Oppanna.com

ನೂರ್ಕಾಲ ಹರಸುವ ‘ತ್ರಿಕಾಲ ಪೂಜೆ’…

ಬರದೋರು :   ಒಪ್ಪಣ್ಣ    on   30/12/2011    43 ಒಪ್ಪಂಗೊ

ದೊಡ್ಡಭಾವನ ಅಜ್ಜನ ಮನೆ ದೊಡ್ಡಜ್ಜನ ಮನೆ – ಓ ಅಲ್ಲಿ; ದೂರಲ್ಲಿ.
ದೊಡ್ಡಜ್ಜನ ಮನೆಲಿ ಎಂತಾರು ಜೆಂಬ್ರ ತೆಗದರೆ ಅದು ‘ದುಬಾಯಿಲಿ ಕನ್ನಡಸಮ್ಮೇಳನ ಮಾಡಿದ ಹಾಂಗೆ’ – ಹೇಳ್ತದು ಸುಭಗಣ್ಣನ ಉಪಮೆ.
ಇದು ಸಂಗತಿ ಅಲ್ಲದ್ದಲ್ಲ – ಸುತ್ತ ಮಲೆಯಾಳವನ್ನೇ ಅಪ್ಪಿದ ನೆರೆಕರೆಯೋರು ಇಪ್ಪಗ, ಪ್ರವಾಹಕ್ಕೆ ಎದುರಾಗಿ ಈಜುತ್ತ ಈ ಒತ್ತೆ ಮನೆ ಶುದ್ಧ ಹವ್ಯಕದ್ದು.
ಒರಿಶಾವಧಿ ನೆಡೆತ್ತ ತ್ರಿಕಾಲಪೂಜೆಯೋ, ಹೆರಿಯೋರ ಕಾರ್ಯಂಗಳೋ ಎಂತಾರು ಜೆಂಬ್ರಕ್ಕೆ ಹೋದರೆ ನವಗೆ ಅರಡಿಗು – ಮನೆಯೊಳ ಶುದ್ಧ ಹವ್ಯಕ ಭಾಶೆ; ಹೆರ ಇಣ್ಕಿರೆ ಬರೇ ಗಳಗಳ-ಮಲೆಯಾಳ.
ಅಷ್ಟು ದೂರಲ್ಲಿ ನೆಲೆ ಆಗಿಂಡು ಭಾಶೆ ಒಳಿಶುದೂ ಒಂದು ಸಾಮರ್ತಿಗೆಯೇ – ಆ ವಿಶಯಲ್ಲಿ ಬೈಲಿನೋರ ಅಭಿಮಾನ ಇದ್ದು!

~

ಬೆಳಗುವ ದುರ್ಗೆಗೆ ಆರತಿ ಬೆಳಗುದು - ಬಟ್ಟಮಾವ°

ಓ ಮೊನ್ನೆ ದೊಡ್ಡಜ್ಜನ ಮನೆಲಿ ತ್ರಿಕಾಲಪೂಜೆ ಕಳಾತು. ಮೊನ್ನೆ ಹೇದರೆ ಯೇವಗ ಕೇಳುವಿ ನಿಂಗೊ.
ಬಟ್ಟಮಾವಂಗೆ ಆದರೆ ತಾರೀಕು ನೆಂಪಿಕ್ಕು; ಡೈರಿಲಿ ಬರಕ್ಕೊಂಡದು. ನಾವು ಉಂಬಲೆ ಹೋದ್ದಲ್ಲದೋ – ತಾರೀಕು ಯೇಚನೆಗೆ ಸಿಕ್ಕುತ್ತಿಲ್ಲೆ. ಹೇಳಿಕೆ ಇದ್ದತ್ತು, ಹೆರಟತ್ತು.

ಓ ಅಲ್ಲಿ ಚೆರ್ಕಳಂದ ಹೋಪಗ ವಾಟೆದೊಡ್ಡಪ್ಪ° ಸಿಕ್ಕಿದವು, ಹಾಂಗಾಗಿ ದಾರಿಗೂ ಆತು – ಮಾತಿಂಗೂ ಆತು – ಟಿಗೇಟಿಂಗೂ ಆತು ಹೇಳಿಗೊಂಡು ಒಟ್ಟಿಂಗೆ ಸೇರಿಗೊಂಡತ್ತು.
ಬಪ್ಪಗ ಹೇಂಗಾರೂ ಪರಕ್ಕಜೆ ಬಟ್ಟಮಾವ° ಇದ್ದವಲ್ಲದೋ ಒಟ್ಟಿಂಗೆ; ಹಾಂಗೆ ಸುಲಾಬಲ್ಲಿ ಊರಿಂಗೆತ್ತಿತ್ತು.
ಹೋದ್ದದು, ಬಂದದು ಮತ್ತಾಣ ವಿಶಯ, ಆದರೆ ಹೋದ್ದದು ಯೇವ ಕಾರ್ಯಕ್ಕೆ? ತ್ರಿಕಾಲ ಪೂಜೆಗೆ.

ಶಿವಪೂಜೆ, ಸತ್ಯನಾರಾಯಣ ಪೂಜೆ, ದುರ್ಗಾಪೂಜೆ, ನವಗ್ರಹ ಪೂಜೆ – ಹೇಳಿಗೊಂಡು ಬೇರೆಬೇರೆ ನಮುನೆ ಪೂಜಾಕೈಂಕರ್ಯಂಗೊ ನೆಡೆತ್ತಲ್ಲದೋ ಬೈಲಿಲಿ; ಹಾಂಗೇ ವಿಶೇಷವಾದ್ದೊಂದು ಈ ತ್ರಿಕಾಲ ಪೂಜೆ.
ಹೆಸರೇ ಹೇಳ್ತ ಹಾಂಗೆ ಮೂರೊತ್ತೂ ಪೂಜೆ ಮಾಡ್ತ ಒಂದು ದಿನದ ಮನೆಮಟ್ಟಿನ ಜಾತ್ರೆ ಇದು. ಈ ವಾರಕ್ಕೆ ಆ ತ್ರಿಕಾಲಪೂಜೆಯ ಬಗ್ಗೆಯೇ ಮಾತಾಡುವನೋ?
~

ವಾಟೆದೊಡ್ಡಪ್ಪನ ಒಟ್ಟಿಂಗೆ ಹೋಗಿ ತ್ರಿಕಾಲಪೂಜೆಗೆ ಎತ್ತುವಗಳೇ ಮದ್ಯಾನ್ನ ಆಗಿಂಡು ಬಯಿಂದು.
ಏನೊಳ್ಳೆದು – ಆಸರಿಂಗೆ – ಅಪ್ಪಗ ಪೂಜೆಗೂ ಆತು; ಹೋಳಿಗೆ ಉಂಡೂ ಆತು, ಕೈತೊಳದು ಕೂದೂ ಆತು.

ಈಗಾಣೋರು ಮದ್ಯಾನ್ನ ಊಟ ಆಗಿ ಹೆರಡ್ಳೆ ಗಡಿಬಿಡಿ; ನವಗೆ ಮದ್ಯಾನ ಉಂಡಿಕ್ಕಿ ಒರಗಲೆ ಗಡಿಬಿಡಿ!
ಅಪ್ಪು; ಒಂದು ಒರಗದ್ದೆ ಸಮ ಆಗ ಇದಾ! ಕರಗಲೆ ತಕ್ಕ ಆದರೂ.
ಹಾಂಗೆ, ಅಂಬೆರ್ಪಿನೋರು ಹೆರಟಪ್ಪಗ ನಾವು ಮೆಲ್ಲಂಗೆ ಒರಗಲೆ ಹಸೆ ಹುಡ್ಕಿತ್ತು.
ತೆಂಕಜೆಗಿಲಿಲಿ ಬಟ್ಟಮಾವಂದ್ರಿಂಗೆ ಹಾಕಿದ ಹಸೆಲೇ ಕರೆಲಿ ಜಾಗೆ ಇದ್ದತ್ತು – ಮೆಲ್ಲಂಗೆ ಸಾವಕಾಶ ಮಾಡಿಗೊಂಡೆ.

ಒಂದೊರಕ್ಕು ಆಗಿ ಎದ್ದಿಕ್ಕಿ ನೋಡುವಗ ಬಟ್ಟಮಾವಂದ್ರು ಮೆಲ್ಲಂಗೆ ಎದ್ದು – ಎಲೆತಟ್ಟೆ ಹುಡ್ಕಿಂಡಿದ್ದಿದ್ದವು.
ಬಟ್ಟಮಾವ° ಒರಕ್ಕಿಂದ ಏಳುದನ್ನೇ ಕಾದುಗೊಂಡಿದ್ದ ದೊಡ್ಡಜ್ಜ° ಹತ್ತರೆ ಬಂದು ಕೂದವು; ಅವಕ್ಕೆ ಒರಕ್ಕು ಸಮಾ ಬಿಟ್ಟು ಸಾವಕಾಶ ಅಪ್ಪಲೆ ರಜ ಹೊತ್ತು ಬೇಕನ್ನೆ – ಎರಡು ಮಿನಿಟು ಒಪ್ಪಣ್ಣನ ಹತ್ತರೆ ಮಾತಾಡಿದವು.
ಬೆಶಿಬೆಶಿ ಚಾಯವ ಆರೋ ತಂದುಕೊಟ್ಟವು; ಎಲ್ಲೋರುದೇ ತೆಕ್ಕೊಂಡವು.
ದೊಡ್ಡಜ್ಜಂಗೆ ಶೆಕ್ಕರೆ ಹಾಕದ್ದ ಚಾಯ ಆಯೇಕು.

~
ಚಾಯ ಕುಡುದು – ಅಡಕ್ಕೆ ಹೋಳುಮಾಡಿ ಬಾಯಿಗೆ ಹಾಕಿದ್ದೇ, ಬಟ್ಟಮಾವನ ಒರಕ್ಕುಬಿಟ್ಟತ್ತು ಹೇಳಿ ಲೆಕ್ಕ.
ದೊಡ್ಡಜ್ಜಂದೇ ಬಟ್ಟಮಾವಂದೇ ಕುಣುಕುಣುನೆ – ಇರುಳಾಣ ಕಾರ್ಯಕ್ರಮದ ಬಗ್ಗೆ ಆಲೋಚನೆ, ಪೂರ್ವತೆಯಾರಿ ಮಾಡಿಗೊಂಡಿತ್ತವು.
ಎಂತೆಂತ ಕಾರ್ಯಕ್ರಮಂಗೊ, ಅಷ್ಟಾವಧಾನಂಗೊ, ಹೋಮಂಗೊ – ಇತ್ಯಾದಿಗಳ ಬಗ್ಗೆ.
ಬಟ್ಟಮಾವ°-ದೊಡ್ಡಜ್ಜನ ಮಾತುಕತೆ ಮುಗಾತು. ಬಟ್ಟಮಾವ° ಮೀವಲೆ ಹೋದವು.
ನವಗೆ ಇರುಳಾಣ ಊಟದ್ದು ಮಾಂತ್ರ ನೆಂಪಿದ್ದದು; ಇಷ್ಟೆಲ್ಲ ಯೋಚನೆ ಮಾಡೇಕು ಹೇಳಿಯೂ ಅಂದಾಜಿ ಆಗಿತ್ತಿಲ್ಲೆ.
ತ್ರಿಕಾಲಪೂಜೆಯ ಶುದ್ದಿ ಬೈಲಿಂಗೆ ಹೇಳುವೊ° ಹೇದು ಮನಸ್ಸಿಂಗೆ ಕಂಡದೇ ಈಗ!
~
ಒಪ್ಪಣ್ಣಂಗೆ ಪೂರ್ತ ಒರಕ್ಕು ಬಿಟ್ಟು ಹೆರ ಬಪ್ಪಗ – ಹತ್ತರಾಣ ನಾಕೆಂಟು ನೆಂಟ್ರುಗೊ ಮಣೆಮೆಟ್ಟುಕತ್ತಿ ಹಿಡ್ಕೊಂಡು ಇರುಳಾಣದ್ದಕ್ಕೆ ಕೊರಕ್ಕೊಂಡಿತ್ತವು. ಗವುಜಿ ಗಲಾಟೆ ಮುಗಿವಗ ಕೆಣಿಬಾಗಂಗಳೂ ಮುಗಾತು.
ಕೊರವಲೆ ಸೇರಿ; ಕೊರದು ಎದ್ದಿಕ್ಕಿ – ಬಟ್ಟಮಾವನ ಹುಡ್ಕುವಗ; ಅವು ಮಿಂದಿಕ್ಕಿ ಸಂಧ್ಯಾವಂದನೆಲಿ ಇದ್ದಿದ್ದವು.
ಅಂಬಗ ಮಾತಾಡ್ಳಾತಿಲ್ಲೆ!

ಸಂಧ್ಯಾವಂದನೆ ಆದಪ್ಪದ್ದೇ, ಇರುಳಾಣ ಪೂಜೆ ಆರಂಭ ಆತು.
ಮಿಂದಿಕ್ಕಿ ಬಪ್ಪಲಕ್ಕು – ಹೇಳಿಗೊಂಡು ಒಂದು ಚೆಂಡಿಹರ್ಕು ಕೊಟ್ಟವು ಮನೆಯವು. ಛೆ, ಇನ್ನು ಮೀಯದ್ದೆ ಪೋಕಿಲ್ಲೆ ಹೇಳಿಗೊಂಡು – ಬೆಶಿನೀರ ಒಲೆಬುಡಲ್ಲಿ ಚಳಿಕಾಸಿ ಕಾದು ನಿಂದು – ಮಿಂದಿಕ್ಕಿ ಬಂದಾತು.
ಬಪ್ಪಗ ಪೂಜೆ ಅರ್ದ ಆಯಿದು.
ಕೇಪುಳೆ ಕಿಸ್ಕಾರಲ್ಲಿ ಅಲಂಕಾರ ಆಯಿದು. ಬಟ್ಟಮಾವಂದ್ರು ಸುತ್ತ ಕೂದುಗೊಂಡು ಮವುನಲ್ಲಿ ಒಂದೊಂದೇ ಹೂಗು ಹಾಕುತ್ತಾ ಇದ್ದವು
ಬಟ್ಟಮಾವ° ಈಗ ಬಯಂಕರ ಗಂಭಿರ. ಮಾತಾಡ್ಳೇ ಸಿಕ್ಕವು.
ಇರುಳು ಉಂಡಿಕ್ಕಿ ಒಂದ್ಸಮಯ ಸಿಕ್ಕಲೂ ಸಾಕು – ಹೇಳಿಗೊಂಡು, ಸುಮ್ಮನೆ ಬಂದು ಹೆರ ಕೂದುಗೊಂಡೆ.

ಇರುಳಾಣ ಪೂಜೆ ಆತು, ಪೂಜೆಗೆ ಹೊಂದಿಗೊಂಡ ಅಷ್ಟಾವಧಾನ ಕಾರ್ಯಕ್ರಮಂಗಳೂ ಆತು.
ಇದರ ವಿವರಂಗಳ ಕೇಳೇಕಾದ ಬಟ್ಟಮಾವಂಗೆ ಉದ್ವಾಸಯಾಮಿ ಹೇಳಿಕ್ಕಿ ಎದ್ದೂ ಆತು.
ಸುರುವಾಣ ಹಂತಿಗೇ ಉಂಡೆದ್ದ ಬಟ್ಟಮಾವಂದ್ರು –ಎರಡ್ಣೇ ಹಂತಿ ಊಟ ಅಪ್ಪದ್ದೇ – ಅಂಬೆರ್ಪಿಲಿ ಹೆರಟೇ ಬಿಟ್ಟವು!
ಮರದಿನಕ್ಕೆ ಕೋಡಪದವಿಲಿ ಮದುವೆ ಮಾಡುಸಲೆ ಇದ್ದಡ; ದಿಬ್ಬಾಣ ಎದುರುಗೊಂಬ ಮದಲೇ ಎತ್ತೇಕಲ್ಲದೋ – ಹಾಂಗೆ ಅಷ್ಟು ಅಂಬೆರ್ಪಿಲಿ ಹೆರಟೇಬಿಟ್ಟವು.
ಮಾತಾಡ್ಳೆ ಕಾದುಕೂದ ಒಪ್ಪಣ್ಣಂಗೆ ಮಾತಾಡ್ಳೇ ಆಯಿದಿಲ್ಲೆ!

ಆ ದಿನ ಅಲ್ಲೇ ಒರಗಿ ಮರದಿನ ಎದ್ದು ಹೆರಟು ಬಂದದು.
ಚೆರ್ಕಳ ಒರೆಂಗೆ ಪರಕ್ಕಜೆಅಣ್ಣ ಇತ್ತಿದ್ದವು ಇದಾ – ಅವರ ಕಿಸೆಲಿ ದೊಡ್ಡನೋಟು ಸುಲಾಬಲ್ಲಿ ಇದ್ದಕಾರಣ ಅವ್ವೇ ಟಿಗೇಟುಮಾಡಿದವು.
ಚೆರ್ಕಳಂದ ನವಗೆ ಒಬ್ಬಂಗೇ ಬಪ್ಪಲೆ ಹೆದರಿಕೆ ಇದ್ದೋ! ಹು!!
ಅಂತೂ ಬೈಲಿಂಗೆತ್ತಿತ್ತು.
~

ತ್ರಿಕಾಲಪೂಜೆಯ ಬಗ್ಗೆ ಹೇಳೇಕಾರೆ ಅದರ ಮಾಡಿ ಗೊಂತಿರೇಕು. ಕನಿಷ್ಠ ಪಕ್ಷ ನೋಡಿ ಆರೂ ಅರಡಿಯೇಕು! ಅಲ್ಲದೋ?
ಆಚಮನೆ ದೊಡ್ಡಣ್ಣಂಗೆ ಗೊಂತಿಕ್ಕು ಇದೆಲ್ಲ – ಹೇಳಿಗೊಂಡು ಮೊನ್ನೆ ಹೊತ್ತೋಪಗ ಅವನ ಕಾಂಬಲೆ ಹೋದೆ.
ಸಣ್ಣ ಮಗಳ ನೋಡಿಗೊಂಬಲೆ ದೊಡ್ಡಮಗಳು ಗಾಯತ್ರಿ ಇದ್ದಕಾರಣ ಇವಂಗೆ ರಜ ಪುರುಸೊತ್ತೇ ಅಲ್ಲದೋ – ಹಾಂಗೆ ಒಂದು ಕಟ್ಟ ಹುಲ್ಲು ತಂದ ಬಚ್ಚಲಿಂಗೆ  ಕಾಲುನೀಡಿ ಕೂದುಗೊಂಡಿತ್ತಿದ್ದ°.

ಮೆಲ್ಲಂಗೆ ತ್ರಿಕಾಲಪೂಜೆಯ ಬಗ್ಗೆ ಕೇಳುಲೆ ಸುರುಮಾಡಿದೆ. ಕೇಳಿದಾಂಗೇ ಹೇಳುಲೆ ಸುರುಮಾಡಿದ°.
~

ತ್ರಿಕಾಲಪೂಜೆ:
ನವಗೆಲ್ಲೋರಿಂಗೂ ಮನೆದೇವರು ಹೇಳಿ ಇದ್ದ ಹಾಂಗೆ, ಆ ಮಹಾತಾಯಿ ದುರ್ಗೆಯ ಆರಾಧನೆಯೂ ಇದ್ದು.
ಮನೆಲಿ ಆರಾಧನೆ ಮಾಡ್ತ ದುರ್ಗೆಲಿ ಎರಡು ವಿಧ ಅಡ.
ಒಂದು – ಅಮೋಘ ಶೆಗ್ತಿಲಿ ಈಗಷ್ಟೇ ರಾಕ್ಷಸರ ಸಂಹಾರ ಮಾಡಿ ಉಗ್ರರೂಪಿಣಿ ಆಗಿಂಡು ನಿಂದ ಶಕ್ತಿ ದುರ್ಗೆ(ಅಗ್ನಿದುರ್ಗೆ ಹೇಳಿಯೂ ಹೇಳ್ತವಡ)
ಇನ್ನೊಂದು – ಲೋಕದ ಎಲ್ಲ ಮಕ್ಕಳ ಶಾಂತರೂಪಲ್ಲಿ ಅನುಗ್ರಹಿಸುತ್ತ ಶಾಂತದುರ್ಗೆ. ನಮ್ಮ ಬೈಲಿಲಿ ಕೆಲವು ಮನೆಲಿ ಶಾಂತದುರ್ಗೆಯ ಪೂಜೆ ಮಾಡ್ತರೆ, ಮತ್ತೆ ಕೆಲವು ಮನೆಗಳಲ್ಲಿ ಶೆಗ್ತಿ ದುರ್ಗೆಯ ಪೂಜೆ ಮಾಡ್ತವಡ.
(ನಿಂಗಳ ಮನೆಲಿ ಯೇವ ದುರ್ಗೆಯ ಪೂಜೆ ಮಾಡ್ತದು? ಹೆರಿಯೋರತ್ರೆ ಕೇಳಿ; ಅಲ್ಲದ್ದರೆ ನಿಂಗಳ ಬಟ್ಟಮಾವನ ಹತ್ತರೆ ಕೇಳಿಗೊಳ್ಳಿ).

ತ್ರಿಕಾಲ ಪೂಜೆ – ಹೆಸರೇ ಹೇಳುವ ಹಾಂಗೆ ಮೂರೊತ್ತು ಮಾಡ್ತ ಪೂಜೆ ಅಡ.
ನಮ್ಮ ಮನೆಯ ದುರ್ಗೆಗೆ ಮೂರೂಹೊತ್ತು ಪೂಜೆ ಮಾಡ್ತ ಆ ಮಹಾಕಾರ್ಯವೇ “ತ್ರಿಕಾಲಪೂಜೆ”.
~
ಉದಿಯಪ್ಪಗ, ಮಜ್ಜಾನಪ್ಪಗ, ಇರುಳಿಂಗೆ – ಮೂರು ಹೊತ್ತು ಆ ದುರ್ಗೆಯ ಮೂರು ಅವತಾರಂಗಳ ಪೂಜೆ ಮಾಡ್ತದಡ.
ಒಂದೊಂದು ಅವತಾರವ ಪೂಜೆ ಮಾಡುವಗಳೂ ಆಯಾ ಅವತಾರದ ಪೂಜಾ ಪದ್ಧತಿಗೊ – ಹೇಳಿಗೊಂಡು ಒಂದೊಂದನ್ನೇ ವಿವರುಸಲೆ ಸುರುಮಾಡಿದ.

ಪಂಚವರ್ಣ ಮಂಡ್ಳ:
ನಿತ್ಯಪೂಜಗೆ ಬೆಳಿ ಸೇಡಿಹೊಡಿ ಮಂಡ್ಳ ಹಾಕುತ್ತದು ನಾವು ನೋಡ್ತು. ಆದರೆ, ಈ ತ್ರಿಕಾಲಪೂಜಗೆ ಕೆಂಪು-ಕಪ್ಪು-ಹಳದಿ-ಹಸುರು-ಬೆಳಿ – ಇವೇ ಐದು ಹೊಡಿಗಳ ಬೇಕಾದ ಹಾಂಗೆ ಹಾಕಿಂಡು – ಚೆಂದದ ಪಂಚವರ್ಣದ ಮಂಡ್ಳ ಹಾಕುತ್ತವು ಬಟ್ಟಮಾವಂದ್ರು.
ಸದ್ಯ ಕಲ್ತು ಬಂದ ಬಟ್ಟಕ್ಕೊಗೆ ಅದೊಂದು ಟ್ರೈನಿಂಗು ಪಾಟ. ಹೇಂಗಿ ಹೊಡಿ ಬಿಕ್ಕುತ್ಸು – ಹೇಳ್ತದು.
ಶಿವಳ್ಯದೋರಲ್ಲಿ ಈ ಪಂಚವರ್ಣದ ಮಂಡ್ಳ ಎಲ್ಲಾ ಪೂಜಗೆ ಹಾಕುತ್ತವು. ಅವಕ್ಕೆ ಮಂಡ್ಳವೇ ಬಲ, ಮಂತ್ರಂದಲೂ!! ಅದಿರಳಿ.
ಪೂಜೆಯ ಮುನ್ನಾಣದಿನವೇ ಪಂಚವರ್ಣದ ಶ್ರೀಚಕ್ರ ಮಂಡ್ಳ ಹಾಕಿಂಡು, ನೆಡೂಕೆ ಶ್ರೀದುರ್ಗೆ, ಸುತ್ತಲೂ ಅಧಿದೇವತೆಗೊ, ಪ್ರತ್ಯಧಿದೇವತೆಗೊ, ಅಷ್ಟ ದಿಕ್ಪಾಲಕರು, ದಶವಸುಗೊ, ದ್ವಾದಶಾದಿತ್ಯರು – ಎಲ್ಲೋರನ್ನೂ ಕಲ್ಪುಸಿಗೊಂಬದಡ.

ಪೂಜಾರಂಭ:
ಮುನ್ನಾಣ ದಿನವೇ ಮಂಡ್ಳ ಹಾಕಿರ್ತವು, ಹಾಂಗೆ ಬಟ್ಟಮಾವಂದ್ರು ಬೇಗ ಎದ್ದು ಪೂಜಾರಂಭ ಮಾಡ್ತವು.
ಪ್ರಥಮವಾಗಿ, ಒಂದು ಕಟ್ಟು ಭಸ್ಮವ ಶ್ರೀಚಕ್ರಲ್ಲಿ ಮಡಗುತ್ತದಡ. ಮೂರೂ ಹೊತ್ತು ಆ ಮಂಡ್ಳಕ್ಕೇ ಪೂಜೆ ಕಳುದ ಮತ್ತೆ ಅದೇ “ಮೂಲಪ್ರಸಾದ” ಆಗಿ ಸ್ವೀಕಾರ ಮಾಡ್ತದು.
ಮಹಾಮಾಯೆ ದುರ್ಗೆಯ ಆವಾಹನೆ ಮಾಡಿ ಮಂಡಲ ಕೇಂದ್ರಲ್ಲಿ ಸ್ಥಾಪನೆ ಮಾಡಿಗೊಂಡು, ಇಷ್ಟೆತ್ತರದ ದೀಪವ  ಮಂಡ್ಳಮಧ್ಯಲ್ಲಿ ಮಡಗುತ್ತವು. ಸರ್ವಲೋಕಕ್ಕೇ ಬೆಣಚ್ಚುಕೊಡ್ತ ಆ ದೀಪಕ್ಕೇ ಮೂರೊತ್ತೂ ಪೂಜೆಮಾಡ್ತದು ತ್ರಿಕಾಲಪೂಜೆಯ ಇನ್ನೊಂದು ವಿಶೇಷ.

ಕಣ್ಣಾಟಿ, ಕುಂಕುಮ – ಇವೇ ಮೊದಲಾದ ಮಂಗಳ ದ್ರವ್ಯಂಗಳೂ ದೀಪದ ಬುಡಲ್ಲಿ ಮಡಗುತ್ತವಡ.
ದೇವಿದುರ್ಗೆ, ಒಳುದ ಶೆಗ್ತಿಗಳ ಧ್ಯಾನ, ಆವಾಹನೆ ಎಲ್ಲ ಆದ ಮತ್ತೆ ಬೀಜಮಂತ್ರಂದ ಪುಷ್ಪಾಂಜಲಿ ಮಾಡ್ತದು.

ಪುಷ್ಪಾಂಜಲಿ:

ತ್ರಿಕಾಲ ಪೂಜೆಯ ಬಹುಮುಖ್ಯ ಅಂಗವೇ ಪುಷ್ಪಾಂಜಲಿ.
ಅಂಜಲಿಲಿ(ಕೈಲಿ) ಪುಷ್ಪವ(ಹೂಗಿನ) ಹಿಡುದು ದೇವರಿಂಗೆ ಸಮರ್ಪಣೆ ಮಾಡುದೇ ಪುಷ್ಪಾಂಜಲಿ – ಹೇದು ಡಾಮಹೇಶಣ್ಣ ಮೊನ್ನೆ ವಿವರುಸಿತ್ತಿದ್ದ.
ದೇವಿಯ ನಿರ್ದಿಷ್ಟ ಅವತಾರವ ಮೂಲಮಂತ್ರಲ್ಲಿ ಸ್ಮರಣೆಮಾಡಿ, ಒಂದೆಸಳು ಹೂಗಿನ ಸಮರ್ಪಣೆ ಮಾಡ್ತದೇ ಪುಷ್ಪಾಂಜಲಿ.
ಸಾದಾರಣವಾಗಿ ತ್ರಿಕಾಲ ಪೂಜೆಯ ಮೂರೂ ಹೊತ್ತು ಮೂರು ಅತವಾ ನಾಕು ಸಾವಿರದ ಹಾಂಗೆ – ಒಟ್ಟು ಒಂಬತ್ತು ಅತವಾ ಹನ್ನೆರಡು ಸಾವಿರ ಸರ್ತಿ ಪುಷ್ಪಾಂಜಲಿ ಅರ್ಚನೆ ಮಾಡ್ತವಡ. ಅದಕ್ಕೇ ಅಷ್ಟು ಜೆನ ಬಟ್ಟಕ್ಕೊ ದೀಪಮಂಡ್ಳದ ಸುತ್ತವೇ ಕೂದುಗೊಂಡಿಪ್ಪದು. ಹೋ – ಅಪ್ಪನ್ನೇ!!

ಬಿಲ್ವ, ತೊಳಶಿ, ಕಿಸ್ಕಾರ –ಮೂರು ಹೊತ್ತು ನಮುನೆ ಹೂಗುಗಳಲ್ಲಿ ದುರ್ಗೆಗೆ ಅರ್ಚನೆ ಮಾಡುದಡ.
ಪ್ರತಿ ಅರ್ಚನೆ ಮಾಡುವಗಳೂ ಈ ಹೂಗಿನ ನೀರಿಲಿ ಅದ್ದಿ ಮಂಡ್ಳಕ್ಕೆ ಹಾಕುದಡ.
ಯೇವ ನೀರಿಲಿ?

ಮನೆದೇವರು ಶಾಂತದುರ್ಗೆ ಆಗಿದ್ದರೆ ಗಂಧನೀರು, ಅತವಾ ಚಂದನದ ನೀರು, ಅತವಾ ಪನ್ನೀರಿಂಗೆ ಅದ್ದಿ ಹಾಕುದಡ.
ಮನೆದುರ್ಗೆ ಶೆಗ್ತಿದುರ್ಗೆ ಆದರೆ ಕುರುದಿ ನೀರಿಂಗೆ ಅದ್ದಿ ಹಾಕುದಡ.
ಕುರುದಿನೀರು ಹೇಳಿದರೆ ಎಂತರ ಹೇದು ಗೊಂತಿದ್ದನ್ನೇ? – ರಕ್ತವರ್ಣದ ಕುಂಕುಮ ನೀರು!

~

ಮಂಡ್ಳ ಮಧ್ಯಲ್ಲಿ ಜ್ಯೋತಿರೂಪಲ್ಲಿ ಕಾಂಬದೇ "ಮಹಾದುರ್ಗೆ"!

ಪ್ರಾತಃಕಾಲ: ಬಾಲಾತ್ರಿಪುರಸುಂದರಿ: (ಬಾಲಾಸರಸ್ವತಿ)
ಸೂರ್ಯನೂ ಬಾಲಾವಸ್ಥೆಲಿಪ್ಪ ಆ ಉದಿಉದಿಯಪ್ಪಗ – ಬಾಲ್ಯಾವಸ್ಥೆಲಿಪ್ಪ ಮಹಾದುರ್ಗೆಯ ಪೂಜೆಮಾಡ್ತದು.
ಬಾಲರೂಪದ ಆ ದುರ್ಗೆಯ ಅವತಾರಕ್ಕೆ ಬಾಲಾಸರಸ್ವತಿ ಅತವಾ ಬಾಲಾತ್ರಿಪುರ ಸುಂದರಿ – ಹೇಳಿಯೂ ಪಾಠಾಂತರ ಲ್ಲಿ ಹೇಳ್ತವಡ.

ಮೂಲಮಂತ್ರ:
ಓಂ ಐಂ ಕ್ಲೀಂ ಸೌಃ – ಸೌಃ ಕ್ಲೀಂ ಐಂ ಓಂ |
ಬಾಲಾತ್ರಿಪುರಸುಂದರ್‍ಯೈ ನಮಃ ||

ಬಿಲ್ವಪತ್ರೆಯ ಕೈಲಿ ಹಿಡ್ಕೊಂಡು, ಬಾಲಾಸರಸ್ವತಿಯ (/ ಬಾಲಾ ತ್ರಿಪುರಸುಂದರಿಯ) ಈ ಮೂಲಮಂತ್ರವ ಕಲ್ಪುಸಿಗೊಂಡು, ನೀರಿಂಗೆ (ಗಂಧನೀರು / ಕುರುದಿನೀರು) ಅದ್ದಿ ಮಂಡ್ಳಕ್ಕೆ ಹಾಕುಗು – ಸುತ್ತಲೂ ಕೂದ ಬಟ್ಟಮಾವಂದ್ರು.
ಶಿವನ ಇಷ್ಟದ ಬಿಲ್ವಪತ್ರೆಲಿ ಬಾಲರೂಪೀ ಅಬ್ಬೆಯ ಪೂಜೆಮಾಡ್ತದು ವಿಶೇಷ.
ಎಲ್ಲ ಬಟ್ಟಮಾವಂದ್ರ ಒಟ್ಟು ಜೆಪ ಮೂರು (ಅತವಾ ನಾಲ್ಕು) ಸಾವಿರ ಅಪ್ಪಷ್ಟು ಹೊತ್ತು ಮವುನಲ್ಲಿ ಪುಷ್ಪಾಂಜಲಿ ಮಾಡುಗು. ಅದಾದ ಮತ್ತೆ ಉದಿಯಪ್ಪಗಾಣ ಪೂಜೆಯ ಮಂಗಳಾರತಿ.
ನಾಲ್ಕೂ ಹೊಡೆಂದ ಬಿಲ್ವಪತ್ರೆಲಿ ಅರ್ಚನೆ ಮಾಡುವಗ, ಮುನ್ನಾಣದಿನ ಹಾಕಿದ ಆ ದೊಡ್ಡ ಮಂಡ್ಳ ಕ್ರಮೇಣ ಮುಚ್ಚಿ, ಹಸುರು ಬಣ್ಣದ ಬಿಲ್ವಪತ್ರೆಯೇ ಎದ್ದು ಕಾಂಗು.
ಮಂಗಳಾರತಿಗಪ್ಪಗ ನೆಡುಗೆ ಇಪ್ಪ ದೀಪದ ಕಾಲ್ವಾಶಿಯೂ ಹಸುರು ಬಿಲ್ವಪತ್ರೆಲಿ ಮುಚ್ಚಿರ್ತು!

ಮಧ್ಯಾಹ್ನ: ವನದುರ್ಗೆ
ಉದಿಯಪ್ಪಗ ಪೂಜೆ ಆದಮತ್ತೆ ಕಾಪಿ ವೆವಸ್ತೆ.
ಕಾಪುಡುದು, ಒಂದರಿ ಪೇಪರು ಎಲ್ಲ ಓದಿ ವಿಶ್ರಾಂತಿ ಅಪ್ಪದ್ದೇ, ಮಧ್ಯಾಹ್ನದ ಪುಷ್ಪಾಂಜಲಿ ತೆಯಾರು ಸುರು ಆವುತ್ತು.
ಉದಿಯಪ್ಪಗ ಪೂಜೆ ಮಾಡಿದ ಮಂಡ್ಳಲ್ಲಿ ದೇವತಾ ಶೆಗ್ತಿಗೊ ಹಾಂಗೇ ಇಪ್ಪ ಕಾರಣ, ಉದಿಯಪ್ಪಗ ಆವಾಹನೆ ಮಾಡಿದ ಶೆಗ್ತಿಯೇ ಇಪ್ಪ ಕಾರಣ ಈಗ ಬುಡಂದ ಆವಾಹನೆ ಮಾಡೇಕು – ಹೇದು ಇಲ್ಲೆ.
ಬಟ್ಟಮಾವಂದ್ರು ಸೀತ ಪುಷ್ಪಾಂಜಲಿ ಸುರು ಮಾಡುಗು.

ಮೂಲಮಂತ್ರ:
ಓಂ ಹ್ರೀಂ ಉತ್ತಿಷ್ಠ ಪುರುಷಿ ಕಿಂ ಸ್ವಪಿಷಿ ಭಯಂ ಮೇ ಸಮುಪಸ್ಥಿತಂ, ಯದಿ ಶಕ್ಯಮಶಕ್ಯಂ ವಾ ತನ್ಮೇ ಭಗವತಿ ಶಮಯ ಸ್ವಾಹಾ |
ಶ್ರೀ ವನದುರ್ಗಾಯೈ ನಮಃ ||

ಹಸುರು ವನಲ್ಲಿ ಇಪ್ಪ ವನದುರ್ಗೆಗೆ ಹಸುರು ತೊಳಶಿಲಿ ಪುಷ್ಪಾಂಜಲಿ ಮಾಡ್ತದು ವಿಶೇಷ.

ಮದ್ಯಾನ್ನದ ಪುಷ್ಪಾಂಜಲಿ ಮುಗುದ ಮತ್ತೆ ಮಂಗಳಾರತಿ.
ಕಡುಹಸುರು ಬಿಲ್ವಪತ್ರೆಯ ಮೇಗೆ ಬಿದ್ದ ಎಳೆಹಸುರು ತೊಳಶಿ ಎಲೆಗೊ ವನದುರ್ಗೆಗೆ ಅರ್ಪಣೆ ಆಗಿರ್ತು.
ಮಂಡ್ಳಲ್ಲಿಡೀ ಹರಡಿ, ದೀಪದ ಅರೆವಾಶಿ ಒರೆಗೆ ಎತ್ತಿರ್ತು.
ಮಧ್ಯಾಹ್ನದ ಪೂಜೆಯ ಗವುಜಿ ಊಟಲ್ಲಿ ಮುಗಿತ್ತು!!

~

ಬಟ್ಟಮಾವಂದ್ರಿಂಗೆ ಅರೆಗಳಿಗೆ ವಿಶ್ರಾಂತಿ. ಒಂದೊರಕ್ಕು ಒರಗಲಕ್ಕು ಬೇಕಾರೆ.
ಎದ್ದು, ಚಾಯಕುಡುದು ಎಲೆತಿಂಬಷ್ಟು ಪುರುಸೊತ್ತಿದ್ದಿದಾ – ಇನ್ನಾಣ ಪೂಜೆ ಇರುಳಿಂಗೇ ಅಲ್ಲದೋ!
ಬಟ್ಟಮಾವಂದ್ರು ಒರಗಿದ ಕಾರಣ ಇನ್ನು ಪೂಜಗೆ ಕೂರೇಕಾರೆ ಮೀವಲೇ ಬೇಕು!
ಹಾಂಗೆ, ಇರುಳಾಣ ಪೂಜಗೆ ಹೊತ್ತೋಪಗಳೇ ಮಿಂದಿಕ್ಕಿ ಬಂದು ಸಂಧ್ಯಾವಂದನೆ ಮಾಡಿಕ್ಕಿ ದೇವರೊಳ ಕೂದುಗೊಂಗು.

~

ರಾತ್ರಿ: ಸ್ವಯಂವರ ಪಾರ್ವತಿ:
ವಿದ್ಯೆಗೆ ಬೇಕಾದ ಸರಸ್ವತಿಯೂ, ವನಾಶ್ರಯಲ್ಲಿ ಅಭಯ ಕೊಡ್ತ ವನದುರ್ಗೆಯೂ ಒಲುದ ಮತ್ತೆ, ಸಂಸಾರ ಸಾಗಲೆ ಬೇಕಾದ ಸ್ವಯಂವರ ಪಾರ್ವತಿಯ ಒಲುಸುತ್ತ ಗವುಜಿ.
ಇರುಳಾಣ ಪೂಜೆ ಈ ಸ್ವಯಂವರ ಪಾರ್ವತಿಗೇ.

ಮೂಲಮಂತ್ರ:
ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗಭಯಂಕರಿ ಸಕಲ ಸ್ಥಾವರ ಜಂಗಮಸ್ಯ ಮುಖ ಹೃದಯಂ,
ಮಮವಶಮಾಕರ್ಷಯ ಆಕರ್ಷಯ ಸ್ವಾಹಾ ||
ಸ್ವಯಂವರ ಪಾರ್ವತ್ಯೈ ನಮಃ ||

ಸ್ವಯಂವರ ಪಾರ್ವತಿಗೆ ವನಲ್ಲೇ ಸಿಕ್ಕುವ ಕಾಡುಕಿಸ್ಕಾರ ಹೂಗಿಲೇ ಪುಷ್ಪಾಂಜಲಿ.
ಒಂದೊಂದೇ ಹೂಗಿನ ಈ ಮೂಲಮಂತ್ರವ ನೆನೆಸಿಗೊಂಡು, ನೀರಿಂಗದ್ದಿ ಮಂಡ್ಳಕ್ಕೆ ಬಿಡ್ತವು ಬಟ್ಟಮಾವಂದ್ರು.
ಇದಾದ ಮತ್ತೆ ಮಂಗಳಾರತಿ.

ಶಕ್ತಿದುರ್ಗೆಗೆ ಬಲಿ:
ಆಗಳೇ ಮಾತಾಡಿದ ಹಾಂಗೆ, ಶೆಗ್ತಿದುರ್ಗೆಗೂ, ಶಾಂತದುರ್ಗೆಗೂ ಅರ್ಪಣೆಮಾಡುವ ಆಚಾರಂಗಳಲ್ಲಿ ಬದಲಾವಣೆ ಇದ್ದು. ಇರುಳಾಣ ಮಂಗಳಾರತಿಗಪ್ಪಗ ಈ ವಿತ್ಯಾಸ ವಿಶೇಷವಾಗಿ ಗಮನಕ್ಕೆ ಬತ್ತು.

ಕುಂಬ್ಳಕಾಯಿಯ ಕೊರದು, ಅದರ ತುಂಡುಗೊಕ್ಕೆ ರಕ್ತವರ್ಣದ ಕುರುದಿನೀರು ಎರದು – ಶಕ್ತಿ ಸಮರ್ಪಣೆಮಾಡ್ತದೇ – ಬಲಿ.

ಅಡಕ್ಕೆ ಹಾಳೆ ಕೊಡಿಗಳ ಮಡುಸಿ ಪಡಿಗೆ ಮಾಡಿಗೊಂಬದು.
ತೆಂಗಿನ ಮಡ್ಳಿಂಗೆ ಬೆಳಿಹರ್ಕು ಸುಂದಿ, ಎಳ್ಳೆಣ್ಣೆಲಿ ಅದ್ದಿ “ಕೋಲುತ್ರಿ” ಮಾಡಿಗೊಂಬದು.
ಮಂಡ್ಳದ ನಾಲ್ಕೂ ಹೊಡೆಂಗೆ ಪಡಿಗೆ ಮಡುಗಿ, ಪಡಿಗೆಯ ಎರಡೂ ಹೊಡೆಂಗೆ ಕೋಲುತ್ರಿ ಕುತ್ತುದು.
ಇರುಳಾಣ ಮಂಗಳಾರತಿ ಆದ ಮತ್ತೆ ಈ ಪಡಿಗೆಗಳಲ್ಲಿ ಕುಂಬ್ಳಕಾಯಿಯ ಕೆಂಪು ತುಂಡುಗಳ ಹಾಕಿ, ಕೋಲುತ್ರಿ ಹೊತ್ತುಸಿರೆ ಅದುವೇ ಬಲಿ!!

ಪೂರ್ವಕಾಲದ ಮಾಂಸಾಹಾರದ ’ಸಸ್ಯಾಹಾರ ರೂಪವೋ ಏನೋ’ ಹೇಳ್ತದು ದೊಡ್ಡಣನ ಅಭಿಪ್ರಾಯ.

~

ಅಷ್ಟಾವಧಾನ:
ಅಷ್ಟಾವಧಾನ ಹೇಳಿದ ಕೂಡ್ಳೇ ಗಣೇಶರ ನೆಂಪಾವುತ್ತು ನವಗೆ. ಅದು ಬೇರೆ.

ತ್ರಿಕಾಲಪೂಜೆಯ ದಿನ ದುರ್ಗೆಯ ಎಂಟು ವಿಧಲ್ಲಿ ಸೇವೆಮಾಡಿ, ಸ್ತುತಿಸಿ ಸಂತೋಷಿಸುದಕ್ಕೆ ಅಷ್ಟಾವಧಾನ ಹೇಳುದು
ತ್ರಿಕಾಲಪೂಜೆಯ ಇನ್ನೊಂದು ವಿಶೇಷ ಇದು.
ಇರುಳಾಣ ಪೂಜೆ ಆದ ಮತ್ತೆ, ಸೇರಿದ ನೆರೆಕರೆ- ನೆಂಟ್ರುಗೊ ಎಲ್ಲೋರುದೇ ದೇವರೊಳಾಣ ಮಂಡ್ಳ ಕಾಣ್ತ ಹಾಂಗೆ ಕೂದುಗೊಂಗು. ಅಷ್ಟಾವಧಾನದ ಒಂದೊಂದೇ ಸೇವೆಗಳ ಅಧ್ವರ್ಯು ಆಗಿ ಕೂದ ಬಟ್ಟಮಾವ° ಸುರು ಮಾಡುಗು.

ಅಷ್ಟಾವಧಾನದ ಎಂಟು ಸೇವೆಗೊ ಯೇವದೆಲ್ಲ?

  • ಋಗ್ವೇದ, ಯಜುರ್ವೇದ, ಸಾಮ ವೇದ, ಅಥರ್ವ ವೇದ – ಚತುರ್ವೇದಂಗಳ ಪಾರಾಯಣ,
  • ಪಂಚಾಂಗ ಶ್ರವಣ,
  • ಪುರಾಣ ಪಠಣ,
  • ಅಷ್ಟಕ / ದಂಡಕ ಗಾಯನ,
  • ಪಂಚವಾದ್ಯ ತಾಡನ!!
    – ಇವೇ ಮುಖ್ಯವಾದ ಅಷ್ಟಾವಧಾನ.

ಪ್ರತಿ ಅವಧಾನಂದ ಮದಲು ಶ್ರೀದೇವಿಯ ಹೊಗಳ್ತ ನಾಕು ಸಾಲುಗಳ ಸಣ್ಣ ಪೀಠಿಕೆ ಇರ್ತು.
ಇದಾದ ಮತ್ತೆಯೇ ಸೇವೆ ಸುರು ಅಪ್ಪದು
ಅಷ್ಟಾವಧಾನದ ಆ ಸೇವೆ ಮುಗುದಪ್ಪದ್ದೇ || ಓಂ ಸ್ವಸ್ತಿ || – ಹೇಳಿ ಆ ಸೇವೆ ಒಳ್ಳೆದರ್ಲಿ ಮುಗುತ್ತು – ಹೇಳುಗು ದೇವಿಯ ಹತ್ತರೆ.

ಉದಾಹರಣೆಗೆ, ಋಗ್ವೇದ ಸೇವೆಂದ ಮೊದಲು ಬಟ್ಟಮಾವ° ಈ ಸಾಲುಗಳ ಹೇಳುಗು:

ದೇವದೇವೋತ್ತಮೇ..
ದೇವತಾ ಸಾರ್ವಭೌಮೇ..
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಿಕೇ..
ಋಗ್ವೇದ ಪ್ರಿಯೇ, ದೇವೀ..
ಋಗ್ವೇದ ಸೇವಾಮವಧಾರಯಾ ||

ಮಾಡಾವುಗೋಪಾಲಣ್ಣನೂ, ಬಡೆಕ್ಕೋಡಿಗೋಪಾಲಣ್ಣನೂ ಇಪ್ಪ ತ್ರಿಕಾಲಪೂಜೆ ಆದರೆ, ಬಟ್ಟಮಾವ° “ಸೇವಾಮವಧಾರಯಾ…” ಹೇಳಿ ರಾಗಲ್ಲಿ ನಿಲ್ಲುಸಿ ಅಪ್ಪದ್ದೇ, “ಡೊಂಯ್” – ಹೇದು ಒಂದರಿ ಘಂಟೆಬಡಿಗಡ.
ಇಡೀ ಮೌನಲ್ಲಿ ಇಪ್ಪ ಸಭೆಗೆ ಒಂದು ಗಂಭೀರ ಸೂಚನೆ ಅದು.

~

ಮದಲಿಂಗೆ ಇಡೀ ಋಗ್ವೇದ ಪಾರಾಯಣ ಆಗಿಂಡಿತ್ತೋ ಏನೋ – ಈಗಾಣ ಸೌಕರ್ಯಲ್ಲಿ ಋಗ್ವೇದಂದ ಯೇವದಾರು ಒಂದು ಋಕ್ಕಿನ ಹೇಳುಗು ಬಟ್ಟಮಾವಂದ್ರು.
ಮೇಗಾಣ ದೇವದೇವೋತ್ತಮೇ – ಪೀಠಿಕೆಲಿ ಋಗ್ವೇದ ಇಪ್ಪದರ ಬದಲು – ಪ್ರತಿ ಸೇವೆಗಳ ಹೆಸರನ್ನೂ ಹೇಳುಗು.
ಆ ಸೇವೆ ಸುರುಮಾಡುಗು, ಓಂ ಸ್ವಸ್ತಿ ಹೇಳಿಗೊಂಡು ಸೇವೆ ಮುಗುಶುಗು.

ಸಾಮಾನ್ಯವಾಗಿ,

  • ಋಗ್ವೇದಕ್ಕೆ – ಅಗ್ನಿಮೀಳೇ ಪುರೋಹಿತಂ ಹೇಳ್ತ ಋಕ್ಕು ಪಠನ ಮಾಡ್ತವು.
  • ಯಜುರ್ವೇದಕ್ಕೆ – ಇಷೇತ್ವೋರ್ಜೇತ್ವಾ ವಾಯವಸ್ಥೋ – ಹೇಳ್ತ ಯಜುರ್ವೇದದ ಮಂತ್ರವ ಪಠಣ ಮಾಡ್ತವು.
  • ಸಾಮವೇದಕ್ಕೆ – ಅಗ್ನ ಆಯಾ ಹಿ ವೀತಯೇ ಘೃಣಾನೋ – ಹೇಳ್ತ ಮಂತ್ರವ ಸಾಮಗಾನ ಮಾಡ್ತವು.
  • ಅಥರ್ವ ವೇದಕ್ಕೆ – ಶಂ ನೋ ದೇವೀರಭಿಷ್ಟಯ – ಹೇಳ್ತ ಮಂತ್ರದ ಸಾಲುಗಳ ಹೇಳ್ತವು.
  • ಪಂಚಾಂಗ ಶ್ರವಣಕ್ಕೆ – ಒಯಿಜಯಂತಿ ಪಂಚಾಂಗದ ಇಂದ್ರಾಣ ಪುಟ ಬಿಡುಸಿ, ತಿಥಿವಾಸರನಕ್ಷತ್ರ ಯೋಗಕರಣ ಇವೇ ಪಂಚ –ಅಂಗಂಗಳನ್ನೂ ಕೆಲವು ಶ್ಲೋಕಂಗಳನ್ನೂ ಹೇಳುಗು.
  • ಪುರಾಣಪಠಣಸೇವೆಗೆ ಅಷ್ಟಾದಶ ಪುರಾಣದ ಯೇವದಾರು ಶ್ಲೋಕಂಗಳನ್ನೋ, ರಾಮಾಯಣ ಮಹಾಭಾರತದ ಶ್ಲೋಕಂಗಳನ್ನೋ, ಏಕಶ್ಲೋಕಿಗಳನ್ನೋ ಮತ್ತೊ ಹೇಳುಗಡ.
  • ಅಷ್ಟಕ / ದಂಡಕ ಗಾಯನಕ್ಕೆ ಅಂತೂ ನಮ್ಮೋರ ಹೆಮ್ಮಕ್ಕೊಗೆ ಹೇಳಿಕೊಡೆಡ; ಲಿಂಗಾಷ್ಟಕವೋ, ವಿಶ್ವನಾಥಾಷ್ಟಕವೋ, ಶಾಮಲದಂಡಕವೋ –  ಹೀಂಗೇನಾರು ಬಂದೇ ಬಕ್ಕು.
    ನಾಕೈದು ಹೆಮ್ಮಕ್ಕೊ ಸೇರಿ ರಾಗಲ್ಲಿ ಹೇಳುಲೆ ಸುರುಮಾಡಿರೆ ಎಂತವಂದೇ ಕೆಮಿಕೊಡುಗು.
  • ಮತ್ತಾಣದ್ದು ಪಂಚವಾದ್ಯ.
    ಶಂಕಜಾಗಟೆ, ಕೋಲುಜಾಗಟೆ, ಚೆಂಡೆ-ಮದ್ದಳೆ(ಇದ್ದರೆ) – ಎಲ್ಲವನ್ನೂ ತಾಳಲ್ಲಿ ಬಡುದು ದೇವಿಯ ಕುಶಿಪಡುಸುಗು.

ಪ್ರತಿ ಸೇವೆ ಮುಗುದ ಕೂಡ್ಳೇ “ಓಂ ಸ್ವಸ್ತಿ”– ಲಾಯ್ಕಾತು – ಹೇಳುಗು ದೇವಿಯ ಹತ್ತರೆ.

~

ಇವು ಎಂಟು ಇಪ್ಪಲೇಬೇಕಾದ ಅವಧಾನಂಗೊ; ಹೆಚ್ಚೂ ಇಪ್ಪಲಕ್ಕು.
ಸಾಮಾನ್ಯವಾಗಿ ಜೆಂಬ್ರದ್ದಿನ ಅಷ್ಟರಲ್ಲೇ ಮುಗಿತ್ತಿಲ್ಲೆ, ಗವುಜಿ ಇರ್ತು. ಎಂಟರಿಂದ ಹೆಚ್ಚೂ ಆವುತ್ತು. ಯಥಾಶಗ್ತ್ಯಾನುಸಾರ ಸಂಗೀತ ಸಾಹಿತ್ಯ, ಕಲಾ ಸೇವೆಗೊ ಆ ದಿನ ನೆಡೆತ್ತು.
ಬಂದ ನೆಂಟ್ರುಗಳಲ್ಲಿ ಕೆಲವುಜೆನಕ್ಕೆ ಅಷ್ಟಾವಧಾನಲ್ಲಿ ಬಾಗವಹಿಸುದು – ಅದುವೇ ಒಂದು ಉತ್ಸಾಹ!

~

ಬಟ್ಟಮಾವ°, ಎಂಗಳ ಭಾವಯ್ಯ° ಆಟಲ್ಲಿ ಇಪ್ಪದು. ಈಗ ಅವಂಗೆ ರಜೆ, ಹಾಂಗೆ ಇಂದು ಬಯಿಂದ°. ಹೇಂಗೆ…” ಹೇಳಿ ಮನೆ ಯೆಜಮಾನ ಕೇಳುಗಡ, ದೊಡ್ಡಣ್ಣ ಅನುಕರಣೆ ಮಾಡಿ ಹೇಳುವಗ ಎಂತವಂಗೂ ನೆಗೆಬಕ್ಕು! 🙂
ಹೋ, ಅಪ್ಪೋ. ಒಳ್ಳೆದಾತು. ಅಂಬಗ ಯಕ್ಷಗಾನ ಸೇವೆ ಸೇರುಸುವೊ ಅಷ್ಟಾವಧಾನಲ್ಲಿ” – ಹೇಳುಗು ಬಟ್ಟಮಾವ°.
| ದೇವದೇವೋತ್ತಮೇ.. ದೇವತಾ ಸಾರ್ವಭೌಮೇ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಿಕೇ.. ಯಕ್ಷಗಾನ ಪ್ರಿಯೇ ದೇವೀ.. ಯಕ್ಷಗಾನ ಸೇವಾಮವಧಾರಯಾ.. | – ಹೇಳುಗು.
ಭಾವಯ್ಯ ಜಾಗಟೆ ಕುಟ್ಟಿಂಡು ಒಂದು ಶೃಂಗಾರ, ಒಂದು ಏರುಪದ ಬಿಟ್ಟದರ್ಲಿ, ಸಣ್ಣ ಮಕ್ಕೊ ಹೆದರಿಂಗು!

ಅಷ್ಟಪ್ಪಗ ಯೆಜಮಾಂತಿ ಬಂದು – ‘ಬಟ್ಟಮಾವ°, ಎಂಗಳ ಅತ್ತಿಗೆಯಮಗಳು ಡೇನ್ಸು ಕಲಿತ್ತು. ಇಂದು ಬಯಿಂದು..” ಹೇಳುಗು.
ಅಪ್ಪೋ, ಒಳ್ಳೆದಾತು – ದೇವದೇವೋತ್ತಮೇ, ದೇವತಾ ಸಾರ್ವಭೌಮೇ.. ನಾಟ್ಯಪ್ರಿಯೇ ದೇವೀ, ನಾಟ್ಯಸೇವಾಮವಧಾರಯಾ..” ಹೇಳಿ ಸೇರುಸುಗು ಬಟ್ಟಮಾವ°.
ಮತ್ತೆ ಕೂಚಕ್ಕನ ಡೇನ್ಸು – ಕೃಷ್ಣಾ ನೀ ಬೇಗನೆ ಬಾರೋ…!! 🙂 🙂

ಮನ್ನೆ ತ್ರಿಕಾಲಪೂಜೆ ದಿನ ದೊಡ್ಡಜ್ಜ° ಬಟ್ಟಮಾವನ ಹತ್ತರೆ ಈ ವೆವಸ್ತೆಯೇ ಮಾತಾಡಿಗೊಂಡಿದ್ದದೋ ಏನೋ! ಉಮ್ಮಪ್ಪ!
~

ಅಷ್ಟಾವಧಾನ ಅಪ್ಪದ್ದೇ, ಪ್ರಾರ್ಥನೆ.
ಸೇವೆಗಳ ಕೊಟ್ಟು ಒಲುಸಿಗೊಂಡ ದುರ್ಗೆಯ ದೇವ್ಯಪರಾಧ ಕ್ಷಮಾಪಣವೋ, ಎಂತಾರು ಸ್ತುತಿಸಿಗೊಂಡು ಕುಟುಂಬದೋರೆಲ್ಲ ನಿಂದು ಪ್ರಾರ್ಥನೆ ಮಾಡ್ತದು. ಕೆಲವು ಮನೆಗಳಲ್ಲಿ ಸುತ್ತುಬಪ್ಪದೂ ಇದ್ದು.
ಇದಾದಮತ್ತೆ ಪ್ರಸನ್ನ ಪೂಜೆ ಕಳುದು ಪ್ರಸಾದ ಸ್ವೀಕಾರ.
ಯೇವತ್ರಾಣ ಹಾಂಗೆ – ಉದ್ವಾಸನೆ ಆಗಿ ಊಟ.
ಅಲ್ಲಿಗೆ ತ್ರಿಕಾಲ ಪೂಜೆ ಮುಗಾತು.
~

ಈಗ ಬೈಕ್ಕು ಕಾರು ಹೇಳಿಗೊಂಡು ಇರುಳಿಂದಿರುಳೇ ಮನೆ ಎತ್ತುತ್ತವು. ಮದಲಿಂಗೆ ಆ ದಿನ ಇರುಳು ನೆಂಟ್ರುಗೊ ನಿಂಬದೇ. ಹಾಂಗಾಗಿ, ತ್ರಿಕಾಲಪೂಜೆ ಇರುಳು ತಾಳಮದ್ದಳೆಯೂ ಅಪ್ಪದಿದ್ದು ಕೆಲವು ಮನೆಗಳಲ್ಲಿ – ಹೇಳಿದ ದೊಡ್ಡಣ್ಣ.
ತ್ರಿಕಾಲಪೂಜೆ ಮಾಡ್ಳೆ ಅಕಾಲ ಹೇಳಿ ಇಲ್ಲೆ, ಯೇವಗ ಬೇಕಾರೂ ಮಾಡ್ಳಕ್ಕು.
ಸಾಮಾನ್ಯವಾಗಿ ತ್ರಿಕಾಲಪೂಜೆ ದಿನ ಮದ್ಯಾನಕ್ಕೆ ಗೆಣವತಿ ಹೋಮವೂ, ಇರುಳಿಂಗೆ ಚಂಡಿಕಾಹೋಮವೂ ಇರ್ತು.
ಇದೆಂತ ಇರೆಕು ಹೇಳಿಯೇ ನಿಘಂಟಲ್ಲ, ಲೋಕಾರೂಢಿ ಅಷ್ಟೆ.
ಕಷ್ಟನಷ್ಟಂಗೊ ಸಂಪೂರ್ಣ ದೂರ ಆಗಿ, ಕೃಷಿ, ವ್ಯವಹಾರ, ಆಯುರಾರೋಗ್ಯ, ಐಶ್ವರ್ಯ ನೂರ್ಕಾಲ ಬೆಳಗಲಿ ಹೇಳ್ತ ಪ್ರಾರ್ಥನೆಗೇ ಈ ತ್ರಿಕಾಲ ಪೂಜೆ ಮಾಡುದಡ.
ಬಾಲಾತ್ರಿಪುರಸುಂದರಿ, ವನದುರ್ಗೆ, ಸ್ವಯಂವರ ಪಾರ್ವತಿ – ಇವು ಮೂರು ಶೆಗ್ತಿಗೊ ಒಂದಾಗಿ ವಿದ್ಯೆ, ಅಭಯ, ಸಂಸಾರಂಗಳ ಎಲ್ಲ ತೊಂದರೆಗಳ ದೂರಮಾಡಿ ಕುಟುಂಬಕ್ಕೆ ಉತ್ತರೋತ್ತರ ಶ್ರೀರಕ್ಷೆ ಸಿಕ್ಕಲಿ – ಹೇಳಿ ಬೇಡಿಗೊಂಬದು ಹೇಳಿ ಆಚಮನೆ ದೊಡ್ಡಣ್ಣ ವಿವರಣೆ ಮುಗುಶಿದ°.
ಮೂರೂ ಹೊತ್ತು ಪೂಜೆಮಾಡ್ತ ಈ ವಿಶೇಷ ಕ್ರಮದ ವಿವರಣೆ ಸಿಕ್ಕಿದ್ದಕ್ಕೆ ಕೊಶಿಕೊಶಿ ಆತು ಒಪ್ಪಣ್ಣಂಗೆ.

ಒಂದೊಪ್ಪ: ತ್ರಿಕರಣಂದ ತ್ರಿಕಾಲವೂ ಪೂಜೆಮಾಡಿರೆ ಅಬ್ಬೆ ನೂರ್ಕಾಲಕ್ಕೆ ಅಭಯ ಕೊಡುಗು. ಅಲ್ಲದೋ?

ಸೂ:

ಗೌರವಾದರಣೀಯ ಶ್ರೀ ವೇದಮೂರ್ತಿ ಪರಕ್ಕಜೆ ಅನಂತಣ್ಣ ನೆಡೆಶಿಕೊಡ್ತ ತ್ರಿಕಾಲಪೂಜೆಯ ಅಷ್ಟಾವಧಾನದ ಯಜುರ್ವೇದಸೇವೆಯ ಒಂದು ತುಣುಕು:

ವಿ. ಸೂ:ಮೂರು ಕಾಲವೂ ಮಾಡ್ತ ತ್ರಿಕಾಲಪೂಜೆಯ ಬಗ್ಗೆ ಮಾತಾಡಿದ್ದು ನಾವು. ನಮ್ಮ ಬೈಲಿಂಗೂ ಈ ವಾರಕ್ಕೆ ಮೂರೊರಿಶ ಆವುತ್ತು – ಬಪ್ಪ ವಾರಂದ ನಾಲ್ಕನೇ ಒರಿಶ.
ನೂರ್ಕಾಲವೂ ನಾವೆಲ್ಲೊರೂ ಒಗ್ಗಟ್ಟಿಲಿ, ಬೈಲ ಅಕ್ಕ-ಭಾವಂದ್ರಾಗಿ ನೆಡೆಶಲೆ ಆ ಮಹಾತಾಯಿ ಅಬ್ಬೆ ಅನುಗ್ರಹಿಸಲಿ ಹೇಳ್ತದು ಒಪ್ಪಣ್ಣನ ಮನದಾಳದ ಪ್ರಾರ್ಥನೆ.

~*~ ಓಂ ಸ್ವಸ್ತಿ ~*~

43 thoughts on “ನೂರ್ಕಾಲ ಹರಸುವ ‘ತ್ರಿಕಾಲ ಪೂಜೆ’…

  1. ಒಪ್ಪಣ್ಣ,

    ದೀಪ ರೂಪಲ್ಲಿ ಪ್ರಜ್ವಲಿಸುವ ಜ್ವಾಲೆಲಿ ಅಬ್ಬೆಯ ಆವಾಹನೆ ಮಾಡಿ, ಮನೆಯೋರು, ಕುಟುಂಬದೋರು ಎಲ್ಲೋರೂ ಸೇರಿ ಒಂದೇ ಮನಸ್ಸಿಲಿ ಮೂರು ಹೊತ್ತು, ಮೂರು ರೂಪಲ್ಲಿ, ಮೂರು ವಿಧಲ್ಲಿ ಅರ್ಚನೆ ಮಾಡಿ, ಅಬ್ಬೆಯ ಆಶೀರ್ವಾದ ಪಡಕ್ಕೊಂಬ ಪುಣ್ಯ ಕಾರ್ಯ ಇದು. ತ್ರಿಕಾಲ ಪೂಜೆಯೂ, ಅಷ್ಟಾವಧಾನವೂ ವಿವರ್ಸಿದ್ದದು ಲಾಯ್ಕಾಯಿದು. ಮನೆಲಿ, ಅಪ್ಪನ ಮನೆಲಿ, ಅಜ್ಜನ ಮನೆಲಿ ಎಲ್ಲಾ ತ್ರಿಕಾಲ ಪೂಜೆ ಆವುತ್ತು. ಅಜ್ಜನ ಮನೆಲಿ ಅಷ್ಟಾವಧಾನ ಸೇವೆಲಿ ಸಣ್ಣ ಆದಿಪ್ಪಾಗ ಪಾಲ್ಗೊಂಡ ಕೊಶಿಯೂ ಇದ್ದು.

    ಪರಕ್ಕಜೆ ಅನಂತಣ್ಣ ಇದ್ದರೆ ಆ ಪೂಜೆಯ ಘನತೆಯೇ ಬೇರೆ!!! ಅವರ ನೇತೃತ್ವಲ್ಲಿ ಆದ ಪೂಜೆಯ ವಿವರಣೆ ತುಂಬಾ ಲಾಯ್ಕಾತು. ಸುಮಾರು ಸಮಯದ ಎನ್ನ ಅಭಿಲಾಷೆ ಆಗಿತ್ತು, ತ್ರಿಕಾಲ ಪೂಜೆ ಬಗ್ಗೆ ಒಪ್ಪಣ್ಣ ಬರೆಯೇಕ್ಕು ಹೇಳುದು. ಕೊಶೀ ಆತು.

    [ ಮೂರೊತ್ತೂ ಪೂಜೆ ಮಾಡ್ತ ಒಂದು ದಿನದ ಮನೆಮಟ್ಟಿನ ಜಾತ್ರೆ ಇದು. ]

    ನೀನು ಹೇಳಿದ ಹಾಂಗೆ ತ್ರಿಕಾಲ ಪೂಜೆ ನಿಜವಾಗಿಯೂ ಒಂದು ದಿನದ ಜಾತ್ರೆಯೇ!! ಅಬ್ಬೆಯ ಯಾವ ರೂಪ ಕೊಟ್ಟು ಅರ್ಚನೆ ಮಾಡಿದರೂ ಕೂಡಾ ನಿಷ್ಕಲ್ಮಶ ಮನಸ್ಸಿಂಗೆ ಅಬ್ಬೆ ಒಲುದೇ ಒಲಿತ್ತು. ಬಾಲ್ಯ, ಕೌಮಾರತ್ವ ಮತ್ತೆ ನಿತ್ಯ ಸುಮಂಗಲಿಯ ರೂಪವ ಸಂಕಲ್ಪಿಸಿ, ಮೃದುವಾಗಿಪ್ಪ ಅಮ್ಮನ ಮೃದುವಾದ ಹೂಗಳಿಂದಲೇ ಸಂಪ್ರೀತಿ ಮಾಡಿ, ಬೆಳಗುವ ದೀಪದ ಹಾಂಗೆ ಇಡೀ ದಿನ ಬೆಳಗಿ ಬಂದ ಪೂಜೆಗೆ ಅಷ್ಟಾವಧಾನ ಸೇವೆ ಮಾಡಿ, ಕಾಯಾ ವಾಚಾ ಮನಸಾ ಅಬ್ಬೆಯ ಆಶ್ರಯ ಬೇಡಿ, ಭಕ್ತೀಲಿ ಪ್ರಸಾದ ತೆಕ್ಕೊಂಡರೆ ನಮ್ಮ ಕಷ್ಟಂಗ ಎಲ್ಲಾ ಕ್ಷಯಿಸುತ್ತು. ಬಟ್ಟಮಾವಂದ್ರು ಲಲಿತಾಸಹಸ್ರನಾಮ ಹೇಳಿ ಅರ್ಚನೆ ಮಾಡುವಾಗ ಅವರ ಒಟ್ಟಿಂಗೆ ಸೇರಿ ಅಮ್ಮನ ನಾಮಸ್ಮರಣೆ ಮಾಡುದೂ ಕೂಡಾ ಕೊಶಿಯೇ!! ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ ಹೇಳುವಾಗ ಎಲ್ಲಾ ತಪ್ಪುಗಳ ಒಪ್ಪುಸಿ ಕ್ಷಮೆ ಕೇಳ್ತ ಮಕ್ಕಳ ಹಾಂಗೆ ಆವುತ್ತು ನವಗೆ ಅಲ್ಲದಾ?

    ಒಪ್ಪಣ್ಣ,
    ಮೂರು ಹೊತ್ತೂ ನಡವ ಈ ಪೂಜೆಲಿ ಎಷ್ಟು ಸಾಧ್ಯವೋ ಅಷ್ಟು ತೊಡಗಿಸಿಗೊಂಡು ಭಾಗವಹಿಸುಲೆ ಎಲ್ಲರಿಂಗೂ ಭಾಗ್ಯ ಸಿಕ್ಕಲಿ…
    ದೇವಿಯ ಮನೆಗೆ ಬರ್ಸಿ, ಭಕ್ತೀಲಿ ಪೂಜಿಸಿ, ಆಶೀರ್ವಾದ ಪಡಕ್ಕೊಂಬ ಮನೆಗಳ ಸಂಕೆ ಕಡಮ್ಮೆ ಆಗದ್ದೆ ಇರಲಿ.
    ಎಲ್ಲರ ಮನಸ್ಸೂ ಒಂದೇ ಆಗಿ ಕುಟುಂಬ ಒಂದಾಗಿರಲಿ…
    ಬೈಲಿನ ಮೂರು ವರ್ಷವೂ ಕೂಡಾ ಶ್ರೀ ಗುರುಗಳ, ಪಾರೆ ಅಜ್ಜಿಯ, ಸಕಲ ದೇವರುಗಳ ಆಶೀರ್ವಾದಲ್ಲಿ ಬೆಳದು ಬಂದದು, ಸಹೃದಯ ಸನ್ಮನಸ್ಸಿನ ಬಂಧುಗಳ ಸಹಕಾರಲ್ಲಿ ವಿಸ್ತಾರ ಆಗಿ ನೂರೊರಿಶ ಬಾಳಿ ಬೆಳಗಲಿ…
    ಒಪ್ಪಣ್ಣನ ಮನಸ್ಸಿನ ಎಲ್ಲಾ ಆಶಯಂಗಳ ಅಬ್ಬೆ ನೆರವೇರ್ಸಿ ಕೊಡಲಿ…

    ||ಓಂ ಸ್ವಸ್ತಿ||

    1. ಅಕ್ಕ,
      ಚೆಂದದ ಒಪ್ಪ ಕೊಟ್ಟು ಶುದ್ದಿಯ ತೂಕ ಹೆಚ್ಚುಸಿದಿ.
      ಕೊಶೀ ಆತು.

      ಬೈಲು ಬೆಳದು ಈ ಹಂತಕ್ಕೆ ಬತ್ತಲ್ಲಿ ನಿಂಗಳ ಪಾತ್ರವೂ ತುಂಬ ಇದ್ದು ಅಕ್ಕ.
      ಕೂಡು ಕುಟುಂಬದ ಹೆರಿಯ ಅಕ್ಕನ ಜಾಗೆಲಿ ನಿಂದುಗೊಂಡು ಬೇಕಾದಾಂಗೆ ಮುಂದೆ ತೆಕ್ಕೊಂಡು ಮುಂದುವರುಸೇಕು ಹೇಳ್ತದು ಈ ತಮ್ಮನ ಕೋರಿಕೆ.

      ಹರೇರಾಮ

      1. ತಮ್ಮ ಒಪ್ಪಣ್ಣ,

        ಜೇನುಗೂಡಿಲಿ ಇಪ್ಪ ಜೇನಿನ ಸಾಗರಲ್ಲಿ ಪ್ರತಿ ಒಂದು ಜೇನಹುಳದ ಕಾರ್ಯವೂ ಪ್ರಾಮುಖ್ಯದ್ದೇ!! ಯಾವ ಜೇನ ಹನಿಯ ಯಾವ ಜೇನುಹುಳ ತಂತು ಹೇಳಿ ಅಂದಾಜು ಹಿಡಿವಲೆ ಎಡಿಗಾ? ಹೆರಂದ ಕಾಂಬಗ ಅದು ಒಂದೇ ಹಾಂಗೆ ಕೆಲಸಲ್ಲಿಪ್ಪ, ಒಂದೇ ಮನಸ್ಸಿಪ್ಪ ಒಂದು ಗುಂಪು ಅಲ್ಲದಾ? ಹಾಂಗೆ ಬೈಲೂ ಕೂಡಾ!!! ಎಲ್ಲರ ಶ್ರಮವೂ… ಎಲ್ಲರ ಮನಸ್ಸೂ ಒಂದೇ!!!

        ಹೆತ್ತಬ್ಬೆಗೆ ಗೌರವ ಕೊಡುವವಂಗೆ ಅಬ್ಬೆ ಭಾಶೆಗೆ ಗೌರವ ಕೊಡ್ಲೆ ಕಲಿಶೆಡಾ. ಅದು ಅವನ ಸಂಸ್ಕಾರಲ್ಲಿ ತನ್ನಿಂತಾನೇ ಬತ್ತು. ಎಲ್ಲೊರೂ ಸೇರಿ ಬೈಲಿನ ಬೆಳೆಶುವ°.

        [ಕೂಡು ಕುಟುಂಬದ ಹೆರಿಯ ಅಕ್ಕನ ಜಾಗೆಲಿ ನಿಂದುಗೊಂಡು ಬೇಕಾದಾಂಗೆ ಮುಂದೆ ತೆಕ್ಕೊಂಡು ಮುಂದುವರುಸೇಕು ಹೇಳ್ತದು ಈ ತಮ್ಮನ ಕೋರಿಕೆ.]

        ತಮ್ಮ,
        ನೀನು ಅಕ್ಕ° ಹೇಳಿ ಯಾವತ್ತು ಹೇಳಿದೆಯಾ ಅಂದೇ ಆ ಜಾಗೆಲಿ ಆನು ಭದ್ರವಾಗಿ ಕೂದಾಯಿದು. ಆ ಜಾಗೆಂದ ಹಂದುಲೆ ಇಲ್ಲೆ ಯಾವತ್ತಿಂಗೂ ಕೂಡಾ!! ಅಕ್ಕ° ರಜ್ಜ ಕೆಲಸದ ತೆರಕ್ಕಿಲಿ ಬೈಲಿಂಗೆ ಇಳಿಯದ್ದೆ ಇಕ್ಕು, ಆದರೆ ಒಂದು ಕಣ್ಣು ಬೈಲಿಲಿ ಇದ್ದೇ ಇರ್ತಲ್ಲದಾ? ತಮ್ಮ ರಜ್ಜ ಅತ್ತಿತ್ತೆ ಆದರೆ, ಹೊತ್ತಿಂಗೆ ಸರಿ ಆಗದ್ದರೆ ತಮ್ಮಂಗೆ ಕೇಳುದು ಅಕ್ಕನ ಸ್ವರವೇ ಅಲ್ಲದಾ?

        ಈ ತಮ್ಮಂಗೆ ಎಲ್ಲವೂ ಒಳ್ಳೆದೇ ಬರಲಿ…

  2. ತ್ರಿಕಾಲ ಪೂಜೆ ಬಗ್ಗೆ ಚೆಂದಕ್ಕೆ ವಿವರಣೆ ಕೊಟ್ಟಿದ್ದಿ. ಅಭಿನಂದನೆಗೊ.
    ನಾಲ್ಕನೇ ವರುಷಕ್ಕೆ ಎನ್ನ ಶುಭ ಹಾರೈಕೆ.

    1. ಹಳೆಮನೆ ರಾಜಮಾವನ ಒಪ್ಪಕ್ಕೆ ಧನ್ಯವಾದಂಗೊ.
      ಬೈಲಿಂಗೆ ತುಂಬ ಬೇಕಾದೋರು ನಿಂಗೊ! ಬೈಲು ಬೆಳವಲೆ ನಿಂಗಳೂ ಕಾರಣೀಭೂತರಾಯೇಕು ಹೇಳ್ತದು ಎನ್ನ ಕೋರಿಕೆ.

  3. ತ್ರಿಕಾಲ ಪೂಜೆಯ ಬಗ್ಗೆ ವಿವರಣಾತ್ಮಕ ಲೇಖನ ನೋಡಿ ಕೊಶಿ ಆತು. ತ್ರಿಕಾಲ ಪೂಜೆಯ ಮೂರು ಹೊತ್ತಿನ ಪೂಜೆಯುದೆ ನೋಡ್ಳೆ ಚೆಂದ. ಇರುಳಾಣ ಪೂಜೆಯ ವಿಶೇಷಂಗಳ ಒಪ್ಪಣ್ಣ ಚೆಂದಕೆ ವಿವರುಸಿದ್ದ. ಇರುಳಾಣ ಮಂಗಳಾರತಿಯ ಸಂದರ್ಭ ಅಂತೂ ಪೂಜೆ ಸರ್ವಾತಿಸುಂದರ. ಸಣ್ಣದಿಪ್ಪಗ ತಿರ್ಕಾಲ ಪೂಜೆ ಹೇಳಿ ಎಂಗೊ ಎಲ್ಲ ಹೇಳೆಂಡಿದ್ದಿದ್ದೆಯೊ. ನೆಂಪು ಮಾಡಿದ ಒಪ್ಪಣ್ಣಂಗೆ ಧನ್ಯವಾದಂಗೊ.

    1. ಬೊಳುಂಬುಮಾವಾ, ’ತಿರ್ಕಾಲ’ ಪೂಜೆಯ ಶುದ್ದಿ ಕೊಶೀ ಆತೋ? 🙂
      ಸರ್ವಾತಿಸುಂದರ ಪೂಜೆಯ ನಮ್ಮ ಊರಿನ ಕ್ರಮಲ್ಲೇ ಅನುಭವಿಸಿ ನೋಡ್ತದು ನಮ್ಮ ನಂತ್ರಾಣೋರಿಂಗೂ ಸಿಕ್ಕಲಿ, ಅಲ್ಲದೋ ಮಾವಾ!

  4. ಮು೦ದಾಣೋರಿ೦ಗೆ ಅನುಕೂಲ ಅಪ್ಪ ಹಾ೦ಗೆ ತ್ರಿಕಾಲ ಪೂಜೆಯ ಪೂರ್ತಿ ಪರಿಚಯ ಕೊಟ್ಟಿದಿ, ಒಪ್ಪಣ್ಣ.
    ಪುತ್ತೂರು ಸೀಮೆಲಿ ಮಿತ್ತೂರು ಭಟ್ಟಕ್ಕೊ ಮಾಡ್ಸುವ ತ್ರಿಕಾಲ ಪೂಜೆ, ಎಸ್.ಬಿ.ಹೇಟ್ ಅವರ ಅಷ್ಟಾವದಾನ ಎಲ್ಲ ಒಂದರಿ ಮನಸಿ೦ಗೆ ಬ೦ತು. ಚೆನ್ನೈ ಭಾವ ಬರದ ಹಾ೦ಗೆ, ಪೂಜೆಲಿ ಆನುದೇ ಇದ್ದ ಹಾಂಗೇ ಆತು. ಇದರ ಅಗತ್ಯ ಓದಿ ಹೇಳಿ ಎನ್ನ ಮಕ್ಕೊಗೆ ಮೈಲ್ ಮಾಡಿದೆ.
    ಮದಲು ಬರದ ಧನುಪೂಜೆಯ ವಿಚಾರವೂ ಭಾರೀ ಲಾಯಿಕಿತ್ತು.

    1. ಮಡಿಕೇರಿ ಈಶ್ವರಮಾವಂಗೆ ಆತ್ಮೀಯ ನಮಸ್ಕಾರಂಗೊ.
      ಧನುಪೂಜೆಯ ವಿಶಯಂದಲೇ ನಿಂಗೊ ಓದಿಗೊಂಡಿದ್ದಿರೋ? ಮತ್ತೆಂತಕೆ ಮಾತಾಡುಸಿದ್ದಿಲ್ಲೆ ಒಪ್ಪಣ್ಣನ!!?

      ಎಸ್.ಬಿ.ಹೇಟ್ ಅಷ್ಟಾವಧಾನ ಎಂತ ವಿಶೇಷ ಇದ್ದು? ಬೈಲಿಂಗೆ ವಿವರುಸುವಿರೋ?
      ಮಕ್ಕೊ ಎಂತ ಮಾಡ್ತವು? ಎಲ್ಲಿದ್ದವು? 🙂

  5. ತ್ರಿಕಾಲ ಪೂಜೆಯ ವಿವರಣೆ ಓದಿ ಕೊಶಿ ಆತು.
    ಒಟ್ಟಿಂಗೆ ಬೈಲಿಂಗೆ ನಾಲ್ಕನೇ ವರ್ಷದ ಸಂಭ್ರಮ.!!! ಅಭಿನಂದನೆಗೊ.

    1. ಅನುಪಮಕ್ಕಾ,
      ಉಡುಪಮೂಲೆ ಮಂತ್ರವಾದಿಗಳ ಹತ್ತರೆ ಹೀಂಗಿರ್ತ ಸುಮಾರು ಅದ್ಭುತ ವಿವರಣೆಗೊ ಇಕ್ಕು.
      ಬೈಲಿಂಗೆ ಬಕ್ಕೋ ಒಂದೊಂದೇ!? 🙂

    1. ಕೋಳ್ಯೂರು ಕಿರಣಣ್ಣಾ,
      ತ್ರಿಕಾಲಪೂಜೆ ಶುದ್ದಿ ಕೊಶಿ ಆತಾ? ಸಂತೋಷ!

      ಬನ್ನಿ, ನಿಂಗಳತ್ಲಾಗಿ ಎಂತಾರು ಕ್ರಮವಿತ್ಯಾಸವೋ, ವಿಶೇಷವೋ ಇದ್ದರೆ ತಿಳಿಶಿಕ್ಕಿ.
      ಹೇಳಿದಾಂಗೆ, ಜಾತ್ರೆ ಹೇಂಗಾತು? ಸೀವು ಎಷ್ಟು ಹೊಡದಿ?

  6. ಹರೇ ರಾಮ ಒಪ್ಪಣ್ಣ…….
    ತ್ರಿಕಾಲ ಪೂಜೆ ಹೇಳಿದರೆ ದುರ್ಗೆಯ ಮೂರುಸರ್ತಿ ಪೂಜಿಸುದು ಹೇಳಿ ಮಾತ್ರ ಗೊ೦ತಿತ್ತು….
    ನಿ೦ಗಳ ಲೇಖನ೦ದ ತು೦ಬಾ ವಿಷಯ ಗೊ೦ತಾತು…………
    ಧನ್ಯಾವಾದ೦ಗೊ……..

    ಬೈಲಿನವಕ್ಕೆಲ್ಲಾ ಹೊಸವರುಷದ ಶುಭಾಶಯದೊ೦ದಿಗೆ, ಬೈಲಿನ ಹುಟ್ಟುಹಬ್ಬದ ಶುಭಾಶಯ೦ಗೊ………..
    ‘ಒಪ್ಪಣ್ಣ ಬೈಲು’ ಎ೦ಬ ಬಾಬೆಗೆ ಮೂರು ವರುಷ ಕಳುದು, ನಾಲ್ಕನೆ ವರುಷ ಹಿಡಿತ್ತಾ ಇದ್ದದ!!!! ಬಾಬೆ ಬಾರೀ ಜೋರಿಲಿ, ಸ್ಪೀಡಿಲಿ ನಡೆತ್ತಾ ಇದ್ದದ!!!! ನೋಡುಲೆ ಕೊಶಿ ಆವ್ತಾ ಇದ್ದು……….

    1. ಬೈಲಿನ ಸಣ್ಣ ಬಾಬೆಗೆ ಹೋಲುಸಿ ಒಪ್ಪ ಬರದ್ದು ಕುಶೀ ಆತು.
      ಇನ್ನು ಮುಂದೆ ಬಪ್ಪ ಎಲ್ಲಾ ಹುಟ್ಟುಹಬ್ಬಂಗಳಲ್ಲಿಯೂ ಬೈಲಿನ ಒಟ್ಟಿಂಗಿರಿ ನಿಂಗೊ!

      ಹೇಳಿದಾಂಗೆ, ಎಂತ? ಬಾಬೆ ಯ ಬಗ್ಗೆ ಯೋಚನೆ? ಎಂತಾರು..?

      1. ಹರೇ ರಾಮ ಒಪ್ಪಣ್ಣ….
        ಪುಟ್ಟಕ್ಕನೇ ಒ೦ದು ಸಣ್ಣ ಬಾಬೆ 😉
        ಪುಟ್ಟಕ್ಕನ ಮನಸ್ಸುದೇ ಸಣ್ಣ ಬಾಬೆಯ ಹಾ೦ಗೆ 😉 🙂
        ಪುಟ್ಟಕ್ಕ ಇಪ್ಪ ಬೈಲುದೇ ೪ ವರುಶ ತು೦ಬಿದ ಇನ್ನೊ೦ದು ಬಾಬೆ!!!

        1. face is the index of mind ಹೇಳುವ ಹಾಂಗೆ ಆ ಮುದ್ದು ಮೊಗವೇ ಬಾಬೆಯ ಮುಗ್ಧ ಮನಸ್ಸಿನ ತೋರುಸುತ್ತು…

  7. ತ್ರಿಕಾಲ ಪೂಜೆಗೆ ಹೋಗಿ ಕೂದ್ದಕ್ಕಿಂತ ಹೆಚ್ಚು ಮಾಹಿತಿಗೊ ಇಲ್ಲಿ ಸಿಕ್ಕಿತ್ತು.
    ಮೂರು ಕಾಲಲ್ಲಿ ದುರ್ಗೆಯ ಬೇರೆ ಬೇರೆ ರೂಪಲ್ಲಿ ಕಂಡು ಪುಷ್ಪಾಂಜಲಿ ಸಲ್ಲುಸುವದು, ಅಷ್ಟಾವಧಾನ ಸೇವೆ ಎಲ್ಲವೂ ತುಂಬಾ ಚೆಂದದ ವಿವರಣೆ.
    ಎರಡನೆ ಅಲಂಕಾರದ ಪಟ, ಸಾಕ್ಷಾತ್ ದುರ್ಗೆಯನ್ನೇ ನೋಡಿದ ಅನುಭವ ಕೊಡ್ತು .
    ವೀಡ್ಯ ನೋಡುವಾಗ, ಪೂಜೆಲಿ ನಾವು ಭಾಗವಹಿಸಿದ ಅನುಭವ ಕೊಟ್ಟತ್ತು
    ಒಂದೊಪ್ಪ ಲಾಯಿಕ ಆಯಿದು.
    ಬೈಲಿಂಗೆ ಮೂರು ವರ್ಷ ತುಂಬಿದ ಈ ಸಮಯಲ್ಲಿ, ಆ ದೇವಿಯ ಅನುಗ್ರಹ ಸದಾ ನವಗೆ ಇರಳಿ ಹೇಳಿ ಪ್ರಾರ್ಥನೆ ಮಾಡಿಗೊಂಬೊ.
    ಧನ್ಯವಾದಂಗೊ

    1. ಅಪ್ಪಚ್ಚಿ,
      ದುರ್ಗೆಯ ಸೇವೆ ಮಾಡಿಂಡು ಬೈಲು ಬೆಳೆಶಿದ ನೆರೆಕರೆಲಿ ನಿಂಗಳೂ ಒಬ್ಬ ಹೆರಿಯೋರು!

      ಮುಂದೆಯೂ ಒಟ್ಟಿಂಗೇ ಹೋಪಲೆ ಆ ಮಹಾಮಾಯೆ ಅನುಗ್ರಹಿಸಲಿ.
      ಹರೇರಾಮ

  8. ಪರಕ್ಕಜೆ ಅನಂತಣ್ಣನ ಮಂತ್ರ, ಒಪ್ಪಣ್ಣನ ವಿವರಣೆ ಒದುವಾಗ ಅಪ್ಪ ಖುಷಿಯ ಹೇಂಗೆ ವಿವರಿಸಿದರುದೆ ಕಡಿಮೆಯೆ

    1. ಮರುವಳಮಾವಂಗೆ ಇಷ್ಟ ಆದ್ಸು ಒಪ್ಪಣ್ಣಂಗೂ ಕೊಶಿಯೇ.
      ಪರಕ್ಕಜೆ ಅನಂತಣ್ಣ ಸಿಕ್ಕಿಪ್ಪಗ ಅವರತ್ರೇ ಹೇಳಿಕ್ಕಿ, ಅವಕ್ಕೊ ಕೊಶಿ ಆಗಲಿ! 🙂

  9. ಈ ಲೇಖನಕ್ಕೆ ಒಪ್ಪ ಕೊಡ್ಲೆ ಶಕ್ತಿ ಇಲ್ಲೆ ಒಪ್ಪಣ್ಣಾ…
    ಪ್ರತಿ ಒಂದು ವಾಕ್ಯವನ್ನೂ ೩-೩ ಸರ್ತಿ ಓದೆಕು…
    ಮಂಗ್ಳೂರಿಲ್ಲಿ ಆದ ಅಷ್ಟಾವಧಾನ ಸೇವೆಯ ಆನು ನೋಡಿತ್ತಿದ್ದೆ, ಶಂಖವಾದನವ ಮರವಲೇ ಎಡಿಯ.. ಭರ್ತಿ ೫ ನಿಮಿಷ ನಿಲ್ಲುಸದ್ದೆ… ಅಬ್ಬೋ ದೇವರೇ…!!
    ತುಂಬ ತುಂಬ ಒಪ್ಪಂಗೊ,
    ಮೂರು ನೂರಾಗಲಿ; ನೂರು-‘ಸಾವಿರ’ ಆಗಲಿ..
    ಶುಭಾಶಯಂಗೊ..

    1. ಮಂಗ್ಳೂರುಮಾಣೀ,
      ನೂರು-ಸಾವಿರ ಆಗ್ಲಿ ಹೇಳ್ತ ಸದಾಶಯದ ಒಪ್ಪ ತುಂಬ ಹಿತ ಆತು.
      ಸಾವಿರಲ್ಲಿ ನಿನ್ನದೂ ಶುದ್ದಿಗೊ ಇರ್ತಲ್ಲದಾ?

      ಬಾ, ಇಷ್ಟು ಜೀವನಕ್ಕೆ ಹತ್ತರೆ ಆದ ಶುದ್ದಿಗಳ ಹೇಳ್ತದರ ಮುಂದುವರುಸು, ಆತೋ? 🙂

  10. ಮೂರೂ ಹೊತ್ತು ಪೂಜೆಮಾಡ್ತ ಈ ವಿಶೇಷ ಕ್ರಮದ ವಿವರಣೆ ಸಿಕ್ಕಿದ್ದಕ್ಕೆ ಕೊಶಿಕೊಶಿ ಆತು ಒಪ್ಪಣ್ಣಂಗೆ.- ನವಗೂ,
    ಆ ದುರ್ಗಾ ಮಾತೆಯ ಆಶೀರ್ವಾದ ನಮ್ಮ ಎಲ್ಲೋರ ಮೇಲೂ ಇರಳಿ ಹೇಳ್ತದು ನಮ್ಮ ಪ್ರಾರ್ಥನೆ,
    ಮೂರು ವರುಶ ಆತು ಹೇಳಿಯಪ್ಪದ್ದೇ ನೆನಪಾದ ಮೂರರ ವಿಶೇಶಂಗೊ,
    ಮೂರನೇ ವೊರಿಶದ ಅಕೇರಿಯಾಣವಾರ ತ್ರಿಕಾಲ ಪೂಜೆ ,
    ಬಯಲಿಂಗಾತು ವೊರಿಶ- ಮೂರು,
    ವಾರಲೆಕ್ಕಲ್ಲಿ ೧೫೬ ಈ ಅಂಕೆಗಳ ಕೂಡುಸಿ,ಕೂಡುಸಿದರೆ ಅದೂ- ಮೂರು
    ಮೂರುವರುಶಲ್ಲಿ ಬಯಲ ರೂಪವೂ ಮೂರು ನಮುನೆ ಆತು..! ಮುಂದೆ…?
    ಮೂರು ನೂರಾಗಲಿ,ನೂರು -ಮುನ್ನೂರಾಗಲಿ, ಬಯಲು ಹೀಂಗೇ ವಿಶಾಲ ವಾವುತ್ತಾ ಹೋಗಲಿ ಹೇಳುವ ಹಾರೈಕೆಗೊ ನಮ್ಮ ಹೊಡೆಂದಳುದೇ.

    1. ಚೆಲಾ ಮಾಣೀ!
      ಸಣ್ಣ ಇಪ್ಪಗ ಲೆಕ್ಕಲ್ಲಿ ನೀನೇಯೋ – ನೂರಕ್ಕೆ ನೂರು ತೆಕ್ಕೊಂಡಿದ್ದದು?
      ಒಪ್ಪಣ್ಣಂಗೆ ನೂರಲ್ಲಿ ಮೂರೇ ಸಿಕ್ಕಿಗೊಂಡಿದ್ದದಿದಾ! 😉

      ಆಗಲಿ, ಮೂರರ ಮೂರ್ಮೂರು ಸರ್ತಿ ತಿರುಗುಸಿ ಹೇಳಿದ್ದು ಕೊಶೀ ಆತು.
      ನಿನ್ನದೂ ಮೂರಾರು ಶುದ್ದಿಗೊ ಬೈಲಿಲಿ ತಿರುಗಲಿ ಈ ಒರಿಶ. ಆತೋ? 🙂

  11. ಒಂದು ಸರ್ತಿ ತ್ರಿಕಾಲ ಪೂಜೆಗೆ ಹೋಗಿ ಬಂದ ಹಾಂಗೆ ಆತು.ಧನ್ಯವಾದ೦ಗೊ.

  12. ಎಂದೆಂದೂ ನಾವೆಲ್ಲ ಒಗ್ಗಟ್ಟಿಲ್ಲಿ ಮುನ್ನಡೆದು… ಈ ತಾಣ ಇಡೀ ಸಮಾಜಕ್ಕೆ ಮಾದರಿಯಾಗಲಿ… ಈ ಬೈಲಿನ ಪ್ರತಿಯೊಂದು ದೀಪಂಗಳೂ ದೇಶವ ಬೆಳಗುವ ಹಾಂಗಾಗಲಿ… ಹೇಳಿ ಬೈಲಿನವರೆಲ್ಲರ ಜೊತೆ ಸೇರಿ ಆ ಮಹಾಮಾತೆಯ ಹತ್ರೆ ನಮ್ಮದೂ ಪ್ರಾರ್ಥನೆ…

    1. ಜಯಕ್ಕಾ,
      ಬೈಲಿನ ಬಗ್ಗೆ ಸದಾಶಯ, ಶುಭಾಶಯ ಹೇಳಿದ್ದು ಕಂಡು ಮನಸ್ಸು ತುಂಬಿತ್ತು.
      ಶುದ್ದಿಗಳ ಸಾರ ತೆಕ್ಕೊಂಡು ಚೆಂದಕೆ ಒಪ್ಪ ಕೊಡ್ತ ಬೈಲಿನೋರು ಇಪ್ಪಗ ಶುದ್ದಿ ಹೇಳ್ತೋರಿಂಗೆ ಶೆಗ್ತಿ ಬತ್ತಿದಾ!

      ಹರೇರಾಮ

  13. ತ್ರಿಕಾಲ ಪೂಜೆಯ ವಿವರಿಸಿದ್ದು ಲಾಯ್ಕ ಆಯಿದು.ತ್ರಿಕಾಲಪೂಜೆಯ ಅಷ್ಟಾವಧಾನ ,ಸಪ್ತಶತಿ ಪಾರಾಯಣ,ಅರ್ಗಲಾ ಸ್ತೋತ್ರ,ಒಟ್ಟಿಂಗೆ ಸಂಗೀತ, ನೃತ್ಯ ಎಲ್ಲಾ ತುಂಬ ಚೆಂದ.

    1. ಗೋಪಾಲಣ್ಣಾ,
      ದೇವಿಮಹಾತ್ಮೆಯೂ ಓದುತ್ತವಿದಾ, ಚೆನ್ನೈಭಾವ ನೆಂಪು ಹೇಳಿಕ್ಕಿದವು.
      ಯಥಾಶೆಗ್ತಿ ಇತರೇ ಸೇವೆಗಳೂ ಇರ್ತು, ಅಲ್ಲದೋ?

      ಹೇಳಿದಾಂಗೆ, ಅರ್ಗಳಾ ಸ್ತೋತ್ರವ ಬೈಲಿಂಗೆ ಹೇಳುವಿರೋ – ಅಂಬೆರ್ಪಿಲ್ಲೆ, ನಿಧಾನಕ್ಕೆ!

  14. ಆಹಾ ಒಪ್ಪಣ್ಣಾ…. ಶುದ್ದಿ ಭಾರೀ ಪಷ್ಟಾಯಿದು ಆತೋ.. ಒಪ್ಪ೦ಗೊ.
    {ಈಗಾಣೋರು ಮದ್ಯಾನ್ನ ಊಟ ಆಗಿ ಹೆರಡ್ಳೆ ಗಡಿಬಿಡಿ; ನವಗೆ ಮದ್ಯಾನ ಉಂಡಿಕ್ಕಿ ಒರಗಲೆ ಗಡಿಬಿಡಿ!
    ಅಪ್ಪು; ಒಂದು ಒರಗದ್ದೆ ಸಮ ಆಗ ಇದಾ! ಕರಗಲೆ ತಕ್ಕ ಆದರೂ} ಅಪ್ಪೊ ಒಪ್ಪಣ್ಣಾ… ಸುಮ್ಮನೆ ಹೇಳ್ಳಾಗ ಆತಾ.. ಇದೆ೦ತ ಕೆಣಿ? ಉ೦ಡಿಕ್ಕಿ ಸುಮ್ಮನೆ ಒರಗಿರೆ ಕರಗ್ಗೋ? ಎನ್ನ ಅಪ್ಪ ಉ೦ಡಿಕ್ಕಿ ಹಾ೦ಗೆ ಅ೦ತೆ ಬಿದ್ದು ಒರಗಡದೋ ಹೇಳಿ ಬುಧ್ಧಿ ಹೇಳಿ೦ಡಿತ್ತಿದ್ದವು. ಮತ್ತೆ ಇರುಳಾಣ ಊಟ ಕಳುದಿಕ್ಕಿ ಚೂರು ಹೊತ್ತಾದರೂ ನೆಡೆವಲೇ ಬೇಕಾಡ (ಅತ್ತಾಳಮು೦ಡಾಲ್ ಅರನಾಳಿಕ ನಡಕ್ಕಣ೦ – ಹೇಳಿ “ಗಳಗಳ ಮಳಯಾಳ”ಲ್ಲಿ ಹೇಳುತ್ತವು 😉 )
    “ದೇವದೇವೋತ್ತಮೇ” ಓದುವಗ ಆನು ಸಣ್ಣಾಗಿಪ್ಪಗ ನೀರ್ಚಾಲು ಶಾಲೆಲಿ ಪುಸ್ತಕಪೂಜೆ ದಿನ ಸ೦ಸ್ಕೃತ ಮಾಷ್ಟ್ರು ಮೈಕ್ಕಲ್ಲಿ ಇದರ ಹೇಳಿ೦ಡಿತ್ತಿದ್ದದು, ಮಕ್ಕೊ ಅಷ್ಟಾವಧಾನ ಸೇವೆ ಮಾಡಿಗೊ೦ಡಿತ್ತಿದ್ದದು, ಎಲ್ಲ ಕೆಮಿಲಿ ಅನುರಣಿಸಿತ್ತು..
    ಒಳ್ಳೇ ಶುದ್ದಿಗೆ ಪುನಃ ಒಪ್ಪ೦ಗೊ..
    bailinge huTTu habbada shubhaashayango

    1. ಪೆರುವದಣ್ಣ, ನಿಂಗೊ ಹೀಂಗೆಲ್ಲ ಕೇಳಿ ಎನ್ನ ಉಂಡಿಕ್ಕಿ ಒರಗಲೂ ಬಿಡ್ತಿಲ್ಲಿಅನ್ನೇ, ಛೇ!
      ನಿಂಗೊ ಆಪೀಸಿಲಿ ಒರಗುತ್ತ ಮರಿಯಾದಿ ಇಲ್ಲೆ ಹೇಳಿಗೊಂಡು, – ನವಗೆ ಒಂದು ಒರಗದ್ದೆ ಕರಗ್ಗೋ?
      “ಗಳಗಳ ಮಳಯಾಳ” ಹೇಳಿ ಸೇರುಸಿದ್ದು ನೋಡಿ ನೆಗೆಬಂತಿದಾ!

      ಸಂಸ್ಕೃತಮಾಷ್ಟ್ರ ನೆಂಪುಮಾಡಿದ್ದು ಕೊಶೀ ಆತು.

  15. ಓದಿ ಕುಶೀ ಆತಿದಾ ಭಾವಯ್ಯ. ಎಲ್ಲೋ ಒಂದು ತ್ರಿಕಾಲ ಪೂಜೆ ಆವ್ತಾ ಇಪ್ಪ ಮನೇಲಿದ್ದೆ ಹೇಳುವ ಅನುಭವ ಕೊಟ್ಟತ್ತು. ಪೂಜೆಯ ಜತೇಲಿ ಅಷ್ಟಾವಧಾನ ಕೂಡ ಪರಿಚಯಿಸಿದ್ದು ಉತ್ತಮ ಆತು. ಅಷ್ಟಾವಧಾನ ಆ ನಿಮಿಷಂಗೊ ರೋಮಾಂಚನ ಅನುಭವ ಕೂಡ ಹೇಳಿ ಹೇಳಿಗೊಂಡು ಮದಲೊಂದು ಒಪ್ಪ. ಕಳುದ ವರ್ಷ ಒಂದಿಕ್ಕೆ ಅಷ್ಟಾವಧಾನ ವೇಳೆ ಒಬ್ಬ° ಶಂಖನಾದ ಸೇವೆ ಮಾಡಿತ್ತವು, ಬಹುಶಃ ಅಲ್ಲಿಪ್ಪ ಪ್ರತಿಯೊಬ್ಬಂಗೂ ಅದೊಂದು ಪ್ರಥಮ ಅನುಭವ. ಬರೇ ಶಂಖ ಉರಿಗಿದ್ದಲ್ಲ ಅದು. ಕ್ರಮಬದ್ಧವಾಗಿ, ಲಯಬದ್ಧವಾಗಿ , ತಾಳಬದ್ಧವಾಗಿ ಅದು ಒಂದು ವಿಶೇಷವೇ ಆಗಿತ್ತು. ಆ ಶಂಖನಾದ ಇಡೀ ಆ ಪರಿಸರ ಕಂಪಿಸಿ ಝೇಂಕರಿಸಿ ಶಕ್ತಿಯ ಆಕರ್ಷಣೆ ಆಗಿ ದುಷ್ಟ ಶಕ್ತಿಗೊಕ್ಕೆ ಕರ್ಕಶವಾಗಿ ದೂರ ಆದಿಕ್ಕು ಹೇಳುವದು ಅಲ್ಲಿ ಬಂದು ಅನುಭವಿಸಿದವಕ್ಕೇ ಗೊಂತು.
    ಬೈಲಿನ ಮೂರು ವರ್ಷ ಯಶಸ್ವಿಯಾಗಿ ಕಳುದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಒಪ್ಪಣ್ಣ ಮತ್ತು ಇದರ ಉತ್ತಮ ರೀತಿಲಿ ಬೆಳೆಶಿಗೊಂಡು ಬಪ್ಪ ಎಲ್ಲಾ ಅಕ್ಕ ಭಾವಂದ್ರಿನ್ಗೂ ಅಭಿನಂದನೆ. ಒಳ್ಳೆ ಸಂಗ್ರಹಯೋಗ್ಯ ಮಾಹಿತಿಗಳ ಕೊಟ್ಟು ಬಹುಜನಕ್ಕೆ ಉಪಕಾರ ಆಯ್ದು ನಮ್ಮ ‘ಬೈಲು’ ಹೇಳಿ ಹೆಮ್ಮೆಂದ ಹೇಳಿಗೊಂಬದು -‘ಚೆನ್ನೈವಾಣಿ’

    1. ಅದು ಪೋಳ್ಯ ಮಠದ ಭಟ್ಟ ಮಾವ ಆಡಿಕ್ಕು ಹೇಳಿ ಎನ್ನ ಆಲೋಚನೆ

      1. ಟಿ.ಎಸ್ ಭಾವ° ಇಷ್ತು ಹೇಳಿಯಪ್ಪಗ ಅದಾರು ಅಂದು ಶಂಖನಾದ ಸೇವೆ ಮಾಡಿದ್ದು ಹೇಳಿ ತಿಳಿಯೆಕ್ಕು ಹೇಳಿ ಅಲ್ಲಿಗೇ ಫೋನಾಯಿಸಿ ವಿಚಾರಿಸಿತ್ತಿದಾ. ಅವ್ವು ಪದ್ರಂಜೆ ಸೂರ್ಯನಾರಾಯಣ ಭಟ್ ಹೇಳಿ ಹೇಳಿದವು. ಅಜಕ್ಕಳ ಹತ್ರೆ ಇಪ್ಪದಡ ಅವ್ವು. ಒಳ್ಳೆ ಸಾಧು ಸಜ್ಜನ. ಅಂದು ಒಂದಿನ ಮಾಂತ್ರ ಅಲ್ಲಿ ಆ ಮನೆಲಿ ಕಂಡ ಗುರ್ತ ಅಷ್ಟೆ ಎನಗೆ .

        1. ಚೆನ್ನೈಭಾವಾ,
          ಒಪ್ಪಣ್ಣಂಗೆ ಆಚಮನೆದೊಡ್ಡಣ್ಣನ ಕೈಲಿ ಕೇಳಿ ಆಯೆಕ್ಕು, ನಿಂಗೊಗೆ ಹಾಂಗಲ್ಲ!
          ಸ್ವತಃ ತ್ರಿಕಾಲಪೂಜೆಲಿ ಕೂದ ಅನುಭವ ಇಪ್ಪ ನಿಂಗೊ ಇಷ್ಟಪಟ್ಟದು ಸಂತೋಷ ಆತು.

          ಶಂಕ ಆ ನಮುನೆ ಊದುತ್ತೋರ ಒಪ್ಪಣ್ಣಂಗೂ ಕಂಡ ಗುರ್ತ ಇದ್ದು. ಅದು ಆರು ಹೇಳ್ತಷ್ಟು ನೆಂಪಿಲ್ಲೆ ಈಗ.
          ಟೀಯಸ್ ಭಾವ ಹೇಳಿದೋರೂ ಆಗಿಪ್ಪಲೂ ಸಾಕಿದಾ!

          ಇರುಳಿಂದಿರುಳೇ ಒಪ್ಪ ಕೊಟ್ಟದು ಕೊಶೀ ಆತು! 🙂

  16. “ಮೂರೂ ಹೊತ್ತು ಪೂಜೆಮಾಡ್ತ ಈ ವಿಶೇಷ ಕ್ರಮದ ವಿವರಣೆ ಸಿಕ್ಕಿದ್ದಕ್ಕೆ ಕೊಶಿಕೊಶಿ ಆತು ಒಪ್ಪಣ್ಣಂಗೆ” – ಈ ವಿಶೇಷ ವಿವರಣೆಯ ಓದಿ ಎನಗೂ ಖುಶಿ ಆತು.
    ಬೈಲಿ೦ಗೆ ಮೂರು ವರ್ಷ ತು೦ಬಿದ್ದು ಗೊ೦ತಾಗಿ ಇನ್ನೂ ಖುಶಿ ಆತು..

    1. ದೀಪಿಅಕ್ಕೋ,
      ಇರುಳೇ ಶುದ್ದಿ ಓದಿ ಶುದ್ದಿಗೊಪ್ಪ ಕೊಟ್ಟದು ಕೊಶಿ ಆತು.

      ಎಲ್ಯಾರು ತ್ರಿಕಾಲಪೂಜೆಲಿ ಭರತನಾಟ್ಯ ಮಾಡಿದ್ದಿರಾ? ನಿಂಗೊಗೆ ನೆಂಪಿಲ್ಲದ್ದರೆ ಅಮ್ಮನ ಹತ್ತರೆ ಕೇಳಿ ಹೇಳಿಕ್ಕಿ! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×