Oppanna.com

ಸರ್ಕಾರೀ ‘ಕೆಲಸ’ ನಮ್ಮದಾದರೆ ‘ಸರ್ಕಾರ’ವೇ ನಮ್ಮದಾವುತ್ತು..!

ಬರದೋರು :   ಒಪ್ಪಣ್ಣ    on   06/04/2012    16 ಒಪ್ಪಂಗೊ

ರಾಮನವಮಿ ಗವುಜಿಯೋ?
ಅಪ್ಪು; ಒಬ್ಬೊಬ್ಬಂಗೆ ಒಂದೊಂದು ರೀತಿಲಿ ಗವುಜಿ.
ಹೊಸನಗರಲ್ಲಿ ಗುರುಗೊ ರಾಮಕತೆ ಮೂಲಕ ರಾಮನ ನಮಿಸಿರೆ, ಅಯೋಧ್ಯೆಲಿ ಬಾಲರಾಮನ ಭಜನೆ ಮಾಡುದರ ಒಟ್ಟಿಂಗೆ ಆಚರಣೆ ಮಾಡಿದವು. ಬೈಲಿಲಿಯೂ ಹಾಂಗೇ- ದೊಡ್ಡಜ್ಜಂಗೆ ಪುಳ್ಳಿಯ ಉಪ್ನಾನದ ಗೌಜಿ, ಚುಬ್ಬಣ್ಣಂಗೆ ಮನೆ ಹುಡ್ಕುವ ಗೌಜಿ, ಲಾನಣ್ಣಂಗೆ ಮದುವೆ ಕಳುದ ಗೌಜಿ, ಜೋಯಿಷಪ್ಪಚ್ಚಿಗೆ ಮದುವೆ ಏಳುಸುತ್ತ ಗವುಜಿ – ಇದೆಲ್ಲದರ ಎಡಕ್ಕಿಲಿ ಕೊಳಚ್ಚಿಪ್ಪುಭಾವಂಗೆ ಪರೀಕ್ಷೆ ಓದುವ ಗೌಜಿ!
ಶ್ಶೆಲ, ಗೆಡ್ಡಮೀಸೆ ಬಂದೋನಿಂಗೆ ಇದೆಂತರ ಪರೀಕ್ಷೆ ಹೇದು ಕೇಳ್ತಿರೋ ನಿಂಗೊ?
ಅದೇ ಸಂಗತಿ ಇಂದಿಂಗೆ!!
~

ಐ.ಎ.ಎಸ್ ಬರದು ದೊಡ್ಡ ಮನಿಶ್ಶರಾಯೇಕು ಹೇದು ಬೈಲಿಂಗೊಂದು ಶುದ್ದಿ ಹೇಳಿದ್ದು ನಾವು. (ಸಂಕೊಲೆ)
ಹಾಂಗಿರ್ತ ಲೋಕೋಪಕಾರದ ಶುದ್ದಿ ಹೇದರೆ ಬೈಲಿಲಿ ಒಪ್ಪಂಗೊ ರಜ ಕಮ್ಮಿಯೇ ಇದಾ! 😉 🙁
ಆ ಶುದ್ದಿಗೆ ಜಾಸ್ತಿ ಒಪ್ಪಂಗಳೂ ಬಯಿಂದಿಲ್ಲೆ, ಆದರೆ – ಬರೇ ಕಮ್ಮಿ ಒಪ್ಪಂಗಳೂ ಅಲ್ಲ. ಬಂದದಷ್ಟೂ ಅಮೂಲ್ಯ ಒಪ್ಪಂಗಳೇ ಹೇಳ್ತದು ಒಪ್ಪಣ್ಣಂಗೆ ಸಮಾದಾನ.
ಆದರೆ,  ಶುದ್ದಿಲಿ ಇದ್ದ ವಿಚಾರಂಗಳ ಬಗೆಗೆ ಮದಲೇ ಗಂಭೀರವಾಗಿ ತೆಕ್ಕೊಂಡು ಐಯೇಯೆಸ್ ಇತ್ಯಾದಿ ಪರೀಕ್ಷೆಗೊಕ್ಕೆ ಓದಲೆ ಹೆರಟ ಬೈಲಿನ ಮಾಣಿ ನಮ್ಮ ಕೊಳಚ್ಚಿಪ್ಪು ಭಾವ.

ಕಳುದವಾರ ಪುತ್ತೂರತ್ತೆಯ ಮನೆಲಿ ಪೂಜೆ ಕಳಾತಲ್ಲದೋ – ಅದಕ್ಕೆ ಬಂದೋನು ಸಿಕ್ಕಿ ಕೆಲವು ಶುದ್ದಿಗಳ ಹೇಳಿದ°, ತಲೆಲಿ ಹಾಂಗೇ ತಿರುಗೆಂಡು ಇದ್ದದರ ಬೈಲಿಂಗೂ ಹೇಳಿಕ್ಕುತ್ತೆ.
ಆಗದೋ?

ಪುತ್ತೂರತ್ತೆಯ ಅಕ್ಕನ ಪುಳ್ಳಿ ಒಬ್ಬಂಗೆ ಈ ಒರಿಶ ಇಂಜಿನಿಯರು ಕಲ್ತಾತು; ರಾಮಜ್ಜನ ಕೋಲೇಜಿಲಿ.
ಮನ್ನೆ ಪೂಜೆಗೆ ಬಂದಿದ್ದೋನು ಪುಸ್ತಕ ಬಿಟ್ಟ ಕೊಶಿಲಿ ಇತ್ತಿದ್ದ°. ಇನ್ನು ಬೆಂಗ್ಳೂರಿಂಗೆ ಹೋಗಿ ಯೇವದಾರು ಇಂಪೋಸಿಸ್ಸಿಲಿ ಕೆಲಸ ಸಿಕ್ಕುತ್ತೋ ನೋಡುದಡ.

ಕೊಳಚ್ಚಿಪ್ಪುಬಾವ ಅವನ ಹತ್ತರೆ ಸಲಿಗೆಲಿ ಮಾತಾಡುವಗ ಎಂತದೋ ಉಪದೇಶವೂ ಕೊಟ್ಟುಗೊಂಡಿದ್ದದು ಕಂಡತ್ತು.
ಇಂಜಿನಿಯರು ಕಲ್ತಾದರೆ ಸರ್ಕಾರಿ ಕೆಲಸಕ್ಕೆ ಸೇರು – ಹೇದು ಅದರ ಸಾರಾಂಶ.
ರಜಾ ಹತ್ತರೆ ಹೋಗಿ ಕೂದು ಕೆಮಿಕೊಡ್ಳೆ ಸುರುಮಾಡಿದೆ.
~

ಈಗಾಣ ಮಕ್ಕೊ ಸರ್ಕಾರಿ ಉದ್ಯೋಗಕ್ಕೇ ಹೋವುತ್ತವಿಲ್ಲೇನೇ, ಛೇ!
ನಮ್ಮ ಊರಿಲೇ ಇದ್ದೊಂಡು ನಮ್ಮ ಊರಿಂಗೆ ಬೇಕಾಗಿ ಕೆಲಸ ಮಾಡುವ ಯೋಚನೆಯನ್ನೇ ಮಾಡ್ತವಿಲ್ಲೇನೆ – ಹೇಳುಸ್ಸು ಅವನ ಬೇಜಾರಿನ ಮೂಲ. ಇದಾ –
ಎಸ್ಸೆಲ್ಸಿ ಕಳಾತೋ,  ಸೈಂಸು ತೆಕ್ಕೊಂಡತ್ತು..
ಮತ್ತೆರಡೊರಿಶ ಕೋಲೇಜಿಲಿ ಕಲ್ತತ್ತು..
ಹನ್ನೆರಡ್ಣೆಯೂ ಮುಗಾತೋ –
ರಾಮಜ್ಜನ ಕೋಲೇಜಿಲಿ ಕಂಪ್ಯೂಟ್ರು ಇಂಜಿನಿಯರು ಕಲಿಸ್ಸು.
ಅದೂ ಆತೋ –  ವಿಪ್ರೋ, ಇಂಪೋಸಿಸ್ – ಹೀಂಗಿರ್ಸ ಯೇವದಾರು ಕಂಪೆನಿಗೆ ಹೊಕ್ಕತ್ತು!!
ಮುಗಾತು ಅಲ್ಲಿಗೆ!
ಹೇಳುಲೊಂದು ಒಳ್ಳೆ ಕೆಲಸ ಆತು. ದೊಡ್ಡ ಪೈಶದ ಸಂಬಳ ಸಿಕ್ಕಿತ್ತು; ಕೂಸು / ಮಾಣಿ ಹುಡ್ಕಲೆ ಸುರುಮಾಡ್ಳಕ್ಕು –  ಸ್ವರ್ಗಕ್ಕೆ ಒಂದೇ ಮೆಟ್ಳು ಬಾಕಿ!
ಯೇವದೋ ದೇಶದ ಯೇವದೋ ಬೇಂಕಿನ ಯೇವದೋ ಮಿಶನಿಂಗೆ ಬೇಕಪ್ಪ ತಂತ್ರಜ್ಞಾನನವ ಬರವದೋ, ಗುರುಟುದೋ – ಎಂತಾರು ಮಾಡುಸ್ಸು.

ಜೀವನ ಇಡೀ ಆರಾರ ಉದ್ಧಾರ ಮಾಡುದರ್ಲಿಯೇ ಕಳುದು ಹೋವುತ್ತು.
~

ಆದರೆ, ಪ್ರತಿಯೊಂದು ಹಂತಲ್ಲಿಯೂ ಬೇರೆ ಬೇರೆ ಅವಕಾಶಂಗೊ ಇರ್ಸು ನಮ್ಮ ಕಣ್ಣಿಂಗೆ ಕಾಣ್ತೇ ಇಲ್ಲೆ.
ವಿಶೇಷವಾಗಿ ಸರಕಾರೀ ಕೆಲಸ – ಒಳ್ಳೆ ಮಟ್ಟಿಂದು – ಸಿಕ್ಕುವ ಅವಕಾಶವನ್ನೂ ನಾವು ಗಮನುಸುತ್ತಿಲ್ಲೆ – ಹೇದು ವಿವರುಸಲೆ ಸುರುಮಾಡಿದ°.
ಗೋರ್ಮೆಂಟು ಕೆಲಸ ಆದರೆ ಎಂತ ಲೆಕ್ಕಲ್ಲಿ ಒಳ್ಳೆದು – ಕೇಟೆ; ಅವಂಗೆ ಗೊಂತಿಪ್ಪದರ ವಿವರುಸಲೆ ಸುರುಮಾಡಿದ.
ಎಲ್ಲೋರುದೇ ಸರ್ಕಾರಿ ಕೆಲಸ ಹೇದರೆ ಅಲ್ಲಿಪ್ಪ ಕಡಮ್ಮೆ ಸಂಬಳ, ಕಿರಿಕಿರಿಗೊ, ಟ್ರಾನ್ಸುವರು, ದಬ್ಬಾಳಿಕೆ – ಇದರ ಮಾಂತ್ರ ಆಲೋಚನೆ ಮಾಡ್ತವು. ಆದರೆ ಅದರೊಟ್ಟಿಂಗೆ, ಅಲ್ಲಿಪ್ಪ ಧನಾತ್ಮಕ ಅಂಶವ ಆರುದೇ ಗಮನುಸುತ್ತವಿಲ್ಲೆ – ಹೇಳ್ಸು ಅವನ ಬೇಜಾರು.

  • ಎಳೆಪ್ರಾಯಲ್ಲಿ ಸೇರಿರೆ ಐವತ್ತಾರು / ಅರುವತ್ತೊರಿಶದ ಒರೆಂಗೆ ಪರ್ಮನೆಂಟು ಕೆಲಸ.
  • ಒಂದೋ ಕುರ್ಚಿಗೆ ಅಂಟಿ  ಬೆಶಿಕಾಸಲಕ್ಕು, ಅಲ್ಲದ್ದರೆ ಬೆಳದು ಬೆಳದು ಕುರ್ಚಿಯನ್ನೇ ದೊಡ್ಡಮಾಡ್ಳಕ್ಕು.
  • ಖಾಸಗಿ ಕಂಪೆನಿಲಿ ಆದರೆ ಬೋಸಬಾವಂಗಳ ಮರ್ಜಿಗೆ ಕೆಲಸ ಮಾಡುಸ್ಸು; ಸರ್ಕಾರದ ಕೆಲಸ ಹಾಂಗಲ್ಲ – ಅದು ಆರೊಬ್ಬನ ಸೊತ್ತೂ ಅಲ್ಲ. ಆರುದೇ ನಮ್ಮ ತಲೆಮೇಗೆ ಹಾರ್ತ ಹಾಂಗಿಲ್ಲೆ; ನಮ್ಮ ಪರವಾಗಿ ಸರ್ಕಾರವೇ ಇದ್ದು.
  • ಸೇರುವಗ ಸಂಬಳ ರಜ ಕಮ್ಮಿ ಕಂಡ್ರೂ, ಕ್ರಮೇಣ ಅದು ದೊಡ್ಡ ಪೈಶೆ ಆಗಿ ಬೆಳೆತ್ತು. ಕಿರಿಕಿರಿ ಇಲ್ಲದ್ದೆ ಇಂಕಿರಿಮೆಂಟು ಸಿಕ್ಕಿಂಡು ಬೆಳಕ್ಕೊಂಡೇ ಹೋವುತ್ತು; ಮತ್ತೆ ಮತ್ತೆ ಆ ವಿಪ್ರೋ, ಇಂಪೋಸಿಸ್ಸಿನ ಇಂಜಿನಿಯರಿನ ಸಂಬಳದ ಹಾಂಗೇ ಎಳಗಿರ್ತು.
  • ಪ್ರಾರಂಭಿಕವಾಗಿ ರಜ ಕಿರಿಕಿರಿಗೊ, ಹಿರಿಯರ ಒತ್ತಡಂಗೊ ಕಂಡ್ರೂ, ಮುಂದೆ ನಾವೇ ಒಂದು ‘ಜೆನ’ ಆಗಿಬಿಡ್ತು.
  • ದಿನ ಒಂದೊಂದು ಕಳುದ ಹಾಂಗೇ ನಮ್ಮ ಬೆಲೆ, ಸ್ಥಾನಮಾನ – ಎಲ್ಲವೂ ಏರಿಗೊಂಡೇ ಹೋವುತ್ತು.
  • ಸರ್ಕಾರಿ ಸವಲತ್ತುಗೊ, ಬೇಕುಬೇಡಂಗೊ – ಎಲ್ಲವೂ ಒದಗಿ ಸಿಕ್ಕುತ್ತು.
    ಇಂಪೋಸಿಸ್ಸು ಇಂಜಿನಿಯರು ಆದರೆ ಅದೇವದೂ ಇಲ್ಲೆ; ಪೈಶೆ ಒಂದು ಕೊಡ್ತವು; ಬೇರೆಲ್ಲವೂ ನಾವೇ ಕರ್ಚು ಮಾಡಿಗೊಳೇಕು.
  • ನಮ್ಮ ಸುತ್ತ ಒಂದು ಪ್ರಭಾವಳಿ ಬೆಳದಿರ್ತು.
    ಈ ಪ್ರಭೆಯ (influence) ಒಳ್ಳೆದಕ್ಕೂ – ಕೆಟ್ಟದಕ್ಕೂ – ಅವರವರ ಸಾಮರ್ಥ್ಯದ ನಮುನೆ ಉಪಯೋಗುಸುವ ಅವಕಾಶ ಇದ್ದು. ಒಳ್ಳೆದು ಮಾಡಿರೆ ನವಗೇ ಒಳ್ಳೆದಾಗಿಬಿಡ್ತು.. ಹೇಳುಸ್ಸು ಕೊಳಚ್ಚಿಪ್ಪುಬಾವನ ಅಭಿಪ್ರಾಯ.

~

ಕುಂಬ್ಳೆ ವಿಲೇಜುಓಪೀಸರಂಗೆ ಕುಂಬ್ಳೆಅಜ್ಜನ ಭಾಶೆ ಅರಡಿಯ!!

ಇದಲ್ಲದ್ದೇ ಇನ್ನೊಂದು ಶುದ್ದಿ ಹೇಳಿದ°.

ನಮ್ಮ ಗಣೇಶಮಾವಂಗೆ ಕೈಲಾಸ ಪರುವತ ಹತ್ತಿ, ಮಾನಸ ತೀರ್ಥ ಕುಡುದು, ಇಳುದು ಬಂದಾಯಿದು – ಹೇಳುಸ್ಸ ಸಂಗತಿ ಬೈಲಿನ ಎಲ್ಲೋರಿಂಗೂ ಅರಡಿಗು.
ನಮ್ಮ ಬೈಲಿಲಿ ಇಷ್ಟು ಸಣ್ಣ ಪ್ರಾಯಲ್ಲೇ ಮಾನಸ ಸರೋವರದ ನೀರುಕುಡುದು, ಹೆರಿಯೋರ ನೆಂಪುಮಾಡಿ ಬಂದದು ಇವ್ವೆಯೋ ತೋರ್ತು. ಅವು ಮಾಂತ್ರ ಕುಡುದ್ದಲ್ಲ, ನವಗೆಲ್ಲೋರಿಂಗೂ ತೀರ್ಥ ಕೊಟ್ಟಿದವು, ನಾವೆಲ್ಲ ಕುಡುದು ಪುಣ್ಯಪಾವನರಾಯಿದು. ಅದಿರಳಿ..
ಅವು ಕೊಳಚ್ಚಿಪ್ಪುಭಾವನ ಹತ್ತರೆ ಒಂದು ಸಂಗತಿ ಹೇಳಿದ್ದವಡ್ಡ.

ನಮ್ಮ ಕೈಲಾಸ ಪರುವತ ಇಪ್ಪದು ಈಗಾಣ ಟಿಬೇಟಿನ ಜಾಗೆಲಿ. ಮದಲಿಂಗೆ ಟಿಬೇಟು ಹೇಳುಸ್ಸು ಒಂದು ಸೊತಂತ್ರ ದೇಶ ಆದರೂ, ರಜ ಪಾಪ ಆಗಿತ್ತಡ.
ಆದರೆ, ಮುಂದೆ – ದುರಹಂಕಾರಿ ಚೀನಾ ಆ ಪಾಪದ ಟಿಬೇಟಿನ ನುಂಗಿ ಹಾಕಿ ದೊಡ್ಡಜೆನ ಆಗಿಂಡು; ಈಗ ದರ್ಪ ತೋರುಸುತ್ತಾ ಇಪ್ಪದು ನವಗೆ ಅರಡಿಗು. (ಈ ಬಗ್ಗೆ ವಿವರವಾಗಿ ಇನ್ನೊಂದರಿ ಮಾತಾಡುವೊ).
ಕೈಲಾಸ ಪರುವತ ಹತ್ತುತ್ತ ಸಮೆಯಲ್ಲಿ ಟಿಬೇಟಿನ ಜೆನರ ಗಣೇಶಮಾವಂಗೆ ಹತ್ತರಂದ ನೋಡಿ ಅರಡಿಗು.
ಹಾಂಗೆ ನೋಡಿದ್ದರಲ್ಲಿ ಅನುಭವ ಆದ ಒಂದು ಸಂಗತಿಯನ್ನೇ ಗಣೇಶಮಾವ ಹೇಳಿದ್ದು.
ಗಣೇಶಮಾವ ಹೇಳಿದ ಆ ಸಂಗತಿಯ ಕೊಳಚ್ಚಿಪ್ಪುಬಾವ ವಿಮರ್ಶೆ ಮಾಡಿಗೊಂಡು ಹೋಪಗಳೇ, ನಮ್ಮ ಊರಿನ ಸನ್ನಿವೇಶವೂ ಒಪ್ಪಣ್ಣಂಗೆ ಹತ್ತರತ್ತರೆ ನೆಂಪಾಗಿಂಡು ಹೋದತ್ತು.
ಅದೆಂತರ – ಇದೆಂತರ?
~

ಬೇರೆಯೇ ಜೀವನಪದ್ಧತಿಯ ಟಿಬೇಟಿನ ಏಕಾಏಕಿ ತನ್ನದು ಹೇದು ಚೀನಾ ವಶಪಡುಸೆಂಡಪ್ಪಗ, ಇದರ ಒಪ್ಪದ್ದ ಅಲ್ಯಾಣ ಬೌದ್ಧ ಧರ್ಮೀಯರು, ಗೃಹಸ್ಥರು, ಭಿಕ್ಷುಗೊ ವಿರೋಧ ತೋರುಸಿದವಡ. ಅಲ್ಲಲ್ಲಿ ಪ್ರತಿಭಟನೆಗೊ, ಸ್ವಹತ್ಯೆಗೊ, ಗಲಾಟೆಗೊ, ದೊಂಬಿಗೊ ಎಲ್ಲವೂ. ರಜ ಮಣ್ಣ ಅಲ್ಲ, ತುಂಬ ದೊಡಾ ಪ್ರತಿರೋಧ!
ಚೀನಾದ ಸೈನಿಕರು ಸಾವಿರಾರು ಟಿಬೇಟಿಯನ್ನರ ಬೆಡಿಮಡಗಿ ಕೊಂದವು, ಓಡುಸಿದವು, ಗಲ್ಲಿಂಗೆ ಹಾಕಿದವು – ಅಂಬಗಾಣ ಪ್ರತಿರೋಧವ ಚೀನಾದವು ಬಲಪ್ರಯೋಗಲ್ಲೇ ನಿಲ್ಲುಸಿದವು.
ಅದಾದ ಮತ್ತೆ ಒಳುದ ಪ್ರತಿರೋಧಂಗಳ ಕಾಲಕ್ರಮೇಣ ಹಂತಹಂತಲ್ಲೇ ಅದರ ನಿಲ್ಲುಸೆಂಡು ಬಂದವು.
ಅದು ಹೇಂಗೆ? ಅದೇ – ಸರಕಾರೀ ನೌಕರರ ಮೂಲಕ.

ದೇಶವ ನುಂಗಿಅಪ್ಪದ್ದೇ, ಬೌದ್ಧ ಟಿಬೇಟಿಂಗೆ ಚೀನಾದ ಕೆಂಪುಮುಸುಡಂಗೊ ಸರಕಾರೀ ಅಧಿಕಾರಿಗೊ ಆಗಿ ಬಂದವಡ.
ಪೋಲೀಸು ಪೇದೆಂದ ಹಿಡುದು, ಅಂಚೆ, ಸರ್ಕಾರಿ ಕಛೇರಿಗೊ, ಟೀಚರುಗೊ, ಮಾಷ್ಟ್ರಕ್ಕೊ, ವಿಲೇಜು ಓಪೀಸರಂಗೊ –  ಎಲ್ಲೋರೂ ಚೀನಾದೋರೇ. ಪ್ರತಿ ಹಂತಲ್ಲಿಯೂ ಚೀನಾದ ಕಂಟ್ರೋಲು! ಎಲ್ಲಿ ಹೋಗಿ ಮಾತಾಡೇಕಾರೂ – ಚೀನಾದ ಭಾಶೆ ಅರಡಿಯೇಕು. ಎಂತ ಕೆಲಸ ಆಯೇಕಾರೂ ಚೀನಾದ ಬಗೆಗೆ ಒಲವು ಬೆಳೇಕು! – ಹೀಂಗಿರ್ಸ ಕೆಣಿ!

ಈಗ?
ಚೀನ ನುಂಗಿ ಒಂದೆರಡು ತಲೆಮಾರು ಕಳುತ್ತು. ಪ್ರತಿಭಟನೆಯ ಆಕ್ರೋಶ ಮದಲಾಣ ಮಟ್ಟಿಂಗೆ ಹೋಲುಸಿರೆ ಏನೇನೂ ಇಲ್ಲೆ. ಅಲ್ಲಲ್ಲಿ ಅಂಬಗಂಬಗ ರಜರಜ ಸೊರ ಕೇಳ್ತಷ್ಟೆ. ಅದಕ್ಕೆ ಆ ಊರವೇ ಉತ್ತರಕೊಡ್ತವು.
ಟಿಬೇಟಿನ ಒಂದಷ್ಟು ಯುವ ಯುವಕರ ಅವರ ಕಮ್ಮಿನಿಷ್ಠೆಯ ಪಾಟ ಮಾಡಿ ಕಳುಗಿದ್ದು ಚೀನಾವೇ, ಈಗ ಟಿಬೇಟಿನ ಊರೂರುಗಳಲ್ಲಿ ಅದೇ ಕಮ್ಮಿನಿಷ್ಠೆಯೋರು ಸ್ವಾಮಿಗೊ – ಅದೂ – ಸರ್ಕಾರದ ಸಂಬಳ ತೆಕ್ಕೊಂಬ ಸ್ವಾಮಿಗೊ!
ಆಧ್ಯಾತ್ಮಂದಲೂ ಹೆಚ್ಚು, ರಾಜಕೀಯ ಪ್ರೇರಿತ ಸ್ವಾಮಿಗೊ.
ಈ ಎಲ್ಲ ಬೌದ್ಧ ಭಿಕ್ಷುಗಳ ಬಾಯಿಲಿ ಕಮ್ಮಿನಿಷ್ಟೆಯ ಮಾತುಗೊ, ಚೀನಾವ ಹೊಗಳುವ ಪುರಾಣಂಗೊ.
ಕ್ರಮೇಣ ಅಲ್ಯಾಣ ಮಕ್ಕೊಗೆ ಚೀನಾವೇ ಸರ್ವಸ್ವ – ಹೇಳ್ತ ಭಾವನೆ ಬಂದುಬಿಡ್ತಾ ಇದ್ದು.
ಸ್ವತಂತ್ರವಾಗಿದ್ದ ಟಿಬೇಟ್ ಕ್ರಮೇಣ ಚೀನಾದ ಒಂದು ಭಾಗ ಆಗಿ ಹೋವುತ್ತು.
ಇದೆಲ್ಲವೂ ಸಾಧ್ಯ ಆದ್ಸು ಬುಡಮಟ್ಟದ – ತಳಮಟ್ಟದ ಸರ್ಕಾರಿ ನೌಕರರಿಂದಾಗಿ.

~

ಟಿಬೇಟಿನ ಚೀನಾ ನುಂಗಿದ ಬೇಜಾರವ ಗ್ರೇಶಿರೆ ಒಪ್ಪಣ್ಣಂಗೆ ನಮ್ಮ ಊರಿಲೇ ನೆಡದ ಸಂಗತಿ – ನಮ್ಮ ಕಾಸ್ರೋಡಿನ ಕತೆ ನೆಂಪಪ್ಪಲಿದ್ದು.

ಲಕ್ಷಾಂತರ ಕನ್ನಡಿಗರ ಅಬ್ಬೆಮಣ್ಣಾದ ಕಾಸ್ರೋಡಿನ ಏಕಾಏಕಿ ಕೇರಳದವು ನುಂಗಿ ನೀರುಕುಡುದವಲ್ಲದೋ!
ಚಂದ್ರಗಿರಿಂದ ಇತ್ಲಾಗಿ ಬಂದರೆ ನಾಯರುಗಳ ಜಾತಿಭ್ರಷ್ಟ – ಹೇದು ಗುರ್ತಮಾಡಿಗೊಂಡಿದ್ದ ಕೇರಳದೋರೇ, ಚಂದ್ರಗಿರಿಂದ ಇತ್ಲಾಗಿಯಾಣ ಭೂಪ್ರದೇಶ ನುಂಗಿಂಡವಿದಾ!
ಅಂಬಗ ತುಂಬ ಪ್ರತಿರೋಧ, ಪ್ರತಿಭಟನೆಗೊ ನೆಡದ್ದು.
ಕನ್ನಡ ನೆಲ ಕರ್ನಾಟಕದ ಭಾಗ ಆಗಿರೇಕು ಹೇದು ನಮ್ಮ ಅಜ್ಜಂದ್ರು ತುಂಬ ಹೋರಾಡಿದ್ದವು; ಆದರೆ ಮೇಗೆ ’ಕೈ’ ಇಲ್ಲದ್ದ ಕಾರಣ ಒಂದೂ ನೆಡದತ್ತಿಲ್ಲೆ!
ಅಂಬಗಳೇ ನಮ್ಮ ಮನಸ್ಥಿತಿಯೋರು ಆರಾರು ಉನ್ನತ ಹುದ್ದೆಲಿ ಇದ್ದಿದ್ದರೆ ಈ ಕೆಲಸ ಬಹುಸುಲಭ ಆವುತಿತೋ ಏನೋ, ಉಮ್ಮಪ್ಪ!  ಅಂತೂ, ಕಾಸ್ರೋಡು ಕೇರಳಕ್ಕೆ ಸೇರಿತ್ತು; ಅದಿರಳಿ.

~

ಅಲ್ಲಿಂದ ಮತ್ತೆ ಇಂದಿನ ಒರೆಂಗೂ ನಿಧಾನಕ್ಕೆ ಸರ್ಕಾರೀ ಕಛೇರಿಗಳ ಮೂಲಕ ಆಕ್ರಮಣ!
ಯೇವದೇ ಸರ್ಕಾರಿ ಕಛೇರಿಯ ನೋಡಿ – ಹಳೆ ಬೋರ್ಡಿಲಿ ಕನ್ನಡಲ್ಲಿ ದೊಡ್ಡಕೆ ಬರಕ್ಕೊಂಡಿದ್ದರೆ, ಹೊಸಬೋರ್ಡಿಲಿ ಕನ್ನಡ ಅಕ್ಷರಂಗೊ ಸಣ್ಣಕೆ ಬರಗಷ್ಟೆ. ಹಳೆ ಬೋರ್ಡಿಲೇ ಕನ್ನಡ ಸಣ್ಣಕೆ ಇದ್ದರೆ – ಹೊಸ ಬೋರ್ಡಿಲಿ ಕನ್ನಡವೇ ಮಾಯ!
ಕನ್ನಡರಾಜ್ಯದ ಬೇಕಲಕೋಟೆಲಿ ದೇವಸ್ಥಾನದ ಒಳದಿಕಾಣ ತಗಡಿಲಿ ಕನ್ನಡಲಿಪಿಗೊ ಕಾಣ್ತು, ಆದರೆ ಹೆರಾಣ ಸರ್ಕಾರಿ ಬೋರ್ಡಿಲಿ ಇಲ್ಲೆ!
ಹಳೆಕಾಲದ ನೋಟೀಸುಗೊ ಕನ್ನಡ ಮಲೆಯಾಳಲ್ಲಿ ಇದ್ದತ್ತು, ಈಗಾಣದ್ದು ಇಂಗ್ಳೀಶು ಮಲೆಯಾಳ ಮಾಂತ್ರ.
ಬೇಕಾರೆ ಮಲೆಯಾಳ ಓದಿ, ಅಲ್ಲದ್ದರೆ ಇಂಗ್ಳೀಶಿಲಿ ಇದ್ದು – ಹೇಳ್ತ ದರ್ಪ.
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ತೆಂಕಲಾಗಿಯಾಣ ಓಪೀಸರಕ್ಕೊ; ಕ್ಲಾರ್ಕಂಗೊ.
ಅವಕ್ಕೆ ಮಲೆಯಾಳ ಬಿಟ್ರೆ ಬೇರೆಂತೂ ಅರಡಿಯ. ಅವರತ್ರೆ ಮಾತಾಡೇಕಾರೆ ಮಲೆಯಾಳವೇ ಮಾತಾಡೇಕು.
ಮಲೆಯಾಳ ಬಾರದ್ದೋನು ಸೋತದೇ!

ಕ್ರಮೇಣ –
ಮಲೆಯಾಳವೇ ನಮ್ಮ ಆಡಳಿತ ಭಾಷೆ ಹೇಳ್ತ ಕಾರಣಕ್ಕೆ ಎಲ್ಲೋರುದೇ ಮಲೆಯಾಳ ಕಲ್ತುಗೊಂಡವು.
ಮಿಂಚಿನಡ್ಕಭಾವಂಗೆಲ್ಲ ಮಲೆಯಾಳ ಲಿಪಿ ಓದಲೆ ಅರಡಿಯ – ಹಾಂಗಿರ್ಸೋರು ಅನಿವಾರ್ಯಕ್ಕೆ ಬಸ್ಸಿನ ಬೋರ್ಡಾರೂ ಓದಲೆ ಅರಡಿಯೇಕು ಹೇಳ್ತ ಕಾರಣಕ್ಕೆ – ಮಲೆಯಾಳ ಲಿಪಿಯನ್ನೂ ಅಭ್ಯಾಸ ಮಾಡಿಗೊಳ್ತವು.
ಮಕ್ಕೊಗೆ ತೊಂದರೆ ಅಪ್ಪದು ಬೇಡ ಹೇದು ಕೆಲವುಜೆನ ಮಲೆಯಾಳ ಶಾಲೆಗೊಕ್ಕೇ ಹಾಕಿದವು.

ಕನ್ನಡಮ್ಮನ ಮಕ್ಕೊ ತುಳುವರ ’ನಿಂಗೊ ಕನ್ನಡಿಗರಲ್ಲ’ ಹೇಳ್ತ ಹಾಂಗೆ ತುಂಡುಸಿದವು!
ಕನ್ನಡಪ್ರಿಯ ಬ್ಯಾರಿಗಳ “ಬ್ಯಾರಿಭಾಷೆ”ಯನ್ನೂ ’ಮಲೆಯಾಳ’ ಹೇದು ದಿನಿಗೆಳಿದವು.
ಹಾಂಗಾಗಿ, ಬಹುಸಂಖ್ಯಾತ ಕನ್ನಡಿಗರ ಒಂದೇ ಸರ್ತಿಲಿ ಅಲ್ಪಸಂಖ್ಯಾತರು ಮಾಡಿ ಹಾಕಿದವು!
ಈಗ, ಕನ್ನಡ ನೆಲ ಕಾಸರಗೋಡಿಲಿ ಕನ್ನಡಕ್ಕೇ ಜಾಗೆ ಇಲ್ಲೆ. 🙁

ಆ ಸರ್ಕಾರಕ್ಕೆ ಆಯೇಕಾದ್ದೂ ಅದುವೇ!!
ಚೀನಾ ಟಿಬೇಟಿನ ನುಂಗಿದ್ಸಕ್ಕೂ, ಕೇರಳ ಕಾಸ್ರೋಡಿನ ನುಂಗಿದ್ಸಕ್ಕೂ ತುಂಬ ಸಾಮ್ಯತೆ ಕಾಣ್ತು ಒಪ್ಪಣ್ಣಂಗೆ. ಅಪ್ಪೋಲ್ದೋ?

~

ಸರ್ಕಾರಿ ಕಛೇರಿಗಳಲ್ಲಿ ಇಪ್ಪೋರ ಪ್ರಾಮುಖ್ಯತೆ ಈ ಸಂಗತಿಯ ನೋಡಿರೆ ಗೊಂತಾವುತ್ತು.

ಐ.ಎ.ಎಸ್ ಮಾಂತ್ರ ಅಲ್ಲ, ಯೇವದೇ ಸರಕಾರಿ ಕೆಲಸ ಅಕ್ಕು, ನಮ್ಮವು ಸರಕಾರದ ಒಳ ಹೊಗ್ಗಿಗೊಳೇಕು – ಹೇಳುಸ್ಸು ಇದರ ತಾತ್ಪರ್ಯ.
ಈಗಳೂ ತಡವಾಯಿದಿಲ್ಲೆ, ನಮ್ಮವು, ಕನ್ನಡಿಗರು ಹೆಚ್ಚುಹೆಚ್ಚು ಸರ್ಕಾರಿ ಉದ್ಯೋಗವ ಹಿಡುದು ಹೋದರೆ, ಮುಂದಾಣ ತಲೆಮಾರಿಂಗಪ್ಪಗ ರಜ್ಜ ನಮ್ಮತನ ಒಳಿಗು – ಹೇಳುಸ್ಸು ಕೊಳಚ್ಚಿಪ್ಪು ಭಾವನ ಅಭಿಪ್ರಾಯ.
ಮಾಣಿಗೆ ಎಷ್ಟು ಅರ್ತ ಆಯಿದೋ ಗೊಂತಿಲ್ಲೆ, ಆದರೆ ಇವ ಹೇಳುದು ಹೇಳಿಗೊಂಡೇ ಇತ್ತಿದ್ದ.
ರಜ ಹೊತ್ತಪ್ಪಗ ಆವಳಿಗೆ ತೆಗದ ಮಾಣಿ ಸೀತ ಅಲ್ಲಿಂದ ಹೆರಟು – ಅಡಿಗೆಕೋಣೆ ಹೊಡೆಂಗೆ ಹೋದ°. ಈಚೊಡೆಂಗೆ ತಿರುಗಿ ಕೊಳಚ್ಚಿಪ್ಪುಬಾವ ಮಾತು ಮುಂದುವರುಸಿದ°.
~

ಇಂದಿಂದ ನಾಳಂಗೇ ಆವುತ್ತ ಸಂಗತಿ ಅಲ್ಲ ಆದು, ಅದಕ್ಕೆ ತಲೆಮಾರುಗಳಷ್ಟು ಕಾಲ ಹಿಡಿಗು.
ಒಂದೋ ನಮ್ಮ ಕಾಲಕ್ಕೇ ಅಕ್ಕು, ಅಲ್ಲದ್ದರೆ ನಮ್ಮ ಮಕ್ಕಳ ಕಾಲಕ್ಕೆ, ಅಲ್ಲದ್ದರೆ ಅದರಿಂದಲೂ ಮತ್ತಂಗೆ..
ಅಂತೂ ಹೀಂಗೊಂದಿದ್ದು, ಇಂಜಿನಿಯರು ಅಪ್ಪದು ಮಾಂತ್ರ ಕೆಣಿ ಅಲ್ಲ, ಅದರಿಂದ ಮೇಗಾಣ ಎಷ್ಟೋ ಕಾರ್ಯಂಗೊ ಇದ್ದೂದು ಬೈಲಿನೋರಿಂಗೆ ಅರಡಿಯೇಕು – ಹೇಳ್ತದು ಶುದ್ದಿಯ ಹಿಂದೆ ಇಪ್ಪ ಆಶಯ..
ಬರೇ ಓಟು ತೆಕ್ಕೊಂಡು ಹೋಗಿ ಕುರ್ಚಿಲಿ ಕೂದು ಕಳ್ಳ ವೀಡ್ಯ ನೋಡಿರೆ ಏನೂ ಗುಣ ಇಲ್ಲೆ; ಐದೊರಿಶ ಕಳುದರೆ ಒಪಾಸು ಮನೆಗೆ ಬರೆಕಷ್ಟೆ.
ಬುದ್ಧಿಮತ್ತೆಯ ಪರೀಕ್ಷೆಗಳ ಪಾಸಾಗಿ – ಐ.ಎ.ಎಸ್ಸು, ಕೆ.ಎ.ಎಸ್ಸು, ಪೋಲೀಸು ಇನುಸ್ಪೆಕ್ಟ್ರ°, ಜಡ್ಜ°, ಸುಪ್ರೇಂಟ°, ಕಲೆಕ್ಟ್ರ° – ಹೀಂಗಿರ್ಸ ಜಾಗೆಲಿ ಕೂದುಗೊಂಡ್ರೆ, ರಿಟೇರ್ಡು ಅಪ್ಪನ್ನಾರ ಸರ್ಕಾರ ಆ ಭಾಗ ನಮ್ಮದಾಗಿರ್ತು.
ಎಂತ ಹೇಳ್ತಿ?

ಬೈಲಿನ ಮಾಣಿಯಂಗೊ, ಕೂಸುಗೊ, ಉದ್ಯೋಗಾರ್ಥಿಗೊ – ಸರ್ಕಾರಿ ಉದ್ಯೋಗದ ಹೊಡೆಂಗೆ ಹೋಪಲೆ ಉತ್ತೇಜನ ಕೊಡುವನೋ?
ಕೊಳಚ್ಚಿಪ್ಪುಭಾವ ಓದಲೆ ಸುರುಮಾಡಿದ್ದ; ಈ ಒರಿಶವೂ ಆ ದೊಡ್ಡಪರೀಕ್ಷೆ ಬರೆತ್ತನಾಡ. ನಿಂಗೊ?

ಒಂದೊಪ್ಪ: ಜೀವನದ ನೆಮ್ಮದಿಗೆ ಮನೆ-ಭೂಮಿ ಮಾಂತ್ರ ಸ್ವಂತದ್ದಿದ್ದರೆ ಸಾಲ; ಸರ್ಕಾರವೂ ನಮ್ಮದೇ ಇರೆಕು. ಅಲ್ದಾ?

ಸೂ: ಪಟ ಇಂಟರ್ನೆಟ್ಟಿಂದ.

16 thoughts on “ಸರ್ಕಾರೀ ‘ಕೆಲಸ’ ನಮ್ಮದಾದರೆ ‘ಸರ್ಕಾರ’ವೇ ನಮ್ಮದಾವುತ್ತು..!

  1. ಸರಕಾರಿ ಕೆಲಸ ದೇವರ ಕೆಲಸ ಹೇಳಿ ಕೇಳಿದ್ದೆ. ಒಪ್ಪಣ್ಣನ ವಿಚಾರಪೂರ್ಣ ಲೇಖನ ಲಾಯಕಿತ್ತು. ಕಾಸ್ರಗೋಡಿಲ್ಲಿ ಮಲೆಯಾಳದವರ ಕಾರ್ಬಾರು ನೋಡುವಗ ನಿಜವಾಗಿಯೂ ಬೇಜಾರು ಆವ್ತು. ನಿನ್ನೆ ಬದಿಯಡ್ಕಲ್ಲಿ ಒಂದು ರಿಕ್ಷಾದ ಜೆನದ ಹತ್ರೆ ಮೇಲಾಣ ಬದಿಯಡ್ಕಕ್ಕೆ ಹೋಯೆಕು ಬತ್ತಿಯಾ ಹೇಳಿ ಕನ್ನಡಲ್ಲಿ ಕೇಳಿದ್ದಕ್ಕೆ, ಅದರ ಮಲೆಯಾಳಿ ಭಾಶೆಲಿ ಬಂದ ಉತ್ತರ ಎಂತ ಗೊಂತಿದ್ದೊ ? ಅದಕ್ಕೆ ಕನ್ನಡ ಬತ್ತಿಲ್ಲೆ, ಮಲೆಯಾಳಲ್ಲಿ ಹೇಳಿ ಹೇಳಿ. ಎನಗೆ ಮಲೆಯಾಳವುದೆ ಬತ್ತಿಲ್ಲೆ, ಆನು ಕನ್ನಡದವ ಹೇಳಿ ಅದರ ರಿಕ್ಷಾಲ್ಲಿ ಬತ್ತಿಲ್ಲೆ ಹೇಳಿ ಇನ್ನೊಂದು ರಿಕ್ಷಾ ಹಿಡುದೆ. ಬದಿಯಡ್ಕಲ್ಲಿ ಇದ್ದೊಂಡು ಅಷ್ಟುದೆ ಕನ್ನಡ ಅರ್ಥ ಆಗದ್ದ ರಿಕ್ಷಾದ ಡ್ರೈವರಿನದ್ದು ಅಧಿಕಪ್ರಸಂಗ ಅಲ್ಲದೊ ?

  2. ಇದೇ ರೀತಿ ಆಲೋಚನೆ ಮಾಡ್ತವು ಹಲವು ಜೆನಂಗೊ ಇಕ್ಕು, ಇದ್ದವು ಹೇಳಿ ಅನುಸುತ್ತು ಎನಗೆ. ಮನ್ನೆ ಇತ್ಲಾಗಿ ಸುಳ್ಯದ ಸ್ನೇಹ ಶಾಲೆಲಿ ಅಡ್ಮಿನಿಸ್ಟೇಟಿವ್ ಪರೀಕ್ಷೆಗೆ ( IAS/IPS) ತರಬೇತಿ ಕೇಂದ್ರದ ಉದ್ಗಾಟನೆ ಆತು. ಸಣ್ನ ಮಟ್ಟಿಂಗಾದರೂ , ಈ ಲೇಖನದ ಆಶಯವ ಫಲಕಾರಿ ಅಪ್ಪಲ್ಲಿ ಒಂದು ಸಣ್ಣ ಹೆಜ್ಜೆ ಅಕ್ಕುಇದು.ಎಲ್ಲೋರಿಂಗೆ ಆಲೋಚನೆ ಮಾಡ್ಲೆ ಕಾಲ ಬಯಿಂದು.

  3. ಒಪ್ಪಣ್ಣ ಈ ಸರ್ತಿ ಹೇಳಿದ ಶುದ್ದಿ ನಿಜವಾಗಿಯೂ ಚಿಂತೆ ಮಾಡೆಕ್ಕಾದ ವಿಷಯವೇ…
    ಇಂಜಿನಿಯರು ಕಲ್ತು ಬೆಂಗ್ಳೂರು ಹೊಕ್ಕವಕ್ಕೆಲ್ಲ ಉದ್ಯೋಗ ಸಿಕ್ಕುತ್ತು ಹೇಳ್ತ ಕಾಲ ಇನ್ನು ಇಲ್ಲೆ
    ಹೇಳ್ತ ಸತ್ಯ ನಮ್ಮೋರಿಂಗೆ ಗೊಂತಾಯೆಕ್ಕಾತು. ಅಲ್ಲದೋ…?
    ಸರಕಾರಿ ಕಛೇರಿಗೆ ಹೊಕ್ಕರೆ ಕಂಪ್ಯೂಟರು ಕುಟ್ಟುಸ್ಸೇ ಜೀವನ ಹೇಳಿ ಆವ್ತಿಲ್ಲೆ,
    ಒಪ್ಪಣ್ಣ ಹೇಳಿದ ಹಾಂಗೆ
    ನಮ್ಮ ಸುತ್ತ ಒಂದು ಪ್ರಭಾವಳಿಯೇ ಇರ್ತು…

  4. ಒಪ್ಪಣ್ಣ,
    ಎಲ್ಲರೂ ಚಿಂತನೆ ಮಾಡಿ ಕಾರ್ಯರೂಪಕ್ಕೆ ಇಳುಸಲೆ ಪ್ರಯತ್ನ ಮಾಡೆಕ್ಕು ಹೇಳ್ತರ ಸರಿಯಾಗಿ ತಿಳುಶಿ ಕೊಟ್ಟಿದೆ.
    ಒಂದು ಕಾಲಲ್ಲಿ ನಮ್ಮವು ಕೃಷಿ ಇಲ್ಲದ್ದರೆ, ಸರ್ಕಾರೀ ಕೆಲಸಂಗಳನ್ನೇ ನಂಬಿದವು. ಅಲ್ಲಿ ಯಾವಾಗ ಮೀಸಲಾತಿ ಸುರು ಆತೋ ನಮ್ಮವು ಧೈರ್ಯ ಕಳಕ್ಕೊಂಡವು. ಅದಕ್ಕೆ ಸರಿಯಾಗಿ ಹಲವಾರು ಖಾಸಗಿ ಸಂಸ್ಥೆಗೊ ಕೈ ಬೀಸಿ ದೆನುಗೊಳಲೆ ಸುರು ಮಾಡಿದವು. ಕೈ ತುಂಬಾ ಸಂಬಳ ಕೊಟ್ಟವು. ಅವಕ್ಕೆ ಲಾಭ ಇಲ್ಲದ್ದೆ ಅವು ಕೊಡ್ತವಿಲ್ಲೆ ಹೇಳುವದರ ನಾವು ತಿಳ್ಕೊಳೆಕ್ಕು.
    ನಮ್ಮ ಸಾಮರ್ಥ್ಯವ ನಾವು ಇನ್ನೊಂದು MNC ಗಳ ಉದ್ಧಾರ ಮಾಡ್ಲೆ ಉಪಯೋಗ ಮಾಡ್ತಕ್ಕಿಂತ, ಸರ್ಕಾರೀ ಸೇವೆಲಿ ಇದ್ದೊಂಡು ನಮ್ಮ ಜೆನಂಗಳ, ನಮ್ಮ ಸಮಾಜದ ಸೇವೆ ಮಾಡಿರೆ, ಹಲವಾರು ಸಮಸ್ಯೆಗೊ ನಿವಾರಣೆ ಅಕ್ಕು.
    ನಮ್ಮಲ್ಲಿ ಸಾಮರ್ಥ್ಯ ಇದ್ದು. ಈಗ ಬೇಕಾದ್ದು ಆತ್ಮ ವಿಶ್ವಾಸ ಮತ್ತೆ ಕಾರ್ಯ ರೂಪಕ್ಕೆ ಇಳುಶುವ ಧೃಢ ನಿರ್ಧಾರ, ಪರಿಶ್ರಮ.

  5. ಒಳ್ಳೆ ಲೇಖನ, ಹೆಚ್ಚಿನವಕ್ಕೆ ಗೋರ್ಮೆಂಟು ಕೆಲಸಕ್ಕೆ ಅರ್ಜಿ ಹಾಕಲೇ ಉದಾಸನ. ಎಂತಕ್ಕೆ ಹೇಳಿರೆ ಅಲ್ಲಿ ಸಿಕ್ಕ, ಅಲ್ಲಿ ಪ್ರಭಾವ ನೆಡೆತ್ತು ಹೇಳಿ ಅಲೋಚನೆ..ಕನಿಷ್ಟ ಪ್ರಯತ್ನವೂ ಮಾಡ್ತವಿಲ್ಲೆ. NPCIL ಲ್ಲಿ ಕಳುದ 20 ವರ್ಷಂದ ಆನು ನೋಡ್ತಾ ಇದ್ದೆ, ಒಬ್ಬನೂ ಬತ್ತವಿಲ್ಲೆ, ಆಯ್ಕೆ ಕೆಲಸ ಎಲ್ಲ ಪಾರದರ್ಷಕವೇ ಇದ್ದರೂ..ಒಪ್ಪಣ್ಣ ಹೇಳಿದ ಹಾಂಗೆ ವಿಪ್ರೋ, ಇಂಪೋಸಿಸ್ಸು ಯೇವದಾರೂ ಅಕ್ಕು ಬೆಂಗ್ಳೂರಿಲ್ಲಿ..

    {ಉನ್ನತ ಹುದ್ದೆಲಿ ಕೆಲಸ ಮಾಡುವಗ ಭಾರೀ ಜಾಣ್ಮೆ ಬೇಕಾದ್ದು ಅಪ್ಪು} ಈಗಾಣ ಕಾಲಲ್ಲಿ ಎಲ್ಲರನ್ನೂ ಒಟ್ಟಿಂಗೇ ತೆಕ್ಕೋಂಡು ಹೋಯೆಕಾವುತ್ತು, ಮೇಲಾಣವ, ಕೆಳಾಣವ ಹೇಳಿ ಅವಗಣನೆ ತೋರದ್ದೆ ೦ಂದು ಸಮತೋಲನ ಇಲ್ಲದ್ರೆ ತೊಂದರೆ ಅನುಭವಿಸೆಕಕ್ಕು.

    ವ್ಯಕ್ತಿತ್ವ ವಿಕಸನ ಶಿಬಿರಲ್ಲಿ ಒಬ್ಬ ಹಿರಿಯ ತರಬೇತುದಾರ ಹೇಳಿದ ಶುದ್ದಿ ನೆಂಪಾತು..ಸರಕಾರಿ ವ್ಯೆವಸ್ತೆಯ ಬಗ್ಗೆ.. ಒಂದು ಶಿಬಿರಲ್ಲಿ ಅವ ಒಬ್ಬ ತಾಶಿಲ್ದಾರಂಗೆ ಕೇಳಿದನಡ..ನಿಂಗಳೊಟ್ಟಿಂಗೆ ಎಷ್ಟು ಜೆನ ಎದ್ದವು? ಅದಕ್ಕೆ ಅವ ಹೆಳಿದನಡ..ಎನ್ನೊಟ್ಟಿಂಗೆ ಆರೂ ಇಲ್ಲೆ, ಎನ್ನ ಕೈಕೆಳ 15 ಜೆನ ಕೆಲಸಕ್ಕೆ ಇದ್ದವು ಹೇಳಿ!

  6. ವಿಶಯ ಸರಿ ಇದ್ದು ಒಪ್ಪಣ್ಣ! ಸಮಸ್ಯೆಯ ಒಟ್ಟಿಂಗೆ ಪರಿಹಾರವೂ ಇಪ್ಪದು ಸತ್ಯ..!
    ಬಿ ಎಸ್ ಎನ್ ಎಲ್ ಲಿ ಕೆಲಸ ಮಾಡುವ ಎನಗೆ ಗೊನ್ತಿಪ್ಪ ಒಬ್ಬರಿನ್ಗೆ, ಅವರ ಕೆಳ ಕೆಲಸ ಮಾಡುವ (ಹಿಂದುಳಿದ ವರ್ಗದ!!!?) ಲೈನ್ ಮನ್ ಒಬ್ಬ ಕಿರಿಕಿರಿ ಕೊಟ್ಟು, ಅವು ಪಾಪ ಪೊಲೀಸ್ ಸ್ಟೇಶನ್ ಹತ್ತುವ ಹಾಂಗೆ ಆಗಿತ್ತು..(ಜಾತಿ ನಿಂದನೆ ಹೇಳುವ ಅಪವಾದಲ್ಲಿ!)ಮತ್ತೆ ರಾಜಿ ಪಂಚಾಯಿತಿಕೆ ಮಾಡಿ ಬಚಾವಾದವು ಹೇಳುದು ಬೇರೆ ಸಂಗತಿ.!!!
    ಹಾಂಗಾಗಿ, ಉನ್ನತ ಹುದ್ದೆಲಿ ಕೆಲಸ ಮಾಡುವಗ ಭಾರೀ ಜಾಣ್ಮೆ ಬೇಕಾದ್ದು ಅನಿವಾರ್ಯ..
    ಕೆಳಣ ಹುದ್ದೆಲಿ ಕೆಲಸ ಮಾಡುವಗ, ನಮ್ಮ ಜ್ಯುನಿಯರುಗ (ಮೀಸಲು ವ್ಯವಸ್ಥೆ ಲಿ) ಮೇಲೆ ಹೋಪಗ ಚೂರು ಬೇಜಾರುದೆ ಅಕ್ಕು..

    1. ಪುಟ್ಟ ಬಾವ ಹೇಳಿದ್ದು ಸರಿ, ಎನ್ನ ಒಬ್ಬ ಮಿತ್ತ೦ಗೂ ಹೀಗೆ ಆಯ್ದು. ಮಲೆನಾಡು ಕಾಲೇಜಿಲಿ ಇ೦ಜಿನಿಯರಿ೦ಗ್ ಮುಗುಶಿ ದೊಡ್ಡ ದೊಡ್ದ ಐಟಿ ಕ೦ಪೆನಿಗಳಲ್ಲಿ ಕೆಲಸ ಸಿಕ್ಕಿದರ ಬಿಟ್ಟು, ೩-೪ ಸಲ ಪರೀಕ್ಶೆ ಬರದು ಈಗಪಿ.ಡಿ. ಒ ಆಗಿದ್ದ, ಕೆಲಸ ಎಲ್ಲ ಒಕೆಡ, ಮೇಲಧಿಕಾರಿಗಳ ಕಿರಿ ಕಿರಿ ನೋಡುಗ ಒಳುದ ಫ್ರೆ೦ಡುಗಲಳಾ೦ಗೆ ಪರ್ದೇಶ ಎಲ್ಲ ತಿರುಗಿ ಬಪ್ಪಲಿ ಆವ್ತ ಇದ್ದಡ…ಮತ್ತೆ ಮೀಸಲಾತಿ೦ದಾಗಿ ನಮ್ಮಿ೦ದ ಕಮ್ಮಿ ಕಲ್ತವು, ಮತ್ತೆ ಕೆಲ್ಸಕ್ಕೆ ಸೇರಿದವರ ಪ್ರೊಮೊಶನ್, ದಬ್ಬಾಳಿಕೆ ಎಲ್ಲ ಕೇಳೆಕ್ಕವ್ತು ಕೆಲ ಸಲ. ಆದರು ಒಪ್ಪಣ್ಣನ ಚಿ೦ತನೆಗೆ ಧನ್ಯವಾದ೦ಗೊ…

      1. ಅಪ್ಪು ಈ ಮೇಲಾಧಿಕಾರಿಗಳ ಕಿರುಕುಳ… ಪ್ರೋಮೋಶನ್ ಗೆ ಬೇಕಾಗಿ ಕಿರುಕುಳ… ಕಮ್ಮಿ ಗೊಂತಿಪ್ಪವು ಮಸ್ಕಾ ಹೊಡದು ದೊಡ್ಡ ಸ್ಥಾನ ಗಳಿಸಿಗೊಮ್ಬದು ಎಲ್ಲ ಕಡೆ ಸಾಮಾನ್ಯ ಸಮಸ್ಯೆ…

        ಎನ್ನ ಕಸಿನ್ ಒಬ್ಬ ಇದೆ ತರ ಅನುಭವ ಹೇಳಿಗೊಂಡಿತ್ತಿದ್ದ… ಅವ ದೊಡ್ಡ ಐಟಿ ಕಂಪೆನಿಲಿ ಕೆಲಸಲ್ಲಿಪ್ಪದು. ಅವನುದೆ ಅವನ ಜೊತೆ ಕಲ್ತವಂದೆ ಒಂದೇ ಕಂಪೆನಿಲಿ ಕೆಲಸಕ್ಕೆ ಸೇರಿದ್ದದು… ಅವನ ಜೊತೆ ಕಲ್ತವಂಗೆ ಏನೇನೂ ಸ್ಕಿಲ್ ಇಲ್ಲದ್ದರೂ ಟೀಂ ಲೀಡರ್ ಮತ್ತು ಮೇನೇಜರ್ ಗೆ ಮಸ್ಕಾ ಹೊಡದು ಅವ ಒಳ್ಳೆ ಸ್ಥಾನ ಗಿಟ್ಟಿಸಿಗೊಂಡು ಆರಾಮಲ್ಲಿದ್ದ… ಇವ ಪಾಪ ಹಗಲಿರುಳು ದುಡುದರೂ ಇನ್ನೂ ಕಷ್ಟ ಬತ್ತಾನೆ ಇದ್ದ… ಅವನ ಶ್ರಮವ ಗುರುತಿಸುವವೇ ಇಲ್ಲೆ ಅಲ್ಲಿ… ಸರ್ಕಾರಿ ಕೆಲಸ ಆಗಿದ್ದರೆ ಎನ್ನ ಪ್ರಾಮಾಣಿಕ ಸೇವೆಯ ಕಸ್ಟಮರ್ ಗ ಆದರೂ ನೆನಪು ಮಡಿಕ್ಕೊಳ್ಳುತ್ತಿತವು… ಮೇಲೆ ವಿವರುಸಿದ ಹಾಂಗೆ ಸರಕಾರೀ ಕೆಲಸಲ್ಲಿಪ್ಪ ಧನಾತ್ಮಕ ಅಂಶಗಳ ಎಲ್ಲ ಹೇಳಿ ಬೇಜಾರು ಮಾಡಿಗೊಂಡು ಇತ್ತಿದ್ದ…

        1. ಸಮಸ್ಯೆ ಇಪ್ಪದು ಇ೦ದು ಸಮಾಜ ಒಬ್ಬನ ಗುರಿತುಸುತ್ತ ಇಪ್ಪದು, ಅವನತ್ರೆ ಇಪ್ಪ ಕಾರು, ಹಣ, ಬ೦ಗ್ಲೆಯ ಮೇಲೆ..ಪ್ರಾಮಾಣಿಕತೆಗೆ ಬೆಲೆ ತು೦ಬಾ ಕಮ್ಮಿ ಆವ್ತಾ ಇದ್ದು… ಆದ ಕಾರಣ ಅಸ್ಟು ಸುಲಭಲ್ಲಿ ಆರುದೆ ಸರ್ಕಾರಿ ಕೆಲ್ಸಕ್ಕೆ ಹೊವ್ತವಿಲ್ಲೆ…

          1. ಪ್ರಾಮಾಣಿಕತೆಯ ಸಮಾಜ ಗುರುತಿಸುತ್ತಿಲ್ಲೆ ಹೇಳಿ ಹೇಳುವ ನಾವು ಎಲ್ಲ ಕಡೆ ಬಯಸುದು ಪ್ರಾಮಾಣಿಕ ಅಧಿಕಾರಿಗಳ ತಾನೇ… ಸಮಾಜಲ್ಲಿಪ್ಪ ಎಲ್ಲರೂ ನಮ್ಮ ಹಾಂಗೆ ಬಯಸುಗು ಅಲ್ಲದ… ಹಾಂಗಾರೆ ‘ಪ್ರಾಮಾಣಿಕತೆ’ ಗೆ ‘ಡಿಮಾ೦ಡ್’ ಜಾಸ್ತಿ ಇದ್ದು… ‘ಸಪ್ಲಯ್’ ಇಲ್ಲೇ… ಜಾಣರು ಅವಕಾಶವ ಉಪಯೋಗಿಸಿಗೊಂಡು ಕಾಲವ ಸದುಪಯೋಗ ಮಾಡಿಗೊಮ್ಬಲಕ್ಕು ಅಲ್ಲದ?

  7. ಕೇರಳದ ಜನ ಕಾಸರಗೂದಿಲ್ಲಿ ಮಾದುದರ ಕನ್ನ್ ಡದೊರು ಬೆಳಗಾವಿಲ್ಲಿ ಮರಾಥಿಗಳ ಮೀಲೆ ಮಾದುತ್ತವನ್ನೆ ಒಪ್ಪಣ್ಣ ಭಾವಾ!

  8. ತುಂಬಾ ಒಳ್ಳೆ ಶುದ್ದಿ ಒಪ್ಪಣ್ಣ… ರಾಜಕೀಯ,ಸರಕಾರೀ ಕೆಲಸ ಎರಡರಲ್ಲಿಯೂ ನಮ್ಮವು ಸ್ಥಾನ ಒಳಿಶಿಗೊಲ್ಲೆಕ್ಕು… ‘ರಾಜಕೀಯ ಹೊಲಸು’ ಹೇಳಿ ನಾವು ಅದರಿಂದ ದೂರ ಒಳುದರೆ ಅಪ್ಪದು ಹೇಂಗೆ? “ರಾಜಕೀಯ ‘ಕೆಸರಿನ ಕೊಳ’ ಆದರೆ ನಾವು ಅದರಲ್ಲಿ ‘ಕಮಲದ’ ಹೂಗು ಆಗಿ ಏಕೆ ಅರಳುಲೆ ಆಗ?” ಮನಸ್ಸಿದ್ದರೆ ಮಾರ್ಗ ಇದ್ದು… ‘ಪ್ರಾಮಾಣಿಕತೆ’ಗೆ ಯಾವತ್ತಿದ್ದರೂ ಬೆಲೆ ಇದ್ದು… ನಿಜವಾಗಿಯೂ ಇಂದು ಸಮಸ್ಯೆ ಆದದ್ದು ಎಲ್ಲಿ ಹೇಳಿರೆ ‘ಪ್ರಾಮಾಣಿಕರು ಮತ್ತು ಸಮರ್ಥ ನಾಯಕರು’ ರಾಜಕೀಯಂದ ದೂರ ಒಳುದ್ದವು… ಮತ್ತೆ ‘ಅಧಿಕಾರ,ಬಲ,ಹಣ’ ಎಲ್ಲ ಬಂದ ಮೇಲೆಯೂ ಮನಸ್ಸು ವಿಚಲಿತ ಆಗದ್ದೆ ಇರೆಕ್ಕಾರೆ ಅವನಲ್ಲಿ ತುಂಬಾ ಸಾಮರ್ಥಿಗೆ ಇರೆಕ್ಕಾವುತ್ತು… ಅವ ಆಂತರ್ಯಂದ ಸನ್ಯಾಸಿ ಆಗಿರೆಕ್ಕಾವುತ್ತು… ಈ ಕಾರಣಗಳಿಂದಾಗಿ ರಾಜಕೀಯಲ್ಲಿ ಹೊಲಸು ಇನ್ನೂ ಇನ್ನೂ ಹೆಚ್ಚಿ ವಾಸನೆ ಬಪ್ಪಲೆ ಶುರು ಆಯಿದು… ಇನ್ನಾದರೂ ನಾವು ಎಚ್ಹೆತ್ತುಗೊಂಡು ನಮ್ಮ ಮಕ್ಕಳಲ್ಲಿ ನಾಯಕತ್ವ ಗುಣಗಳ ಬೆಳೆಶುದು ಹೇಂಗೆ ಹೇಳಿ ಆಲೋಚನೆ ಮಾಡೆಕ್ಕು… ಸಣ್ಣ ಇಪ್ಪಗಲೇ ರಾಮನ ಕಥೆಯ ಹೇಳುಲೆ ಸುರುಮಾಡಿರೆ ನಮ್ಮ ಮಕ್ಕೋ ಪ್ರತಿಯೊಬ್ಬನೂ ರಾಮ ಆಗಿ ಬೆಳವಲೇ ಸಾಧ್ಯ ಇದ್ದು… “ನಮ್ಮೋ ಮಕ್ಕೋ ಪ್ರತಿಯೊಬ್ಬನೂ ‘ರಾಮ’ ನಾಗಿ ಅಸಂಖ್ಯ ರಾವಣ೦ಗಳ ನಾಶ ಮಾಡುವ ಹಾಂಗೆ ಆಗಲಿ… ಇಂದಿಂದಲೇ ಎಚ್ಚೆತ್ತುಗೊಂಬ…”

    ಕೊಳಚಿಪ್ಪು ಭಾವನ ಆಲೋಚನೆ ತುಂಬಾ ಒಳ್ಳೆ ಆಲೋಚನೆ… ನಿಜವಾಗಿಯೂ ಯುವ ಜನತೆಗೆ ಮಾದರಿ… ತುಂಬಾ ಲಾಯಕಲ್ಲಿ ಬಯಿಲಿಂಗೆ ವಿವರುಸಿದ್ದೆ ಒಪ್ಪಣ್ಣ…

  9. ನಿಜ.ಸರಕಾರೀ ಕೆಲಸಕ್ಕೆ ನಮ್ಮವು ಶ್ರದ್ಧೆ ತೆಕ್ಕೊಂಬದು ಸಾಲ.ದ.ಕ.ಜಿಲ್ಲೆಲೇ ಇದೇ ಅವಸ್ಥೆ.ಸ್ಥಳೀಯರು ಸರಕಾರೀ ಕೆಲಸಂದ ಹೆಚ್ಚು ಬಾಕಿ ಕೆಲಸ ಇಷ್ಟ ಪಡುತ್ತವು.ಸರಕಾರಿ ಕೆಲಸಕ್ಕೆ ರಜ ಕಷ್ಟಪಟ್ಟು ತಯಾರಿ ಮಾಡಿಕೊಳೆಕು.ಉತ್ತರದವು ಭಾರೀ ಶ್ರದ್ಧೆಲಿ ತಯಾರಿ ಮಾಡಿ ಇಲ್ಲಿಗೆ ಕೇಂದ್ರ ಸರಕಾರಿ ಸಂಸ್ಥೆಗೊಕ್ಕೆ ಬತ್ತಾ ಇದ್ದವು,ನಮ್ಮಲ್ಲಿ ಪ್ರತಿಭೆ ಇಲ್ಲದ್ದೆ ಇಲ್ಲೆ.ಆದರೆ ಈ ಬಗ್ಗೆ ಉದಾಸೀನ ಮನೆ ಮಾಡಿದ್ದು!

  10. ನಿಜವಾಗಿಯೂ ಚಿಂತಿಸೆಕ್ಕಾದ ವಿಚಾರ. ಚೆನ್ನೈ ಭಾವ ಒಪ್ಪ ಕೊಟ್ಟ ಹಾಂಗೆ {ನಮ್ಮ ಸುತ್ತ ಒಂದು ಪ್ರಭಾವಳಿ ಬೆಳದಿರ್ತು} ಹೇಳ್ತ ವಾಕ್ಯ ತುಂಬ ಇಷ್ಟ ಆತು. ಈ ಬರಹ ನಮ್ಮ ಬೈಲಿನ ಯುವಜನತೆಗೆ ಮಾದರಿಯಾಗಲಿ.

  11. [•ನಮ್ಮ ಸುತ್ತ ಒಂದು ಪ್ರಭಾವಳಿ ಬೆಳದಿರ್ತು ] – ಇಡೀ ಶುದ್ದಿಯ ಭಾವನೆ ಇದರಲ್ಲೇ ಮೂಡಿಬಂತು. ಮನಮುಟ್ಟಿದ ಚಿಂತನೀಯ ಶುದ್ದಿಗೆ ಒಪ್ಪ ಹೇಳಿತ್ತು. ಘನ ಜವಾಬ್ದಾರಿಯ ಮತ್ತು ಕಾರ್ಯಸಾಧನೆಯ ಉಂಟುಮಾಡಲೆ ಸಾಧ್ಯ ಇಪ್ಪ ಒಪ್ಪಣ್ಣನ ಈ ಚಿಂತನೆ ನಮ್ಮವರ ಜಾಗೃತಗೊಳುಸಲಿ ಮುಂದಾಣ ಚರಿತ್ರೆಗೆ ಈ ಶುದ್ದಿ ಒಂದು ನಾಂದಿಯಾಗಿರಲಿ ಹೇಳಿ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×