Oppanna.com

ರಾವಣ-ಕೀಚಕರಿಂದ ಶ್ರಾವಣ ಪೌರ್ಣಮಿ ರಕ್ಷಣೆ ಕೊಡ್ಳಿ..

ಬರದೋರು :   ಒಪ್ಪಣ್ಣ    on   03/08/2012    15 ಒಪ್ಪಂಗೊ

ಸೌರಮಾನದ ಲೆಕ್ಕಲ್ಲಿ ಅಶುಭ ಆಟಿ ಇನ್ನೂ ಮುಗುದ್ದಿಲ್ಲೆ.
ಆದರೆ, ಚಾಂದ್ರಮಾನ ಲೆಕ್ಕಲ್ಲಿ ಅಶುಭ ಆಷಾಡ ಮುಗುದು ಶುಭ ಮಾಸ – ಶ್ರಾವಣ ಬಂದಾಯಿದು.
ಪ್ರತಿ ತಿಂಗಳಿನ ಪ್ರತಿ ಪರ್ವದಿನಂಗೊ ನವಗೆ ವಿಶೇಷ ಆದರೂ – ಶ್ರಾವಣ ತಿಂಗಳಿನ ಪೌರ್ಣಮಿಲಿ ನವಗೆ ಮತ್ತೊಂದು ಗವುಜಿ ಇದ್ದು.
ಅದುವೇ “ರಕ್ಷಾಬಂಧನ”.
~
ಮದ್ದುಬಿಡ್ತ ಪಂಪಿಂಗೆ ಕಂಟ್ರೋಲು ಹಾಳಾಗಿತ್ತು; ಸರಿಮಾಡುಸೆಂಡು ಬತ್ತೆ ಹೇದು ಕೊಡೆಯಾಲಕ್ಕೆ ಹೋಗಿತ್ತಿದ್ದೆ – ಓ ಮನ್ನೆ.
ನೆಗೆಚಿತ್ರ ಶಾಮಣ್ಣನ ಮನೆ ಇಪ್ಪದುದೇ ಕೊಡೆಯಾಲಲ್ಲೇ; “ಹೇಂಗೂ ಬಯಿಂದನ್ನೇ – ಒಂದರಿ ಮಾತಾಡ್ಸಿಕ್ಕೊ ಹೋಪೊ°” ಹೇದು ಅವರ ಮನಗೆ ಹೋದೆ.
ಒಂದರಿಯಾಣ ಕೆಲಸ ಮುಗುಶಿ ನಾವು ಅಲ್ಲಿಗೆತ್ತುವಗ ಹೊತ್ತು ಮಜ್ಜಾನ ಕಳುದಿದ್ದತ್ತು.
ನವಗೆ ಊಟ ಹೇಂಗೂ ಅಭಾವನ ಒಟ್ಟಿಂಗೆ ಆದ ಕಾರಣ ಇನ್ನು ಆ ತಲೆಬೆಶಿ ಇಲ್ಲೆ.

ಮುನ್ನಾಣದಿನ ಇರುಳಿಡೀ ಆಟ ನೋಡಿದ್ದ ಶಾಮಣ್ಣಂಗೆ ಉಂಡಿಕ್ಕಿ ಒಳ್ಳೆ ಒರಕ್ಕು ಹಿಡುದಿದ್ದತ್ತು; ಕಂಪ್ಯೂಟ್ರು ಕೋಣೆಲಿ ಹಾಸಿಗೆ ಬಿಡುಸಿ ಗುಡಿಹೊದ್ದು ಮನುಗಿತ್ತಿದ್ದವು.
ಅತ್ತಿಗೆಗೆ ಊಟ ಆವುತ್ತಾ ಇದ್ದತ್ತಷ್ಟೆ.
ಅಣ್ಣನ ಏಳುಸೇಕೋ – ಕೇಳಿದವು ಅತ್ತಿಗೆ. “ಇರಳಿ, ಮನುಗಲಿ – ಹದಾಕೆ ಏಳ್ಸಿರೆ ಸಾಕು; ಎನಗೂ ಒಂದು ಹಸೆ ಕೊಟ್ರೆ ಆನುದೇ ಮನುಗುವೆ” – ನೆಗೆಮಾಡಿಂಡೇ ಹೇಳಿದೆ.
ಅತ್ತಿಗೆ ಉಂಡಿಕ್ಕಿ ಹಸೆ ಹಾಕುಗಷ್ಟೇ – ಸೀತ ಎದ್ದು ಕಿಟುಕಿಕರೆಲಿ ನಿಂದೆ.
~
ಶಾಮಣ್ಣನ ಮನೆ ಇಪ್ಪದು ಉಪ್ಪರಿಗೆಲಿ ಆದರೆ, ಅಲ್ಲೇ ಕೆಳಾಚಿ ಇಪ್ಪದು ನಮ್ಮ ಪೊಸವಣಿಕೆ ಅಣ್ಣನ ಮನೆ.
ಅವರ ಗುರ್ತ ಇದ್ದಲ್ಲದೋ?
ಸುಭಗಬಾವನ ಮನೆದೇವರು ಹೇಂಗೆ ಉಮಾಮಹೇಶ್ವರನೋ, ಪೊಸವಣಿಕೆ ಅಣ್ಣನ ಮನೆದೇವರು ಈಶ್ವರನೇ – ಪಂಚಲಿಂಗೇಶ್ವರ!
ಅವರ ಮಕ್ಕಳ ಸೋದರಮಾವ ಹೇದರೆ, ಜಾಣನ ಸೋದರಮಾವನೂ ಅಪ್ಪು.
ಕುಂಟಾಂಗಿಲ ಭಾವಂಗೆ ಎರಡೂ ಮನೆ ಸೊಳೆಬೆಂದಿಯೂ ಒಂದೇ ರುಚಿ ಆಡ!
ಪ್ರತಿಒರಿಶ ದೊಡ್ಡಜ್ಜನಲ್ಲಿ ಕಾಸಿದ ಪೆರಟಿ ಉಂಡೆಗಳಲ್ಲಿ ದೊಡ್ಡದು ಸುಭಾವನಲ್ಲಿಗೆ ಹೋದರೆ, ಎರಡ್ಣೇದು ಪೊಸವಣಿಕೆ ಅಣ್ಣನಲ್ಲಿಗೆ ಹೋಕು.

ಅಜ್ಜಕಾನ ಭಾವನ ನಮ್ಮ ಬೈಲಿಲಿ ಅಭಾವ ಹೇಳಿದಹಾಂಗೆ, ಪೊಸವಣಿಕೆ ಅಣ್ಣನ “ಪ್ರಭಾವ” ಹೇಳಿಯೂ ಹೇಳ್ತವು.
ಅವರ ಹೆಸರು ಹೊಂದುಸ್ಸು ಮಾಂತ್ರ ಅಲ್ಲದ್ದೆ, ಸಮಾಜಲ್ಲಿ ಒಳ್ಳೆತ ಪ್ರಭಾವಳಿಯೂ ಇಪ್ಪ ಕಾರಣವೋ ಏನೋ, ದೊಡ್ಡಭಾವನೂ ಈ ಹೆಸರನ್ನೇ ಹೇಳುಗು ಒಂದೊಂದರಿ.
ಹಿಂದಂದ ಹಾಂಗೆ ಹೇಳ್ತರೂ ಎದುರೇ ಮಾತಾಡುವಗ ಹಾಂಗೆಲ್ಲ ದಿನಿಗೆಳುಲೆ ಲಾಯಿಕಾವುತ್ತಿಲ್ಲೆ; ಪೊಸವಣಿಕೆ ಅಣ್ಣ ಹೇಳಿಯೇ ಹೇಳುಸ್ಸು!
ಅದಿರಳಿ.
~

ಮಾಳಿಗೆಲಿರ್ತ ಶಾಮಣ್ಣನ ಮನೆಕಿಟಿಕಿಂದ ಇಣ್ಕಿ ನೋಡುವಗ ಜಾಲಕರೆಲಿ ನೆಟ್ಟ ಹೂಗೆಡುಗೊ, ಸಂಪಗೆ ಜಾಜಿ ಮರಂಗೊ ಕಂಡತ್ತು – ಇದೇ ಪೊಸವಣಿಕೆ ಅಣ್ಣನ ಮನೆದೇವರ ಏರ್ಪಾಡುಗೊ. ಚೆಂದದ ಗೆಡುತೋಟಕ್ಕೆ ದಿನಾಗುಳೂ ನೀರು ತೋಕಲೆ ಸ್ಪ್ರಿಂಕ್ಲರು ಇದ್ದು; ದೊಡ್ಡಜ್ಜನ ಅಡಕ್ಕೆತೋಟಕ್ಕೆ ಇರ್ತಷ್ಟು ದೊಡ್ಡಮಟ್ಟಿಂದು ಅಲ್ಲ, ಹದಾದ್ದು – ಇನ್ನೂ ಸಣ್ಣದು.
ಅದು ತಿರುಗೆಂಡು ಪಚಪಚನೆ ಹುಲ್ಲಿನ ಚೆಂಡಿಮಾಡಿಂಡಿದ್ದತ್ತು.
ಹೇಂಗೂ ಶಾಮಣ್ಣನ ಒರಕ್ಕು ರಜ ಹೊತ್ತಿಕ್ಕು; ಒಂದರಿ ಪಕ್ಕನೆ ಕೆಳ ಹೋಗಿ ಮಾತಾಡಿಕ್ಕಿ ಬಪ್ಪನೋ?
– ಏಣಿ ಇಳ್ಕೊಂಡು ಹೋದೆ.
~

ಮಕ್ಕೊ ಶಾಲಗೆ ಹೋಗಿತ್ತ ಕಾರಣ ಮನೆ ಮವುನ ಇದ್ದತ್ತು. ಮವುನ ಇದ್ದರೆ ಮಾಂತ್ರ ದೊಡ್ಡಮ್ಮಂಗೆ ಸಮಗಟ್ಟು ಒರಕ್ಕು ಬಕ್ಕಷ್ಟೆ!
ಅತ್ತಿಗೆ ಹೂಗಿನ ಗೆಡುವಿಂಗೆ ನೀರಿನ ಏರ್ಪಾಡು ಮಾಡಿಂಡಿತ್ತಿದ್ದವು.
ಹೋಗಿ ಮಾತಾಡಿ ಅಪ್ಪದ್ದೇ – ಕುರ್ಶಿಮೇಜಿಲಿ ಇದ್ದಿದ್ದ ಮಾಣಿಯ ಹರಗಾಣಂಗಳ ಅಂಬೆರ್ಪಿಲಿ ಒತ್ತರೆ ಮಾಡಿ ಆಸರಿಂಗೆ ತಪ್ಪಲೆ ಒಳ ಹೋದವು ಅತ್ತಿಗೆ.
ಪೊಸವಣಿಕೆ ಅಣ್ಣ ಬೆಳಿಒಸ್ತ್ರ ಸುತ್ತಿಂಡು ಎಲ್ಲಿಗೋ ಹೆರಟೊಂಡಿತ್ತಿದ್ದವು – ಹೆರಡ್ಳಪ್ಪಗ ಎಲ್ಲಿಗೆ ಕೇಳುಲಾಗ ಇದಾ.
ಆ ಹೆರಡಾಣದ ಎಡಕ್ಕಿಲಿಯೂ ಬಂದು ಎದುರೆ ಕೂದು ಮಾತಾಡ್ಳೆ ಸುರುಮಾಡಿದವು.
ಹೀಂಗೀಂಗೆ – ಶಾಮಣ್ಣನ ಹತ್ತರೆ ಮಾತಾಡ್ಳೆ ಬಂದದು, ಅವು ಆಟದ ಅಮಲಿಲಿ ಒರಗಿದ್ದು – ಎಲ್ಲವೂ ಶುದ್ದಿ ಮಾತಾಡಿ ಆತು.
ಅತ್ತಿಗೆ ಕಾಪಿ, ಹಪ್ಪಳ ತಂದು, ಕುಡುದೂ ಆತು.
ರಜ ಹೊತ್ತು ಹಾಂಗೇ ಮಾತಾಡುವಗ ಪೊಸವಣಿಕೆ ಅಣ್ಣಂಗೆ ಮೆಲ್ಲಂಗೆ ಅಂಬೆರ್ಪು ಅಪ್ಪಲೆ ಸುರು ಆತು.

ತಂಗೆ ದ್ರೌಪದಿಗೆ ಶ್ರೀಕೃಷ್ಣಾನುಗ್ರಹವೇ “ರಕ್ಷೆ”. (ಪಟ: ಅಂತರ್ಜಾಲ)

ಸಂಘದ ಲೆಕ್ಕಲ್ಲಿ – ರಕ್ಷಾಬಂಧನದ ಲೆಕ್ಕದ ಕಾರ್ಯ ಎಲ್ಲಿಯೋ ಇದ್ದು – ಅದಕ್ಕೆ ತೆಯಾರಿ ಮಾಡ್ಲೆ ಹೋಪಲಿದ್ದದು – ಹೇದು ಗೊಂತಾತು.
ಆಗಳೇ ಹೆರಟಿತ್ತಿದ್ದವು; ಒಪ್ಪಣ್ಣಂಗೆ ಬೇಕಾಗಿ ಇಷ್ಟು ಹೊತ್ತು ಮಾತಾಡ್ಳೆ ಕೂದ್ಸು! ಪಾಪ.
ಒಂದು ಆಸರಿಂಗೆ, ರಜ್ಜ ಮಾತುಕತೆ ಆದಪ್ಪದ್ದೇ ಇನ್ನು ಮೆಲ್ಲಂಗೆ ನಾವುದೇ ಹೆರಡ್ತು – ಹೇದು ಎದ್ದಿಕ್ಕಿ ಶಾಮಣ್ಣನ ಮನೆಗೆ ಪುನಾ ಬಂದೆ.
ಬಪ್ಪಲೆ ಉಪ್ಪರಿಗೆ ಮೆಟ್ಟು ಹತ್ತುವಗ ರಕ್ಷಾಬಂಧನವೇ ತಲೆಲಿ ತಿರುಗೆಂಡಿದ್ದತ್ತು.
ಸಣ್ಣ ಇಪ್ಪಾಗ ಕೇಳಿದ – ರಕ್ಷಾಬಂಧನಕ್ಕೆ ಸಮ್ಮಂದಪಟ್ಟ ಹಲವು ಶುದ್ದಿಗೊ ತಲೆಲಿ ಬಪ್ಪಲೆ ಸುರು ಆತು.
~
ಒಪ್ಪಣ್ಣ ಸಣ್ಣ ಇಪ್ಪಾಗ ಊರೊಳದಿಕೆ ಇದ್ದಿದ್ದ ಹಲವು ಮಂತ್ರವಾದಿಗಳಲ್ಲಿ ಗೆಡ್ಡದಜೋಯಿಶರುದೇ ಒಬ್ಬರು.
ಊರಿಲಿ ಆರಿಂಗಾರು ಏನಾರು ಬೂತಪಿಶಾಚಿ ತೊಂದರೆ ಇದ್ದರೆ ಈ ಗೆಡ್ಡದ ಜೋಯಿಶರ ಹತ್ತರೆ ಬಕ್ಕು; ಬಸ್ಮವೋ, ಪಟ್ಟೆನೂಲೋ, ವಿಭೂತಿಯೋ, ತೆಂಙಿನಕಾಯಿಯೋ ಎಂತಾರು ಮಂತರ್ಸಿ ಕೊಡುಗು. ಅದುವೇ ಅವರ ಮನಗೆ ರಕ್ಷೆ! 😉
ನಮ್ಮ ಊರಿಲಿ ರಕ್ಷೆ ಹೇಳಿರೆ ಪರಿಕಲ್ಪನೆ ಇಷ್ಟೇ ಇದ್ದದಾದರೂ – ಒಟ್ಟಾರೆ ನೋಡಿರೆ ಇನ್ನೂ ಹೆಚ್ಚಿನ ವಿಸ್ತಾರ ಇದ್ದು.

ಜೀವನ ಹೇದರೆ ಪುರುಷ, ಜೀವಿಕೆ ಹೇದರೆ ಸ್ತ್ರೀ.
ಇದೆರಡೂ ಸಮತೂಕಲ್ಲಿದ್ದರೇ ಸಂಸಾರ ನೆಡೆಸ್ಸು – ಹೇಳ್ತವು ತಿಳುದೋರು.
ಸ್ತ್ರೀಗೆ ಸಂಸಾರ ತೂಗುವ ಜೆಬಾದಾರಿ, ಪುರುಷಂಗೆ ಸಂಸಾರ ಹೊತ್ತೊಂಬ ಜೆಬಾದಾರಿ.
ಸ್ತ್ರೀ – ಪುರುಷ ಹೇದರೆ ಗೆಂಡೆಂಡತ್ತಿಯೇ ಆಯೇಕು ಹೇದು ಏನಿಲ್ಲೆ, ಅಣ್ಣ ತಂಗೆಯೂ ಅಕ್ಕು; ಅಕ್ಕ ತಮ್ಮನೂ ಅಕ್ಕು, ಅಮ್ಮ ಮಗನೂ ಅಕ್ಕು, ಅಪ್ಪ ಮಗಳೂ ಅಕ್ಕು, ಮಾವ-ಸೊಸೆಯೂ ಅಕ್ಕು, ಅತ್ತೆ-ಅಳಿಯನೂ ಅಕ್ಕು.
ಅದೇನೇ ಇರಳಿ, ಪರಸ್ಪರ ಹೊಂದಾಣಿಕೆ, ಅವಲಂಬನೆ ಇದ್ದೇ ಇರ್ತು.
ಸಂಸಾರಲ್ಲಿ ಹಲವು ಅವಗಢಂಗೊ, ಅನಪೇಕ್ಷಿತ ಪರಿಸ್ಥಿತಿಗೊ ಎಲ್ಲವೂ ಎದುರಾದರೆ ಸ್ತ್ರೀ-ಪುರುಷ ಎಲ್ಲೋರುದೇ ಸೇರಿ ಎದುರುಸುತ್ತದು.
ವಿಶೇಷವಾಗಿ, ಸಂಸಾರ ನೆಡೆಶುವ ಸ್ತ್ರೀಗೆ ಅವಗಢಂದ ರಕ್ಷಣೆ ಬೇಕಾರೆ ಗೆಂಡ ಮಾಂತ್ರ ಒಟ್ಟಿಂಗಿದ್ದರೆ ಸಾಲ, ಹಲವು ಅಣ್ಣತಮ್ಮಂದ್ರುದೇ ಒಟ್ಟಿಂಗೆ ಬೇಕಾವುತ್ತು. ಅಲ್ಲದೋ?
ರಕ್ಷಾಬಂಧನದ ದಿನ ಇದನ್ನೇ ಸಾರಸತ್ವವಾಗಿ ಹೇಳುಸ್ಸು.
ಅದು ಯೇವದಿನ?

~
ಶಂಬಜ್ಜ ಹೇಳಿದ ಒಂದುಕತೆ ನೆಂಪಾವುತ್ತು.
ಮಹಾಭಾರತ ಕಾಲಲ್ಲಿ ಒಂದರಿ ಶ್ರೀಕೃಷ್ಣಂಗೆ ಯೇವದೋ ಯುದ್ಧಲ್ಲಿ ಕೈಗೆ ರಜಾ ಗಾಯ ಆಗಿತ್ತಾಡ.
ಕೃಷ್ಣನ ಭಾವಂದ್ರು ಪಂಚಪಾಂಡವರ ಪತ್ನಿ ದ್ರೌಪದಿ ಆ ಗಾಯವ ಕಂಡಪ್ಪದ್ದೇ, ಅದರ ಸೀರೆಂದ ಒಂತುಂಡು ಹರುದು ಗಾಯಕ್ಕೆ ಕಟ್ಟಿತ್ತಾಡ. ಶ್ರೀಕೃಷ್ಣಂಗೆ ಭಾವಂದ್ರ ಹೆಂಡತ್ತಿಯೂ ಆದ ದ್ರೌಪದಿ ಮತ್ತೊಂದರಿ ತಂಗೆ ಆತು.
ಶ್ರೀಕೃಷ್ಣ ಇದರ ಮರದ್ದನಿಲ್ಲೆ. ಆ ದಿನ ಕಟ್ಟಿದ ಆ ಒಸ್ತ್ರದ ತುಂಡು “ರಕ್ಷೆ” ಆಗಿ ಬದಲಾತು; ಮುಂದೆ ಎಂದಿಂಗೂ ಆ ತಂಗೆಯ ಕಾಪಾಡುವ ಸಂಕಲ್ಪ ಮಾಡಿಗೊಂಡ.
ಮುಂದೆ ಒಂದಿನ – ದುರುಳ ದುಶ್ಯಾಸನ ತುಂಬಿದ ಸಭೆಲಿ ದ್ರೌಪದಿಯ ಸೀರೆ ಎಳೆತ್ತ ಸನ್ನಿವೇಶ ಬಂತಲ್ಲದೋ – ಆ ದಿನ ದ್ರೌಪದಿ ಹೇಳಿದ್ದು “ಕೃಷ್ಣಾ…” ಹೇಳಿ. ಕೃಷ್ಣನ ತಂಗೆ; ಕೃಷ್ಣಂಗೆ ರಕ್ಷೆ ಕಟ್ಟಿದ ದ್ರೌಪದಿಯೇ ಹಾಂಗೆ ಆರ್ತಳಾಗಿ ದಿನಿಗೆಳುವಾಗ ಕೃಷ್ಣ ಸುಮ್ಮನೆ ಕೂರುಗೋ? – ಸೀರೆ ಅಕ್ಷಯ ಆತು.
ಅಂದು ದ್ರೌಪದಿಯ ಮಾನ ಒಳುತ್ತು. ಮುಂದೆ ದುಶ್ಯಾಸನ ಕ್ಷಯ ಆತು.
ಮುಂದೆ ಒಂದಿನ ಇದೇ ಬುದ್ಧಿಯ ಕೀಚಕನೂ ಹೀಂಗೇ ಉಪದ್ರ ಕೊಟ್ಟಿದನಾಡ. ಆದರೆ ದೇವರೊಲುಮೆಲಿ ಎಲ್ಲವೂ ನಿರಾಳ ಆತಾಡ.
ದ್ರೌಪದಿ ಕೃಷ್ಣನ ಕೈಯ ಗಾಯಕ್ಕೆ ಒಸ್ತ್ರ ಕಟ್ಟಿದ್ದು ಶ್ರಾವಣ ಮಾಸದ ಹುಣ್ಣಮೆಯ ದಿನ ಆಡ. ಹಾಂಗಾಗಿ ಅದುವೇ ರಕ್ಷಾಬಂಧನ ಆತಾಡ.
~
ಮದಲಿಂಗೆಲ್ಲ – ಹುಂಡು ಹುಂಡು ರಾಜ್ಯಂಗೊ – ಸಣ್ಣ ಸಣ್ಣ ರಾಜಂಗೊ. ಈಗಾಣ ತಾಲೂಕಿನಷ್ಟರ ವ್ಯಾಪ್ತಿಗೆ ಒಂದು ರಾಜ್ಯ!
ಈ ರಾಜ ಆಚ ರಾಜ್ಯಕ್ಕೆ ಧಾಳಿ ಮಾಡುದು; ಅಲ್ಯಾಣವ ಇನ್ನೊಂದು ದಿಕ್ಕಂಗೆ.
ಹೀಂಗೇ ಧಾಳಿ ಮಾಡುವಗ ಊರಿಲಿಪ್ಪ ಮಕ್ಕೊಹೆಮ್ಮಕ್ಕೊ ಗೆಂಡುಮಕ್ಕೊಗೂ ತೊಂದರೆ ಅಪ್ಪದು ಇಪ್ಪದೇ.
ಇಂತಾ ಪರಿಸ್ಥಿತಿಗಳಲ್ಲಿ ಶ್ರೀರಕ್ಷೆ ಆಗಿ ಒದಗಲೆ ಗೆಡ್ಡದ ಜೋಯಿಶರ ಭಸ್ಮ ಮಂತರ್ಸಿದ್ದು ಮಾಂತ್ರ ಸಾಲ; ಗಟ್ಟಿಮುಟ್ಟಿನ ಅಣ್ಣತಮ್ಮಂದ್ರೂ ಬೇಕು.
ಹಾಂಗಾಗಿ ಒರಿಶಕ್ಕೊಂದರಿ ಅಣ್ಣತಮ್ಮಂದಿರ ಕೈಗೆ ರಕ್ಷೆ ಕಟ್ಟಿ ಜೆಬಾದಾರಿಯ ನೆಂಪುಮಾಡುಸಿಗೊಂಡು ಇತ್ತಿದ್ದವಾಡ; ಉತ್ತರ ಭಾರತಲ್ಲಿ.
~
ಮಾಷ್ಟ್ರುಮಾವ° ಒಂದು ಕತೆ ಹೇಳಿತ್ತಿದ್ದವು –
ಯೇವದೋ ಮೊಘಲ್ ರಾಜ – ಜಹಂಗೀರೋ, ಅಕ್ಬರನೋ ಇಬ್ರಾಯಿಯೋ – ಒಪ್ಪಣ್ಣಂಗೆ ನೆಂಪಿಲ್ಲೆ.
ಆ ರಾಜಂಗೆ ಹತ್ತರಾಣ ರಜಪೂತ ರಾಣಿ ರಕ್ಷೆ ಕೊಟ್ಟು ಕಳುಸಿದ್ದತ್ತಾಡ.
ಇದರಿಂದಾಗಿ ನಿಜವಾದ ಸಹೋದರ ಭಾವಲ್ಲಿ ಆ ರಾಣಿಯ ಕಂಡು ಜೀವಮಾನ ಪೂರ್ತಿ ರಕ್ಷೆ ಕೊಟ್ಟಿದಾಡ.
ಮೊಘಲ್ ರಾಜ್ಯವಿಸ್ತಾರದ ಎಡೆಲಿ ಆ ರಾಜ್ಯಕ್ಕೆ ಧಾಳಿಯೂ ಮಾಡಿದ್ದಿಲ್ಲೆ, ಬೇರೆಯೋರು ಧಾಳಿ ಮಾಡದ್ದ ಹಾಂಗೂ ನೋಡಿಗೊಂಡಿದಾಡ.
~
ರಕ್ಷೆಯ ಶೆಗ್ತಿಯೇ ಅದು – ಧರ್ಮ, ಜಾತಿ, ಸಂಪತ್ತು, ಸಿರಿವಂತಿಗೆ – ಎಲ್ಲವನ್ನೂ ಮೀರಿ ಜೆನಂಗಳ ಹತ್ತರೆ ತತ್ತಾಡ.
ರಕ್ಷಾಬಂಧನವ ಸಂಘ ಆಚರಣೆ ಮಾಡ್ತ ಉದ್ದೇಶವೂ ಇದುವೇ ಆಡ.
ಮಾಷ್ಟ್ರುಮಾವನ ಮಗ ಅಂದೊಂದರಿ ಹೇಳಿತ್ತಿದ್ದ.
ಭಾರತಮಾತೆಯ ಪ್ರತಿರೂಪ ಆದ ಭಗವಧ್ವಜಕ್ಕೆ ಮದಾಲು ರಕ್ಷೆ ಕಟ್ಟುಸ್ಸಡ.
ಅಮ್ಮನ ರಕ್ಷಣೆಗಾಗಿ ಎಂಗೊ ಎಲ್ಲೋರುದೇ ಅಣ್ಣ-ತಮ್ಮಂದ್ರಾಗಿ ಹೋರಾಡ್ತೆಯೊ – ಹೇಳ್ತ ಸಂಕಲ್ಪದೊಟ್ಟಿಂಗೆ.
ಎಲ್ಲೋರುದೇ ಸೇರಿದ ಆ ತುಂಬಿದ ಸಭೆಯ ಸಾಲು- ಸಾಲಾಗಿ ಕೂರ್ಸಿ, ಆಚೀಚ ಹೊಡೆಲಿ ಕೂದ – ಪರಸ್ಪರ ಪರಿಚಯ ಇಲ್ಲದ್ದವರ ಗುರ್ತ ಮಾಡಿ ರಕ್ಷೆ ಕಟ್ಟಿಗೊಂಬಲೆ ಹೇಳುಸ್ಸಡ.
ಒಬ್ಬ ರಕ್ಷೆಯ ಒಟ್ಟಿಂಗೆ ಒಬ್ಬ ವೆಗ್ತಿಯನ್ನೂ ಗುರ್ತ ಆತು. ಇವನ ರಕ್ಷೆಗೆ ಒಬ್ಬ ಅಣ್ಣ, ಅವನ ರಕ್ಷಣೆಗೆ ಒಬ್ಬ ತಮ್ಮ – ತೆಯಾರಾದವು.
ಅದರೊಟ್ಟಿಂಗೇ, ಭಾರತಮಾತೆಯ ರಕ್ಷೆಗಾಗಿ ಆ ಇಡೀ ಸಭೆಯೇ ತೆಯಾರಾತು.
ಆರಾರು ಅರ್ತೋರು ನಮ್ಮ ಸಂಸ್ಕಾರ – ಸಂಸ್ಕೃತಿಗಳ ಬಗ್ಗೆ ನಾಕು ಎಡ್ಡೆಪಾತೆರ ಹೇಳಿ ಜೆನಂಗೊಕ್ಕೆ ವಿಶಯ ಎತ್ತುಸುದು.
ಪ್ರಾಯ-ಜಾತಿ-ಜನಾಂಗ – ಎಲ್ಲವನ್ನೂ ಮೀರಿದ ಸುಂದರ ಸಮಾಜ ನಿರ್ಮಾಣ ಅಪ್ಪಲೆ ಸಂಘದ ರಕ್ಷಾಬಂಧನ ಕಾರ್ಯಕ್ರಮವೂ ಒಂದು ಕಾರ್ಯಕ್ರಮ – ಹೇಳ್ತದು ಮಾಷ್ಟ್ರುಮಾವನ ದೊಡ್ಡಮಗನ ಅಭಿಪ್ರಾಯ.
ಪೊಸವಣಿಕೆ ಅಣ್ಣ ಹೀಂಗೇ ಇಪ್ಪ ಒಂದು ಕಾರ್ಯಕ್ಕೆ ತೆಯಾರಿ ಮಾಡ್ಳೆ – ಹೇಳ್ತದು ಕೇಳಿ ಹೆಮ್ಮೆ ಆತು.
ಭಾರತಮಾತೆಯ ಸೇವೆಗೆ ಜೆನ ಸಾಗರ ಸೇರಲಿ.
ಅಲ್ಲದೋ?
~
ಉಪ್ಪರಿಗೆ ಮೆಟ್ಳು ಹತ್ತಿ ಪುನಾ ಶಾಮಣ್ಣನ ಮನಗೆ ಹೋದ್ಸು.
ಒಪ್ಪಣ್ಣ ಒಪಾಸು ಬಪ್ಪಗ ಬೇಕೋ ಹಸೆ ಹಾಕಿ ಮಡಗಿತ್ತಿದ್ದವು ಅತ್ತಿಗೆ, ಆದರೆ ಅಲ್ಲಿಗೆ ಎತ್ತುವಗ ಶಾಮಣ್ಣಂಗೆ ಒಂದರಿಯಾಣ ಒರಕ್ಕು ಬಿರುದಿತ್ತು.
ಮತ್ತೆಂತರ ಒರಗುದು, ಇನ್ನು ಪಟ್ಟಾಂಗ ಹಾಕುಸ್ಸು.
ಕಾಪಿಯೂ, ಮಿಕ್ಶರೂ ತಂದು ಮಡಗಿದವು ಅತ್ತಿಗೆ. ಪೊಸವಣಿಕೆ ಅಣ್ಣನಲ್ಲಿ ಕಾಪಿ ಕುಡುದು ಬಂದದರ ಇಲ್ಲಿ ಹೇಳುಲೆ ಹೋಯಿದಿಲ್ಲೆ, ಆಟದ ಕತೆಯ ಶುದ್ದಿ ಮಾತಾಡಿಗೊಂಡು ಎರಡ್ಣೇ ಒಂದು ಗ್ಲಾಸು ಕುಡುದೆ.

ನೆಗೆಚಿತ್ರ ಶಾಮಣ್ಣ ಎಂತೆಲ್ಲ ಚಮತ್ಕಾರ ಮಾಡಿ ತೋರ್ಸಿದವು? ಬೈಲಿಂಗೆ ಸದ್ಯಲ್ಲೇ ಹೇಳ್ತೆ.
ಹೊತ್ತು ಕಂತಲಪ್ಪಗ ಅಲ್ಲಿಂದ ಹೆರಟು, ಪಂಪಿನ ಕಂಟ್ರೋಲು ಹಿಡ್ಕೊಂಡು ಮನಗೆ ಹೆರಟೆ.
~

ಈಗಾಣ ಕಾಲಲ್ಲಿ ರಾವಣಂಗೊ ತುಂಬಿ ಹೋಯಿದವು. ದಿನನಿತ್ಯ ಪೇಪರು ಬಿಡ್ಸಿರೆ ಬರೇ ಬೇಡಂಗಟ್ಟೆ ಶುದ್ದಿಗಳೇ ತುಂಬಿಹೋಯಿದು.
ಗೆಂಡ ಶ್ರೀರಾಮನೂ, ಭ್ರಾತೃಸಮಾನ ಲಕ್ಷಣನೂ ಇಲ್ಲದ್ದ ಹೊತ್ತಿಲಿ ಸೀತಾಮಾತೆಯ ರಾವಣ ಅಪಹರುಸಿದ್ದು ನವಗೆಲ್ಲ ಗೊಂತಿಪ್ಪದೇ. ಸನ್ಯಾಸಿ ರೂಪಲ್ಲಿ ಬಂದ ರಾವಣನಿಂದ ಸೀತೆಯ ರಕ್ಷಿಸಲೆ ಯೇವ ಅಣ್ಣ-ತಮ್ಮಂದಿರೂ ಇತ್ತಿದ್ದವಿಲ್ಲೆ.
ಅಣ್ಣತಮ್ಮಂದ್ರಿಲ್ಲದ್ದ ಕೊಸಿಂಗೆ ಎಂತದೂ ಅಪ್ಪಲೂ ಸಾಕು – ಹೇಳುಲೆ ಇದೇ ಉದಾಹರಣೆ ಸಾಕು.
ಒಂದೇ ಅಬ್ಬೆ ಹೊಟ್ಟೆಲಿ ಹುಟ್ಟಿದ ಅಣ್ಣಂದ್ರಾಯೇಕು ಹೇಳಿ ಇಲ್ಲೆ,
ಭ್ರಾತೃತ್ವ ಇದ್ದರೆ ಸಾಕು, ಭಾವನೆಲಿ ಅಣ್ಣ-ತಮ್ಮಂದ್ರಾಗಿದ್ದರೆ ಸಾಕು; ಸೀತೆಗೆ ಲಕ್ಷ್ಮಣ ಇದ್ದ ಹಾಂಗೆ; ದ್ರೌಪದಿಗೆ ಶ್ರೀಕೃಷ್ಣ ಇದ್ದ ಹಾಂಗೆ.

ನಮ್ಮ ನಿತ್ಯಜೀವನಲ್ಲಿ ನವಗೆ ಹಲವು ಕಾರ್ಯಂಗೊ, ಹಲವಾರು ಅಂಬೆರ್ಪುಗೊ ಇಕ್ಕು. ಆದರೆ, ನಮ್ಮ ಅಕ್ಕ ತಂಗೆಕ್ಕೊಗೆ ರಕ್ಷಣೆ ಕೊಡ್ತದೂ ಒಂದು ಮುಖ್ಯವಾದ್ಸು – ನೆಂಪಿರೇಕು. ನಮ್ಮ ತೋಟವ ನಾವು ಕಾಯದ್ದರೆ ಕಂಡುದನ ಕಾಯ್ತೋ? ನಾವೇ ಕಾಯೇಕು.
ಹಾಂಗಾಗಿ, ನಮ್ಮ ಅಕ್ಕತಂಗೆಕ್ಕಳ ರಕ್ಷಣೆಗೆ ನಾವೇ ಸೇನಾನಿಗೊ ಆಯೇಕು.
ಮೊನ್ನೆ ಕೊಡೆಯಾಲಲ್ಲಿ ಆದ ಹಾಂಗೆ: ಆರಾರ ಕೈ ಮೋಡಿಗೆ ಬಿದ್ದು ಆರಾರ ಮನೆಲಿ ಬರ್ತುಡೇಗೆ ಹೋಗಿ ಕೂರದ್ದ ಹಾಂಗೆ ರಕ್ಷಣಾ ಬೇಲಿಯ ನಾವು ಹಾಕಿಗೊಳೇಕು.
ಸಂಸ್ಕಾರ, ಸಂಸ್ಕೃತಿಲಿ ಬೆಳದು ಸಂಸಾರವ ಚೆಂದಕೆ ಬೆಳೆಶಲೆ ಅನುವು ಮಾಡಿ ಕೊಡೇಕು.
ಶ್ರಾವಣ ಹುಣ್ಣಮೆಯ ರಕ್ಷೆ ಬೈಲಿನ ಎಲ್ಲಾ ಅಕ್ಕತಂಗೆಕ್ಕೊಗೂ ಶ್ರೀರಕ್ಷೆಯ ಒದಗುಸಲಿ.

ಒಂದೊಪ್ಪ: ಸ್ತ್ರೀಗೆ ರಕ್ಷಣೆ ಸಿಕ್ಕಿರೇ ಸಂಸಾರ ಸುಭದ್ರ ಅಕ್ಕಷ್ಟೆ.

15 thoughts on “ರಾವಣ-ಕೀಚಕರಿಂದ ಶ್ರಾವಣ ಪೌರ್ಣಮಿ ರಕ್ಷಣೆ ಕೊಡ್ಳಿ..

  1. ಬೇರೆಲ್ಲ ಶುದ್ದಿಗಳಿಂದಲೂ ಈ ಶುದ್ದಿ ಮನಸ್ಸಿಂಗ್ಗೆ ಹೆಚ್ಚಿಗೆ ನಾಟಿತ್ತು… ಅಣ್ಣ ತಂಗೆಯ ಸಂಬಂಧದ ಬಗ್ಗೆ ಟಿವಿ ಲಿ ನೋಡಿ, ಪುಸ್ತಕಲ್ಲಿ ಓದಿ ಮಾಂತ್ರ ಗೊಂತಿದ್ದದು ಎನಗೆ… ಅಣ್ಣ ತಮ್ಮ ಇಲ್ಲದ್ದ ಅಭಾವ ಏವಗಳೂ ಇದ್ದತ್ತು… ಆದರೆ ಒಂದು ದಿನ ಅದೊಂದು ದಿವ್ಯ ಚೇತನ ಎನ್ನ ಈ ನೋವಿಂಗೆ ಮದ್ದು ಕಿಟ್ಟಿದ್ದು.. ಎನ್ನ ’ತಂಗಿ’ ಹೇಳಿ ದಿನಿಗೇಳುವ ಮೂಲಕ…. ಆ ಒಂದು ಶಬ್ದ ಇಂದಿಂಗೂ ಕೆಮಿಲಿ ಪ್ರತಿಧ್ವನಿಸುತ್ತಾ ಇರ್ತು…
    ಒಪ್ಪಣ್ಣನ ಈ ಶುದ್ದಿ ಕಣ್ಣಿಲ್ಲಿ ಹನಿ ಬರ್ಸಿತ್ತು….
    ಒಪ್ಪ ಆಯ್ದು ಶುದ್ದಿ, ದ್ರೌಪದಿ ಕೃಷ್ನನ ಕೈಗೆ ವಸ್ತ್ರ ಕಟ್ಟಿದ ದಿನವೇ ಇದು ಹೇಳುದು ಗೊಂತಿತ್ತಿಲ್ಲೆ. ಹಲವು ವಿಷಯ ಈ ಶುದ್ದಿಯ ಮೂಲಕ ಗೊಂತಾತು 🙂

  2. ಮರ್ಯಾದಿ ಬೀಕಾದ ‘ದ್ರೌಪದಿ’ ಯರ ರಕ್ಶನೆ ಮಾದೆಕ್ಕದ್ದಏ. ಆದರೆ ಅವರಶ್ತಕೇ ವಸ್ತ್ರ ಬಿಚಿ ಹುದುಗರ ಒಟ್ಟಿನ್ಗೆ ‘Birthday party’ ಮಾದುವ ಕೂಸುಗಲ ರಕ್ಶ್ಃಅಣೆ ಮಾಡ್ಳೆ ದೇವರೇ ಬರೇಕಶ್ಟೆ.

  3. ಪೌರಾಣಿಕ ಹಿನ್ನೆಲೆಯೊಟ್ಟಿಂಗೆ ರಕ್ಷಾ ಬಂಧನದ ಮಹತ್ವವ ನಿರೂಪಣೆ ಲಾಯಿಕ ಆಯಿದು. ಪ್ರತಿಯೊಂದು ಆಚರಣೆಯ ಹಿಂದೆ ಇಪ್ಪ ಸಂದೇಶವ ಅರ್ಥ ಮಾಡಿಗೊಂಡರೆ, ಆಚರಣೆ ಅರ್ಥಪೂರ್ಣ ಅಕ್ಕು.

  4. ಒಪ್ಪಣ್ಣ ವಿವರಣೆಲಾಯಕ ಆಯಿದು ರಕ್ಷಾಬಂದನದ ಶುಬಾಶಯನ್ಗೋ

  5. ಅಣ್ಣ-ತ೦ಗಿಯರ ಬ೦ಧ ಜನುಮ ಜನುಮದ ಅನುಬ೦ಧ–‘ರಕ್ಷಾ ಬ೦ಧನ’..ಬೈಲಿನ ಎಲ್ಲಾ ಅಣ್ಣ೦ದಿರಿ೦ಗೆ ರಕ್ಷಾ ಬ೦ಧನದ ಶುಭಾಶಯ೦ಗೊ.. ರಕ್ಷಾ ಬ೦ಧನ ಲೆಕ್ಕಲ್ಲಿ ಈ ತ೦ಗಿಗೆ ಒ೦ದು ಗಿಫ್ಟು ಕೊಡೆಕ್ಕಿದ.. 😉 😉
    (ಕುಶಾಲಿ೦ಗೆ ;))

  6. ರಕ್ಷಾಬಂಧನದ ದಿನದ ಒಪ್ಪ ಅರ್ಥಪೂರ್ಣವಗಿದ್ದತ್ತು. ರಕ್ಷೆ ಯೆಲ್ಲೊರಿಂಗೂ ಶುಭ ತರಲಿ ಹೇಳಿ ಇನ್ನೂಂದರಿ ಹಾರೈಕೆ.

  7. ರಕ್ಷಾ ಬಂಧನವ ನಮ್ಮ ಊರಿಲಿ ಮೊದಲಿಂಗೆ ಮಾಡಿಕೊಂಡು ಇತ್ತಿದ್ದವಿಲ್ಲೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘಂದಾಗಿ ಅದು ಇಲ್ಲಿ ಪ್ರಚಾರ ಆದ್ದದು ಹೇಳಿ ಕಾಣುತ್ತು.ರಕ್ಷೆಯ ಆಶಯ ಸರಿ ಇದ್ದು.
    ದೀಪಾವಳಿಯ ಮರುದಿನದ ಭ್ರಾತೃದ್ವಿತೀಯಾ ಕೂಡಾ ಇದೇ ರೀತಿ ಅಣ್ಣ ತಂಗೆಯ ಪ್ರೀತಿಯ ಹೇಳುತ್ತು.

  8. ಪಷ್ಟಾಯ್ದು ಒಪ್ಪಣ್ಣ! ಎಲ್ಲೊರಿಂಗು ಶುಭಾಶಯಂಗ!!

  9. ಅಕ್ಕ,ತಮ್ಮ – ಅಣ್ಣ,ತಂಗೆ ಹೇಳಿ ಶುದ್ದಿ ಓದಿಯಪ್ಪಗ ಕಣ್ನಿಲ್ಲಿ ಅದಾಗಿ ನೀರು ಸುರಿವಲೆ ಸುರುವಾತು ಒಪ್ಪಣ್ಣ… ಎಲ್ಲ ಒಪ್ಪಣ್ಣ,ಒಪ್ಪಕ್ಕಂದ್ರೂ ಪರಸ್ಪರ ‘ರಕ್ಷೆ’ ಗಳಾಗಿ ಸಮಾಜವ ಬೆಳಗುವ ‘ದೀಪ’ ಅಪ್ಪ… ರಾವಣ,ಕೀಚಕರು ನಾಶವಾಗಿ ‘ರಾಮ ರಾಜ್ಯ’ ಲ್ಲಿ ಆನಂದಲ್ಲಿ ನಲಿದಾಡುವ…

  10. ರಕ್ಷಾಬ೦ಧನ ಆಚರಣೆಯ ಉದ್ದೇಶದ ವಿವರಣೆ ಚೆ೦ದ ಆಯಿದು. ದೇಶಪ್ರೇಮವ ಮರದು ಸ್ವಾರ್ಥಕ್ಕಾಗಿಯೇ ಬದ್ಕಿರೆ ರಾವಣ೦ಗಳೂ,ಕೀಚಕ೦ಗಳೂ ಮತ್ತೆ ಹುಟ್ತಿಗೊ೦ಗು.
    ಒಳ್ಳೆ ಸ೦ದೇಶ ಕೊಟ್ಟತ್ತು ಈ ಶುದ್ದಿ.

  11. ಒಪ್ಪ ಶುದ್ದಿ, ಒಪ್ಪಣ್ಣ. ರಕ್ಷಾ ಬಂಧನದ ಸಮೆಲಿ ಒಳ್ಳೆ ಮಾಹಿತಿ ಒಟ್ಟಿಂಗೆ, ಉತ್ತಮ ಸಂದೇಶ ಕೊಟ್ಟತ್ತು ಲೇಖನ. ಧನ್ಯವಾದಂಗೊ.

  12. ತುಂಬಾ ಲಾಯಿಕ ಶುಧ್ಧಿ ಒಪ್ಪಣ್ಣ ಲಾಯಿಕದ ಕತೆಗಳ ಒಟ್ಟಿಂಗೆ.
    ಯಾವಾಗಲಿನಂತೆ ಉತ್ತಮ ಸಾರ, ಸಂದೇಶ ಇದ್ದು ಎಲ್ಲೋರು ತಿಳುಕ್ಕೊಂಬಂತ ವಿಷಯದೆ.
    ಇನಾಣ ವಾರ ಇನ್ಯಾವ ಶುಧ್ಧಿ?
    ~ಸುಮನಕ್ಕ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×