Oppanna.com

ಸೌಕರ್ಯ ಹೆಚ್ಚಾದ ಹಾಂಗೆ ಉದಾಸಿನವೂ ಹೆಚ್ಚಾವುತ್ತೋ..!

ಬರದೋರು :   ಒಪ್ಪಣ್ಣ    on   06/07/2012    14 ಒಪ್ಪಂಗೊ

ಅಷ್ಟಾವಧಾನದ ಶುದ್ದಿ ನಾವು ಮಾತಾಡಿಂಡಿದ್ದ ಹಾಂಗೇ, ಸಮದಾನಿ-ಅವಧಾನಿ ದೊಡ್ಡಜ್ಜನ ಮನೆ ಜೆಂಬ್ರ ಕಳಾತು.

ಅದೇ ದಿನ ತಲೆಂಗಳ ಜೆಂಬ್ರವೂ ಇದ್ದ ಕಾರಣ ದೊಡ್ಡಬಾವಂಗೆ ಎರಡೆರಡು ದಿಕ್ಕೆ ಊಟ ಸುದಾರ್ಸಲೆ ಇದ್ದತ್ತು. ಊಟದೊಟ್ಟಿಂಗೆ ಊಟದಕ್ಷಿಣೆಯೂ.
ಅದಿರಳಿ; ದೊಡ್ಡಜ್ಜನ ಮನೆ ಜೆಂಬ್ರಂದ ಮತ್ತಾಣ ವಾರ ಎಂತದು?
ಮದಲೇ ನಿಗಂಟು ಮಾಡಿದ ಹಾಂಗೆ ಬೈಲಕರೆ ಗಣೇಶಮಾವನ ಮನೆಲಿ ಮದುವೆ ಗೌಜಿ.

ಆರಾಮವೇ ಜೀವನ ಆದರೆ ರಾಮನೇ ಗೆತಿಯೋ!?

ಜೆಂಬ್ರ ಎಳಗುಸುದು ಹೇದರೆ ಸುಲಬವೋ?
ಸ್ವತಃ ಗಣೇಶಮಾವನಿಂದ ಹಿಡುದು, ಕೆಲಸದ ಬಾಲೆಯ ವರೆಗೆ ಎಲ್ಲೋರಿಂಗೂ ಗೌಜಿಯ ಬೆಶಿ ಮುಟ್ಟಿದ್ದು.
ವಾಹನ ವೆವಸ್ತೆ, ಅಡಿಗೆ ವೆವಸ್ತೆ, ಹೇಳಿಕೆ ವೆವಸ್ತೆ, ಕಾರ್ಯಕ್ರಮದ ಸಮಸ್ತ ವೆವಸ್ತೆ, ಹೋ..ಹು!
ನಾಕು ದಿನಂದ ಗಣೇಶಮಾವ ಹಾಸಿಗೆ ಹೊಡೆಂಗೇ ತಲೆ ಹಾಕಿ ಮನುಗಿದ್ದವಿಲ್ಲೆ, ಅಷ್ಟೂ ಕೆಲಸಂಗೊ.
ಮದುವೆ ದಿನ ಹತ್ತರತ್ತರೆ ಬಂದ ಹಾಂಗೆ ತಲೆಬೆಶಿಯೂ ಏರುದೇ ವಿನಾ ಇಳಿತ್ತಿಲ್ಲೆ.
ಅವರವರ ಅಂಬೆರ್ಪು ಅವಕ್ಕವಕ್ಕೆ. ಪಾಪ!! ಅದಿರಳಿ.

~

ಮದುವೆ ಮುನ್ನಾಣದಿನ ನೆರೆಕರೆಯೋರಿಂಗೆ ಗೊಂತಾಯೇಕಾದ ಸಂಗತಿ; ದಿಬ್ಬಾಣ ಎಷ್ಟೊತ್ತಿಂಗೆ ಹೆರಡುಸ್ಸು ಹೇದು.
“ಬೈಲಕರೆ ಮದುವೆ ದಿಬ್ಬಾಣ ನಾಳೆ ಉದೆಕಾಲ ಐದು ಗಂಟೆಗೆ ಅಡ” – ಹೇದು ಆಚಮನೆ ಕುಂಞಣ್ಣ ಬಂದು ಹೇಳಿದ°.
ಶಾಂತಿಕಟ್ಟೆಯ ಹತ್ತರಂಗೆ ಐದೂಕಾಲಕ್ಕೆ ವೇನು ಬತ್ತು – ಮಾಷ್ಟ್ರುಮಾವಂಗೂ, ಪಾರೆ ಮಗುಮಾವಂಗೂ, ಆಚಕರೆ ತರವಾಡುಮನೆ ರಂಗಮಾವಂಗೂ, ನೆರೆಕರೆಲಿ ಬತ್ತೋರಿಂಗೂ – ತಿಳುಶಿಕ್ಕಲೆ ಗಣೇಶಮಾವ ಹೇಳಿದವಡ.
ಆಚಮನೆ ಕುಂಞಣ್ಣ ಅದರ ಹೇಳುಲೇ ಬಂದದು; ಒಪ್ಪಣ್ಣಂಗೂ ಆ ಶುದ್ದಿ ಗೊಂತಾತು.

ಕುಂಞಣ್ಣಂಗೆ ಮನೆಕೆಲಸ, ತೋಟ ಹಟ್ಟಿ ಕೆಲಸಂಗಳ ಎಡಕ್ಕಿಲಿ ಮನೆಬಿಟ್ಟು ಹೆರಡ್ಳೆ ಪುರ್ಸೊತ್ತೇ ಅಪ್ಪಲಿಲ್ಲೆ. ಹೀಂಗೆಂತಾರು ತುರ್ತು ಶುದ್ದಿ ಮುಟ್ಟುಸೇಕಾರೆ ಮಾಂತ್ರ ಬಕ್ಕಷ್ಟೆ. ಹಾಂಗೆ, ಅಪುರೂಪಲ್ಲಿ ಕುಂಞಣ್ಣ ಬಂದಿಪ್ಪಾಗ ಮನೆ ಒಳ ಬಾರದ್ದೆ ಇಕ್ಕೋ!

ದಿಬ್ಬಣ “ಐದು ಗಂಟಗೆ” ಹೇಳಿ ಅಪ್ಪದ್ದೇ, ಒಪ್ಪಣ್ಣಂಗೆ ಮದುವೆ ಚೆಪ್ಪರವೇ ತಲೆಮೇಗೆ ಬಿದ್ದ ಹಾಂಗಾತು.
“ಹ್ಹಾ! ಎಲ್ರಾಮು ಮಡಗಿ ನಾಕು ಗಂಟಗೇ ಏಳೇಕಷ್ಟೆ; ಅಲ್ಲದ್ದರೆ ಹೆರಟಾಗ ಇದಾ” – ಹೇಳಿಗೊಂಡೆ.
ನಿಂಗೊಗೆ ನಾಕುಗಂಟೆ ಹೇದರೆ ಉದೆಕಾಲವೇ ಆಗಿಕ್ಕು; ಆದರೆ ಒಪ್ಪಣ್ಣಂಗೆ ಅದು ಇನ್ನೂ ನೆಡು ಇರುಳೇ. ಪಾಪ!

~

“ಎಲ್ರಾಮು ಮಡುಗೆಕ್ಕಾವುತ್ತೋ? ಅಲ್ಲದ್ದರೆ ಎಚ್ಚರಿಗೆ ಆವುತ್ತಿಲ್ಲೆಯೋ ನಿನಗೆ” – ಕುಂಞಣ್ಣ ಕೇಳಿದ ಸಹಜ ಕುತೂಹಲಲ್ಲಿ.
ಅದಪ್ಪು; ನವಗೆ ಎಚ್ಚರಿಗೆ ಆಯೇಕಾರೆ ಆರಾರೊಬ್ಬ ಏಳ್ಸೇಕು. ಎಲ್ರಾಮು ಗಂಟೆಯೇ ಆಗಿಕ್ಕು; ಮೊಬೈಲೇ ಆಗಿಕ್ಕು; ಅತವಾ ಅಪ್ಪಮ್ಮನೋ- ಆರೂ ಅಕ್ಕು.
ಆರೂ ಏಳುಸದ್ದರೆ ಮದುವೆ ಮೂರ್ತ ಕಳುದು ತಾಳಿ ಕಟ್ಟಿ ಅಕ್ಕು; ಅದರಿನ್ನ ಮದಲೇ ಎಚ್ಚರಿಗೆ ಆಗ ಇದಾ.

ಆದರೆ ಆಚಮನೆ ಕುಂಞಣ್ಣಂಗೆ ಹಾಂಗಲ್ಲಡ.
ಮನುಗುವಾಗಳೇ “ನಾಳೆ ಇಷ್ಟು ಗಂಟೆಗೆ ಏಳೇಕು” ಹೇದು ಗ್ರೇಶಿಂಡು ಮನುಗಿರೆ, ಒರಕ್ಕು ಬಿರುದು ಎಚ್ಚರಿಗೆ ಅಪ್ಪಗ ಗಂಟೆ ನೋಡಿರೆ ಸರೀ ಇರ್ತಾಡ! ಯೋ..ಪ!!

ಕುಂಞಣ್ಣಂಗೆ ಇದು ಇಂದು ನಿನ್ನೇಣ ಪರಿಪಾಠ ಅಲ್ಲ; ಸಣ್ಣ ಇಪ್ಪಾಗಂದಲೇ – ವಿದ್ಯಾಭ್ಯಾಸ ಲಾಗಾಯಿತೂ ಹಾಂಗೇಡ.
ಪ್ರಾಯ ಏರಿದ ಹಾಂಗೇ ಉದಾಸಿನವೂ ಏರ್ತು; ಕುಂಞಣ್ಣಂಗೆ ಹಾಂಗಾಯಿದಿಲ್ಲೆ. ಕಲಿತ್ತದೆಲ್ಲ ಕಲ್ತಾಗಿ, ಮತ್ತೆ ಕೃಷಿಕಾರ್ಯ ಆರಂಭ ಆದ ಮತ್ತುದೇ, ಅದರ ಎಡಕ್ಕಿಲಿ ಜ್ಯೋತಿಷ್ಯಾಧ್ಯಯನ ಮಾಡುವಗಳೂ – ಯೇವಗಳೂ ಎಲ್ರಾಮು ಬೇಕಾಯಿದಿಲ್ಲೆ.
ಕುಂಞಣ್ಣ ಇದರ ಹೇಳುವಗ ಒಪ್ಪಣ್ಣಂಗೆ ಪೀಸಾದ ಮಾಲುಗೋಪುರಂದಲೂ ಹೆಚ್ಚಿನ ಅದ್ಭುತ – ಹೇದು ತಲೆ ಮಾಲಿತ್ತು!
ಅಂತೂ – ದಿಬ್ಬಾಣದ, ಮದುವೆ ಏರ್ಪಾಡಿನ ರಜ ಹೊತ್ತು ಮಾತಾಡಿಕ್ಕಿ ಕುಂಞಣ್ಣ ಹೆರಟ. ಆಸರಿಂಗೆ ಬೇಡಡ.
~
ನಿಂಗೊಗೆ ಗೊಂತಿಕ್ಕೋ ಏನೋ,
ಎಲ್ಲ ಆಧುನಿಕ ಸೌಕರ್ಯದ ಎಡಕ್ಕಿಲಿಯೂ ಆಚಮನೆ ಕುಂಞಣ್ಣ ಒಂದು ಲೆಕ್ಕಲ್ಲಿ ವಿರಾಗಿಯೇ.
ಪೇಂಟೂ ಇಲ್ಲೆ, ಸೆಂಟೂ ಇಲ್ಲೆ – ಟೀವಿಯೂ ಬೇಡ, ರಿಮೋಟೂ ಬೇಡ. ಬೈಕ್ಕು-ಕಾರು ಯೇವದೂ ಆಗ.
ಕಳುದ ತಿಂಗಳು ಅಡಕ್ಕೆ ಕೊಟ್ಟ ಮತ್ತೆ ಮನೆಯವರ, ನೆರೆಕರೆಯೋರ ಒತ್ತಾಯಕ್ಕೆ ಮೊಬೈಲು ತೆಗದ್ದೇ ವಿನಾ, ಸ್ವಂತಕ್ಕಾಗಿ ಎಂತದೂ ಹಂಬಲುಸಿದ್ದನಿಲ್ಲೆ.
ಒಳಾಣ ಅಡಿಗೆ ಒಯಿವಾಟಿಂದ ಹಿಡುದು, ಹಟ್ಟಿ – ತೋಟ ಎಲ್ಲವನ್ನುದೇ ನಿಭಾಯಿಸೆಂಡು ಹೋಪ ಶ್ರಮಜೀವಿ. ಪ್ರಾಯ ಏರ್ತಾ ಇದ್ದು; ಮದುವೆ ಆಯೇಕಾತು ಹೇಳ್ತದು ಹೆತ್ತೋರ ಒಂದೇ ಬೇಜಾರು.
~

ಆ ಕಾಲಲ್ಲಿ ಹೆಚ್ಚಿನವಕ್ಕೆ ಇದ್ದ ಹಾಂಗೆ, ಕಲಿವಿಕೆ ಸಮೆಯಲ್ಲಿ ತುಂಬ ಕಷ್ಟದ ದಿನಂಗೊ ಅಡ ಕುಂಞಣ್ಣಂಗೆ.
ಹಾಂಗಾಗಿ, ರೂಪತ್ತೆ ಮಗಂಗೆ ಈಗ ಸಿಕ್ಕಿದ ಹಾಂಗೆ ಅನುಕ್ಕೂಲಂಗೊ ಇದ್ದತ್ತಿಲ್ಲೆ!
ಕಲಿವಕಾಲಲ್ಲಿ ಉದಿಯಪ್ಪಗ ಎದ್ದು ಮನೆಕೆಲಸಂಗೊ ಮಾಡಿಕ್ಕಿ, ಉಂಡಿಕ್ಕಿಯೇ ಶಾಲಗೆ ಹೋಗಿಂಡಿದ್ದದು;
ಶಾಲೆಲಿ ಮಧ್ಯಾನಕ್ಕೆ ತಣ್ಣೀರು ಮಾಂತ್ರ; ಹೊತ್ತೋಪಗ ಮನಗೆ ಬಂದ ಮತ್ತೆ ಎಂತಾರು ಆಹಾರ.
ಮತ್ತೆ ಮನೆಕೆಲಸಂಗೊ; ಇರುಳಾಣ ಮೀಯಾಣ ಆಗಿ ಊಟ. ಚಿಮ್ಣಿದೀಪಲ್ಲಿ ಓದಿ ಬರದು ಮಾಡಿ ಒರಗುದು, ಮರದಿನ ಎದ್ದು ಪುನಾ ಶಾಲೆ.

ಇಷ್ಟೆಲ್ಲ ಹೇಳುದು ಕೇಳುವಗ ಸುಲಾಭ ಆವುತ್ತು. ಆದರೆ, ಅಂಬಗಾಣ ಸೌಕರ್ಯಂಗೊ?
ಈಗಂಗೆ ಹೋಲುಸಿರೆ ಎಂತದೂ ಇದ್ದತ್ತಿಲ್ಲೆ ಇದಾ! ಉದಿಯಪ್ಪಗ ಎದ್ದು ಕೆಲಸ ಕಾರ್ಯಂಗೊ ಮಾಡೇಕು.
ದನಗೊಕ್ಕೆ ಅಕ್ಕಚ್ಚು ಕೊಡ್ಸು, ಹಾಲು ಕರವದು ಇತ್ಯಾದಿಗೊ. ಯೇವದಕ್ಕೂ ಮಿಶನು ಇಲ್ಲೆ ಇದಾ; ಎಲ್ಲವುದೇ ದುಡಿಮೆಲೇ ಆಯೇಕು.
ಅಕ್ಕಚ್ಚು ಕೊಡೆಕ್ಕಾರೆ ನೀರು ಬೇಡದೋ – ಗುಂಡಿಬಾವಿಂದ ನೀರೆಳದು- ಹೊರೆಕ್ಕಷ್ಟೆ.
ಅಕ್ಕಚ್ಚು ಕೊಡ್ಳೆ ಎಷ್ಟು ನೀರು ಬೇಕಾವುತ್ತು? ಹೇಳುಲೆಡಿಯ; ಹಂಡೆ ತುಂಬುಸಿದ ಹಾಂಗಲ್ಲ, ಹೊಟ್ಟೆ ತುಂಬುಸುದು.

ಅದಾಗಿ ಮತ್ತೆ ಹಾಲು ಕರೆತ್ತದು. ಡೈರಿಗೆ ಹಾಕುತ್ತಷ್ಟು ಹಾಲು ಸಿಕ್ಕ, ಅದೆಲ್ಲ ಈಗಾಣ ಜರ್ಸಿ ದನಗೊಕ್ಕೆ.
ನಾಕು ಊರದನಗಳ ಕರದರೆ ಮನೆಕರ್ಚಿಂಗೆ ತಕ್ಕ ಸಿಕ್ಕುಗಷ್ಟೆ.

ಒಂದರಿಯಾಣ ಬಂಙದ ಕೆಲಸ ಆಗಿ ಮೀಯೇಕು.
ಮೀವಲುದೇ ಹಾಂಗೆ, ಈಗಾಣ ಹಾಂಗೆ ಗೇಸು ಗೀಸರು, ಕರೆಂಟಿನ ಸುಚ್ಚು ಇಲ್ಲೆ; ಸೌದಿ ಒಲಗೆ ಕಿಚ್ಚಾಕುದು.
ಮಳೆಗಾಲ ಚೆಂಡಿಕಾಯಿಸೊಪ್ಪೋ ಎಂತಾರು ಆದರೆ ಕಿಚ್ಚು ಹಿಡಿಶಲೆ ಪ್ರಾಣಕ್ಕೆ ಬತ್ತು.
ಅಂತೂ ಕಿಚ್ಚು ಹಿಡುದು ನಿಧಾನಕ್ಕೆ ಮೀತೆ ಹೇದರೆ ಶಾಲಗೆ ತಡವಾವುತ್ತು, ತಣ್ಣೀರಿಲೇ ಮೀಯಾಣ.

ಮಿಂದಿಕ್ಕಿ ಶುದ್ಧಲ್ಲಿ ಒಂದು ಕೊಡಪ್ಪಾನ ನೀರು ತರೆಕ್ಕು; ಪೂಜಗಿಪ್ಪದು.
ಅದಾಗಿ ಜೆಪ.
ಅಡಿಗೆಗುದೇ ಕೆಲವು ಸರ್ತಿ ನೀರು ತರೆಕ್ಕಾವುತ್ತು; ಒಳಾಣ ವೆವಸ್ತೆ ನಿಧಾನಲ್ಲಿದ್ದರೆ.
ಈಗಾಣ ಹಾಂಗೆ ಟೇಪುದೇ ಇಲ್ಲೆ, ಪಂಪುದೇ ಇಲ್ಲೆ.

ಇಷ್ಟೆಲ್ಲ ಆಗಿ, ಉದಿಯಪ್ಪಗಾಣ ಊಟ ಉಂಡಿಕ್ಕಿ ಶಾಲಗೆ ಹೋಪದೇ.
ಹೇಂಗೆ? ಈಗಾಣ ಹಾಂಗೆ ಬೈಕ್ಕಿಲಿ ಕೂದು ರೊಯ್ಯನೆ ಪೀಂಟುಲೆ ಅವಕಾಶ ಇದ್ದತ್ತಿಲ್ಲೆ.
ಹತ್ತಾರು ಮೈಲು ನೆಡಕ್ಕೊಂಡೇ ಹೋಪದು.

ಶಾಲೆಲಿ ಮಧ್ಯಾನ್ನ ಉಪವಾಸ. ಒಂದೊಂದು ದಿನ ಇದ್ದರೆ ಬುತ್ತಿ ಊಟ / ಪಲಾರ.
ಈಗಾಣ ಹಾಂಗೆ ಹೋಟ್ಳೂ ಇಲ್ಲೆ, ಎಡೆ ಹೊತ್ತಿಂಗೆ ಮುರ್ಕು ಕರುಕುರು ತಿಂಡಿಯೂ ಇಲ್ಲೆ.

ಹೊತ್ತಪ್ಪಗ ಶಾಲೆ ಬಿಟ್ಟು ಪುನಾ ನೆಡಕ್ಕೊಂಡೇ ಮನಗೆ ಬಪ್ಪದು. ಬಂದಿಕ್ಕಿ ಕೈಕ್ಕಾಲು ತೊಳದ ಮತ್ತೆಯೇ ಹೊಟ್ಟಗೇನಾರು ಸಿಕ್ಕುಗಷ್ಟೆ ಇದಾ.
ಮನೆಗೆ ಎತ್ತಿದ ಮತ್ತುದೇ ದೊಡ್ಡ ಪುರ್ಸೊತ್ತು ಹೇದು ಏನಿಲ್ಲೆ, ಈಗಾಣ ಹಾಂಗೆ ಮೋರೆಪುಟ, ಓರುಕುಟ್ಟುಸ್ಸು – ಎಂತದೂ ಇಲ್ಲೆ.
ನೀರೆಳವದು, ತೋಟಕ್ಕೆ ಹೋಪದು, ಇತ್ಯಾದಿ ಕೆಲಸಂಗೊ ಇದ್ದತ್ತು.
ಮೀಯಾಣ ಆಗಿ ಇರುಳಾಣ ಉಂಡಿಕ್ಕಿಯೇ ರಜ ಕಾಲುನೀಡ್ಳೆ ಪುರ್ಸೊತ್ತು.
ಓದಿ ಬರದು ಮಾಡಿಕ್ಕಿ ಒರಗುವಗ ಸರೀ ಆವುತ್ತು ಇದಾ.

~

ಅಂಬಗಾಣ ಜೀವನಕ್ಕೆ ಹೊಂದಿಗೊಂಡ ಕುಂಞಣ್ಣಂಗೆ ಈಗ ಹತ್ತಿಪ್ಪತ್ತು ಒರಿಶಲ್ಲಿ ಆದ ಬದಲಾವಣೆಗೊಕ್ಕೆ ಹೊಂದಿಗೊಂಬಲೆ ಪುರ್ಸೊತ್ತೇ ಸಿಕ್ಕಿದ್ದಿಲ್ಲೆ; ಈ ತೋಟದ ಕೆಲಸಂಗಳಲ್ಲಿ.
ಈಗಳೂ ಹಾಂಗೆ, ಎಡೆಹೊತ್ತಿಲಿ ಕಾಟಂಕೋಟಿ ತಿಂಬ ಕ್ರಮ ಇಲ್ಲೆ; ಹೆಜ್ಜೆ ಊಟವೇ ಹೆಚ್ಚು ಕೊಶಿ.
ಕರೆಂಟು ಲೈಟು ಸದ್ಯ ಅಭ್ಯಾಸ ಅಪ್ಪನ್ನಾರವೂ ಕೈಲಿ ಚಿಮುಣಿ ದೀಪ ಹಿಡ್ಕೊಂಡೇ ಓಡಾಟ.
~

ಕುಂಞಣ್ಣ ಸಣ್ಣ ಇಪ್ಪಾಗ ಎಲ್ರಾಮು ಮಡಗಲೆ ಎಂತದೂ ಇದ್ದತ್ತಿಲ್ಲೆ. ಅವಂಗೆ ಕೋಲೇಜು ಎತ್ತುವನ್ನಾರವೂ ಹಾಂಗೇ.
ಮತ್ತೆ ಆಚಮನೆ ದೊಡ್ಡಣ್ಣ ಒಂದು ಸಣ್ಣ ಮೇಜುಗಡಿಯಾರ “ಟೈಂಪೀಸು” ತಂದು ಕೊಟ್ಟನಡ. ಅಷ್ಟಪ್ಪಗ ಅದಾಗಲೇ ಕುಂಞಣ್ಣನ ಮನಸ್ಸು ಸ್ವಾಭಾವಿಕತೆಗೆ ಒಗ್ಗಿ ಹೋದ ಕಾರಣ ಆ ಗಡಿಯಾರ ದೊಡ್ಡ ಉಪಕಾರ ಆಯಿದಿಲ್ಲೇಡ.
ಆಗ ಕುಂಞಣ್ಣ ಎಲ್ರಾಮಿನ ಶುದ್ದಿ ಹೇಳುವಗ ಪುನಾ ನೆಂಪಾತು.

~
ನಮ್ಮ ದೇಹಕ್ಕಿಪ್ಪ ಜೈವಿಕ ಗಡಿಯಾರವ ಸಂಪೂರ್ಣವಾಗಿ ನಾವು ಹಾಳು ಮಾಡಿಗೊಂಡಿದು.
ನೆಡು ಇರುಳು ಒರೆಂಗೆ ಟೀವಿನೋಡಿ ಮನುಗಿದ್ದರ್ಲಿ, ಐದು ಗಂಟೆ ಆದರೂ ಗೊಂತಾಗ, ಹತ್ತು ಗಂಟೆ ಆದ್ದದೂ ಗೊಂತಾಗ.
ಮತ್ತೆ ಏಳುಲೆ ಕೃತಕ ಗಡಿಯಾರವೇ ಬೇಕು, ಅಲ್ದೋ?
ಹಾಂಗೆ ನೋಡಿರೆ, ಈಗಾಣ ಆಧುನಿಕ ಸಲಕರಣೆಗೊ ಬಂದ ಮತ್ತೆ ನಾವು ಎಷ್ಟು ಸೋಮಾರಿ ಆಯಿದು; ಅಲ್ದೋ?

ಕರೆಂಟು ಲೈಟು ಬಂದ ಮೇಗೆ ಇರುಳು ಮನುಷ್ಯರಿಂಗೆ ಕಾಂಬ ಶೆಗ್ತಿಯೂ ಕಮ್ಮಿ ಆಯಿದು – ಹೇಳ್ತದು ಆಚಮನೆ ದೊಡ್ಡಪ್ಪನ ಅಭಿಪ್ರಾಯ. ಮದಲಿಂಗೆ ಒಂದು ಸೂಟೆ ಇದ್ದರೆ ಯೇವ ಕಾರ್ಗಾಣ ಕಸ್ತಲೆಯ ಕಾಡು ದಾರಿ ಆದರೂ ನೆಡಕ್ಕೊಂಡು ಹೋಪಲೆ ಎಡಿಗಾಗಿಂಡಿದ್ದತ್ತು. ಈಗ ರೂಪತ್ತೆಗೆ ಕಾರಿಲಿ ಹಾಲೋಜೆನು ಬಲ್ಬು ಮಡಗಿರೂ ಸಾಲದ್ದೆ ಡಿಮ್ಮು ಇಪ್ಪದರ ಡಿಪ್ಪು ಮಾಡೇಕಾವುತ್ತಡ ಕೆಲವು ದಿಕ್ಕೆ!

ರೂಪತ್ತೆ ಮನೆಲಿ ಮಿಕ್ಸಿ ಇದ್ದು, ಎಲಿ ಉಪದ್ರದ ಸಮೆಯಲ್ಲೇ ಎಲ್ಲೋರಿಂಗೂ ಗೊಂತಾಯಿದು. ಅಲ್ದೋ?
ಆ ಸಾಮಾನು ಎಂತೆಲ್ಲ ಕೆಲಸ ಮಾಡ್ತು? ಅದರ್ಲಿ ಹೊಡಿ ಮಾಡ್ಲೆ ಎಡಿತ್ತು, ಕಡವಲೆ ಎಡಿತ್ತು, ಮೊಸರು ಕಡವಲೆಡಿತ್ತು, ಕಷಾಯದ ಹೊಡಿ ಮಾಡ್ಳೆಡಿತ್ತು, ಜ್ಯೂಸು ಮಾಡ್ಳೆಡಿತ್ತು – ಒಂದರಿ ಕರೆಂಟಿನ ಪ್ಲಗ್ಗು ಸಿಕ್ಕುಸಿ ಸುಚ್ಚು ಒತ್ತಿರೆ ಎಲ್ಲಾ ಕೆಲಸವನ್ನೂ ಮಾಡ್ತು ಅದು.
ಆದರೆ, ಮದಲಿಂಗೆ? ಕಡವಕಲ್ಲು, ಒನಕ್ಕೆ, ಬೀಸುವ ಕಲ್ಲು, ಕೊದಂಟಿ – ಎಲ್ಲವುದೇ ಇದ್ದತ್ತು. ಅದರ್ಲಿ ಕೆಲಸ ಮಾಡುವಗ ಮನುಷ್ಯರ ವ್ಯಾಯಾಮ ಆಗಿ ಆರೋಗ್ಯವೂ ಚೆಂದಲ್ಲಿ ಇದ್ದತ್ತು.

ಮತ್ತೊಂದು ಗೇಸಿನ ಒಲೆ.
ಒಂದು ಕಿಟಿಕ್ಕನೆ ಮಾಡಿದ್ದರ್ಲಿ ಕಿಚ್ಚು ಆತು. ಒಲೆ ಮೇಗೆ ಕುಕ್ಕರು ಮಡಗಿರೆ ಯೇವ ಬೇಯದ್ದ ಅಕ್ಕಿಯುದೇ ಅರ್ದ ಗಂಟೆಲಿ ಬೆಂದು ನೀರಾವುತ್ತು. ಮದಲಿಂಗೆ ಪಾಪ – ಒಲೆಲಿ ನೀರು ಮಡಗಿ, ಅದರ ಕೊದಿಶಿ, ಮತ್ತೆ ಅಕ್ಕಿ ಹಾಕಿ, ಅದು ಬೇವನ್ನಾರ ಕಿಚ್ಚು ನೋಡಿಂಡು, ನೀರು ಕಮ್ಮಿ ಆದರೆ ಎರಕ್ಕೊಂಡು.
ಸೌದಿ ಒಲಗೆ ಸೌದಿಯೂ ತೆಯಾರಾಯೇಕು; ಹೆಜ್ಜೆಗೆ ಎಸರು ಮಡಗಲೆ ನೀರುದೇ ಆಯೇಕು.
ಎಷ್ಟು ಬಂಙ! ಅಪ್ಪೋ!?

~
ಮೊದಲೆಲ್ಲ ವಾಹನಂಗೊ ಕಮ್ಮಿ. ಹೋಪಲಿದ್ದರೆ ಹೆಚ್ಚಿನ ದೂರವೂ ನೆಡಕ್ಕೊಂಡೇ ಹೋವುತ್ತದು. ಅಪುರೂಪಕ್ಕೆ, ದೂರಕ್ಕೆ ಹೋವುತ್ತರೆ ಮಾಂತ್ರ ಮೋಟ್ರು (ಬಸ್ಸು) ಇದ್ದತ್ತು ಅಷ್ಟೆ. ಈಗ ಊರೊಳದಿಕ್ಕೆ, ಬಿಡಿ ಬೈಲಿನ ಒಳದಿಕ್ಕೆಯೇ ಹೋವುತ್ತರೂ – ಬೈಕ್ಕು ಬೇಕು ಅಪ್ಪೊ!
ಮದಲಿಂಗೆ ಸಿಕ್ಕಿಂಡಿದ್ದ ವ್ಯಾಯಾಮಂಗೊ ಈಗ ಕಮ್ಮಿ ಕಮ್ಮಿಯೇ ಆಯಿದು.

~

ಈಗಾಣ ಕಾಲದ ಮತ್ತೊಂದು ಸವುಕರ್ಯ ಮೊಬೈಲು. ಎಲ್ಲದಕ್ಕೂ ಅದುವೇ.
ಪೋನು ಮಾಡ್ಳೆ ಹೇಂಗೂ ಬೇಕೇ, ಅದಲ್ಲದ್ದೆ – ಎಂತದನ್ನೂ ನೆಂಪು ಮಡಿಕ್ಕೊಂಬಲೆ ಮನಸ್ಸಿನ ಅವಲಂಬನೆ ಇಲ್ಲೆ, ಮೊಬಯಿಲಿಲಿ ಬರಕ್ಕೊಂಡತ್ತು.
ಮದಲೆಲ್ಲ ನೆಂಟ್ರುಗೊಕ್ಕೆ ಕಾಗತ ಬರಕ್ಕೊಂಡಿಪ್ಪಗ ಎಲ್ಲೊರ ಎಡ್ರಾಸುದೇ ಅರಡಿಗೊಂಡಿದ್ದತ್ತು. ಈಗ ಎಡ್ರಾಸು ಬಿಡಿ ಪೋನ್ನಂಬ್ರವುದೇ ಗೊಂತಿರ್ತಿಲ್ಲೆ. ಮೊಬೈಲು ಕೋಂಟೇಕ್ಟಿಸಿಲಿ ನೋಡಿಯೇ ಆಯೆಕಟ್ಟೆ.
ಎರಡೆರಡ್ಳಿ ಎಷ್ಟು – ಕೇಳಿರೂ ಮೊಬೈಲಿಲಿ ಲೆಕ್ಕಾಚಾರ ಹಾಕಿಯೇ ಹೇಳುಸ್ಸು.
ಅಂಬಗ, ಮನಸ್ಸಿಂಗೂ ಅಪ್ಪ ರಜ ವ್ಯಾಯಾಮ ಇಲ್ಲದ್ದೆ ಆತಿದಾ.
~

ಆಚಮನೆ ಕುಂಞಣ್ಣನ ಕ್ಲಾಸಿಲಿ ಇದ್ದಿದ್ದ ಶಂಕ್ರಣ್ಣ ಈಗ ಕೊಡೆಯಾಲಲ್ಲಿ ಇಪ್ಪದು. ಬೇಂಕಿಲಿ.
ಮೊನ್ನೆ ಊರಿಂಗೆ ಬಂದಿಪ್ಪಾಗ ಹೀಂಗೇ ಮಾತಾಡುವಗ ಸುದ್ದಿ ಬಂತಾಡ – ಶಂಕರಣ್ಣಂಗೆ ರಜಾ ಷುಗರುದೇ, ರಜಾ ಬೀಪಿಯುದೇ ಇದ್ದಾಡ. ಸಣ್ಣ ಇಪ್ಪಗಂದಲೇ ಆರಾಮಲ್ಲಿ ಬೆಳದು, ಮತ್ತುದೇ ಸೌಕರ್ಯದ ಪೇಟೆಬಿಡಾರಲ್ಲಿ ಇದ್ದುಗೊಂಡು, ಬೇಂಕು ಇತ್ಯಾದಿಗಳ ಪುರ್ಸೋತಿನ ಕೆಲಸ ಮಾಡುವಗ, ವ್ಯಾಯಾಮಂಗೊ ಕಾಂಬಲೇ ಇಲ್ಲೆ.
ಹಾಂಗೆ, ರಜ ತೋರವುದೇ ಬೆಳದು, ತಿಗಲೆ ಬೇನೆಯೂ ಎಳಗಿ ಮೊನ್ನೆ ಟೆಷ್ಟು ಮಾಡುವಗ ಈ ಸಂಗತಿಗೊ ಗೊಂತಾಯಿದಾಡ.

ಆಚಮನೆ ಕುಂಞಣ್ಣನ ಹಾಂಗೆ ನೈಸರ್ಗಿಕ ಜೀವನ ಅಳವಡುಸೆಂಡರೆ ಎಷ್ಟು ಸುಸ್ಥಿರ ಜೀವನ, ಅಪ್ಪೋ!
ಅಭಾವಲ್ಲಿ ಸುರುವಾದ ಕಷ್ಟದ ಜೀವನ ಈಗ ಸೌಕರ್ಯಂಗೊ ಆದ ಮತ್ತುದೇ ಮುಂದುವರುಸಿದ ಕುಂಞಣ್ಣ ನಮ್ಮೆಲ್ಲರಿಂದ ಆರೋಗ್ಯಲ್ಲಿ ಇಪ್ಪದು ಕಂಡ್ರೆ ಕೊಶೀ ಆವುತ್ತು. ನಾವುದೇ, ಅಪುರೂಪಕ್ಕಾದರೂ ಇಪ್ಪ ಸೌಕರ್ಯಂಗಳ ಒಂದೊಂದರಿ ಆದರೂ ಬಿಟ್ಟು, ನೈಸರ್ಗಿಕವಾಗಿಪ್ಪಲೆ ಪ್ರಯತ್ನಪಟ್ರೆ ಹೇಂಗೆ? ಅಪುರೂಪಕ್ಕೊಂದರಿ ಆದರೂ – ದೇಹ, ಮನಸ್ಸಿಂಗೆ ವ್ಯಾಯಾಮ ಸಿಕ್ಕಲಿ.

ಎಂತ ಹೇಳ್ತಿ?
~

ಎಷ್ಟೇ ಆಲೋಚನೆ ಮಾಡಿ ಒರಗಿರೂ, ಒರಕ್ಕು ತಡವಾತಷ್ಟೇ ವಿನಃ, ಬೈಲಕರೆ ಮದುವೆಗೆ ಬೇಗ ಏಳುಲೆ ಎಲ್ರಾಮೇ ಬೇಕಾಯಿದು ಒಪ್ಪಣ್ಣಂಗೆ. ಪೋ!

ಒಂದೊಪ್ಪ: ಉದಾಸಿನ ಬಿಟ್ರೇ ಸೌಕರ್ಯ ಹೆಚ್ಚಕ್ಕಷ್ಟೆ. ಅಲ್ಲದೋ?

14 thoughts on “ಸೌಕರ್ಯ ಹೆಚ್ಚಾದ ಹಾಂಗೆ ಉದಾಸಿನವೂ ಹೆಚ್ಚಾವುತ್ತೋ..!

  1. ಸೌಕರ್ಯಾ…!! ಎಷ್ಟು ಇದ್ದರೂ ಸಾಲ ಹೇಳಿ ಕಾನ್ತು ಅಪ್ಪೋ??… ಮತ್ತೆ ಈಗ ಎಲ್ಲ ಸೌಕರ್ಯಾ ಇಪ್ಪವ್ವೇ… !!?
    ಒ೦ದು ಊರಿ೦ಗೆ ಹೋಯೆಕಾರೆ ನೆಡಕ್ಕೊ೦ಡು ಹೋಪ ಕಾಲ ಇದ್ದತ್ತು, ಇ೦ದು A.C ಸ್ಲೀಪರೇ ಆಯೆಕಡ ನಮ್ಮ ಓ ಆಚಕರೆ ಮಾಲಿ೦ಗ ಭಟ್ರಿ೦ಗೆ…
    ಓ ಈಚಕರೆ, ಅಮೇರಿಕ ರಿಟರ್ನುಡು ಮಾವ೦ಗೆ ಊರಿಲ್ಲಿ AC ಇಲ್ಲದ್ದೆ ಆಗ..!! ಮದಲಿ೦ಗೆ ಫೇನು ಸಾಕಿತ್ತು…?!! ಸಣ್ಣದಿಪ್ಪಗ ಬೀಸಣಿಗೆ ಅಲ್ಲದ್ರೆ ಅದೂ ಬೇಡ ಇತ್ತು..
    ಹತ್ತು ರೂಪಯಿ ಸಾಮಾನು ಬೇಕಾರೆ ಜೀಪಿ೦ಗೆ ಇಪ್ಪತ್ತು ರೂಪಾಯಿ ಡೀಸಲು ಹಾಗಿ ಪೇಟೆ೦ದಲೇ ತರೆ ಕಷ್ಟೆ….. !!
    ತರಕಾರಿ ಮನೆಲಿ ಬೆಳದು ಗೊ೦ತಿಲ್ಲೆ.. ಸ೦ತೆ೦ದ, ಅಲ್ಲದ್ರೆ ಮೋನಪ್ಪನ ಅ೦ಗಡಿ೦ದ ತ೦ದು ಗೊ೦ತ್ತು…
    ಈ ಪೇಟೆ ಮಕ್ಕೊಗೆ ಕೈ-ಕಾಲು ಮಣ್ಣು ಅಪ್ಪಲೆಡಿಯ??, ಆದರೆ ಕೂಡ್ಲೆ dettol , Lifebuoy ಸೋಪಿಲ್ಲಿ ತೊಳದಾತು,…. ಹೀ೦ಗಿಪ್ಪಗ ಮು೦ದೆ ಮಕ್ಕೊ ಮಣ್ಣು ಕಾ೦ಬಲೆ ಇದ್ದೋ.. ಎಪಾರ್ಟ್ ಮೆಣ್ಟಿನ ನಾಲ್ಕು ಗೋಡೆಯಳ ಬಾಕಿ.. 🙁 ಎ೦ತಾ?? ಎಲ್ಲದಕ್ಕೂ ಸೌಕರ್ಯಾ.. ಮೆಟ್ಲು ಹತ್ತೆಡಾ.. ಲೆಪ್ಟು ಇದ್ದು ಭಾವ… 😉 ಒತ್ತಿರೆ ಆತು ಮೇಲೆ ಹೋವುತ್ತು…!! 🙁

    ಹಾಲುಕರವದು ಇರಲಿ, ದನಕ್ಕೆ ಹುಲ್ಲುಹಾಕಲೂ ಅರಡ್ಯ..!! ಬರೀ ನ೦ದಿನಿಯೋ – ಮಿಲ್ಮವೋ ಪೇಕೇಟು ಎರಷಿ ಗೊ೦ತು .. 😉
    ಇ೦ದ್ರಾಣ ಪುಳ್ಳರುಗೋಕ್ಕೆ ಎರಡು ಮೈಲಿ ಹೋಯೆಕಾರೆ ಬೈಕು ಬೇಕು…!! ಅಲ್ಲದ್ರೆ ರಿಕ್ಷಮಾಡುವೊ ಭಾವ ಹೇಳುಗು.. 🙁
    ಶಾಲೆಗೆ ಮಕ್ಕೊಗೆ ನೆಡದು ಗೊ೦ತಿಲ್ಲೆ.. ಒ೦ದೋ ಕಾರಿಲ್ಲಿ ಬಿಡೆಕು, ಅಲ್ಲದ್ರೆ ಬಸ್ಸು ಬರೆಕು.. ಮತ್ತೆ೦ತ ಮಾಡೆಕು ಸೌಕರ್ಯಾ ಇದ್ದನ್ನೇ..!!

    ಇದರೆಲ್ಲದರ ಪರಿಣಾಮ ನಮ್ಮ ಆರೋಗ್ಯಕ್ಕೆ ಅಲ್ಲದೋ ಒಪ್ಪಣ್ಣ??

  2. ತುಂಬಾ ಚೆಂದದ ಸುದ್ದಿ ಒಪ್ಪಣ್ಣ!

    ಬೌದ್ಧಿಕ ಶ್ರಮಕ್ಕೆ ಅವಕಾಶ ಇಲ್ಲದ್ದ ಹಾಂಗೆ ಮಾಡುವ ಶಾರೀರಿಕ ಶ್ರಮಂಗಳ ಕಮ್ಮಿ ಮಾಡ್ಳೆ ಸೌಕರ್ಯಂಗಳ ಆವಶ್ಯಕತೆ ಇದ್ದು.
    ನಿತ್ಯ ಜೀವನ ಶಾರೀರಿಕಶ್ರಮಂಗಳಲ್ಲೇ ಕಳದು ಹೋದರೆ ಬೌದ್ಧಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವಿಕೆ ಇಲ್ಲದ್ದೆ ಆಗಿ ಹೋವುತ್ತು. ಆರೋಗ್ಯಕ್ಕೆ ಪೂರಕವಾದ ಶಾರೀರಿಕ ಶ್ರಮ ಮಾಂತ್ರ ಇರೆಕು. ಹಾಂಗೆಯೇ ಕ್ರಿಯಾಶೀಲತೆಯ ನಾಶ ಮಾಡುವ ಸೌಕರ್ಯವೂ ಇಪ್ಪಲಾಗ.

  3. “ಆರಾಮ್ ಹರಾಮ್ ಹೈ” ಹೇಳುವ ಮಾತು ನಿಜವಾಗಿಯು ಅಪ್ಪು. ಹೊಸ ಹೊಸ ಆವಿಷ್ಕಾರಂಗೊ ಆಗಿ ಸೌಕರ್ಯಂಗೊ ಹೆಚ್ಚು ಆವ್ತಾ ಇದ್ದ ಹಾಂಗೆ, ಮನುಷ್ಯನ ಸೋಮಾರಿತನ ಹೆಚ್ಚು ಆಯಿದು. ಒಪ್ಪಣ್ಣನ ಲೇಖನ ಎಲ್ಲೋರ ಕಣ್ಣು ತೆರಶುತ್ತ್ತ ಹಾಂಗಿದ್ದು.
    ಪೇಟೆಯ ಜೀವನ ಹೇಳಿರೆ ಎಲ್ಲಾ ಸೌಕರ್ಯಂಗ ಇಪ್ಪ ಜೀವನ ಹೇಳ್ತ ನೆಲೆಲಿ ಈಗಾಣ ಮಕ್ಕೊಗೆ ಹಳ್ಳಿಂದ ಪೇಟೆಯೇ ಇಷ್ಟ ಆವ್ತಾ ಇದ್ದು. ವಾರಕ್ಕೆ ಒಂದು ದಿನ ಆದರುದೆ ಹೀಂಗಿಪ್ಪ ಸೌಕರ್ಯದ ಸಲಕರಣೆಗಳ ಉಪಯೋಗಿಸದ್ದೆ, “e-ಉಪವಾಸ” ಹೇಳಿ ಮಾಡಿರೆ ನಮ್ಮ ಆರೋಗ್ಯಲ್ಲಿ ರಜಾ ಗುಣ ಸಿಕ್ಕುಗು ಹೇಳಿ ಎನ್ನ ಭಾವನೆ.

  4. ಪೇಟೆಲಿ ಧಾವಂತದ ಜೀವನ. ಯಾವುದಕ್ಕೂ ಪುರುಸೊತ್ತು ಇಲ್ಲೆ. ಸೌಕರ್ಯ ಮಾಡಿಂಡು ಹೋದ ಹಾಂಗೆ ಬಾಕಿಪ್ಪ ಕೆಲಸಕ್ಕೆ ಸಮಯ ಸಿಕ್ಕುತ್ತು ಹೇಳ್ತ ಯೋಚನೆ ಒಂದು. ಇದರಿಂದಾಗಿ ಇಂದು ಬದುಕು ಯಾಂತ್ರಿಕ ಆಯಿದು.ಶರೀರಕ್ಕೆ ವ್ಯಾಯಾಮ ಇಲ್ಲೆ. ಅದರಿಂದಾಗಿ ಬಪ್ಪ ತೊಂದರೆಗೊ ಹಲವಾರು.
    ಹಳ್ಳಿಯ ಎಷ್ಟೋ ಕೆಲಸಂಗಳ ಬಗ್ಗೆ ಪೇಟೆ ಮಕ್ಕೊಗೆ ಅಂದಾಜಿಯೇ ಆಗ (ಕಲ್ಲಿಲ್ಲಿ ಕಡವದು, ವಸ್ತ್ರ ಒಗವದು, ಹಾಲು ಕರವದು, ದನಗಳ ಚಾಕ್ರಿ, ನೀರು ಎತ್ತುವದು, ನೆಲಕ್ಕಲ್ಲಿ ಕೂದೊಂಡು ಉಂಬದು ಇತ್ಯಾದಿ). ಹೀಂಗೆ ಮುಂದೆ ಹೋದರೆ ಒಂದು ದಿನ ಇದರೆಲ್ಲಾ ಪಟಂಗಳಲ್ಲಿ ತೋರುಸೆಕ್ಕಕ್ಕು.
    ಸೌಕರ್ಯ ಬೇಕು. ಅದರ ಸರಿಯಾಗಿ ಉಪಯೋಗುಸುವ, ಸಮತೋಲನಲ್ಲಿ ಜೀವನ ನೆಡೆಶುವ ಬುದ್ಧಿವಂತಿಕೆಯೂ ಬೇಕು.

  5. ಜೀವನಕ್ರಮ ಅ೦ದು-ಇ೦ದಿನ ನೆಡುಕೆ ಎಷ್ಟು ಬದಲಾಯಿದು! ಅ೦ದು ಕಷ್ಟ ಇತ್ತು ಆದರೆ ನೆಮ್ಮದಿಯೂ ಇತ್ತು.ಇ೦ದು ಸೌಕರ್ಯ ಇದ್ದು,ಮನುಷ್ಯತ್ವ ಮಾಯ !
    ಸೌಕರ್ಯ ಮತ್ತೆ ಐಷಾರಾಮ (comfort & luxury) ಯ ನೆಡುಗಾಣ ಗೆರೆ, ನಮ್ಮ ಜೀವನದ ದಾರಿಲಿ ಬದಲಾವುತ್ತಾ ಇಪ್ಪದು ಸಹಜ.ಪರಿವರ್ತನೆ ಜೀವನದ ನಿಯಮ ಅಪ್ಪಲ್ಲದೋ?ಆದರೆ ನೆಡದು ಬ೦ದ ದಾರಿಯ ನೆನಪ್ಪು ಮಡಿಕ್ಕೊ೦ಡು ಮು೦ದೆ ಹೋದರೆ ತಿರುಗಿ ಬಪ್ಪಲೆ ಸುಲಾಭ.
    ಶುದ್ದಿ ಕೊಶಿ ಕೊಟ್ಟತ್ತು ಒಪ್ಪಣ್ಣಾ.

  6. ನಿಜ ಸಂಗತಿ ….. ಇದಾ ಈಗ ಮಳೆ ಜೋರು ಬಪ್ಪಲೆ ಶುರುಆಗಲಿ … ಗಾಳಿ ಮಳೆಗೆ ಮರಬಿದ್ದು ಕರೆಂಟು ಕೈ ಕೊಟ್ಟಪ್ಪಗ ರಜ್ಜ ಅನುಬವಕ್ಕೆ ಬತ್ತದ ……… ಮತ್ತೆ ಪುನಾ ನಾವಗೆ ನೆಂಪಪ್ಪದು ಬೇಸಗೆಲಿ ಕರೆಂಟು ತೆಗೆತ್ತವದ ಆಗಲೇ ……

  7. ಪಷ್ಟಾಯ್ದು ಒಪ್ಪಣ್ಣ..
    ಸೌಕರ್ಯಂಗ ಜಾಸ್ತಿ ಆದಶ್ಟು ಸಹಜತೆ ಕಡಮ್ಮೆ ಆವ್ತಾ ಹೋವ್ತು..
    (ಸೌಕರ್ಯಂಗಳ ಸರಿಯಾಗಿ ಉಪಯೋಗುಸಿಯೊಂಡವ° ಜಾಣ)
    @ ಮಂಗ್ಳೂರ ಮಾಣಿ
    ಇದು ಅಪ್ಪಾದ ಮಾತು…. ಒಂದೊಪ್ಪ.. ಃ)

  8. ಒಪ್ಪಣ್ಣಾ..
    ಬರದ್ದು ಲಾಯ್ಕಾಯಿದು.
    ಸೌಕರ್ಯ ಹೆಚ್ಚು ಆದ ಹಾಂಗೆ ಶಕ್ತಿ ಕಮ್ಮಿ ಅಪ್ಪದೂ ಅಪ್ಪು,
    ಶಕ್ತಿ ಕಮ್ಮಿ ಆವ್ತಾ ಇದ್ದ ಹಾಂಗೇ ನಾವು ಸೌಕರ್ಯಂಗಳ ಹೆಚ್ಚು ಹೆಚ್ಚು ಮಾಡುಡೂ ಅಪ್ಪು..
    ನಮ್ಮ ಬೈಲೂ ಈ ‘ಸೌಕರ್ಯ’ದ ಕೊಡುಗೆಯೇ ಅಲ್ಲದೋ?
    ಈಗ ನೋಡು – ಮನಸ್ಸು ಮಾಡಿರೆ ನಾವು ಸೆಕುಂಡಿಲ್ಲಿ ಮಾತಾಡ್ಲೆ ಆವ್ತಿದಾ?
    ಘಂಟೆಗಳಲ್ಲಿ ಸಿಕ್ಕುದೇ… 🙂
    ಸೌಕರ್ಯಂಗಳ ಸರಿಯಾಗಿ ಉಪಯೋಗುಸಿಯೊಂಡವ° ಜಾಣ 🙂

  9. ಬಹಳ ಒಳ್ಳೇದಾಯಿದು ಒಪ್ಪಣ್ಣಾ.. ಒಪ್ಪ೦ಗೊ.
    ಎನ್ನದೇ ಜೀವನದ ಹಳೇ ದಿನ೦ಗೊ ನೆ೦ಪಾತು. ಈಗಳುದೆ, ಎಷ್ಟು ತಡವಾಗಿ ಮಲುಗಿದರುದೆ, ಯೇವತ್ರಾಣ ಹೊತ್ತಿ೦ಗೆ ಉದಿಯಪ್ಪಗ ತನ್ನಷ್ಟಕ್ಕೆ ಎಚ್ಚರಿಕೆ ಆವ್ತು. ನಾವು ಮನಸ್ಸಿಲ್ಲಿ ನಾಳ೦ಗೆ ಇ೦ತಿಷ್ಟು ಗ೦ಟೆಗೆ ಏಳೆಕು ಹೇಳಿ ಗಟ್ಟಿ ಜಾನ್ಸಿ೦ಡು ಮಲುಗಿರೆ ಆ ಹೊತ್ತಿ೦ಗೆ ತನ್ನಷ್ಟಕ್ಕೆ ಎಚ್ಚರಿಕೆ ಆವ್ತು. ಆನು ಪ್ರಯತ್ನಿಸಿ ನೋಡಿದ್ದೆ, ಯಶಸ್ವಿಯೂ ಆಯಿದೆ. ರಜಾದಿನ೦ಗಳಲ್ಲಿ ಬೇಕಾರೆ ನಿ೦ಗಳೂ ಪ್ರಯತ್ನಿಸಿ ನೋಡಿ. ಯಶಸ್ವಿ ಆವ್ತರೆ ರಜೆ ಅಲ್ಲದ್ದ ದಿನ೦ಗಳಲ್ಲಿಯೂ ಪ್ರಯೋಗಿಸಲಕ್ಕಲ್ಲದಾ..

  10. ಈಗ ನಾವು ಅಗತ್ಯ ಇಪ್ಪಲ್ಲಿ ಸೌಕರ್ಯಂಗಳ ಬಳಸಿಗೊಂಡು ‘ದೊಡ್ಡಸ್ತಿಕೆ’ ತೋರುಸದ್ದೆ ಸಮಯ,ಅವಕಾಶ ಇಪ್ಪಗ ಶ್ರಮ ಜೀವನವನ್ನೂ ಜೊತೆ ಜೊತೆಗೆ ಕೊಂಡು ಹೋದರೆ ಎಲ್ಲವೂ ಸಾರ್ಥಕ ಅಕ್ಕು. ಎಲ್ಲರ ಆರೋಗ್ಯವೂ ಒಳಿಗು.

    ಎಂಗಳ ಊರಿಲ್ಲಿ day and night busy ಇಪ್ಪ ಒಬ್ಬ ಡಾಕ್ಟ್ರ ಇದ್ದ. ಅವನ ಮನೆಗೆ ಹೋದರೆ ಕೆಲವು ಸರ್ತಿ ಲುಂಗಿ ವೇಷಲ್ಲಿ ತೋಟಲ್ಲಿ ಆಡಕ್ಕೆ ಹೆರುಕ್ಕುದು ಕಾಮ್ಬಲೆ ಸಿಕ್ಕುತ್ತಡ.

    ಪೇಟೆಲ್ಲಿ ಇಪ್ಪ ಮಕ್ಕೋ ತೋಟಲ್ಲಿ ಸಮಯ ಕಳವದರ ತುಂಬಾ ಇಷ್ಟ ಪಡುತ್ತವು. ನಮಗೆ ಸೌಕರ್ಯ ಇದ್ದರೆ ‘ಓದು ಓದು’ ಹೇಳಿ ಮಕ್ಕಳ ಮೇಲೆ ಒತ್ತಡ ಹೇರುವ ಬದಲು ಹೀಂಗಿದ್ದದರಲ್ಲಿ ತೊಡಗಿಸಿದರೆ ಅವಕ್ಕೂ ಖುಷಿ ಆವುತ್ತು. ಆಟದ ಜೊತೆ ‘ಜೀವನ ಪಾಠ’ ಆವುತ್ತು.

    ಪೇಟೆಲ್ಲಿ ಇಪ್ಪವಕ್ಕೆ ಸೌಕರ್ಯ ಇದ್ದು. ಆದರೆ ಉದಾಸೀನ ಹೆಚ್ಚು ಇಪ್ಪದರಿಂದ ಅರೋಗ್ಯ ಸಮಸ್ಯೆ ಬತ್ತು ಮತ್ತು ಅದಕ್ಕೆ ಬೇಕಾಗಿ ಕೃತಕ ವ್ಯಾಯಾಮ ಪದ್ದತಿಗಳ ಅನುಸರಿಸೆಕ್ಕಾವುತ್ತು. ಹಳ್ಳಿಲಿ ಇಪ್ಪವು ಸೌಕರ್ಯಂಗಳ ಅಳವಡಿಸಿಗೊಮ್ಬಲೇ ಸಾಧ್ಯ ಆಗದ್ದರೆ ಅವಕ್ಕೆ ಶ್ರಮ ಜಾಸ್ತಿ ಆವುತ್ತು. ಹಾಂಗಾಗಿ ಪೇಟೆ,ಹಳ್ಳಿಗಳ ಸಮನ್ವಯತೆ ಆದರೆ ಎಲ್ಲರಿಂಗೂ ಸೌಕರ್ಯವೂ,ಆರೋಗ್ಯವೂ ಸಿಕ್ಕುಗು. ಎಲ್ಲದಕ್ಕೂ ಪ್ರೀತಿ ಬೇಕು.

  11. ಈಗಾಣ ಕಾಲದ ವಿಕೃತಿಗಳ ಬಿಂಬಿಸುವ ಲೇಖನ.ಮಸಕ್ಕೊಂಡಿದ್ದರೆ / ಉಪಯೋಗಿಸಿಂಡಿದ್ದರೆ ಮಾತ್ರ ಚೂರಿ ಹರಿತ ಇರುತ್ತು.ನಮ್ಮ ಮನಸ್ಸಿನ ನಾವು ಉಪಯೋಗಿಸಿದರೆ ಅದರ ಶಕ್ತಿಯೂ ಹೆಚ್ಚಾವುತ್ತು.
    ಇದರಲ್ಲಿ ಇನ್ನೊಂದು ವಾದವೂ ಇದ್ದು-ಸೌಕರ್ಯಂಗೊ ಒಂದೊಂದಾಗಿ ಬಂದದು.ಕಾಲಿಲಿ ಅಡಕ್ಕೆ ಹರಗುದು ಇತ್ತು-ಆ ಮೇಲೆ ನೆಲ್ಲಿಕ್ಕೋರಿ ಉಪಯೋಗಿಸಿದವು.ನಡಕ್ಕೊಂಡೇ ಹೋವುತ್ತವರು ಆ ಮೇಲೆ ಗಾಡಿ ಉಪಯೋಗಿಸಿದವು,ಮತ್ತೆ ಉಗಿಬಂಡಿ ಬಂತು,ಮತ್ತೆ ಮೋಟಾರು ಕಾರು,ಬಸ್ಸು -ಹೀಂಗೆ.ಇದರಿಂದ ತುಂಬಾ ಉಪಕಾರ ಆಯಿದು.ಆದರೂ ನಮ್ಮ ಆಂತರಿಕ ,ದೈಹಿಕ ಬಲ ಕಮ್ಮಿ ಆವುತ್ತು,ಇದೊಂದು ಸೈಡ್ ಇಫೆಕ್ಟ್[ಅಡ್ಡ ಪರಿಣಾಮ].
    ಬಹಳ ಉತ್ತಮ ಲೇಖನ.

  12. ಈ ಸರ್ತಿಯಾಣ ಒಪ್ಪಣ್ಣನ ಸುದ್ದಿ ಲಾಯಕ್ಕು ಇದ್ದು.ಈಗಾಣ ಮಕ್ಕೋಗೆ ಎಸ್ಟು ಸೌಕರ್ಯ ಸಿಕ್ಕಿರೂ ಸಾಲ.ಮೊನ್ನೆ ಆಚಮನೆ ರವಿ ಹೊಟ್ಟೆ ಬೇನೆಲಿ ಪೆಡಚಿಗೋಂಡಿತ್ತಿದ್ದ. ಎಂತ ಕೇಳಿರೆ ಆನು ಎಂತ ತಿಂದಿದಿಲ್ಲೆ. ನಾಲ್ಕು ಪೇಕೇಟು ಲೇಸು ತಿಂದಿದೆ ಅಸ್ಟೆ ಹೇಳಿದ; ನಮ್ಮ ಕಾಲಲ್ಲಿ ಶಾಲೆ ಮಕ್ಕೋಗೆ ಐದು ಪೈಸೆ ಕೂಡ ಕೈಗೆ ಸಿಕ್ಕ. ಆದರೆ ಈಗಾಣ ಮಕ್ಕಳ ಕೈಲಿ ಶಾಲೆಗೆ ಹೋಪಗ ನೂರುರ ನೋಟೆ ಬೇಕು.ಮೊದಲು ಶಾಲೆಂದ ಮಕ್ಕಳ ಕರಕ್ಕೋಂಡು ಬಪ್ಪ ಕ್ರಮವೇ ಇಲ್ಲೆ. ಒಂದನೇ ಕ್ಲಾಸಿಂಗೆ ಸುರುವಾಣ ಒಂದು ದಿನ ಕರಕ್ಕೋಂಡು ಹೋದರೆ ಆತು. ಮತ್ತೆ ಆಚ ಮನೆ ಮಕ್ಕಳೊಟ್ಟಿಂಗೇ ಅಥವಾ ಮನೆಯ ಹಿರಿಯ ಮಕ್ಕ ಇದ್ದರೆ ಅವರೋಟ್ಟಿಂಗೆ ನಡಕ್ಕೊಂಡು ಹೇಯೆಕ್ಕು. ಈಗ ಮನೆ ಬಾಗಿಲಿಂದ ಕಾರು ಇಲ್ಲದ್ದರೆ ಬೈಕ್ ಹತ್ತುದು. ಶಾಲೆ ಬಾಗಿಲಿಲಿ ಇಳಿವದು. ಶಾಲೆ ಬಿಟ್ಟು ಎರಡು ನಿಮಿಷ ಆಯೆಕ್ಕಾರೆ ಶಾಲೆಲಿ ಅಪ್ಪ, ಅಮ್ಮಂದಿರು ಇರೆಕ್ಕು, ಇಲ್ಲದ್ದರೆ ಕೂಡಲೇ ಫೊನ್, ಶಾಲೆ ಬಿಟ್ಟು ಸುಮಾರು ಹೊತ್ತಾತು, ನಿಂಗೋ ಎಲ್ಲಿದ್ದಿ ಹೇಳಿ.
    ಒಪ್ಪಣ್ಣ ಒಂದು ಲಾಯಕ್ಕು ವಿಶಯ ಬರದ್ದ. ಖುಷಿ ಆತು.

  13. ಅಪ್ಪು ಭಾವ..
    ಈ ಸೌಕರ್ಯಂಗಳನ್ನೇ ನಂಬಿ ಅಕೇರಿಗೆ ‘ಕೆಟ್ಟತ್ತನ್ನೇ ಮುಕುಟಾ’ ಅಪ್ಪದು ನಾವೇ ! ಶಂಕ್ರಣ್ಣ ಬೇಂಕಿನ ಶೋಕಿಯ ಕಂಡು ಆರೋಗ್ಯಲ್ಲಿ ಕೆಟ್ಟ°., ಈ ಮೊಬೈಲ್ಲಿ ಎಲರಾಮು ಮಡುಗಿ ಆನೂ ಕೆಟ್ಟೆ. ನಾಕು ಗಂಟಗೆ ಎಲರಾಮು ಬಡಿತ್ತಾಂಗೆ ಮಡುಗಿ ಎರಡುಗಂಟೆಗೆ ಮನುಗಿದ್ದೆ ಭಾವ.., ಬಡುದ್ದೋ ಇಲ್ಯೋ ಗೊಂತಿಲ್ಲೆ ಎಚ್ಚರಿಗೆ ಅಪ್ಪಗ ಟೈಂಪೀಸಿಲ್ಲಿ ಗಂಟೆ ಎಂಟು.!! ಮೊಬೈಲ್ ಬೆಟ್ರಿ ಕಾಲಿ !! ಕಿಟಿಕಿ ಬಾಗಿಲು ಹಾಕಿ ಮನುಗಿದವಂಗೆ ಕೋಳಿ, ಕಾಕೆ ಕೂಗಿದ್ದೂ ಗೊಂತಾಯ್ದಿಲ್ಲೆ, ಮಾರ್ಗಲ್ಲಿ ಹೋಪ ಬೈಕು, ಕಾರು ಹಾರ್ನು ಹಾಕಿದ್ದೂ ಗೊಂತಾಯ್ದಿಲ್ಲೆ. ಬೋದಾಳನ ಹಾಂಗೆ ಆತು!!. ಗಣೇಶ ಮಾವನ ಮದವೆ ಪಾಚವೂ ತಪ್ಪಿತ್ತು., ಉಡುಗೊರೆ ಕೊಡ್ಳೆ ತೆಗದು ಮಡುಗಿದ್ದೂ ಇಲ್ಯೇ ಚೀಲಲ್ಲೇ ಬಾಕಿ ಆತು!!!

    ಅಪ್ಪಪ್ಪು ‘ಉದಾಸನ ಬಿಟ್ಟೇ ಸೌಕರ್ಯ ಅನುಭವುಸೆಕು’ ಹೇಳಿತ್ತು – ‘ಚೆನ್ನೈವಾಣಿ’

  14. ಯಬ್ಬ ! ಎಷ್ಟು ಲಾಯಿಕದ ಶುಧ್ಧಿ ಒಪ್ಪಣ್ಣ…
    ನಿಜವಾಗಿದೆ ಇಂದ್ರಾಣ ದಿನಂಗಳಲ್ಲಿ ಅಪ್ಪ ಸಂಗತಿಯೆ ಆತಾ? ಸವಲತ್ತುಗೊ ಹೆಚ್ಚಿದ ಹಾಂಗೆ ಉದಾಸಿನ ಹೆಚ್ಚೆ.
    ಇನ್ನಾದರೂ ಎಚ್ಚೆತ್ತುಗೊೞೆಕ್ಕು ನಾವೆಲ್ಲ.

    ಆ ಅಣ್ಣಂಗೆ ಒಂದು ಅಭಿನಂದನೆ.. ಇಂದುದೆ ಅವ ಸೌಕರ್ಯಂಗೊ ಇದ್ದರೂ ಅದರ ಉಪಯೊಗ ಕಮ್ಮಿಲಿ ಮಾಡಿ ನೈಸರ್ಗಿಕವಾಗಿ ಜೀವನ ನಡೆಶುದು ಮೆಚ್ಚೆಕ್ಕಾದ ಸಂಗತಿಯೆ.
    ಎಂಗೊ ಸಣ್ಣ ಇಪ್ಪಗ ನಾಳೆ ಪರೀಕ್ಷೆ ಇದ್ದಪ್ಪ, ೪ ಅಥವಾ ೫ ಗಂಟೆಗೆ ಏಳ್ಸೆಕ್ಕು ಹೇಳಿರೆ ಅಪ್ಪ ಅಲಾರ್ಮ್ ಮಡುಗದ್ದೆ ಎದ್ದು ಎಂಗಳ ಏಳ್ಸಿಯೊಂಡಿದ್ದದು ನೆಂಪಾತು.

    ಇನ್ನಾಣ ವಾರ ಇನ್ನೆಂತ ಒಪ್ಪ ಶುಧ್ಧಿ?
    ~ಸುಮನಕ್ಕ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×