Oppanna.com

ಭಾರತ ದೇಶೇ ಚೆನ್ನೈ ದ್ವೀಪೇ..

ಬರದೋರು :   ಚೆನ್ನೈ ಬಾವ°    on   05/12/2015    8 ಒಪ್ಪಂಗೊ

ಚೆನ್ನೈ ಬಾವ°

ಮನುಷ್ಯಂಗೆ ಪ್ರತಿಯೊಂದು ಘಟನೆಯೂ ಒಂದೊಂದು ಪಾಠ. ಮುಂದಾಣ ಪಾಠಕ್ಕೆ ಹೋಪಗ ಹಿಂದಾಣ ಪಾಠವ ಮರವಲೂ ಆಗ. ಅದೂವೆ ಮತ್ತಾಣ ಹಂತವ ಏರುಲೆ ಇಪ್ಪ ಮೆಟ್ಳು. ಜೀವನಲ್ಲಿ ಪ್ರತಿ ಹೆಜ್ಜೆಯೂ ಒಂದು ಪಾಠ, ಅಘಟಿತ ಘಟನೆಗಳೂ ಅವಿಸ್ಮರಣೀಯ. ಚರಿತ್ರೆಯ ಪುಟವ ಸೇರಿರೂ ಅದು ಪುಟಂದ ಅಳುದು ಹೋಗ.

ಭೋಪಾಲ್ ವಿಷವಾಯು, ನಮ್ಮಲ್ಲಿ ಎಂಡೋಸಲ್ಫೋನ್, ಗುಜರಾತ್ ಭೂಕಂಪ, ಉತ್ತರಲ್ಲಿ ಅತಿವೃಷ್ಟಿ ಹೀಂಗೆ ಒಂದರ ಹಿಂದೆ ಒಂದು ನಡದ್ದದು ನಮ್ಮ ಮನಸ್ಸಿಂದ ಮಾಸುವ ಮದಲೆ ಈ ವೊರಿಶ ಅನುಭವುಸಲೆ ಸಿಕ್ಕಿದ್ದದು ಮನ್ನೆ ಮನ್ನಾಣ ಚೆನ್ನೈಯ ಅತಿವೃಷ್ಟಿ. ಕಳುದೊರಿಶ ಉತ್ತರಲ್ಲಿ ಅತಿವೃಷ್ಟಿಗೆ ಕಾರಣ ಚಂಡಮಾರುತ ಆದರೆ ಈ ವೊರಿಶ ಮೂಡ ದಿಕ್ಕಂಗೆ ಕಾರಣ ಆದ್ದು ವಾಯುಭಾರ ಕುಸಿತ. ಮೂಡಸಮುದ್ರ ಕರೆಲಿಪ್ಪ ಚೆನ್ನೈ ಮಾಂತ್ರ ಅಲ್ಲ ಇಡೀ ತಮಿಳಿನಾಡಿಂಗೆ ಅಲ್ಲದ್ದೆ ಅದರ ಒತ್ತಂಗೆ ಇಪ್ಪ ಜಾಗಗೂ ಅದರ ಪ್ರಭಾವ ರಜ ಇದ್ದತ್ತು ಹೇಳ್ತದು ಎಲ್ಲೊರಿಂಗೂ ಗೊಂತಿಪ್ಪ ವಿಷಯವೇ! ಬಡಗದ ಕಳುದೊರಿಷಾಣ ಮಳಗೂ ಮೂಡ ಈ ವೊರಿಷದ ಮಳಗೆ ಎಂತ ವೆತ್ಯಾಸ ಹೇದರೆ ಮೂಡ್ಳಾಗಿ ಬಂದದು ಬರೀ ಮಳೆಯೆ ನೀರು ನೀರಾಗಿ. ಬಡಗಂತಾಗಿ ಜೆಪ್ಪಿದ್ದು ಗಾಳಿ ಮಳೆ.

ಈ ತೆಮಿಳುನಾಡಿಂಗೆ ವೊರುಶವೂ ನಿತ್ಯವೂ ನೀರಿಂದೇ ಸಮಸ್ಯೆ. ಮಳೆ ಬಾರದ್ದರೆ ನೀರಿನ ಸಮಸ್ಯೆ. ಮಳೆ ಬಂದರೂ ಇಲ್ಲಿ ನೀರಿಂದೇ ಸಮಸ್ಯೆ. ಕಾವೇರಿ ನೀರು, ನೀರು ಹೇದು ಒರಂಜಿಯೊಂಡಿಪ್ಪಾಂಗೆ ಕಾವೇರಮ್ಮನೆ ಎದ್ದು ಮೈ ಕೊಡವಿದ ಹಾಂಗೆ ಸೊಯ್ಪಿತ್ತದ ಮಳೆ ಇನ್ನು ಕಾವೇರಿ ನೀರು ಹೇದು ಬಾಯಿತಪ್ಪಿಯೂ ಕೇಳ್ವಾಂಗೆ ಇಲ್ಲೆ ಹೇಳ್ತಾಂಗೆ. ಹಾಂಗೆ ಸೊಯ್ಪಿ ಬಿದ್ದರೆ ಇದೆಲ್ಲ ಎಟ್ಟು ದಿನಕ್ಕೆ ಅಲ್ಲದ. ಕವಂಗ ಹಿಡಿತ್ತಷ್ಟೇ ಕೊಂಡೋಪಲೆ ಎಡಿಗೆಷ್ಟೇ ಹೊರತು ಅಡಿಗೆ ಸತ್ಯಣ್ಣ ಕುಟ್ಟುಗಲ್ಲಿ ಮಾಡಿ ಮಡಿಗಿದ್ದನ್ನೇದು ಕುಟ್ಟುಗವನ್ನೇ ಕವಂಗಕ್ಕೆ ಕವುಂಚಿ ಕೊಂಡೋಪಲೆ ಎಡಿಗೊ ಅಲ್ಲದ!

ವಿಷವಾಯು , ಭೂಕಂಪ, ಅತಿವೃಷ್ಟಿ ಸಮಯಲ್ಲಿ ಬದುಕ್ಕಿ ಉಳುದರೆ ಬೇಡಿ ತಿಂಬೆ ಹೇದು ಕಂಡಕಂಡಲ್ಲಿ ನುರುಪ್ಪಿಯೊಂಡು ತಪ್ಪುಸಲೆ ಹಸಬಡುದವು  ಅದೆಟ್ಟು  ಜೆನವೋ ಹಾಂಗೇ ಮನ್ನಾಣ ಮಳಗೆ ಹೇಂಗಾರು ಸುರಕ್ಷಿತ ಜಾಗ್ಗೆ ಎತ್ತಿಯೊಂಡ್ರೆ ಸಾಕು ಹೇದು ಹಸಬಡುದವೂ ಅಲ್ಪ. ಅಂತ ವಿಷಮ ಪರಿಸ್ಥಿತಿಲಿಯೂ ಅವರವರ ಬೇಳೆ ಬೇಶಿ ಪೈಸೆ ಮಾಡ್ಯೊಂಡ ಸೊಬಗಂಗಳೂ ಇಲ್ಲದ್ದವೂ ಇದ್ದಿದವಿಲ್ಲೆ.

ಚೆನ್ನೈಲಿ ಮಳೆ ಬಪ್ಪದು ಹೊಸತ್ತಲ್ಲ, ಮಳೆ ಬಂದರೆ ಬೆಳ್ಳ ಬಂದಾಂಗೆ ಅಪ್ಪದೂ ಹೊಸತ್ತಲ್ಲ. ಆದರೆ ಇಟ್ಟೆಲ್ಲ ಅಕ್ಕು ಹೇದು ಆರೂ ಗ್ರೇಶಿ ನೋಡಿರವು. ಅನುಭವಸ್ತರು ಹೇಳ್ತವು ನೂರು ವರ್ಷಂದ ಹೀಂಗಿರ್ತ ಮಳೆ ಆಯಿದಿಲ್ಲೆ.  ಆದರೆ ಕೆಲವೊರಿಷ ಮದಲು ಒಂದರಿ ಜೋರು ಗಾಳಿ ಶೆಡ್ಳು ಮಳೆ ಬಂದು ಅಣೆಕ್ಕಟ್ಟು ತುಂಬಿ ಗೇಟು ಬಿಡುಸಿಬಿಟ್ಟದು, ಮಾರ್ಗಂಗಳಲ್ಲಿ ಹೊಳೆ ಹಾಂಗೆ ನೀರು ಹರುದ್ದದು,  ಮನೆಯೊಳಂಗೆ ನೀರೊಕ್ಕಿದ್ದದು, ಬಿಡಾರಂಗೊ ಕೊಚ್ಚಿ ಹೋದ್ದು, ಗೃಹೋಪಯೋಗಿ ವಸ್ತುಗೊ ಹಾಳಾದ್ದು … ಅನುಭವಂಗ ಹತ್ತೊರಿಶಂದ ಚೆನ್ನೈಲಿಪ್ಪವಕ್ಕೆ ಗೊಂತಿದ್ದು.

ನಮ್ಮೂರಿಲ್ಲಿ ಮುಂಗಾರು ಮಳೆ ಬತ್ತಾಂಗೆಲ್ಲ ಈ ಮೂಡಹೊಡೆಲಿ ಮಳೆಗಾಲ ಇಲ್ಲೆ. ವೊರಿಷಕ್ಕೆ ಒಂದು ತಿಂಗಳು ಮಳೆಗಾಲ, ಅದರಲ್ಲಿ ಹದಿನೈದು ದಿನ ಮಳೆ ಬಪ್ಪದು, ಅದರ್ಲಿ ಒಂದುವಾರ ಒಳ್ಳೆತ ಮಳೆ ಅದರ್ಲಿಯೂ ಮೂರು ದಿನಾಣ ಭರ್ಜರಿ ಮಳೆ. ಇಷ್ಟೇ ಇಲ್ಲಿಯಾಣ ಮಳೆಗಾಲ. ಅದರಲ್ಲಿ ಒಂದಿರುಳು ಅಥವಾ ಒಂದು ಹಗಲು ಕರೆಂಟು ಹೋಪದು, ಒಂದಿನ ಹಾಲಿನ ಪೆಕೇಟು ಬಾರದ್ದಪ್ಪದು ಇದು ಇಲ್ಲಿಯಾಣ ಮಾಮೂಲು ಮಳೆಗಾಲದ ಚಿತ್ರಣ.  ಅದೂ ಬಂಗಾಳಕೊಲ್ಲಿಲಿ ಚಂಡಮಾರುತವೋ , ವಾಯುಭಾರ ಏರಿಳಿತ ಆದರೋ ಮಾಂತ್ರ ಮಳೆಗಾಲ ಇಲ್ಲಿಗೆ. 24

ನವಂಬ್ರ ತಿಂಗಳು ಸುರುವಾದಪ್ಪದ್ದೆ ಸುರುವಾಯಿದು ವಾಯುಭಾರ ಕುಸಿತ ಠೀವಿಲಿ! ಗಾಳಿ ಇಲ್ಲೆ, ಮೋಡ ಇಲ್ಲೆ ನವಂಬ್ರ ಹತ್ತು ಮಧ್ಯಾಹ್ನ ಯಥಾಸ್ಥಿತಿಲಿ ಕಳುದು ಹೊತ್ತೋಪಗಂದ ಮತ್ತೆ ಮೂರ್ಸಂಧಿ ಅಪ್ಪಗ ಸುರುವಾತು ನೋಡಿ ಮಳೆ…. ಸೊಯ್ಪಿತ್ತಯ್ಯ ಸೊಯ್ಪಿತ್ತು!! ಇರುಳಿಡೀ ಸೊಯ್ಪಿತ್ತು!! ನವಗಿಲ್ಲಿ ಒಂದು ಮನೆ ಒಕ್ಕಲ ನಿಮಿತ್ಥ ವಾಸ್ತುಬಲಿ ಅನುಪ್ಪತ್ಯ. ಇಲ್ಲಿ ಅನುಪ್ಪತ್ಯ ಅಪ್ಪದೇ ಅಪರೂಪ, ಸಿಕ್ಕಿದ ಪಾಚ ಬಿಡ್ತೆಂತಕೆ ಹೇದು ಹೋದರೆ ಅಲ್ಲಿಂದ ಪಾಚ ಉಂಡಿಕ್ಕಿ ಹೆರಡ್ಳೆ ಎಡಿಯ! ಅಷ್ಟೂ ಮಳೆಯೆ! ಎನ್ನಾಂಗೆ ಪಾಚದ ಕೊದಿಗೆ ಅಲ್ಲದ್ದರೂ ಅನುಪ್ಪತ್ಯ ಹೇಳಿಕೆ ಅಗತ್ಯ ಬಾರದ್ದೆ ಕಳಿಯ ಹೇದಕಾರಣ ಬಾರದ್ದೆ ಉಪಾಯ ಇಲ್ಲೆ ಹೇದು ಬಂದವೂ ಹೋಗದ್ದೆ ಉಪಾಯ ಇಲ್ಲದ್ದವು ಅದೇಂಗೊ ಎರ್ಕುನೀರಿಲ್ಲಿ ಜಳಂಬೊಳ ಮಾಡ್ಯೊಂಡು ಮನೆ ಸೇರಿಯೊಂಡವು. ಅಂದರೂ ಮಳೆ ಬಿಟ್ಟಿದ್ದಿಲ್ಲೆ. ಉದಿ ಆದರೂ ಕಮ್ಮಿ ಆಯಿದಿಲ್ಲೆ. ಬರ್ರಾನೆ ಸೊಯ್ಪುವ ಮಳೆಯ ಹಿಮ್ಮೇಳಕ್ಕೆ ತದೇವ ಲಗ್ನಂ ತಾರಾಬಲಂ ಚಂದ್ರಬಲಂ… ಹೇದು  ಬಟ್ಟಮಾವ° ಹೇಳ್ಯೊಂಡು ಗೃಹಪ್ರವೇಶವೂ ಆತು, ಕಾಪಿ ತಿಂಡಿಯೂ ಆತು. ಗೆಣವತಿ ಹೋಮ ಕಳುದಿಕ್ಕಿ ಓಂ ನಮೋ ಭಗವತೇ ರುದ್ರಾಯ … ಹೇದು ಏಕಾದಶರುದ್ರಾಭಿಷೇಕ ಸುರುವಪ್ಪಗದಾ ಮಳೆ ವಾಪಾಸು ಭರ್ಜರಿ. ಅಂದರೂ ಆರೂ ಗಾಬರಿ ಆಯಿದವಿಲ್ಲೆ. ಎಂತಕೆ.. ಮಳೆಗಾಲದ ಮಳೆ ಅಲ್ಲದ ಹೇದು. ಆದರೆ ಉಂಡಿಕ್ಕಿ ಹೆರಡ್ಳೆ ಮಾಂತ್ರ… ಉಹ್ಹುಮ್ಮ್.. ಎಡಿಯ. ಮಾರ್ಗಲ್ಲಿ ಎಲ್ಲೋದಿಕ್ಕೆ ನೀರು ಎರ್ಕಿದ್ದು, ತಗ್ಗು ಪ್ರದೇಶಕ್ಕೆ ನೀರು ಹೊಕ್ಕಿದ್ದು. ಅಂದರೂ ರಜಾ ಮಳೆ ಕಮ್ಮಿ ಆದಪ್ಪದ್ದೆ ಬಂದೋರು ಅವರವರ ದಾರಿ ಹಿಡುದವು. ಬಟ್ಟಮಾವನೂ ಊರಿಂಗೆ ಹೆರಟವು . ರೈಲೂ ನಾಕು ಗಂಟೆ ತಡವಾಗಿ ಹೆರಟತ್ತು.
ನೋಡಿರೆ…. ಮುನ್ನಾಣ ದಿನ ಇರುಳಿಡೀ ಸೊರುದ ಮಳಗೆ ಹಲವು ದಿಕ್ಕೆ ನೀರು ಎರ್ಕಿ ಕಟ್ಟೋಣದೊಳಂಗೂ ನೀರು ಹೊಕ್ಕಿ ಅಲ್ಲಿ ಕೆಳಾಚಿಗೆ ಇಪ್ಪದೆಲ್ಲ ಚೆಂಡಿ ಚೆಂಡಿಯಾಗಿ ಬೊದುಳಿತ್ತು!. ಎಂತ ಮಾಡುಸ್ಸು. ಮಳೆ! ಆರ ದೂರಿಯೂ ಗುಣ ಇಲ್ಲೆ. ಉದ್ದಿ ಉಡಿಗಿ ಶುದ್ಧ ಮಾಡಿ ಒಂದು ಅಧ್ಯಾಯ ಅಲ್ಲಿಗೆ ಮುಗುದತ್ತು. ಹೀಂಗೆ ಒಂದಾರಿ ನೀರು ಹೊಗ್ಗುವಟ್ಟು ಮಳೆ ಬಂದರೆ ಇಲ್ಲಿ ನಾಕು ದಿನಕ್ಕಾತು ಒತ್ತರೆ ಕೆಲಸ!

ಅಬ್ಬ ಮುಗುದತ್ತೋ ಇನ್ನು ನಿತ್ಯಾಣ ಕೆಲಸ ಸುರುಮಾಡ್ಳಕ್ಕೋದು ಗ್ರೇಶಿಯಪ್ಪದ್ದೆ ವಾಪಾಸು ಸುರುವಾತು ನೋಡಿ ಮಳೆ! ಗಾಳಿ ಇಲ್ಲದ್ದ ಕಾರಣ ಮೋಡ ಕರಗಿ ನೀರು ನೀರಾಗಿ ತೆಳುದತ್ತು. ವಾಪಾಸು ಅಟ್ಟೇ ಸೊಯ್ಪಿತ್ತದ ಮಳೆ. ವಾಪಾಸು ಅಟ್ಟೇ ನೀರೂ ಆತು. ಅಟ್ಟೇ ಒತ್ತರೆ ಕೆಲಸವೂ ಆತು. ಅಲ್ಲಿಗೆ ಚೆನ್ನೈಗೆ ಬೇಕಾಷ್ಟು ಮಳೆಯೂ ಆತು ನೀರೂ ಆತು . ಕಾವೇರಿಯ ಆಚೊಡೆಯಾಣವು ಇವ್ವಿನ್ನು ಈ ವೊರಿಷ ಕಾವೇರಿ ಸುದ್ದಿಗೆ ಬಾರವು ಹೇದು ಕೈ ತಟ್ಟಿದ್ದೂ ಆತು.! ಕಾವೇರಿ ನೀರಿನ ಬೇಡಿಕೆ ರಾಜಕೀಯವೂ, ಕಾನೂನಾತ್ಮಕವೂ ಆಗಿಪ್ಪ ವಿಷಯ. ಅದರ ಹಿಡ್ಕೊಂಡು ಬಾಕಿದ್ದೋರು ರಂಗು ಮಾಡುಸ್ಸು ನೇರಂಪೋಕು.

~~

ಕುಂಭದ್ರೋಣ:
ಮಳೆಗಾಲ ಸುರುವಾಗಿ ನಡುಕೆ ಅಪ್ಪಗ ನಮ್ಮಲ್ಲಿ ಕುಂಭದ್ರೋಣ ಮಳೆ ಹೇದು ಕ್ರಮ ಇದ್ದು. ಅಷ್ಟು ಕೊಳಗ ಇಷ್ಟು ಕೊಳಗ ಹೇಳುಗು ಜೋಯಿಷಪ್ಪಚ್ಚಿ. ಬಂದರೆ ಬಂತು. ಬಾರದ್ದರೆ ಬಕ್ಕು. ಅಕೇರಿಗೆ ಅಲ್ಲಿ ಬಂತು ಇಲ್ಲಿ ಹೋತು ಹೇದು ಅಪ್ಪದೂ ಇದ್ದು.

ಅಷ್ಟಪ್ಪಗ ಇಲ್ಲಿ ನವಂಬ್ರ 20 ದಾಂಟಿತ್ತು. ದಿನ ಹೋವುತ್ತು ಗೊಂತಾವ್ತೋ! ಉದಿಯಾತು ಮಧ್ಯಾಹ್ನ ಆತು ಇರುಳಾತು ಹೇಳ್ತಾಂಗೆ ದಿನ ಉರುಳುತ್ತದು ಅಟ್ಟು ಪಕ್ಕ! 20 ಕಳುದಪ್ಪದ್ದೆ ಟಿವಿಲಿ ಸುರುವಾತು ವಾಪಾಸು ವಾಯುಭಾರ ಕುಸಿತ. ಪರಿಣಾಮ ವಿಪರೀತ ಮಳೆ ಅಂದಾಜಿ. ಅದು ಅಂದಾಜಿಯೇ ಆಗಿಹೋತಟ್ಟೇ ಹೊರತು ನಿಖರವಾಗಿ ಆರೂ ಹೇಳಿದ್ದವಿಲ್ಲೆ. ಬಂದ ಮತ್ತೆ ಹೇಳ್ವವು ನಮ್ಮಲ್ಲಿಯೂ ಇರ್ತವನ್ನೇ ಅದಾನು ಅಂದೇ ಹೇಯಿದ°ಯಿಲ್ಯೋ ಹೇದು! ಇದುದೆ ಆದ್ದು ಹಾಂಗೆಯೇ. ಅಂದಾಜಿ ಮಾಡಿದಾಂಗೆ 26ಕ್ಕೆ ಸುರುವಾಯೇಕ್ಕಾದ ಮಳೆ ಕಂಡತ್ತಿಲ್ಲೆ. ಇನ್ನೆರಡು ದಿನ ಮುಂದೆ ಹೋಕು ಹೇದವು. ದಿನವೂ ಮುಂದೆ ಹೋತು. 28, 29 ಕೂಡ ಕಳುದತ್ತು. 3oಕ್ಕೆ ನೆಡುಇರುಳು ಕಳುದಮತ್ತೆ ಸುರುವಾದ ಮಳೆ ಹದಾಕೆ ಉದಿವರೇಗೆ ಬಂತು. ದೊಡ್ಡ ಉದಿಯಾದ ಮತ್ತೆ ಏಳ್ತವೂ ಸಾನ ಎದ್ದಿಕ್ಕಿ ನೋಡುವಾಗ ಮಾರ್ಗಲ್ಲಿ ನೀರು ದಣಿಯ ಎರ್ಕಿಯೊಂಡಿತ್ತಿಲ್ಲೆ. ಅಪ್ಪಚ್ಚಿಯಾಂಗೆ ಕಾಲಂಟೆ ಎದ್ದು ಟ್ರಾನ್ಸುಫಾರ್ಮರ್ ವರೇಗೆ ವಾಕಿಂಗು ಹೋಗ್ಯೊಂಡು ಬಂದವಕ್ಕೂ ಮಳೆ ಉಪದ್ರ ಹೇದು ಆಯಿದಿಲ್ಲೆ. ಎಂಟು ಗಂಟಗೆ ಒಂದು ಮಳೆ ಬಂತು ನೋಡಿ ಹೇಂಗೆ ಬಂತು ಹೇದು ಅರಡಿಯ ನೀರು ನೀರಾಗಿ ಸೊರುದ ಮಳೆಲಿ ಮಾರ್ಗಲ್ಲಿ ಪೂರ ಒಂದು ಫೀಟಿಂದ ಹೆಚ್ಚಿಗೆ ನೀರು ಎರ್ಕಿ ಆಗಿತ್ತು. ಆಪೀಸಿಂಗೆ ಹೋಪೋರು ಹೋಗಿ ಆಯ್ದು. ಅರೆ ಮಾರ್ಗಲ್ಲಿ  ಚೆಂಡಿಯಾಗ್ಯೊಂಡು ಹೋದೋರು ಹೋಗಿ ಎತ್ತಿ ಆತು ಅವರವರ ಕೆಲಸಕ್ಕೆ. ಹತ್ತು ಗಂಟೆ ಮತ್ತೆ ಸೊಯ್ಪಿದ ಮಳೆ …. ಹೊತ್ತೋಪಗ ಎಲ್ಲಿ ನೋಡಿರೂ ನೀರು ನೀರು!!! ಬಸ್ಸು ಅಲ್ಲಲ್ಲಿ ಕಂಜಿ ಹಾಕಿತ್ತು. ಸ್ಕೂಟ್ರು ಬೈಕು ರಿಕ್ಷ ಅಲ್ಲಲ್ಲಿ ಬಾಕಿ. ತಾಕತ್ತಿಪ್ಪ ಆಟೋರಿಕ್ಷದೋರು ಮುನ್ನೂರು ಐನ್ನೂರು ಹೇದೊಂಡು ಜೆನರ ಹತ್ತಿಸ್ಯೊಂಡು ಹೆರಟು ಕೆಲವು ಜೆನ ಅರ್ಧಲ್ಲಿಯೂ ಬಾಕಿ ಆಗಿ ಅಂತೂ ಆಫೀಸಿಂಗೆ ಹೋದೋರು ಏಳು ಗಂಟಗೆ ಮನಗೆ ಎತ್ತುವೋರು ಹತ್ತು ಗಂಟಗೆ ಎತ್ತಿದವು. ಅಂಬಗ ಹತ್ತು ಗಂಟಗೆ ಎತ್ತುವೋರು…?!!!

ಮನಗೆ ಬಂದು ಟೀವಿ ನೋಡಿರೆ ಚೆನ್ನೈಗೆ ನೀರು ವಿಲೆವಾರಿ ಮಾಡ್ಳೆ ಇಪ್ಪ ಅಣೆಕ್ಕಟ್ಟುಗೊ ನೀರು ತುಂಬಿ ಇನ್ನೆಂತ ಕಟ್ಟ ಒಡದು ಹೋವ್ತು ಹೇಳ್ತ ಹಂತಕ್ಕೆ ಬಂದು ಬಾಗಿಲು ಬಿಡ್ಸಿ ಬಿಟ್ಟವಡ!! ನೀರು ತುಂಬಿರೆ ಕಟ್ಟದ ಬಾಗಿಲು ಬಿಡುಸಿ ಬಿಡ್ತ ಕ್ರಮ ಹೊಸತ್ತೇನಲ್ಲ. ಆ ನೀರು ಇದೇ ಪೇಟೆ ಹೊಡೆಂಗೆ ಬಪ್ಪದು ಹೇಳ್ಸೂ ಗೊಂತಿಲ್ಲದ್ದೆ ಇಪ್ಪದೂ ಅಲ್ಲ. ಆದರೆ ಎಟ್ಟು ಬಿಡಿಸಿ ಬಿಡುಗು., ಎಟ್ಟು ನೀರು ಬಕ್ಕು, ಅದು ಎಲ್ಲೆಲ್ಯಾಗಿ ಹರುದು ಹೋಗಿ ಎಲ್ಲಿ ಸೇರುಗು, ಅದರ ಪರಿಣಾಮ ಎಂತಕ್ಕು ಹೇಳ್ತ ಶುದ್ದಿ ವಿವರ ಕೊಟ್ಟಿದವೇ ಇಲ್ಲೆ.!. ಅದಕ್ಕಿಪ್ಪ ಕ್ರಮವೂ ಕೈಗೊಂಡವಿಲ್ಲೆ!

ಅಂತೂ ಹೇಂಗೋ ಮನಗೆ ಬಂದುಸೇರ್ಯೊಂಡು ಕುಶಾಲಿಪ್ಪೋರು ಮೋರೆಪುಟ (ಫೇಸ್ಬುಕ್ಕು), ಎಂತೊಬ್ಬೊಲಿ (ವಾಟ್ಸಪ್ಪು) ವೊರ್ತಮಾನ ಅತ್ತಿತ್ತೆ ಚಿತ್ರ ಸಹಿತ ಹಂಚಿಯೊಂಡವು. ಮೊಬೈಲ್ ಚಾರ್ಚ್ ಇದ್ದರೆ, ನೆಟ್ವರ್ಕ್ ಇದ್ದರೆ ಉದಿಯಾದಮತ್ತೆ ಕಾಂಬೊ° ಹೇದಿಕ್ಕಿ  ಒರಗಿದವು ಚೆನ್ನೈ ಒಳ್ಳೆತ ತಣ್ಣಂಗೆ ಆತು ಇಂದು ಹೇದೊಂಡು. ಕುಶಾಲಿಲ್ಲದ್ದೋರು ತಳಿಯದ್ದೆ ಒರಗಿದವು ನವಗೆಂತಕೆ ಇದೆಲ್ಲ ಕುಶಾಲು ಹೇದೊಂಡು.
ಉದಿಯಪ್ಪಗ ಎದ್ದು ನೋಡಿರೆ… !!! ಎಲ್ಲದಿಕ್ಕೆ ನೀರು, ಮಾರ್ಗಲ್ಲಿ ನೀರು, ಮನೆ ಬುಡಲ್ಲಿಯೂ ನೀರು, ಮನೆ ಸುತ್ತಲೂ ನೀರು… ಕಾಲು ಮಡಗಿರೆ ಮೊಳಪ್ಪೊರೆಗೆ ಬಕ್ಕು ನೀರು ಹೇಳ್ಸು ನಿಘಂಟಾತು. ಹೆಚ್ಚಿನೋರೂ ಕೆಲಸಕ್ಕೋವ್ತವು ಹೆರಟಿದವಿಲ್ಲೆ ಮನೆಬಿಟ್ಟು. ಎಡಿಯ ಹೋತಿಕ್ಕಲೆ! . ಮತ್ತೆ ಎಡಿಗಾದವು, ಹತ್ರೆ ಇಪ್ಪವು, ಹೋಗದ್ದೆ ಕಳಿಯ ಹೇಳ್ತೋರು ಪೇಂಟಿನ ಸುರುಟಿ ಹೆರಟವು ಜಳಂಬೊಳ ಮಾಡ್ಯೊಂಡು. ಮಳೆ ಸೊಯ್ಪಿತ್ತು, ಸೊಯ್ಪಿತ್ತು…ಸೊಯ್ಪಿಯೊಂಡೇ ಇತ್ತು. ಮಜ್ಜಾನಾತು…ನೀರನ ಮಟ್ಟ ಏರಿ ಏರಿಯೊಂಡೇ ಹೋತು. ಹಲವು ಮನೆಗೊಕ್ಕೆ, ಆಪೀಸಿಗೊಕ್ಕೆ, ಅಂಗುಡಿ, ಕಟ್ಟೋಣಂಗೊಕ್ಕೆ, ನೀರು ಹೊಕ್ಕಿತ್ತು, ಆಟೋದವು ಕರೆಂಗೆ ಜಾರಿದವು, ಬೈಕಿನವು ನೀರಿಲ್ಲಿ ಬಾಕಿಯಾಗಿ ದೂಡಿಯೊಂಡು ಹೋದವು….ಹೊತ್ತು ಕಸ್ತಲೆ ಆಗ್ಯೊಂಡು ಬಂತು…. ಕರೆಂಟೂ ಹೋತು,  ಕೆಳಾಣ ಮನೆಯೋರು ಮೇಗಾಣ ಮನೆಗಳಲ್ಲಿ ಆಶ್ರಯ ಪಡಕ್ಕೊಂಡವು….. ಅತ್ತಿತ್ತೆ ಗೊಂತಿಪ್ಪೋರು ಎಂಗಳಲ್ಲಿಗೆ ಬನ್ನಿ , ಎಂಗಳ ಮನಗೆ ಬನ್ನಿ ಹೇದ್ದೂ ಆತು. ಆದರೆ ಈ ಕಸ್ತಲೆಲಿ, ಈ ನೀರಿಲ್ಲಿ ಹೋಪದಾರೂ ಎಲ್ಲಿಗೆ, ಅಲ್ಲ ಇನ್ನು ಎಷ್ಟು ಮಳೆ ಬಕ್ಕು, ಇನ್ನು ಎಷ್ಟು ನೀರು ಎರ್ಕುಗು, ಇನ್ನೆಲ್ಲೆಲ್ಲಿಗೆಲ್ಲ ನೀರು ಹೊಕ್ಕುಗು,  ಇನ್ನೆಂತ ಅಕ್ಕು ಹೇಳ್ತ ಕಲ್ಪನೆ ಆದರೂ ಆರಿಂಗೆ ಇದ್ದು!.  ಅಂತೂ ಶ್ರೀರಾಮ ಜಯ ರಾಮ ಜಯ ಜಯ ರಾಮ ಹೇದು ಪ್ರಾರ್ಥಿಸಿಯೊಂಡು ನುಸಿ ಕಚ್ಚಿಸಿಯೊಂಡೇ ಒರಗಿದವು ಮೇಗಾಣ ಮನಗೋಗಿ ಆಶ್ರಯ ಪಡದವು, ಮೇಗಾಣ ಮನೆಲಿಪ್ಪೋರು, ಮನಗೆ ನೀರೊಕ್ಕಿದನ್ನೆ..ಇನ್ನೆಂತ ಮಾಡುದು, ಶಿವ ಶಿವಾ ಹೇದು ಮನೆಬಿಟ್ಟು ಹೋಪಲೆ ಮನಸ್ಸಿಲ್ಲದ್ದೋರು ಕಾಲು ಮಡಿಸಿ ಕುರ್ಚಿಲಿ ಕೂದೊಂಡು, ಮಂಚಲ್ಲಿ ಮನಿಗ್ಯೊಂಡು…

ಉದಿ ಆತು. ಎಂತಾತು ನೋಡ್ವ ಹೇದು ಎಕ್ಕಳಿಸಿರೆ ಎಲ್ಲದಿಕ್ಕೆ ನೀರು, ಜನ ಸಂಚಾರ ಇಲ್ಲೆ. ಟಿವಿ ರಿಮೋಟು ಹಿಡ್ಕೊಂಡು ಒತ್ತುವೊ° ನೋಡಿರೆ ಕರೆಂಟಿಲ್ಲೆ. ಬೆಟ್ರಿಲಿ ಓಡ್ತ ಕರೆಂಟು ಮುನ್ನಾಣ ದಿನವೇ ಮುಗುದ್ದು. ಶುದ್ದಿ ಗೊಂತುಮಾಡ್ಯೊಂಬಲೆ ಟಿವಿ ಎಂತಕೆ ಉದ್ದುತ್ತ ಮೊಬೈಲಿಲ್ಯೇ ಇದ್ದನ್ನೇದು ಉದ್ದಿರೆ ನೆಟ್ವರ್ಕ್ ಸಿಗ್ನಲ್ ಇಪ್ಪಲೇ ಇಲ್ಲೆ. ಬೆಟ್ರಿ ಕಳಚ್ಚಿ ಸಿಮ್ ಕಳಚ್ಚಿ ಹಾಕಿ ಮೊಬೈಲು ಹೆಟ್ಟಿ ಸಾನ ನೋಡಿ ಆತು., ಮೊಬೈಲಿಲಿ ನೆಟ್ವರ್ಕು ಇಲ್ಲೆ. ಅಲ್ಲಲ್ಲಿ ಜೆನರೇಟರು ಇಪ್ಪಲ್ಲಿ ಟಿವಿ ನೋಡಿದವು….. ದಿಗ್ಬ್ರಮೆ! ಮೆಡ್ರಾಸು ದ್ವೀಪ ಆಯಿದು!!!

ಮುನ್ನಾಣ ದಿನ ಮಧ್ಯಾಂತಿರಿಗಿ ಸೊಯ್ಪಿದ ಮಳಗೆ, ಅಲ್ಲಲ್ಲಿ ನೀರೋಪಲೂ ಜಾಗೆ ಇಲ್ಲದ್ದೆ ಎರ್ಕಿ ನಿಂದು, ಅಣೆಕ್ಕಟ್ಟು ಬಿಡುಸಿಬಿಟ್ಟ ಕಾರಣಂದ ಪೇಟೆಯ ಎಲ್ಲ ದಿಕ್ಕೆ ನೀರು ಹೊಳೆಯ ಹಾಂಗೆ ಹರುದು ಹೋಪ ದೃಶ್ಯ ಟೀವಿ ಕಾಣುತ್ತಲ್ಲಿ ಕಂಡತ್ತು. ಅನೇಕ ಸ್ವಯಂಸೇವಕರು ಶಕ್ತಿಮೀರಿ ಶ್ರಮಿಸಿ ಮನೆಕಳಕ್ಕೊಂಡವರ ಹತ್ರಾಣ ಸುರಕ್ಷಿತ ಶಾಲೆ , ಛತ್ರಂಗೊಕ್ಕೆ ಸಾಗುಸಿ ಸ್ಥಳಾಂತರಿಸಿದ್ದವು. ಮನೆ ಮುಂಗುವಷ್ಟು ನೀರು ತುಂಬಿದ ಕಾರಣಂದ ಕುಡಿವಲೆ ನೀರಿಲ್ಲೆ, ತಿಂಬಲೆ ಆಹಾರ ಇಲ್ಲೆ, ಶೌಚಕ್ಕೂ ಗೆತಿ ಇಲ್ಲ. ಅಬ್ಬ ಸಂಕಷ್ಟ ಮಾತಿಲ್ಲಿ ಹೇಳ್ಳೆಡಿಗೋ, ಹೇಳಿರೂ ಗ್ರೇಶಿನೋಡ್ಳೆಡಿಗೋ!! ಅಣೆಕ್ಕಟ್ಟಿಂದ ಹೆರಹಾಕಿದ ನೀರು ಹೊಳೆಲಿ ರಭಸಂದ ಹೋವುತ್ತಾಂಗೆ ಹೋವುತ್ತು. ಮಾರ್ಗಂಗಳಲ್ಲಿ ವಾಹನವೊ, ಮನುಷ್ಯರೋ ಸಂಚಾರ ಮಾಡುವ ಹಾಂಗಿಲ್ಲೆ. ಅದರೆಡಕ್ಕಿಲ್ಲಿ ಒಂದೆರಡು ಮುಖ್ಯ ಸಂಕಂಗಳೂ ನೀರಿಲ್ಲಿ ಮುಳುಗಿದ್ದು, ಸಂಚಾರ ಪೂರ್ಣ ನಿಷೇಧ ಆಗಿಹೋತು ಅಲ್ಲಿ. ಹೀಂಗಾಗಿ ಇಡೀ ಚೆನ್ನೈ ಪೇಟೆ ಏಳೆಂಟು ಭಾಗವಾಗಿ ದ್ವೀಪ ಆಗ್ಯೋತು. ಮನೆ ಮೇಗಾಣ ಮಹಡಿಲಿ ನಿಂದು ನೋಡಿರೆ ಆಚಮನೆ ಮೇಗಾಣ ಮಹಡಿಂದ ಕಿಟಿಕಿಲಿ ಇಣುಕ್ಕಿ ಆರಾರು ಸಕಾಯಕ್ಕೆ ಬತ್ತವೋ ಹೇದು ನೋಡುವವೇ ಆಗಿ ಹೋತು. ಮನೆಲಿ ಸಾಮಾನುಗೊ ತರಕಾರಿಗೊ ಮುಗುದ್ದು ಆದರೆ ಹೋಪದಾರು ಹೇಂಗೆ ಅಲ್ಲ ತಪ್ಪದಾರು ಎಲ್ಲಿಂದ, ಅಂಗಡಿಗೊ ಇದ್ದರಲ್ಲದ! ಇದ್ದರೂ ಸಾಮಾನುಗೊ ಇದ್ದರಲ್ಲದ! ಒಂದೆರಡು ಬಚಾವಾಗಿದ್ದ ಅಂಗಡಿಗಳಲ್ಲಿ ಹಾಲು ತರಕಾರಿಗೆ ಗ್ರೇಶಿಕ್ಕಲೂ ಎಡಿಯದ್ದ ರೇಟು. ಹಾಲಿಂಗೆ ಲೀಟರಿಂಗೆ ನೂರು ಇನ್ನೂರು, ತರಕಾರಿಗೆ ಕಿಲೋ ಮುನ್ನೂರು!! ಇಪ್ಪದರಲ್ಲಿ ಎಡ್ಜಸ್ಟು ಮಾಡುವೋ° ತಳಿಯದ್ದೆ ಕೂದವು ಕೆಲವರಾದರೆ ಉಪಾಯ ಇಲ್ಲದ್ದೆ ಸೊಂಟದೊರೊಗೆ, ಕೊರಳಿಂಗೊರೆಗೆ ಇಪ್ಪ ನೀರಿಲ್ಲಿ ಜಳಂಬೊಳ ಮಾಡಿ ಹೋಗಿ ತಂದೋರು ಕೆಲವರು.

ಮನೆಬಿಟ್ಟವಕ್ಕೆ ಕುಡಿವಲೆ ನೀರಿಲ್ಲಿ, ಮನೆಲಿಪ್ಪೋರಿಂಗೆ ಇಪ್ಪ ನೀರು ಮುಗಾತು. ಅಂಬಗಳೋ?!  ಆ ಸಮಯಕ್ಕೆ ಏವ ನೀರು ಸಿಕ್ಕಿತ್ತೋ ಅದುವೇ ಗಂಗೇಚ ಯಮುನೇಚೈವ! ಅದರೆಡಕ್ಕಿಲ್ಲಿ ಅಲ್ಲಿ ಇಲ್ಲಿ ಹೇದು ಒಂದೆರಡು ದಿಕ್ಕೆ ಹಾಲೋ ನೀರೋ ಒಂಚೂರು  ಸಿಕ್ಕಿರೆ ಅದಕ್ಕೊ ಪೆಟ್ಟುಗುಟ್ಟು. ಹೇಳ್ಸು ಕೇಟತ್ತು ಒಂದಿಕ್ಕೆ ಹಾಲಿನ ಪೇಕೇಟುಗಳನ್ನೇ ಲಾರಿಂದ ಮಾರ್ಗಕ್ಕೆ ತೆಗದು ತೆಗದು ಇಡ್ಕಿದವು ಕೆಲವು ಆತುರರು ಎನ ಸಿಕ್ಕಿದ್ದಿಲ್ಲೆ , ಎನ ಸಿಕ್ಕುತ್ತಿಲ್ಲೆ ಹೇಳ್ವ ಕೋಪಲ್ಲಿ. ಅಪ್ಪು., ಹಶು ಆಸರು ತಡವಲೆ ಎಡಿಗಾಗದ್ದಪ್ಪಗ ಅವರವರ ಹೊಟ್ಟೆ ತುಂಬುಸುವವೇ ಎಲ್ಲೋರು. ಈಗಾದರೂ ನವಗೆ ಅಂದಾಜಿ ಆವುತ್ತು ನೈಜೀರಿಯಾಲ್ಲಿ ಎಂತಕೆ ಮನುಷ್ಯರು ದರೋಡೆಯೇ ಮುಖ್ಯ ಕಸುಬು ಮಾಡಿಗೊಂಡಿದವು ಹೇದು. ಅಬ್ಬ! ಗ್ರೇಶಿರೆ ಮೈ ಝುಂಮ್ ಹೇಳುತ್ತು.!

ಅಂದ್ರಾಣ ದಿನ ಡಿಸಂಬರ ಎರಡು ಹಾಂಗೆ ಕಳುದತ್ತು. ಮೂರನೇ ದಿನ ಪರಿಸ್ಥಿತಿ ಮಳೆ ಇತ್ತಿಲ್ಲೆ ವಿಶೇಷ. ಅಂದರೆ ನೀರು ಏನೂ ತಗ್ಗಿದ್ದಿಲ್ಲೆ. ಮುನ್ನಾಣ ದಿನವೇ ಚೆನ್ನೈಗೆ ಬಪ್ಪ/ಚೆನ್ನೈಂದ ಹೋಪ ಎಲ್ಲ ಮಾರ್ಗಂಗೊ ಬಂದ್. ವಿಮಾನ, ರೈಲು, ಬಸ್ಸು ಏವ ಸಂಚಾರವೂ ಇಲ್ಲೆ. ಸ್ವಂತ ವಾಹನ ಇಪ್ಪೋರು, ನಾಕಾರು ಪಟ್ಟು ಕೊಟ್ಟು ವಾಹನ ಮಾಡ್ಯೊಂಡು ಹೇಂಗೇಂಗೋ ಚೆನ್ನೈ ಬಿಟ್ಟು ಹೆರ ಪರಾರಿ ಆಗ್ಯೊಂಡವು ಕೆಲವರು. ಅತೀ ವಿರಳ ಕೆಲವು ದಿಕ್ಕೆ ಕರೆಂಟು ಬಂತು. ಟೀವಿ ನೋಡಿ ವೊರ್ತಮಾನ ತಿಳ್ಕೊಂಬಲೆ ಎಡಿಗಾತು. ಆದರೆ ಚೆನ್ನೈಲಿ ಸದ್ಯ ಮೂರು ದಿನಂದ ಏವ ಶುದ್ದಿಯೂ ಇಲ್ಲೆ. ಬರೇ ನೀರು. ಎಲ್ಲಿ ನೋಡಿರೂ ನೀರು. ಈ ಟೀವಿ ಹೇಳಿದ್ಡೇ ವರ್ತಮಾನ. ಮೊಬೈಲು ಕೆಲಸ ಮಾಡುತ್ತಿಲ್ಲೆ, ಫೋನು ಕೆಲಸ ಮಾಡುತ್ತಿಲ್ಲೆ. ಇಂಟರ್ನೆಟ್ಟು ಕೆಲಸ ಮಾಡುತ್ತಿಲ್ಲೆ. ಆರೊಬ್ಬನನ್ನೂ ಸಂಪರ್ಕುಸಲೆ ಎಡಿಗಾವುತ್ತಿಲ್ಲೆ. ಪೇಟೆಯ ಆಚೊಡಿಲಿ ಇಪ್ಪ ನೆಂಟಿರಿಷ್ಟರ ಬಿಡಿ ಆಚ ಮಾರ್ಗಲ್ಲಿಪ್ಪೋನ ಬಿಡಿ ಇದೇ ಮಾರ್ಗದ ಆಚ ಕೊಡಿಲಿ ಇಪ್ಪವನನ್ನೂ ಸಂಪರ್ಕ ಮಾಡಿಕ್ಕುಲೆ ಎಡಿಯ. ಎರ್ಕು ನೀರು ತಗ್ಗದ್ದ ಕಾರಣ ಎಲ್ಲಿಗೆ ಹೋತಿಕ್ಕಲೂ ಎಡಿತ್ತಿಲ್ಲೆ. ಮಾರ್ಗಲ್ಲಿ ಬೈಕು ಕಾರು ಏವುದೇ ವಾಹನ ಕೊಂಡೋಪಾಂಗೆ ಇಲ್ಲೆ. ಕೊಂಡೋದರೆ ಎರ್ಕು ನೀರಿಲ್ಲಿ ಎಲ್ಲಿಯಾರು ಬಾಕಿ ಆದರೆ! ಕೆಲವು ದಿಕ್ಕೆ ಮೊಳಪ್ಪಿನೊರೊಗೆ ಎರ್ಕು ನೀರಾದರೆ ಇನ್ನು ಕೆಲವು ದಿಕ್ಕೆ ಸೊಂಟಂದ ಎತ್ತರಕ್ಕೆ ನೀರು ಎರ್ಕಿಯೊಂಡಿದ್ದು. ಒಟ್ಟಾರೆ ಅಂದ್ರಾಣ ದಿನವೂ ಮನೆಲಿ ಅಂತೇ ಹಾಳುಬಿದ್ದದು ಬಂತು. ಅದರೆಡಕ್ಕಿಲಿ ತೆಮಿಳುನಾಡಿನ ದೇವತೆ ಜಯಮ್ಮ ವೈಮಾನಿಕ ಸಮೀಕ್ಷೆ ಮಾಡಿತ್ತಡ!, ಜೆನರ ಕಣ್ಣೆದಿರಿಂಗೆ ದರ್ಬಾರಿನ ಒತ್ತೆ ಒಬ್ಬ° ಕಂಡಾಂಗೆ ಇಲ್ಲೆ. ಪ್ರಧಾನ ಮಂತ್ರಿ ಮೋದಿಯಜ್ಜನೂ ಬಂದು ನೋಡಿಕ್ಕಿ ಅಲ್ಲಿಂದಲೇ ಮದಲಾಣ 940ಕೋಟಿಯ ಹೊರತಾಗಿ ಮತ್ತೂ 1000ಕೋಟಿ ನಿಧಿ ಸಕಾಯ ಘೋಷಿಸಿದ! ಸಾಲದ್ದರೆ ನೋಡಿಕ್ಕಿ ಮತ್ತೂ ಕೋಡುವ ಭರವಸೆಯನ್ನೂ ಕೊಟ್ಟ°. ಅದರ ಹೊಟ್ಟೆ ತುಂಬಿತ್ತೋ ಗೊಂತಿಲ್ಲೆ…ಕರ್ನಾಟಕದ ಐದು ಕೋಟಿ ಸಕಾಯ ತೆಕ್ಕೊಂಬಲೆ ನಾಮೋಸು ಬಿಟ್ಟತ್ತಿಲ್ಲೆ ಮರಾಯ್ತಿಗೆ! ಇನ್ನೀ ಕೋಟಿ ಎಲ್ಲಿಯೆಲ್ಲ ಹೋಗಿ ತುಂಬುತ್ತೋ ಭಗವಂತಂಗೇ ಗೊಂತು! ಅದರೆಡಕ್ಕಿಲ್ಲಿ ಬಾಕಿ ಕರಿಕನ್ನಡಕದೋರ ಟಿವಿಲಿ, ನೇರಲ್ಲಿ ಮಾತಿನ ಸಾಂತ್ವನ, ಆರೋಪ, ಚೀತ್ಕಾರ ಈ ಹಶುಹೊಟ್ಟೆ ಜೆನಂಗಳ ಒಂದರಿ ಮರ್ಳುಮಾಡಿ ಹಶು ಆಸರ ಅಡಗಿಸಿತ್ತು! ಆದರೆ ಇದರಲ್ಲಿ ಆದ ಸಾವುನೋವುಗಳ ನಿಜ ಚಿತ್ರಣ ಅವರವರ ಮನೆಯವಕ್ಕೇ ಗೊಂತು! ಹೆರಾಂಗೆ ಅದರ ಗೊಂತುಮಾಡಿರೆ……ರಾಜಕೀಯ ಗುಟ್ಟು ನವಗರಡಿಯ ಹೇಳ್ತ ಲೆಕ್ಕ!

ಇಡೀ ಹಗಲು ಇರುಳು ಒಂದಿನ ಸೊರುದ ಮಳಗೆ ಇಡೀ ಚೆನ್ನೈ ಹಲವು ದ್ವೀಪಂಗಳಾಂಗಿ, ಕಸ್ತಲೆಲಿ ಎರಡು ಮೂರು ದಿನ ಕಳದತ್ತು. ಜನಂಗೊ ಎಲ್ಲೆಲ್ಲಿ ಹೇಂಗೆ ಇದ್ದವೋ ಅಲ್ಲಲ್ಲಿಯೇ ಬಾಕಿ ಇದ್ದವು ನಾಕನೇ ದಿನವೂ. ಕೆಲಾವು ದಿಕ್ಕೆ ಕರೆಂಟಿದ್ದರೆ ಹಲವು ದಿಕ್ಕೆ ಇಲ್ಲೆ. 95% ಕಡೆ ನೆಟ್ವರ್ಕ್ ಇಲ್ಲೆ, ದೂರವಾಣಿ ಇಲ್ಲೆ. ಸಂಪರ್ಕವೂ ಇಲ್ಲೆ. ಸಂಚಾರ ವ್ಯವಸ್ಥೆಯೂ ಇಲ್ಲೆ. ಜೆನಂಗೊ ಸ್ವಸ್ಥಾನಕ್ಕೆ ಸೇರಿರೆ ಅಲ್ಲದ ನಿತ್ಯಾಣ ಸಂಚಾರ ವೊಯಿವಾಟು ಕಾರ್ಯಂಗೊ ಸುರುವಪ್ಪದು!

ಅದರೆಡಕ್ಕಿಲಿ ಬೈಲಿಲಿ ಮಾಷ್ಟ್ರುಮಾವನ ಮಗಳ ಮದುವೆ. ಮಾಷ್ಟ್ರುಮಾವನ ಸಣ್ಣಮಗ° ಮೂರುತಿಂಗಳ ಮದಲೆ ಓ ಇಂತ ದಿನ ಓ ಇಂತಲ್ಲಿ ಮದುವೆ ಹೇದು ಶುದ್ದಿ ಹೇಳಿಪ್ಪಗಳೇ ಟಿಕೇಟು ಮಾಡಿ ಮಡಿಗಿದ್ದು ಈಗ ಮೂರು ದಿನ ಮದಲೆ ಟಿಕೇಟು ರದ್ದು ಮಾಡೇಕ್ಕಾದ ಪರಿಸ್ಥಿತಿಗೆ ಬಂದದು ಚೆನ್ನೈಭಾವಂಗೆ ಬೇಜಾರಾದ್ದು. ಆದರೆ ಮಾತೃವಿಯೋಗಂದ ಬಾಧಿತರಾದ ಬಾಲಣ್ಣಂಗೆ ಅಬ್ಬೆಯ ಮುಂದಾಣ ಸದ್ಗತಿ ಕಾರ್ಯಕ್ಕಾದರೂ ಹೋಗ್ಯೊಂಬಲೆ ಎಡಿತ್ತೋ ಇಲ್ಯೋ ಹೇಳ್ವ ಸಂಕಷ್ಟ ಎಷ್ಟಿರೆಡ!. ದೊಡ್ಡ ಆಸುಪತ್ರೆಲಿ ರೋಗಿಗಳ ಎಡ್ಮಿಟ್ ಮಾಡಿದ ಬಂಧುಗಳ ಬವಣೆ ಎಷ್ಟು ಆಗಿರ!  ಆಸುಪತ್ರೆಲಿ ಜೀವ ಒಳಿಶುಲೆ ಇಪ್ಪ ಉಪಕರಣಂಗೊ ಎಲ್ಲ ನೀರಿಲಿ ಮುಳುಗಿ ಜೀವನ್ಮರಣಲ್ಲಿಪ್ಪವರ ಒಳಿಶುಲೆ ಎಡಿಗಾಗದ್ದೆ ಜೀವ ಬಿಟ್ಟವು ಎಷ್ಟು ಜನವೋ? ಆರ ಒಳಿಶುದು? ಎಲ್ಲಿ ಒಳಿಶುದು? ಹೇಂಗೆ ಒಳಿಶುದು? ಅಲ್ಲಿ ಮುಕ್ತಿ ಪಡದವರ ಎತ್ತುಸೆಕ್ಕಾದಲ್ಯಂಗೆ ಎತ್ತುಸಲೆ ಇನ್ನೆಂತ ದಾರಿ ಹೇದು ಪರಿತಪಿಸ್ಯೊಂಡವು ಎಷ್ಟಿರ!

ಒಟ್ಟಿಲ್ಲಿ ನವಗಿಲ್ಲಿ ನಾಲ್ಕೈದು ದಿನ ಭಾರತ ದೇಶೇ ಚೆನ್ನೈ ದ್ವೀಪೇ ಆಯ್ದು ಹೇಳ್ತದು ನಿಜ ಚಿತ್ರಣ. ಈ ದ್ವೀಪ ಇನ್ನೂ ಎಟ್ಟು ದಿನಕ್ಕೆ ಮುಂದುವರಿತ್ತೋ ಹೇಳ್ವದು ಇನ್ನೂ ಕಾದು ನೋಡೆಕ್ಕಷ್ಟೆ. ಹೀಂಗಪ್ಪಲೆ ಕಾರಣ ಎಂತ?!! ಎಲ್ಲರಿಂಗೂ ಗೊಂತಿಪ್ಪದೇ – ಪೇಟೆ ಬೆಳದ್ದದು. ಬೆಳಶುವಾಗ ಹೇಂಗೆ ಬೆಳೆಶೆಕೊ ಹಾಂಗೆ ಬೆಳೆಶದ್ದೆ ಗೋಶುಬಾರಿ ಬೆಳವಲೆ ಬಿಟ್ಟದು!

ಜಲಪ್ರವಾಹ ಸುರುವಾಗಿ ಐದನೇ ದಿನಕ್ಕೆ ಕಾಲುಮಡಿಗಿತ್ತು. ಇನ್ನೂ ಹರಿವ ನೀರು ನಿಂದಿದಿಲ್ಲೆ, ಎರ್ಕು ನೀರು ಬತ್ತುತ್ತೂ ಇಲ್ಲೆ. ಇನ್ನು ನೀರಿನ ರೋಗಂಗ ಸುರು ಅಪ್ಪಗ ಅದರ ತಡಕ್ಕೊಂಬ ವೆವಸ್ತೆಗೊ ಎಲ್ಲ ಹೇಂಗೆ ಅಕ್ಕೋ? ಆ ಮೇಲೆ ಕೂದ ಭಗವಂತನೇ ಹೇಳೆಕ್ಕಟ್ಟೇ. ಅದರೆಡಕ್ಕಿಲ್ಲಿ ಹೇಳುಸ್ಸು ಕೇಳ್ತು ಇನ್ನೂ ಒಂದೆರಡು ದಿನಕ್ಕೆ ಮಳೆ ಮುಂದುವರಿತ್ತು. ರಜಾ ನೀರೊಕ್ಕಿದ ಮನೆಗಳಲ್ಲಿ ಉಡಿಗಿ ಉದ್ದಿ ಮಾಡಿರು ಮನೆಯೊಳವೇ ಒಸರು ಬತ್ತಾ ಇದ್ದು!. ಮನೆಯೊಳವೆ ನೀರು ತುಂಬುತ್ತ ಇದ್ದು. ಒಟ್ಟಿಲ್ಲಿ ಇನ್ನೀಗ ಮಳೆ ಪೂರ ಬಿರಿಯದ್ದೆ, ಎರ್ಕು ನೀರು ಜಗ್ಗದ್ದೆ, ಬಿಡಾರ ಗುಡಾರಲ್ಲಿಪ್ಪೋರು ಅವರವರ ಮನೆ ಸೇರಿ ಕೆಲಸಕ್ಕೆ ಬಾರದ್ದೆ ಏವ ಕೆಲಸವೂ ಮುಂದೋಗ. ಅದಕ್ಕಿನ್ನು ಎಟ್ಟು ದಿನ ಕಾಯೆಕ್ಕೊ ಕಾದೇ ಆಯೇಕ್ಕಷ್ಟೇ.

ಪ್ರಕೃತಿಯ ಮೀರಿ ಹೋಪದು ಹೇಳಿದರೆ ಅಬ್ಬೆಯ ಮೀರಿ ಹೋದ ಹಾಂಗೆ. ನೀರಿನ ಜಾಗೆ ನೀರಿಂಗೇ. ಪ್ರಾಣಿಗಳ ಜಾಗೆ ಪ್ರಾಣಿಗೊಕ್ಕೇ! ಹೇಂಗೆ ಪ್ರಾಣಿಗೊಕ್ಕೆ ಅವರ ಪರಿಸರದ ಉದ್ದ ಅಳತೆಯ ಆರೂ ಹೇಳಿ ಕೊಡೆಡದಾ, ಹಾಂಗೆ ನೀರಿಂಗೂ ಅದರ ಜಾಗೆ ಅರಡಿಗು. ಕೆರೆ ಇಪ್ಪಲ್ಲಿ ಮನೆ ಕಟ್ಟಿದರೆ ನೀರು ಬಂದಪ್ಪಗ ಆ ಜಾಗೆಯನ್ನೇ ಅದು ಹುಡ್ಕುಗು. ಅದರ ವ್ಯಾಪ್ತಿ ಅದು. ಇನ್ನೊಬ್ಬನ ಜಾಗೆಯ ಆಕ್ರಮಣ ಮಾಡಿದರೆ ಅಪಾಯ ಯಾವಾಗಳೂ ಕಟ್ಟಿಮಡಿಗಿದ್ದದೇ!
ವಿಧಿಯ ಆಟಲ್ಲಿ ಎಲ್ಲೋರೂ ಪಾತ್ರಧಾರಿಗಳೇ! ಸಮಯ ಸಂದರ್ಭಂಗ ಬೇರೆ ಬೇರೆ ಆದಿಕ್ಕು. ಎಲ್ಲೋರಿಂಗೂ ಅದರ ಪಾಲು ಸಿಕ್ಕುತ್ತು. ಇಂದು ಚೆನ್ನೈ ದ್ವೀಪ ಆಯಿದು. ಮುಂದೆ ನಮ್ಮ ಜಾಗ್ರತೆ ನಾವು ಮಾಡಿಗೊಳ್ಳೆಕ್ಕು.

~~
ಪಟ: ಅಂತರ್ಜಾಲಂದ

8 thoughts on “ಭಾರತ ದೇಶೇ ಚೆನ್ನೈ ದ್ವೀಪೇ..

  1. ಓಹ್, ವಿಷಯಂಗಳ ಕೇಳಿ, ಫೊಟೋಂಗಳ ನೋಡಿ ಮೈಲಿ ಚಳಿ ಕೂದತ್ತು. ಪ್ರಕೃತಿಗೆ ಕೋಪ ಬಂದರೆ ನಮ್ಮ ಕೈಲಿ ಎಂತ ಇದ್ದು. ದೇವರೇ ಕಾಪಾಡೆಕಷ್ಟೆ. ಚೆನ್ನೈ ಭಾವನ ಹಾಂಗೆ ಚೆನ್ನೈಲಿಪ್ಪವರ ಕಷ್ಟ ಕಂಡು ತುಂಬಾ ಬೇಜಾರಾತು. ನಮ್ಮೂರಿಲ್ಲಿ ಹೀಂಗಾದರೆ ಹೇಳಿಯುದೆ ಅನಿಸಿತ್ತು. ಯಬ್ಬಾ.

  2. ಈ ಫೊಟೋಂಗಳನ್ನೂ ವಿಷಯಂಗಳನ್ನೂ ನೋಡಿ ಬೇಜಾರಾತು. ಎಷ್ಟು ಜಲದ್ರೋಣಿ ನೀರಿದ್ದರೆಂತ ಗುಣ ?!. ಕುಡಿವಲೆ ಒಂದುತೊಟ್ಟು ಸರಿಯಾದ ನೀರಿಲ್ಲದ್ರೆ! ಪೇಪರಿಲ್ಲಿ ಚೆನ್ನೈ ಶುದ್ದಿ ನೋಡುವಾಗ ಚೆನ್ನೈ ಭಾವನನ್ನೇ ನೆಂಪಾಗೆಂಡಿತ್ತು. ಸದ್ಯ ಸೌಕ್ಯಲ್ಲಿ ಇರಲಿಯಪ್ಪಾ ಹೇಳಿ ಪ್ರಾರ್ಥಿಸಿತ್ತಿದ್ದೆ.

  3. “ವಿಧಿಯ ಆಟಲ್ಲಿ ಎಲ್ಲೋರೂ ಪಾತ್ರಧಾರಿಗಳೇ! ಸಮಯ ಸಂದರ್ಭಂಗ ಬೇರೆ ಬೇರೆ ಆದಿಕ್ಕು. ಎಲ್ಲೋರಿಂಗೂ ಅದರ ಪಾಲು ಸಿಕ್ಕುತ್ತು..” ಸತ್ಯ ಮಾತು ಭಾವ..ವಿಷಯ ಗೊಂತಿಪ್ಪದೆ.. ಆದರೆ ಮನುಷ್ಯಂಗೆ ಇದು ನೆಂಪಪ್ಪದು ತನ್ನ ಕಷ್ಟ ಕಾಲಲ್ಲಿ ಮಾತ್ರ ಹೇಳುವ ಸತ್ಯ ಒಂದು ವಿಡಂಬನೆಯೇ..” ಮರೆದೆನಭ್ಯುದಯದಲಿ ನಿನ್ನನು,ಮರೆಯೆನಾಪತ್ತಿನಲಿ;ಹರಿ ಎಂದೊರಲುವೆನು ,ಮನವೇಕಭಾವದೊಳಿಲ್ಲ ನಿನ್ನಡಿಯ..” ವಿವರಣೆಂದಲೂ,ವಿಶ್ಲೇಷಣೆ ಆಲೋಚನಾಪೂರಿತ..ಧನ್ಯವಾದಂಗೊ..

  4. ಚೆನ್ನೈ ಭಾವ
    ತುಂಬಿ ದಿನಂದ ವಾಟ್ಸೇಪ್ ಲಿ ಕಾಣದ್ದೆಷ್ಟೋ ಗಾಬರಿ ಇತ್ತು ಮನಸ್ಸಿಗೆ.
    ನಿಂಗೊ ಕಳುಸಿದ ಲಿಂಕ್ ಸಮಾಧಾನ ಕೊಟ್ಟತ್ತು
    ದೇವರು ಒಳ್ಳೆಯದು ಮಾಡಲಿ

  5. ಚೆನ್ನೈ ಭಾವಾ,
    ಬದುಕ್ಕಿನ ಪುನಾ ಕಟ್ಟಿಕೊಡ್ತ ದೇವರಿಂಗೆ ಶರಣು..
    ಇಂದು ಪೆರಡಾಲ ದೇವಸ್ಥಾನಲ್ಲಿ ಈ ಬಗ್ಗೆ ಪ್ರಾರ್ಥನೆ ಮಾಡಿ ಬಂದೆ.
    ಎಲ್ಲೋರಿಂಗೂ ಒಳ್ಳೆದಾಗಲಿ ದೇವರೆ….

    ನಿಂಗಳದ್ದು ದೊಡ್ಡ ಅನುಭವ…
    ಶರಣು ಶರಣು…

  6. ಚೆನ್ನೈ ಭಾವನ ಈ ನೈಜ ಕಥೆ ಓದಿಯಪ್ಪಗ ,ಮನಸ್ಸಿಲಿ ಆ ಭೀಕರ ಸನ್ನಿವೇಶವ ಕಲ್ಪುಸಲೇ ಹೆದರಿಕೆ ಆವ್ತು .

    ಆ ದಿನಂಗಳ ಅಲ್ಲಿಪ್ಪೋರು ಹೆಂಗೆ ನೂಕಿದವೋ ,ಎಷ್ಟು ಜೆನ ಪ್ರಾಣ ಕಳಕ್ಕೊಂದವೋ , ಮಕ್ಕೊ,, ಅಜ್ಜಂದಿರು ಬಸರಿಯಕ್ಕೋ ಚೇ ಛೆ

    ಊಹಿಸಲು ಎಡಿಯ ಭಾವ ,

    ( ಈ ಶುದ್ದಿಯ ನಿಮಗೋ ನಮ್ಮ ಬೈಲಿಂಗೆ ಮುಟ್ಟುಸಿದ್ದದು ಹೆಂಗೆ ಹೇಳುತ್ತದು ಒಂದು ಚೋದ್ಯ )

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×