ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   09/07/2016    11 ಒಪ್ಪಂಗೊ

ಹೇಂ…ಇದೆಂತ ತಲೆಬರಹಪ್ಪಾ? ಹೇಳಿ ಜಾನ್ಸಿದಿರೋ? ಮುಂದೆ ಓದಿ ಗೊಂತಾವುತ್ತು.

ಆನಿಪ್ಪದು ಕಾಸರಗೋಡಿಲ್ಲಿ ಅಲ್ಲದೋ? ಯೇವಾಗ ಈ ಚಂದ್ರಗಿರಿ ನಾಡು ದೈವತ್ತಿಂಡೆ ಸ್ವಂದ ನಾಡಿಂಗೆ (ದೇವರ ಸ್ವಂತನಾಡು) ಸೇರಿಹೋಯಿದೋ ಆ ಲಾಗಾಯ್ತಿಂದ ಇಲ್ಲಿ “ಕನ್ನಡದ ಕೊಲೆ”, “ಕನ್ನಡಕ್ಕೆ ಮಲತಾಯಿ ಧೋರಣೆ”, “ಕನ್ನಡವೇ ಸತ್ಯ, ಕನ್ನಡವೇ ನಿತ್ಯ”, “ಮಲೆಯಾಳೀಕರಣಕ್ಕೆ ಧಿಕ್ಕಾರ…” ಹೇಳಿಯೆಲ್ಲಾ ತನು ಮನ ಧನಗಳಿಂದ ಎಂಗಳ ಊರಿನ ಕನ್ನಡಿಗರು ಹೋರಾಟ ಸುರುಮಾಡಿತ್ತಿದ್ದವು. ಅದು ಇಂದಿಂಗೆವರೆಂಗೂ ಮುಂದುವರುಕ್ಕೊಂಡೇ ಬಯಿಂದು ಹೇಳಿ ನಿಂಗೋಗೂ ಎಲ್ಲ ಗೊಂತಿಪ್ಪ ವಿಷಯವೇ. ಆದರೆ ಇಲ್ಲಿ ಒಳುದ್ದದು ಮಾಂತ್ರ ನಿತ್ಯಕ್ಕೂ ಸತ್ಯಕ್ಕೂ ಮಲೆಯಾಳವೇ. ಪಾಪದ ಕನ್ನಡ ಬಾಷೆ ಮಲೆಯಾಳೀ ಬಾಷೆಯ ದಬ್ಬಾಳಿಕೆಗೆ ಹೆದರಿ ಗಡ ಗಡ ನೆಡುಗಿ ಆತ್ಮಹತ್ಯೆಯವರೆಂಗೂ ಹೋದ್ದದಿದ್ದು. ಮೊನ್ನೆ ಹೀಂಗೊಂದು ಘಟನೆ ಆತು. ಅಂಬಗ ನಿಂಗೋಗೂ ಆನು ಹೇಳಿದ್ದು ಸತ್ಯ ಹೇಳಿ ತೋರುಗು.

ಎನ್ನ ಸಂಬಂಧಿಕ, ಒಬ್ಬ ತಮ್ಮ ಎನಗೆ ಫೋನು ಮಾಡಿ ಕೇಳಿದ “ಶೀಲಕ್ಕಾ, ಎಂಗಳಲ್ಲಿಗೆ ಯಾವಾಗ ಬತ್ತೆ? ಎಂಗಳಲ್ಲಿ ಮುಗಿಶಿಕ್ಕೇ ಬೇರೆ ಮನೆಗೆ ಹೋಗು ಮಿನಿಯಾ°?” ಹೇಳಿಯಪ್ಪಗ ಆನು ರಜ್ಜ ಹೊತ್ತು ಗೆಬ್ಬಾಯ್ಸಿ ಹೋದೆ. ಇದೆಂತ ಕಥೆಯಪ್ಪಾ, ಇಂವ ಎಂತಕೆ ಹೀಂಗೆ ಹೇಳ್ತಾ ಇದ್ದ°? ಇಂವನಲ್ಲಿ ಜೆಂಬಾರ ಇಪ್ಪ ಶುದ್ಧಿ ಎಂತ ಗೊಂತಾಗಿತ್ತಿದ್ದಿಲ್ಲೆ. ಅಲ್ಲದ್ರೂ ಜೆಂಬಾರಕ್ಕೆ ಹೀಂಗೂ ಹೇಳಿಕೆ ಹೇಳುವ ಕ್ರಮ ಇದ್ದೋ ಹೇಳಿಯೆಲ್ಲ ಜಾನ್ಸಿಯೋಂಡೆ. ಎನ್ನ ಮೌನ ನೋಡಿಯಪ್ಪಗ ಅವಂಗೆ ಅಂದಾಜಾತು, ಅಂವ ಹೇಳ್ತದ್ರ ಪಿಡಿ ಎನಗೆ ಸಿಕ್ಕಿದ್ದಿಲ್ಲೆ ಹೇಳಿ.

“ಶೀಲಕ್ಕಾ, ಇದಾ ಮುನ್ಸಿಪಾಲಿಟಿಯವು ಇಲ್ಲೆಲ್ಲಾ ಬಂದು ನೋಟೀಸು ಕೊಟ್ಟಿಕ್ಕಿ ಹೋಯಿದವು. ನಿಂಗೊಗೆ ಎತ್ತೇಕಷ್ಟೆಯಾಯಿಕ್ಕು. ಇನ್ನು ನಾವೆಲ್ಲಾ ಹಲಸಿನಕಾಯಿ ತಿಂಬಲಾಗ ಹೇಳಿಯೂ ಆಜ್ಞೆ ಆಯಿದು, ನೀರು ನಿಂದೊಂಡಿದ್ದೋ….ಮನೆಯ ಸುತ್ತ ಗಲೀಜಿದ್ದೋ ಹೇಳಿ ನೋಡ್ಳೆ ತನಿಖೆಗೆ ಬಪ್ಪಲೂ ಸಾಕು…,. ಕಾಯಿ ಸೊಳೆ ದೋಸೆ ಮಾಡ್ಲೆ ಹೆರಟಿದಿಲ್ಲೇನ್ನೆ…, ಆನು ವಾಟ್ಸಾಪ್ಪ್ ಮಾಡ್ತೆ, ವಿವರ ನೋಡಿಯೋಳಿ” ನೆಗೆ ಮಾಡಿಯೊಂಡೇ ಒಗಟಿನ ಹಾಂಗೆ ಹೇಳಿಕ್ಕಿ ಫೋನು ಮಡುಗಿದ°. ಎನಗೆ ಒಟ್ಟಾರೆ ಅಯ್ಯನ ಮಂಡೆ ಹೇಳಿ ಆತು. ಒಂದು ಸರ್ತಿ ಹೇಳಿದ°, ಎಂಗಳ ಮನೆಗೆ ಬನ್ನಿ ಹೇಳಿ. ಈಗ ಹೇಳ್ತ°, ಹಲಸಿನ ಕಾಯಿ ತಿನ್ನೇಡಿ ಹೇಳಿ…., ಹಾಸ್ಟೆಲಿಲ್ಲಿಪ್ಪ ಮಗಳು ಕಸ್ತಲೆಗೆ ಬತ್ತು ಹೇಳಿ ಕಾಯಿ ಸೊಳೆ ದೋಸೆಗೆ ಅಕ್ಕಿ ಹಾಕಿ ಮಾಡುಗಿತ್ತಿದ್ದೆ. ಹಲಸಿನ ಕಾಯಿ ಕೊರದು ಸಜ್ಜಿ ಮಾಡಿಯೂ ಆಯಿದು. ರಚ್ಚೆಯೆಲ್ಲ ಗೇಟಿನ ಬುಡಕ್ಕೆ ಬಪ್ಪ ದನಕ್ಕೆ ಹಾಕಿಯೂ ಆಯಿದು. ಇವ° ಹೇಳ್ತು ಕೇಳೀರೆ ಆನೆಂತೋ ದೊಡ್ಡ ತಪ್ಪೇ ಮಾಡಿದ್ದೆ ಹೇಳಿ ಆತಂಬಗ. ಎಂತದಕ್ಕೂ ಇವ° ಕಳ್ಸಿದ ಮೆಸೇಜು ನೋಡುವೋ° ಹೇಳಿ ಫೋನು ತೆಗೆದೆ. ಅದರಲ್ಲಿ ಬರೆದ್ದರ ನಿಂಗಳೂ ಓದಿಯೋಳಿ,

`….ಡೆಂಗೂ, ಮಲೇರಿಯಾ, ಟೈಫಾಯಿಡ್ ಪ್ರಸರಣದ ವಿರುದ್ಧ ಹೋರಾಡಬೇಕು. ನಿಮ್ಮೆಲ್ಲರ ಸಹಕರಣ ಬೇಕು. ಮಳೆನೀರು ಹರಿದು ಹೋಗುವುದು, ಕಟ್ಟಿ ನಿಲ್ಲುವುದು ನಿರ್ಬಂಧ ಮಾಡಬೇಕು. ಮಳೆನೀರನ್ನು ಸಂಗ್ರಹಿಸುವುದು ಶೀಲ(ಮಲೆಯಾಳಲ್ಲಿ `ಶೀಲ’ ಹೇಳಿರೆ ಅಭ್ಯಾಸ) ಮಾಡಬೇಕು. ಹಲಸಿನ ಆಹಾರ ತಿನ್ನಬಾರದು…..’ ಇತ್ಯಾದಿ ಬರಕ್ಕೊಂಡಿತ್ತಿದ್ದು. ನೋಟೀಸಿನ ಪಟ ತೆಗದು ಕಳ್ಸಿದ ಅವನತ್ರೇ ಕೇಳಿದೆ,

ಅಪ್ಪೋ ತಮ್ಮಾ, ಇವಕ್ಕೀಗ ಹಲಸಿನ ಕಾಯಿ ಮೇಗೆ ಎಂತಕಾಡ ಕಣ್ಣು? ಪೇಟೇಲಿ ರಾಶಿ ರಾಶಿ ಪ್ಲೇಸ್ಟಿಕ್ಕು ಹೊಡಚ್ಚುತ್ತಾ ಇದ್ದು…,ಮೀನು, ಮಾಂಸ ತಿಂದು ಒಳುದ್ದರ ಗೋಣೀಲಿ ಕಟ್ಟಿ ದಾರಿ ದಾರಿ ಇಡ್ಕುತ್ತವು…,ಮದಾಲು ಅದಕ್ಕೊಂದು ವಿಲೇವಾರಿ ಮಾಡ್ಲಿ, ಮತ್ತೆ ಹಲಸಿನ ಕಾಯನ್ನೋ ಮಾವಿನ ಕಾಯನ್ನೋ ದೂರ್ಲಿ…”ಹೇಳಿದೆ. ಅಂಬಗ ಅವ° ಹೇಳಿದ,

“ಮಳೆಕಾಲಲ್ಲಿ ಎಂತಾರೂ ಮಾಡೇಕನ್ನೇ ಹೇದು ಏನಕ್ಕೇನಾರು ಮಾಡದ್ರೆ ಅದು ಗೌರ್ಮೆಂಟು ಆವುತ್ತದು ಹೇಂಗೆ ಶೀಲಕ್ಕೋ? ಅದಿರಳಿ, ಈಗ ನಿಂಗೊಗೊಂದು ಖಾಯಾಂ ಕೆಲಸ ಆತು…ಇನ್ನು ನಿಂಗೊಗೆ ಮಳೆನೀರು ಸಂಗ್ರಹಣೆಯ ಪೆಶಲಿಶ್ಟು ಹೇಳಿ ಬಿರುದು ಸಿಕ್ಕುಗೋ ಹೇಂಗೆ?” ಹೇಳಿ ನೆಗೆ ಮಾಡಿದ.

“ಅಯ್ಯೋ ಮಾರಾಯಾ, ಪ್ರತಿಯೊಬ್ಬನೂ ಅವರವರ ಮನೆಲಿ ಹರಿದು ಹೋಪ ನೀರಿನ ಸಂಗ್ರಹಿಸುತ್ತ ಅಭ್ಯಾಸ ಮಾಡೇಕು ಹೇಳ್ತದ್ರ ಆ ನಮೂನೆಯೂ ಬರೆವಲಿದ್ದೋ…?” ಹೇಳಿ ಆನೂ ನೆಗೆ ಮಾಡಿದೆ.

ಅವ°ನತ್ರೆ ತಮಾಶೆ ಮಾತಾಡಿರೂ ಒಳಾಂದವೇ ಪುಕು ಪುಕು ಅಪ್ಪಲೆ ಸುರುವಾತು. ಸೀತಾ ಗೇಟಿನತ್ರೆ ಹೋಗಿ ನೋಡಿದೆ, ಹಲಸಿನ ರಚ್ಚೆ ಎಂತಾರೂ ಅಲ್ಲಿ ಬಾಕಿ ಇದ್ದೋ ಹೇದು. ಮುನ್ಸಿಪಾಲಿಟಿಯವು ಯೇವ ಹೊತ್ತಿಂಗೆ ಬೇಕಾರೂ ತನಿಖೆ ಮಾಡ್ಲೆ ಬಪ್ಪಲಕ್ಕನ್ನೇ? ದನಗೊ ತಿಂದು ಒಳುದ ರಚ್ಚೆಯ ಉಡುಗಿ (ಆನು ಮಾರ್ಗದ ಕರೆ ಉಡುಗುತ್ತದ್ರದ ನೋಡಿದ ದಾರಿಲಿ ಹೋವುತ್ತವು ಜಾನ್ಸಿದವೋ ಏನೋ “ಓ, ಇದಕ್ಕೆ ಯಾವಾಗಪ್ಪ ಜಾಡಮಾಲಿ ಕೆಲಸ ಸಿಕ್ಕಿದ್ದು” ಹೇಳಿ. ಎಂತ ಬೇಕಾರು ಜಾನ್ಸಲಿ, ಆನು ಕಾನೂನು ಮೀರಿ ಹೋಯಿದೆ ಹೇಳಿ ಆಗದ್ರೆ ಆತು) ಉಡುಗಿ ತನಿಖೆಗೆ ಬಪ್ಪವಕ್ಕೆ ಹಸೆ ಹಾಕಿ ಮನುಗಲೆ ಎಡಿಗಪ್ಪಷ್ಟು ಚೆಂದ ಮಾಡಿ ಬಿಟ್ಟೆ. ಇನ್ನು ಅವು ಮನೆಯೊಳ ಬಂದು ನೋಡಿರೋ°..? ರಗಾಳೆ ಬೇಡ ಹೇಳಿ ಕೊರದು ಮಡುಗಿದ ಎಲ್ಲಾ ಸೊಳೆಯನ್ನೂ ಹಾಕಿ ದೋಸೆಗೆ ಕಡದು ಮಡುಗಿದೆ. “ಇದಾರಿಂಗೆ ಇಷ್ಟು ತುಂಬ ಹಿಟ್ಟು?” ಹೇಳಿ ಇವು ಕೇಳಿದ್ದಕ್ಕೆ “ಎರಡು ದಿನಕ್ಕಾತು ಹೇಳಿ ಕಡದ್ದು…” ಹೇಳಿ ಒಂದು ಗುಂಡು ಹಾರ್ಸಿಬಿಟ್ಟೆ. (ಸತ್ಯ ಹೇಳಿರೆ ಎನ್ನನ್ನೇ ನೆಗೆ ಮಾಡುಗು) ಮಗಳು ಬಂದಪ್ಪದ್ದೆ ಅದರ ಕೂಬಲೆ ಹೇಳಿ ಬೇಗ ಬೇಗ ದೋಸೆ ಎರದು ಕೊಟ್ಟೆ. ಅಲ್ಲದ್ರೆ ಅದು ಬಂದು ಸುಮಾರು ಹೊತ್ತು ಕೋಲೇಜಿನ ವಿಷಯಂಗಳೆಲ್ಲ ಮಾತಾಡಿ ಆದಿಕ್ಕಿ ಆಸರಿಂಗೆ ಕುಡಿತ್ತ ಕ್ರಮ. ಎನ್ನ ಅಂಬ್ರೇಪ್ಪು ನೋಡಿ ಅದು ಕೇಳಿತ್ತು, “ಎಂತಮ್ಮ ಇಷ್ಟು ಗಡಿಬಿಡಿ..?”

ಅದರತ್ರೂ ಒಂದು ಬಡಾಯಿ ಬಿಟ್ಟೆ, “ಗ್ಯಾಸು ಮುಗಿವಲಾತು…ಬೇಗ ತಿನ್ನು…” ಅದು ಎನ್ನ ವಿಚಿತ್ರ ಪ್ರಾಣಿಯ ಹಾಂಗೆ ನೋಡ್ತದು ಕಂಡ್ರೂ ಕಾಣದ್ದ ಹಾಂಗೆ ದೋಸೆ ಎರಕ್ಕೊಂಡೇ ಹೋದೆ. ಮನೆಯವಕ್ಕೆಲ್ಲೋರಿಂಗೆ ದೋಸೆ ತಿಂದಾದ್ರೂ ಸುಮಾರು ಹಿಟ್ಟು ಬಾಕಿ ಆತು. ತನಿಖೆಗೆ ಬಂದ್ರೆ ಅವಕ್ಕೂ ದೋಸೆ ಎರದು ಕೊಟ್ರಾತು, ನಮ್ಮ ಸೊಳೆ ದೋಸೆ ತಿಂದ ಮಲೆಯಾಳಿಗೊ ಇನ್ನು ಈ ಜನ್ಮಲ್ಲಿ ಹಲಸಿನ ಆಹಾರ ತಿನ್ನೇಡಿ ಹೇಳವು ಹೇಳಿಯೆಲ್ಲಾ ಎನ್ನಷ್ಟಕೆ ಸಮಾಧಾನ ಮಾಡಿಯೊಂಡೆ.

ಅಂತೂ ಆ ದಿನ ಯೇವ ತೊಂದರೆಯೂ ಇಲ್ಲದ್ದೆ ಕಳುದತ್ತು. ಎಂಗೋ ಪೇಟೇಲಿ ಇಪ್ಪವು ಹೇಳಿ ಊರಿಲ್ಲಿಪ್ಪ ಸಂಬಂಧಿಕರೆಲ್ಲ ಹಲಸು ಮಾವು ಕಳ್ಸುತ್ತವಿದ. ಇನ್ನು ಅವಕ್ಕೆಲ್ಲ ಫೋನು ಮಾಡಿ ಕಳ್ಸೇಡಿ ಹೇಳೇಕಷ್ಟೆ…, ಕಾಶಿಗೆ ಹೋದವು ಇಷ್ಟದ ತಿನಸಿನ ಅಲ್ಲಿ ಬಿಟ್ಟಿಕ್ಕಿ ಬತ್ತವಾಡ. ಮತ್ತೆ ಇಲ್ಲಿ ಅದರ ಮುಟ್ಟಿಯೂ ನೋಡ್ಲೆ ಇಲ್ಲೆಯಾಡ. ಹಾಂಗೆ ಕಾಸರಗೋಡಿನ ಜೆನಂಗೋ ಇಲ್ಲಯಾಣ ಮುನ್ಸಿಪಾಲಿಟಿಗೆ ಬೇಕಾಗಿ ಹಲಸಿನಕಾಯಿ ಬಿಟ್ಟವಾಡ ಹೇಳಿ ನಾಳೆ ಪೇಪರಿಲ್ಲಿ ಬಕ್ಕೇನೋ… ಛೆ, ಇನ್ನು ಕಾಯಿಸೊಳೆ ದೋಸೆ ತಿನ್ನೇಕಾರೂ ಎಲ್ಲೆಲ್ಲಿಗೋ ಹೋಯೇಕು…, ಉಪ್ಪು ಸೊಳೆ ರೊಟ್ಟಿ, ಉಂಡ್ಳಕಾಳು….? ದೇವರೇ, ಗಾಯದ ಮೇಗಂಗೆ ಬರೆ ಹೇಳ್ತ ಹಾಂಗೆ ಕಾಸರಗೋಡು ಕೇರಳಕ್ಕೆ ಸೇರಿದ ಶಿಕ್ಷೆ ಸಾಲ ಹೇಳಿ ಈಗ ಇದೂದೆಯೋ…? ಅಂಬಗ ಡಯಾಬಿಟಿಸ್ ಇಪ್ಪವಕ್ಕೆ ಹಲಸಿನ ಕಾಯಿ ಅತ್ತ್ಯುತ್ತಮ ಆಹಾರ ಹೇಳಿ ಡಾ.ಬಿ.ಎಮ್.ಹೆಗ್ಡೆ ಹೇಳಿದ್ದು ಈ ಮಲೆಯಾಳಿಗೊಕ್ಕೆ ಎತ್ತಿದ್ದಿಲ್ಲ್ಯೋಪ್ಪ…? ಯೇಚನೆಗಳ ಭಾರಲ್ಲಿ ಇರುಳು ಒರಕ್ಕೇ ಬಾರ. ಮರು ದಿನ ಸುಮಾರು ಮಧ್ಯಾಂತಿರಿಗಿ ಅಪ್ಪಾಗ ಎನ್ನ ಫೋನಿಂಗೆ ಅದೇ ತಮ್ಮನ ಮೆಸೇಜು ಬಂತು. ತೆಗದು ನೋಡಿದೆ,

ಕಾಸರಗೋಡು ನಗರಸಭಾ ಹೇಳ್ತ ತಲೆಬರಹ ಕಂಡತ್ತು. ಪುನಃ ಒಂದು ನೋಟೀಸಿನ ಪಟ ತೆಗದು ಕಳ್ಸಿತ್ತಿದ್ದ. ಓದಿದೆ, “ಸ್ಪಷ್ಟನೆ: ಹಲಸು ಆಹಾರಗಳನ್ನು ಉಪಯೋಗಿಸಬಾರದು ಎಂಬುದನ್ನು ಹಳಸಿದ ಆಹಾರಗಳನ್ನು ಉಪಯೋಗಿಸಬಾರದು ಎಂದು ಓದಬೇಕು.” ನಿನ್ನೆ ಆನು ಎನ್ನ ಗೆಂಡನತ್ರೂ ಮಗಳತ್ರೂ ಸತ್ಯ ಸಂಗತಿ ಹೇಳದ್ದು ಎಷ್ಟು ಒಳ್ಳೇದಾತು ನೋಡಿ. ಆ ಸ್ಪಷ್ಟನೆ ಓದಿಯಪ್ಪದ್ದೆ ರಾಜಕುಮಾರನ ಪದ್ಯ ನೆನಪಾತು, “ನಗುವುದೋ ಅಳುವುದೋ ನೀವೇ ಹೇಳಿ…,
ಇರುವುದೋ ಬಿಡುವುದೋ ನೀವೇ ಹೇಳಿ…”

ಬೈಲಿನ ಪ್ರಿಯ ಓದುಗರೇ, ಈಗ ಹೇಳಿ, ಅಂಬಗ ಆನು ಮೇಲೆ ಬರೆದ ತಲೆಬರಹ ತಪ್ಪಲ್ಲನ್ನೇ?

11 thoughts on “ಕನ್ನಡ-ಗಡ ಗಡ

  1. ಕನ್ನಡದ ಕೊಲೆ ಆವ್ತಾ ಇಪ್ಪ ಯತಾರ್ಥವ ಸ್ವಾರಸ್ಯಕರವಾಗಿ ಬರದ ಶೀಲಾಲಕ್ಷ್ಮಿಗೆ ಧನ್ಯವಾದಂಗೊ

  2. ಬಹಳ ಲಾಯಿಕ ಆಯಿದು .ಛೇ ಇದರ ವಿಷು ವಿಶೇಷ ಸ್ಪರ್ಧಗೆ ಕಳ್ಸಿದ್ದಿದ್ದರೆ ಪ್ರಥಮ ಬಹುಮಾನವೇ ಬತ್ತಿತ್ತು. ಶೀಲಾ ಬತ್ತಳಿಕೆಲಿಪ್ಪ ಬಾಣಂಗೊ ಎಲ್ಲ ಒಂದೊಂದಾಗಿ ಹೆರ ಬರಲಿ ಆತ.

  3. ನಿವೇದಿತಾ, ನೆಗೆಯಷ್ಟೊಳ್ಳೆ ಟೋನಿಕ್ ಬೇರೆ ಯಾವುದಿದ್ದು ಹೇಳು? ಈ ಬರಹಂದಾಗಿ ನಿನಗೆ ಆ ಟೊನಿಕ್ ಸಿಕ್ಕಿದ್ದಕ್ಕೆ ಸಂತೋಷ ಆತು. `ಕರ್ನಾಡ ಎಂದಿನಾ…? ಮಲೆಯಾಳಂ ಸಂಸಾರಿಚ್ಚುಡೇ?’ (ಕನ್ನಡ ಎಂತಕೆ, ಮಲೆಯಾಳಂ ಮಾತ್ನಾಡಲಾಗದೋ) ಹೇಳುವವರೆಡೆಲಿ ನಮ್ಮ ಭಾಷೆಗೆಲ್ಲಿ ಬೆಲೆ?

  4. ಎನಗೆ ನೆಗೆ ಬಂದು ತಡೆಯ ಆತ್ಲೆಅಸ್ತ್ ಹಿಂಗಿಪ್ಪ ಪಬ್ಲಿಕ್ ನೋಟಿಸ್ ಕೊಡುವಾಗ ಲಂಗುಅಜ್ ವೆರಿಫಿಕೇಷನ್ ಮಾಡೆಕ್ಕು ಗಿವಿಂಗ್ ಸಂ ರೆಸ್ಪೆಕ್ಟ್ toKannada ಲಂಗುಅಜ್ ಅಂಡ್ culture

  5. ಭಾಷೆಯ ಕಗ್ಗೊಲೆ ಆವ್ತಾ ಇಪ್ಪದು ತುಂಬಾ ಬೇಜಾರಿನ ವಿಷಯ. ಅದನ್ನೇ ತೆಕ್ಕೊಂಡು ನಗೆಶುದ್ದಿಯ ಬರದ್ದು ಸೂಪರ್ ಆಯಿದು. ಹಲಸು ಹಳಸು ಪ್ರಯೋಗಲ್ಲೆ ನೆಗೆ ಬತ್ತು. ಕಡೆಂಗೆ ಕೊಟ್ಟ ಸ್ಪಷ್ಟನೆ ನೋಟೀಸು ಓದುವಲ್ಲಿ ವರೆಗೂ ಸಸ್ಪೆನ್ಸು ಸಸ್ಪೆನ್ಸಾಗಿ ಒಳುದ್ದು. ಲಾಯಕಾಗಿತ್ತು.
    ಬೈಲಿಂಗೆ ಹೀಂಗಿಪ್ಪ ಶುದ್ದಿ, ಕತೆಗೊ ಬತ್ತಾ ಇರಳಿ.

    1. ಧನ್ಯವಾದಂಗೊ ಗೋಪಾಲಣ್ಣ. ಬರೆವ ಪ್ರಯತ್ನ ಯಾವಾಗಲೂ ಜಾರಿಲಿರ್ತು.

  6. ಅಪ್ಪು. ನಿಂಗೊ ಇಬ್ಬರೂ ಹೇಳಿದ್ದು ಸರಿ.

  7. ಅಪ್ಪು ಕನ್ನಡದ ಕೊಲೆ ಎಲ್ಲೆಲ್ಲೂ ಆವುತ್ತಇದ್ದು. ಕನ್ನಡ ವಾರ್ತೆ ಓದುವ ಅಚ್ಚ ಕನ್ನಡಿಗರು ವಿಜ್ಞಾನಿ ಹೇಳುದಕ್ಕೆ ವಿಗ್ನಾನಿ ಹೇಳುತ್ತೋವು. ಹೇಳುವದು ಕನ್ನಡ ಉಳುಸಿ , ಅಪ್ಪದು ಕನ್ನಡ ಅಳಿಸಿ!!.

  8. ಕನ್ನಡದ ಕೊಲೆ ಎಲ್ಲೆಲ್ಲೂ ಆವುತ್ತಾ ಇದ್ದು

  9. ಅಪ್ಪು ಇಂದ್ರತ್ತೆ, ಎಂಗಳ ಊರಿಲ್ಲಿ ಮಳೆಯಾಳಿಗೊ ಕೊಲೆಯಾಳಿಗೊ (ಭಾಷೆಯ ಕೊಲೆ ಮಾಡುವ ಜೆನಂಗೊ) ಆಯಿದವು. ಬೆಂಗಳೂರಿಲ್ಲಿ ಆ ಕೆಲಸವ ಭಾಷೆ ಭೇದ ಇಲ್ಲದ್ದೆ ಎಲ್ಲೋರೂ ಮಾಡ್ತಾ ಇದ್ದವು. ಒಪ್ಪಕೆ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ.

  10. ಕರ್ನಾಟಕದ ರಾಜಧಾನಿಲಿಯೇ ಪ್ರತಿನಿತ್ಯ ಅಲ್ಲಲ್ಲಿ ಕನ್ನಡದ ಕೊಲೆ ಆವುತ್ತಾ ಇರ್ತು …. ಇನ್ನು ಕಾಸರಗೋಡಿಲಿ ಆಗದ್ದರೆ ಮರ್ಯಾದಿ ಇಕ್ಕೋ ….
    ಶುದ್ದಿ ಭಾರೀ ಒಪ್ಪೊಪ್ಪ ಆಯಿದು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×