Oppanna.com

ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ

ಬರದೋರು :   ಸಂಪಾದಕ°    on   09/07/2021    2 ಒಪ್ಪಂಗೊ

ರಮ್ಯ ನೆಕ್ಕರೆಕಾಡು

 “ಏ ಯಶೋದೆ.. ಹೇಂಗೆ ಮಾವಿನ ಮರ ಹೂಗೋಯ್ದಾ..?”, “ಯಶೋದಕ್ಕ.. ನಿಂಗ ಈ ಸರ್ತಿ ಮೆಡಿ ಉಪ್ಪಿನಕಾಯಿ ಹಾಕಿದ್ದಿಲ್ಲಿರಾ..?” ಹೀಂಗಿದಾ ಒಂದು ಜೆಂಬ್ರಕ್ಕೆ ಹೋಪಾಂಗಿಲ್ಲೆ, ಮನೆಂದ ಹೆರ ಕಾಲು ಮಡುಗುವಾಂಗೆ‌ ಇಲ್ಲೆ ಎಲ್ಲರದ್ದೂ ಒಂದೇ ಪ್ರಶ್ನೆ..!! 
              ಮನೆಲಿ ಎರಡು ಮೂರು ಮಾವಿನಮರ ಇಪ್ಪ ಕಾರಣ ಪ್ರತಿ ವರ್ಷ ಒಂದಲ್ಲದ್ದರೊಂದರಲ್ಲಿ ಮಾವಿನಕಾಯಿ ತಪ್ಪಿಗೊಂಡಿತ್ತಿಲ್ಲೆ. ಈ ಸರ್ತಿ ಎಂತ ಗ್ರಹಣ ಬಡುದತ್ತೋ ಕರ್ಮ, ಒತ್ತೆಒಂದು ಮರಲ್ಲಿ ಹೂಗೋಯ್ದಿಲ್ಲೆ..!!
             ಪ್ರತೀವರ್ಷ ಉಪ್ಪಿನಕಾಯಿ ಮಾಡಿ, ಒಳುದ ಮೆಡಿಯ ಹತ್ತರಣವಕ್ಕೆಲ್ಲ ಕೊಟ್ಟುಗೊಂಡಿತ್ತಿದೆ. ಈ ಸರ್ತಿ ಆಶೆಗೆ ತಕ್ಕ ಆದರುದೇ ಆಯೆಕ್ಕಿತ್ತು. ಈಗ ಆ ಬೋಳು ಮರ ನೋಡೆರೆ ಹೊಟ್ಟೆಗೆ ಪೀಶಕತ್ತಿ ಹಾಕಿದಾಂಗೆ ಆಗದ್ದಿಕ್ಕ..??
            ಇವರತ್ರೆ ಎಲ್ಲಿಂದಾರು ನೂರು ಮೆಡಿಯಾದರೂ ತನ್ನಿ ಹೇಳಿದರೆ ಅದಾಗ ಇವಕ್ಕೆ..! ಮೊದಲು ಕಟ್ಟಿ ಮಡುಗಿದ ಉಪ್ಪಿನಕಾಯಿ ಮುಗಿಯಲಿ ಹೇಳ್ತವು..! ಎಂತ ಮಾಡುದು..!? ಎರಡು ಮೂರು ಸರ್ತಿ ಹೇಳಿ ತಳೀಯದ್ದೇ ಕೂದೆ.
           ಕೆಳಣ ತಟ್ಟಿನ ತೋಟದ ಹತ್ತರೆ ಇಪ್ಪ ಗುಡ್ಡೆಲಿ ಒಂದು ಗೆನಾ ಬೀಜದ ಮರ ಇದ್ದು. ಪ್ರತಿವರ್ಷ ಒಳ್ಳೆ ಬೀಜ ಹಿಡಿತ್ತು ಅದರಲ್ಲಿ. ಹಾಂಗೆ ಹೆರ್ಕುಲೆ ಹೇಳಿ ಒಂದು ಪಡಿಗೆ ತೆಕ್ಕೊಂಡು ಹೆರಟೆ. ಬೀಜ ಎಲ್ಲಾ ಹೆರ್ಕಿದ ಮತ್ತೆ, ಗುಡ್ಡೆಂದ ಪುನಾ ತೋಟಕ್ಕಿಳಿಯೆಕ್ಕಿದ..!
             ಕಾಡಂದಿ ಇರುಳು ತೋಟಕ್ಕೆ ಇಳ್ದು ಲಾಯ್ಕ ದಾರಿ ಆಯ್ದು. ಎಂಗೊಗೂ ಅದೇ ದಾರಿ. ಇವರತ್ರೆ ಸಣ್ಣಕ್ಕೆ ಮೆಟ್ಲು ಗರ್ಪಿ ಹೇಳಿತ್ತಿದ್ದೆ. ಅವಕ್ಕೆ ಪುರ್ಸೊತ್ತಾಪ್ಪಲಿಲ್ಲೆ. 
            ಆ ಬರೆಲಿ ಜಾರಿಗೊಂಡು ಇಳಿವಲಪ್ಪಗ ಈ ವೈಶಾಖದ ಒಣಕ್ಕು‌ ಬಜಕ್ರೆಗೆ ಕಾಲು ಮಡುಗಿದೆ. ಮತ್ತೆ ಕೇಳೆಕ್ಕಾ ಜಾರಿ ಬಿದ್ದದರಲ್ಲಿ ತೋಟಲ್ಲಿತ್ತಿದೆ. ಆನು ಬಿದ್ದದರಲ್ಲಿ ಸರ್ತ ಆಕಾಶ ಕಂಡತ್ತು. ಪಡಿಗೆಲಿತ್ತ ಬೀಜ ಪೂರಾ ರಟ್ಟಿತ್ತು. 
               ಏಳೆಕ್ಕಾರೆ ಒಂದು ಆಶ್ಚರ್ಯ ಕಂಡತ್ತು..! ಎಂತ ಗೊಂತಿದ್ದಾ..? ಕೆಳಣ ತಟ್ಟಿನ ಮೂಲೆ ಮಾವಿನ ಮರ ಹೂಗೋದ್ದು ಕಂಡತ್ತು..!! ಹ್ಞೇಂ ಇದೆಂತ ಈಗ ಹೂಗೋಪದು..? ಉಷಾ, ಗಿರಿಜೆ, ಸರೋಜನ ಮನೆಲಿ ಪೂರಾ ತಟ ಪಟನೆ ಹಣ್ಣು ಬೀಳುಲಾತು.. ಎಂಗಳಲ್ಲಿ ಈಗ ಹೂಗೋಪದಾ..? ಹೇಳಿ ಆಶ್ಚರ್ಯ ಆದರೂ ಭಾರೀ ಖುಷಿ ಆತು.
               ಖುಷಿಲಿ ಆ ಬೀಜವ ಪೂರಾ ಅಲ್ಲಿಯೇ ಬಿಟ್ಟಿಕ್ಕಿ ಮನೆಗೆ ಹೋಗಿ ಇವರತ್ರೆ, “ಇದಾ ಮೂಲೆಮರ ಹೂಗೋಯ್ದು..! ಬಚಾವ್.. ಈ ಸರ್ತಿ ಉಪ್ಪಿನಕಾಯಿಗೆ ಎಂತ ಮಾಡುದೋಳಿ ಇತ್ತಿದೆ..!” ಹೇಳೀಯಪ್ಪಗ ಇವು,” ಅಲ್ಲಿ ಜೆಂಗಲ್ಲಿ ಕಳ್ದ ವರ್ಷದ್ದು, ಆಚ ವರ್ಷದ್ದು ಹೇಳಿಗೊಂಡು ಎರಡು-ಮೂರು ಪ್ರತ್ಯೇಕ ಭರಣಿಲಿ ಮೆಡಿ ಉಪ್ಪಿನಕಾಯಿ ಇದ್ದು.. ಇದು ನೋಡೆರೆ ಉಪ್ಪಿನಕಾಯಿಗೆ ಎಂತ ಮಾಡುದೋಳಿ ಮಂಡೆಬೆಶಿ ಮಾಡಿಗೊಂಡು ಕೂಯ್ದನ್ನೆ..!” ಹೇಳಿದವು.
              ಇವಕ್ಕೆಂತ ಗೊಂತು, ಕಳ್ದ ವರ್ಷದ್ದು ಆಚ ವರ್ಷದ್ದು ಪೂರಾ ಸಣ್ಣ ಭರಣಿಲಿ ಇಪ್ಪದು. ಅದು ಈ ವರ್ಷ ಉಂಡು ಮುಗುದರೆ ಬಪ್ಪ ವರ್ಷಕ್ಕೆ ಆರತ್ರೆ ನಟ್ಟುಲೆ ಹೋಪದು. ರಜ್ಜ ಮುಂದಾಲೋಚನೆಲಿ ಹೇಳುದಷ್ಟೇ.. ಇವಕ್ಕೆ ಅರ್ಥ ಆಗ ಹೆಮ್ಮಕ್ಕಳ ಗುಟ್ಟು..!
             ” ಅಲ್ಲ ಮಾರಾಯ್ತಿ ಮರ ಹೂಗೋಯ್ದು ಹೇಳಿ ಗೊಂತಾಪ್ಪಲೆ ನಿನಗೆ ಬಿದ್ದೇ ಆಯೆಕ್ಕಿತ್ತಾ..? ಅಂಬಗ ತೋಟಲ್ಲಿ ಹೋಪಗ ತಲೆ ಅಡಿಯಂಗೆ ಹಾಯ್ಕೊಂಡು ಹೋಪಾದಾಳಿ.. ಮೇಲೆ ಕೆಳ ನೋಡ್ತ ಕ್ರಮವೇ ಇಲ್ಲೆಯಾ..?” ಹೇಳಿ ನೆಗೆ ಮಾಡಿದವು.
            ” ಎಂತದೇ ಆಗಲಿ ಎನಗೆ ಉಪ್ಪಿನಕಾಯಿಗೆ ಬರ ಇಲ್ಲೆ ಈ ಸರ್ತಿ.. ಅದುವೇ ಖುಷಿ.. ಮೆಡಿ ಕೊಯಿವಲೆ ತುಕ್ರಂಗೆ ಇಂದೇ ಹೇಳಿ ಮಡುಗುಲಕ್ಕು. ಸಮಯಕ್ಕಪ್ಪಗ ಹೇಳೆರೆ ಸಿಕ್ಕ ಅದು.. ಮತ್ತೆ ಖಾಸೆ ಕಟ್ಟಿದ ಮೇಲೆ ಕೊಯ್ದಾಕೆರೆ ಎಂತ ಪ್ರಯೋಜನ..!? ಎಂತಾ ಕೇಳಿತ್ತಾ..??” ಹೇಳಿದೆ ಇವರತ್ರೆ.
             ” ಬಾಬೆ ಹುಟ್ಟುವ ಮೊದಲೇ ಕುಲಾವಿ ಹೊಲಿಶುಲೆ ಹೆರಟಿದಿದು.. ಮೆಡಿ ಸಣ್ಣಕ್ಕೆ ಕಡ್ಲೆಯಷ್ಟು ದೊಡ್ಡ ಆದರೂ ಆಗಲಿ ಮತ್ತೆ ನೋಡುವ. ಮುಗಿಲು ಬಂದರೆ ಒಂದೊಂದರಿ ಹೂಗು ಕರೆಂಚುತ್ತು.. ಮತ್ತೆ ಎಂತದೂ ಇರ. ಈಗ ಮಂಡೆಬೆಶಿ ಮಾಡೆಕ್ಕೋಳಿ ಇಲ್ಲೆ..” ಹೇಳಿದವು. ಇವು ಎಂತ ಉಮೇದು ತೋರ್ಸುದು ಕಂಡತ್ತಿಲ್ಲೆ.
            “ಅಂಬಗ ನಿಂಗ ಹೇಳದ್ರೆ ಬೇಡ.. ಆನು ಹೋತೆ ತುಕ್ರನಲ್ಲಿಗೆ. ಈಗ ಹೇಳಿ ಮಡುಗೆರೆ ದಿನಗೊಳುವಾಗ ಬಕ್ಕದ..!” ಹೇಳಿದೆ. ಎಂತ ಬೇಕಾರೂ ಮಾಡು ಹೇಳಿ ಇವು ಎದ್ದಿಕ್ಕೆ ತೋಟಕ್ಕೆ ಹೋದವು. ಮೊದಲು ಮಗಳಿಂಗೆ ಫೋನು ಮಾಡಿದೆ.
             “ಜ್ಯೋತಿ.. ಮೂಲೆಮರ ಹೂಗೋಯ್ದು ಕೂಸೆ.. ಎನಗೆ ಈಗ ಸಮಾಧಾನ ಆತಿದ.. ಕಡಮ್ಮೆಲಿ ಒಂದು ಎಂಟ್ನೂರು ಮೆಡಿ ಆದರೂ ಕೊಯಿಶೆಡದ..! ರಜ್ಜ ರಜ್ಜ ನಿನಗೂ ಅಣ್ಣಂಗೂ ಹಾಕಿ ಮಡುಗೆಕ್ಕು, ಹತ್ರಣ ಮನೆ ಜಯಕ್ಕಂಗೆ ಒಂದು ನೂರು ಮೆಡಿ ಕೊಡಕ್ಕು.. ನಮ್ಮ ನೆರೆಕರೆ ಆದ ಕಾರಣ ಕೊಡದ್ದೆ ಸರಿ ಆವ್ತಿಲ್ಲೆ.. ಮತ್ತೆ ಒಂದು ರಜ್ಜ ತುಕ್ರ ಕೊಂಡೋಕ್ಕು. ಹೀಂಗೆಲ್ಲ ಅಪ್ಪಗ ಕಡಮ್ಮೆಲಿ ಒಂದು ಎಂಟ್ನೂರು ಮೆಡಿ ಆದರೂ ಬೇಕಾಗದ..?” ಹೇಳಿದೆ.
            ” ಅಮ್ಮಾ ನೀನೆಂತರ..? ಮೆಡಿ ಬಿಡ್ಲೆ ಸುರು ಆಗಲಿ ಮತ್ತೆ ಲೆಕ್ಕ ಹಾಕು..” ಹೇಳಿ ನೆಗೆ ಮಾಡಿತ್ತು. ಈ ಅಪ್ಪಂದೆ ಮಗಳುದೇ ಒಂದೇ ಹೇಳಿ ಮಾಡಿದೆ ಆನು..!!
            ” ಹಾಂಗಲ್ಲಾ.. ಮೊದಲೇ ಆಲೋಚನೆ ಮಾಡಿ ಮಡುಗುದು ಅಷ್ಟೆ.. ಮತ್ತೆ ಹಣ್ಣಿಂಗೆ ಹೇಳಿ ದಣೀಯ ಒಳಿಶುಲಿಲ್ಲೆ ಮರಲ್ಲಿ.. ಅದು ಹಣ್ಣು ಹೇಳುವಷ್ಟು ಸೀವಿಲ್ಲೆ, ಹುಳಿಪಿಂಡ.. ಕಾಂಬಲುದೇ ಮಿಂಞಟೆ..! ಮಾಂಬುಳಕ್ಕೆಲ್ಲಾ ಆಗ.. ಆತು ಆನು ತುಕ್ರಂಗೆ ಈಗಳೇ ಹೇಳಿ ಬತ್ತೆ..” ಹೇಳಿ ಫೋನು ಕಟ್ ಮಾಡುವಾಗ ಇವು ಆ ಪಡಿಗೆಂದ ರಟ್ಟಿದ ಬೀಜವ ಪೂರಾ ಹೆರ್ಕಿಗೊಂಡು ಬಂದವು.
             ” ಏ ಯಶೋದೆ.. ತುಕ್ರನಲ್ಲಿಗೆ ಹೋದೆಯಾ..?” ಕೇಳಿದವು. ಮೆಟ್ಟು ಹಾಕಿಗೊಂಡು, “ಇಲ್ಲೆ.. ಜ್ಯೋತಿಗೆ ಫೋನು ಮಾಡಿ ಹೇಳಿದ್ದಷ್ಟೆ.. ಇನ್ನು ಹೋಪದೇ ತುಕ್ರನಲ್ಲಿಗೆ..” ಹೇಳಿದೆ.
              “ಉಸ್ಸಬ್ಬಾ.. ಪುಣ್ಯ ಹೋತಿಕ್ಕಿದಿಲ್ಲೆ.. ಹೋಗೆಡ ಮಾರಾಯ್ತಿ.. ಎನ್ನ ಮರ್ಯಾದೆ ತೆಗೆಯೆಡ. ಮಾವಿನಮರ ಹೂಗುದೇ ಹೋಯ್ದಿಲ್ಲೆ ಮಣ್ಣೂ ಇಲ್ಲೆ.. ಅದು ಚಿಗುರುಲೆ ಸುರಾದ್ದು..!! ನಿನ್ನ ತಪ್ಪಿಲ್ಲೆ. ಎಂತಕೆ ಹೇಳೆರೆ ಸುರುವಿಂಗೆ ಚಿಗುಳುಲಪ್ಪಗ ಮರ ಹೂಗೋದಾಂಗೆ ಕಾಂಬದಪ್ಪು.. ಆದರೆ ಸೂಕ್ಷ್ಮ ಮಾಡಿ ನೋಡೆಕ್ಕು..” ಹೇಳಿದವು.
            ಛೇ… ಹೇಳಿ ಆತೆನಗೆ. ಜೆಂಗಲ್ಲಿಪ್ಪ ಹಳೆ ಉಪ್ಪಿನಕಾಯಿಯೇ ಗೆತಿ ಹೇಳಿ ಬೇಜಾರತು. ಎನ್ನ ಬಾಡಿದ ಮುಸುಡಿನ ನೋಡಿ ಇವಕ್ಕುದೇ ಬೇಜಾರಾತ ಎಂತ ಗೊಂತಿಲ್ಲೆ, ” ನೀನಿನ್ನು ಚಪ್ಪೆ ಮೋರೆ ಮಾಡಿ ಕೂರೆಡ.. ಎಲ್ಲಿಂದಾರು ಮೆಡಿ ಸಂಪಾದ್ಸಿ ತಂದು ಕೊಡುವ..” ಹೇಳಿದವು. 
             ಮತ್ತೆ ರಜ್ಜ ಗೆಲುವಾದೆ. ಈ ವರ್ಷದ ಹೊಸ ಉಪ್ಪಿನಕಾಯಿಯ ಭರಣಿಲಿ ಹಾಕಿ ಜೆಂಗಲ್ಲಿ ಮಡುಗೆರೆ, ಹಳೆ ಉಪ್ಪಿನಕಾಯಿಯ ಹೆರ ತೆಗವಲಕ್ಕಲ್ಲದಾ..!?

2 thoughts on “ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ

  1. ಅಂಬಗಾ.. ಕರು ಕುರು ಹೊಸ ಮೆಡಿ ಬೇಡದ ಯಶೋದಕ್ಕಂಗೆ.. 😂 ಕಪ್ಪಟೆ ಮೆಸ್ತಂಗೆ ಹಳೆ ಮೆಡಿಯೇ ಗತಿಯ..😝

  2. ಚಂದದ ಆಯಿದು ಬರಹ ..ಇದು ಮನೆಮನೆಯ ಕಥೆ..
    ಎಂಗಳ ಮನೆಲೂ ನೆಗೆ ಮಾಡ್ತವು ಡಬ್ಬಲ್ ಚೋಳ ಉಪ್ಪಿನಕಾಯಿ ಇದ್ದು ಹೇಳಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×