Oppanna.com

ವಂಶವೃಕ್ಷ ಬೆಳೇಕಾರೆ ರಾಜಿಮಾಡಿಗೊಳೇಕು..!

ಬರದೋರು :   ಒಪ್ಪಣ್ಣ    on   23/09/2011    20 ಒಪ್ಪಂಗೊ

ಈ ಶುದ್ದಿಯ ಬೈಲಿಲಿ ಹೇಳೇಕು ಹೇಳಿ ಗ್ರೇಶುದು ಒಂದೆರಡೊರಿಶ ಆತು.
ಆದರೆ; ಎಲ್ಲಿಂದ ಸುರು ಮಾಡುದು, ಹೇಂಗೆ ಸುರುಮಾಡುದು – ಅಂದಾಜಿ ಆಗದ್ದೆ ಮೇಗೆನೋಡಿಗೊಂಡು ಕೂದುಗೊಂಡಿದ್ದದು.
ಒಂದರಿ ಮನಸ್ಸಿಂಗೆ ಬಂದರೆ ಮತ್ತೆ ಹೇಳದ್ದೆ ಕಳೀಯ ಇದಾ! ಇಂದಲ್ಲ ನಾಳೆ ಹೇಳಿಯೇ ಹೇಳೇಕು.
ಹಾಂಗೆ ಕಟ್ಟಿ ಮಡತುಗುತ್ತ ಬದಲು ಇಂದೇ ಹೇಳಿಕ್ಕುವೊ° – ಅಲ್ಲದೋ?
ಇದಾ, ಮದಾಲೇ ಹೇಳಿಗುತ್ತೆ; ಒಪ್ಪಣ್ಣ ಹೇಳಿದ್ದರ್ಲಿ ಅಲ್ಲದ್ದು ಕಂಡ್ರೆ ಬೇಜಾರು ಮಾಡದ್ದೆ ಹೊಟ್ಟಗೆ ಹಾಕಿಕ್ಕಿ, ಅಪ್ಪಾದ್ಸು ಕಂಡರೆ ನಾಕು ಜೆನ ನೆರೆಕರೆಯೋರಿಂಗೆ ತಿಳಿಶಿಕ್ಕಿ. ಆತೋ?
ವಿಶಯ ತುಂಬಾ ಗಂಭೀರದ್ದು, ಹಾಂಗಾಗಿ ಮದಲೇ ಹೇಳಿಗೊಂಡದು.

ಶುದ್ದಿ ಹೇಂಗೆ ಸುರುಮಾಡ್ತದಪ್ಪಾ; ನೇರವಾಗಿ ವಿಶಯಕ್ಕೆ ಹೋದರೆ  – ಒಪ್ಪಣ್ಣನೂ ವೇದಾಂತ ಸುರುಮಾಡಿದ°! – ಹೇಳಿ ಗ್ರೇಶುಗು ಕೆಲವು ಜೆನ!
ಉದಾಸ್ನವೂ ಅಪ್ಪಲಾಗ, ವಿಶಯವೂ ತಲಗೆ ಹೊಕ್ಕೇಕು – ಹೇಳಿ ಆದರೆ, ಎಂತ್ಸರ ಮಾಡುತ್ಸು?
ಸೋದಾಹರಣೆಲಿ ಹೇಳೇಕು; ಹ್ಮ್, ಕೆಲವು ಉದಾಹರಣೆಂದಲೇ ಸುರುಮಾಡುವೊ°, ಆಗದೋ?
~

ಇಪ್ಪತ್ತೊರಿಶ ಮದಲಾಣ ಕತೆ.
ಕಳಂಜ ರಾಮಚಂದ್ರಮಾವನ ಒಬ್ಬನೇ ಮಗ ಅರವಿಂದಭಾವಂಗೆ ಪೀಯುಸಿ ಕ್ಳಾಸು ಪಾಸಾತು.
– ಒಂದೆರಡಲ್ಲ, ಹನ್ನೆರಡ್ಣೇ ಕ್ಳಾಸು!! ಅದುದೇ ಪಷ್ಟು ಕ್ಲಾಸಿಲಿ.
ಇನ್ನು ಕೋಲೇಜಿಂಗೆ ಪುತ್ತೂರಿಂಗೆ ಹೋಯೇಕು. ರಾಮಜ್ಜನ ಕೋಲೇಜಿಲಿ ಡಿಗ್ರಿ ಕಲಿಯೇಕು; ಅದರ್ಲೇ ಮುಂದುವರಿಯೇಕು-
ಎಲ್ಯಾರು ಚಾಕಿರಿ ಕೆಲಸ ಸಿಕ್ಕುತ್ತರೆ ಮಾಡೇಕು, ತಿಂಗಳಿಂಗೆ ಐದತ್ತುಸಾವಿರ ಸಿಕ್ಕಲೂ ಸಾಕು.

ತಿಂಗಳಿಂಗೆ ಐದು ಸಾವಿರ ಆದರೆ, ಒರಿಶಕ್ಕೆ ಅರುವತ್ತು ಸಾವಿರ.
ಆದರೆ, ಮನೆಲಿ ಒಳ್ಳೆತ ಅನುಕೂಲ ಇದ್ದತ್ತು. ಅಂಬಗಳೇ ಅವಕ್ಕೆ ಒಂದು ಜೀಪುದೇ, ಒಂದು ಬೈಕ್ಕುದೇ ಇದ್ದತ್ತು.
ಅದೆರಡರ ಒರಿಶದ ಖರ್ಚೇ ಒರಿಶಕ್ಕೆ ಅರುವತ್ತು ಸಾವಿರ ಅಕ್ಕೋ ಏನೋ – ಉಮ್ಮಪ್ಪ.
ಅಷ್ಟು ಇದ್ದತ್ತುದೇ – ಅವರ ಕೈಲಿ.
ಕಳಂಜ ಬೈಲಿಲಿ ಅರೆವಾಶಿ ಅವರದ್ದೇ ಜಾಗೆ.
ಕಣ್ಣೆತ್ತದ್ದಷ್ಟು ದೊಡ್ಡ ಅಡಕ್ಕೆ ತೋಟ – ಮೂರು ಜೆನರ ಒಟ್ಟಿಂಗೆ ಸುಂದರ ಮದ್ದುಬಿಡ್ಳೆ ಸುರುಮಾಡಿರೆ ಮೂರು ದಿನ ಬೇಕಾವುತ್ತು! ಆ ತೋಟದ ಕರೇಲಿ ಇಡೀ ತೆಂಗು. ಮನೆ ಮೇಲ್ಕಟೆ ಕಾಲಿಗುಡ್ಡೆಲಿಯೂ ರಜ ತೆಂಗು ಇದ್ದು.
ಅದಲ್ಲದ್ದೇ, ಅಂಬಗಳೇ ಅಯಿದತ್ತುಸಾವಿರ ರಬ್ಬರಿನ ಮರ ಇದ್ದತ್ತಾಡ; ನಾಕು ಎಳ್ಬೆಗಳಲ್ಲಿ ನೆಟ್ಟದು.
ಈಗ ಬಿಡಿ – ರಬ್ಬರಿನ ಹಾಲು ಹೇಳಿರೆ ಚಿನ್ನದ ನೀರು.
ನಿತ್ಯೋಪಯೋಗಕ್ಕೆ ಬೇಕಾದ ನೆಟ್ಟಿ ತರಕಾರಿ, ಬಾಳೆ – ಎಲ್ಲವುದೇ ಜಾಗೆಲೇ ಸಿಕ್ಕುತ್ತು.
ಇದು ಹತ್ತಿಪ್ಪತ್ತೊರಿಶ ಮದಲಾಣ ಕತೆ..

ರಾಮಚಂದ್ರ ಮಾವಂಗೆ ಎಂಬತ್ತೊರಿಶ ಅಪ್ಪನ್ನಾರವೂ ಆರೋಗ್ಯವಾಗಿ ಇದ್ದಿದ್ದವು.
ಅವರ ಆರೋಗ್ಯಕ್ಕೆ ಹಳ್ಳಿಜೀವನವೇ ಕಾರಣ – ಹೇಳಿ ವಾರ್ಣಾಶಿ ಅಪ್ಪಚ್ಚಿ ಹೇಳುಗು. ಅದಿರಳಿ,
ಅವರ ಕಾರ್ಬಾರಿನ ಮತ್ತೆ ಅರವಿಂದ ಭಾವನ ಒಯಿವಾಟು ಸುರು.
ಅಪ್ಪ ಮಾಡಿದ ಈ ಉದುಪ್ಪತ್ತಿಗಳ ಬಳಸಿಗೊಂಡು, ಅದರ ಬೆಳೆಶಿಗೊಂಡು ಹೋದ್ದೇ ವಿನಃ, ಒಂದೇ ಒಂದು ಪೈಸೆ ಮುಗಿಶಿದ್ದನಿಲ್ಲೆ.
ಈಗ ಅಡಕ್ಕೆ ತೋಟ, ಬೀಜದ ಕಾಡು, ತೆಂಗಿನ ಹಿತ್ಲು, ರಬ್ಬರು ಗುಡ್ಡೆ, ನೆಟ್ಟಿಗೆದ್ದೆ, ಎಡೆಬಾಳೆಸೆಸಿಗೊ, ಸರ್ವತ್ರವೂ ಇದ್ದು.
ಕರೆಂಟು, ಗೋಬರುಗೇಸಿಂದ ಹಿಡುದು, ಮನೆಯೊಂದರ ನೆಮ್ಮದಿಯ ಬದ್ಕಾಣಕ್ಕೆ ಬೇಕಾದ ಸರ್ವತ್ರ ಅನುಕೂಲವೂ ಆ ಮನೆಲಿ ಇದ್ದತ್ತು.
ಅಂದೇ ಕಟ್ಟಿದ ಟಯರೀಸು ಮನೆಲಿ ಅರವಿಂದಭಾವನೂ, ಅವನ ಅಮ್ಮ – ಪದ್ಮತ್ತೆಯೂ – ಮಾಂತ್ರ!
ಅರವಿಂದ ಬಾವನ ಅಕ್ಕಂಗೆ ಅಂದೇ ಮದುವೆ ಆಗಿ, ಎರಡು ಮಕ್ಕೊ ಆಯಿದವಿದಾ.
ಅರವಿಂದಭಾವಂಗೆ ನಿತ್ಯ ಕೃಷಿಚಟುವಟಿಕೆಗಳ ಮೇಲ್ತನಿಖೆ ನೋಡಿಗೊಂಬದರ ಒಟ್ಟಿಂಗೆ ಹಾಲು ಕೊಡ್ಳೆ ಪೇಟಗೆ ಹೋಪದೊಂದು ಕಾರ್ಯ ಇದ್ದು. ಸೊಂತದ ಮಾರುತಿಕಾರಿನ ಬಿಟ್ಟೊಂಡು ಹಾಲು ಕೊಟ್ಟಿಕ್ಕಿ, ಪೇಪರು ತೆಕ್ಕೊಂಡು ಮನಗೆ ಹೋಕು.

ಈಗ ಅರವಿಂದ ಭಾವಂಗೆ ಮೂವತ್ತೇಳು-ನಲುವತ್ತೊರಿಶ. ಚಾಲೀಸು ಕನ್ನಡ್ಕಕ್ಕೆ ಕಾನಾವುಡಾಗುಟ್ರಲ್ಲಿಗೆ ಮೊನ್ನೆ ಹೋಗಿ ಬಯಿಂದ°.

~
ಬೆಳ್ಳಾರೆ ಸುಬ್ರಾಯಮಾವಂಗೆ ಬಡಪ್ಪತ್ತಿನ ಒಟ್ಟಿಂಗೆ ದೇವರು ಕೊಟ್ಟದು ಇಬ್ರು ಮಕ್ಕೊ.
ಕೈಂದ ಹರಿಯದ್ರೂ, ನೆರೆಕರೆಯ ದೊಡ್ಡೋರ ಮಕ್ಕಳೊಟ್ಟಿಂಗೆ ಶಾಲಗೆ ಕಳುಸಿದ್ದವು. ಸಣ್ಣ ಇಪ್ಪಗಳೇ ಹೋಟ್ಳಿಂಗೋ ಮಣ್ಣ ಕಳುಸಿದ್ದರೆ ಅವಕ್ಕೆ ಅಷ್ಟು ಕಷ್ಟ ಇರ್ತಿತಿಲ್ಲೆ, ಆದರೆ ಸ್ವತಃ ಅವ್ವೇ ಅಡಿಗ್ಗೆ ಹೋಗಿ, ಮಕ್ಕಳ ಭವಿಷ್ಯ ಹಸುರು ಆಯೇಕು – ಹೇಳ್ತ ಮುಚ್ಚಟೆ ಮಡಿಕ್ಕೊಂಡಿತ್ತಿದ್ದವು.
ಹಾಂಗೆಯೇ, ದೊಡ್ಡಮಗಂಗೆ ವಿದ್ಯೆ ಒಲುದು ಈಗ ದಾವಣಗೆರೆಲಿ ಡಾಗುಟ್ರು ಆಗಿದ್ದ°. ಹೆಂಡತ್ತಿ ಮಕ್ಕಳ ಒಟ್ಟಿಂಗೆ ಸೌಖ್ಯಸಂಸಾರ.
ಎರಡ್ಣೇವನೇ ಬಾಲಣ್ಣ. ಶಾಲೆವಿದ್ಯೆ ಸಮಗಟ್ಟು ತಲೆಲಿ ಬರದ್ದಿಲ್ಲೆ – ಹೇಳ್ತರ ಸುಬ್ರಾಯಮಾವನೂ, ಬಾಲಣ್ಣನೂ ಗಟ್ಟಿಗೆ ನಂಬಿದ ಕಾರಣ ಹತ್ನೇ ಕ್ಲಾಸಿಲೇ ಶಾಲೆಬಿಟ್ಟು, ಕುಂಭಕೋಣಕ್ಕೆ ಮಂತ್ರ ಕಲಿವಲೆ ಹೋದ°.
ಮತ್ತೆ ಹನ್ನೆರಡೊರಿಶ ವೇದಮಂತ್ರ, ಪ್ರಯೋಗ – ಎಲ್ಲವನ್ನೂ ಕಲ್ತು, ಘನಪಾಟಿ ಆಗಿ ಒಪಾಸು ಬಪ್ಪಗ ಅವರ ಗುರ್ತವೇ ಮರದಿತ್ತು ಊರು. ಆ ಬಾಲಣ್ಣನ ನಿಂಗೊಗೆ ಅರಡಿಗಲ್ಲದೋ – ಕುಂಞಿಹಿತ್ಲುಬಟ್ರ ಒಟ್ಟಿಂಗೆ ಒಂದೊಂದರಿ ಬತ್ತವು,
ಸಣ್ಣಪ್ರಾಯದವು, ತೆಂಕ್ಲಾಗಿಯಾಣ ಅಡ್ಡನಾಮ ಹಾಕುತ್ತವು – ಅವು.
ಎಲ್ಲೋರಿಂಗೂ ಅವರ ನೆಂಪಿಪ್ಪಲೆ, ಅವೆಂತ ದೇವೇಗೌಡನ ಮಗನೋ! ಇರಳಿ, ಬೈಲಿನೋರಿಂಗೆ ಅವರ ನೆಂಪಕ್ಕನ್ನೆ.
ಈಗೀಗಂತೊ ಪುರ್ಸೊತ್ತಿಲ್ಲದ್ದೆ ಕಾರ್ಯಕ್ರಮಂಗೊ ಇದ್ದು.
ಒಯಿದೀಕ ಕಾರ್ಯಕ್ರಮಂಗಳಲ್ಲಿ ಸಿಕ್ಕುತ್ತ ದಕ್ಷಿಣಿಗೆ ತೆರಿಗೆ ಏನಿಲ್ಲೆ, ಹಾಂಗಾಗಿ – ದಾರಿಖರ್ಚಿಂಗೆ ಬಿಟ್ಟೂ, ಮತ್ತೆ ಪೂರ ಉಳಿತಾಯವೇ. ಅಪ್ಪೋಲ್ಲದೋ?!

ವ್ಯಾಪ್ತಿಗೆ ಇಳುದ ಸಮೆಯಲ್ಲಿ ನೆಡಕ್ಕೊಂಡು / ಬಸ್ಸಿಲಿ ಹೋಗಿಂಡಿದ್ದರೂ, ರಜ್ಜ ಸಮೆಯಲ್ಲೇ ಬೈಕ್ಕು ತೆಗದಿತ್ತವು. ಮತ್ತೆ ಈಗ ಅವರ ಹತ್ತರೆ ಕರಿಬಣ್ಣದ ಕಾರಿದ್ದು, ದೂರಕ್ಕೆ ಹೋಯೇಕಾರೆ ಅದರ್ಲೇ ಹೋಪದು.

ಬಾಲಣ್ಣ ಕಲ್ತ ಮಂತ್ರಲ್ಲಿ ಕೆಲವೆಲ್ಲ ಮರವಲೆ ಸುರು ಆಯಿದು. ಎಂತಕೆ? ಅವಕ್ಕೀಗ ಒರಿಶ ನಲುವತ್ತು!

~

ಬೈಲಕರೆ ಕೃಷ್ಣಮಾವಂಗೆ ಒಬ್ಬನೇ ಮಗ ರಮೇಶಬಾವ°.
ಮನೆಲಿ ದೊಡ್ಡಮಟ್ಟಿನ ಅನುಕ್ಕೂಲ ಇಲ್ಲೆ. ಶಾಲೆವಿದ್ಯೆ ಡಿಗ್ರಿ ಒರೆಂಗೆ ಆದರೂ, ಮುಂದುವರಿಯಲೆ ದೈವದೊಲುಮೆ ಇಲ್ಲೆ!
ಅಪ್ಪನ ಕಾಲಂದ ಬಂದ ಒಂದೆಕ್ರೆ ಜಾಗೆಯ ನೋಡಿಂಡು, ಪೇಂಟುಹಾಕಿ ಪೇಟಗೆ ಹೋಗಿಂಡು, ಎಂತದೋ ಚಾಕ್ರಿ ಮಾಡಿಗೊಂಡು ಇತ್ತಿದ್ದ°.
ಈಗ ನಾಲ್ಕೊರಿಶಂದ ಅದರಿಂದ ಹೆಚ್ಚು ಅನುಕೂಲ ಹೇಳಿಗೊಂಡು – ಸುದರಿಕೆಗೆ– ಹೋಪಲೆ ಸುರುಮಾಡಿದ್ದ°.
ಈಗಂತೂ ಸುದರಿಕೆಯೋರು ಇಲ್ಲದ್ದ ಜೆಂಬ್ರ ಇಲ್ಲೆ.
ಮುನ್ನಾದಿನ ಹೊತ್ತಪ್ಪಗ ನಾಕುಗಂಟಗೆ ಜೆಂಬ್ರದಮನಗೆ ಹೋಗಿ ಹೆಗಲಿಂಗೆ ಶಾಲು ಹಾಕಿ ಕೆಲಸ ಸುರುಮಾಡಿರೆ, ಆ ದಿನ ಇರುಳು ಊಟದ ವೆವಸ್ತೆ, ಬೆಂದಿಗೆ ಕೊರವ ವೆವಸ್ತೆ, ಮರದಿನ ಉದಿಯಪ್ಪಗ ಚಾಕಾಪಿ ಪಲಾರ ವೆವಸ್ತೆ, ಎಡೆಹೊತ್ತಿಲಿ ಆಸರಿಂಗೆ ವೆವಸ್ತೆ, ಮದ್ಯಾನ್ನಕ್ಕೆ ಊಟದ ವೆವಸ್ತೆ, ಊಟ ಆದ ಮತ್ತೆ ಕಾಪಿಚಾಯದ ವೆವಸ್ತೆ – ಇಷ್ಟೇ ಕೆಲಸ.
ಇದಾದ ಮತ್ತೆ, ಜೆಂಬ್ರದ್ದಿನ ನಾಕು ಗಂಟೆಗೆ – ತಡವಾಗಿ ಹೆರಡುವ ನೆಂಟ್ರುಗಳ ಒಟ್ಟಿಂಗೆ – ಇವಂದೇ ಅಂಗಿ ಸುರುಕ್ಕೊಂಡು ಹೆರಟ್ರೆ ಮುಗಾತು. ಹೆರಡ್ಳಪ್ಪಗ ಮನೆ ಎಜಮಾನನ ಬಂಙ ದೂರ ಮಾಡಿ, ಹೆಸರು ಒಳುಶಿದ ಕೊಶಿಲಿ ಕೈ ಎತ್ತಿ ದಕ್ಷಿಣೆ ಕೊಡ್ತವಿದಾ..

ಈಗ ಸಂಪಾದನಗೆ ಏನೂ ಕೊರತ್ತೆ ಇಲ್ಲೆ!
ಸುರೂವಿಂಗೆ ಎಮ್ಮೈಟಿ ತೆಕ್ಕೊಂಡ ರಮೇಶಬಾವ°, ಮತ್ತೆ ಇವನ ಸ್ಪೀಡಿಂಗೆ ಅದರ ಸ್ಪೀಡು ಸಾಕಾವುತ್ತಿಲ್ಲೆ ಹೇಳಿಗೊಂಡು ದೂರ ಹೋಪಲೆ ಅನುಕೂಲ ಆವುತ್ತ ಬೈಕ್ಕು ತೆಕ್ಕೊಂಡ°.
ಮುಂದಕ್ಕೆ ಎರಡು-ಮೂರು ಬೈಕ್ಕು ಬದಲುಸಿ ಈಗಂತೂ ಗೆನಾ ಬೈಕ್ಕು ಅವನ ಕಾಲೆಡಕ್ಕಿಲಿ ಇರ್ತು.
ಎಲ್ಲಿಂದ ಎಲ್ಲಿಗೆ ಹೋಯೇಕಾರೂ – ಎಂಬತ್ತರ ಮೇಗೆ ಹೋವುತ್ತು ಅವನ ಬೈಕ್ಕು!
ಕೇಸರಿ ಶಾಲು ಹಾಕಿಂಡು ಮಾರ್ಗದ ಕರೆಲಿ ಸಿಕ್ಕಿರೆ, ಒಂದು ಗಳಿಗೆ ಬೈಕ್ಕು ನಿಲ್ಲುಸಿ ಮಾತಾಡುಸಿಕ್ಕಿಯೇ ಮುಂದಕ್ಕೆ ಹೋಕು.

ಎಲೆಡಕ್ಕೆ ತಿಂದು ಹಲ್ಲು ಕೆಂಪಾಯಿದು! ಒರಿಶ ನಲುವತ್ತಕ್ಕೆ ಹತ್ತರೆ ಆದ ಕಾರಣ, ತಲೆಕಸವು ಬೆಳಿ ಆಯಿದು!

~

ರಾಜಿ ಮಾಡಿಗೊಳದ್ದ ವೃಕ್ಷ ಒಣಗಿಯೇ ಹೋತು! ಅದು ಕಾಲನಿಯಮ..

ದರ್ಕಾಸು ಗೆಡ್ಡದಮಾವ° ಅಂತೇ ಬೊಬ್ಬೆ ಹೊಡದು ಜೀವಮಾನ ತೆಗದವು.
ಆದರೆ ಅವರ ಮಗ ಶಂಕರಣ್ಣ ಹಾಂಗಲ್ಲ. ಸಣ್ಣ ಇಪ್ಪಗ ರಜ್ಜ ಅಪ್ಪನ ಹಾಂಗೇ ಇದ್ದರೂ, ಈಗ ಒಳ್ಳೆತ ಜೆವಾಬ್ದಾರಿ ಬಯಿಂದು ಜೀವನಲ್ಲಿ.
ರಾಮಜ್ಜನ ಕೋಲೇಜಿಲಿ ಡಿಪ್ಲಮ ಮಾಡಿರೂ, ರೇಡ್ಯರಿಪೆರಿಯ ಹಾಂಗಿರ್ತ ಕೆಲಸ ಕೈಗೆ ಹಿಡುತ್ತಿಲ್ಲೆ.
ಹಾಂಗಾಗಿ, ಸಂಸ್ಕಾರಕ್ಕೆ ಒದಗಿ ಬಂದ ‘ಪೂಜೆ’ಯನ್ನೇ ವೃತ್ತಿಯಾಗಿ ಮುಂದರುಸಿದ°.
ಖರ್ಚಿಗೆ ತಕ್ಕ ಮಂತ್ರ ಕಲ್ತು, ಊರಿಲಿ ಉಪಹೋಮ, ಪರಿಕರ್ಮ – ಹೀಂಗಿರ್ತಕ್ಕೆ ಹೋಗಿಂಡಿತ್ತಿದ್ದ°.
ಮತ್ತೆ ಒಂದು ಒಳ್ಳೆ ಸುಮುಹೂರ್ತಲ್ಲಿ ಅಜ್ಜಿಕಲ್ಲು ದೇವಸ್ಥಾನಲ್ಲಿ ಮೇಶಾಂತಿ (ಪೂಜೆಬಟ್ರು) ಆಗಿ ಸೇರಿಗೊಂಡ°.
ಹಡಿಲು ಬಿದ್ದ ಹಾಂಗಿರ್ತ ಆ ದೇವಸ್ಥಾನಕ್ಕೆ ಇವ° ಹೋದ್ದೇ; ಹಲವಾರು ಸೇವೆಗೊ, ಪೂಜೆಗೊ, ಅರ್ಚನೆಗೊ, ಮಂಗಳಾರತಿಗೊ – ಎಲ್ಲ ಸುರುಆಗಿ ಈಗ ಜೆನವೇ ಜೆನ ಅಡ.
ಅರ್ಚಕಸ್ಯ ಪ್ರಭಾವೇನ ಹೇಳಿಗೊಂಡು – ಕೊಶಿ ಆದ ಭಕ್ತರು ದೇವರಿಂಗೆ ಕೊಡುದರ ಒಟ್ಟಿಂಗೇ ಕಡಮ್ಮೆಲಿ ಹತ್ತಿಪ್ಪತ್ತು ರುಪಾಯಿ ಆದರೂ ಶಂಕರಣ್ಣನ ತಟ್ಟಗೆ ಹಾಕಿ ಪುಣ್ಯಕಟ್ಟಿಗೊಳ್ತವು.
ಭಕ್ತಿಲಿ ಕೊಟ್ಟದರ ಶ್ರದ್ಧೆಲಿ ಒಟ್ಟುಗಟ್ಟಿ ಶಂಕರಣ್ಣನೂ ಪುಣ್ಯಕಟ್ಟಿಗೊಳ್ತ°. ಅದಿರಳಿ!

ಈಗ ಅವನೇ ‘ಬಿಟ್ಟುಹೋವುತ್ತೆ’ ಹೇಳಿರೂ ದೇವಸ್ಥಾನದವು ಬಿಡ್ತವಿಲ್ಲೇಡ – ಸುರುವಿಂಗೆ ಒಂದೂವರೆ ಸಾವಿರ ಇದ್ದ ಸಂಬಳವ ಕಮಿಟಿಯವು ಜಾಸ್ತಿ ಮಾಡಿದ್ದವಡ. ಅದೂ ಅಲ್ಲದ್ದೆ, ಚೆಂದದ ಮನೆ, ಅದಕ್ಕೆ ಬೇಕಾದ ವೆವಸ್ತೆಗಳನ್ನೂ ಮಾಡಿಕೊಟ್ಟಿದವಡ.
ದೇವಸ್ಥಾನದ ದೇವರು ಶ್ರೀಮಂತ ಆದ ಹಾಂಗೇ, ದೇವರ ಸೇವಕನೂ ಶ್ರೀಮಂತ ಆದ°. ಈಗ ಕೈಲಿ ಧಾರಾಳ ಪೈಸೆ ತಿರುಗುತ್ತು.
ದೇವಸ್ಥಾನದೋರು ಕೊಟ್ಟ ಮನೆಗೆ ಟೀವಿ ಪ್ರಿಜ್ಜು ತಂದದು ಮಾಂತ್ರ ಅಲ್ಲದ್ದೇ, ಊರಿಲಿರ್ತ ಮನೆಗೂ ಟೀವಿ, ಪಂಪು ಎಲ್ಲ ಬಂತಾಡ.
ಟೀವಿ ಬಂದ ಕಾರಣ ಗೆಡ್ಡದಮಾವಂಗೆ ಬೊಬ್ಬೆ ಹೊಡವಲೂ ಪುರುಸೊತ್ತಿಲ್ಲೆ, ಅದು ಬೇರೆ!
ಶಂಕರಣ್ಣಂಗೆ ಈಗ ಅಜ್ಜಿಕಲ್ಲಿಲಿ ಎಲ್ಲಿಲ್ಲದ್ದ ಮರಿಯಾದಿ.

ಅವರ ಊರ ದೇವಸ್ಥಾನದ ಗುಂಡದ ಹೆರ ಇಪ್ಪ ದೇವರೇ ಹೇಳಿ ಲೆಕ್ಕ! ಈಗ ಕಾಂಬಗ ರಜ ಗಾಂಭೀರ್ಯವೂ ಕಾಣ್ತಿದಾ, ಒರಿಶ ನಲುವತ್ತೆರಡು ಆದ ಕಾರಣ!

~

ಅಡಿಗೆ ಉದಯಣ್ಣನ ಅರಡಿಗಲ್ಲದೋ? ಬೈಲಕರೆಪೇಟೆಲಿ ಮಾರ್ಗದ ಕರೆಲಿಪ್ಪ ಹಿತ್ಲುಮನೆಲಿ ವಾಸ.
ಅಪ್ಪ ಮಾಡಿದ ಸಣ್ಣ ಹೋಟ್ಳನ್ನೇ ನೋಡಿಗೊಂಡು ಕೂದರೆ ಮುಂದಕ್ಕೆ ಒಳಿತ್ತಹಾಂಗೆ ಎಂತಾರು ಹುಟ್ಟೆಡದೋ – ಹಾಂಗಾಗಿ ಅಡಿಗ್ಗೆ ಹೆರಟದು.
ಅವರ ಹೆರಿಯೋರು – ತುಂಬ ಮದಲಿಂಗೆ – ಅಡಿಗೆಲಿ ಎತ್ತಿದ ಕೈ ಅಡ. ಹಾಂಗಾಗಿ, ಉದಯಣ್ಣಂಗೂ ಅಡಿಗೆ ಬೇಗ ಹಿಡುದತ್ತು.
ಸುರುವಿಂಗೆ ನೆರೆಕರೆಲಿ ಸಣ್ಣ ಜೆಂಬ್ರಂಗೊಕ್ಕೆ ಉದಯಣ್ಣನ ಹೇಳುಲೆ ಸುರು ಮಾಡಿದವು. ಮುಂದೆ ಹಾಂಗೇ –  ವ್ಯಾಪ್ತಿ ಬೆಳದು ಬೆಳದು, ಈಗ ನಮ್ಮ ಊರಿನ ದೊಡ್ಡ ಅಡಿಗೆಯವರಲ್ಲಿ ಒಬ್ಬ° ಆಗಿ ಬಿಟ್ಟಿದ°.
ಊರ ಗಣೇಶೋತ್ಸವ, ಶಾರದಾಪೂಜೆಗೊಕ್ಕೆ ಎಲ್ಲ ಉದಯಣ್ಣನ ಸೆಟ್ಟಿಂದೇ ಅಡಿಗೆ!

ಮೇಲಡಿಗೆಯ ತೂಕ, ತಾಕತ್ತು ಎಲ್ಲವೂ ಉದಯಣ್ಣಂಗೆ ಇದ್ದು, ಉಪ್ಪುಮೆಣಸು ಅಂದಾಜಿ ಒಲುದು ಬಯಿಂದು.

ಅದೇ ವೃತ್ತಿಲಿ ಸುಮಾರು ಒರಿಶ ಆತಿದಾ; ಪ್ರಾಯ ಏನೂ – ಈಗ ನಲುವತ್ತೈದಕ್ಕೆ ಕಮ್ಮಿ ಆಗ.

~

ಇದಿಷ್ಟು ಕೆಲವು ಒಪ್ಪಣ್ಣಂದ್ರ ಕತೆ ಆತು. ಇನ್ನು ಕೆಲವು ಒಪ್ಪಕ್ಕಂದ್ರ ಬಗ್ಗೆ ತಿಳಿವೊ°..

~

ಹೊಸಮನೆ ಅಡಿಗೆಮಾವನ ಎರಡ್ಣೇ ಮಗಳೇ ಗಂಗಾರತ್ನ; ಒಪ್ಪಣ್ಣಂಗೆ ರತ್ನಕ್ಕ° ಹೇಳಿಯೇ ಗುರ್ತ ಇದಾ!
ಸಣ್ಣ ಇಪ್ಪಗಳೇ ರತ್ನಕ್ಕ° ಕಲಿವಲೆ ಉಶಾರಿ. ಪೈಸಕ್ಕೆ ಎಷ್ಟು ಕಷ್ಟ ಇದ್ದರೂ – ಕಲಿಶುತ್ತರ ನಿಲ್ಲುಸಿದ್ದವಿಲ್ಲೆ ಅಪ್ಪಮ್ಮ.
ಕಲ್ತು ಕಲ್ತು, ಮೇಗೆ ಬಂದು ಹತ್ನೇ ಕ್ಳಾಸು ಕಲ್ತು, ಪೀಯೂಸಿ ಮಾಡಿಗೊಂಡು, ಡಿಗ್ರಿಯೂ ಆತು.
ಡಿಗ್ರಿಲಿ ರೇಂಕು ಬಯಿಂದಾಡ ರತ್ನಕ್ಕಂಗೆ; ಅಂಬಗ ಎಲ್ಲ ಅದುವೇ ಒಂದು ಶುದ್ದಿ ಎಂಗೊಗೆ!!
ರೇಂಕು ಬಂದ ಕೂಡ್ಳೇ ಮದುವೆ ಮಾಡುಗೋ – ಚೆ, ಇಲ್ಲೆಪ್ಪ.
‘ಕೂಸಿಂಗೆ ಕಲಿಯೇಕಡ’ ಹೇಳಿಗೊಂಡು ಕೊಡೆಯಾಲಕ್ಕೆ ಕಲಿಯಲೆ ಕಳುಗಿದವು.
ಅಲ್ಲಿರ್ತ ದೊಡ್ಡ ಶಾಲೆಲಿ ಯಮ್ಮೆಸ್ಸಿಯೂ ಮುಗಾತು; ಒಳ್ಳೆ ಮಾರ್ಕಿಲಿ.
ಅದಾದ ಮತ್ತೆ ಕೊಡೆಯಾಲಲ್ಲೇ ಒಂದು ಕೋಲೇಜಿಲಿ ಲೆಗುಚ್ಚರು ಆಗಿ ದೆನಿಗೆಳಿದವಡ.

ಹಾಂಗೆ – ಈಗ ಸುಮಾರು ಒರಿಶಂದ ಕೊಡೆಯಾಲಲ್ಲಿ; ಒರಿಶ ಮೂವತ್ತೈದು ಕಳಾತೋ – ಹೇಳಿಗೊಂಡು!
ಸರೀ ಅರಡಿಯ ನವಗೆ, ಕೂಸುಗಳ ಪ್ರಾಯ ಕೇಳುಲಾಗಾಡ, ಅಲ್ಲದೋ?! 😉

~

ಪಂಜಚಿಕ್ಕಯ್ಯನ ಅಣ್ಣನ ಮಗಳು ಶಾಲಿನಿಅಕ್ಕ°. ಒಪ್ಪಣ್ಣನಿಂದ ಪ್ರಾಯಲ್ಲಿ ಸುಮಾರು ದೊಡ್ಡ.
ಆ ಕಾಲಲ್ಲೇ ಕೊಡೆಯಾಲಲ್ಲಿ ಇದ್ದುಗೊಂಡು ಶಾಲಗೆ ಹೋಗಿಂಡಿದ್ದದು.
ಪೀಯೂಸಿ ಕಳುದ ಮತ್ತೆ ಇಂಜಿನಿಯರು ಅಪ್ಪಲೆ ಕೋಲೇಜಿಂಗೆ ಸೇರಿತ್ತು, ಇಂಜಿನಿಯರು ಕಲ್ತಾತು; ಕಲ್ತಾದರೆ ಕೆಲಸ.
ಕೆಲಸ ಸಿಕ್ಕೇಕು ಆದರೆ- ಅದೆಂತ ಸಂಕ ಕಟ್ಟುತ್ತ ಇಂಜಿನಿಯರು ಅಲ್ಲ, ಕಂಪ್ಲೀಟ್ರು ಬೇಕು, ಆ ನಮುನೆ ಕೆಲಸ.
ಕಂಪ್ಲೀಟ್ರು ಒತ್ತುತ್ತೆ ಹೇಳಿರೆ ಊರಿಲಿ ಎಲ್ಲಿದ್ದು? – ಅದಕ್ಕೆ ಬೆಂಗುಳೂರಿಂಗೆ ಕಳುಗಿದವು ಶಾಲಿನಿ ಅಕ್ಕನ.

ಯೇವದೋ ಸಣ್ಣ ಕಂಪೆನಿಗಳಲ್ಲಿ ಇಂಜಿನಿಯರು ಆಗಿ, ಈಗ ಐಬೀಯಮ್ಮಿನ ಹಾಂಗಿರ್ತ ಯೇವದೋ ಕಂಪೆನಿಲಿ ದೊಡ್ಡ ಕೆಲಸಲ್ಲಿ ಇದ್ದಾಡ. ತಿಂಗಳಿಂಗೆ ಎರಡುಕಂಡಿ ಸಂಬಳ! ಒರಿಶಕ್ಕೆ ನಾಕು ಸರ್ತಿ ವಿಮಾನ ಹತ್ತುತ್ತಡ.
– ಕೈಲಿ ಧಾರಾಳ ಪೈಸೆ ಇದ್ದು, ಸ್ವಂತ ಒಂದು ಕಾರು ಇದ್ದಾಡ. ಆಗಲಿ ಒಳ್ಳೆದೇ.

ಈಗ ಒರಿಶ ಮೂವತ್ತೆರಡು ಕಳುತ್ತಡ.

~

ತೋಟದಮನೆ ಸುಬ್ರಾಯಪ್ಪಚ್ಚಿ ಮಾಷ್ಟ್ರ° ಆಗಿ ರಿಟೇರ್ಡು. ಅವಕ್ಕೆ ಇಬ್ರು ಮಕ್ಕೊ.
ದೊಡ್ಡದು ಮಗಳು, ಎರಡ್ಣೇಯೋನು ಮಗ° – ಇಬ್ರೂ ಉಶಾರಿಯೇ.
ಮಗ ಬೆಂಗುಳೂರಿಲಿ ಇಂಜಿನಿಯರು ಆಗಿ ನಾಕೊರಿಶ ಆತಾಡ.
ರಾಜಿಅಕ್ಕ° – ಅವರ ಮಗಳಿಂಗೂ, ಸಣ್ಣ ಪ್ರಾಯಲ್ಲೇ ಟೀಚರು ಕೆಲಸ ಸಿಕ್ಕಿತ್ತು. ದೂರ ದೂರದ ಹಳ್ಳಿಶಾಲೆಲಿ ಟೀಚರು ಆಗಿ, ಈಗ ಪುತ್ತೂರಿಲಿ ಬಂದು ಸೇರಿದ್ದವಾಡ.
ಗೋರ್ಮೆಂಟು ಕೆಲಸ ಹೇಳಿತ್ತುಕಂಡ್ರೆ, ಕೆಲಸ ಜಾಸ್ತಿ, ಸಂಬಳ ಕಮ್ಮಿ – ಹೇಳಿ ಸುಬ್ರಾಯಪ್ಪಚ್ಚಿ ನೆಗೆಮಾಡ್ಳಿದ್ದು ಒಂದೊಂದಾರಿ – ಹಾಂಗೇ ಅವರ ಮಗಳಿಂಗೂ ಕೈತುಂಬಾ ಕೆಲಸಂಗೊ ಇರ್ತಾಡ.
ಗೋರ್ಮೆಂಟು ಆದ ಕಾರಣ ’ಕೆಲಸ ಗಟ್ಟಿ’ಯೇ ಇದಾ! ಅದೂ ಅಲ್ಲದ್ದೆ, ಇಪ್ಪತ್ನೇ ಒರಿಶಲ್ಲೇ ಸೇರಿದ ಕಾರಣ ಈಗ ಹತ್ತನ್ನೆರಡೊರಿಶ ಸರುವೀಸು ಆತಾಡ, ಅಲ್ಲದೊ? ಹಾಂಗೆ ರಜರಜವೇ ಸೇರಿದ್ದಾದರೂ ಕೈಲಿ ಒಳ್ಳೆತ ಪೈಶೆ ಇದ್ದಾಡ.

ರಾಜಿಅಕ್ಕಂಗೆ ಈಗ ಮೂವತ್ತೆರಡು ಕಳುದು ಮೂವತ್ಮೂರು.

~

ಹೊಸಹಿತ್ಲು ಕೃಷ್ಣಮಾವಂಗೆ ಸಣ್ಣ ಒಂದು ಗೂಡಂಗುಡಿ ಇದ್ದ ಕಾರಣ ‘ಅಂಗುಡಿ ಕೃಷ್ಣಮಾವ°’ ಹೇಳಿಯೂ ದಿನಿಗೆಳುಗು ಊರವು.
ಈಗ  ಕಳುದೊರಿಶ ಒಂದಿರುಳು ಜೋರು ಎದೆಬೇನೆ ಬಂದ ಮತ್ತೆ ಅಂಗುಡಿಯ ಬಾಡಿಗೆಗೆ ಕೊಟ್ಟದು ಬಿಟ್ರೆ, ಅಲ್ಲದ್ದರೆ ಅವ್ವೇ ಇದ್ದದು ಅಂಗುಡಿಲಿ ಕೂದಂಡು.
ಅವರ ಮಗ° ಕೊಡೆಯಾಲಲ್ಲಿ ಕೆಲಸಲ್ಲಿದ್ದ°, ವಾರಕ್ಕೊಂದರಿ ಊರಿಂಗೆ ಬತ್ತ°.
ಅವರ ಉಶಾರಿ ಮಗಳು – ದೇವಿಅತ್ತಿಗೆ ಕಲಿವಿಕೆ ಆದ ಕೂಡ್ಳೇ ಒಂದು ಪರೀಕ್ಷೆ ಬರದವಾಡ, ಪೋನು ಆಪೀಸಿಂಗೆ ಸೇರ್ಲೆ ಇಪ್ಪದು.
ಅದರ್ಲಿ ಪಾಸಾದ ಕಾರಣ ಪೋನು ಡಿಪಾರ್ಟುಮೆಂಟಿಲೇ ಸೇರಿಗೊಂಡವು.
ಕೈತುಂಬ ಸಂಬಳದ ಭಾರತಸರಕಾರದ ಚಾಕಿರಿ. ಈಗ ಅದರ್ಲಿಯೂ ಪ್ರೊಮೋಶನು ಆಗಿ ’ದೊಡ್ಡ ಇಂಜಿನಿಯರು’ ಆಗಿ ದೊಡ್ಡ ಕೋಣೆಲಿ ಕೂದುಗೊಂಬ ಕೆಲಸ ಅಡ!
ಟ್ರಾನ್ಸುವರು ಅಪ್ಪದೇ ಅದರ್ಲಿಪ್ಪ ದೊಡ್ಡ ರೋಗ; ಮದಲು ಹಾಸನಲ್ಲಿ ಇದ್ದೋರು – ಈಗ ರಾಯಚೂರಿಲಿ ಇದ್ದವಡ.

ಅವಕ್ಕೂ ಪ್ರಾಯ ಹತ್ತು ಮೂವತ್ತೈದಕ್ಕೆ ಕಮ್ಮಿ ಆಗ!

~

ಇಡೀ ಊರವರ ಜಾತಕ ಪೂರ ಹೇಳಿಗೊಂಡು ಕೂಯಿದ ಒಪ್ಪಣ್ಣ – ಹೇಳಿ ಚೆನ್ನೈಬಾವ° ಪರಂಚಲೆ ಸುರುಮಾಡಿದವು!
ಅಪ್ಪು, ಇಷ್ಟೆಲ್ಲ ಜೆನರ ಜಾತಕ ನೋಡಿದಿರಲ್ಲದೋ – ಎಂತಾರು ಅಂದಾಜಿ ಆತೋ?
~

ನಲುವತ್ತು ಚಿಲ್ಲರೆ ಒರಿಶ ಆದ ಮಾಣಿಯಂಗೊ ನಮ್ಮ ಊರಿಲಿ ಧಾರಾಳ ಕಾಂಬಲೆ ಸಿಕ್ಕುತ್ತವು.
ಇಪ್ಪತ್ತೊರಿಶ ಮದಲಿಂಗೆ `ಸಾಮಾನ್ಯ’ ವಿದ್ಯಾಭ್ಯಾಸ ಹೇಳಿತ್ತುಕಂಡ್ರೆ ಪೀಯೂಸಿ, ಡಿಗ್ರಿ.
ಅಷ್ಟರ ಸಾಬೀತಿಲಿ ಕಲ್ತು, ಊರಿಂಗೆ ಬಂದು ಅಪ್ಪ್ಪನ ವೃತ್ತಿಯನ್ನೋ, ಕೃಷಿಯನ್ನೋ, ಬೇರೆ ಉಪವೃತ್ತಿಯನ್ನೋ ಮಾಡಿಗೊಂಡು ನೆಮ್ಮದಿಲಿ ಜೀವನ ಮಾಡ್ತಾ ಇದ್ದವು.
ಒಬ್ಬೊಬ್ಬನೇ ಮಗ° ಆದ ಕಾರಣ, ಊರಿಲಿ ಹೆರಿಯೋರು ಮಾಡಿದ ಜಾಗೆಯ ಬಿಡ್ಳೆ ಎಡಿಯದ್ದೆ, ಹೆರ ಹೋಪಲೆ ಎಡಿಯದ್ದೆ, ಸಿಕ್ಕಿದ ಎಷ್ಟೋ ಕೆಲಸಂಗಳನ್ನೂ ಬಿಟ್ಟು ಊರಿಲೇ ಕೂದುಗೊಂಡಿದವು.
ಮೂರೂ ಹೊತ್ತು ಎಲೆ ತಿಂದೊಂಡು, ಅಡಕ್ಕೆ, ತೆಂಗು, ರಬ್ಬರು, ಹಟ್ಟಿ, ದನಗೊ – ಹೇಳಿಗೊಂಡು ಮನೆ ನೆಡೆಶಿಗೊಂಡು ಇದ್ದವು.
ಕೆಲವು ಜೆನ ಮದುವೆ ಆಗಿ ನೆಮ್ಮದಿಲಿ ಸಂಸಾರ ಮಾಡಿಗೊಂಡು ಇದ್ದವು.
ಆದರೆ ಕೆಲವು ಜೆನಕ್ಕೆ ಆ ಸಪ್ತಮಭಾವ ಒಲುದ್ದವಿಲ್ಲೆ!
ಮನೆಲಿ ಯಥೇಷ್ಟ ನೆಮ್ಮದಿಯ ಜೀವನ ಇದ್ದರೂ, ಮದುವೆ ಅಪ್ಪಲೆ ಕೂಸುಗೊ ಸಿಕ್ಕಿಂಡಿಲ್ಲೆ!

~

ಮೂವತ್ತರ ಆಸುಪಾಸಿನ ಕೆಲವು ‘ಕೂಸುಗೊ’ ನಮ್ಮ ಬೈಲಿಲಿ ಕೆಲವು ದಿಕೆ ಕಾಂಬಲೆ ಸಿಕ್ಕುಗು.
ಹತ್ತೊರಿಶ ಹಿಂದಾಣ ವಿದ್ಯಾಸಂಸ್ಕಾರದ ನಮುನೆ ಡಿಗ್ರಿಯೋ, ಇಂಜಿನಿಯರೋ, ಅದರಿಂದಲೂ ಮೇಗೆಯೋ – ಎಂತಾರು ಕಲ್ತುಗೊಂಡು ಮನೆಬಿಟ್ಟು, ಅಂದೇ ಹೆರ ಹೋಗಿದ್ದವು.
ಕಲಿವಿಕೆ ಆದ ತಕ್ಷಣ ಕೆಲಸ ಸಿಕ್ಕಿದ ಕಾರಣ ಈಗ ತುಂಬ ಮೇಗಾಣ ಹಂತಕ್ಕೆ ಎತ್ತಿದ್ದವು ಅವರವರ ಕೆಲಸಲ್ಲಿ.
ಚೂಡಿದಾರವೋ, ಪೇಂಟಂಗಿಯೋ ಮಣ್ಣ ಹಾಕುತ್ತ ಸಂಸ್ಕಾರದ ದೊಡ್ಡಮಟ್ಟಿನ ಕೆಲಸವೂ ಆಗಿಕ್ಕು!
ದೂರ ದೂರದ ಪೇಟೆಲಿ ಹೋಗಿ ಒಂದಿದ್ದವು.
ಕೈ ತುಂಬ ಸಂಪಾದನೆ ಮಾಡಿ ತಲೆ ತುಂಬ ನೆಮ್ಮದಿಯ ತುಂಬುಸಿಗೊಂಡಿದವು.
~

ಒರಿಶ ಎಷ್ಟೇ ಆದರೂ ಮನಿಶ್ಶ ಕಾಯಿಗು; ಆದರೆ ‘ಕಾಲ’ ಕಾದು ನಿಂಗೋ? ಕಾಯದ್ದ ಕಾರಣವೇ ಅದರ ‘ಕಾಲ’ ಹೇಳುದಲ್ಲದೋ?
ಒರಿಶಕ್ಕೆ ಒಂದರ ಹಾಂಗೆ ಪ್ರಾಯ ಏರಿಗೊಂಡೇ ಹೋವುತ್ತು; ನಲುವತ್ತು ಕಳುದ ಒಪ್ಪಣ್ಣಂದ್ರಿಂಗೂ, ಮೂವತ್ತು ಕಳುದ ಒಪ್ಪಕ್ಕಂದ್ರಿಂಗುದೇ – ಒಂದೇ ನಮುನೆ.
ಎಂದೆಂದಿಂಗೂ ಏರಿಗೊಂಡೇ ಹೋವುತ್ತ ಸಂಗತಿಯೇ ’ಒರಿಶ’. ಅದು ಇಳಿಯಲೇ ಇಲ್ಲೆ.
~

ಮರ್ತ್ಯಲೋಕಲ್ಲಿ ಯೇವದೇ ಜೀವನದ ಮೂಲಭೂತ ಉದ್ದೇಶ ಎಂತ್ಸರ? ಸಂತಾನ ಸೃಷ್ಟಿ.
ಬಾಕಿರ್ತದೆಲ್ಲ ಮತ್ತೆಯೇ. ಅಪ್ಪೋಲ್ಲದೋ?
ಪ್ರೌಢಾವಸ್ಥೆಲಿ ವಿವಾಹ ಸಂಸ್ಕಾರ ಪಡದು, ನಮ್ಮಂದಾಗಿ ಮುಂದಾಣ ವಂಶವ ಸೃಷ್ಟಿಮಾಡಿ, ಅದರ ಬೆಳವಣಿಗೆಯ ಧೃಡೀಕರಿಸಿ, ನವಗೆ ಸಿಕ್ಕಿದ ಸಂಸ್ಕಾರವ ಧಾರೆ ಎರದು ಮೋಕ್ಷಕ್ಕೆ ಹೋವುತ್ಸು.
ಎರಡು ವಂಶವೃಕ್ಷಂಗಳ ಔನ್ನತ್ಯವ ಸೇರುಸಿ, ಹೊಸತ್ತೊಂದು ಗೆಲ್ಲು ಸೃಷ್ಟಿಮಾಡಿಕ್ಕಿ, ಆ ಗೆಲ್ಲಿಂಗೆ ಎರಡೂ ಬುಡದ ಶ್ರೇಷ್ಠ ಗುಣಂಗೊ ತುಂಬುಸುದು.
ಆ ಮೂಲಕ ಅದು ನಿತ್ಯನಿರಂತರವಾಗಿ ಇರೆಕಪ್ಪದರ ನೋಡಿಗೊಳ್ತದು.
ಯೇವ ವಂಶವೃಕ್ಷಂದ ನಮ್ಮ ಅವತರಣ ಆಯಿದೋ, ಆ ವೃಕ್ಷ ಎಂದಿಂಗೂ ಚಿರನೂತನ ಇಪ್ಪ ನಮುನೆ ಮುಂದರುಸುತ್ತದು.
ಯೇವಯೇವ ಕಾಲಲ್ಲಿ ಆಯಾ ಸಂಸ್ಕಾರಂಗೊ ಆಯೇಕೋ – ಅದೇ ಕಾಲಲ್ಲಿ ಆಯೆಕ್ಕಪ್ಪದು – ಹೇಳಿ ಚೆನ್ನೈಬಾವ° ‘ಸಂಸ್ಕಾರಂಗೊ’ಶುದ್ದಿ ಹೇಳುವಗ ಹೇಳಿತ್ತಿದ್ದವು.

ಪ್ರತಿಯೊಂದು ಉದ್ದೇಶಕ್ಕೂ ಒಂದೊಂದು ಕಾಲಘಟ್ಟ ಇದ್ದು; ಅಂಬಗಳೇ ಆಯೇಕಪ್ಪದು ಅದೇ ಸಮೆಯಲ್ಲಿ ಆಯೇಕು.
ಅದೇ ಕಾಲಲ್ಲಿ ಆಗದ್ದರೆ? ಮತ್ತೆ ‘ಕಾಲ’ನ ಮಹಾ ಪ್ರವಾಹಲ್ಲಿ ಬೆಳ್ಳಕ್ಕೆ ಹೋವುತ್ತು!
ಆರನ್ನೇ ಆದರೂ ಕಾಯ್ತಿಲ್ಲೆ, ಯೇವಗಳೇ ಆದರೂ ಕಾಯ್ತಿಲ್ಲೆ.
ನವಗೇ ಹೇಳಿ ರಜ ಸಮೆಯ ಕೊಟ್ಟು, ಅಂಬಗ ಆ ಕರ್ತವ್ಯ ನಮ್ಮಂದ ನೆರವೇರದ್ದರೆ ಮತ್ತೆ ಹೊಳಗೆ ಬೆಳ್ಳಕ್ಕೆ ಹಾಕಿದ ಗುಣವೇ!
ಹಾಂಗೆಯೇ ಈ ಮೂಲಭೂತ ಉದ್ದೇಶಕ್ಕೂ ಒಂದು ಕಾಲ(ವಯೋ)ಮಿತಿ ಇದ್ದು. ಅಂಬಗಳೇ ಆಯೇಕಾದ ಕರ್ತವ್ಯ ಆಯೇಕು.
ಅದಿರಳಿ.
~

ಮದುವೆ ಪ್ರಾಯಕ್ಕೆ ಬಂದ ಈ ಕೆಲವು ಒಪ್ಪಣ್ಣಂದ್ರಿಂಗೆ ಮದುವೆ ಆಯಿದಿಲ್ಲೆ. ಎಂತ್ಸಕೇ?
ಎಂತ್ಸಕೆ ಹೇಳಿ ನಿಜವಾದ ಕಾರಣ ಇಲ್ಲದ್ದರೂ, ಕೀಳರಿಮೆ ಭಾವನೆ ಉಂಟಪ್ಪ ಕೆಲವು ಕಾರಣಂಗೊ ಇದ್ದು.

  • ಅವಕ್ಕೆ ವಿದ್ಯಾಭ್ಯಾಸ (ಈಗಾಣ ಕಾಲಕ್ಕೆ ಹೋಲುಸಿರೆ) ತುಂಬ ಇಲ್ಲೆ. ( ವಿದ್ಯೆ ಇಲ್ಲದ್ದರೂ ವಿನಯ ಸಂಸ್ಕಾರಂಗೊ ಇರ್ತು!)
  • ಅವಕ್ಕೆ ಕೆಲಸ ಇಲ್ಲೆ; ಸಂಬಳ ಬತ್ತಿಲ್ಲೆ,  ಮನೆಲೇ ಇಪ್ಪದು. (ಮನೆಲಿ ಧಾರಾಳ ಅನುಕೂಲ, ನೆಮ್ಮದಿ ಇಪ್ಪದಕ್ಕೆ ಹೊರತಾಗಿ)
  • ಅವು ಪೇಟೆ ಜೀವನಕ್ರಮಲ್ಲಿ ಇಲ್ಲೆ, ಬದಲಾಗಿ ಹಳ್ಳಿಲೇ ಇದ್ದವು.
  • ಅವಕ್ಕೆ ಅಪ್ಪಮ್ಮಂದ್ರು ಇದ್ದವು; ಅದೂ ಒಟ್ಟಿಂಗೇ ಇದ್ದವು.
  • ಹಳ್ಳಿ ಮನೆ ಬಿಡ್ಳೆ ತಯಾರಿಲ್ಲೆ

– ಇದೆಲ್ಲ ಒಪ್ಪಣ್ಣಂಗೆ ಊರೊಳ ಕೇಳಿದ ಕಾರಣಂಗೊ.
~
ಹಾಂಗೆಯೇ – ಮದುವೆ ಪ್ರಾಯಕ್ಕೆ ಬಂದ ಕೆಲವು ಒಪ್ಪಕ್ಕಂದ್ರಿಂಗೆ ಮದುವೆ ಆಯಿದಿಲ್ಲೆ. ಎಂತ್ಸಕೇ?
ಎಂತ್ಸಕೆ ಹೇಳಿತ್ತುಕಂಡ್ರೆ – ಕೆಲವು ತೀರಾ ಸಣ್ಣ ಕಾರಣಂಗಳಿಂದಾಗಿ.

  • ಮದುವೆ ಆವುತ್ತ ಮಾಣಿಗೆ ತನ್ನಂದ ಜಾಸ್ತಿ ಸಂಬಳದ ಕೆಲಸ ಇರೇಕು.
  • ಮಾಣಿ ಪೇಟೆಲಿ ಇರೇಕು (ಸುರುವಿಂಗೆ ಅಮೇರಿಕ, ಮತ್ತೆ ಬೆಂಗುಳೂರು, ಮತ್ತೆ ಮಂಗುಳೂರು, ಮತ್ತೆ ಪುತ್ತೂರು / ಕಾಸ್ರೋಡು – ಹೀಂಗೆ ಒರಿಶ ಹೋದಾಂಗೆ ದೂರ ಕಮ್ಮಿ ಕಮ್ಮಿ ಆಗಿಂಡು ಬತ್ತು)
  • ಮಾಣಿಗೆ ಅಪ್ಪಮ್ಮಂದ್ರು ಇಪ್ಪಲಾಗ, ಇದ್ದರೂ ಒಟ್ಟಿಂಗೆ ಇಪ್ಪಲಾಗ. (ಹೀಂಗೆ ಹೇಳ್ತ ಕೂಸಿಂಗೆ ತನ್ನ ಅಪ್ಪಮ್ಮನ ಬಗ್ಗೆ ಅಪಾರ ಪ್ರೀತಿ ಇರ್ತು!)
  • ಮಾಣಿಗೆ ತಂಗೆ ಯಾ ತಮ್ಮ ಯಾ ಸೋದರತ್ತೆ ಯಾ ಕುಟುಂಬದ ಬೇರೆ ಪಾಲುಗಾರಂಗೊ ಒಟ್ಟಿಂಗೇ ಇದ್ದವು!
  • ಮಾಣಿ ಹಳ್ಳಿಮನೆಲಿ ಇಪ್ಪದು!

ಇದೆಲ್ಲ ಸಣ್ಣ ನಮುನೆ ಕಾರಣಂಗೊ ನಮ್ಮೊಳದಿಕೆ ಕಾಣ್ತದು.
~

ಈ ಷರತ್ತುಗೊ ಹಾಕುದು ಕೇವಲ ವಧೂವರಂಗೊ ಮಾಂತ್ರ ಅಲ್ಲ, ಪರೋಕ್ಷವಾಗಿ ಅವರ ಹೆರಿಯೋರುದೇ ಕಾರಣರಾಗಿರ್ತವು.
’ಆನು ಬಂದಷ್ಟು ಬಂಙ ನೀನು ಬಪ್ಪಲಾಗ ಮಗಳೇ’ – ಹೇಳಿ ರೂಪತ್ತೆ ದಿನಾಗುಳೂ ಹೇಳಿಂಡಿತ್ತು ಮಗಳ ಮದುವೆಂದ ಮದಲು!
ಹೀಂಗೆಲ್ಲ ಅಸಂಬದ್ಧ ಕಾರಣಂಗೊ ಹೇಳುವ ಮೊದಲು ಆ ಕೂಸಿನ ಅಮ್ಮನೂ ಬಾಲ್ಯಲ್ಲಿ ರಾಜಿ ಮಾಡಿದ್ದರ ನೆಂಪುಮಾಡಿರೆ, ಎಷ್ಟೋ ಮಾಣಿಯಂಗೊಕ್ಕೆ ನೆಮ್ಮದಿಲಿ ಮದುವೆ ಆವುತಿತು.

~

ಈಗ ಪ್ರಶ್ನೆ ಎಂತರ ಹೇಳಿರೆ, ಈ ಷರತ್ತು, ಪ್ರಶ್ನೆಂದಾಗಿ ತೊಂದರೆ ಅಪ್ಪದೆಲ್ಲಿ?
ಅದು ನವಗಲ್ಲ, ನಮ್ಮಂದಾಗಿ ಮುಂದರಿಯೇಕಾದ ತಲೆಮಾರಿಂಗೆ!
ಅಂಬಗ, ತಲೆಮಾರು ಬೆಳೇಕಾರೆ ಎಂತ್ಸರ ಮಾಡೇಕು?
ಮೇಗೆ ಹೇಳಿದ ಷರತ್ತುಗಳ ಹೊರತಾಗಿ, ನೆಮ್ಮದಿಲಿ ಜೀವನ ಕಟ್ಳೆ ಎಡಿಗು – ಹೇಳ್ತರ ಮನಗಾಣೇಕು. ಆ ವಿಶಯಲ್ಲಿ ಒಪ್ಪಣ್ಣ-ಒಪ್ಪಕ್ಕಂದ್ರು ಇಬ್ರುದೇ ರಾಜಿ ಮಾಡಿಗೊಳೆಕ್ಕು.
ಇಬ್ರಲ್ಲಿ ಇಬ್ರುದೇ ರಾಜಿ ಮಾಡಿಗೊಳದ್ದರೆ ಎಂತಕ್ಕು?
– ಮಾಣಿಯಂಗೊ ‘ಇನ್ನು ಕಾವಲಿಲ್ಲೆ’ ಹೇಳಿಗೊಂಡು ಅನಾಥಾಶ್ರಮಂದಲೋ, ಊರಿಲೇ ಇತರೇ ವರ್ಗಂದಲೋ ಮಣ್ಣ ಕೂಸಿನ ತಂದು ಸಂಸಾರ ಮುಂದರುಸಲೆ ನೋಡ್ತವು.
– ಕೂಸುಗೊ ಅವರವರ ಪರಿಧಿಲಿ ಸಿಕ್ಕುತ್ತ ಯೋಗ್ಯ ಮನುಶ್ಶರ ಹುಡ್ಕಿಂಡು ಮದುವೆ ಆಗಿ ಬೇರೇವದೋ ಪಂಗಡಕ್ಕೆ ಹೋವುತ್ತವು.
ಎರಡೂ ಅಲ್ಲದ್ದರೆ, ಗೃಹಸ್ಥ ಜೀವನದೊಳ ಬ್ರಹ್ಮಚರ್ಯವನ್ನೇ ಹಿಡುದು ಜೀವನ ಸಾಗುಸುತ್ತವು.
ಅಂತೂ, ಒಟ್ಟಿಲಿ ವಂಶವೃಕ್ಷದ ಆ ಗೆಲ್ಲಿನ ಔನ್ನತ್ಯ ಬಾಡಿ, ಬರಡಾಗಿ ಅಲ್ಲಿಗೇ ನಂದುತ್ತು.

~

ಸಂಬಳ, ಪೇಟೆ, ಹಳ್ಳಿ, ಅನುಕೂಲತೆ, ಪೈಶೆ, ಪ್ರತಿಷ್ಠೆ, ಅಂತಸ್ತು – ಇತ್ಯಾದಿಗಳ ಎಲ್ಲ ಒಂದು ಸರ್ತಿ ಮರದು, ಶುದ್ಧತಲೆಮಾರು ಒಳಿಯೇಕಾದ ಏಕಮನಸ್ಸಿಂದ ಯೋಚನೆಮಾಡಿ ನೋಡಿಗೊಂಬೊ°!
ಸೃಷ್ಟಿನಿಯಮ ನವಗೇ ಹೇಳಿ ಕೊಟ್ಟ ಕಾಲಲ್ಲಿ ಆಯಾ ಕರ್ತವ್ಯವ ಮಾಡುವ ಇಚ್ಛೆಂದ ಇದೆಲ್ಲವನ್ನೂ ಬಿಟ್ಟು ’ರಾಜಿ’ಮಾಡಿಗೊಂಬೊ. ಎಂತ ಹೇಳ್ತಿ?
ಹೊಕ್ಕುಳುಬಳ್ಳಿಯನ್ನೇ ಹಿಡುದು ಎಳದರೂ – ಹಳ್ಳಿಮನಗೆ ಬಾರದ್ದ ಒಪ್ಪಕ್ಕಂದ್ರು ಇದ್ದರೆ ಅವಕ್ಕೆ ಎಚ್ಚರಿಗೆ ಮಾಡುಸುವೊ°.
ಆಧುನಿಕತೆಯ ಅಯಸ್ಕಾಂತವೇ ಹಿಡುದರೂ ಹಂದದ್ದ ಒಪ್ಪಣ್ಣಂದ್ರು ಇದ್ದರೆ ಅವರನ್ನೂ ಚಿಂತನೆಗೆ ಹಚ್ಚುವೊ°.

~

ಮೇಗೆ ಇದ್ದೊಂಡು ನಮ್ಮ ನೋಡ್ತ ಪಿತೃಗೊಕ್ಕೆ ಆಹಾರ ಕೊಡೆಕಾರೆ ನಮ್ಮ ವಂಶ ಮುಂದರಿಯೇಕು.
ಆ ಕಾರಣಕ್ಕಾಗಿಯಾದರೂ ತಲೆಮಾರು ಬೆಳೇಕಾದ ಅನಿವಾರ್ಯತೆ ಇದ್ದು.
ಪಿತೃಪಕ್ಷದ ಸುಮುಹೂರ್ತಲ್ಲಿ ಇದರ ಬಗ್ಗೆ ಯೋಚನೆಮಾಡುವೊ°.
ಒಪ್ಪಣ್ಣ ಒಪ್ಪಕ್ಕಂದ್ರು ಇದರ ಓದಿ, ಅವರವರ ನೆರೆಕರೆ ಸುಧಾರಣೆ ತಪ್ಪಲೆ ಹೆರಟ್ರೆ, ಬೈಲು ಸಾರ್ಥಕ ಆತು.
ಅಲ್ಲದೋ?

ಒಂದೊಪ್ಪ: ಕಾಲ° ಕೊಟ್ಟ ಅವಕಾಶಲ್ಲಿ ನಾವು ರಾಜಿಮಾಡದ್ದರೆ ಮತ್ತೆ ಕಾಲ ರಾಜಿಮಾಡಿಗೊಳ್ತಿಲ್ಲೆ! ನೆಂಪಿರಳಿ.

ಸೂ:

  • ಇದು ಆರನ್ನೂ ಬೇನೆ ಮಾಡ್ಳೆ ಹೇಳಿದ ಶುದ್ದಿ ಅಲ್ಲ; ಬದಲಾಗಿ ನಮ್ಮ ನೆರೆಕರೆಯೋರಿಂಗೆ ಅಂದಾಜಿ ಆಯೇಕು ಹೇಳಿಗೊಂಡು ಬರದ್ಸು.
  • ಕೇವಲ `ತಲೆಮಾರು ಬೆಳೆಶುವ’ ಉದ್ದೇಶ ಮಾಂತ್ರ ಇದ್ದರೆ `ಶುದ್ಧ ದಾಂಪತ್ಯ’ ಆಗಿರ. ಅದರ ಬಗ್ಗೆ ಇನ್ನೊಂದರಿ ಶುದ್ದಿ ಮಾತಾಡುವೊ. ಆಗದೋ?
  • ಪಟ: ಇಂಟರ್ನೆಟ್ಟಿಂದ

~*~*~

20 thoughts on “ವಂಶವೃಕ್ಷ ಬೆಳೇಕಾರೆ ರಾಜಿಮಾಡಿಗೊಳೇಕು..!

  1. ನಮಸ್ಕಾರ,
    ಇಂಗ್ಲೀಷಿಲಿ “Elephant in the room” ಹೇಳಿ ಒಂದು ಮಾತು ಇದ್ದು. ಎಂತಾರು ದೊಡ್ಡ ವಿಷಯದ ಬಗ್ಗೆ ಆರುದೇ ಮಾತಾಡ್ಲೆ ತಯಾರಿಲ್ಲದ್ರೆ ಹಾಂಗೆ ಹೇಳುದು.ಈ ವಿಷಯವುದೇ ಹಾಂಗೆ. ಆ ವಿಷಯದ ಬಗ್ಗೆ ಬೆಳಕು ಚೆಲ್ಲುವಂತಹ ಲೇಖನ. ಎನ್ನ ಪ್ರಕಾರ ನಮ್ಮ ಸಮಾಜ ಎದುರುಸುತ್ತಾ ಇಪ್ಪಂತಹ ಅತ್ಯಂತ ದೊಡ್ಡ ಸಮಸ್ಯೆ ಇದುವೇ. ಸಾಮಾಜಿಕ ಸ್ತರಲ್ಲಿ ಇದರ ಎರಡು side effect ಗೊ.
    1. ಒಪ್ಪಣ್ಣ ಹೇಳಿದ ಹಾಂಗೆ ವಂಶವೃಕ್ಷ ಬೆಳವಲೆ ಇಲ್ಲೆ.ನಮ್ಮ ಸಮಾಜದ ಅವನತಿಯ ಹೊಡೆಂಗೆ ತೆಕ್ಕೊಂಡು ಹೋವುತ್ತು ಇದು.
    2. ಹಳ್ಳಿಗಳಲ್ಲಿ ನಮ್ಮವರ ಸಂಖ್ಯೆ ಕಮ್ಮಿ ಆಗಿಯೊಂಡು ಹೋಪದು. ಈಗಳೇ ನಿಂಗ ನೋಡಿರೆ ತುಂಬ ಹಳ್ಳಿಗೊ ವೃದ್ಧಾಶ್ರಮ ಆಗಿಯೊಂಡು ಇದ್ದು. ನಮ್ಮ ಸಂಸ್ಕೃತಿ, ಕ್ರಮಂಗೊ ಒಳಿವದು/ಬೆಳವದು ಹಳ್ಳಿಯವರಿಂದ ಆಗಿಯೇ ಹೊರತು ಪೇಟೆಗಳಲ್ಲಿ ಇದು ಕಷ್ಟ (ಇದಕ್ಕೆ ಕಾರಣಂಗೊ ಸುಮಾರು ಇದ್ದು).

    ನಮ್ಮ ಸಮಾಜಲ್ಲಿ ಇಷ್ಟು ಸಮಸ್ಯೆ ಇದ್ದು ಹೇಳಿ ಅಪ್ಪಗ ನಾವು ಎಂತಾರು ಪರಿಹಾರ ಹುಡುಕ್ಕೆಕ್ಕನ್ನೇ ?. ಎಂತರ ಮಾಡ್ಲೆ ಎಡಿಗು ನವಗೆ.
    ೧. ನಾವು, ನಮ್ಮ ನೆರೆಕರೆ, ನಮ್ಮ ಬಳಗಲ್ಲಿ ಹಳ್ಳಿಲಿ ಇಪ್ಪವರ ಬಗ್ಗೆ ಗೌರವ ಬೆಳಸುದು. ಎಲ್ಲೋರೂ ಪೇಟೆಲಿ ಬಂದು ಕೂಪಲೆಡಿಯ ಹೇಳುವ ಸತ್ಯ ಅರ್ಥ ಮಾಡಿಯೋಂಬದು.
    ೨ ನಮ್ಮಲ್ಲಿ ಕೂಸುಗೊ ಕಮ್ಮಿ ಹೇಳಿ ಎಲ್ಲೊರಿಂಗೂ ಗೊಂತಿದ್ದು. ಹಳ್ಳಿಲಿ ಇಪ್ಪ ನಮ್ಮವು ಕೂಸು ಸಿಕ್ಕುತ್ತಿಲ್ಲೆ ಹೇಳಿ ಬೇರೆ ಜಾತಿಯವರ ಮದುವೆ ಆದರೆ ಅದರ ಪ್ರೋತ್ಸಾಹಿಸುದು.ಸುರುವಿಂಗೆ ನವಗೆ ಕಷ್ಟ ಅಕ್ಕು. ಆ mental block ತೆಗದರೆ ಇದು ಸ್ವಾಭಾವಿಕ ಆಗಿ ಆವುತ್ತು. ಇದಲ್ಲಿ ಏನೂ ತಪ್ಪಿಲ್ಲೆ ಹೇಳಿ ನಾವು ನವಗೆ ಮನವರಿಕೆ ಮಾಡಿಯೊಳ್ಳೆಕ್ಕು. ಹಾಂಗೆ ಮದುವೆ ಆಗಿ ಬಂದವಕ್ಕೆ ನಮ್ಮ ಕ್ರಮ ಎಲ್ಲ ಕಲುಷೆಕ್ಕು ಹೇಳಿ ಅಪೇಕ್ಷೆ ಮಡಿಕ್ಕೊಂಬದು.
    ಇದು ಏನೂ ಹೊಸ ಕ್ರಮ ಅಲ್ಲ. ಹಳಬ್ಬರ ಹತ್ತರೆ ಕೇಳಿರೆ ಅವು ಹೇಳುಗು. ಮೊದಲಿಂಗೆ ಶಿವಳ್ಳಿ ಅವು ನಮ್ಮ ಊರಿಂಗೆ ಬಂದಿಪ್ಪಗ ಅವು ಬಂಟ್ರ ಕೂಸುಗಳ ಮದುವೆ ಆಗಿಯೋಂಡು ಇತ್ತಿದ್ದವಡ. ಈಗ ಯಾವ ವ್ಯತ್ತಾಸವೂ ಗೊಂತಾವುತ್ತಿಲ್ಲೆ. ಮೊದಲಿಂಗೆ ಎಲ್ಲಾ ಸಮಾಜಲ್ಲಿಯೂ ಸ್ವಾಭಾವಿಕವಾಗಿ ಇದು ಆಗಿಯೋಂಡು ಇತ್ತು. ನಾವು ಬ್ರಾಹ್ಮಣರು ಅಪ್ಪದು ನಮ್ಮ ನಡವಳಿಕೆಲಿ ಹೊರತು ಹುಟ್ಟಿಂದಾಗಿ ಅಲ್ಲನ್ನೇ ?. ಹಾಂಗೆ ನಾವು ವಸ್ತುನಿಷ್ಟವಾಗಿ ನೋಡ್ತರೆ ನಮ್ಮಲ್ಲಿ ಸುಮಾರು ಜನ (ಆನು ಸೇರಿ ) “ಬ್ರಾಹ್ಮಣ”ರು (ನಿಜವಾದ ಅರ್ಥಲ್ಲಿ ಅಲ್ಲ.

    ಇನ್ನೂ ನಿಂಗೊಗೆ ಎಲ್ಲಾ ಬೇರೆ ಏನಾರು ಆಲೋಚನೆಗೊ ಇದ್ದರೆ ಗುರಿಕ್ಕಾರರಿಂಗೆ ಹೇಳಿ. ನಾವು ಎಲ್ಲೊರು ಸೇರಿ ಈ ಸಮಸ್ಯೆಗೆ ನಮ್ಮಿಂದ ಅಪ್ಪಷ್ಟು ಪರಿಹಾರ ಹುಡುಕ್ಕುಲೆ ನೋಡುವ.

  2. ಸಮಾಜದ ಬಿಡುಸಲೆಡಿಯದ್ದ ಸಮಸ್ಯೆ ಒಂದರ ಲಾಯಕಕೆ ನಿರೂಪಣೆ ಮಾಡಿದ್ದ ಒಪ್ಪಣ್ಣ. ಸುರೂವಿಂಗೆ ಹೇಳಿದ ಸಣ್ಣ ಕಥೆಗೊ ಎಲ್ಲವುದೆ ನೈಜ ಕಥೆಗಳೇ ಅಪ್ಪು. ಈ ಸಮಸ್ಯೆ ನಿವಾರಣೆಗೆ ಮದುವೆ ಅಪ್ಪಲಿದ್ದವು ರಾಜಿ ಆಯೇಕಾದ್ದು ಮುಕ್ಯ. ಮದಲಾಣ ಕಾಲಲ್ಲಾದರೆ, ಮಾಣ್ಯಂಗೊ ಜಾತಕವನ್ನೇ ಎದುರು ಮಡಗಿ, ಕೂಸುಗಳ ಅಜಪ್ಪಿಯೊಂಡು (ಉತ್ತಮ ಆಯ್ಕೆ ಮಾಡಿಯೊಂಡು)ಇದ್ದಿದ್ದವು. ಕೆಲಾವೊಂದರಿ, ಇದರಿಂದಲಾಗಿಯೇ, ಮಾಣಿಗೆ ಪ್ರಾಯ ಆದ್ದದುದೆ ಇದ್ದು ! ಒಬ್ಬ° ಒಂದು ಕೂಸಿನ ನೋಡಿ ಬೇಡ ಹೇಳಿದನಾಡ. ಆ ಕೂಸಿಂಗೆ ಮದುವೆ ಆಗಿ, ಅದಕ್ಕೆ ಮಗಳು ಹುಟ್ಟಿ, ಆ ಮಗಳ, ಮದುವೆ ಸಂಬಂಧಕ್ಕೆ ಬೇಕಾಗಿ ಅದೇ ಮಾಣಿ (ಮಾಣಿ ಹೋಗಿ, ಮಾವ ಆಗ್ಯೊಂಡಿಪ್ಪ ಮಾಣಿ) ನೋಡ್ಳೆ ಹೋದ ಘಟನೆ ಆಗಿತ್ತಾಡ !!

    ಈಗ ಆರಾದ್ರೂ ಸರಿ, ಕೂಸುಗೊ ಸಿಕ್ಕಿರೆ ಸಾಕು ಹೇಳ್ತ ಪರಿಸ್ಥಿತಿ ಬಯಿಂದು. ಕೆಲವೊಂದರಿ, ಕೂಸುಗೊ ಸಾಕಷ್ಟು ಇದ್ದರೂ, ಮದುವೆ ಸಂಬಂಧ ಏರ್ಪಾಟು ಆವ್ತಿಲ್ಲೆ. ಸಂಬಂಧ ಪಡೆಕಾದವರ ಮನಸ್ಸು ಬದಲಾಯೆಕಾದ್ದು ಭಾರೀ ಮುಖ್ಯ.

    ಒಪ್ಪಣ್ಣ ಹೇಳಿದ ಕತಗೊ ಮನಸ್ಸಿನ ಕಲಕಿದ್ದಂತೂ ನಿಜ.

  3. ಲಾಯಿಕ ವಿಷಯ ಇಪ್ಪಂತಹ ಶುದ್ಧಿಯ ಬರದ್ದು ಲಾಯಿಕ ಆಯಿದು ಒಪ್ಪಣ್ಣ…

  4. ಈ ಲೇಖನ ಒ೦ದು ಅಗತ್ಯ ಇ೦ತನೆಗೆ ಹಚ್ಚುವ ಹಾ೦ಗಿದ್ದು.. ಒಪ್ಪಣ್ಣ ಒಳೇ ಕೆಲಸ ಮಾಡಿದ್ದೆ..

    ಕಾಲಚಕ್ರ ತಿರುಗುತ್ತಾ ಇರುತ್ತಲ್ಲ ಒಪ್ಪಣ್ಣ … ಒ೦ದಾನೊ೦ದು ಕಾಲಲ್ಲಿ ಕೂಸುಗ ಪ್ರದರ್ಷನದ ಗೊ೦ಬೆಗಳಹಾ೦ಗೆ ನಡೆಸಿಕೊ೦ಡಿತ್ತಿಲ್ಲೆಯಾ? ಈಗ ಕೂಸುಗಳು ತನಗೆ ನೆಮ್ಮದಿ ಸಿಕ್ಕುಗು ಹೇಳಿ ಭರವಸೆ ಇದ್ದರೆ ಮಾತ್ರ ಮದುವೆಗೆ ಒಪ್ಪುತ್ತವಷ್ಟೆ.. ಕೂಸುಗಳೂ ಮಾಣಿಯ೦ಗಳ ಆಯ್ಕೆ ಮಾಡುವ ಹಾ೦ಗೆ ಆಯಿದು… ಇದರಲ್ಲಿ ಕೂಸುಗಲ ತಪ್ಪು ಎ೦ತ ಇದ್ದೂ? ಎಲ್ಲಾ ಅಪ್ಪ ಅಮ್ಮ೦ದಿರು ಮಗ ಅಥವಾ ಮಗಳ ಸುಖ ನೆಮ್ಮದಿ ಬಯಸುದು ಸಹಜ ಅಲ್ಲದಾ? ಅದೂ ಒಬ್ಬ ಇಬ್ಬರು ಮಕ್ಕ ಇಪ್ಪದು ತಾನೆ?

  5. ಈ ವಿಷಯದ ಬಗ್ಗೆ ಎಲ್ಲಿಯೇ ಮಾತು/ಚರ್ಚೆ ಶುರು ಆದರೂ ಕೂಡ ಸರಿಯಾದ ರೀತಿಲಿ ಆ ವಿಮರ್ಶೆ ನಡೆತ್ತಿಲ್ಲೆ. ಕೂಸಿನ, ಮಾಣಿಯ, ಅಬ್ಬೆ ಅಪ್ಪನ ದೂರುದರಲ್ಲಿಯೇ ಉಳಿತ್ತು. ಹವ್ಯಕ ಸಮಾಜದ ಜ್ವಲಂತ ಸಮಸ್ಯೆ ಹೇಳಿ ಹೇಳುಲಕ್ಕಾದ ಈ ಸಮಸ್ಯೆಯ ಬಗ್ಗೆ ಒಪ್ಪಣ್ಣ ಲೇಖನ ತುಂಬಾ ಸೂಕ್ತ ಸಮಯಲ್ಲಿ ಬೈಂದು, ಅಲ್ಲದ್ದೆ ಸೂಕ್ತವಾದ ರೀತಿಲಿ ಬೈಂದು. ಬೈಲಿನೋರು..ನೆರೆಕರೆಯೋರು ಇದರ ಬಗ್ಗೆ ಗಮನ ಕೊಡ್ತ ಹಾಂಗೆ, ಆಲೋಚನೆ ಮಾಡ್ತ ಹಾಂಗೆ ಮಾಡಿದ ಒಪ್ಪಣ್ಣಂಗೆ ಧನ್ಯವಾದ. ಇಷ್ಟನ್ನಾರ ಬಂದ ಎಲ್ಲ ಲೇಖನಂದಲೂ ಈ ಶುದ್ದಿ ಹೆಚ್ಚು ಮನಸ್ಸಿಂಗೆ ತಟ್ಟಿತ್ತು.
    ಹಳ್ಳಿಲಿ ಇಪ್ಪ ಮಾಣಿ, ಪೌರೋಹಿತ್ಯ ಮಾಡುವವ್ವು, ಕಡಮ್ಮೆ ಕಲ್ತವಕ್ಕೆ ಕೂಸು ಸಿಕ್ಕದ್ದೆ ಹೋದರೆ.. ಒಟ್ಟಿಂಗೇ ಹವ್ಯಕ ಕೂಸುಗೊ ಬೇರೆ ಪಂಗಡದವರೊಟ್ಟಿಂಗೆ ಬದುಕು ಕಂಡುಗೊಂಡರೆ, ಅಥವಾ ಮದುವೆ ಆಗದ್ದೆಯೇ ಅಕೇರಿಯವರೆಗೂ ಇದ್ದರೆ… [ಒಟ್ಟಿಂಗೆ ಈಗ ಹೇಂಗೂ ಎಲ್ಲರಿಂಗೂ ಒಂದೇ ಒಂದು ಮುದ್ದಿನ ಮಗ/ಮಗಳು] ಮುಂದೊಂದು ದಿನ ಯಾವುದೋ ವಿಶ್ವವಿದ್ಯಾಲಯದ ಗ್ರಂಥಾಲಯದ [ಆರೂ ಹೋಗದ್ದ], ಕಪಾಟಿನ [ಆರೂ ತೆಗೆಯದ್ದೆ ಧೂಳು ಹಿಡುದ], ಒಳಾಣ ಒಂದು ಪುಸ್ತಕಲ್ಲಿ [ಆರೂ ಓದದ್ದ] ’ಹಲವು ವರ್ಷಗಳ ಹಿಂದೆ ಹವ್ಯಕರು ಎಂಬ ಬ್ರಾಹ್ಮಣರ ಪಂಗಡ ಉ.ಕ.,ದ.ಕ.,ಶಿವಮೊಗ್ಗ, ಕಾಸರಗೋಡಿನ ಪ್ರದೇಶಗಳಲ್ಲಿ ಇದ್ದಿತ್ತು, ಕಾಲಾಂತರದಲ್ಲಿ ಈ ಜನಸಂಖ್ಯೆ ಕಡಿಮೆಯಾಗಿ ಈಗ ಕೇವಲ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ಉಳಿದಿವೆ’ ಹೇಳಿ ಬರಕ್ಕೊಂಡೂ ಬಪ್ಪ ಸಾಧ್ಯತೆ ಇದ್ದು ಅಲ್ಲದಾ? ಇದು ಬೇಕಾ?
    ಒಪ್ಪಣ್ಣ ಹೇಳಿದ ಹಾಂಗೆ ನಾವು ರಾಜಿ ಮಾಡೀಗೊಳ್ಳದ್ರೆ ನಮ್ಮ ಅವನತಿ ಆದ ಹಾಂಗೆ ಅಲ್ಲದಾ? ಯಾವತ್ತೂ ಯಾವುದೇ ವಿಷಯಲ್ಲಿ ಹೀಂಗೆಯೇ ಅಪ್ಪದು ಅಲ್ಲದಾ? ನಾವು ರಾಜಿ ಮಾಡಿಗೊಂಬಲ್ಲಿ ತಡವಾದರೆ ಅವಘಡ ಅಪ್ಪ ಸಾಧ್ಯತೆ ಇದ್ದಲ್ಲದೋ? ನಮ್ಮ ಸಮಾಜದ ಒಪ್ಪಣ್ಣ ಒಪ್ಪಕ್ಕಂದ್ರು ಹವ್ಯಕರ ಬಿಟ್ಟು ಬೇರೆಯವರ ವರಿಸುಲೆ ಸುರು ಮಾಡಿದ್ದು ದುಃಖ ತತ್ತು. ಇದರಿಂದಾಗಿ ಅವ್ವು ನೇರವಾಗಿ ಯಾವುದೇ ತಪ್ಪು ಮಾಡದ್ರೂ ಇದರಿಂದಾಗಿ ನಿಧಾನಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿ, ಭಾಷೆ ನೀರಿಲ್ಲಿ ಹಾಕಿದ ಉಪ್ಪಿನ ಹಾಂಗೆ ಕಾಣೆ ಆಗದಾ?
    ಇದರಲ್ಲಿ ಆರುದೇ ತಪ್ಪು ತಿಳಿವ ಕಾರಣ ಇಲ್ಲೆ. ಎಲ್ಲರೂ ಸುಮ್ಮನೆ ಕೂದರೆ ನಮ್ಮ ಸಮಸ್ಯೆಗೆ ಪರಿಹಾರ ಹುಡೂಕ್ಕುದು ಆರು? ಸರಕಾರ ಅಂತೂ ನವಗೆ ಯಾವುದೇ ರೀತಿಲಿ ಸಹಾಯ ಮಾಡುದು ಕಂಡುಬತ್ತಿಲ್ಲೆ, ಅಲ್ಲದ್ದೆ ಇದು ಆಂತರಿಕ ಸಮಸ್ಯೆ. ಹಾಂಗಾಗಿ ನಾವೇ ಪರಿಹರಿಸಿಗೊಳ್ಳೆಕು.
    ಲೇಖ್ಹನ ಬರದು ಒಂದು ಕೆಲಸಕ್ಕೆ ಶುರು ಮಾಡಿದ್ದ ನಮ್ಮ ಒಪ್ಪಣ್ಣ…ನಾವೆಲ್ಲರೂ ನಮ್ಮ ಕೈಲಿ ಆದ ಹಾಂಗೆ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಮತ್ತೆ ಅದರಿಂದ ನಾಲ್ಕು ಜೆನಕ್ಕೆ ಉಪಕಾರ ಅಪ್ಪ ಕೆಲಸ ಮಾಡೆಕ್ಕು. ತಪ್ಪು ತಿಳುವಳಿಕೆಲಿ ಇಪ್ಪೋರಿಂಗೆ ಸರಿದಾರಿ ತೋರ್ಸೆಕು ಅಲ್ಲದಾ?
    ಮು.ಸೂ.: ಇಲ್ಲಿ ಆನು ಬರದ್ದು ಯಾವುದೇ ಬೇರೆ ಪಂಗಡಂಗಳ ಮೇಲೆ ದ್ವೇಷಂದಾಗಿ ಅಲ್ಲ. ನಮ್ಮೋರು ಸಂಪೂರ್ಣ ನಮ್ಮೋರಾಗಿಯೇ ಉಳಿಯಲಿ ಹೇಳ್ತ ಭಾವಂದ.

  6. ಸಮಾಜದ ಒಳ ತುಂಬ ವಿಮರ್ಶೆಗೆ ಎಡೆ ಮಾಡಿ ಕೊಡ್ತಾ ಇಪ್ಪ ಬರವಣಿಗೆ.
    ಕೆಲಾವು ಸಂಗತಿಗಳ ಹೇಳುಲೂ ಬೇಜಾರು ಆವ್ತು.
    ಜಸ್ಟಿಸ್ ವಿ.ಆರ್. ಕೃಷ್ಣ ಅಯ್ಯರ್ ಸಮಿತಿ ಕೇರಳ ಸರಕಾರಕ್ಕೆ ಒಂದು ವರದಿ ಸಲ್ಲುಸಿದ್ದು.
    ಅದರಲ್ಲಿ ಎರಡರಿಂದ ಹೆಚ್ಚು ಮಕ್ಕೊ ಆದರೆ, ಶಿಕ್ಷಾರ್ಹ ಕ್ರಿಮಿನಲ್ ಅಪರಾಧ ಹೇಳ್ತು.
    ಎಲ್ಲ ಕ್ರಿಶ್ಚಿಯನ್, ಮುಸ್ಲಿಂ ಸಂಘಟನೆಗೊ ಈ ಆಯೋಗದ ವರದಿಯ ವಿರುದ್ಧ ಹೋರಾಟ ಸುರು ಮಾಡಿದ್ದವು.
    ನಾವು…?

  7. ವಿವಾದಾತ್ಮಕ ವಿಶ್ಯ ಬರವಲೆ ಧೈರ್ಯ ಮಾಡಿದ್ದಕ್ಕೆ ಒಪ್ಪಣ್ಣಂಗೆ ಅಭಿನಂದನೆ. ಚಕ್ರದ ಮುಳ್ಳು ಮೇಲೆ ಏರಿದ್ದು ಕೆಳ ಇಳಿಯಲೇ ಬೇಕು. ಎಲ್ಲವೂ ಸರಿ ಆವುತ್ತು. ಹಿಂದಾಣ ತಲೆಮಾರಿಲಿ ಹೆಣ್ಣುಮಕ್ಕಳ ’ನಿನಗಿದೆಲ್ಲ ಅರಡಿಯ, ಇದೆಲ್ಲ ಮಾಣಿಯಂಗಳ ಕೆಲಸ’ ಹೇಳಿಯೋ ಅತ್ವಾ ಮಾಣಿಗೆ ಸರ್ವ ಸವಲತ್ತು ಕೊಡ್ಸಿ ಕೂಸಿಗೆ ’ಅದು ಹೇಂಗೂ ಕೊಡ್ಲಿಪ್ಪದು’ ಹೇಳ್ತ ಮನೋಭಾವಂದ ಕಮ್ಮಿ ಸವಲತ್ತು ಕೊಡ್ಸಿದ ಅಬ್ಬೆ ಅಪ್ಪ – ಅದರ ಪರಿಣಾಮ ಈಗ ಒತ್ತಿ ಮಡಿಗಿದ ಸ್ಪ್ರಿಂಗ್ ಬಿಟ್ಟಪ್ಪಗ ಜಿಗಿದ ಹಾಂಗೆ ಆಯಿದೋ ಹೇಳಿ ಎನ್ನ ಅಭಿಪ್ರಾಯ ಇದ್ದು. ಬೈಲಿನ ಕೂಸುಗೊಕ್ಕೆ ಬೇಜಾರಪ್ಪಲಾಗ ಹೇಳಿ ಈ ಅಭಿಪ್ರಾಯ ಮಂಡಿಸಿದೆ ಹೇಳಿ ತಿಳ್ಕೊಂಡರೂ ಬೇಜಾರಿಲ್ಲೆ. 🙂 ಏನೇ ಇರಲಿ, ’ಮುಂದುವರೆದ’ವಕ್ಕೂ ಒಂದು ಸಮಯಕ್ಕೆ ಎಂಗೊ ಸಿಕ್ಕಾಪಟ್ಟೆ ಮುಂದೆ ಬಯಿಂದೆಯೋ ಹೇಳಿ ಅರಿವಾಗದ್ದೆ ಇರ. ಆ ಕಾಲ ಬೇಗನೇ ಬರಳಿ.

  8. ಇಂದ್ರಾಣ ಪರಿಸ್ತಿತಿಯ ಸರಿಯಾಗಿಯೆ ಬರದ್ದಿ.
    ನಾಳೆ, ಇಂದು ಪೇಟೆ ಸೇರಿದ ಹವ್ಯ್ಕರ ಮಕ್ಕೊ ಓದಿಲಿ ಮುಂದೆ ಇಕ್ಕು, ವ್ಯಾವಹಾರಿಕವಾಗಿ ಸಮರ್ಥರಿಕ್ಕು ಹೇಳುವ assumption
    ಮಾಡಿಗೊಂಡು ಪಾರಂಪರಿಕವಾದ ನಮ್ಮ ಜೇವನಕ್ರಮವ ತಮಾಶೆಮಾಡಿಗೊಂಡು ಹಣ (ಒಣ) ಪ್ರತಿಶ್ಟೆ ತೋರುಸಿಗೊಂಡು ನಗರಜೀವನವೇ ಚೆಂದಹೇಳುವ ತೀರ್ಮಾನಮಾಡುವ ಅಪಾಯಕಾರಿಸ್ಟಿತಿ.

  9. ನಮ್ಮ ಸಮಾಜದ ನೈಜ ಚಿತ್ರಣವ ಮಾರ್ಮಿಕವಾಗಿ ಕೊಟ್ಟಿದಿ..ಇನ್ನಾದರೂ ಹಾಂಗಿಪ್ಪ ಹೆತ್ತವರ,ಮಗಳಕ್ಕಳ ಕಣ್ಣು ತೆರೆಯಲಿ….ದೇವರು ಒಪ್ಪ ಬುದ್ದಿಕೊಡಲಿ ಹೇಳಿ ಪ್ರಾರ್ಥಿಸಿಯೊಂಬ…../
    ಇನ್ನೊಂದು ವಿಶಯ ಹಾಂಗೆ ಮದುವೆ ಆದ ಮೇಲೂ ಹೊಂದಣಿಕೆ,ಸ್ವಾರ್ಥದ ರಜಾತ್ಯಾಗವೂ ಅತಿ ಅಗತ್ಯ..

  10. ಇದನ್ನು ಓದಕಾದ್ರೆ ನನ್ನ ಸಹಪಾಟಿಗಳ ನೆನಪಾಗ್ತು. ೪೦ಕ್ಕೂ ಮೀರಿದ ಪ್ರಾಯ ಈಗ, ಎಲ್ಲಾ ಕೈತಪ್ಪಿ ಹೋತು ಅವಕ್ಕೆ. ಆದರೂ ಖುಷೀಲಿ ಜೀವನ ಮಾಡ್ತಾ ಇದ್ದೊ. ಯಾರನ್ನು ದೂರಲೆ ಇಲ್ಲೆ, ಆದ್ರೆ….!

  11. ಸಕಾಲಿಕ ಲೇಖನ ಒಪ್ಪಣ್ಣ. ಚೆಂದಕೆ ಬರದ್ದೆ. ಇದರ ಬಗ್ಗೆ ಪ್ರತಿಯೊಬ್ಬನೂ ಚಿಂತಿಸೆಕ್ಕು.

  12. ಒಪ್ಪಣ್ಣೋ !
    ಸಮಸ್ಯೆಯ ಸಮಾ ಪರಿಶೀಲಿಸಿ ಸಮತೋಲನ ಕಳಕ್ಕೊಳ್ಳದ್ದೆ ಸಮತೂಗಿಸಿ ಹೇಳಿದ ಶುದ್ದಿ ಸಂಶೋಧನಾ ಲೇಖನದ ಹಾಂಗಿದ್ದು…. ಒಪ್ಪ ವು ಲಯಿಕ ಇದ್ದು ಲೆಖನ ದ ಹಾನ್ಗೆ

  13. ಒಪ್ಪಣ್ಣೋ !
    ಸಮಸ್ಯೆಯ ಸಮಾ ಪರಿಶೀಲಿಸಿ ಸಮತೋಲನ ಕಳಕ್ಕೊಳ್ಳದ್ದೆ ಸಮತೂಗಿಸಿ ಹೇಳಿದ ಶುದ್ದಿ ಸಂಶೋಧನಾ ಲೇಖನದ ಹಾಂಗಿದ್ದು.

  14. ಎಲ್ಲರೂ ಗಂಭೀರವಾಗಿ ಚಿಂತನೆ ಮಾಡಿ ಕಾರ್ಯರೂಪಕ್ಕೆ ಇಳಿಯೆಕ್ಕಾದ ವಿಶಯ.
    ಹವ್ಯಕ ಮಾಣಿಯಂಗೊಕ್ಕೆ, ಅದರಲ್ಲೂ ಮುಖ್ಯವಾಗಿ ಸ್ವಂತ ಕೃಷಿ, ಉದ್ಯೋಗ, ಪೌರೋಹಿತ್ಯ,ಆಡಿಗೆಗೆ ಹೋಪವು ಹೀಂಗಿಪ್ಪವಕ್ಕೆ ಹವ್ಯಕ ಕೂಸು ಸಿಕ್ಕುವದು ಹೇಳಿರೆ ಕನಸಿನ ಮಾತೇ ಆಯಿದು. ಹಾಂಗಾಗಿ ಇಂದು ಎಷ್ಟೋ ಮದುವೆ ಅನ್ಯ ಜಾತಿಯ ಕೂಸುಗಳೊಟ್ಟಿಂಗೆ ನೆಡೆತ್ತಾ ಇದ್ದು.
    ಇನ್ನೊಂದು ವಿಶಾದದ ಸಂಗತಿ, ಒಪ್ಪಣ್ಣ ಹೇಳಿದ ಹಾಂಗೆ, ವಿವಾಹ ವೇದಿಕೆಲಿ ನೋಂದಾಯಿಸಿದ ಕೂಸುಗಳಲ್ಲಿ, ೩೦ಕ್ಕಿಂತ ಮೇಲ್ಪಟ್ಟವು ಅಲ್ಲಿಯೇ ಬಾಕಿ ಆಯಿದವು.
    ಸಣ್ಣ ಪ್ರಾಯಲ್ಲಿಯೇ ಕೈ ತುಂಬ ಸಂಬಳ ಸಿಕ್ಕಿ ಪೇಟೆಲಿ ನಿಂಬ ಮಾಣಿಯಂಗೊ ಆದಷ್ಟು ಬೇಗ ಮದುವೆ ಆವ್ತವು, ಸಣ್ಣ ಪ್ರಾಯದ ಕೂಸುಗೊಕ್ಕೆ ಮನೆ ಒದಗಿ ಬತ್ತು.
    ಕೂಸು ಮಾಣಿಯಂಗಳಲ್ಲಿ ಇಪ್ಪ ಅನಪಾತ ಒಂದು ಕಾರಣ ಆದರೆ, ಪೇಟೆ ಜೀವನವೇ ಶ್ರೇಷ್ಠ ಹೇಳಿ ತಿಳ್ಕೊಂಬ ಕೂಸುಗಳೂ, ಅವರ ಹಿರಿಯರೂ ಪರೋಕ್ಷ ಕಾರಣಕರ್ತರೇ.
    ಒಟ್ಟಾರೆ ನೋಡ್ಲೆ ಹೋದರೆ ಬರೇ ಸಮಸ್ಯೆಗಳ ಗೋಜಲು ದೃಷ್ಯ.
    ಬೆಕ್ಕಿನ ಕೊರಳಿಂಗೆ ಗಂಟೆ ಕಟ್ಟುವದು ಆರು?

  15. ಸಂಬಳ, ಪೇಟೆ, ಹಳ್ಳಿ, ಅನುಕೂಲತೆ, ಪೈಶೆ, ಪ್ರತಿಷ್ಠೆ, ಅಂತಸ್ತು – ಎಷ್ಟು ಚೆಂದಕೆ ಹೇಳಿದ್ದೆ ಒಪ್ಪಣ್ಣಾ…

    ಓ ಹೀಂಗೊಂದು ಮೆಸೇಜು ಬಂದಿತ್ತು ರಜ್ಜ ದಿನ ಹಿಂದೆ,
    ಮಾಣಿಯಂಗೊ ಬೇಕು ಹೇಳ್ತ advertisement: ಮಾಣಿ CA/CS/MD/NRI/(ಇನ್ನೂ ಸುಮಾರೆಲ್ಲ ಇತ್ತು ಎನಗೆ ನೆಂಪಿಲ್ಲೆ) ಏವದಾರು ಆಗಿರೆಕು..
    ಕೂಸು ಬೇಕು ಹೇಳ್ತ advertisement: ಒಂದು ಒೞೆ ಮನಸ್ಸಿನ ಕೂಸು ಬೇಕು…

    🙁

  16. ಒಪ್ಪಣ್ಣ,
    ಇದೊಂದು ಗಂಭೀರ ಸಮಸ್ಯೆ. ಊರಿಲಿ ಒಪ್ಪಣ್ಣಂದ್ರಿಂಗೆ ಮದುವೆ ಆಗದ್ದಿಪಲೆ ಕಾರಣಂಗೊ, ಹಾಂಗೆ ಒಪ್ಪಕ್ಕಂದ್ರು ಬಾಕಿ ಅಪ್ಪಲೆ ಕಾರಣಂಗೊ ಎಲ್ಲೋರಿಂಗೂ(ಊರಿಲಿ) ಕಾಂಬಂತದ್ದೆ. ಪರಿಹಾರಕ್ಕೆ ಕಾಯೆಕ್ಕಷ್ಟೆ, ಕಾಲಾಯ ತಸ್ಮೈ ನಮಃ !

  17. ಸುಲಭಲ್ಲಿ ಪರಿಹಾರ ಆಗದ್ದ ಈ ಸಮಸ್ಯೆಯ ಬಗ್ಗೆ ಸಮಾಜ ಚಿಂತಿಸೆಕ್ಕು.

  18. ಸಮಯೋಚಿತ ಲೇಖನ ಒಪ್ಪಣ್ಣ..ದನ್ಯವಾದ೦ಗೊ…

  19. ಒಪ್ಪಣ್ಣಾ.. ಒ೦ದು ಗ೦ಭೀರ ವಿಷಯ ವಾರದ ಶುದ್ದಿಯಾಗಿ ತೆಕ್ಕೊ೦ಡದು ಒಳ್ಳೇದಾತು. ಇದು ಎಷ್ಟು ಬರದರೂ ಓದಿರೂ ಚರ್ಚೆ ಮಾಡಿರೂ ಸುಲಭಲ್ಲಿ ಪರಹಾರ ಅಪ್ಪ ಬಗೆ ಅಲ್ಲದೋ ಕಾಣ್ತು. ಕೂಸುಗೊ ಕೇಳ್ತ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಗೊ೦ಡು ಬೇಕಾದ ಹಾ೦ಗಿರ್ತ ಮಾಣಿಯ೦ಗೊ ಅವಕ್ಕೆ ಸಿಕ್ಕುತ್ತ ಪರಿಸ್ಥಿತಿ ಇಪ್ಪಗ ಕೃಷಿಕ, ಪೌರೋಹಿತ್ಯದವ, ಸಣ್ಣ ಮಟ್ಟಿನ ಬಿಸಿನೆಸ್ ಮಾಡ್ತವ, ಸಣ್ಣ ಮಟ್ಟಿನ ಕೆಲಸ ಇಪ್ಪವ, ಅಡಿಗೆ, ಸುಧರಿಕೆ ಮಾಡ್ತ ಅಣ್ಣ೦ದ್ರು ಇಪರ ಎಲ್ಲ ಆರಿ೦ಗೆ ಬೇಕು?
    ಹಾ೦ಗೆ ಹೇಳಿ ಡಬ್ಬಲ್ ಡಿಗ್ರಿ ಇಲ್ಲದ್ದವ, ಲಕ್ಷಗಟ್ಳೆ ಸ೦ಪಾದನೆ ಇಲ್ಲದ್ದವ, ಮೇಲೆ ಹೇಳಿದ ವ್ಯಾಪ್ತಿಲಿ ಬತ್ತ ಒಪ್ಪಣ್ಣ೦ಗೊ ಇವಕ್ಕೆಲ್ಲ ಬಾಕಿ ಎಲ್ಲರ ಹಾ೦ಗೆ ಬದುಕ್ಕುತ್ತ, ಕುಟು೦ಬ ಜೀವನ ಮಾಡ್ತ ಹಕ್ಕು, ಅವಕಾಶ ಇಲ್ಲೆಯೊ? ಅವಕ್ಕವಕ್ಕೆ ಅವರವರ ಕಾರ್ಯಕ್ಷೇತ್ರ೦ಗಳಲ್ಲಿ ಯಶಸ್ವಿ ಅಪ್ಪಲೆ ಎಡಿಗಾದರೆ ಅದುವೇ ಅವರವರ ಜೀವನಲ್ಲಿ, ವೃತ್ತಿಲಿ ವಿಜಯ ಅಲ್ಲದೊ? ಸಮಾಜಲ್ಲಿ ಎಲ್ಲಾ ವೃತ್ತಿಯವಕ್ಕೂ ತೆಗದು ಹಾಕಲೆಡಿಯದ್ದ ಪ್ರಾಧಾನ್ಯ ಇಲ್ಲೆಯೋ? ಲೋಕಲ್ಲಿ ಯಾವುದೇ ವೃತ್ತಿಯವ ಪೂರ್ತಿಯಾಗಿ ಇಪ್ಪಲೇ ಇಲ್ಲೆ ಹೇಳಿ ಆದರೆ ಪರಿಸ್ಥಿತಿ ಎ೦ತ ಅಕ್ಕು? ಇದರೆಲ್ಲಾ ಒಪ್ಪಿಗೋಳ್ತವು ಕೂಡಾ ಅವರವರ ಜೀವನದ ವಿಷಯ ಬಪ್ಪಗ ಇ೦ತಹ ಮಾಣಿಯ೦ಗಳ ಸ್ವೀಕಾರ ಮಾಡ್ಳೆ ತಯಾರಿರ್ತವಿಲ್ಲೆ ಹೇಳುವದೇ ವಿಪರ್ಯಾಸದ ವಿಷಯ. ಇನ್ನುದೆ ಕೆಲವು ವರ್ಷ ಹೋಪಗ ಕ೦ಪ್ಯೂಟರು ಇ೦ಜಿನಿಯರು, ಡಾಕ್ಟ್ರಕ್ಕೊ, ಐ ಎ ಎಸ್, ಐ ಪಿ ಎಸ್ ಉದ್ಯೋಗಸ್ಥ೦ಗೊ ಹೀ೦ಗಿರ್ತ ಕೆಲವೇ ಕೆಲವು ಉದ್ಯೋಗದವರ ಬಿಟ್ರೆ ಬಾಕಿ ಇಪ್ಪವಕ್ಕೆ ಸ್ವಜಾತಿ೦ದ ಕೂಸು ಸಿಕ್ಕುವದು ಕನಸಿನ ಮಾತೇ ಅಕ್ಕು ಹೇಳಿ ಕಾಣ್ತಪ್ಪಾ..

  20. [ಅಂದಾಜಿ ಆಗದ್ದೆ ಮೇಗೆನೋಡಿಗೊಂಡು ಕೂದುಗೊಂಡಿದ್ದದು.] – ಹಾಂಗೆ ಮಾಡಿರೆ ಅಂದಾಜಿ ಅವ್ತೋ ಅಂಬಗ?!!
    [ಎಂತಾರು ಅಂದಾಜಿ ಆತೋ?] – ಇಲ್ಲೆ , ಈಗಾಣ ಧಾರವಾಹಿಗಳ ಹಾಂಗೆ ಉದ್ದಕ್ಕೆ ಹೋವ್ತಲೇ ಇದ್ದಷ್ಟೇ. ಒಂದು ಪಿಡಿತಕ್ಕೂ ಸಿಕ್ಕಿದ್ದಿಲ್ಲೆ ಇಷ್ಟನ್ನಾರ.
    [ಮೂವತ್ತರ ಆಸುಪಾಸಿನ ಕೆಲವು ‘ಕೂಸುಗೊ’ ನಮ್ಮ ಬೈಲಿಲಿ ಕೆಲವು ದಿಕೆ ಕಾಂಬಲೆ ಸಿಕ್ಕುಗು] – ಸಿಕ್ಕುಗು ಹೇಳಿದ್ದು ಒಳ್ಳೆದಾತು, ಇದ್ದವು ಹೇಳಿರುತ್ತಿದ್ರೆ ಗುರಿಕ್ಕಾರಿಂಗೆ ಇನ್ನೊಂದು ಹೆಚ್ಚುವರಿ ಮಿಂಚಂಚೆಯೂ , ಮೊಬೈಲ್ ತೆಗೆಕಾಗಿ ಬತ್ತಿತ್ತು!!
    ದೊಡ್ಡ ಕಾದಂಬರಿಗಳಲ್ಲಿ, ದೊಡ್ಡ ಸಿನೇಮಲ್ಲಿ ಎಲ್ಲ, ಎಂತರ ಇದು ಕತೆ ಹೇಳಿ ಸುರುವಿಂಗೆ ಅರ್ಥ ಆಗಡಾ. ಎರಡು ಪದ್ಯ , ಎರಡು ಪೈಟಿಂಗ್ ಆಗಿ ಹೀರೋಯಿನ್ ಒಂದಾರಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಮತ್ತೆಯೇ ಫ್ಲಾಶ್ ಬೇಕ್. ಅಲ್ಲಿಂದ ಸುರುವಪ್ಪದು ಕತೆ. ಹಾಂಗೇ ಆಯ್ದು ಹೇಳಿ ಅಲ್ಲ ಹೇಳಿದ್ದು ಮಿನಿಯಾ., ‘ಜೀವನದ ಮೂಲಭೂತ ಉದ್ದೇಶ’ ಹೇಳಿ ಪ್ರಧಾನ ಕತೆ ಸುರುವಪ್ಪಗದ ಮದಲಾಣ ‘ಸೋದಾಹರಣೆ’ಗೆ ಮೌಲ್ಯ ಬಂದದು.
    ವಂಶವ ಉಳುಶೆಕ್ಕು , ವಂಶಾಭಿವೃದ್ಧಿ ಜೀವನದ ಉದ್ದೇಶ ಹೇಳಿ ಭಾವಿಸುವ ಪ್ರತಿಯೊಬ್ಬನೂ ಇದರ ಓದಿ ಅರ್ಥೈಸೆಕ್ಕಾದ ವಿಚಾರ ಒಪ್ಪಣ್ಣನ ಶೈಲಿಲಿ ಅರ್ಥಪೂರ್ಣವಾಗಿ ಪ್ರತಿಬಿಂಬಿತ ಆಯ್ದು . ಹಲವಾರು ಘಟನೆಗೊ / ಕತಗೆ ಯಾವುದೋ ಒಂದು ಸಣ್ಣ ಕಾರಣಂದ ಟ್ವಿಷ್ಟ್ ಆವ್ತ ಹಾಂಗೆ ನಮ್ಮ ಸಮಾಜ ಅತ್ತ್ಯಂತ ಗಂಭೀರವಾಗಿ ಎದುರಿಸಿಯೊಂಡಿಪ್ಪ ವಿವಾಹ ಸಮಸ್ಯಗೆ ಚಿಂತನಾತ್ಮಕವಾಗಿ ಈ ಶುದ್ದಿ ನಾಂದಿಯಾಗಿರಲಿ ಹೇಳಿ ಬಯಸುತ್ತು -‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×