Oppanna.com

ಶತಮಾನದ ‘ಶತಾವಧಾನ’ಲ್ಲಿ ಧಾರಾ-ಧಾರಣ-ಧೈರ್ಯ ಧಾರಾಳ ತುಂಬಿರಲಿ..

ಬರದೋರು :   ಒಪ್ಪಣ್ಣ    on   30/11/2012    13 ಒಪ್ಪಂಗೊ

ಮಳೆ ಬಿಟ್ಟ ನಾಕೇ ದಿನಲ್ಲಿ ಛಳಿ ಸುರು ಆಗಿತ್ತು; ಮತ್ತೆ ನಾಕೇ ದಿನಲ್ಲಿ ಸೆಕೆಯೂ ಬಂದಿತ್ತು!
ಮಳೆಗಾಲ ಹೇಂಗಿತ್ತು ಕೇಳಿರೆ ಈಗ ನೆಂಪಿದ್ದೋ? ಮಳೆಬಿಟ್ಟ ಮತ್ತೆ ಛಳಿ ಎಷ್ಟು ಜೋರಿತ್ತು ಕೇಳಿರೆ ಈಗ ನೆಂಪಿದ್ದೋ?
ಈಗ ಸೆಕೆ – ಅದು ಮಾಂತ್ರ ನೆಂಪಿಪ್ಪದು.
ಅಲ್ಲದ್ದರೂ – ಇಂದು ಕಂಡದು ನಾಳೆ ಒಂದೇ, ನಾಳ್ತಿಂಗೆ ಮರದೇ ಹೋವುತ್ತಪ್ಪೋ!
ಮರವದು ಹೇಳ್ತದು ಕುಂಞಿಮಾಣಿಂದ ಹಿಡುದು ಅಜ್ಜಂದ್ರ ಒರೆಂಗೆ ಎಲ್ಲೋರಿಂಗೂ ಇರ್ತ ಒಂದು ಶೆಗ್ತಿ!
ಶೆಗ್ತಿ? ಮರವದೂ ಒಂದು ಶೆಗ್ತಿಯೋ? ಅಪ್ಪು.
~
ನಾವು ನಿತ್ಯ ಜೀವನಲ್ಲಿ ಕಾಣ್ತ ಬಹುಪಾಲು ಸಂಗತಿಗಳನ್ನೂ ಮರೆತ್ತು; ಕೆಲವೇ ವಿಷಯಂಗಳ ನೆಂಪು ಮಡಗುಸ್ಸಡ.
ಹೆಚ್ಚಿನ ವಿಶಯಂಗಳ ಮರವಲೇ ನಮ್ಮ ಮೆದುಳು ರಚನೆ ಆದ್ಸಡ.
ದಾರಿಲಿ ಗುಂಡಿಗೊ ಎಲ್ಲಿದ್ದು, ಮುಳ್ಳು ಎಲ್ಲಿದ್ದು, ಊಟದ ಅಶನ ಎಷ್ಟು ಬಳುಸಿದ್ದದು, ಮಜ್ಜಿಗೆಲಿ ಉಂಡದು ಎಷ್ಟು – ಇದೆಲ್ಲವೂ ಸ್ಥಳೀಯ ನೆಂಪುಗೊ; ತುಂಬ ಸಮೆಯ ತಲೆಲಿರ್ತಿಲ್ಲೆ.
ತುಂಬ ಸಮೆಯ ಒಳಿತ್ತ ನೆಂಪುಗೊ – ಕೆಲವೇ ಕೆಲವು. ಸಂಬಂಧಂಗೊ, ನೆಡವ ದಾರಿಗೊ, ಓದಿ ಬರೆತ್ತ ವಿಶಯಂಗೊ – ಹೀಂಗಿಪ್ಪ ಕೆಲವು ಮಾಂತ್ರ.
ಹೇಳಿದಾಂಗೆ, ಕೆಲಸದೋರದ್ದೂ, ಸಾಲಗಾರರ ವಿವರವೂ ಗಟ್ಟಿಗೆ ನೆಂಪೊಳಿತ್ತಾಡ; ಸುಭಗಣ್ಣ ಹೇಳುಗು ಒಂದೊಂದರಿ. 😉
ಅಂತೂ – ಮರೆಸ್ಸು ಸಾಮಾನ್ಯ.
~
ಅವಧಾನದ ಶುದ್ದಿ ಅಂದೊಂದರಿ ನಾವು ಬೈಲಿಲಿ ಮಾತಾಡಿದ್ದು ನೆಂಪಿಕ್ಕಲ್ಲದೋ?
ಬೈಲಿನ ದೊಡ್ಡಜ್ಜ ಹಲವು ಕಾರ್ಯಂಗಳ ಒಟ್ಟೊಟ್ಟಿಂಗೇ ಮಾಡುಗು ಹೇಳ್ತಲ್ಲಿಂದ ಸುರು ಆದ ಶುದ್ದಿ; ವಿದ್ವಾನಣ್ಣ ಹೇಳಿದ ಹಲವು ವಿಶಯಂಗೊ ಎಲ್ಲ ಸೇರಿ “ಅಷ್ಟಾವಧಾನದ” ವಿವಿಧ ಅಂಗಂಗೊ ಎಂತೆಲ್ಲ, ಅದರ ಪೂರ್ವಾಪರ ಎಂತೆಲ್ಲ – ಹೇಳ್ತದರ ವಿವರವಾಗಿ ಮಾತಾಡಿದ್ದು.
ಸಮಸ್ಯಾಪೂರಣ ಹೇದರೆ ಎಂತ್ಸು, ನಿಷೇಧಾಕ್ಷರಿ ಎಂತ್ಸು, ಅಪ್ರಸ್ತುತ ಪ್ರಸಂಗಿ ಹೇದರೆ ಆರು – ಎಲ್ಲವುದೇ ನಾವು ತಿಳ್ಕೊಂಡಿದು. ಅದೇ ಪ್ರೇರೇಪಣೆಲಿ ನಮ್ಮ ಬೈಲಿಲಿ ಸಮಸ್ಯಾಪೂರಣವೂ ಸುರು ಆಯಿದು.

ಅವಧಾನಲ್ಲಿ ನೆಂಪಿಂಗೇ ಪ್ರಾಧಾನ್ಯತೆ.
ಎಲ್ಲವನ್ನೂ ನೆಂಪು ಮಡಗೆಕ್ಕು, ನೆಂಪಿನ ಒಟ್ಟಿಂಗೇ ಸಮಸ್ಯೆಗಳ ಬಿಡುಸುತ್ತ ಯೋಚನೆಗಳನ್ನೂ ಮಾಡೇಕು. “ಚೆ, ಎನಗೆ ಮರದತ್ತು” ಹೇದರೆ ಅವ ಅವಧಾನಿಯೋ? ಅಲ್ಲ!
ಮನುಷ್ಯಂಗೆ ಸಹಜವಾದ ಮರವಿನ ಮೀರಿ, ನೆಂಪುಶೆಗ್ತಿ ಒಲುಸಿಗೊಂಡೋನಿಂಗೆ ಅವಧಾನ ಮಾಡ್ಳೆ ಎಡಿಗು.
ಸುಮ್ಮನೆ ಬೋಚಬಾವ ಹೋಗಿ “ನಾನು ಅವಧಾನ ಮಾಡ್ತೇನೆ” ಹೇದರೆ ದೊಡ್ಡಳಿಯಂಗೆ ಹುಳಿನೆಗೆ ಬಕ್ಕು!
ಅದಿರಳಿ.
~

ತುಂಬ ಅಪುರೂಪವಾದ ಈ ಅವಧಾನ ಕಲೆಯ ಆರಾಧನೆ ಮಾಡ್ತ ಬುದ್ಧಿವಂತರು ನಮ್ಮ ಮಧ್ಯಲ್ಲಿಯೂ ಇದ್ದವು. ನವಗೆಲ್ಲೋರಿಂಗೂ ಗೊಂತಿಪ್ಪ ಡಾ.ಆರ್.ಗಣೇಶ್ ಹೇಳ್ತ ಮಹಾನ್ ವೆಗ್ತಿ ಅಂತವರಲ್ಲಿ ಒಬ್ಬರು.
ವಿದ್ವಾನಣ್ಣ ಅಂದು ಮಾತಾಡುವಗಳೇ ಗಣೇಶರ ಬಗ್ಗೆ ತುಂಬ ಹೇಳಿತ್ತಿದ್ದವು.
ಅಷ್ಟಾವಧಾನ ಮಾಡೇಕಾರೆ ಎಂತೆಲ್ಲ ಗೊಂತಿರೇಕೋ – ಅದೆಲ್ಲವನ್ನೂ ತಿಳ್ಕೊಂಡ ಮೇಧಾವಿ ಅಡ.
ಬುದ್ಧಿಮತ್ತೆ ಎಷ್ಟಿರೇಕೋ – ಅಷ್ಟನ್ನೂ ಸಾಧುಸಿ ತೋರುಸಿದ ಬುದ್ಧಿಜೀವಿ ಅಡ. (ಈಗಾಣ ಕಾಲಲ್ಲಿ ಬುದ್ಧಿಜೀವಿ ಹೇದರೆ ಬೇರೆಯೇ ಅರ್ತ ಬಯಿಂದು; ನಿಜವಾದ ಅರ್ಥಲ್ಲಿ ಬುದ್ಧಿಜೀವಿ ಹೇದರೆ ಇಂಥವು)
ವೇದ, ಶಾಸ್ತ್ರ, ಧರ್ಮ, ಇತಿಹಾಸ, ಸಾಹಿತ್ಯ, ಪುರಾಣಂಗಳ ಬೇರುಬೇರಿನ ಮೂಲಲ್ಲೇ ಹುಡ್ಕಿ ಅರದು ಕುಡುದ ಸನಾತನಿ ಅಡ.
ಇತರ ಭಾಷೆಗಳ ಅಧ್ಯಯನ ಮಾಡಿ ಅದರ ಬೇರನ್ನೂ, ಸಾರ ಸತ್ವವನ್ನೂ ಹೀರಿದ ಪಂಡಿತರು ಅಡ.
ಯೇವದೇ ಮಹಾಕಾವ್ಯ ಇರಳಿ, ರಾಮಾಯಣ, ಮಹಾಭಾರತ, ಬೈಬಲ್, ಕುರಾನು – ಇದರಲ್ಲಿ ಪುಂಟೆ ಯೇವದು, ಸಾರ ಯೇವದು ಹೇಳ್ತದರ ತಿಳ್ಕೊಂಡ ವಿಮರ್ಶಕ ಅಡ.
ಇದೆಲ್ಲವನ್ನೂ ಇಪ್ಪತ್ತೊರಿಶದ ಒರಿಶದ ಒಳವೇ ಕಲ್ತುಗೊಂಡ ಪುರುಷ ಸರಸ್ವತಿ ಅಡ.
ಮೇಧಾವಿಗಳ ಬಗ್ಗೆ ವಿದ್ವಾನಣ್ಣನಂತಹ ವಿದ್ವಜ್ಜನರಿಂಗೆ ಗೌರವ ಬಾರದ್ದೆ ಬೋಚಬವಂಗೆ ಬಕ್ಕೋ?
ಗಣೇಶರ ಬಗ್ಗೆ ಅಂತೂ – ವಿದ್ವಾನಣ್ಣಂಗೆ ತುಂಬಾ ಅಭಿಮಾನ, ಗೌರವ! ನವಗೆಲ್ಲೋರಿಂಗುದೇ.
ಅವು ಮಾಡಿದ ಅವಧಾನಂಗಳೇ ಈಗ ಸಾವಿರಕ್ಕೆ ಹತ್ತರೆ ಆಯಿದಾಡ!
ಅಷ್ಟಾವಧಾನ ಮಾಂತ್ರ ಅಲ್ಲದ್ದೆ, ಹತ್ತು, ಹದಿನಾರು, ಮೂವತ್ತೆರಡು – ನೂರು ಜೆನರ ಕೂರ್ಸಿಗೊಂಡು ಅವಧಾನಂಗಳ ಮಾಡಿದ್ದವು. ಹಾಂಗಾಗಿ, ಈಗ “ಶತಾವಧಾನಿ” ಹೇಳಿಯೇ ಹೇಳ್ತದಾಡ ಎಲ್ಲೋರುದೇ.
~

ಶತಾವಧಾನವೋ?!
ಅಷ್ಟಾವಧಾನವ ಮಾಡಿದ / ನೋಡಿದ ಹಾಂಗಲ್ಲ, ಶತಾವಧಾನ. ನೂರು ರೀತಿಯ ಆಲೋಚನೆ ಮಾಡ್ತ ನೂರು ಜೆನಂಗೊ ಪೃಚ್ಛಕರು.
ನೂರು ವಿಧದ ಪ್ರಶ್ನೆಗೊ. ಒಂದೊಂದು ಪ್ರಶ್ನೆಗೂ ಒಂದೊಂದು ಭಾವನೆಗೊ. ಒಂದೊಂದು ಸತ್ವಂಗೊ, ಒಂದೊಂದು ತೂಕಂಗೊ.
ಪ್ರಶ್ನೆಗಳ ಭಾವಕ್ಕೆ ಹೊಂದಿಗೊಂಡು, ಅದೇ ತೂಕದ ಉತ್ತರಂಗಳೂ!
ಗಂಭೀರ ನಿಷೇಧಾಕ್ಷರಿಗೆ ಗಂಭೀರ ನಡೆ. ಕುಶಾಲಿನ ಅಪ್ರಸ್ತುತಪ್ರಸಂಗಕ್ಕೆ ಕುಶಾಲಿನ ಉತ್ತರಂಗೊ! ಇದೆಲ್ಲವೂ ಒಟ್ಟಿಂಗೇ!
ಒಂದೆರಡಲ್ಲ, ನೂರು ಜೆನಂಗೊ.

ಪುರಷ ಸರಸ್ವತಿ – ಡಾ|ರಾ.ಗಣೇಶ್

ಎಲ್ಲಾ ಪೃಚ್ಛಕರಿಂಗೂ ಅವಧಾನಿಗಳ ಮೇಗೆ ಅಪಾರ ಪ್ರೀತಿ ಗೌರವ ಇದ್ದರೂ – ಎಲ್ಲೋರಿಂಗೂ ಆ ಜಿದ್ದಾ-ಜಿದ್ದಿಲಿ ಗೆಲ್ಲೇಕು ಹೇಳ್ತ ಆಶೆ! ಆದರೆ ಅವಧಾನಿಗೊ ಬಿಡ್ತವೋ?
ನಿಷೇಧಾಕ್ಷರಿಯೋರ ಕಟ್ಟಂಗಳ ಬಿಡುಸೆಂಡು ಬಿಡುಸೆಂಡು ಛಂದಸ್ಸಿನ ದಾರಿಲೆ ನೆಡದು ಗುರಿಮುಟ್ಟುತ್ತವು.
ಅಪ್ರಸ್ತುತ ಪ್ರಶ್ನೆಗೊಕ್ಕೆ ಅಷ್ಟೇ ಕುಶಾಲಿನ ಉತ್ತರ ಕೊಟ್ಟು ಅವರ ಬಾಯಿ ಮುಚ್ಚುಸುತ್ತವು! ಕೂದೋರು ನೆಗೆಮಾಡ್ಳೆ ಬಾಯಿ ಒಡೆಶುತ್ತವು!
ಗ್ರೇಶಿರೇ ಎಂತಾ ಪುಳಕ! ಛೇ, ಎಲ್ಯಾರು ಸಿಕ್ಕಿರೆ ನೋಡೇಕು – ಹೇಳ್ತದು ಒಂದು ಆಶೆ.
~
ಅಷ್ಟಾವಧಾನದ ಶುದ್ದಿಗೆ ಒಪ್ಪಕೊಟ್ಟು ಕೆಕ್ಕಾರು ರಾಮಚಂದ್ರಣ್ಣ ಅಂದೇ ಒಂದು ವಿಶಯ ಹೇಳಿತ್ತಿದ್ದವು – “ನವೆಂಬ್ರ, ದಶಂಬ್ರ ಆಗಿ ಶತಾವಧಾನ ಇದ್ದು” ಹೇದು!
ತಲೆಯ ಒಂದು ಮೂಲೆಲಿ ನೆಂಪಿತ್ತು ಒಪ್ಪಣ್ಣಂಗೆ ಅದು. ಅಷ್ಟಲ್ಲದ್ದೆ, ಹಬ್ಬದ ಗವುಜಿ ಎಡಕ್ಕಿಲಿ ಪಟಾಕಿ ತಪ್ಪಲೆ ಹೋಗಿಪ್ಪಾಗ ಸಿಕ್ಕಿ ಹೇಳಿಕೆ ನೆಂಪುಮಾಡಿದವು – “ಶತಾವಧಾನ ನೆನ್ಪಿದ್ದಲ್ಲದೋ ಒಪ್ಪಣ್ಣಾ” ಹೇಳಿ. ಮರಗೋ?
ಪಟಾಕಿ ಯೇವದೆಲ್ಲ ಬೇಕು ಹೇದು ಮರದರೂ – ಹೀಂಗಿರ್ಸು ಮರೆಯ.
“ನೆನ್ಪಿದ್ದು, ಬಪ್ಪಲಿದ್ದು” ಹೇಳಿದೆ.
~

ಪ್ರತಿ ಅವಧಾನವೂ ಹೊಸತೊಂದರ ಸಮ್ಮಿಲನ ಇದಾ. ಈ ಶತಾವಧಾನವೂ ಹೊರತಲ್ಲ.
ಹಾಂಗಾಗಿ, “ಈ ಶತಾವಧಾನಲ್ಲಿ ಎಂತೆಲ್ಲ ಇರ್ತು ರಾಮ್ಚಂದ್ರಣ್ಣಾ?” ಕೇಳಿದೆ. ಅದಾ, ಅಷ್ಟಪ್ಪಗ ಹೇಳಿದವು ವಿವರಂಗೊ. ತುಂಬ ಅಪುರೂಪದ ಸಂಗತಿ ಆದ ಕಾರಣ ಈ ವಾರ ಬೈಲಿಂಗೆ ಹೇಳಿಕ್ಕುತ್ತೆ, ಆಗದೋ?

ನವೆಂಬ್ರ ಮೂವತ್ತು, ದಶಂಬ್ರ ಒಂದು, ಎರಡು – ಹೀಂಗೆ ಒಟ್ಟು ಮೂರು ದಿನ ಶತಾವಧಾನ ಕಾರ್ಯಕ್ರಮ ನೆಡೆತ್ತು.
ಬೆಂಗ್ಳೂರಿನ ಜಯನಗರಲ್ಲಿ ಈ ಕಾರ್ಯ ಆವುಸ್ಸು.
ಬೆಂಗ್ಳೂರು ಎಂತರ ದೂರ! – ಆಚಮನೆ ಅಲ್ಲದೋ ಈಗಾಣ ಕಾಲಲ್ಲಿ. ಶತಾವಧಾನಕ್ಕೆ ಹೋಪಲೆ ಅಂತು ದೂರದ ಲೆಕ್ಕವೇ ಇಲ್ಲೆ ಇದಾ!

ಅವಧಾನಲ್ಲಿ ಒಟ್ಟು ನಾಕು ಸುತ್ತು. ಮೂರು ದಿನ ನೆಡೆತ್ತ ಶತಾವಧಾನಲ್ಲಿ – ಸುರುವಾಣ ದಿನ ಸುರುವಾಣ ಸುತ್ತು, ಎರಡ್ಣೇ ದಿನ ಎರಡು, ಮೂರ್ನೇ ಸುತ್ತುಗೊ, ಮೂರ್ನೇ ದಿನ ಅಖೇರಿಯಾಣ ಸುತ್ತು ನೆಡೆತ್ತಾಡ.
ಪ್ರತಿ ಸುತ್ತಿಲಿಯೂ ಪೃಚ್ಛಕರ ಸಮಸ್ಯೆಗೊಕ್ಕೆ ಪರಿಹಾರ ಕೊಡುವಗ – ಹೇಂಗೆ ಹೇಳೇಕು? ಕಟ್ಟಿಕಟ್ಟಿ, ಬಿಕ್ಕಿಬಿಕ್ಕಿ ಹೇಳುಲಿಲ್ಲೆ – ಸರಸ್ವತಿ ಅನುಗ್ರಹ ಆದ ಕಾರಣ ಹನಿಕಡಿಯದ್ದ ಮಳೆಯ ಧಾರೆಯಾಗಿ ಹರಿಯೇಕಡ.
ಹಾಂಗೆ, ಅವಧಾನಲ್ಲಿ ಸಾಹಿತ್ಯ ಧಾರೆಯೇ ಹರುದು ಬತ್ತು!

ಪ್ರತಿ ಸುತ್ತು ಬಪ್ಪಗಳೂ – ಪೃಚ್ಛಕರು ಸೀತ “ಹ್ಮ್, ಮುಂದಾಣ ಸುತ್ತಿಂಗೆ ಹೋಪೊ” ಹೇಳ್ತವಿಲ್ಲೆ. ಅದರಿಂದ ಹಿಂದಾಣ ಸುತ್ತಿಲಿ ಎಷ್ಟಾಯಿದೋ ಅಷ್ಟರ ಅವಧಾನಿಗಳೇ ನೆಂಪುಮಾಡಿ ಕೊಡೇಕಡ. ಪಾಪ!!
ನೆಂಪುಮಾಡಿ ಕೊಡೇಕಾರೆ, ಮನಸ್ಸಿಲಿ ಧಾರಣೆ ಮಾಡಿರಡದೋ?! ಅವಧಾನಿಗೊಕ್ಕೆ ಧಾರಣಾ ಶೆಗ್ತಿ ತುಂಬಾತುಂಬಾ ಬೇಕಾವುತ್ತು.

ಪೃಚ್ಛಕರ ಒಟ್ಟಿಂಗೆ ನೆಡೆತ್ತ ಈ ಸಾಹಿತ್ಯಿಕ ಹೋರಾಟಲ್ಲಿ, ಲಾಭ ಆರಿಂಗೆ? ಸರಸ್ವತಿಗೆ.
ಪೃಚ್ಛಕರಿಂಗೆ ಆದರೆ ಒಂದು ಪ್ರಶ್ನೆ ಕೇಳಿ ಸುಮ್ಮನೆ ಕೂದರಾತು. ಆದರೆ ಅವಧಾನಿಗೊಕ್ಕೆ ನೂರು ಜೆನಕ್ಕೂ ಉತ್ತರ ಕೊಡೆಡದೋ?
ಅದಕ್ಕೇ ಅಲ್ಲದೋ ಧೈರ್ಯ ಬೇಕಾದ್ಸು?
ಅಷ್ಟೂ ಪೃಚ್ಛಕರ ಸಮಸ್ಯೆಗಳ ಧೈರ್ಯ ಇದ್ದರೆ ಮಾಂತ್ರ ಅವಧಾನ ನೆಡೆಶಲೆ ಎಡಿಗಷ್ಟೆ.
ಅವಧಾನಿಗೆ ಮುಖ್ಯವಾಗಿ ಇರೆಕಪ್ಪದು ಈ ಮೂರು – ಧಾರಾ, ಧಾರಣ, ಧೈರ್ಯ – ಹೇಳಿ ಕೆಕ್ಕಾರು ಅಣ್ಣ ಹೇಳಿದವು.
~

ಶತಾವಧಾನ ಹೆಸರೇ ಹೇಳ್ತ ಹಾಂಗೆ ಒಟ್ಟು ನೂರು ಪೃಚ್ಛಕಂಗೊ ಆಯೇಕಿದಾ. ಆ ನೂರರ ಹೇಂಗೆ ಬೇಕಾರೂ ಜೋಡ್ಸಲಕ್ಕಾಡ. ಒಟ್ಟು (ಕನಿಷ್ಠ) ನೂರಾದರಾತು!
ಹಾಂಗೆ, ಈ ಸರ್ತಿ,

  • ಇಪ್ಪತ್ತನಾಕು ಜೆನ ಸಮಸ್ಯಾಪೂರಣ,
  • ಇಪ್ಪತ್ತನಾಕು ಜೆನ ದತ್ತಪದಿ,
  • ಐದು ಜೆನ ಚಿತ್ರಕವಿತೆ

– ಒಟ್ಟು ಐವತ್ತಮೂರು ಆತಲ್ಲದೋ. ಇದೆಲ್ಲವೂ “ಧಾರಣ” ಪ್ರಧಾನ ಸುತ್ತುಗೊ.
ಪ್ರತಿಯೊಂದುದೇ ಹಂತಹಂತವಾಗಿ ನೆಂಪುಮಡಗಿ ಸುತ್ತುಗಳಲ್ಲಿ ಮುಗಿತ್ತ ಸಂಗತಿಗೊ.

  • ಇನ್ನು, ನಲುವತ್ತೆಂಟು ಆಶುಕವಿತೆ.

ಪೃಚ್ಛಕರು ಕೊಟ್ಟ ಸಂದರ್ಭ – ಸನ್ನಿವೇಶಂಗಳ ಮನನ ಮಾಡಿ, ಅವು ಕೇಳಿದ ಛಂದಸ್ಸಿಲಿ ಪದ್ಯ ಅಲ್ಲೇ ರಚನೆ ಮಾಡಿ ಹೇಳುಸ್ಸು. ಆಶುಕವಿತ್ವ ಹೇದರೆ “ಧಾರೆ”ಗೆ ಮುಖ್ಯವಾದ್ಸು.

ಐವತ್ಮೂರು – ನಲುವತ್ತೆಂಟು ಎಷ್ಟಾತು? – ನೂರ ಒಂದು!!
ಶತಾವಧಾನಕ್ಕೆ ಬೇಕಾದ ನೂರು ಅಂಬಗಳೇ ದಾಂಟಿತ್ತು!
ಇಷ್ಟೇ ಆದರೆ ಬಪ್ಪ ಎಲ್ಲೋರಿಂಗೂ ಮನೋರಂಜನೆ ಆಗೆಡದೋ? ಹಾಂಗಾಗಿ, ರಂಜನೆಗೆ ಮತ್ತೆ ಮೂರು ಸುತ್ತುಗೊ.

  • ಸಂಗೀತ ಪ್ರಿಯರಿಂಗೆ ಇಷ್ಟ ಅಪ್ಪ ಕಾವ್ಯವಾಚನದ ಸುತ್ತು.
  • ಗಣಿತ ಪ್ರಿಯರಿಂಗೆ ಇಷ್ಟ ಅಪ್ಪ ಸಂಖ್ಯಾಬಂಧ,
  • ಕುಶಾಲು ಪ್ರಿಯರಿಂಗೆ ಬೇಕಪ್ಪ ಅಪ್ರಸ್ತುತ ಪ್ರಸಂಗ – ಈ ಸುತ್ತುಗಳೂ ಇದ್ದಾಡ.

ಅಂತೂ – ಶತಾವಧಾನ ಹೇದರೆ ಮನಸ್ಸಿಂಗೆ ಭೂರಿಭೋಜನವೇ ಸರಿ!
~
ಈಗ ಹೇಳಿ, ಹೀಂಗಿರ್ತ ಕಾರ್ಯಕ್ರಮಂಗೊಕ್ಕೆ ಹೋಗದ್ದರೆ ಅಕ್ಕೋ? ಹೋಗಲೇಬೇಕಪ್ಪೋ!
ಇಷ್ಟನ್ನಾರ ಶತಾವಧಾನ ಆದರೂ, ಪೂರ್ತಿ ಕನ್ನಡದ ಸುತ್ತುಗಳನ್ನೇ ತೆಕ್ಕೊಂಡು ಮಾಡಿದ್ದವಿಲ್ಲೇಡ.
ತೆಲುಗೋ, ಸಂಸ್ಕೃತವೋ ತೆಕ್ಕೊಂಡು ಒಟ್ಟು ನೂರು ಭರ್ತಿ ಮಾಡುಸಿದ್ದಾಡ. ಈ ಸರ್ತಿ ಪೂರ್ತಿ ಕನ್ನಡದ್ದೇ ಸುತ್ತುಗೊ.
ಅದಕ್ಕೇ “ತುಂಬುಗನ್ನಡ ಶತಾವಧಾನ” ಹೇಳ್ತದು.

~
ಎಲ್ಲಾ ಅವಧಾನಂಗಳಲ್ಲಿ ಇಪ್ಪ ಹಾಂಗೇ, ಧಾರೆ, ಧಾರಣೆ, ಧೈರ್ಯ ತುಂಬಿರಳಿ.
ಪೃಚ್ಛಕರ ಸಮಸ್ಯೆ ಗೆದ್ದು, ಅವರ ಮನಸ್ಸನ್ನೂ ಗೆದ್ದು, ನೋಡುಗರಿಂಗೆ ಮನೋರಂಜನೆಯನ್ನೂ ಒದಗುಸಲಿ.
ಗಣೇಶರ ಕಲಾಪ್ರೇಮ ನಮ್ಮೆಲ್ಲರಿಂಗೆ ಸಾಹಿತ್ಯದ ಊಟ ಉಣುಸಲಿ.
ಶತಾವಧಾನ ಚೆಂದಕೆ ಕಳಿಯಲಿ – ಹೇಳ್ತದು ಬೈಲಿನ ಆಶಯ.
~
ಓಯ್, ಬೈಲಿಂದ ಮುಳಿಯಭಾವ, ಟೀಕೆಮಾವ, ಸುಭಗಣ್ಣ –ಎಲ್ಲೋರುದೇ ಕೊಡಿಕ್ಕಾಲಿಲಿ ನಿಂದಿದವಾಡ; ಹೋಪಲೆ.
ಮಾಷ್ಟ್ರುಮಾವನೂ ಹೋವುತ್ತವೋ ಗೊಂತಿಲ್ಲೆ, ಹೋವುತ್ತರೆ ಅವರೊಟ್ಟಿಂಗೆ ಮೆಲ್ಲಂಗೆ ನವಗೂ ಸೇರಿಗೊಳೆಕ್ಕು.
ನಿಂಗಳೂ ಬತ್ತಿರಲ್ಲದೋ?

ಒಂದೊಪ್ಪ: ಧಾರೆ-ಧಾರಣೆ-ಧೈರ್ಯ ಇಪ್ಪ ಶತಾವಧಾನಿಗೊ ಈ ಶತಮಾನಲ್ಲಿ ಇನ್ನೂ ಹುಟ್ಟಿ ಬರಲಿ..

ಸೂ:

  • ಶತಾವಧಾನದ ದಿನ ವೀಕ್ಷರಿಂಗೆ ಭಾಗವಹಿಸುಲೆ ಸಮಸ್ಯಾ ಪೂರಣ ಏರ್ಪಾಡು ಮಾಡಿದ್ದವು. ಈ ಕೆಳಾಣ ಕಂದಪದ್ಯ ಸಮಸ್ಯೆಗೆ ಪರಿಹಾರ ಬರಕ್ಕೊಂಡು ಅಲ್ಲಿ ಕುರ್ಶಿ ಮಡಗಿ ಕೂದೋರಿಂಗೆ ಕೊಡೆಕಡ.
    “ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್” 
  • ಶತಾವಧಾನ ಕಾರ್ಯಕ್ರಮಲ್ಲಿ “ಬಂದೋರಿಂಗೆ ಕೊಡ್ಳೆ” ಮಾಡಿದ ಕಿರುಪುಸ್ತಕ,
    ಕೆಕ್ಕಾರು ರಾಮ್ಚಂದ್ರಣ್ಣ ಪ್ರೀತಿಲಿ ಬೈಲಿಂಗೆ ಕಳುಸಿ ಕೊಟ್ಟದು: (ಸಂಕೊಲೆ)
  • ಶತಾವಧಾನದ ಹೇಳಿಕೆ ಕಾಗತ, ಮುಳಿಯಭಾವ ಬೈಲಿಂಗೆ ಕೊಟ್ಟಿದವು. (ಸಂಕೊಲೆ)
  • ಕಾರ್ಯಕ್ರಮದ ನೇರಪ್ರಸಾರ: (ಸಂಕೊಲೆ)

13 thoughts on “ಶತಮಾನದ ‘ಶತಾವಧಾನ’ಲ್ಲಿ ಧಾರಾ-ಧಾರಣ-ಧೈರ್ಯ ಧಾರಾಳ ತುಂಬಿರಲಿ..

  1. ” ಎಲ್ಲರಿ೦ಗೂ ಇದು ಆಸ್ವಾದನೆ ಮಾಡಲೆ ಅಕ್ಕೋ? ವ್ಯಾಕರಣ ,ಗುರು ಲಘು ಹಾಕುದು, ಛ೦ದಸ್ಸು , ಷಟ್ಪದಿ, ಆದಿ ಪ್ರಾಸ, ಅ೦ತ್ಯ ಪ್ರಾಸ ಹೇಳಿರೆ ಎ೦ತಾ ಹೇಳಿ ಮರ್ತೋದ ನಮೂನೆಯ ಜನ ಅಲ್ಲಿ ಹೋಗಿ ಮಾಡುದೆ೦ತರಾ?? ಹ್ಮ್ಮ್ ಎ೦ತಾದರಾಗಲಿ ಅಲ್ಲಿ ಹೋದರೆ ನಮ್ಮನ್ನ ಕುತ್ತಿಗೆ ಹಿಡುದು ಅ೦ತೂ ದಬ್ಬುತ್ತವಿಲ್ಲೆ. ಅ೦ಬಗ ಹೆದರುದೆ೦ತಕ್ಕೆ? ಎ೦ತ ಅರ್ಥ ಆಗದ್ದರೂ ಅಪ್ರಸ್ತುತ ಪ್ರಸ೦ಗಿ ಹಾಕುವ ಪ್ರಶ್ನೆಯಾದರೂ ಅರ್ಥ ಆಗ್ತು ಹೇಳುವ ಭಯ೦ಕರ ನ೦ಬಿಕೆ. ” ಹೀ೦ಗೆಲ್ಲಾ ವಿಚಾರ ಮಾಡಿ ಶತಾವಧಾನಕ್ಕೆ ಹೋಗಿ ಕು೦ತಾತು. ಹೋಯ್ ಬಾಲ್ಕನಿಲಿ ಕು೦ತದ್ದು ಮಾರ್ರೇ ಸ್ಟೇಜಿಲಿ ಅಲ್ಲಾ.. 😉

    ಆಹ್.. ಆಶ್ಚರ್ಯ. ಹಿ೦ದಿನ ದಿನದ್ದೆಲ್ಲಾ ಹೇ೦ಗಪ್ಪಾ ನೆನಪಿಡ್ತವು ಇವು ? ಅದೂ ಒಬ್ಬಿಬ್ಬರು ಕೇಳದ್ದಾ ? ಮದ್ ಮದ್ದಿದಲ್ಲಿ ತ್ರಾಸ್ ಕೊಡಲೆ ಕೋಷ್ಟಕ ಮತ್ತೆ ಅಪ್ರಸ್ತುತ ಪ್ರಸ೦ಗಿ. ಅದಾ ಆನು ಹೇಳಿದ್ದಿಲ್ಲೆಯಾ ಮೊದಾಲು. ಯೆನ್ನ ನ೦ಬಿಕೆ ಸುಳ್ಳಾಗ. ಅಪ್ರಸ್ತುತ ಪ್ರಸ೦ಗಿ ಇಟ್ಟ ಪ್ರಶ್ನೆ ಮಾತ್ರ ಯೆನ್ನ ತಲೆಯೊಳಗೆ ಹೊಕ್ಕಿದ್ದು.ಬಾಕಿ ಎಲ್ಲವಾ ಅವಧಾನಿಗಳು ಸರಳ ಕನ್ನಡಕ್ಕೆ ಇಳಿಸಾದಾಗಲೇ ತಲೆಗೆ ತಾಗಿದ್ದು. ಆರಿದ ಚಾ ಕುಡಿದದ್ದು ನಾವು. ಆದರೂ “ವಾಹ್ ತಾಜ್ ” ರುಚಿ ಇದ್ದದ್ದು ಸುಳ್ಲಲ್ಲಾ. ಪ್ರತಿ ಬಾರಿಯೂ ಮೂಗಿನ ಮೇಲೆ ಬೆರಳು. ಒ೦ದು ಕೈಲಿ ಚಪ್ಪಾಳೆ ಹೊಡೆವಲೆ ಆಗ್ತಾ? ಹ೦ಗಾಗಿ ಮೂಗಿನ ಮೇಲಿ೦ದ ಬೆರಳು ತೆಗೆದು ಪ್ರತಿ ಬಾರಿಯೂ ಆಶ್ಚರ್ಯ , ಖುಷಿಯಿ೦ದ ಚಪ್ಪಾಳೆ ತಟ್ಟಿಯಾತು. ಕಾವ್ಯವಾಚನ ಮಾಡಿದ “ಕೆದಿಲಾಯ”ರ ಕ೦ಠಸಿರಿಗೆ ಮನಸೋತು ಆನು ಅವರ ಬೀಸಾಳೆ (ಫ್ಯಾನ್) ಆಗ್ಬುಟೆ. ವಾಪಾಸ್ ಬಪ್ಪಾಗ ತಲೆಯಲ್ಲಿ ಕು೦ತದ್ದು “ಅವಧಾನಿಗಳು” “ಕೆದಿಲಾಯರು”. ವಾಹ್ ಎ೦ತಾ ಅದ್ಭುತ !!!

    ಅಪರಾಹ್ನದ ಭೋಜನ ಸಮಯದಲ್ಲಿ ನಮ್ಮ ಮುಳಿಯ ಭಾವ ಹಾಗೂ ತೆಕ್ಕು೦ಜ ಮಾವನೊಟ್ಟಿಗೆ ಸಣ್ಣ ಕುಶಲೋಪರಿಯೂ ಆತು. ಒಟ್ನಲ್ಲಿ ಅವಧಾನದ ದಿನ ಖುಷಿ ಕೊಟ್ಟಿತ್ತು 🙂 🙂 🙂

  2. ಹರೇರಾಮ, ಒಪ್ಪಣ್ಣನ ಬಯಲಿಂಗೆ ಹೋಗಿ ಶತಾವಧಾನವ ನೋಡಿದೆ ಕಾರ್ಯಕ್ರಮ ಕಂಡು ತುಂಬಾ ಕುಶಿ ಆತು ನಮ್ಮ ಬಯಲಿನ ಮಕ್ಕೊಗೆ ಬಹುಮಾನ ಬಂದದಂತೂ ತುಂಬಾ ತುಂಬಾ ಕೊಶಿ ಆತು. ವಯಂ ಧನ್ಯಾಹ;

  3. ಶತಮಾನದ ಶತಾವಧಾನವ ನೇರವಾಗಿ ಅಲ್ಲದ್ರೂ ನೇರಪ್ರಸಾರಲ್ಲಿ ಕಂಡು ಆಸ್ವಾದಿಸಿ ಆತು. ಅದಕ್ಕೆ ಪೂರಕವಾಗಿ ಮಾಹಿತಿ ಕೊಟ್ಟ ಒಪ್ಪಣ್ಣಂಗೆ ಧನ್ಯವಾದಂಗೊ.
    ನಮ್ಮ ನಡುಕೆ ಇಂಥ ಒಬ್ಬ ಶ್ರೇಷ್ಠ ವ್ಯಕ್ತಿ ಇದ್ದವು ಹೇಳುದೇ ನವಗೊಂದು ಹೆಮ್ಮೆ. ನಿಜಕ್ಕೂ ಅತ್ಯದ್ಭುತ ಪ್ರತಿಭೆ. ಈಗಾಣ ’ಬುದ್ಧಿಜೀವಿ’ಗ ಹೇಳಿ ಹೇಳ್ಸಿಗೊಂಬವಕ್ಕೆ ನಾಚಿಕೆ ಆಯೆಕ್ಕು.

  4. ಶತಾವಧಾನಲ್ಲಿ ಬಹುಮಾನ ಪಡೆದ ಮಹೇಶ-ರಘು ಗೆ ಬಹು ಪರಾಕ್!

  5. dhanyavaada maheshanna and raghu muliya.. shathavadhana karyakramalli bahumana galisida hemmeya oppannango..

  6. ಬಹುಮಾನ ಪಡೆದ ಬೈಲಿನ ಮಹೇಶಣ್ಣಂಗೂ ಮುಳಿಯದ ರಘುಅಣ್ಣಂಗೂ ಅಭಿನಂದನೆಗೊ

  7. ಒಳ್ಳೆ ಶುದ್ದಿಯ ಒಳ್ಳೆ ಸಮಯಕ್ಕೆ ಹೇಳಿದ್ದ ಒಪ್ಪಣ್ಣ. ನಮ್ಮ ಕಂಪ್ಯೂಟರಿಂಗೆ ಅವಧಾನಿಗೊ ಮಾಡೆಕಾದ ಇಷ್ಟೆಲ್ಲ ಕೆಲಸಂಗಳ ಕೊಟ್ಟರೆ, ಅದರಲ್ಲಿ “ಎರರ್ ಮೆಸ್ಸೇಜು” ಬಕ್ಕು ಖಂಡಿತಾ. ಕಂಪ್ಯೂಟರನ್ನೂ ಮೀರುಸಿದ ಶತಾವಧಾನಿ, ಡಾ.ರಾ. ಗಣೇಶ ಅವರ ಪಾಂಡಿತ್ಯ ನಮ್ಮ ಕನ್ನಡಿಗರಿಂಗೆಲ್ಲ ಹೆಮ್ಮೆಯ ವಿಷಯ. ಕಾರ್ಯಕ್ರಮ ತುಂಬಾ ಚೆಂದಕೆ ಆಗಲಿ. ನೇರ ಪ್ರಸಾರವನ್ನುದೆ ಒದಗುಸಿ ಕೊಟ್ಟದಕ್ಕೆ ಧನ್ಯವಾದಂಗೊ. ನೋಡ್ಳೆ ಎಡಿಗಾದರೆ ಖಂಡಿತಾ ನೋಡೆಕು.

  8. ಅತ್ಯುತ್ತಮವಾದ “ಶತಾವಧಾನ” ಕಾರ್ಯಕ್ರಮದ ಬಗ್ಗೆ ಚಂದಕ್ಕೆ ವಿವರ್ಸಿದ ಒಪ್ಪಣ್ಣಂಗೆ ಧನ್ಯವಾದಂಗೊ.
    ಕಾರ್ಯಕ್ರಮ ಚಂದಕ್ಕೆ ನಡೆಯಲಿ ಹೇಳಿ ಶುಭಾಶಯಂಗೋ….
    ನೇರಪ್ರಸಾರದ ವ್ಯವಸ್ಥೆ ಇಪ್ಪದನ್ನೂ ಬರದ್ದು ಎಂಗಳ ಹಾಂಗಿಪ್ಪ ಬಪ್ಪಲೆ ಸಾಧ್ಯ ಆಗದ್ದವಕ್ಕೆ ಇಲ್ಲಿಂದಲೇ ನೋಡ್ಲೆ ಒಂದು ಸದಾವಕಾಶ.

  9. ತುಂಬಾ ಸಂತೋಷದ ಶುದ್ದಿಯ ತುಂಬಾ ಚೆಂದಕೆ ವಿವರುಸಿದ್ದೆ ಒಪ್ಪಣ್ಣ… ಈ ಅವಧಾನದ ಶುದ್ದಿ ಬಪ್ಪಗ ಎಲ್ಲ ಎನಗೆ ಅನ್ನಿಸುದು ನಮ್ಮ ಒಪ್ಪಣ್ಣನ ಮಹಾ ‘ಅವಧಾನಿ’ ಹೇಳಿದರೆ ತಪ್ಪಾಗ ಹೇಳಿ. ಅದೆಷ್ಟು ಶುದ್ದಿಗೋ ಯಾವ್ಯಾವುದೋ ವಿಷಯದ ಮೇಲೆ,ಅದರ ಮೇಗಂದ ಬೈಲಿನ ಎಲ್ಲೋರು ಇಂತ ದಿನ ಇಂತದು ಹೇಳಿದ್ದವು,ಈ ಒಪ್ಪ ಕೊಟ್ಟಿದವು ಹೇಳಿ ನೆನಪು ಮಡಿಕ್ಕೊಂಡು ಎಲ್ಲರ ಭಾವನೆಗೆ ಸ್ಪಂದಿಸಿಗೊಂಡು… ಎಲ್ಲ ರೀತಿಲ್ಲಿ ನಿಯಂತ್ರಿಸಿಗೊಂಡು ಆಹಾಹ…”ವಿಶಾಲ ಹೃದಯ…ಆಳವಾದ ಜ್ಹಾನ… ಇಪ್ಪ ಒಪ್ಪಣ್ಣನ ಅವಧಾನಿ ಹೇಳಿ ಹೇಳಿರೆ ತಪ್ಪಾಗ”.

    ಶತಾವಧಾನಿ ಡಾ.ರಾ.ಗಣೇಶರ ಶತಮಾನದ ವಿಶೇಷ ಶತಾವಧಾನ ಕಾರ್ಯಕ್ರಮದ ನೇರಪ್ರಸಾರ ಒದಗಿಸುತ್ತಾ ಇಪ್ಪವಕ್ಕೆ ಅನಂತ ಧನ್ಯವಾದಂಗೋ. ಈ ಕಾರ್ಯಕ್ರಮ ನೋಡುಲೆ ಅವಕಾಶ ಸಿಕ್ಕೆಕ್ಕಾರೆ ಅದುವೇ ಒಂದು ಮಹಾಭಾಗ್ಯ. ಹರೇ ರಾಮ…

  10. ತುಂಬಾ ಸಂತೋಷದ ಸುದ್ದಿ.

  11. ಪೂರಣ, ಪದಿ, ಕವಿತ್ವ, ವಾಚನ, ಧಾರೆ, ಧಾರಣೆ, ಧೈರ್ಯ… ಸುಮಾರಲ್ಲ ಕಂಡತ್ತಪ್ಪ ಇಲ್ಲಿ. ಒಂದೂ ನೆಂಪು ಉಳುದ್ದಿಲ್ಲೆ ಬಾವ ನಮ್ಮ ತಲೆಲಿ. ಅಕೇರಿಗೆ ಭೂರಿಭೋಜನ ಹೇಳಿ ಕಂಡತ್ತು. ನವಗೆ ಅದು ಇದ್ದರೆ ಸಾಲದೋ. ಗಟ್ಟಿ ನೆಂಪು ಮಡಿಕ್ಕೊಂಡಿದು. ಹಾಂಗೇ ಶುದ್ದಿಯ ಅಕೇರಿಯಾಣ ಚುಕ್ಕಿ ಹಾಕಿದ ಗೆರೆಯನ್ನೂ.

    ಹರೇ ರಾಮ. ಹೋದೋರಿಂಗೆ ಎಲ್ಲೋರಿಂಗೂ ಭೂರಿಭೋಜನ ರಸದೌತಣ ಆಗಲಿ ಹೇಳಿ ಬೈಲ ಹತ್ತು ಸಮಸ್ತರೊಟ್ಟಿಂಗೆ ಇತ್ಲಾಗಿಂದಲೂ ಶುಭಕೋರಿದ° – ಚೆನ್ನೈ ಭಾವ°.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×