Oppanna.com

ಸರ್ವಶುದ್ಧಿಯ ಶಕ್ತಿ ಇಪ್ಪ ಗಂಗಮ್ಮನ ಅಶುದ್ಧದ ಕತೆ..!

ಬರದೋರು :   ಒಪ್ಪಣ್ಣ    on   06/06/2014    22 ಒಪ್ಪಂಗೊ

ಹಾಲುಮಜಲು ಪುಟ್ಟಬಾವ° ಕಳುದ ವಾರ ಸಿಕ್ಕಿದ್ದು, ಶುದ್ದಿ ಹೇಳಿದ್ದು ನೆಂಪಿದ್ದನ್ನೇ? ಸಾವರ್ಕರನ ಹಾಂಗಿರ್ತ ವೀರಂಗೊ ನಮ್ಮ ಆತ್ಮಾಭಿಮಾನವ ಬಡುದು ಏಳುಸಿದವು, ಅವರಿಂದಾಗಿ ಮತ್ತಾಣ ತಲೆಮಾರುಗಳೇ ದೇಶಾಭಿಮಾನ, ಸ್ವಾಭಿಮಾನವ ಗ್ರೇಶಿ ನಿಂಬ ಹಾಂಗಾತು – ಹೇಳ್ತದು ಪುಟ್ಟಭಾವನ ಅಭಿಪ್ರಾಯ.

~

ಮೊನ್ನೆ ಮೋದಿಅಜ್ಜ° ಗೋರ್ಮೆಂಟು ಸುರುಮಾಡಿದ್ದು ನಿಂಗೊಗೆ ಎಲ್ಲೋರಿಂಗೂ ಅರಡಿಗನ್ನೇ? ಇನ್ನೂ ಅರಡಿಯದ್ರೆ ನಿಂಗೊ ಬೈಲಿಲಿ ಇಲ್ಲೆ, ಎಲ್ಲಿಯೋ ಸಾರಡಿ ತೋಡಿಲಿ ಇದ್ದಿ – ಹೇಳುಗು ಎಲ್ಲೋರುದೇ. ಇಡೀ ಲೋಕವೇ ಮೆಚ್ಚಿದ ನಾಯಕ, ಸರ್ಕಾರ ಸುರುಮಾಡಿದ ಸಂಗತಿ ಬೈಲಿಲಿಯೂ ಬಯಿಂದು. ಅದಿರಳಿ.
ಮೊದಲಾಣ ಸರ್ಕಾರಂಗಳಲ್ಲಿ – ಸಗಣಕ್ಕೆ ಸಾವಿರ – ಹೇಳ್ತಾಂಗೆ ನೂರಾರು ಜೆನ ಮಂತ್ರಿಗೊ ಇದ್ದಿದ್ದವಡ. ಆ ಎಲ್ಲಾ ಮಂತ್ರಿಗೊಕ್ಕೆ ಒಂದೋ – ಎರಡೋ ಕಾರುಗೊ, ನಾಕು ನಾಕು ಜೆನ ಆಳುಗೊ, ಸಂಬಳ ಅದು ಇದು – ಎಲ್ಲೋರಿಂಗೂ ಗಮ್ಮತ್ತಿನ ಜೆಂಬ್ರದೂಟ ಐದೊರಿಶಕ್ಕೆ. ಆದರೆ, ಈ ಸರ್ತಿ ಮೋದಿಯಜ್ಜ° ಮಾಡಿದ ಗೋರ್ಮೆಂಟಿಲಿ ಲೆಕ್ಕದ – ಹತ್ತೈವತ್ತು ಜೆನರ ಒಳದಿಕ್ಕೆ – ಎಷ್ಟು ಬೇಕೋ ಅಷ್ಟೇ ಮಂತ್ರಿಗೊ ಇಪ್ಪದಾಡ. ಒಂದೇ ನಮುನೆಯ ಮಂತ್ರ್ಯಾಲಯಂಗಳ ಬೆರಕ್ಕೆ ಮಾಡಿ ಕೆಲಸ ಜಾಸ್ತಿ ಕೊಟ್ಟಿದಾಡ. ಎಲ್ಲಾ ಮಂತ್ರಿಗಳೂ ಈ ಪ್ರಧಾನ ಮಂತ್ರಿ ಹೇದಾಂಗೆ ಕೇಳೇಕಾದ್ಸು; ಮಾಷ್ಟ್ರುಮಾವನ ಕ್ಲಾಸಿಲಿ ಮಕ್ಕೊ ಇದ್ದ ಹಾಂಗೆ. ಹಾಂಗೆ –ಒಂದು ಪ್ರಧಾನಿ, ನಲುವತ್ತ ನಾಕೋ – ಐದೋ ಮಂತ್ರಿಗೊ, ಅಷ್ಟೇ! ಸುಮ್ಮನೆ ಪೈಶೆ ಹಾಳಪ್ಪಲೂ ಇಲ್ಲೆ, ಬೇಕಾದ ಕೆಲಸಂಗಳೂ ನೆಡೆತ್ತು –ಹೇದು ಗುಣಾಜೆಮಾಣಿ ಮೊನ್ನೆ ಹೇಯಿದ°.

~

ಇಷ್ಟೇ ಕಮ್ಮಿ ಮಂತ್ರಿಗೊ ಇದ್ದರೂ, ಒಂದು ಮಂತ್ರಿ ವಿಶೇಷವಾಗಿ ಇದ್ದಾಡ – ಆ ಮಂತ್ರಿಯ ವ್ಯಾಪ್ತಿ ಎಂತರ ಹೇದರೆ, “ಗಂಗಾಮಾತೆಯ ಶುದ್ಧೀಕರಣ”.!!
ಇದರ ಕೇಳಿ ಕುಷಿಯೂ ಆತು ಒಪ್ಪಣ್ಣಂಗೆ, ಬೇಜಾರವೂ ಆತು.
ಬೇಜಾರ ಎಂತಕೆ?

~

ಸ್ವರ್ಗಲ್ಲಿ ಇದ್ದದಡ ಆ ಗಂಗೆ ಮದಲಿಂಗೆ.
ಸೂರ್ಯವಂಶದ ಭಗೀರಥ ಹೇಳ್ತೋನು ಭಯಂಕರದ ತಪಸ್ಸುಮಾಡಿ ಭೂಲೋಕಕ್ಕೆ ಬರುಸಿದ್ದಡ. ಭಗೀರಥಂದಾಗಿ ಬಂದ ಕಾರಣ ಭಾಗೀರಥಿ ಹೇಳಿಯೂ ಹೇಳ್ತವು. ಸ್ವರ್ಗಂದ ಭೂಮಿಗೆ ಹಾರಿ ಬಪ್ಪಗ ಪೆಟ್ಟಾಗದ್ದ ಹಾಂಗೆ ಶಿವದೇವರು ಜೆಡೆಬಿಡುಸಿ ನಿಂದದಡ, ಹಾಂಗೆ ಸೀತ ಶಿವನ ಜೆಡೆಗೆ ಬಿದ್ದು, ಅಲ್ಲಿಂದ ಹರಾಗಿ – ನಿಧಾನಕ್ಕೆ ಮುಂದುವರಿವದು. ಹಾಂಗೆಲ್ಲ ನಮ್ಮ ಅಜ್ಜಂದ್ರ ಕತೆಗೊ, ಪ್ರತೀತಿಗೊ.
ಗಂಗೆ ಹೇಳ್ತ ಸಾವಿರಾರು ಮೈಲು ಉದ್ದದ ಜೀವಾಮೃತ ಹುಟ್ಟುದು ಹಿಮಾಲಯಲ್ಲಿ. ಭಾಗೀರಥಿ, ಜಾಹ್ನವಿ ಹೇಳಿ ಮದಲುಗೊಂಡು ನೂರೆಂಟು ಹೆಸರುಗಳ ಹೊಂದಿದರೂ ಗಂಗೆ ಹರಿವದು ಒಂದೇ ಹಾಂಗೆ!
ಹುಟ್ಟಿದ ಜಾಗೆಂದ ಹರಿವಾಗ ಸಣ್ಣ ಕೂಚಕ್ಕನ ಹಾಂಗೆ, ತುಂಬಾ ಚುರ್ಕು – ಗುಡ್ಡೆ ಎಡೆಲಿ, ಕಲ್ಲುಗಳ ಇಡ್ಕಿಂಡು – ದೂಡಿಗೊಂಡು ಆಟ ಆಡಿಗೊಂಡು ಬಪ್ಪದು. ಅಲ್ಲಿಂದ, ಇಳುದು ಇಳುದು ಬಂದು – ಬಾಲ್ಯದ ಆಟಂಗೊ ಎಲ್ಲ ಮುಗುಶಿ – ಮುಂದೆ ಸಮತಟ್ಟಿನ ಜಾಗೆಗೆ ಎತ್ತುವಗ ಗಂಭೀರ – ಪ್ರಬುದ್ಧ ಕೂಸಿನ ಹಾಂಗೆ ಹರಿವದು ಗಂಗೆಯ ಹಿರಿಮೆ.

ಅಲ್ಲಿಂದಲೂ ಮುಂದೆ, ಇನ್ನೂ ಹಲವು ನೀರುಗಳ, ನದಿಗಳ ಸೇರ್ಸಿಗೊಂಡು – ದೊಡ್ಡ ಅಮ್ಮನ ಹಾಂಗೆ, ಗಂಭೀರ ಹೆಮ್ಮಕ್ಕಳ ಹಾಂಗೆ – ಹರಿವದು ಗಂಗೆಯ ಗರಿಮೆ.
~

ವಿಷಯ ಇಪ್ಪದು ಇಲ್ಲಿಯೇ.
ಗುಡ್ಡೆಗಾಡು, ಹಿಮಾಲಯಲ್ಲಿ ಗಂಗೆ ಬಪ್ಪಗ ಚೆಂದಲ್ಲೇ ಇರ್ತು. ಕಪ್ಪು ಕಲ್ಲುಗಳ ಎಡೆಲಿ ಬೆಳಿಬೆಳಿ ಝರಿಗೊ ಆಗಿ ಹರುದು ಬಪ್ಪಗ ಪುಟ್ಟು ಕೂಚಕ್ಕ° ಬೆಳಿಹಲ್ಲು ತೋರ್ಸಿ ನೆಗೆಮಾಡಿಗೊಂಡು ಬಪ್ಪ ಹಾಂಗೇ ಕಾಣ್ತಡ. ಗಂಗೋತ್ರಿಂದ ತೊಡಗಿ ಹರಿದ್ವಾರದ ಒರೆಂಗೂ ಶುದ್ಧಾತಿಶುದ್ಧ ತಿಳಿನೀರು ತುಂಬಿದ ಚೆಂದದ ನದಿಯಾಗಿ ಹರುದು ಬತ್ತಡ ಗಂಗಕ್ಕ°. ಗಂಗಕ್ಕ° ಹರಿವಲೆ ಸುರು ಮಾಡಿದ್ದದು ನಿನ್ನೆಮೊನ್ನೆಂದ ಅಲ್ಲನ್ನೆ? ಸಹಸ್ರ ಸಹಸ್ರ ಒರಿಶಂದ ತನ್ನ ಪಥ ಬದಲುಸದ್ದೆ ತನ್ನದೇ ಗತಿಲಿ ಹರುದು ಬತ್ತಾ ಇದ್ದು. ಬಪ್ಪ ದಾರಿಲಿ ತನ್ನ ಪ್ರೀತಿ ಮಾಡಿ ಗವುರವ ತೋರುವೋರ, ಅಬ್ಬೆ ಹೇಳಿ ದಿನಿಗೆಳಿ ಅಬ್ಬೆಯ ಮೊಟ್ಟೆಲಿ ಆಡುವೋರ ಪ್ರೀತಿಲಿಯೇ ಸವರುತ್ತು. ತನಗೆ ದ್ರೋಹ ಬಗವೋರಿಂಗೆ ಕೂಡಾ ತನ್ನ ಪ್ರೀತಿಯ ತೋರ್ಸುದು ಗಂಗಕ್ಕನೇ ಅಲ್ಲದೋ?

ಗಂಗೆ ಹುಟ್ಟುತ್ತ ಜಾಗೆ ಹಲವಾರು ಸಹಸ್ರಮಾನಂದ ಪುಣ್ಯಭೂಮಿ. ಎಷ್ಟೋ ಜೆನ ಋಷಿಮುನಿಗ ಗಂಗೆಯ ಕರೆಲಿ ಮಿಂದು, ತಪಸ್ಸು ಮಾಡಿ ಮೋಕ್ಷದಾರಿಗೆ ಹೋಯಿದವು. ಅವರ ತಪಃಶಕ್ತಿಯನ್ನೂ, ಕಾಡಿನೆಡಕ್ಕಿಲಿ ಹರಿವಾಗ ಅಲ್ಲಿಯಾಣ ಗೆಡುಗಳ ಸತ್ವವನ್ನೂ ತೆಕ್ಕೊಂಡು ಅಬ್ಬೆ ಬಾಕಿ ಮಕ್ಕಳ ಮೇಲೆ ಹರಿಸುಲೆ ತಪ್ಪ ಹಾಂಗೆದೇ ನವಗೆ ಕಾಣುತ್ತು. ಇದೇ ಗಂಗೆಲಿ ಅಬ್ಬೆಯ ಪ್ರೀತಿಲಿ ಮಿಂದು ಭಾವುಕರಾಗಿ ನಮ್ಮ ಆದಿ ಭಗವತ್ಪಾದ ಶಂಕರಾಚಾರ್ಯರು ಬರದ ಗಂಗಾ ಸ್ತೋತ್ರ ಒಪ್ಪಣ್ಣಂಗೆ ಭಾರೀ ಕೊಶಿ. 🙂

ಹುಟ್ಟಿದಲ್ಲಿಂದ ಸಮುದ್ರಕ್ಕೆ ಸೇರುವಲ್ಲಿವರೆಗೆ ಎರಡುಸಾವಿರಕ್ಕೂ ಹೆಚ್ಚು ಕಿಲೋಮೀಟರು ಉದ್ದಕ್ಕೆ ಹರುದರೂ ಗಂಗಮ್ಮನ ಕೃಪೆ ಅಷ್ಟೇ ಅಗಲಕ್ಕೂ ಹರಡಿದ್ದು. ಅಂಬಗ ಹುಟ್ಟಿದಲ್ಲಿಂದ ಅಕೇರಿವರೆಗೂ ಹಾಂಗೇ ಇರ್ತೋ. ಗಂಭೀರಳಾಗಿ ಹರುದ ಮತ್ತೆ?

ಅಲ್ಲಿಂದ ಮತ್ತೆ? ಅದೇ ಸಮಸ್ಯೆ ಆದ್ದು.

~

ಜೋರಿಪ್ಪೋರಿಂಗೆ ಉಪದ್ರ ಇಲ್ಲೇಡ, ಪಾಪ ಇಪ್ಪೋರಿಂಗೇ ಜೆನಂಗೊ ಎಡಿಗಾಷ್ಟು ಉಪದ್ರ ಮಾಡುದಿದಾ!
ಹಾಂಗೇ – ಗಂಗೆ ಯೇವಗ ವಿಶಾಲವಾಗಿ, ನಿಧಾನಕ್ಕೆ, ನೀರಿನ ನಿಧಿಯಾಗಿ ಹರಿತ್ತೋ, ಅಷ್ಟಪ್ಪಗಳೇ ಅದರ ಮಕ್ಕಳ ಉಪದ್ರ ಸುರು ಅಪ್ಪದು!
ಬಳಕೆ ಮಿತಿಲಿದ್ದರೆ ಅದು ಉಪದ್ರ ಅಲ್ಲ, ಯೇವಗ ಮಿತಿಮೀರುತ್ತೋ, ಅದು ಉಪದ್ರವೇ ಆಗಿ ಹೋವುತ್ತು.
ಹಾಂಗೇ ಈ ಗಂಗೆಯ ವಿಷಯಲ್ಲಿಯೂ.

ಮನುಷ್ಯನ ನಿತ್ಯೋಪಯೋಗಕ್ಕೆ, ಕೃಷಿ ಇತ್ಯಾದಿ ಅಗತ್ಯ ಚಟುವಟಿಕೆಗೊಕ್ಕೆ ಮಾಂತ್ರ ಗಂಗೆಯ ನೀರು ಬೇಕಾದ್ದಲ್ಲ, ಬದಲಾಗಿ – ದೊಡ್ಡ ದೊಡ್ಡ ಕಾರ್ಖಾನೆ, ವಿಷಯುಕ್ತ ರಾಸಾಯನಿಕಂಗಳ ಬಿಡ್ತ ಕೈಗಾರಿಕೆಗೊ – ಇದೆಲ್ಲದಕ್ಕೂ ಗಂಗಾತಟವೇ ಆಶ್ರಯ ಆತು. ಗಂಗೆಯ ಒಂದು ಮಗಳಿದ್ದಲ್ಲದೋ – ನರ್ಮದೇ ಹೇದು. ಅದರ ನೀರಂತೂ – ಕಪ್ಪು ನೀರು ಆಗಿ ಹೋಯಿದಡ, ಕೊಳಚ್ಚಿಪ್ಪು ಭಾವ ಹೇಳಿತ್ತಿದ್ದ. ಕಪ್ಪು ನೀರು ಆಯೇಕಾರೆ ಯೇವ ಮಟ್ಟಿನ ವಿಷ ಅದಕ್ಕೆ ಬೆರಕ್ಕೆ ಆಗಿರೇಕು ಹೇದು ಒಂದರಿ ಚಿಂತನೆ ಮಾಡಿ!!

ಇದೆಲ್ಲ ವಿಷಂಗಳ, ವಿಷಯಂಗಳ ಒಡಲಿಲಿ ತುಂಬಿಗೊಂಡ ಗಂಗೆ ಮಾಂತ್ರ – ಮಕ್ಕಳ ಎಲ್ಲಾ ತಪ್ಪನ್ನೂ ನುಂಗಿದ ಅಬ್ಬೆಯ ಹಾಂಗೆ ನಿಧಾನಕ್ಕೆ ಸಮುದ್ರದ ಹೊಡೆಂಗೆ ಹೋವುತ್ತಾ ಇದ್ದು.

~

ಕಾಶಿಗೆ ಹೋಪದು ಹೇದು ಅಜ್ಜಂದ್ರು ಮದಲಿಂಗೇ ಹೋಕು. ಎಷ್ಟು ಜೆನ ನಿಜವಾಗಿ ಕಾಶಿಗೆ ಎತ್ತಿಗೊಂಡಿತ್ತಿದ್ದವು ಹೇದು ನವಗರಡಿಯ. ಆದರೆ, ಕಾಶಿಗೆ ಹೋಗಿ ಜೀವಬಿಡುದು ಹೇದು ಹೇಳಿಕೆ ಮದಲಿಂಗೇ ಇದ್ದು. ಹೇದರೆ, ಕಾಶಿ ವಿಶ್ವನಾಥನ ಸನ್ನಿಧಿಲಿ ಜೀವಬಿಟ್ಟು, ಶಿವೈಕ್ಯ ಆದರೆ ಮತ್ತೆ ಮೋಕ್ಷ – ಹೇದು ಲೆಕ್ಕ. ಮೋಕ್ಷಕ್ಕೆ ಬೇರೆ ಉದಾಹರಣೆ ಬೇಕೋ, ಗಂಗಾತಟಲ್ಲೇ ಭಸ್ಮ ಆಗಿ ಮುಗಿವದಿದಾ.

ಈಗೀಗ ಎಲ್ಲೋರಿಂಗೂ ಅಂಬೆರ್ಪೇ – ಗಂಗಾತಟಲ್ಲಿ ಚಟ್ಟ ಇಪ್ಪದಪ್ಪು, ಚಟ್ಟಲ್ಲಿ ಮನುಗುಸ್ಸೂ ಅಪ್ಪು; ಆದರೆ ಆ ದೇಹ ಪೂರ್ತಿ ಭಸ್ಮ ಅಪ್ಪಷ್ಟೂ ಪುರುಸೊತ್ತಿಲ್ಲೆ, ತೆಗದ್ದು ಗಂಗಾಮಾತೆಯ ಪ್ರವಾಹಕ್ಕೆ ಇಡ್ಕಿ ಬಿಡ್ತವು.

ಅದರೊಟ್ಟಿಂಗೆ ಶವದ ಮೇಗಾಣ ಹೂಗುಗೊ, ಬಾಳೆದಂಡುಗೊ – ಹೀಂಗಿರ್ಸ ಹಲವು ಕೊಳವಂತ ವಸ್ತುಗಳನ್ನೂ ಸೇರ್ಸಿ.

~

ಆಸ್ತಿಕ ಭಕ್ತರು ಇದೇ ನೀರಿಲಿ ಇದಾ – ಮುಳುಗಿ ಏಳುಸ್ಸು. ತನ್ನ ಎಲ್ಲಾ ಪಾಪವ ಪರಿಹಾರ ಮಾಡ್ತ°, ತನ್ನ ದೈಹಿಕ-ಮಾನಸಿಕ ಶರೀರವ ಶುದ್ಧಿ ಮಾಡ್ತ ಅಬ್ಬೆ ಗಂಗೆ – ಹೇದು ಶ್ರದ್ಧೆಲಿ ಬಂದು ಮುಳುಂಗಿರೆ, ಅವಕ್ಕೆ ಸಿಕ್ಕುದು ಹೀಂಗಿರ್ಸ ಅನಿರೀಕ್ಷಿತ ಆಘಾತಂಗೊ!

~

ಯೇವ ಗಂಗೆ ಮಕ್ಕಳ ಮೈಯ ಶುದ್ಧ ಮಾಡ್ತೋ,
ಯೇವ ಗಂಗೆ ಪ್ರಶಾಂತವಾಗಿ, ಗಂಭೀರವಾಗಿ ಹರುದು ನಿಷ್ಕಲ್ಮಶವಾಗಿ ಹರಿತ್ತೋ,
ಯೇವ ಗಂಗೆ ತರತರಲವಾಗಿ ಅಲೆ ಅಲೆಯಾಗಿ ನೆಗೆನೆಗೆಲಿ ಹರಿತ್ತೋ,
ಯೇವ ಗಂಗೆ ಹಿಂದೂ ಸಂಸ್ಕಾರಲ್ಲಿ ಅತ್ಯಂತ ಶುದ್ಧ, ಅತ್ಯಂತ ಪವಿತ್ರ, ಅತ್ಯಂತ ಶ್ರೇಷ್ಠ – ಹೇದು ಸ್ಥಾನ ಪಡಕ್ಕೊಂಡಿದೋ,
ಯೇವ ಗಂಗೆಯ ಬಿಂದು ಮನುಷ್ಯರ ಕೊನೆಗಾಲಲ್ಲಿ ದೊಂಡಗೆ ಬಿದ್ದರೆ ಸ್ವರ್ಗಕ್ಕೆ ಕಳುಸೊತ್ತೋ,
ಯೇವ ಗಂಗೆ ಸದಾಶುಚಿಯೋ,
ಆ ಅಮ್ಮಂಗೆ ಈಗ ಅಶುದ್ಧ, ಅಸಹ್ಯ, ಅಮೇಧ್ಯ, ಅತ್ಯಂತ ಕುರೆ ವಸ್ತುಗೊ ತುಂಬಿ ನಾರಿಗೊಂಡಿದ್ದತ್ತು.

ಅಬ್ಬೆಗೆ ಮಗನ ಕೃತಜ್ಞತಾಪೂರ್ವಕ ಭಕ್ತಿಭಾವದ ನಮನ..
ಅಬ್ಬೆಗೆ ಮಗನ ಕೃತಜ್ಞತಾಪೂರ್ವಕ ಭಕ್ತಿಭಾವದ ನಮನ..

ಎಡಿಗಾಷ್ಟು ಸಮಯ ತಡದತ್ತು. ಆದರೆ, ಇನ್ನು ಎಡಿಯಲೇ ಎಡಿಯ – ಹೇದು ಕಂಡತ್ತೋ ಏನೋ.
ಹಾಂಗಾಗಿ,  ಒಬ್ಬ° ಪ್ರಬಲಶಾಲಿ ಮಗನ ಹುಡ್ಕಿ, ವಾರಣಾಸಿಂದ ನಿಂಬಲೆ ಆಯ್ಕೆಮಾಡಿ, ಅವನೇ ಭಾರತಕ್ಕೆ ಪ್ರಧಾನಿಯಾಗಿ ಇಪ್ಪ ಹಾಂಗೆ ಅನುಗ್ರಹಿಸಿ, ಹಾರೈಸಿ, ವರ ಕೊಟ್ಟು ಕಳುಸಿದ ಹಾಂಗೆ ಮಾಡಿದ್ದು ಆ ಗಂಗಮ್ಮ.

~

ಹಾಂಗಾಗಿ, ವಾರಣಾಸಿಂದ ಆಯ್ಕೆಆಗಿ ಬಂದ ಮೋದಿ ಅಜ್ಜ°– ಅದರ ಕೃತಜ್ಞತಾಪೂರ್ವಕವಾಗಿ, ಆ ಅಮ್ಮನ ಆಶೀರ್ವಾದ ಸ್ಮರಣೆಗಾಗಿ ಮೊನ್ನೆ ಸರ್ಕಾರ ಆರಂಭ ಮಾಡುವಗ “ಗಂಗಾ ಶುದ್ಧೀಕರಣ” ಹೇಳ್ತ ಹೊಸಾ ಕಾರ್ಯಾನುಷ್ಠಾನಗೊಳುಸುಲೆ ಆರಂಭ ಮಾಡಿದ್ದಾಡ.
ಮೋದಿ ಅಜ್ಜ ತನ್ನ ಜವ್ವನಲ್ಲಿ ಹಿಮಾಲಯಲ್ಲಿ ಇದ್ದದಡ. ಹಾಂಗೆ ಅಲ್ಲಿಪ್ಪಗ ಗಂಗೆಯ ಅಬ್ಬೆ ಹೇಳಿ ಮನಸ್ಸಿಲಿ ಪ್ರತಿಷ್ಠಾಪನೆ ಮಾಡಿದ್ದಿಕ್ಕು. ಅಬ್ಬೆಯ ಈಗಾಣ ರೂಪ ಕಂಡು ಅಬ್ಬೆಗೆ ತನ್ನ ಋಣ ಸಮರ್ಪಣೆ ಮಾಡ್ಲೆ ಈಗ ಒಂದು ದೊಡ್ಡ ಅನುಷ್ಠಾನ ಮಾಡಿ ಎಲ್ಲೋರೂ ಇದರಲ್ಲಿ ಅವರವರ ಕೆಲಸ ಮಾಡ್ತ ಪೂರ್ಣ ಅವಕಾಶ ಕೊಡುತ್ತಾ ಇಪ್ಪದಡ.
ವೈರಾಗಿ, ಸನ್ಯಾಸಿನಿ ಉಮಾಭಾರತಿ – ಹೇಳ್ತ ಸಾಧ್ವಿಯ ಈ ವಿಷಯಕ್ಕೆ ಜೆಬಾದಾರಿಕೆ ಕೊಟ್ಟು ಕೆಲಸ ಮುಂದುವರುಸುಲೆ ಕೇಳಿಗೊಂಡಿದಾಡ. ಹಾಂಗಾಗಿ, ಸದ್ಯಲ್ಲೇ, ಬೇಗಲ್ಲೇ ಗಂಗಾಮಾತೆಯ ಕೊಳೆಗೆ ಮುಕ್ತಿ ಸಿಕ್ಕುಗು – ಹೇಳ್ತದು ನಿರೀಕ್ಷೆ.

~

ಶುದ್ಧ ಮಾಡೆಕ್ಕು ಹೇಳಿದ ಕೂಡ್ಳೇ ಶುದ್ಧಮಾಡ್ಳೆ ಅದೆಂತ ಮಾಷ್ಟ್ರುಮಾವನಲ್ಲಿಂದ ಪೂಜಾರಿಗೊ ಕೊಂಡೋಪ ಪುಣ್ಯನೀರಿನ ಚೆಂಬೋ? ಅಲ್ಲ.
ಮಳೆಗಾಲಲ್ಲಿ ಬಂದು ಸೇರ್ತ ಮಳೆನೀರಿಂಗೆ, ಅದರ್ಲಿ ಬಪ್ಪ ಕಸವಿಂಗೆ ವೆವಸ್ತೆ ಆಯೆಕ್ಕು.
ನದಿಯ ಸುತ್ತು ಹಬ್ಬಿಗೊಂಡು ಬಂದ ಕಾರ್ಖಾನೆಗೊಕ್ಕೆ ವೆವಸ್ತೆ ಆಯೇಕು. ಅವುಗಳಿಂದ ವಿಷಕಾರಕ ರಾಸಾಯನಿಕಂಗೊ ಹೊಳೆಗೆ ಬಾರದ್ದ ಹಾಂಗೆ ನೋಡಿಗೊಳೇಕು.
ಗಂಗೆಯ ಸುತ್ತಮುತ್ತ ಇಪ್ಪ ಗೋಹತ್ಯಾ ಕೈಗಾರಿಕೆಗಳ ನಿಲ್ಲುಸಿ, ಗೋರಕ್ತ ಗಂಗೆಗೆ ಬಪ್ಪದರ ತಡೇಕು.
ಎಲ್ಲಕ್ಕಿಂತ ಮುಖ್ಯವಾಗಿ ಗಂಗೆಯ ಸುತ್ತ ಹರಡಿಗೊಂಡಿಪ್ಪ ಹರಿದ್ವಾರ, ಪ್ರಯಾಗ, ವಾರಣಾಸಿ, ಪಾಟ್ಣಾ – ಹೀಂಗಿರ್ಸ ಪೇಟೆಪಟ್ಟಣಂಗಳ ಕೊಳೆ-ಕೊಳಚ್ಚೆ-ಕುರೆಗಳ ಸರಿಯಾದ ವಿಲೇವಾರಿಗೆ ವೆವಸ್ತೆ ಆಯೇಕು.
ಯಬ್ಬಾ, ಎಷ್ಟೆಲ್ಲ ತಲೆಬೆಶಿಗೊ.
ಇದರಿಂದ ಮದಲೇ ಹಲವು ಸರ್ತಿ ಗಂಗೆಯ ಶುದ್ಧಮಾಡ್ಳೆ ಹೆರಟಿದವಡ. ಆದರೆ, ಅವರ ಕಿಸೆ ಶುದ್ಧ ಆತಷ್ಟೇ ವಿನಃ ಗಂಗಮ್ಮ ಹಾಂಗೇ ಬಾಕಿ – ಹೇದು ಕೊಳಚ್ಚಿಪ್ಪುಭಾವ° ನೆಗೆಮಾಡಿತ್ತಿದ್ದ.

ನೋಡುವೊ°, ಈಗ ಆದರೂ ಆ ಗಂಗಾಮಾತೆ ಶುದ್ಧ ಆವುತ್ತೋ ಏನೋ!
ಅದೇನೇ ಇರಳಿ, ಮಕ್ಕಳ ಶುದ್ಧಮಾಡೇಕಾದ ಅಮ್ಮನನ್ನೇ ಈಗ ನಾವು ಶುದ್ಧಮಾಡಿ ಮಡಿಕ್ಕೊಳೇಕಾದ ಅನಿವಾರ್ಯತೆ ಬಂದದು ನಮ್ಮವರ ಅಸಡ್ಡೆಯ ಪರಮಾವಧಿ ಅಲ್ಲದ್ದೆ ಬೇರೆಂತೂ ಅಲ್ಲ. ಅಲ್ಲದೋ?

~

ನಿನ್ನೆ ವಿಶ್ವ ಪರಿಸರ ದಿನ ಅಡ.

ಈ ಸರ್ತಿ ಪರಿಸರ ದಿನದ ಧ್ಯೇಯ ವಾಕ್ಯ ‘Raise Your Voice, Not the Sea Level’ (ನಿಂಗಳ ಸ್ವರ ಏರುಸಿ, ಸಮುದ್ರಮಟ್ಟವ ಅಲ್ಲ) ಹೇಳಿ ಕೊಳಚ್ಚಿಪ್ಪು ಭಾವ° ಹೇಳಿದ°. ಏರುತ್ತ ಇಪ್ಪ ವಾತಾವರಣದ ಬೆಶಿಗೆ ಹಿಮಕಲ್ಲುಗ ಕರಗಿ ಸಮುದ್ರ ಏರ್ಸುದು ಅಲ್ಲ, ಮದಲಾಣೋರು ನವಗೆ ಹೇಂಗೆ ಕೊಟ್ಟಿದವೋ ಹಾಂಗೇ ನಾವು ನಮ್ಮ ಮಕ್ಕೊಗೆ ಹಸ್ತಾಂತರ ಮಾಡೆಕ್ಕಪ್ಪದು ಹೇಳಿ ವಿವರುಸಿ ಹೇಳಿದ°.

ದೇಶದ ನದಿಗಳೂ ಪರಿಸರದ ಮುಖ್ಯ ಅಂಗ. ಗಂಗಮ್ಮನ ಶುದ್ಧ ಮಾಡ್ತ ಬಗ್ಗೆ ದೇಶಲ್ಲಿ ಚೈತನ್ಯ ಬಂದರೆ, ಪರಿಸರ ದಿನವ ಯಶಸ್ವಿಯಾಗಿ ಆಚರಣೆ ಮಾಡಿದ ಹಾಂಗೆ. ಅಲ್ಲದೋ?

ಪರಿಸರದ ದಿನ ಮಾಂತ್ರ ನಮ್ಮ ಪ್ರಕೃತಿಯ ನೋಡಿಗೊಂಬ ದಿನ ಆಗದ್ದೆ ನಿತ್ಯವೂ ಪರಿಸರದ ದಿನ ಆಗಲಿ. ಅಬ್ಬೆ ನವಗೆ ಕೊಡುದರ ಇರುವಾರ ಅಬ್ಬೆಗೇ ಕೊಡುವ ಹಾಂಗೆ, ನಮ್ಮ ಬೆಳವಣಿಗೆಗೆ ಕಾರಣ ಆದ ಮಣ್ಣಿನ, ನೀರಿನ ಅಬ್ಬೆಗೊಕ್ಕೆ ನಾವುದೇ ಬೆಳವಲೆ, ಅವರ ನಿರಂತರ ಮಾಡ್ಲೆ ನಮ್ಮಂದಾದ ಸಕಾಯ ಮಾಡುವೊ ಹೇಳಿ ಒಪ್ಪಣ್ಣನ ಆಶಯ.

~

ಒಂದೊಪ್ಪ: ವಿಷ ಕೊಟ್ರೂ ಮಾತಾಡದ್ದೆ ನುಂಗೇಕಾರೆ ಅಮ್ಮನೇ ಗಂಗಮ್ಮನೇ ಆಯೆಕ್ಕಷ್ಟೆ.

22 thoughts on “ಸರ್ವಶುದ್ಧಿಯ ಶಕ್ತಿ ಇಪ್ಪ ಗಂಗಮ್ಮನ ಅಶುದ್ಧದ ಕತೆ..!

  1. ಗಂಗಮ್ಮ ಶುದ್ಧ ಆದಮೇಲೆ 30-40ತಲೆಮಾರುಗಳ ಹಿಂದೆ ಎಂಗಳ ಹಿರಿಯೋರು ನೆಲೆಸಿದ್ದ ಎಂಗಳ ಮೂಲ ಸ್ಥಳ ವಾರಣಾಸಿಗೆ ಹೋಗಿ ಗಂಗೆಲಿ ಮಿಂದು ವಿಶ್ವನಾಥನ ದರುಶನ ಮಾಡಿ ಜನ್ಮ ಜನ್ಮಾಂತರಗಳ ಕರ್ಮವ ಕಳೆದು ಬರಕ್ಕು ಹೇಳುವ ಆಶೆ ಹುಟ್ಟಿದ್ದು ಎನಗೆ ಗಂಗೆಯ ಶುದ್ಧೀಕರಣದ ಸುದ್ದಿ ಕೇಳಿ ,ಸುದ್ದಿಯ ನಿರೂಪಣೆ ಲಾಯ್ಕ ಆಯಿದು ,ಒಳ್ಳೆ ಸುದ್ದಿಯ ಚೆಂದಕ್ಕೆ ಬಿತ್ತರಿಸಿದ್ದಕ್ಕ್ಕೆ ಧನ್ಯವಾದಂಗ

  2. ಗಂಗೊತ್ರಿನ್ದಲೂ ಮೇಲೆ ಗೋಮುಖಲ್ಲಿ ಅಬ್ಬೆ ಗಂಗೆಯ ಮೋರೆ ನೋಡಿ ಕಾಶಿಲಿ ಮತ್ತೆ ನೋಡಿದರೆ ಎದೇ ಒದೇಗು 🙁 ಎಲ್ಲಾರು ಎದಿಗಾದಷ್ಟು ಕೊಳಕ್ಕು ಮಾದುವವೇ. ಸರಕಾರ ಕೆಲಸ ಮಾಡಲಿ. ಒತ್ತಿನ್ಗೆ ಜನರ ಮನಸ್ಸೂ ಶುದ್ದ ಆಗಿರಲಿ. ಅಬ್ಬೆ ಗಂಗೆಯ ಬಗ್ಗೆ ನೆನಪ್ಪು ಮಾಡಿದ್ದಕ್ಕೆ ಒಪ್ಪಣ್ಣಂಗೆ ಆಭಾರಿ.

    1. ರಾಮಚಂದ್ರಮಾವಾ,
      ಅಪ್ಪಡ – ಹಿಮಾಲಯದ ಬುಡಲ್ಲಿ ಎಷ್ಟು ನೆಗೆನೆಗೆಮಾಡಿ ಚೆಂದಕ್ಕೆ ಹರಿತ್ತೋ, ಅದೇ ಕಾಶಿಗೆತ್ತುವಗ ಎಷ್ಟೆಡಿತ್ತೋ ಅಷ್ಟು ಅಶುದ್ಧ ಆಯಿದಾಡ!
      ಬೇಗ ಶುದ್ಧೀಕರಣ ಕಾರ್ಯ ಆಗಲಿ ಹೇದು ನಮ್ಮ ಹಾರೈಕೆ.

    1. ಮಂಗ್ಳೂರುಮಾಣಿ,
      ಪರೀಕ್ಷೆ ಎಲ್ಲ ಮುಗುದು ಪುರುಸೋತು ಮಾಡಿಗೊಂಡು ಪ್ರೀತಿಲಿ ಬಂದ್ಸು ಕುಶೀ ಆತು.
      ಶುದ್ದಿಗೊ ಹೇಳಿ ಎಲ್ಲೊರಿಂಗೂ ಕೊಶಿಮಾಡು ಆತಾ?

      ಗಂಗೆ ಶುದ್ಧ ಆಗಲಿ, ಗಂಗಾಜಲ ಕುಡುದು ನಾವುದೇ ಶುದ್ದ ಅಪ್ಪೊ. ಅಲ್ದಾ?
      ಹರೇರಾಮ

  3. ಪರಿಸರ ದಿನಾಚರಣೆಯ ಸಂದರ್ಭಲ್ಲಿ ಸಮಯೋಚಿತ ಸುದ್ದಿ .
    ಎಲ್ಲವನ್ನೂ ಸರಕಾರ ಮಾಡಕ್ಕು ಹೇಳಿ ಬಯಸುವ ಬದಲು ಪ್ರಜೆಗೊ, ತಮ್ಮ ತಮ್ಮ ಕರ್ತವ್ಯ೦ಗಳನ್ನೂ ಅರ್ತು ಗೊಂಡರೆ ಮಾನ್ಯ ಪ್ರಧಾನ ಮಂತ್ರಿಗಳ ನಾಯಕತ್ವಲ್ಲಿ ಭಾರತ ಎಲ್ಲಾ ರೀತಿಲಿಯು ಮುಂದುವರಿಗು ಹೇಳಿ ಎನಗನ್ನ್ಸುತ್ತು .
    ಒಪ್ಪಣ್ಣ ಬರದ ”ಒಂದೊಪ್ಪ” — ”ವಿಷ ಕೊಟ್ರೂ ಮಾತಾಡದ್ದೆ ನುಂಗೇಕಾರೆ ಗಂಗಮ್ಮನೇ ಆಯೆಕ್ಕಷ್ಟೆ” ಹೇಳಿ ಬರದರೆ ಹೆಚ್ಚು ಅರ್ಥಪೂರ್ಣ ಆವುತ್ತು . ಬರೆ ”ಅಮ್ಮ” ಹೇಳಿ ಬರದರೆ ನಮ್ಮ ಹೆತ್ತಮ್ಮ ಹೇಳಿ ಅರ್ಥ ಬತ್ತು .
    ಹೆತ್ತಮ್ಮಂಗೆ ಮಕ್ಕೊ ವಿಷ ಕೊಡುಗು ;ಅಮ್ಮ ಅದರ ಮಾತಡದ್ದೆ ಕುಡಿಗು ಹೇಳುವ ಅರ್ಥ ಬಪ್ಪ ಹಾಂಗೆ ಇದ್ದು ಆ ವಾಕ್ಯ .

    1. @ ಒಪ್ಪಣ್ಣ
      ಮಾತೃ ದೇವೋ ಭವ

      ಆನು ಎನ್ನ ಅಮ್ಮಂಗೆ ಮಗಳಾಗಿಯೂ ಎನ್ನ ಮಕ್ಕೊಗೆ ಅಮ್ಮ ಆಗಿಯೂ ಅನುಭವ ಇಪ್ಪದರಿಂದ ಮೇಲಾಣ ಅಭಿಪ್ರಾಯ ಬರದ್ದು . ಒಪ್ಪಣ್ಣ ಪ್ರತಿಕ್ರಿಯಿಸುಗು ಹೇಳುವ ನಿರೀಕ್ಷೆ ಇದ್ದತ್ತು .ಈ ವರೆಗೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲೆ. ಇಲ್ಲಿ ಯಾವದೇ ದ್ವೇಷಂದ ಬರವದಲ್ಲ . ಇದು ಎನ್ನ ಭಿನ್ನಾಭಿಪ್ರಾಯ ಆನು ಈ ರೀತಿ ವ್ಯಕ್ತ ಪಡಿಸುದು ಮತ್ತು ಅದಕ್ಕೆ ಉತ್ತರವ ನೀರೀಕ್ಷೆ ಮಾಡ್ತೆ .

      ೧) ಒಪ್ಪಣ್ಣ ಬರವ ಒಂದೊಪ್ಪದ ಉದ್ದೇಶ ಎಂತರ ?

      ೨) ಒಪ್ಪಣ್ಣ೦ಗೆ ಅಮ್ಮನ ಸ್ಥಾ ನಕ್ಕೆ ಇಪ್ಪ ಬೆಲೆಯ ಅರ್ಥ ಮಾಡ್ಸಲೆ ಎನ್ನ ಪ್ರಯತ್ನ . ಓದುವ ಎಲ್ಲೋರೂ ಅವರವ ಅಮ್ಮನ ಒಂದರಿ ನೆಂಪು ಮಾಡಿಗೊಳ್ಳಿ .

      ಇದು ಅವತಾರವಾದಿಗೋ(ನಂಬುವವಕ್ಕೆ ) ಹೇಳಿ ಕೆಲವು ಜನ೦ಗೊ ನಂಬುವಂತಹ ಶ್ರೀ ರಾಮಕೃಷ್ಣಪರಮ ಹಂಸರ ಮಾತು —”ನಾನು ನನ್ನ ತಾಯಿಯನ್ನು ಹೂವು ಚಂದನಗಳಿಂದ ಪೂಜಿಸುತ್ತಿದ್ದೆ . ಜಗಜ್ಜನನಿಯೇ ನಮಗೆ ಜನ್ಮವೀಯುವ ತಾಯಿಯಾಗಿ ಜನ್ಮ ತಾಳುತ್ತಾಳೆ ” ( ಶ್ರೀ ರಾಮಕೃಷ್ಣ ವಚನ ವೇದ ಭಾಗ -II — ಪುಟ ಸಂಖ್ಯೆ ೩೮೫)ಅವರ ಬಾಳ ಸಂಗಾತಿಯಾದ ಶ್ರೀ ಮಾತೆ ಶಾರದಾ ದೇವಿಯನ್ನೂ ಅವು ಪೂಜೆ ಮಾಡಿ ಪೂಜ್ಯ ಸ್ಥಾನಲ್ಲೇ ಮಡುಗಿದ್ದವು .ಹಾಂಗೆ ತನ್ನ ಶಿಷ್ಯರಿಂಗೂ ಪರ ಸ್ತ್ರೀಯರ ಮಾತೃ ಸ್ವರೂಪಲ್ಲಿ ಕಾಣೆಕ್ಕು ಹೇಳಿ ತಾನು ಮಾಡಿ ತೋರ್ಸಿ ಕೊಟ್ಟಿದವು . ಬೇರೆ , ಬೇರೆ ಮತ ,ಧರ್ಮ೦ಗಳ ಅನುಷ್ಟಾನ ಮಾಡಿ ಸಾಕ್ಷಾತ್ಕಾರ ಪಡಕೊಂಡ ದ್ರಷ್ಟಾರ . ಆ ಸಂಧರ್ಭಲ್ಲಿ ಅವಕ್ಕೆ ಅಮ್ಮ ಬದಲಿದ್ದಿಲ್ಲೆ ಹೇಳುದು ಗಮನಿಸೆಕ್ಕಾದ ಅಂಶ .

      ಸನ್ಯಾಸ ಆಶ್ರಮ ತೆಕ್ಕೊಂಡ ಮತ್ತೆಯುದೆ ಸನ್ಯಾಸಿಗೋ ಮೊದಲು ಪೂರ್ವಾಶ್ರಮದ ಹೆತ್ತಮ್ಮನ ಕಾಲು ಹಿಡುದು ಆಶೀರ್ವಾದ ತೆಕ್ಕೊಳ್ತವಡ .ಅಪ್ಪನದ್ದು ತೆಕ್ಕೊ೦ಬಲೆ ಇಲ್ಲೆ (೨ ವರ್ಷದ ಮೊದಲು ಶ್ರೀ ಗುರುಗಳ ಬಗ್ಗೆ ಕನ್ನಡ ಪ್ರಭಲ್ಲಿ ಬಂದ ಲೇಖನಲ್ಲಿತ್ತು ) ”ಮಾತೃ ದೇವೋ ಭವ” ಹೇಳುದು ಇದಕ್ಕಲ್ಲದ? ಇದು ನಮ್ಮ ಸಂಸ್ಕ್ರುತಿ ಹೇಳಿ ಹೇಳುವ ಉಪನಿಷತ್ತಿಲಿ ಬಪ್ಪ ಮಾತು. ಶ್ರೀ ಶಂಕರಾಚಾರ್ಯರು ಸನ್ಯಾಸಿಯಾಗಿಯೆ ಪೂರ್ವಾಶ್ರಮದ ಹೆತ್ತಮ್ಮನ ಅಂತ್ಯಕ್ರಿಯೆ ನಡೆಸಿದ್ದು ಗೊಂತಿಕ್ಕು . ಅ೦ಬಗ ಹೆತ್ತಮ್ಮನ ಸ್ಥಾನದ ಗೌರವ ಎಂತ?
      ಭಗವದ್ ಗೀತೆಯ ವಿಭೂತಿಯೋಗಲ್ಲಿದೆ ಸ್ತ್ರೀಯರಲ್ಲಿ ತಾನಾರಗಿದ್ದೆ ಹೇಳಿ ಭಗವಂತ ಹೇಳ್ತ. ಇದೆಲ್ಲ ನಮ್ಮ ಸಂಸ್ಕೃತಿ ಅಲ್ಲದಾ ?ಒಪಣ್ಣನ ಬೈಲು ನಮ್ಮ ಭಾಷೆ,ನಮ್ಮ ಸಂಸ್ಕೃತಿ ಬೆಳೆಶುಲೆ , ಬೆಳಗುಲೆ ಇಪ್ಪದಲ್ಲದಾ ?

      . ಹೆತ್ತು , ಸಾಂಕುವ ಅನುಭವ ಯಾವ ಗೆಂಡು ಮಕ್ಕೊಗೂ ಇದ್ದು? . ಎನಗೂ ಆನು ಹೆಣ್ಣಾಗಿ ೨ ಮಕ್ಕಳ ಹೆತ್ತು ಅಮ್ಮ ಆಗಿ, ಮಕ್ಕಳ ಒಂದು ಹಂತಕ್ಕೆ ತಪ್ಪಗಳೆ ಎನ್ನ ಅಮ್ಮ೦ಗೆ ಆ ಕಾಲಲ್ಲಿ ಎಂಗಳ ಬೆಳೆಶುಲೆ ಎಷ್ಟು ಕಷ್ಟ ಆದಿಕ್ಕು ಹೇಳಿ ಅರ್ಥ ಆದ್ದು .ಒಪ್ಪಣ್ಣ ಈ ಸರ್ತಿ ಶುದ್ದಿಲಿ ಬರದ ಹಾಂಗೆ/ ಗ್ರೇಶಿದ ಹಾಂಗೆ ಒಂದೆರಡು ವರ್ಷ ಹಾಲು ಕೊಟ್ಟ ಮಾತ್ರಕ್ಕೆ ಅಮ್ಮನ ಜವಾಬ್ದಾರಿ ಮುಗಿತ್ತಿಲ್ಲೆ . ಈ ಜನ್ಮಲ್ಲಿ ತನ್ನದಾಗದ್ದ ಒಂದು ಅನುಭವಕ್ಕೆ ಒಪ್ಪಣ್ಣನ ತೀರ್ಮಾನ !!!ಅದುದೆ ಬಹಳ ಸುಲಭಲ್ಲಿ ದಿನಚರಿ ಬರದ ಹಾಂಗೆ !!

      ವಿವೇಕ ಇದ್ದು ವಿವೇಚನೆ ಮಾಡ್ಲೆ ಎಡಿಗಾದ ಯಾವ ಅಮ್ಮಂದ್ರುದೆ ವಿಷ ಹೇಳಿ ಗೊಂತಾಗಿ ಮಕ್ಕೊ ವಿಷ ಕೊಡುದರ ಮಾತಡದ್ದೆ ಕುಡಿಯವು . ಅವು ಮಕ್ಕಳ ತಿದ್ದುಗು . ತಿದ್ದದ್ದರೆ ಹಾಂಗಿಪ್ಪ ಮಕ್ಕೊ ಮುಂದೆ ಇಡೀ ಸಮಾಜಕ್ಕೆ ಕಂಟಕ . ಇದು ಯಾವ ಅಮ್ಮ ಆದರೂ ಮಾಡುವ ಮತ್ತು ಮಾಡೆಕ್ಕಾದ ಕರ್ತವ್ಯ .ಪ್ರಾಪ್ತ ವಯಸ್ಸು ಬಪ್ಪಗಳೂ, ಸಂದರ್ಭ ನೋಡಿಗೊಂಡು ಅಮ್ಮಂದರು ಬುದ್ದಿ ಹೇಳದ್ದರೆ , ತಿದ್ದದ್ದರೆ ಅದು ಧೃತ ರಾಷ್ಟ್ರನ ಕುರುಡು ವ್ಯಾಮೋಹವೇ ಅಕ್ಕು . ಮಕ್ಕೊ ಅದರ ತಿಲ್ಕೊಳ್ಳೆಕ್ಕಪ್ಪದು ಅವರ ಕರ್ತವ್ಯ .

      ಆನು ಮೊನ್ನೆ ಬರದು ತೋರ್ಸಿದ್ದು, ಇದರ ಬಗ್ಗೆ ಒಪ್ಪಣ್ಣ ಚಿಂತನೆ ನಡೆಶಲಿ ಹೇಳುವ ಉದ್ದೇಶಲ್ಲಿ . ಅಮ್ಮನ ಸ್ಥಾನಕ್ಕೆ ಅವಮಾನ ಅಪ್ಪದು ಬೇಡ ಹೇಳುವ ದೃಷ್ಟಿಲಿ . ಇದು ಒಪ್ಪಣ್ಣಂಗೆ ಅರ್ಥ ಆಗದ್ದದೋ ? ಉತ್ತರ ಕೊಡುವಷ್ಟು ಮುಖ್ಯ ವಿಷಯ ಅಲ್ಲ ಹೇಳಿ ಗಣನೆಗೆ ತೆಕ್ಕೊಳ್ಳದ್ದದೊ? ಅಲ್ಲಾ ಉತ್ತರ ಕೊಡುವ ನೈತಿಕತೆ ಇಲ್ಲೆಯೋ? For your kind ಇನ್ಫಾರ್ಮಶನ್, I am raising my voice in the form of letters (ಅಕ್ಷರ೦ಗಳ ಮೂಲಕ ).ಬಡತನ , ಮಾನಸಿಕ ವೇದನೆಗಳಿಂದ ನರಳುವ ಅಮ್ಮಂದ್ರು ಮಕ್ಕೊಗೇ ವಿಷ ಕೊಟ್ಟದಿಕ್ಕು . ಅದು ಬೇರೆ ವಿಷಯ. ಆನು ಅಮ್ಮನ ಸ್ಥಾನಲ್ಲಿ ಇದ್ದುಗೊಂಡು ಕೇಳ್ತಾ ಇದ್ದೆ . ಆನು ಬರದ್ದಲ್ಲಿ ತಪ್ಪು ಇದ್ದಾ ? ಇದ್ದರೆ ತೋರ್ಸಿ . ಸರಿ ಮಾಡ್ತೆ .

      ಒಪ್ಪಣ್ಣ೦ಗೆ ಮಕ್ಕಳ ಹೆತ್ತು ಮತ್ತು ಸಾಂಕಿದ ಅನುಭವ ಇಲ್ಲದ್ದ ಕಾರಣ ಮತ್ತು ಈ ಹೆತ್ತು , ಸಾಂಕಿದ ಅನುಭವ ಇಪ್ಪೋರು ಹೇಳುವ ಕಾರಣ ಒದೊ೦ಪ್ಪ ಬರದ್ದಲ್ಲಿ ಬದಲಾವಣೆ ತರೆಕ್ಕು ಹೇಳಿ ಎನ್ನ ಕಳ ಕಳಿಯ ವಿನಂತಿ . ಇಲ್ಲದ್ದರೆ ಹಾಂಗೆ ಬರದ್ದರ ಹಿಂದೆ ಇಪ್ಪ ಉದ್ದೇಶ ಎಂತ ಹೇಳಿ ತಿಳಿಶಿ ಕೊಡಿ . ಒಪ್ಪಣ್ಣ ಬರದ ಲೇಖನಕ್ಕೆ ಆನಗಿದ್ದರೆ ”ಗಂಗಮ್ಮನ ಶುದ್ದೀಕರಣ” ಹೇಳಿ ತಲೆ ಬರಹ ಕೊಡ್ತಿತೆ .

      ಒಂದೊಪ್ಪ :- ಗ್ರಾಸ್ಸ್ -ರೂಟ್ ಲೆವೆಲಿ೦ದ ಮಾತಾಡುವ ಅಮ್ಮಂದ್ರ ಮಾತಿಂಗೆ ಬೆಲೆ ಇಲ್ಲದ್ದರೆ ಮೂಖ ಪ್ರಾಣಿಗಳ ರೋದನಕ್ಕೆಷ್ಟು ಬೆಲೆ ಇಕ್ಕು ?

      .

      1. ಭಾಗ್ಯಕ್ಕಾ,
        ನಿಂಗೊ ಶುದ್ದಿಗೆ ಕೊಟ್ಟ ಒಪ್ಪವ ಮೊನ್ನೆಯೇ ನೋಡಿದೆ, ಆದರೆ ಅಂಬಗಳೇ ಉತ್ತರ ಕೊಟ್ಟಿಕ್ಕಲೆ ಎಡೆ ಆತಿಲ್ಲೆ.
        ಮತ್ತೆ ಬೈಲ ಹಲವು ಜೆಂಬ್ರಂಗೊಕ್ಕೆ ಹೋಗಿ ಅಪ್ಪಗ ಮತ್ತಾಣ ವಾರದ ಶುದ್ದಿ ಹೇಳುವ ದಿನವೂ ಬಂದುಬಿಟ್ಟತ್ತು, ಆ ಶುದ್ದಿ ಹೇಳುದರ್ಲಿ ಬೆಶಿ ಆಗಿ ಹೋತು.
        ಇದಕ್ಕೆ ಉತ್ತರ ಬರೇಕು ಹೇದು ಇದ್ದತ್ತು, ಉತ್ತರದ ನಿರೀಕ್ಷೆ ನಿಂಗೊಗೆ ಇದ್ದತ್ತು ಹೇಳುಸ್ಸುದೇ ಸಂತೋಷವೇ.
        ಬೇರೆಲ್ಲಾ ಒಪ್ಪಕ್ಕೆ ಉತ್ತರ ಕೊಟ್ಟು ನಿಂಗಳದ್ದಕ್ಕೆ ಮಾಂತ್ರ ಬಿಟ್ಟಿದ್ದರೆ ಗಣನೆ ಇಲ್ಲದ್ದದು, ಸಸಾರ (neglect), ಇತ್ಯಾದಿ ಗ್ರೇಶಿಗೊಂಬಲೆ ಆವುತಿತು, ಆದರೆ ಯೇವದಕ್ಕೂ ಉತ್ತರ ಕೊಡದ್ದ ಕಾರಣ ಹಾಂಗಿಪ್ಪ ಸಂಶಯ ಬಪ್ಪಲೇ ಇಲ್ಲೆನ್ನೆ!

        ಇನ್ನು ನೈತಿಕತೆಯ ವಿಷಯ ಹೇಳ್ತರೆ,
        ಅಮ್ಮನ ಬಗ್ಗೆ ಅರಡಿವಲೆ ಅಮ್ಮ ಆಗಿಯೇ ಗೊಂತಾಯೆಕ್ಕೋ? ಅಮ್ಮನ ಮಗ ಆದರೆ ಸಾಲದೋ? ಒಪ್ಪಣ್ಣಂಗೂ ಹೆತ್ತಮ್ಮ ಇದ್ದವು. ಅವರ ಬಗ್ಗೆ ಅತೀವ ಅಭಿಮಾನವೂ, ಪ್ರೀತಿಯೂ, ಗೌರವವೂ ಇದ್ದು. ಇಂದು ಆನು ಇಲ್ಲಿದ್ದರೆ ಅದಕ್ಕೆ ಕಾರಣ ಅವ್ವೇ.
        ಒಪ್ಪಣ್ಣ ಹುಟ್ಟಿ ಬೆಳದ ಮನೆಲಿ ಹತ್ತನ್ನೆರಡು ದನಗೊ ಇದ್ದಿದ್ದವು. ಅವೆಲ್ಲವನ್ನೂ “ಅಬ್ಬೆ” ಹೇಳಿಯೇ ಗುರ್ತ. ಒಪ್ಪಣ್ಣನ ಶುದ್ದಿಗಳಲ್ಲಿ ಹುಡ್ಕಿ ನೋಡಿ ಬೇಕಾರೆ, ಅವುಗಳ ಬಗೆಗೆ ಎಷ್ಟೂ ಪ್ರೀತ್ಯಾದರ ಇದ್ದತ್ತು ಹೇಳುಸ್ಸು ಅರಡಿಗು ನಿಂಗೊಗೆ.
        ಒಪ್ಪಣ್ಣ ಬೆಳದು ಬಂದ ದಾರಿಲಿ ನೆರೆಕರೆಲಿ, ನೆಂಟ್ರಒಳದಿಕೆ, ಶಾಲೆಗಳಲ್ಲಿ ಟೀಚರಕ್ಕಳ ರೂಪಲ್ಲಿ ಹಲವು ಅಮ್ಮಂದ್ರು ಸಿಕ್ಕಿದ್ದವು. ಹಲವು ಅಮ್ಮಂದ್ರು ನಮ್ಮ ಬೈಲಿಲೇ ಇದ್ದವು. ಮಾತೃಸ್ವರೂಪಿ ಗುರುಪೀಠವೂ ಇದ್ದು.
        ಅವರ ಆರತ್ರಾರು ಒಬ್ಬನತ್ರೆ ಕೇಳಿ ನೋಡಿ ಬೇಕಾರೆ.
        ಒಪ್ಪಣ್ಣಂಗೆ ಅಮ್ಮನ ಬಗ್ಗೆ, ಮಾತೃತ್ವದ ಬಗ್ಗೆ ಯೇವದೇ ಸಮಸ್ಯೆ ಸಂಶಯ ಅಪಗೌರವ, ಅವಮರಿಯಾದಿ ಮಾಡೇಕು ಹೇಳ್ತ ಉದ್ದೇಶ ಇಲ್ಲೆ,
        ~
        ಈ ಶುದ್ದಿಯ ಉದ್ದೇಶ ಎಂತಾಗಿತ್ತು ಹೇದರೆ,
        ಗಂಗೆ ನಮ್ಮ ಅಮ್ಮ.
        ನವಗೆಲ್ಲೋರಿಂಗೂ ಅಮ್ಮ ಆದ ಗಂಗೆಯ ನಾವು ಮಲಿನ ಮಾಡ್ಳಾಗ, ವಿಷ ಬಿಡ್ಳಾಗ, ನಮ್ಮ ಸಾಂಕುತ್ತ ಅಬ್ಬೆಯ ನಾವುದೇ ಚೆಂದಕ್ಕೇ ನೋಡಿಗೊಳೆಕ್ಕು ಹೇಳುಸ್ಸು.
        ಇದಿಷ್ಟು ಬೈಲ ಎಲ್ಲೋರಿಂಗೂ ಅರ್ತ ಆಗಿಕ್ಕು ಗ್ರೇಶುತ್ತು.
        ಇನ್ನು, ಇದರ್ಲಿ ನಿಂಗೊಗೆ ಸಂಶಯ ಬಪ್ಪಲೆ ಎಂತ ಕಾರಣವೋ? ಉಮ್ಮಪ್ಪ.

        ಮಕ್ಕಳ ಮೇಲೆ ಅಮ್ಮಂದ್ರಿಂಗೆ ನಂಬಿಕೆಯೇ ಅಲ್ಲದಾ?
        ಮಕ್ಕೊ ವಿಷ ಕೊಟ್ರೂ ಸಂಶಯಲ್ಲಿ ನೋಡ, ಸೀತ ಕುಡುದು ಬಿಡುಗು; ಆ ಮಟ್ಟಿನ ಅತೀವ ನಂಬಿಕೆ ಅಮ್ಮಂದ್ರಿಂಗೆ ಮಕ್ಕಳ ಮೇಗೆ ಇರ್ತು – ಹೇದು ಒಪ್ಪಣ್ಣನ ಒಂದೊಪ್ಪ ಆಗಿದ್ದತ್ತು.
        ಇದು, ಒಂದು ಅಮ್ಮಂಗೆ ಮಗ ಆದ ಒಪ್ಪಣ್ಣಂಗೆ ಅನುಸಿದ್ದು.
        ಗಂಗಾಮಾತೆಯೂ ಹಾಂಗೇ – ನಾವು ಕೊಟ್ಟದೆಲ್ಲವನ್ನೂ ತೆಕ್ಕೊಳ್ತಾ ಇದ್ದು, ಆದರೆ ನಾವು ವಿಷ ಕೊಡ್ಳಾಗ – ಹೇಳ್ತದು ಅಲ್ಯಾಣ ಸತ್ವ.

        ಬೇರೆ ಮನೆಗಳಲ್ಲಿ ಬೇರೆಬೇರೆ ನಮುನೆ ಅಮ್ಮಂದ್ರು ಇಕ್ಕು ಅಲ್ದಾ?
        ಕೆಲವು ಮನೆಗಳಲ್ಲಿ ಮಕ್ಕಳ ಮೇಗೆ ನಂಬಿಕೆಯೇ ಇಲ್ಲದ್ದೆ, ಮಕ್ಕೊ ಕೊಟ್ಟದನ್ನೂ ಅಳದೂ-ಸುರುದೂ ನೋಡಿ ತೆಕ್ಕೊಂಬಂಥಾ ಅಮ್ಮಂದ್ರು ಇಕ್ಕು. ಅದೆಲ್ಲ ಲೋಕಾರೂಢಿ.
        “ಗಂಗಮ್ಮನ ಶುದ್ದೀಕರಣ” ಆ ಇಡೀ ಶುದ್ದಿಯ ಕಥಾವಸ್ತು ಆಗಿದ್ದ ಕಾರಣ, ಶುದ್ದಿ ಓದಿದ ಮತ್ತೆ ಅದೇ ನೆಂಪಿಪ್ಪದು.

        ಶುದ್ದಿಗೊಪ್ಪ ಬರದ್ದಕ್ಕೆ ಧನ್ಯವಾದಂಗೊ.

        1. ಒಪ್ಪಣ್ಣನ ಉತ್ತರ ನೋಡಿ ಕೊಶಿ ಆತು . ಉತ್ತರಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಂಗೊ . ಹೀಂಗೆ ಮಾತಾಡ್ಸಿಕ್ಕಿ ಹೋದರೆ ಮೊದಲಾಣ ಹಾಂಗೆ ಬೈಲಿಲಿ ರಜ ಹೆಚ್ಚು ಜನ ಸೇರುಗಿದ .

          ೧)ಒಪ್ಪಣ್ಣ ವಿಷಯಾಂತರ ಮಾಡಿ ಬರದ ಉತ್ತರ ನೋಡಿ ಎನಗನಿಸಿದ್ದು ಎಂತ ಹೇಳಿದರೆ ಬರದವನ ಮತ್ತು ಓದುವವನ ಭಾವಲ್ಲಿ ಇಪ್ಪ ಬದಲಾವಣೆ .
          ಹಿಂದೆ ಬೈಲಿಲಿ ಒಂದರಿ ”ಭಾಷೆಯ ಒಟ್ಟಿಂಗೆ ಭಾವವೂ ಬರೆಕ್ಕು ”ಹೇಳಿ ಓದಿತ್ತಿದ್ದೆ . ಆ ಸಂಧರ್ಭಲ್ಲಿ ಎನಗೆ ಅದು ಅರ್ಥ ಆಯಿದಿಲ್ಲೆ .ಒಪ್ಪಣ್ಣನ ಉತ್ತರ ನೋಡಿಯಪ್ಪಗ ಅದುವೇ ಇಲ್ಲಿ ಆದ ವ್ಯತ್ಯಾಸ ಹೇಳಿ ಅಂದಾಜಿ ಆತು . ನೆಲ ,ನದಿ ಎಲ್ಲದಕ್ಕೂ ಮಾತೃ ಸ್ಥಾನ ಇದ್ದರೂ ಅಮ್ಮ ಹೇಳಿದರೆ ಕಲ್ಪನಗೆ ಮೊದಲು ಬಪ್ಪದು ಹೆತ್ತಮ್ಮನೆ . ಆನು ಏಕತೆಲಿ ಇಪ್ಪ ಭಿನ್ನತೆ ನೋಡಿದ್ದು . ಒಪ್ಪಣ್ಣ ಹೆತ್ತಮ್ಮನ್ನೂ ಗಂಗಮ್ಮ ಹೇಳಿಯೇ ಗ್ರೆಶಿದ್ದು ಅಲ್ಲದೋ ?ಅದು ಭಿನ್ನತೆಲಿ ಇಪ್ಪ ಏಕತೆ . ದೇಶದ ಮಟ್ಟಿ೦ಗೆ ನೋಡ್ತರೆ ಅದೇ ಭಾವ ಎಲ್ಲೊರಲ್ಲಿಯೂ ಇರೆಕಾದ್ದದೆ . ಒಂದು ಲೇಖನ ನೂರು ಜನಕ್ಕೆ ನೂರು ರೀತಿಲಿ ಕಾ೦ಬದು ಚೋದ್ಯ ಇಲ್ಲೆ . ಹಾಂಗಾಗಿ ಒಪ್ಪಣ್ಣನ ಭಾವಂದ ಒಪ್ಪಣ್ಣ ಬರದ್ದು ಸರಿಯೇ ಇದ್ದು . ಆದರೆ ಇದು ಒಂದು ಪತ್ರಿಕೆಲಿ ಬಂದಿದ್ದರೆ ಹೆಮ್ಮೊಕ್ಕೊ ಎಲ್ಲ ಧರಣಿ ಮಾಡ್ತಿತವು . ಎಂತಕೆ ಹೇಳಿದರೆ ಇದು ಭಾವನಾತ್ಮಕ ವಿಚಾರ . ”ಗೋ ” ವಿನ ಸುದ್ದಿಯ ಹಾಂಗೆ .
          ೩)ಒಂದು ಲೇಖನದ ದೃಷ್ಟಿ೦ದ ”ಒಂದೊಪ್ಪ” ಚಿನ್ನಕ್ಕೆ ಒಪ್ಪ ಕೊಟ್ಟ ಹಾಂಗಿದ್ದರೆ ಒಳ್ಳೆದು ಹೇಳುದು ಎನ್ನ ಅಭಿಪ್ರಾಯ ಆಗಿತ್ತು . ಇನ್ನುದೆ ಧೃಡವಾಗಿಯೇ ಆನು ಹೇಳುದು ಎಂತ ಹೇಳಿದರೆ ಆ ಲೇಖನಕ್ಕೆ ಅಲ್ಲಿ ಬರದ ಒಪ್ಪ ”ಎಲ್ಲಾ ಬಣ್ಣ ಮಸಿ ನುಂಗಿತ್ತು ” ಹೇಳುವ ಹಾಂಗೆ ಆಯಿದು .

          ೪) ಇದು ಒಪ್ಪಣ್ಣ ೬ ನೇ ವರ್ಷಕ್ಕೆ ಪಾದಾರ್ಪಣ ಮಾಡುವಾಗ ಬರದ ಲೇಖನದ ತುಣುಕು –

          ”ಇಷ್ಟೂ ಸಮೆಯ ನಾವು ಬೈಲ ಕೊಂಗಾಟ ಮಾಡಿಂಡು ಮುಂದುವರುದತ್ತು.
          ಇಷ್ಟು ಸಮೆಯ ಬೈಲಿನ “ಬೆಳೆಶಿತ್ತು”, ಇನ್ನು “ಬೆಳಗುಸೇಕು”.
          ಬೆಳಗುಸೇಕಾರೆ ಎಂತ ಮಾಡೇಕು?
          ನಮ್ಮ ನಮ್ಮ ಶುದ್ದಿಗಳ ತಿದ್ದೇಕು.
          ಭಾಷಾ ಶುದ್ಧತೆ, ವಿಷಯ ಗಾಂಭೀರ್ಯತೆ, ಸರ್ಜನ ಸಾಹಿತ್ಯ – ಇದೆಲ್ಲವನ್ನೂ ಗಮನಲ್ಲಿ ಮಡಿಕ್ಕೊಂಡು ನಮ್ಮ ನಾವು ಬೆಳೆಶಿಗೊಳೇಕು.
          ಅಲ್ಲದೋ?
          ನಮ್ಮ ನಮ್ಮ ಪ್ರತಿ ಶುದ್ದಿಗಳದ್ದುದೇ ಮೌಲ್ಯವ ಇನ್ನಷ್ಟು ಹೆಚ್ಚುಮಾಡ್ಳೆ ನೋಡೇಕು.
          ಆ ಮೂಲಕ ನಮ್ಮ ಶುದ್ದಿಗಳ ನಾವೇ ತಾಡನ ಮಾಡಿ ಬೆಳೆಶೇಕು. ಅಲ್ಲದೋ? ”

  4. ಪರಿಸರ ದಿನಾಚರಣೆಯ ಸಂದರ್ಭಲ್ಲಿ ಸಮಯೋಚಿತ ಸುದ್ದಿ .
    ಎಲ್ಲವನ್ನೂ ಸರಕಾರ ಮಾಡಕ್ಕು ಹೇಳಿ ಬಯಸುವ ಬದಲು ಪ್ರಜೆಗೊ, ತಮ್ಮ ತಮ್ಮ ಕರ್ತವ್ಯ೦ಗಳನ್ನೂ ಅರ್ತು ಗೊಂಡರೆ ಮಾನ್ಯ ಪ್ರಧಾನ ಮಂತ್ರಿಗಳ ನಾಯಕತ್ವಲ್ಲಿ ಭಾರತ ಎಲ್ಲಾ ರೀತಿಲಿಯು ಮುಂದುವರಿಗು ಹೇಳಿ ಎನಗನ್ನ್ಸುತ್ತು .
    ಒಪ್ಪಣ್ಣ ಬರದ ”ಒಂದೊಪ್ಪ” — ”ವಿಷ ಕೊಟ್ರೂ ಮಾತಾಡದ್ದೆ ನುಂಗೇಕಾರೆ ಗಂಗಮ್ಮನೇ ಆಯೆಕ್ಕಷ್ಟೆ” ಹೇಳಿ ಬರದರೆ ಹೆಚ್ಚು ಅರ್ಥಪೂರ್ಣ ಆವುತ್ತು . ಬರೆ ”ಅಮ್ಮ” ಹೇಳಿ ಬರದರೆ ನಮ್ಮ ಹೆತ್ತಮ್ಮ ಹೇಳಿ ಅರ್ಥ ಬತ್ತು . ಹೆತ್ತಮ್ಮಂಗೆ ಮಕ್ಕೊ ವಿಷ ಕೊಡುಗು ;ಅಮ್ಮ ಅದರ ಮಾತಡದ್ದೆ ಕುಡಿಗು ಹೇಳುವ ಅರ್ಥ ಬಪ್ಪ ಹಾಂಗೆ ಇದ್ದು ಆ ವಾಕ್ಯ .

  5. ಹರೇರಾಮ,ಒಪ್ಪಣ್ಣನ ಶುದ್ದಿ ಒಪ್ಪ. ಹಾಂಗೆ ಮೋದಿಯ ಆಡಳಿತದ ರೀತಿಯೂ ಒಪ್ಪ ಇದ್ದಹಾಂಗೆ ಕಾಣುತ್ತು.ಇದಕ್ಕೆ ಗುರುದೇವತಾನುಗ್ರಹ ಸಿಕ್ಕಿ ಮುನ್ನಡೆಯಲಿ ಹೇಳಿ ನಮ್ಮದೂ ಪ್ರಾರ್ಥನೆ.

    1. ವಿಜಯತ್ತೇ,
      ಬೈಲಿಂದುದೇ ಅದೇ ಆಶಯ. ಬಾರತ ಬಲಿಷ್ಠವೂ, ಸುಂದರವೂ ಆಗಿರಳಿ ಹೇದು. ಅಲ್ಲದೋ?

  6. ಗಂಗೆ ಮಾಂತ್ರ ಅಲ್ಲ ಇಡೀ ಭಾರತವೇ ಶುದ್ದ ಆಯೆಕಾಗಿ ಇದ್ದು. ನೆಲ ನೀರು, ಜೆನಂಗಳ ಸ್ವಾರ್ಥ ಭ್ರಷ್ಟಾಚಾರ ಎಲ್ಲಾ ಕಡೆಲಿಯುದೆ ಶುದ್ದ ಆಯೆಕು. ಶುದ್ದ ಆಗಿ ರಾಮ ರಾಜ್ಯ ಆಗಲಿ ಹೇಳುವ ಆಶೆ.

    1. ಅಪ್ಪು ಬೊಳುಂಬುಮಾವಾ, ದನ-ಧನ-ಜನ-ಜಲ ಎಲ್ಲವುದೇ ಪರಿಶುದ್ಧ ವಾಗಿ, ಆನಂದವಾಗಿ ಇಪ್ಪ ಹಾಂಗಾಗಲಿ. ಅಲ್ಲದೋ?

  7. ಒಪ್ಪಣ್ಣ, ನಮ್ಮ ದೇಶದ ಅರೆವಾಶಿ ಜನಂಗೊಕ್ಕೆ ನೀರು ಉಣ್ಸುವ ಈ ಗಂಗೆಗೆ ನಾವು ಕೊಡುದು ವಿಷವ, ಅದರ ವಾಪಸು ನವಗೆ ಕೊಟ್ಟುಗೊಳ್ತು ನಾವೇ ಆ ನೀರು ಉಪಯೋಗ ಮಾಡಿ!! ಗಂಗೆ ಪುಣ್ಯನದಿ ಹೇಳ್ತವು ಹೆರಿಯೋರು. ಆದರೆ ಆ ಗಂಗೆಯ ಪುಣ್ಯನೀರಿನ ಮಹತ್ತಿನ ನವಗೆ ಮಡಿಕ್ಕೊಂಬಲೆ ಎಡಿಗಾತಾ?

    [ಶುದ್ಧ ಮಾಡೆಕ್ಕು ಹೇಳಿದ ಕೂಡ್ಳೇ ಶುದ್ಧಮಾಡ್ಳೆ ಅದೆಂತ ಮಾಷ್ಟ್ರುಮಾವನಲ್ಲಿಂದ ಪೂಜಾರಿಗೊ ಕೊಂಡೋಪ ಪುಣ್ಯನೀರಿನ ಚೆಂಬೋ?]

    ನಿಜವಾಗಿ ಅಪ್ಪು, ಇಷ್ಟು ಸುಲಾಬಲ್ಲಿ ಮೊದಲು ಗಂಗೆಯ ನೀರು ಬಾಕಿ ನೀರುಗಳ, ಜೇವಂಗಳ ಶುದ್ಧ ಮಾಡಿಗೊಂಡಿತ್ತು, ಅದುದೇ ಒಂದೇ ಬಿಂದು ನೀರಿಲಿ!! ಈಗ ಚೆಂಬು ಬಿಡು, ಸಮುದ್ರದಷ್ಟು ನೀರು ಹಾಕಿ ಗಂಗೆಯ ತೊಳದರೂ ಕಶ್ಮಲಂಗ ಹೋಗದ್ದಷ್ಟು ನಾವು ತುಂಬುಸಿದ್ದು!!
    ಮೋದಿಅಜ್ಜ ನಿಜವಾದ ಗಂಗಾಪುತ್ರನೇ ಆಗಿ ಅಬ್ಬೆಯ ಋಣ ತೀರ್ಸಲಿ..

    1. ಶಾರದತ್ತೇ,
      ಪುಣ್ಯನೀರಿನ ಶುದ್ಧಮಾಡಿರೆ ಅದುವೇ ಪುಣ್ಯ ಅಲ್ಲದೋ!? ಭಗೀರಥನ ನೆಲ ಮತ್ತೊಂದರಿ ಪುಣ್ಯ ಪಾವನೆ ಆಗಲಿ, ಅಲ್ಲದೋ?
      ಹರೇರಾಮ

  8. ಒಪ್ಪಣ್ಣೋ…,
    ಶುದ್ದಿ ಪಷ್ಟಾಯಿದು.
    ನಮ್ಮ ಸನಾತನ ಸಂಸ್ಕೃತಿಯ ಹರಿವು ಎಷ್ಟು ಎಷ್ಟೋ ಶತಮಾನಂದ ಹರುದು ಬತ್ತಾ ಇಪ್ಪ ಹಾಂಗೆ ಗಂಗೆಯ ಹರಿವುದೇ ಅದೆಷ್ಟೋ ಕಾಲಂದ ನಮ್ಮ ದೇಶದ ಹಲವು ಕಾಲಮಾನಂಗಳ ನೋಡಿಗೊಂಡು ಹರಿತ್ತಾ ಇದ್ದು. ಗಂಗೆಯ ಒಳಸುಳಿಗಳಲ್ಲಿ ಎಷ್ಟು ಕತೆಗೋ ಇದ್ದೋ ಏನೋ. ಹಲವು ರಾಜಂಗಳ ಕಾಲವ, ಹಲವು ವಿದೇಶೀ ಜನಂಗಳ ಕಾಲವ ಎಲ್ಲವನ್ನೂ ಮೌನಲ್ಲೇ ನೋಡಿಗೊಂಡು, ಒಳ್ಳೆದಕ್ಕೆ ಕೊಶಿಪಟ್ಟು, ಕೆಟ್ಟದರ ಕಂಡು ದುಕ್ಕಿಸಿ ಹರಿತ್ತಾ ಇದ್ದು.
    ಅಬ್ಬೆಯ ಕಷ್ಟಕ್ಕೆ ಒದಗಿ ಬಪ್ಪದು ಮಕ್ಕಳ ಕರ್ತವ್ಯವೇ ಅಲ್ಲದೋ? ನವಗೆ ಎಲ್ಲೋರಿಂಗೂ ನಮ್ಮ ಜನ್ಮ ಪಾವನ ಮಾಡುದರ ಒಟ್ಟಿಂಗೆ ಗಂಗೆಯ ಪಾವನ ಮಾಡುದರ ಮೂಲಕ ದೇಶಸೇವೆಯೋ ಮಾಡುವ ಅವಕಾಶ.

    ಒಪ್ಪಣ್ಣ,
    ಮೋದಿ ಅಜ್ಜ ಮನಸ್ಸಿಲಿ ಸಂಕಲ್ಪಿಸಿದ ಈ ಪುಣ್ಯ ಕೆಲಸಲ್ಲಿ ಎಲ್ಲ ಅನುಕೂಲಂಗಳೂ ಒದಗಿ ಬರಲಿ.. ಕಾಶಿ ವಿಶ್ವನಾಥ ಅದಕ್ಕೆ ಬೇಕಾದ ಅನುಗ್ರಹ ಕೊಡಲಿ..
    ಗಂಗೆಲಿ ಮುಳುಗಿ ಅಪ್ಪಗ ನಮ್ಮ ಆತ್ಮದ ಮೇಲೆ ಬೀಳುವ ಗುರ್ತದ ಒಟ್ಟಿಂಗೆ ಗಂಗಮ್ಮನ ಸೇವೆಲಿ ತೊಡಗಿಸಿಗೊಂಡ ಹೇಳುವ ಆತ್ಮತೃಪ್ತಿಯೂ ಎಲ್ಲೋರಿಂಗೂ ಸಿಕ್ಕಲಿ ಹೇಳಿ ಹಾರಯಿಕೆ.
    ಒಂದೊಪ್ಪ ಲಾಯ್ಕಾಯಿದು. ಕೆಟ್ಟದರ ನುಂಗುಲೆ ಅಮ್ಮಂದ ಮಾತ್ರವೇ ಸಾಧ್ಯ!

    1. ಶುದ್ದಿಯ ಸಾರವ ತೆಕ್ಕೊಂಡು, ಅರ್ಥಮಾಡಿಗೊಂಡದಕ್ಕೆ ಧನ್ಯವಾದಂಗೊ.
      ಕಾಶಿವಿಶ್ವನಾಥಂಗೆ ತುಂಬಾ ಬೇಜಾರಿದ್ದಡ, ಪುತ್ತೂರಿನ ವಿಶ್ವನಾಥ ಡಾಗುಟ್ರು ಹೇಳಿಗೊಂಡಿತ್ತಿದ್ದವು! 😉

  9. ಪಷ್ಟಾಯ್ದು ಒಪ್ಪಣ್ಣ! ಅರವತ್ಮೂರು ವರ್ಷದ (ನೋಡ್ಲೆ ಅಜ್ಜ ಆದ್ರೂ) ಯುವ ನೇತಾರ ನಮ್ಮವ ಅಲ್ಲದೋ? (ಆಚೆ ಹೊಡೆಲಿ 43 ವರ್ಷದವ ಇದ್ದರೂ ಅವ ಅಜ್ಜನ ಹಾಂಗೆ !!:P) ಖಂಡಿತಾ ಗಂಗೆಯ ಶುದ್ದ ಮಾಡ್ಸಿ ನವಗೆ ನಿಜವಾದ ತೀರ್ಥವ ಕೊಡುಗು!

    1. ಅಪ್ಪಪ್ಪು,
      ಮೋದಿಯ ಅಜ್ಜ ಹೇಳಿ ಹೇಳುಲೂ ಬಾಯಿ ಬತ್ತಿಲ್ಲೆ ಇದಾ! ದಿನಕ್ಕೆ ಹದ್ನೆಂಟು ಗಂಟೆ ಕೆಲಸ ಮಾಡ್ತಡ.
      (ನಮ್ಮ ಬೋಚಬಾವ ಹದ್ನೆಂಟು ಗಂಟೆ ಒರಗುದು, ಗೊಂತಿದ್ದನ್ನೇ?)

  10. ಲೇಖನ ಓದಿ ಖುಶಿ ಆತು ಓಪ್ಪನ್ನ ಭಾವ. ಭಾರತದ ಎಲ್ಲ ನದಿಗಳು ಶುದ್ಧವಾಗಲಿ. ಒಳ್ಳೆ ದಿನಂಗ ಬಪ್ಪಲೆ ಸುರು ಆಯ್ದು ಎಂಬುದು ಖಂಡಿತ. ಧನ್ಯವಾದಂಗ ಒಪ್ಪನ್ನ ಭಾವ.

    1. ಅನಿಭಾವಾ,
      ಗಂಗಾನದಿ ಶುದ್ದಿ ಆದರೆ ಇಡೀ ದೇಶವೇ ಶುದ್ಧ ಆದ ಹಾಂಗೆ – ಹೇದು ಹರಿದ್ವಾರಂದ ಬಂದ ಗಿರಿಭಾವ ಅಂದು ಹೇಳಿಗೊಂಡಿತ್ತಿದ್ದ, ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×