Oppanna.com

ಮಾಲಿಂಗಜ್ಜ ಈ ಸರ್ತಿಂದ ಕೈನ್ನೀರು ಕೊಡುಸ್ಸಡ..!

ಬರದೋರು :   ಒಪ್ಪಣ್ಣ    on   31/10/2014    4 ಒಪ್ಪಂಗೊ

ಪಣ್ಣಿಕ್ಕಾರ ಮಾಲಿಂಗ ಭಟ್ರು – ಹೇದರೆ ಮಹಾನ್ ಸನಾತನಿ.
ನಿತ್ಯ ಸ್ನಾನಾಹ್ನಿಕ ಕ್ರಮಾಗತವಾಗಿ ಮಾಡುದಲ್ಲದ್ದೇ, ಕಾಲಕಾಲಕ್ಕೆ ಉಪವಾಸ, ಪ್ರದೋಷ, ದುರ್ಗಾಪೂಜೆ, ಗೋಪೂಜೆ, ತೊಳಶೀ ಪೂಜೆ ಆಚರಣೆಗಳ ತಪ್ಪುಸವು. ಅವರ ಹೆರಿಯೋರಿಂದಲೇ ಬಂದ ಕ್ರಮಂಗೊ ಅದು.
ಅವರ ಅಪ್ಪ° ಎಂಕಪ್ಪಜ್ಜನ ವರೆಗೆ ಚಾತುರ್ಮಾಸ್ಯವನ್ನೂ ಮಾಡಿಗೊಂಡು ಇತ್ತಿದ್ದವಾಡ. ಈಗಾಣ ಕಾಲಘಟ್ಟಲ್ಲಿ – ಗುರುಗೊ ಚಾತುರ್ಮಾಸ್ಯಕ್ಕೆ ಕೂದಿಪ್ಪಾಗ ಹೋಗಿ ಯಥಾನುಶೆಗ್ತಿ ಸೇವೆ ಮಾಡುಸಿಕ್ಕಿ ಬಪ್ಪದು ಮಾಲಿಂಗಜ್ಜಂಗೆ ಒದಗಿ ಬಂದ ಸೌಭಾಗ್ಯ.

ಮದಲಿಂಗೆ ಮಾಲಿಂಗಜ್ಜ ಎಲ್ಲೋರಿಂಗೂ ಮಾದೆರಿ. ಅವರ ಧರ್ಮಶ್ರದ್ಧೆ, ಕಾರ್ಯನಿಷ್ಠೆ – ಎಲ್ಲವುದೇ.
ಅವರ ಪ್ರದೋಷ ಆಚರಣೆ ಅಂತೂ ಬಹು ಕಡ್ಪದ್ದು.
ಮದಲಿಂಗೆ – ನೆಡು ಜವ್ವನಲ್ಲಿ – ಅವ್ವೇ ಸ್ವತಃ ಒಬ್ಬನೇ ಕೂದು ಶತರುದ್ರ ಮಾಡಿಗೊಂಡು ಇತ್ತಿದ್ದವಾಡ.
ಸೂರ್ಯೋದಯಕ್ಕೇ – ಶುದ್ಧಲ್ಲಿ ಕೂದುಗೊಂಡು ಓಂ ನಮೋ ಭಗವತೇ ರುದ್ರಾಯ – ಹೇದು ನಮಕ ಪಠಣಕ್ಕೆ ಮೊದಲುಮಾಡಿರೆ, ತಂ ವೋ ಜಂಭೇ ದಧಾಮಿ – ಹೇದು ನೂರ್ನೇ ಸರ್ತಿ ಹೇಳುವಾಗ – ಇರುಳಾಣ ಹೊತ್ತು ಕಂತಿಕ್ಕಡ.
ಮತ್ತೆ ಮಂಗಳಾರತಿ ಮಾಡಿಕ್ಕಿಯೇ – ಪ್ರದೋಷ ಪೂಜೆ, ಪ್ರಸಾದ ಸೇವನೆ!
ಎಡಕ್ಕೆಡಕ್ಕಿಲಿ ಸಣ್ಣ ಬಿಡುವುಗೊ ಮಾಂತ್ರ, ಪ್ರಾಕೃತಿಕ ಅಗತ್ಯಕ್ಕೆ.
ಇಡೀ ದಿನ ಒಂದೇ ಶ್ರದ್ಧೆಲಿ ಶಿವಸ್ಮರಣೆ – ಅದೇ ಅವರ ಮನೆತನದ ಹೆರಿಮೆ!
~
ಅವರ ಮನೆಲಿ ಎಂತ ಕಾರ್ಯ ಆದರೂ – ಶಿಸ್ತು ಬಹುಮುಖ್ಯ.
ಶುದ್ಧ, ಮೈಲಿಗೆ, ದಾರಿಮೈಲಿಗೆಗಳ ಬಗ್ಗೆ ಬಹು ಕಡ್ಪ ಈ ಮಾಲಿಂಗಜ್ಜ° ಹೇದರೆ.
ಮನೆಲಿ ಸಂಸ್ಕಾರ ಒಳಿಯಲೆ ಆ ಮನೆಯ ಕುಲಗುರುಗೊ, ವೈದೀಕರೂ ಕಾರಣವೇ.
ಪಣ್ಣಿಕ್ಕಾರಕ್ಕೆ ಕಿಳಿಂಗಾರು ಅಜ್ಜನದ್ದೇ ಪೌರೋಹಿತ್ಯ ಇದಾ – ಅವು ಹೇಂಗಾರೂ ಶುದ್ಧಂಭಟ್ರೇ. ಮನೆಂದ ಮಿಂದಿಕ್ಕಿ ಹೆರಟ್ರೂ, ಶಿಷ್ಯವರ್ಗದ ಮನೆಗೆ ಎತ್ತಿಅಪ್ಪದ್ದೇ ಒಂದರಿ ಮಿಂದು ಕ್ರಿಯಾಭಾಗ ಸುರುಮಾಡ್ತ ನಮುನೆ.

ಮುಖ್ಯ ವೈದೀಕರೇ ಈ ನಮುನೆ ಶುದ್ಧ ಆದರೆ ಮನೆಯೋರಿಂಗೂ, ಬಂದ ಇತರೇ ವೈದೀಕರಿಂಗೂ ಶುದ್ಧ-ಶ್ರದ್ಧೆ ಬಂದೇ ಬತ್ತು. ಹಾಂಗಾಗಿ ಇಡೀ ಮನೆಯ ವೈದೀಕ ಕಾರ್ಯಕ್ರಮಂಗೊ ಚೆಂದಲ್ಲಿ ನೆಡದೇ ನೆಡೆತ್ತು. ತಲೆತಲಾಂತರಂದ ಈ ನಮುನೆ ನೆಡಕ್ಕೊಂಡು ಬಯಿಂದು ಅಲ್ಲಿ.

ಅಲ್ಯಾಣ ಕಾರ್ಯಕ್ರಮಂಗೊ, ಅಲ್ಯಾಣೋರ ಶ್ರದ್ಧೆಗೊ – ಇದೆಲ್ಲವೂ ಒಳುದೋರಿಂಗೆ ಉದಾಹರಣೆಗೆ ಒಂದು ಪಾಠ.

~

ಎಲ್ಲಾ ಕಾರ್ಯಕ್ರಮಂಗಳನ್ನೂ ಶ್ರದ್ಧೆಲೇ ಮಾಡ್ತವು ಹೇಳಿದ ಮತ್ತೆ ಶ್ರಾದ್ಧ-ತಿಥಿಗಳನ್ನೂ ಶ್ರದ್ಧೆಲಿ ಮಾಡ್ತವು ಹೇದು ಬೇರೆ ಹೇಳೇಕೋ?
ದೇವಕಾರ್ಯದಷ್ಟೇ ಪಿತೃಕಾರ್ಯವೂ ಶ್ರದ್ಧೆಲಿ ನೆಡೆತ್ತು ಅಲ್ಲಿ.
ಕ್ರಮಾಗತವಾಗಿ ಪಿತೃಸ್ಥಾನ-ವಿಷ್ಣುಸ್ಥಾನಲ್ಲಿ ಯೋಗ್ಯ ಬ್ರಾಹ್ಮಣರ ಕೂರ್ಸಿ, ಅವಕ್ಕೆ ಯಥಾಯೋಗ್ಯ ಮರಿಯಾದಿ ಮಾಡಿ, ಪಿತೃಗಳ ಆವಾಹನೆ ಮಾಡಿಕ್ಕಿ, ಅವರ ಮೂಲಕ ಪಿತಾಮಹರಿಂಗೆ ಮರಿಯಾದೆ ಕೊಡ್ತದು ನೆಡಕ್ಕೊಂಡು ಬಯಿಂದು.
ಎಷ್ಟು ತಡವಾದರೂ ತೊಂದರೆ ಇಲ್ಲೆ, ಸರಿಯಾಗಿ-ಕ್ರಮಪ್ರಕಾರ ಮಾಡದ್ದೆ ಆತಿಲ್ಲೆ!
ಮಾಲಿಂಗಜ್ಜನ ಮಧ್ಯಪ್ರಾಯಲ್ಲೇ ತಿಥಿಮಾಡ್ಳೆ ಸುರುಮಾಡೇಕಾಗಿ ಬಂದಿತ್ತು. ಅವರ ಅಬ್ಬೆ ತೀರಿಗೊಂಡಲ್ಲಿಂದ ತಿಥಿಮಾಡ್ಳೆ ಸುರುಮಾಡಿದ್ದವು. ನೆಡುಪ್ರಾಯ ಆದ ಕಾರಣ, ಎಲ್ಲಾ ಕ್ರಮಂಗಳನ್ನೂ ಮಾಡಿರೂ – ಬೇಗ ಮುಗುಕ್ಕೊಂಡಿದ್ದತ್ತು.
ಆದರೆ, ಮತ್ತೆ ಮತ್ತೆ ಹಾಂಗಾವುತ್ತೋ?
ಪ್ರಾಯ ಏರಿದಾಂಗೆ ಕೈಕ್ಕಾಲುಗೊ ಗ್ರೇಶಿದಾಂಗೆ ಆಡ್ತೋ? ಇಲ್ಲೆ.
ಆದರೆ ಶ್ರದ್ಧೆಯ ಕ್ರಮಂಗಳ ಬಿಡ್ಳೆ ಮನಸ್ಸಿಲ್ಲೆ.
ಮತ್ತೆಮತ್ತೆ ಎಣ್ಣೆ ಕೊಟ್ಟು, ಕಾಲು ತೊಳೆಶಿ, ದೇವರಿಂಗೆ ಬಳುಸಿ, ಊಟ ಮಾಡುಸಿ, ಪಿತೃಮುಕ್ತಿ ಹೇತೂ.. – ಹೇಳುಲಪ್ಪಾಗ ಹೊತ್ತು ಕಂತುವಷ್ಟೂ ಅಪ್ಪದಿದ್ದು ಒಂದೊಂದು ಸರ್ತಿ. ಆದರೂ ಕ್ರಮ ಬಿಡವು.
ಮಂತ್ರಲ್ಲಿ ಬಪ್ಪ ಎಲ್ಲಾ ಕ್ರಮಂಗಳನ್ನೂ ಮಾಡಿಯೇ ಮಾಡುಗು. ಇಂದು ನಿನ್ನೆಂದ ಅಲ್ಲ, ಅವು ತಿಥಿ ಮಾಡ್ಳೆ ಸುರುಮಾಡಿದ ಲಾಗಾಯ್ತಿಂದ.

~

ಈಗ ಮಾಲಿಂಗಜ್ಜಂಗೆ ಹೆಚ್ಚುಕಮ್ಮಿ ಎಂಭತ್ತೈದರ ಸುತ್ತುಮುತ್ತ. ಮದಲಿಂಗೆ ತುಂಡುಜವ್ವನ, ಈಗ? ವೃದ್ಧಜವ್ವನ.
ಹೇದರೆ, ದೇಹಕ್ಕೆ ವೃದ್ಧಾಪ್ಯ ಬಂದರೂ, ಮನಸ್ಸು ಜವ್ವನಲ್ಲೇ ಇದ್ದು.
ಆಚೊರಿಶ ಸಹಸ್ರಚಂದ್ರ ಆಯಿದು.
ಆದರೂ – ಪುಳ್ಯಕ್ಕೊ ಬಿಡ್ತವಿಲ್ಲೆ – ಅಲ್ಲದ್ದರೆ ತೆಂಗಿನಮರ ಹತ್ತಿ ತೆಂಗಿನಕಾಯಿ ಕೊಯಿತ್ತಿತವೋ ಏನೋ! 🙂
ಅದಿರಳಿ. ಅಷ್ಟಲ್ಲದ್ದರೂ – ಸಾದಾರ್ಣ ಕೆಲಸಂಗೊ ಅವ್ವೇ ಮಾಡಿಗೊಳ್ತವು. ಅವರ ಚಾಕ್ರಿ ಆರೂ ಮಾಡೆಡ, ಹಾಂಗೆ ಬದ್ಕಿದ್ದವು.
~

ಕೆಲವೊರಿಶ ಹಿಂದೆ, ಒಂದರಿ ಆರೋಗ್ಯ ತೀರಾ ವಿತ್ಯಾಸ ಅಪ್ಪಲೆ ಸುರು ಆತು.
ಹಶು ಹಿಡುದು ಇಪ್ಪಲೆ ಎಡಿತ್ತಿಲ್ಲೆ ಹೇಳಿ ಆದ ಮತ್ತೆಯೇ ಅವು ಪ್ರದೋಷ ಉತ್ಥಾನ ಮಾಡಿದ್ದು. ಉಪವಾಸ ಇಪ್ಪಲೆ ಕಷ್ಟ ಆವುತ್ತ ಕಾರಣ ಪ್ರದೋಶ ಮಾಡಿಗೊಂಡು ಬಪ್ಪಲೆ ಎಡಿತ್ತಿಲ್ಲೆ ಇನ್ನು – ಹೇದು ಬಾರೀ ಬೇಜಾರಲ್ಲಿ ಹೇಳಿಗೊಂಡಿದವು ಹತ್ತರಾಣೋರಿಂಗೆ.
ಪ್ರದೋಷ ಆಚರಣೆ ನಿಂದದು ಅವರ ಕೈಂದ ಸಂದುವ ದೇವಕಾರ್ಯದ ಮಹತ್ತರ ಭಾಗ ಒಂದು ನಿಂದ ಹಾಂಗಾತು ಅವಕ್ಕೆ.

ಅದಿರಳಿ.
ದೇವಕಾರ್ಯದ ಭಾಗ ನಿಂದತ್ತು, ಪಿತೃಕಾರ್ಯ ಇನ್ನೂ ಸಲ್ಲುತ್ತಾ ಇದ್ದನ್ನೇ – ಹೇದು ತೃಪ್ತಿಲಿ ಇತ್ತಿದ್ದವು ಮಾಲಿಂಗಜ್ಜ° .

~

ಆದರೆ, ಈಗ?
ಮೊನ್ನೆ ನವರಾತ್ರಿಗೆ ಮಕ್ಕೊ ಪುಳ್ಯಕ್ಕೊ ಸೇರಿ ಮನೆಲಿ ದುರ್ಗಾಪೂಜೇ ಮಾಡಿದ್ದು ಅಖೇರಿ, ಮತ್ತೆ ಮಾಲಿಂಗಜ್ಜ° ಮನುಗಿದೋರಿಂಗೆ ಏಳುಲೂ ಎಡಿಯ.
ಬೆನ್ನು ಬೇನೆ. ವಿಪರೀತ.
ಬೆನ್ನಹುರಿ ಸೊಂಟಕ್ಕೆ ಹೋಗಿ ಸೇರ್ತಲ್ಲದೋ – ಅಲ್ಲಿ.
ಬೆನ್ನುಬೇನೆಯೂ ಅಪ್ಪು, ಸೊಂಟಬೇನೆಯೂ ಅಪ್ಪು, ಹಾಂಗಿದ್ದಲ್ಲಿ ಬೇನೆ.

ಹಟ್ಟಿ ಬೈಪ್ಪಾಣೆಲಿ ಬಗ್ಗಿ ಕೂಂಬಾಳೆ ಕೊಟ್ಟುಗೊಂಡಿತ್ತವಾಡ, ಅವರ ಪ್ರೀತಿಯ ದನಂಗೊಕ್ಕೆ. ಅಷ್ಟಪ್ಪಗ ಬಗ್ಗಿದ್ದದು ಏನೋ ಸರಿ ಆಯಿದಿಲ್ಲೆ ಕಾಣ್ತು, ಸೊಂಟ- ಬೆನ್ನು ಹಿಡ್ಕೊಂಡ ಹಾಂಗಾತು.
ಬೇನೆಲಿ ಅಜ್ಜಂಗೆ ಮಾತೂ ಹೆರಡ; ಅಲ್ಲೇ ಮನಿಕ್ಕೊಂಡ ಹಾಂಗೆ – ಕೂದು ಎರಗಿದವು.
ದನಗೊ ಜೋರು ಜೋರು ಕೆಲದವಾಡ, ಮನೆಯೋರಿಂಗೆ ಗೊಂತಪ್ಪಲೆ. ಹಾಂಗೆ ಮನೆಯೋರಿಂಗೆ ಗೊಂತಾತು.
ಅಜ್ಜಂಗೆ ಮನುಗಿರೆ ಕೂಪಲೆಡಿಯ, ಕೂದರೆ ಮನುಗುಲೆಡಿಯ.
ಅಂತೂ ನೇಚಿ ಮನೆ ಒಳಂಗೆ ಕರಕ್ಕೊಂಡು ಬಂದವು, ಅಜ್ಜನ ಮಂಚಲ್ಲಿ ಮನುಗಿಸಿದವು.
ಅಸಾಧ್ಯ ಬೇನೆ.

ಬೆನ್ನಿನ ಒಳದಿಕ್ಕೆ ಆಗಿ ಒಂದು ಈಟಿಯೋ, ಈಟಿನ ಕೋಲೋ ಎಂತದೋ ಹಾಕಿ ಕುತ್ತಿದ ನಮುನೆ!
ಛೇ, ಈ ಸೊಂಟ ಬೇನೆಂದ ಬೇರೆ ಯೇವದಾರು ಬೇನೆಯ ಆ ದೇವರು ಕೊಡ್ಳಾವುತಿತನ್ನೇ – ಹೇದು ಅನುಸುಲೆ ಔರು ಆಗಿದ್ದತ್ತು ಮಾಲಿಂಗಜ್ಜಂಗೆ!

ಎಳ್ಳೆಣ್ಣೆ ಕಿಟ್ಟಿ ಶೇಕ ಕೊಟ್ಟಾತು, ಬಂಟನ ಎಣ್ಣೆ ಹಾಕಿ ಉದ್ದಿ ಆತು, ತ್ಯಾಂಪಣ್ಣನ ಎಣ್ಣೆ ಉದ್ದಿ ನೋಡಿತ್ತು, ಕಲ್ಮಡ್ಕ ಎಣ್ಣೆ ಹಾಕಿ ಉದ್ದಿ ಆತು. ಉಹುಂ, ಏನೇ ಆದರೂ – ಮೂರು ದಿನ ಉದ್ದಿರೂ ಏನೂ ಗುಣ ಇಲ್ಲೆ!
ಇದು ಎಣ್ಣೆಗೆಲ್ಲ ನಾಟುವ ಬೇನೆ ಅಲ್ಲ ಹೇದು ಅರಡಿಗಾತು ಮಾಲಿಂಗಜ್ಜಂಗೆ. ಮಂತರ್ಸಲೆ ಹೆರಟವು. ಮಕ್ಕೊ ಪುಳ್ಯಕ್ಕೊ ಎಲ್ಲೋರುದೇ ಒತ್ತಾಯ ಮಾಡಿದ ಲೆಕ್ಕಲ್ಲಿ ದೊಡ್ಡಾಸ್ಪತ್ರೆಗೆ ಸೇರಿದವು.
ಕಾಲಿಂಗೆ ಹೊಯಿಗೆ ಚೀಲ ಕಟ್ಟಿ ರಾಟೆಲಿ ನೇಲುಸಿದವು. ಕೈಕ್ಕಾಲು ಹಂದುಸಲೆಡಿಯದ್ದ ನಮುನೆಯ ಬಂಧನ!
ಛೇ! ಅವಕ್ಕೆ ಎಲ್ಲದಕ್ಕಿಂತಲೂ ದೊಡ್ಡ ತಲೆಬೆಶಿ – ಇನ್ನು ಎರಡೇ ವಾರಲ್ಲಿ ಅವರ ಮನೆಲಿ ಪಿತೃಕಾರ್ಯ!
ಎಂತ ಮಾಡುದು!?

ಹತ್ತು ದಿನ ಆಸ್ಪತ್ರೆಲಿ ನಿಲ್ಲುಸಿ, ಮತ್ತೆ ಮನೆಗೆ ಹೋಪಲೆ ಬಿಟ್ಟವು ಡಾಗುಟ್ರು.
ಮನೆಗೆ ಹೋಪಲಕ್ಕು, ಆದರೆ ದಿನಾಗುಳೂ ಉದೆಕಾಲಕ್ಕೆ ಅರ್ಧ ಗಂಟೆ ಬಂದು ದೈಹಿಕ ವ್ಯಾಯಾಮದ ಒಟ್ಟಿಂಗೆ ಮದ್ದು ತೆಕ್ಕೊಳೇಕು – ಹೇಳಿದವಡ ಡಾಗುಟ್ರು.
ಕವುಂಚಿ ಮನುಗುಸಿ, ಬೆನ್ನಿಂಗೆ ಕರೆಂಟು ಶೋಕು ಕೊಟ್ಟು, ಕೈಕ್ಕಾಲು ನೆಗ್ಗುಲೆ ಮಾಡಿ ಎಂತೆಂತದೋ ವ್ಯಾಯಾಮಂಗೊ.
ಒಂದು ವಾರ ಆಗಿ ಗುಣ ಕಾಣ್ತು. ಗುಣ ಇದ್ದು ಹೇದರೆ ಹೀಂಗಿರ್ಸರ ಮಾಡ್ಳೂ ಬೇಜಾರಿಲ್ಲೆ ಮಾಲಿಂಗಜ್ಜಂಗೆ!

ಅಂತೂ-ಪಿತೃಕಾರ್ಯದ ದಿನ ಬಂದೇ ಬಂತು. ಸೊಂಟ ಬೇನೆ ಕಮ್ಮಿ ಇಲ್ಲೆನ್ನೇ!

~
ಶ್ರಾದ್ಧ ಹೇದರೆ ಶ್ರದ್ಧೇಲಿ ಮಾಡ್ತ ಪಿತೃಕಾರ್ಯ.
ಪ್ರತಿಒರಿಶವೂ ಶ್ರದ್ಧೆಲಿ ಮಾಡ್ಳೆಡಿಗಾರೂ, ಈ ಸರ್ತಿ ಸೊಂಟಬೇನೆ ಬಿಡ್ತಿಲ್ಲೆ ಮಾಲಿಂಗಜ್ಜಂಗೆ.
ಕ್ರಿಯೆ ಸುರು ಆಗಿ ಕೊನೆ ಒರೆಂಗೆ ಸರಿಸುಮಾರು ಎರಡುಮೂರು ಗಂಟೆ ತುರ್ಕಲ್ಲಿಯೋ, ಮಣೆಲಿಯೋ, ಬಗ್ಗಿಯೊಂಡೋ, ಜೆನಿವಾರ ಎಡತ್ತು-ಬಲತ್ತೋ ಮಣ್ಣ ಮಾಡಿಗೊಂಡು ಇಪ್ಪಲೆ ತಕ್ಕ ದೈಹಿಕ ಸಾಮರ್ಥ್ಯ ಇಲ್ಲೆ.
ಅಂಬಗ ಎಂತ ಮಾಡುಸ್ಸು?
ತಿಥಿ ಮಾಡ್ಳೆಡಿಯದ್ದೆ ಇನ್ನು ಕೈನ್ನೀರೇ ಕೊಡುಸ್ಸೋ?
ಅದೇ ಒಳ್ಳೆದು. ದಾಕುದಾರ ಹೇಳಿದ್ದೂ ಅದುವೇ, ಮಕ್ಕೊ ಹೇಳುಸ್ಸೂ ಅದುವೇ, ಕುಲಪುರೋಹಿತರು ಹೇಳುದೂ ಅದುವೇ, ಎಲ್ಲಕ್ಕಿಂತ ಹೆಚ್ಚಾಗಿ ಅವರ ದೇಹವೇ ಹೇಳಿದ್ದೂ ಅದುವೇ ಅಡ!
ತುಂಬ ಹೊತ್ತು ಬಗ್ಗಿ ಇರೆಕ್ಕಾದ ಕಾರ್ಯ ಇಲ್ಲೆ, ಹೆಚ್ಚಿಗೆ ಹೊತ್ತು ಜೆನಿವಾರ ಎಡಬಲ ಮಾಡ್ತ ಸಂಗತಿ ಇಲ್ಲೆ, ಉದ್ದ-ಉದ್ದದ ಮಂತ್ರಂಗೊ ಇಲ್ಲೆ, ಆದರೆ ಅದೆಲ್ಲದರ ಭಾವಂಗೊ ತುಂಬಿಪ್ಪ ಸರಳ ಆಚರಣೆ.
ಮಂತ್ರ ಇಪ್ಪಲ್ಲಿ ತಂತ್ರ, ತಂತ್ರ ಇಪ್ಪಲ್ಲಿ ತೂಷ್ಣಿ!
ದೇವರ ಎದುರು ಬಲಿಬಾಳೆಗೆ ಬಳುಸಿ, ಒಬ್ಬಂಗೆ ಕೈನ್ನೀರು ಊಟ ಕೊಟ್ಟು, ಹೆರಿಯೋರ ನೆಂಪುಮಾಡಿಗೊಂಡ್ರೆ ಕೈನ್ನೀರು ಮುಗಾತು!

ಮಾಲಿಂಗಜ್ಜಂಗೆ ಆ ಸತ್ಯವ ಅರಗುಸಿಗೊಂಬಲೆ ಪಕ್ಕಕ್ಕೆ ಎಡಿಗಾಯಿದಿಲ್ಲೆ!!
ಇಷ್ಟು ಒರಿಶವೂ ಪಿತೃಗೊಕ್ಕೆ ಶ್ರಾದ್ಧ ಮಾಡಿದ ಧನ್ಯತೆ ಮಡಿಕ್ಕೊಂಡಿತ್ತವು. ಈ ಸರ್ತಿ ಅನಿವಾರ್ಯವಾಗಿ ಕೈನ್ನೀರು ಕೊಡೆಕ್ಕಾವುತ್ತು. ಇನ್ನು ಮುಂದಕ್ಕೆ ಯೇವತ್ತಿಂಗೂ – ಬಗ್ಗಿ ಕೂಪ ಕಾರ್ಯ ಮಾಡ್ಳಾಗ ಹೇದು ಡಾಗುಟ್ರು ಹೇಳಿದ್ದವು.
ಹಾಂಗಾರೆ ಕೈನ್ನೀರೇ ಕೊಡ್ತದು ಈ ಸಂದರ್ಭಕ್ಕೆ ಸರಿಯಾದ್ಸು – ಹೇದು ಒಪ್ಪಿಗೊಂಡವು ಒಂದೆರಡು ದಿನ ಕಳುದು.
ನಾಳೆ ಕಳುದು ನಾಳ್ತಿಲಿ ಈ ಸರ್ತಿ ಪಣ್ಣಿಕ್ಕಾರ ಮಾಲಿಂಗಜ್ಜನಲ್ಲಿ ತಿಥಿ ಅವರ ಹೆರಿಯೋರ ತಿಥಿ ಆಡ. ಈ ಸರ್ತಿಂದ ಬರೇ ಕೈನ್ನೀರು ಕೊಡುದಡ. ಇಷ್ಟು ಒರಿಶ ತಿಥಿಮಾಡಿಗೊಂಡು ಬಯಿಂದವಲ್ಲದೋ – ಅದೇ ದೊಡ್ಡ ಸಂಗತಿ – ಹೇಳಿದವು ಮಾಲಿಂಗಜ್ಜನ ನೆರೆಕರೆಯ ಶಂಬಟ್ಟಮಾವ.

ಪಿತೃಕಾರ್ಯವ ದೇವಕಾರ್ಯಂದಲೂ ಶ್ರದ್ಧೆಲಿ ಮಾಡ್ತವು ಕೆಲವು ಜೆನ.
ಹಾಂಗೆ, ಅಪೂರ್ವ ಜೆನಂಗಳಲ್ಲಿ ಮಾಲಿಂಗಜ್ಜನೂ ಒಬ್ಬರು.
ನಾಕೊರಿಶ ಹಿಂದೆ ಪ್ರದೋಷ ನಿಲ್ಲುಸುವಾಗ ಆದ ಬೇಜಾರಂದಲೂ, ತಿಥಿ ನಿಲ್ಲುಸುವಾಗ ಹೆಚ್ಚು ಬೇಜಾರಾಯಿದಾಡ ಅವಕ್ಕೆ.

ಯೇವದೇ ಆಗಲಿ – ಶ್ರದ್ಧೆಲಿ ಮಾಡಿರೆ ಆತು.
ತಿಥಿಯೇ ಆಗಲಿ, ಕೈನ್ನೀರೇ ಆಗಲಿ – ಅದು ಶ್ರದ್ಧೆಲೇ ಮಾಡಿರೆ ಶ್ರಾದ್ಧವೇ ಆವುತ್ತು – ಹೇದು ಅವರ ಕುಲಪುರೋಹಿತರು ಸಮಾಧಾನ ಹೇಳಿದವಾಡ.

ಒಂದೊಪ್ಪ: ಶ್ರದ್ಧೆಲಿ ಕೊಟ್ಟ ಎರಡು ಹನಿ ಕಣ್ಣನೀರುದೇ ಕೈನ್ನೀರಿನ ಹಾಂಗೇ – ಹೇದು ಮಾಲಿಂಗಜ್ಜ° ಸಮಾದಾನ ಮಾಡಿಗೊಂಡವಾಡ.

4 thoughts on “ಮಾಲಿಂಗಜ್ಜ ಈ ಸರ್ತಿಂದ ಕೈನ್ನೀರು ಕೊಡುಸ್ಸಡ..!

  1. ಹರೇರಾಮ , ಒಪ್ಪಣ್ಣ ; ಮೊದಲಾಣವರ ಧಾರ್ಮಿಕಕಾರ್ಯ,ನೇಮ-ನಿಷ್ಠೆ ,ದೇಹ ಸ್ವಾಸ್ತ್ಯ್ಹ ಕಾಪಾಡಿಯೊಂಬದು ಹಾಂಗೂ ಪಿತೃಕಾರ್ಯದ ಶ್ರದ್ಧೆ ಈಗಾಣವಕ್ಕೆ ಒದುಲೆ ಸಿಕ್ಕಿ ಈ ಮುಖೇನ ಗೊಂತಾವುತ್ತು.

  2. ಫಸ್ಟ್ ಆಯ್ದು ಒಪ್ಪಣ್ಣ. ಊರು ಮನೆ೦ದ ದೂರ ಇಪ್ಪಗ ೨೦ ವರ್ಷ ಹಿಂದಕ್ಕೆ ಕರ್ಕೊಂಡು ಹೊವ್ತು ಒಪ್ಪಂಗೋ. ಧನ್ಯವಾದ೦ಗೊ

  3. ಮಾಲಿಂಗಜ್ಜನ ಹಾಂಗೆ ಅಸೌಖ್ಯಂದಾಗಿ ಶ್ರಾದ್ಧದ ಬದಲು ಕೈನ್ನೀರು ಕೊಡ್ತದಾದರೆ ತೊಂದರೆ ಎಂತೂ ಆಗ. ಎಡಿಯದ್ದೆ ಹಾಂಗೆ ಮಾಡಿದ್ದೂ ಹೇಳ್ಲಕ್ಕು. ಎಡಿಗಾದರೂ ಎನಗೆಡಿಯ, ಆನು ಮಾಡೆ, ಹೇಳ್ತವಕ್ಕೆಂತ ಹೇಳುವೊ ?

  4. ನಿಜ. ಮಾಲಿಂಗಜ್ಜನ ಹಾಂಗೆ ಕೆಲವರು ಬರೀ ಕೈನೀರು ಕೊಡೆಕ್ಕಾಗಿ ಬಯಿಂದು. ಅವು ಇಷ್ಟು ವರ್ಷ ಮಾಡಿದ್ದವನ್ನೆ;ಅದು ದೊಡ್ಡದು!ಮತ್ತೆ ಕೆಲವು ಕಡೇಲಿ ತಿಥಿ ಮಾಡಿಸಲೇ ಜೆನ ಸಿಕ್ಕದ್ದೇ, ಬೇರೆ ಬೇರೆ ತಾಪತ್ರಯಂದ, ಪುರುಸೊತ್ತು ಇಲ್ಲದ್ದೆ,ಹೀಂಗೆ ನಾನಾ ಕಾರಣಂದ ಶ್ರಾದ್ಧದ ಮೇಲೆ ಶ್ರದ್ಧೆ ಕಮ್ಮಿ ಆವುತ್ತಾ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×