Oppanna.com

ಸ್ವಯಂವರ : ಕಾದಂಬರಿ : ಭಾಗ 18 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   30/09/2019    0 ಒಪ್ಪಂಗೊ

“ಅಬ್ಬೇ….ಅಣ್ಣಂಗೆಂತೋ ಆತು..ಒಂದರಿ ಬೇಗ ಬಾ….” ಹೆರಾಣ ಜೆಗುಲಿಲಿ ಕೂದ ಕೇಶವನ ಹೆಗಲು ಹಿಡ್ಕೊಂಡು ಸುಶೀಲ ಅಬ್ಬೆಯ ದೊಡ್ಡಕೆ ದಿನಿಗೇಳಿಯಪ್ಪಗ ಉದೆಕಾಲದ ಒಳ್ಳೆ ಒರಕ್ಕಿಲ್ಲಿದ್ದ ಚಂದ್ರಣ್ಣನೂ, ಶಾರದೆಯೂ ಗಡಿಬಿಡಿಲಿ ಎದ್ದು ಹೆರ ಬಂದವು.

ಕೇಶವ° ಅವರ ಕಾಂಬದೂದೆ ಫಕ್ಕ ಎದ್ದು ನಿಂದು ಸುಶೀಲನ ರಟ್ಟೆ ಹಿಡುದು ಅಪ್ಪನ ಎದುರಂಗೆ ದೂಡಿದ.
“ಇದರ ಅವಸ್ಥೆ ನೋಡಿ ಅಪ್ಪಾ°, ಹೀಂಗೇ ಬಿಡ್ಲಾಗ ಇದರ”
ಅಷ್ಟಪ್ಪಗ ಸುಶೀಲನೂದೆ “ಅಪ್ಪಾ.. ಈ ಅಣ್ಣಂಗೆ ಎಂತೋ ಆಯಿದು” ಹೇಳಿ ಹೆದರಿದವರ ಹಾಂಗೆ ಆರ್ಭಟೆ ಕೊಟ್ಟು ಅಬ್ಬೆಯ ಅಂಟಿತ್ತು.

“ನಿನಗೆಂತಾಯಿದಿಂದು? ಏಕೆ ಏವಗಾಣಾಂಗಿಲ್ಲೆ,ತಲೆ ತಿರುಗಿತ್ತಾ? ಸುಶೀ ದಿನಿಗೇಳದ್ರೆ ಎಂಗೊಗೆ ಗೊಂತೇ ಆವ್ತಿತಿಲ್ಲೆ.ಮತ್ತೂದೆ ನಿನಗದರತ್ರೆ ಕೋಪ” ಚಂದ್ರಣ್ಣ ರೆಜ ಕೋಪಲ್ಲಿ ಮಗನತ್ರೆ ಹೇಳಿದವು.
“ಅಪ್ಪು, ಸುಶೀ ಹೇಳಿದ ಕಾರಣ ಗೊಂತಾದ್ದು, ಎಂತಾದ್ದೂಳಿ ಆನು ಹೇಳಿರೆ ಅದರ ಮೆಟ್ಟುಕಲ್ಲು ಹತ್ಸುಲೆ ಬಿಡೆಯಿ ನಿಂಗೊ.ಅದಕ್ಕೆ ಕೊಂಗಾಟ ಹೆಚ್ಚಿಗಾದ್ದು. ಅಜ್ಜಿ ಹೇಳ್ತವಲ್ಲದಾ’ ತಲೆಲಿ ಹೊತ್ತರೆ ಮೂಗಿಲ್ಲಿ ಕೂದು…..ಮಾಡುಗು’ ಹೇಳಿ ಹಾಂಗೆ ಮಾಡಿದ್ದದು…..”ಕೋಪ ಬಂದು ಅವಂಗೆ ಮಾತಾಡ್ಲೆ ಕಷ್ಟ ಆತು.ತಂಗಗೆ ಇಷ್ಟು ಬುದ್ಧಿವಂತಿಕೆ ಇದ್ದು ಹೇಳಿ ಈಗ ಗೊಂತಾದ್ದಷ್ಟೆ ಅವಂಗೆ.

ದಿನೇಸನ ಕಾಂಬಲೆ ಹಟ್ಟಿ ಹತ್ರಂಗೆ ಹೋದಪ್ಪಗ ದನಗೊ ಕೆಲದವು ಹೇಳಿ ಅಲ್ಲಿಂದ ಎದ್ದು ಬೇರೊಂದು ದಿಕಂಗೆ ಹೋಪಲೆ ಇಬ್ರೂ ಕೆಳ ಇಳುದಪ್ಪಗ ಅಣ್ಣನ ಕಂಡತ್ತು ಸುಶೀಲಂಗೆ.ಅಣ್ಣ ಅಲ್ಲೇ ಕಂಬ ಹಿಡ್ಕೊಂಡು ಕೂದ ಕೂಡ್ಲೇ ಅದರ ಬುದ್ದಿ ಬೇರೆ ರೀತಿಲಿ ಓಡಿತ್ತು.ಕೂದೊಂಡಿದ್ದ ಅಣ್ಣನ ಕಾಂಬಗಳೇ ದಿನೇಸ ಅಲ್ಲಿಂದ ಹೋಯಿದಾಳಿ ತಿರುಗಿ ನೋಡಿಕ್ಕಿ ಅಬ್ಬೆಯ ದಿನಿಗೇಳಿ ಒಳ್ಳೆ ಸುಬಗೆತ್ತಿ ಆತು.

ದಿನೇಸನೂ ತಂಗೆಯೂ ಹಟ್ಟಿ ಹೊಡೆಂದ ದಡಬಡ ಎದ್ದು ಬಪ್ಪದು ಕಂಡು ತಲೆ ತಿರುಗಿದ ಹಾಂಗಾಗಿ ಕೂದ್ದದು ಕಂಡು ಎಷ್ಟು ಬೇಗ ತಂಗೆ ಕೆಣಿ ಮಾಡಿ ಅಬ್ಬೆಪ್ಪನ ದಿನಿಗೇಳಿ ವಿಶಯ ಬದಲ್ಸಿತ್ತು. ಬಹುಶಃ ಅವು ಅಂಬಗ ಅಲ್ಲಿಗೆ ಹೋದ್ದಷ್ಟೆ ಆದಿಕ್ಕು, ದನಗೊ ಕೆಲವ ಕಾರಣ ಬೇಗ ಬಂದು ನೋಡಿದ್ದು ಒಳ್ಳೆದಾತು. ಇಲ್ಲದ್ರೆ ಇದೆಂತ ಮಾಡ್ತಿತು? ಬದ್ಕು ಹೇಳಿರೆ ಎಂತ ಗ್ರೇಶಿಕ್ಕಿದು, ದಿನೇಸನೊಟ್ಟಿಂಗೆ ತಿರುಗಿ ಮನೆ ಮರ್ಯಾದೆ ತೆಗದರೆ ಮತ್ತೆ ಅಬ್ಬೆಪ್ಪನ ಅವಸ್ಥೆ ಹೇಂಗಕ್ಕು.ಈಗ ಆನೆಂತ ಹೇಳಿರೂ ಇವು ನಂಬುವ ಸ್ಥಿತಿಲಿಲ್ಲೆ…..’
ಅವನ ಆಲೋಚನೆ ಹಾಂಗೆಲ್ಲ ಹೋಪಗ ಸುಶೀ ಬೇಗ ಅಡಿಗೊಳಾಂಗೆ ಹೋಗಿ ನಿಂಬೆಹುಳಿ ಸರ್ಬತ್ತು ಮಾಡಿ ತಂದು ಅಬ್ಬೆ ಕೈಲಿ ಕೊಟ್ಟತ್ತು

“ಅಬ್ಬೆ.. ಇದಾ ..ಅಣ್ಣಂಗೆ ಕೊಡಬ್ಬೇ..ಎಂತೋ ನಿತ್ರಾಣಾದಿಕ್ಕು, ಪಾಪ! ಹಗಲು ಇರುಳು ತೋಟ, ಗುಡ್ಡೆ ಹೇಳಿ ಆಳುಗಳೊಟ್ಟಿಂಗೆ ತಿರುಗುದಲ್ಲದಾ?” ಅದರ ಅನುಕಂಪದ ಮಾತು ಕೇಳುಗ ಆ ಸರ್ಬತ್ತಿನ ಅದರ ಮೋರಗೆ ಚೇಪೆಕು ಹೇಳುವಷ್ಟು ಕೋಪ ಬಂತವಂಗೆ.

“ನೀನೆಂತ ಮಾಡಿರೂ ತಂಗಗೆ ನಿನ್ನತ್ರೆ ಎಷ್ಟು ಪ್ರೀತಿ ನೋಡು, ಎಷ್ಟು ಬೇಗ ಸರ್ಬತ್ತು ಮಾಡಿ ತಯಿಂದು, ಇದರ ಕುಡಿ…” ಶಾರದೆ ಗ್ಲಾಸು ತೆಕ್ಕೊಂಡು ಅವನ ಹತ್ತರಂಗೆ ಬಂದಪ್ಪಗ ಅವ° ಕೋಪಲ್ಲಿ ಎದ್ದಿಕ್ಕಿ ಹೋದ°.

“ಈ ಮಾಣಿಗೆ ಎಂತಾಯಿದು? ಏಕಿವ° ಹೀಂಗೆ?” ಶಾರದೆಗೆ ಮಂಡೆಬೆಚ್ಚ ಅಪ್ಪಲೆ ಸುರುವಾತು.
“ನೀನು ಸುಮ್ಮನೇ ಕೂರು, ಈ ಪ್ರಾಯಲ್ಲಿ ಮಕ್ಕೊ ಹಾಂಗೇ. ಅವರ ಮನಸಿಲ್ಲಿ ಎಂತ ಇರ್ತು ಹೇಳಿ ನವಗೆ ಗೊಂತಾವ್ತಿಲ್ಲೆ. ಅವು ಅದನ್ನೇ ಮನಸಿಲ್ಲಿ ಮಡುಗಿಂಡು ಒಟ್ಟಾರೆ ಏನೇನೋ ಮಾಡುದು.ಅದರ ಎಲ್ಲ ತಲಗೆ ಹಾಕದ್ದೆ ಹೋಗಿ ಮನುಗು” ಚಂದ್ರಣ್ಣ ಹಾಂಗೆ ಹೇಳಿಂಡು ಒಳ ಹೋದವು.

“ಇನ್ನೆಂತರ ಒರಗುದು? ಉದಿಯಾಗಿಂಡು ಬಂತು, ನೀನು ಬೇಕಾರೆ ಹೋಗಿ ಮನುಗು ಮಗಳೂ ಕೋಲೇಜಿಲ್ಲಿ ಒರಕ್ಕು ತೂಗುದು ಬೇಡ”ಸುಶೀಲನತ್ರೆ ಹೇಳಿಕ್ಕಿ ಶಾರದೆ ಅಡಿಗೊಳಾಣ ಹೊಡೆಂಗೆ ತಿರುಗಿತ್ತು.

ಕೇಶವ° ಅಂದು ಉದಿಯಪ್ಪಗ ಕಾಪಿ ಸಾನು ಕುಡಿಯದ್ದೆ ಜೀಪು ತೆಕ್ಕೊಂಡು ಶೈಲನ ಮನಗೆ ಹೆರಟ°.ಹೋಪಗ ಅಬ್ಬೆ ಹತ್ರೆ ಹೇಳಿಕ್ಕಿಯೇ ಹೆರಟ°.ಇಲ್ಲದ್ರೆ ಎಲ್ಲಿಗೋದ್ದಿವ° ಹೇಳಿ ತಲೆಬೆಶಿ ಮಾಡಿಂಡು ಕೂರುಗು ಅಬ್ಬೆ. ಅಂದರೂ ಇಷ್ಟುದಿಯಪ್ಪಗ ಹೋದರೆ ಶೈಲನ ಮನೆಯವು ಎಂತ ಜಾನ್ಸುಗು ಹೇಳಿಯೂ ಆತವಂಗೆ. ಶೈಲನ ಕಾಣದ್ದೆ, ಅದರತ್ರೆ ಎರಡಕ್ಷರ ಮಾತಾಡದ್ದೆ ಮನಸಿಂಗೆ ನೆಮ್ಮದಿ ಸಿಕ್ಕ .ಅಲ್ಲಿ ಎಂತಾರು ಲೊಟ್ಟೆ ಹೇಳುವ°, ನಿನ್ನೆ ಹೊತ್ತೋಪಗ ಬಂದು ಮಾತಾಡಿಕ್ಕಿ ಹೋದ್ದದರತ್ರೆ ಇಂದು ಉದಿಯಪ್ಪಗಲೇ ಮಾತಾಡ್ಲೆ ಎಂತಯಿದ್ದೂಳಿ ಜಾನ್ಸುಲಾಗನ್ನೇ.

ಜೀಪು ಮುಂದೆ ಹೋಗಿ ಇವರ ಜಾಗೆಂದ ದೊಡ್ಡ ಮಾರ್ಗಕ್ಕೆ ತಿರುಗುವಲ್ಲಿಗೆ ಎತ್ತಿಯಪ್ಪಗ ಎದುರಂದ ಪೋಸ್ಟುಮೇನು ಉದಯ ಬಪ್ಪದು ಕಂಡತ್ತವಂಗೆ.ಇವನ ಜೀಪು ಕಾಂಬದುದೆ ಕೈ ನೆಗ್ಗಿ “ನಿಲ್ಲಿ” ಹೇಳುವ ಹಾಂಗೆ ಕೈ ಭಾಷೆ ಮಾಡಿತ್ತದು. ಹಾಂಗಾಗಿ ಜೀಪು ನಿಲ್ಸಿ ಅದು ಹತ್ತರೆ ಬಪ್ಪನ್ನಾರ ನಿಂದ.

“ಇದಾ ಅಣ್ಣಾ.. ನಿಂಗೊಗೆ ನಿನ್ನೆ ಬಂದ ಪೋಸ್ಟು.ನಿನ್ನೆ ಮಗಳಿಂಗೆ ಹುಷಾರಿಲ್ಲದ್ದ ಕಾರಣ ಮದ್ದಿಂಗೆ ಕರಕ್ಕೊಂಡು ಹೋಗಿ ಬಪ್ಪಗ ತಡವಾತು.ನಿಂಗೊಗೆ ಏವದಾರು ಕೆಲಸಕ್ಕೆ ಸೇರುವ ಕಾಗದವೋ ಮತ್ತೋ ಆಗಿದ್ದರೆ ಹೇಳಿ ಈಗಲೇ ಬಂದದು. ನಿಂಗೊ ಇಲ್ಲಿಯೇ ಸಿಕ್ಕಿದ್ದು ಎನ್ನ ಅಜ್ಜಿ ಪುಣ್ಯ..ತೆಕ್ಕೊಳ್ಳಿ ಅಣ್ಣಾ, ಒಳ್ಳೆ ವಿಶಯವೇ ಇರ್ಲಿ.ಆನು ಹೋಯೆಕಾ? ಎದ್ದಾಂಗೆ ಬಂದದಾನು..” ಒಂದೇ ಉಸಿಲಿಂಗೆ ಅಷ್ಟು ಹೇಳಿಕ್ಕಿ ಒಂದು ಕವರಿನ ಇವನ ಕೈಲಿ ಕೊಟ್ಟಿಕ್ಕಿ ಅದು ಬಂದಷ್ಟೇ ಬೇಗ ತಿರುಗಿ ಹೋತು.

“ಓಹ್!! ” ಕಾಗದ ಬಿಡುಸಿ ನೋಡಿದವಂಗೆ ಕೊಶೀಲಿ ಕೊಣಿಯೆಕೂಳಿ ಆತು.ಇನ್ನು ಶೈಲನ ಮನಗೋಪಲೆ ಎಂತ ಹೆದರಿಕೆ ಇಲ್ಲೆ.ಅವ° ಕಳುದ ತಿಂಗಳು ಇಂಟರ್ ವ್ಯೂ ವಿಂಗೆ ಹೋದ ದೊಡ್ಡ ಕಂಪೆನಿಲಿ ಅವಂಗೆ ಕೆಲಸ ಸಿಕ್ಕಿದ್ದು ಹೇಳಿ ಬಂದ ಕಾಗದ ಅದು.ಉದಿಯಪ್ಪಗಲೇ ಪ್ರೀತಿಲಿ ತಂದು ಕೊಟ್ಟ ಉದಯಂಗೆ ಸ್ವೀಟು ಕೊಡೆಕು.ಈ ಶುದ್ದಿ ಶೈಲನತ್ರಲ್ಲದ್ದೆ ಬೇರಾರತ್ರೆ ಮದಾಲು ಹೇಳುದು……’
ಜೀಪು ಶೈಲನ ಮನೆ ಎದುರು ನಿಲ್ಸಿ ಕೈಕಾಲು ಕೂಡ ತೊಳೆಯದ್ದೆ ಒಳಾಂಗೆ ಓಡಿದ°. ಇರುಳಾಣ ಬೇಜಾರಿನ ವಿಶಯ ಬಿಟ್ಟು ಈಗ ಅವನ ಮನಸಿಲ್ಲಿ ಕೆಲಸ ಸಿಕ್ಕಿದ ಕೊಶಿಯೇ ಇಪ್ಪದು.
ಇವನ ಕಂಡಪ್ಪಗ ಶೈಲನ ಅತ್ತಗೂ ಮಾವಂಗೂ ಸಂತೋಶಾತು.
“ಬಾ…..ಬಾ..ಇಂದು ಸೇಮಗೆ ,ರಸಾಯನ ಮಾಡಿದ್ದು ಕಾಫಿಗೆ,ಆರಾರು ಇದ್ದರೆ ಒಟ್ಟಿಂಗೆ ಕಾಪಿ ಕುಡಿವಲಾವ್ತಿತೂಳಿ ಗ್ರೇಶಿಂಡಿತ್ತಿದ್ದೆ.ನೀನು ಬಂದದು ಭಾರೀ ಒಳ್ಳೆದಾತು..” ಶೈಲನ ಮಾವನೋರು ಅವನ ಕೈ ಹಿಡುದೇ ಒಳಾಂಗೆ ಕರಕ್ಕೊಂಡು ಬಂದವು.

ಮನಸ್ಸು ತುಂಬಿ ಬಂತವಂಗೆ.ಶೈಲನ ಮದುವೆ ನಿಗೆಂಟಾದ ಸಮಯಲ್ಲಿ ಸುಶೀಲ ಒಂದರಿ ‘ ಎನಗೆ ಆ ಮನೆಯವರ ಕೊಶಿಯೇ ಆಯಿದಿಲ್ಲೆ, ಬಾವನೂ ಕಾಂಬಲೆ ಚೆಂದ ಇಲ್ಲೆ,ಕಲ್ತಿದ ಹೇಳಿ ಮಾಂತ್ರ,…..” ಹೀಂಗೇ ಎಂತೋ ಹೇಳಿದ್ದದು ನೆಂಪಾತು.
“ಮನುಶ್ಯರ ಪೈಸೆಲೂ, ಬಣ್ಣಲ್ಲೂ ಅಳವದಲ್ಲ ಗುಣಲ್ಲಿ ಅಳವದು “ಹೇಳಿ ಹೇಳೆಕು ಗ್ರೇಶಿರೂ ಅಂದು ತಂಗೆ ಸಣ್ಣ, ಅದಕ್ಕೆ ಎಂತದೂ ಗೊಂತಾಗಾಳಿ ಹೇಳಿದ್ದಾ° ಇಲ್ಲೆ.

” ನೀನೆನ್ನ ಹತ್ತರೇ ಕೂರು” ಮಾವ° ಅವರ ಹತ್ತರೆ ಅವನ ಕೂರ್ಸಿಂಡು ಹಳೆ ಕತೆಗಳ ಎಲ್ಲ ಹೇಳ್ಲೆ ಸುರು ಮಾಡಿದವು.ಅತ್ತೆಯೂ ಶೈಲನೂ ಪ್ರೀತಿಲಿ, ಒತ್ತಾಯ ಮಾಡಿ ಬಳ್ಸಿಯಪ್ಪಗ ಯೇವಗಾಣಂದಲೂ ಹೆಚ್ಚು ಹೊಟ್ಟೆ ತುಂಬಿತ್ತವಂಗೆ.
“ಇಂದು ನೀನು ಬಂದದೊಳ್ಳೆದಾತು ಭಾವಾ°.ಇಂದು ಶಾಲಗೆ, ಕೋಲೇಜಿಂಗೆ ರಜೆ ಹೇಳಿ ಈಗ ಗೊಂತಾತಿದ.ಎಲ್ಲಿಯೋ ಎಂತೋ ಆಯಿದಾಡ.ನವಗೆ ರಜೆ.ಅಷ್ಟೇ ಸಾಕು” ಶೈಲನ ಗೆಂಡ° ಹೇಳಿಯಪ್ಪಗ ಕೇಶವಂಗೆ ಎಂತ ಮಾಡುದೂಳಿ ಆತು.ಶಾಲೆ ಇದ್ದರೆ ಶೈಲನ ಕ್ಲಾಸಿಂಗೆ ಬಿಡ್ಲೆ ಹೋಪಲಕ್ಕು, ಅಂಬಗ ದಾರಿಲಿ ಮಾತಾಡ್ಲಕ್ಕು ಗ್ರೇಶಿದ್ದ° .
“ಛೇ..ಗ್ರಾಚಾರವೇ……” ಹೇಳಿ ಮನಸಿಲ್ಲಿ ಗ್ರೇಶಿ ಹೋತವಂಗೆ.ಎನ್ನ ಮನಸಿಲ್ಲಿಪ್ಪದರ ಒಬ್ಬನತ್ರೂ ಹೇಳ್ಲೆಡಿಯದ್ದಾಂಗಾವ್ತನ್ನೇ.ಹೀಂಗಿದ್ದ ಅವಸ್ಥೆ ಆರಿಂಗೂ ಬಾರದ್ರೆ ಸಾಕು. ಅಂದರೂ ಕೆಲಸ ಸಿಕ್ಕಿದ ವಿಶಯವ ಕೊಶೀಲಿ ಹೇಳಿದ°.

ಕೆಲಸ ಸಿಕ್ಕಿದ ವಿಷಯ ಗೊಂತಪ್ಪಗ ಶೈಲಂಗೂ, ಮನೆಯವಕ್ಕೂ ಭಾರೀ ಸಂತೋಶಾತು.
“ಭಾರಿ ಕೊಶಿಯಾತು ಕೇಶವ°, ಇನ್ನು ಹೊಸ ಹಟ್ಟಿ ಕಟ್ಟಿರೂ ಹೆಚ್ಚು ದನಗಳ ಎಲ್ಲ ಸಾಂಕಿ ಹಾಲು ವ್ಯಾಪಾರ ಎಲ್ಲ ಮಾಡೆಕೂಳಿಲ್ಲೆ.ನಿನ್ನಬ್ಬೆ ಒಬ್ಬನೇ ಎಷ್ಟು ದಿನ ಹಗಲು ಇರುಳು ಹೇಳಿ ಬಂಙ ಬಪ್ಪದು? ಇನ್ನಾದರೂ ನಾಕುದಿಕೆ ನೆಂಟ್ರ ಮನಗೆಲ್ಲ ಹೋಗೆಡದೋ?” ಶೈಲನ ಅತ್ತಿಯೋರು ಹೇಳಿದ ಮಾತು ಕೇಶವನ ಮನಸಿಲ್ಲಿ ಗಟ್ಟಿ ನಿಂದತ್ತು.

ಅಪ್ಪು ! ಅವು ಹೇಳಿದ್ದರ್ಲಿ ಲೊಟ್ಟೆ ಇಲ್ಲೆ.ಅಪ್ಪ° ಈ ದೊಡ್ಡ ಹಟ್ಟಿ ಕಟ್ಲೆ ಹೆರಡೆಕಾತೇಯಿಲ್ಲೆ.ಹಳೇ ಹಟ್ಟಿಯ ಹತ್ತರೆ ಸಣ್ಣಕೆ ಕಟ್ಟಿದ್ದರೆ ಅಬ್ಬಗೆ ಇಷ್ಟು ಬಂಙವೂ ಆವ್ತಿತಿಲ್ಲೆ…….’

“ನೀನೆಂತರ ಹೀಂಗೆ ಒಬ್ಬನೇ ಎಂತೋ ಆಲೋಚನೆ ಮಾಡುದು? ಕೆಲಸಕ್ಕೆ ಸೇರಿರೆ ಇಲ್ಲಿ ಅಬ್ಬೆ ಅಪ್ಪ° ಮಾತ್ರ ಆವ್ತವೂಳಿಯಾ? ಅಬ್ಬೆ ಆಗಳೇ ಪೋನು ಮಾಡಿ ಹೇಳಿದ್ದು ನೀನು ಬಪ್ಪ ವಿಶಯ..” ಅತ್ತೆ ಮಾವ° ಅಲ್ಲಿ ಇಲ್ಲದ್ದ ಹೊತ್ತಿಲ್ಲಿ ಶೈಲ ಮೆಲ್ಲಂಗೆ ಹೇಳಿತ್ತವನತ್ರೆ.

“ಅಬ್ಬೆ ಹೇಳಿದ್ದಾ? ಅಂಬಗ ನಿನಗೆ ವಿಶಯ ಎಲ್ಲ ಗೊಂತಾದಿಕ್ಕು..”

“ಎಂತರ ವಿಶಯ? ಅಬ್ಬೆ ಎನ್ನತ್ರೆ ಬೇರೆಂತದೂ ಹೇಳಿದ್ದವಿಲ್ಲೆ” ಮಗಳ ಮನೆಲಿ ತುಂಬ ಜೆನ ಇಪ್ಪ ಕಾರಣ ಶಾರದೆ ಮಗಳತ್ರೆ ಪೋನಿಲ್ಲಿ ಹೆಚ್ಚು ಮಾತಾಡುವ ಕ್ರಮಯಿಲ್ಲೆ.ಅಂದರೂ ಇಂದು ಮಾಂತ್ರ ಕೇಶವನ ಶುದ್ದಿ ಹೇಳದ್ದೆ ಮನಸ್ಸು ತಡದ್ದಿಲ್ಲೆ..ಅಬ್ಬೆ ಹೇಳಿದ್ದಕ್ಕೆ ತಲೆ ಆಡ್ಸಿರೂ ಶೈಲಂಗೆ ಕೇಶವನ ಗುಣ ಸರೀ ಗೊಂತಿದ್ದನ್ನೇ..ಕಾರಣ ಇಲ್ಲದ್ದೆ ಅವಂಗೆ ಆರತ್ರೂ ಕೋಪ ಬಾರ .ಸುಶೀ ಎಂತೋ ಪೆರಪ್ಪು ಬುದ್ದಿ ಮಾಡ್ಲೆ ಸುರು ಮಾಡಿಕ್ಕು,ಸರಿಯಾದ ವಿಶಯ ಅವನ ಬಾಯಿಂದಲೇ ಬರ್ಲಿ ಹೇಳಿ ರೆಜ ಹೊತ್ತು ಸುಮ್ಮನೇ ಕೂದತ್ತು.

ಹತ್ತರೆ ಆರೂ ಇಲ್ಲದ್ದ ಕಾರಣ ಕೇಶವ° ಅವಂಗೆ ಗೊಂತಿಪ್ಪ ಎಲ್ಲ ವಿಶಯವನ್ನೂ ಹೇಂಗೋ ಹೇಳಿ ಮುಗುಶಿದ°.

“ಈಗ ಹೇಳು ನೀನು..ಆರದ್ದು ತಪ್ಪು? ಎನ್ನ ಬಾಯೊಡವಲೆ ಬಿಡದ್ದ ಹಾಂಗೆ ಮಾಡಿತ್ತು ಸುಶೀ…ಅದರ ಅಂಬಗಾಣ ಕ್ರಮ ಕಂಡ್ರೆ ನೀನಾರು ಎನ್ನನ್ನೇ ಬೈವೆಯಷ್ಟೆ.ಅಷ್ಟುಶಾರಿದ್ದದು”…..

ಕೇಶವ° ಹೇಳಿದ ಎಲ್ಲಾ ವಿಶಯವನ್ನು ಕೇಳಿದ ಶೈಲಂಗೆ ದೊಂಡೆಂದ ಮಾತು ಹೆರಡದ್ದಾಂಗಾಗಿ ತಲಗೆ ಕೈ ಮಡುಗಿಂಡು ಕೂದತ್ತದು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×