆ ಇದ್ದು.
    ಮೊದಲೆಲ್ಲ ಜೆಂಬ್ರದ ಮನೆಲೆ ಜೆಂಬ್ರದ ಮೊದಲುದೆ ಮತ್ತುದೆ ಎಷ್ಟು ಖುಶಿ ಇತ್ತಿದ್ದು ಅಲ್ಲದಾ?
    ಮತ್ತೆ ಎಲ್ಲರುದೆ ಸೇರಿ ಸುದರಿಕೆ ಮಾಡಿಗೊಂಡು ಇತ್ತಿದ್ದವು. ಈಗ ಸುದರಿಕೆ ಮಾಡುಲೆ ಎಡಿತ್ತಿಲ್ಲೆ. ಎಡಿಗಾದರುದೆ ಗೊಂತಿಲ್ಲೆ.
    ಹಾಂಗಾದ ಕಾರಣ ಹೆಚ್ಚಿನ ಕಡೆ ಕೇಟರಿಂಗು ವ್ಯವಸ್ಥೆ. ಬಫೆ.
    ಆರೋ ಹೇಳಿದ ಮಾತು : “ಮದುವೆಗೆ ಹೋಗಿ ಉಂಡರೆ ಹೋಟೆಲಿ ಉಂಡ ಹಾಂಗೆಯೇ. ಪೈಸೆ ಕೊಡುಲೆ ಇಲ್ಲೆ ಅಷ್ಟೇ“.

    1. ಅದಪ್ಪು ಮಾವಾ,
      ‘ಆಶೀರ್ವಾದವೇ ಉಡುಗೊರೆ’ ಆದರೆ ಹಾ೦ಗೇ ಹೇಳುಲಕ್ಕು.

      1. ಮರುವಳ ಮಾವನ ಒಪ್ಪ ಕಂಡು ಮಹದಾನಂದ ಆತು.
        ಹೆರಿಯೋರು ಬಂದು ಬೆನ್ನುತಟ್ಟಿರೆ ಶುದ್ದಿ ಹೇಳುಲೂ ಒಂದು ಊಕು ಬತ್ತು ಎಂಗೊಗೆ.

        ಪೇಟೆಯ ಮದುವೆ ಜೆಂಬಾರ, ಮದುವೆ ಊಟದ ಬಗ್ಗೆ ವಿವರಣೆಕೊಟ್ಟದರ ಕಂಡತ್ತು. ಮುಳಿಯಬಾವನ ಒಗ್ಗರಣೆಯೂ ಪಷ್ಟಾಯಿದು!
        ಸಂಗತಿ ಗ್ರೇಶಿರೆ ಬೇಜಾರಾವುತ್ತು ಮಾವ. ನಮ್ಮತನವ ನಾವೇ ಒಳುಶದ್ರೆ ಎಂತಕ್ಕು, ಅಲ್ಲದೋ?

    2. ಇದರ ಸಲುವಾಗಿ ಎಂಗಳ ಮನೆಲಿ ಇತ್ಫ್ತೀಚೆಗೆ ಒಂದು ಪ್ಫ್ರದೋಶ ಪೂಜೆಯ ಕಾರ್ಯಕ್ಫ್ರಮ ಮಾಡಿತ್ಫ್ತಿದ್ಫ್ದೆಯ. ಕೇಟರಿಂಗ ವ್ಫ್ಯವಸ್ಫ್ಥೆ ಇಲ್ಫ್ಲೆ. ಅನುಕೂಲ ಇದ್ಫ್ದರೆ ಬೇಗ ಬಂದು ಬೆಂದಿಗೆ ಕೊರವಲೆ , ಸುದರಿಕೆ ಮಾಡುಲೆ ಸೇರೆಕ್ಫ್ಕು ಹೇಳಿ ವಿನಂತಿ ಮಾಡಿದ್ಫ್ದೆಯ. ಜನಂಗಳ ಸ್ಫ್ಪಂದನ ನೋಡಿ ತುಂಬಾ ಖುಷಿ ಆತು. ಎಲ್ಫ್ಲರುದೆ ಬಹು ಬೇಗನೆ ಬಂದುಬೆಂದಿಗೆ ಕೊರವಲೆ ಸೇರಿದವು. ದೀಪಕ್ಫ್ಕೆ ನೆಣೆ ಮಾಡಿದವು. ರುದ್ಫ್ರ ಚಮಕ ಹೇಳಿದವು. ಸುದರಿಕೆ ಮಾಡಿದವು. ಎಲ್ಫ್ಲರುದೆ ಪಂಚೆ, ಶಾಲಿಲಿ ಬಂದಿತ್ಫ್ತವು. ನಮ್ಫ್ಮ ಗುರುಗಳ ಅನುಗ್ಫ್ರಹಂದ ಅನೇಕರಿಂಗೆ ನಮ್ಫ್ಮ ಸಂಪ್ಫ್ರದಾಯದ ಬಗೆಗೆ ಆಸಕ್ಫ್ತಿ ಬಯಿಂದು. ಒಪ್ಫ್ಪಣ್ಫ್ಣ ಮಾಡುತ್ಫ್ತಿಪ್ಫ್ಪ ಕೆಲಸ ಇದಕ್ಫ್ಕೆ ಪೂರಕವಾಗಿ ಇದ್ಫ್ದು.

  16. ಸಂಗ್ರಹಯೋಗ್ಯ ಲೇಖನ ಕೊಟ್ಟೆ ಒಪ್ಪಣ್ಣೋ! ತುಂಬಾ ಮಾಹಿತಿ ಇದ್ದ ಸಂಚಿಕೆ.. ಪತ್ತನಾಜೆಯ ಆಚರಣೆ ತುಂಬಾ ಅರ್ಥಪೂರ್ಣ ಹೇಳುದರಲ್ಲಿ ಎರಡು ಮಾತಿಲ್ಲೆ.. ಸಂದರ್ಭೋಚಿತವಾಗಿ ಶುದ್ದಿ ಹೇಳಿ ಬೈಲಿನೋರ ಚಿಂತನೆಗೆ ಹಚ್ಚುವ ಪ್ರಯತ್ನ ಮಾಡಿದ್ದೆ.. ಒಂದೊಪ್ಪ ಮನಸ್ಸಿಂಗೆ ತಟ್ಟಿತ್ತು.. ನಮ್ಮ ಸಂಸ್ಕೃತಿಯ, ಆಚರಣೆಗಳ ಬಗ್ಗೆ ನಾವು ನಮ್ಮ ಮುಂದಾಣ ಪೀಳಿಗೆಗೆ ಹೇಳದ್ರೆ ಅದು ಮತ್ತೆ ಅಳುದೇ ಹೋಕನ್ನೆ.. ಆಚರಣೆಗೊ ’ಗತಕಾಲದ ವೈಭವ’ ಅಪ್ಪಂದ ಮೊದಲೇ ಅದರ ವೈಭವದ ಪರಿಚಯ ನಮ್ಮ ಪೀಳಿಗೆಗೂ, ನಮ್ಮ ನಂತ್ರದ ಪೀಳಿಗೆಗೂ ಮಾಡ್ಸಿಕೊಡೆಕ್ಕಾದ್ದದು ತುಂಬಾ ಅಗತ್ಯ. ಸುಂದರ ನಿರೂಪಣೆಗೆ ಧನ್ಯವಾದಂಗೋ!…
    ಹರೇರಾಮ!

    1. ಬಲ್ನಾಡುಮಾಣೀ..
      ನಮ್ಮ ಮುಂದಾಣೋರಿಂಗೆ ಪರಿಚಯ ಮಾಡ್ತ ಕಾರ್ಯ ಇಡೀ ಬೈಲೇ ಮಾಡಿಗೊಂಡಿಪ್ಪದು ಒಪ್ಪಣ್ಣಂಗೆ ಕೊಶಿಯೇ ಕೊಶಿ.

      ತಂಬಲ ಹೇಳುವಗ ನೆಂಪಾತು, ಬಲ್ನಾಡಿಲಿ ಒಂದು ಬೂತ ಇದ್ದಲ್ಲದೋ?
      ಅಲ್ಲಿ ಪತ್ನಾಜೆಗೆ ಗವುಜಿ ಇತ್ತಿಲ್ಲೆಯೋ?
      ಇದ್ದರೆ ಬೈಲಿಂಗೆ ಹೇಳಿಕ್ಕು, ಆತೋ? ಕಾದೊಂಡಿರ್ತೆ. 🙂

  17. {ಈಗಾಣ ಮಕ್ಕೊಗೆ ಇದೆಲ್ಲ ಅರಡಿಗೋ?
    ಬನ್ನಿ, ನಮ್ಮ ಮುಂದಾಣೋರಿಂಗೆ ತಿಳಿಶಿ ಕೊಡುವೊ. ಬೈಲಿನ ಆಚಾರ ವಿಚಾರಂಗಳ ನೆಂಪುಮಾಡುಸಿ ಬಿಡುವೊ.
    ಕೆಡ್ವಾಸ, ಪತ್ನಾಜೆ ಹೀಂಗಿರ್ತ ಸ್ಥಳೀಯ ಆಚರಣೆಗಳ ಹೆರ ಗೊಂತಪ್ಪ ಹಾಂಗೆ ಮಾಡುವೊ….}

    ಸತ್ಯಕ್ಕಾರೆ ಎನಗೂ ತಂಬಿಲವ ನೋಡಿ ಗೊಂತಿಲ್ಲೆ.ಕೇಳಿ ಮಾಂತ್ರ ಗೊಂತು. ಸಣ್ಣಾಗಿಪ್ಪ ಲಾಗಾಯ್ತು ಪೇಟೆಲಿ ಬೆಳದ್ದದು. ಬೆಳದ ಮೇಲೆ ಊರು ಬಿಟ್ಟಾತು. ತಂಬಿಲದ ಬಗ್ಗೆ ವಿವರವಾಗಿ ಪರಿಚಯಿಸಿದ್ದಕೆ ಒಪ್ಪಣ್ಣಂಗೆ ಒಂದೊಪ್ಪ.

    1. ತೆಕ್ಕುಂಜೆ ಕುಮಾರಬಾವ..
      ತಂಬಿಲವ ನೋಡದ್ರೆ ಸಂಗತಿ ಅಲ್ಲ, ನೋಡ್ಳೆ ಆಸಗ್ತಿ ಇದ್ದಲ್ಲದೋ?
      ಬನ್ನಿ, ಇನ್ನಾಣಸರ್ತಿ ಬೈಲಮೂಲೆಲಿ ತಂಬಲ ಅಪ್ಪಗ ಹೇಳಿಕಳುಸುತ್ತೆ, ಒಂದು ರಜೆ ತೆಗದು ಮಡಗಿ, ಆಗದೋ? ಏ°?

      ಒಂದೊಪ್ಪ ಕಂಡು ಒಪ್ಪಣ್ಣಂಗೆ ಕೊಶಿ ಆತು..

  18. ತಂಬಿಲದ ಆಚರಣೆಯ ಮಹತ್ವ/ಕ್ರಮಂಗೊ ಈಗಾಣ ಹೆಚ್ಚಿನ ಮಕ್ಕೊಗೊಕ್ಕೆ ಗೊಂತಿಲ್ಲೆ. ಅದರ ಒಪ್ಪಕ್ಕೆ ವಿವರಿಸಿಕೊಟ್ಟದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ…
    ಲೇಖನ ತುಂಬಾ ಒಪ್ಪ ಆಯಿದು… 🙂

    1. ಮುಣ್ಚಿಕಾನ ಬಾವನ ಒಪ್ಪ ಒಪ್ಪ ಕಂಡು ಕೊಶಿ ಆತು.
      ತಂಬಿಲಕ್ಕೆ ಸಮ್ಮಂದಪಟ್ಟ ಶುದ್ದಿ ನಿಂಗಳತ್ಲಾಗಿಯೂ ಆಯಿದೋ?

      ಆಗಿದ್ದರೆ ಬೈಲಿಂಗೆ ಹೇಳಿ, ಆತೋ?

  19. ಪತ್ತನಾಜೆಗೆ ಪತ್ತನೇ ಆಜೆಯ ಸುದೀರ್ಘ ಪರಿಚಯ , ಪತ್ತನಾಜೆಯ ತಂಬಲವ ಹೊತ್ತುಹೋಪ ಮೊದಲೇ ನೆಂಪುಮಾಡಿದ್ದು ಖುಶೀ ಆತು.
    ಲಕ್ಕೇಸಿರಿ (ರಕ್ತೇಶ್ವರಿ), ಜುಮಾದಿ (ಧೂಮಾವತಿ), ಪಂಜುರುಳಿ ( / ಪಂಜುರ್ಲಿ) (ಹಂದಿಮೋರೆ ಇರ್ತದು), ಪಿಲಿಚ್ಚಾಮುಂಡಿ (ಹುಲಿ ಮೇಲಿಪ್ಪ ಚಾಮುಂಡಿ) – ಪರಿಚಯವೂ ಆತು.

    ಹಳ್ಳಿಲಿ ಇದೆಲ್ಲ ಕಾಂಬಲೆ ಚೆಂದ. ಆದರೆ , ಈ ಬನ, ಕಲ್ಲು, ಕೊಟ್ಟಗೆ ಪೇಟೆಗಳಲ್ಲಿ ಏಕೆ ಉಪದ್ರ ಕಾಣುತ್ತಿಲ್ಲೆ?. ಕಾಡು ಕಡುದೇ ಪೇಟೆ ಆದ್ದಲ್ಲದೋ, ಅಲ್ಲಾ, ಈ ಭೂತ – ನಾಗಂಗೊ ಅದರಿಂದ ಮದಲೇ ಜಾಗೆ ಕಾಲಿ ಮಾಡಿದ್ದವೋ?!
    ಎಲ್ಲಾ ಒಂದು ನಂಬಿಕೆ. ನಂಬಿದವಂಗೆ ಎಲ್ಲವೂ ಇದ್ದು. ಇಲ್ಲದ್ದವಂಗೆ ಮುಂಜಿಯೂ ಇಲ್ಲೇ ಪಟ್ಟೆನೂಲೂ ಬೇಡ.! ಅದರ ಐತಿಹ್ಯ ಪ್ರಾಮುಖ್ಯತೆ ಗೊಂತಿದ್ದರೆ ಅಲ್ಲದೋ ಉಳಿತ್ತದು ಉಳುಶುತ್ತದು.

    ಹತ್ತು ತಲೆಮಾರಿಂಗೂ ನಮ್ಮತನ ಉಳಿಯೆಕು ಹೇಳ್ವ ಒಪ್ಪಣ್ಣನ ಕಾರ್ಯ ಒಪ್ಪ.

    1. ಚೆನ್ನೈಭಾವಾ..
      ಇರುಳು ಶುದ್ದಿ ಹೇಳಿ ಮನುಗಿ ಒರಗಿ ಏಳುವ ಮೊದಲೇ ಚೆನ್ನೈಭಾವನ ಒಪ್ಪ!
      ಕೊಶೀ ಅಪ್ಪದಿದಾ..

      {ಈ ಭೂತ – ನಾಗಂಗೊ ಅದರಿಂದ ಮದಲೇ ಜಾಗೆ ಕಾಲಿ ಮಾಡಿದ್ದವೋ?!}
      ತಾರ್ಕಿಕ ಮಾತು ಹೇಳಿದಿ ಬಾವಾ, ನಿಜವಾಗಿಯೂ ಯೋಚನೆ ಮಾಡೇಕಾದ ವಿಚಾರ.
      ಪೇಟೆಂದ ಜಾಗೆ ಕಾಲಿ ಮಾಡಿದ್ದವೋ, ಅಲ್ಲ ಪೇಟೆಯೋರ ಮನಸ್ಸಿಂದ ಜಾಗೆ ಕಾಲಿಮಾಡಿದ್ದವೋ…?

      ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×