Oppanna.com

ನಿಂಗಳಲ್ಲಿಗೂ ಸೋಣೆ ಅಜ್ಜಿ ಹೊಸ್ತಿಲು ದಾಂಟಿ ಬಯಿಂದಾ?

ಬರದೋರು :   ಒಪ್ಪಣ್ಣ    on   18/09/2009    17 ಒಪ್ಪಂಗೊ

ಆಟಿ ತಿಂಗಳಿನ ಬಗ್ಗೆ ನಾವು ಮಾತಾಡಿದ್ದು, ಓ ಮೊನ್ನೆ.
ಎಂತದೂ ಗೌಜಿ, ವಿಶೇಷ ಇಲ್ಲದ್ದೆ, ಬರೇ ಮಳೆ ಬಂದದರ್ಲಿ ಆದ ಶುದ್ದಿ ಎಲ್ಲ ಮಾತಾಡಿಗೊಂಡಿದು, ನೆಂಪಿದ್ದನ್ನೇ?

ಆಟಿ ಆದ ಮತ್ತೆ ಬತ್ತದು ಸೋಣೆ, ಅಲ್ದೋ?
ಆಕಾಶಲ್ಲಿ ಸೂರ್ಯ° ಸಿಂಹರಾಶಿಲಿ ಇರ್ತನಡ, ಆ ಒಂದು ತಿಂಗಳು. ಸಂಸ್ಕೃತಲ್ಲಿ ಸಿಂಹಮಾಸ ಹೇಳಿ ಹೇಳುದು ನಮ್ಮ ಅಜ್ಜಿಯಕ್ಕಳ ಬಾಯಿಲಿ ಸೋಣೆ ಆಯಿದು.
ಸೋಣೆ ತುಂಬ ಶುಭದಾಯಕ ಅಲ್ಲದ್ರೂ, ಅಶುಭ ಆಟಿ ಕಳುದು ಬತ್ತ ಸುರುವಾಣ ತಿಂಗಳು. ಹಾಂಗಾಗಿ ಒಂದು ತಿಂಗಳು ಯೇವದೇ ಶುಭಕಾರ್ಯ ಮಾಡದ್ದೆ ಕಾದು ಕೂದ ಎಷ್ಟೋ ನಮ್ಮೋರು ಒಂದರಿಯೇ, ಹಟ್ಟಿಂದ ಬಿಟ್ಟ ದನಗಳ ಹಾಂಗೆ ಪೆರ್ಚಿಗಟ್ಟಿ – ಶುಭಕಾರ್ಯ ಮಾಡ್ಳೆ ತೊಡಗಿಯೊಂಡವು. ಅಲ್ದೋ?
ಜಾತಕ ಸಂಪಾಲುಸುಲೆ, ಜಾತಕ ಎತ್ತುಸುಲೆ, ಕೂಸು ನೋಡ್ಳೆ, ಕಾರು ತೆಗವಲೆ, ಬೈಕ್ಕು ಮಾರುಲೆ, ಕೆಲಸ ಹುಡ್ಕಲೆ, ಕೆಲಸ ಬದಲುಸುಲೆ, ಜಾಗೆ ಕೊಡ್ಳೆ, ಪಾಲುಪಟ್ಟಿ ಇತ್ಯರ್ತ ಮಾಡ್ಳೆ, ಅಡಕ್ಕೆ ಎಡೆ ಸೆಸಿ ಮಡುಗುಸುಲೆ ತಯಾರಿ ಮಾಡ್ಳೆ, ಚಿನ್ನ ತೆಗವಲೆ, ಉಪ್ನಯನಕ್ಕೆ ದಿನ ನೋಡ್ಳೆ, ಅದಕ್ಕೆ – ಇದಕ್ಕೆ ಎಲ್ಲದಕ್ಕೂ ಒಂದರಿಯೇ ಸುರು. ಎಡೆಲಿ ಒಂದಷ್ಟು ಜೆಂಬ್ರಂಗೊ. ಒಬ್ಬೊಬ್ಬನೇ ಮನೆಲಿದ್ದರೆ ಜೆಂಬ್ರಂಗೊಕ್ಕೆ ಹೋಗಿಯೇ ಮುಗಿಯ, ಅಷ್ಟಿದ್ದು ಈಗ ಬಂದ ಹೇಳಿಕೆಗೊ. ಒಪ್ಪಣ್ಣಂಗೆ ಅಂತೂ ಒಂಚೂರುದೇ ಪುರುಸೊತ್ತಿಲ್ಲೆ. ಆಟಿಯ ಪುರುಸೊತ್ತು ಪೂರ ಬಿರುದತ್ತಿದಾ.
ಎಂತಕೆ ಎಲ್ಲೊರಿಂಗುದೇ ಇಷ್ಟೊಂದು ಅಂಬೆರ್ಪು(busy)? ಉಮ್ಮ!

ಈ ಅಂಬೆರ್ಪಿನ ಎಡೆಲಿದೇ ರೆಜಾ ಪುರುಸೊತ್ತು ಮಾಡಿಗೊಂಡು ಸೋಣೆಯ ಶುದ್ದಿ ಮಾತಾಡುವ°, ಆಗದೋ? ಏ°?

ನಮ್ಮ ಸನಾತನ ಸಂಸ್ಕೃತಿಲಿ ವೃದ್ಧರಿಂಗೆ ವಿಶೇಷ ಬೆಲೆ. (ಸನಾತನ ಹೇಳಿರೆ ಶಬ್ದಾರ್ತವೇ “ಹಳತ್ತು” ಹೇಳಿ ಅಡ, ಮಾಷ್ಟ್ರುಮಾವ ಹೇಳಿತ್ತಿದ್ದವು ) ವಯೋವೃದ್ಧ ಆಗಲೀ, ಜ್ಞಾನವೃದ್ಧರಾಗಲೀ, ಇಬ್ರಿಂಗೂ ಗೌರವ ಕೊಡ್ತು ನಮ್ಮ ಸಮಾಜ. ನಮ್ಮ ಸಂಸ್ಕೃತಿಯ ಬೇರು ಅವ್ವೇ ಹೇಳಿ ನಂಬಿಗೊಂಡು ಬದ್ಕುದು ಸನಾತನತೆ. ಮನೆ ಮನೆಲಿದೇ ಹಿರಿಯರು ಇರೆಕ್ಕು ಹೇಳಿ ಅಪೇಕ್ಷೆ ಎಲ್ಲೊರಿಂಗೂ ಇರ್ತು. ಅಜ್ಜ-ಅಜ್ಜಿ ಸೇರಿ ಪುಳ್ಳಿಯಕ್ಕಳ ಬೆಳೆಶುತ್ತದರ ನಾವು ಕಂಡುಗೊಂಡೇ ಬೆಳದ್ದು. ಅಲ್ಲದೋ? ಮನೆಯ ಕ್ರಮಂಗೊ ಪುಳ್ಳಿಯಕ್ಕೊಗೆ ದಾಂಟಲೆ ಹೆರಿಯವು ಬೇಕೇ ಬೇಕು.

ತುಂಬಿದ ಮನೆಲಿ ಅಜ್ಜಿಯಕ್ಕೊ ಇದ್ದರೆ ಆ ಮನೆಯ ಬರ್ಮೇ ಬೇರೆ!
ಮನೆ ಒಳದಿಕ್ಕೆಯೇ ಜೆಗಿಲಿ ಕರೆಲಿ ಕಾಲುನೀಡಿ ಕೂದುಗೊಂಡು, ಪುಳ್ಳಿಯಕ್ಕಳೊಟ್ಟಿಂಗೆ ಕೊಂಗಾಟ ಮಾತಾಡಿಗೊಂಡು, ದೊಡ್ಡೋರೊಟ್ಟಿಂಗೆ kopie dames en heren horloges ಅನುಭವ ಮಾತಾಡಿಗೊಂಡು, ಅಕ್ಕಾದ್ದರ ಹೇಳಿಗೊಂಡು, ಆಗದ್ದರ ಪರಂಚಿಗೊಂಡು, ಬಂದೋರೊಟ್ಟಿಂಗೆ ಉಪಚಾರ ಮಾತಾಡಿಗೊಂಡು, ಒಂಥರಾ ಎಲ್ಲೊರಿಂಗೂ ಹತ್ತರೆ ಆಗಿರ್ತವು, ಮನೆ ಅಜ್ಜಿ.
ಪುಳ್ಳಿಯಕ್ಕೊಗೆ ‘ಅಜ್ಜಿಕತೆ’ ಹೇಳುದರ ಒಟ್ಟೊಟ್ಟಿಂಗೇ, ಮನೆ ಹೆಮ್ಮಕ್ಕೊಗೆ ಮನೆಕ್ರಮ ಹೇಳಿಕೊಟ್ಟು, ಆ ಮನೆಯ ಸಮಗ್ರ ಸ್ಥಾನಮಾನವ ಮತ್ತಾಣ ತಲೆಮಾರಿಂಗೆ ತಿಳುಸಿಕೊಡುದೇ ಅಲ್ಲದೋ, ಅಜ್ಜಿಯಕ್ಕಳ ಪ್ರಾಥಮಿಕ ಕರ್ತವ್ಯ? ಒಂದು ಮನೆಲಿ ಅಜ್ಜಿ ಇದ್ದವು ಹೇಳಿ ಆದರೆ ಆ ಮನೆ ಪುಳ್ಳಿಯಕ್ಕಳ ನೋಡೆಕ್ಕು! ಎಂತಾ ಸಂಸ್ಕಾರ, ಎಂತಾ ಗುಣ, ಎಂತ ಜ್ಞಾನ ಸಂಪತ್ತು!!
ಮನೆ ಬೆಳಗುವ ಮನಸ್ಸಿಪ್ಪ ಎಲ್ಲೊರಿಂಗೂ ‘ಅಜ್ಜಿ’ ಹೇಳಿರೆ ಸೌಭಾಗ್ಯದ ಪ್ರತೀಕ – ಆ ಮನೆಯ ಇಷ್ಟರಒರೆಂಗೆ ಬೆಳೆಸಿದ ಹೆಮ್ಮಕ್ಕೊ ಅವ್ವೇ ಅಲ್ಲದೋ, ಹಾಂಗೆ. ಇಂತಾ ಸೌಭಾಗ್ಯ ಎಲ್ಲೊರ ಮನೆಗೂ ಬರೆಕ್ಕು ಹೇಳ್ತದು ಹಳೇ ಹೆಮ್ಮಕ್ಕಳ ಮನಸ್ಥಿತಿ.

ಸೋಣೆ ತಿಂಗಳಿಲಿ ಇಂತದೇ ಒಂದು ಅಜ್ಜಿ ನಮ್ಮ ಮನೆಯ ಹೊಸ್ತಿಲು ದಾಂಟಿ ಒಳ ಬತ್ತಡ. ಸೋಣೆ ಅಜ್ಜಿ ಹೇಳಿ ದಿನಿಗೆಳುಗು ಅದರ. ಮನೆಯ ಒಳ ಬಂದು ಮನೆಗೆ ಸೌಭಾಗ್ಯ ತಂದು ಕೊಡ್ತಡ. ಮುಖ್ಯ ಹೊಸ್ತಿಲಿಲೇ ವಾಸ ಆಗಿ ಇರ್ತಡ. ಮನೆಯ ಸುಖ ಶಾಂತಿ ನೆಮ್ಮದಿ ಯೇವತ್ತಿಂಗೂ ಇರ್ತ ಹಾಂಗೆ ನೋಡಿಗೊಳ್ತಡ. ಹಾಂಗಾಗಿ, ಆ ಸಮಯಲ್ಲಿ ದೇವರೊಳಾಣ ಹೊಸ್ತಿಲಿನ ಮನೆಯ ಗೃಹಲಕ್ಷಿ (ಮನೆಹೆಮ್ಮಕ್ಕೊ) ಶುದ್ಧಮಾಡಿ, ಪೂಜೆ ಮಾಡಿ ಮಡಗಿರೆ ಅಜ್ಜಿ ಭಾಗ್ಯಲಕ್ಷ್ಮಿಯಾಗಿ ಒಳ ಬತ್ತಡ ಹೇಳಿ ನಮ್ಮ ಅಜ್ಜಿಯಕ್ಕಳ- ಅತ್ತೆಕ್ಕಳ ನಂಬಿಕೆ. ಅಲ್ಲದೊ?

~~
ಸೋಣೆ ತಿಂಗಳಿನ ಶೆಂಕ್ರಾಂತಿ ತುಂಬ ವಿಶೇಷ. ‘ಸೋಣೆಶೆಂಕ್ರಾಂತಿ ಮಾಡುದು’ ಹೇಳಿಯೇ ಹೆಸರು ಅದಕ್ಕೆ.

ಬಾಕಿ ದಿನಲ್ಲಿ ಮಾಡ್ತ ‘ಹೊಸ್ತಿಲಿಂಗೆ ಹೊಡಾಡು’ತ್ತ ಕಾರ್ಯಂದ ರೆಜ್ಜ ವೆತ್ಯಾಸ ಇದ್ದು. ಬೀಜದಬೊಂಡು, ಬೇಳೆ ಸುಟ್ಟಾಕಿದ್ದು ಎಲ್ಲ ಆ ಸೋಣೆ ಅಜ್ಜಿಗೆ ಭಾರೀ ಇಷ್ಟ ಅಡ. ಸೋಣೆಅಜ್ಜಿಗೆ ಹೇಳಿಗೊಂಡು ಹೊಸ್ತಿಲಿಲಿ – ಬಟ್ಟಮಾವ ನೈವೇದ್ಯ ಮಾಡಿದ ಹಾಂಗೆ – ಮಡಗಿ ಸಂತುಷ್ಟಗೊಳಿಸುತ್ತವು. ಮುನ್ನಾದಿನ ಹೊತ್ತೋಪಗ ಬೀಜಸುಟ್ಟಾಕುವಲ್ಲಿಂದಲೇ ಸುರು ಆವುತ್ತು ಸೋಣೆಶೆಂಕ್ರಾಂತಿ. ಆದರೆಂತ ಮಾಡುದು? ಮುನ್ನಾಣ ದಿನ ಪರಿಮ್ಮಳ ಮಾಂತ್ರ. ಬೀಜದಬೊಂಡು ತಿಂಬಲಿಲ್ಲೆ. ಮರದಿನ ಸೋಣೆಅಜ್ಜಿಗೆ ಮಡಗಿಕ್ಕಿಯೇ ತಿಂಬದು. 🙁

ಶೆಂಕ್ರಾಂತಿದಿನ ಉದಿಯಪ್ಪಗ ಅಮ್ಮ (ಮನೆ ಯೆಜಮಾಂತಿ) ಮಿಂದು, ಚೆಂಡಿಹರ್ಕಿನ ಬೆಳಿಜೊಟ್ಟು ಕಟ್ಟಿಗೊಂಡು, ಶುದ್ದಲ್ಲಿ, ಚೆಂಬಿನ ಕೊಡಪ್ಪಾನಲ್ಲಿ ನೀರೆಳದು ತಂದು, ದೇವರ ಸನ್ನೆ, ದೇವರ ಪಾತ್ರಂಗಳ ತೊಳಕ್ಕೊಂಡು, ಒಂದು ತಟ್ಟೆ ಹಿಡ್ಕೊಂಡು ಹೂಗು ಕೊಯಿವಲೆ ಹೋಕು. ನಾಕು ಮಲ್ಲಿಗೆ, ನಾಕು ಯೇವದಾರು ಬೆಳಿ ಹೂಗು ಕೊಯಿಕ್ಕೊಂಡು ಬಕ್ಕು. ಅದರೊಟ್ಟಿಂಗೆ ಸೋಣೆ ಅಜ್ಜಿಗೆ ಕುಶೀ ಅಪ್ಪಂತದ್ದು – ಸೋಣೆತಿಂಗಳಿನ ವಿಶೇಷದ್ದು – ಸೋಣೆಹೂಗು (ನೀರ್ಕಡ್ಡಿ ಸೆಸಿ), ಕೆರಮಣೆ ಹೂಗು, ಕೊಡೆ ಹೂಗನ್ನುದೇ ಕೊಯಿಗು – ಜಾಲಕರೆಲಿ ಎಲ್ಲ ಚಿಗುರಿ ಚಿಗುರಿ ಇಪ್ಪಂತದ್ದು, (ಬಾಕಿಸಮಯದ ಹೊಸ್ತಿಲಿಂಗೆ ಹೊಡಾಡುದಕ್ಕೆ ಅದೆಲ್ಲ ಬೇಡ, ಸೋಣೆಅಜ್ಜಿಗೆ ಬೇಕಾಗಿ ವಿಶೇಷ ಸುವಸ್ತು ಅದು.) ಮತ್ತೆ ಒಳ ಬಂದು ಗಂಧ ತಳದು, ಹರಿವಾಣಕ್ಕೆ ಇಳುಸಿ, ಎರಡು ಅಕ್ಕಿಕಾಳು ಹಾಯ್ಕೊಂಡು ಹೊಸ್ತಿಲಿನ ಎದುರು ತೆಯಾರಿ ಮಡಿಕ್ಕೊಂಗು. ದೊಡ್ಡ ಕೂಸುಗೊ ಇದ್ದರೆ ಅವುದೇ ಕೂಡಿಗೊಂಗು ಈ ಕಾರ್ಯಕ್ಕೆ.

ಹೊಸ್ತಿಲ ಪೂಜೆ ಮಾಡ್ಳೆ ಮೊದಾಲು ಹೊಸ್ತಿಲಿನ ಉದ್ದಿ ’ಶುದ್ದ’ ಮಾಡಿಯೊಂಗು. ಅಲ್ಲ, ಹೊಸ್ತಿಲಿಂಗೆ ಅಶುದ್ಧ ಅಪ್ಪಲೆ ಆರುದೇ ಮೆಟ್ಟಿ-ತಟ್ಟಿ ಎಂತೂ ಮಾಡ್ತವಿಲ್ಲೆ, ಮಾಡ್ಳೂ ಆಗ ಇದಾ! ಆದರೂ ದೂಳು ಹೋಪಲೆ ಬೇಕಾಗಿ ರೆಜಾ ಉದ್ದಿಗೊಂಗು. ಅಷ್ಟೆ! “ಇನ್ನು ಎಲ್ಲ ಮುಗಿವನ್ನಾರ ದಾಂಟುಲಿಲ್ಲೆ, ಹಾಂ!” ಹೇಳಿ ಹತ್ತರೆ ನಿಂದ ಮಕ್ಕಳ ಜೋರುದೇ ಮಾಡಿಗೊಂಗು.
ಗ್ಲಾಸಿಲಿ ರಜ್ಜ ಸೇಡಿಹೊಡಿಗೆ ನೀರುಹಾಕಿಯೊಂಡು ಬೆಳಿನೀರು ಮಾಡಿಯೊಂಗು. ಬೆಳಿವೇಷ್ಟಿಯಕರೆ ತಿರ್ಪಿಮಾಡಿದ ನೆಣೆಯ ಆ ಬೆಳಿನೀರಿಂಗೆ ಅದ್ದಿ ಹೊಸ್ತಿಲಿಲಿ ಗೆರೆ ಬರಗು. ಬಟ್ಟಮಾವ° ಮಂಡ್ಳಹಾಕಿದ ಹಾಂಗೆಯೇ, ಬೇಕಾರೆ ಅದರಿಂದಲೂ ಚೆಂದಕ್ಕೆ! – ಹೆಮ್ಮಕ್ಕೊ ಅಲ್ದಾ? ಚಿತ್ರಲ್ಲಿ ಎಲ್ಲ ಉಷಾರಿಗಳೇ. ಹಸಿ ಇಪ್ಪಗ ಎಂತೂ ವಿಶೇಷ ಕಾಣದ್ರೂ, ಆ ಬೆಳಿನೀರು ಒಣಗಿ ಅಪ್ಪಗ ಅಲ್ಲಿ ಚೆಂದದ ಗೆರೆಗೆರೆ ಕಾಂಗು, ರಂಗೋಲಿಯ ಕರೆಯ ಹಾಂಗೆ! ಮಕ್ಕೊಗೆ ಈಚೊಡೆಂದ ಆಚೊಡೆಂಗೆ ಹೋಯೆಕ್ಕು ಹೇಳಿ ಜೋರು ಅನಿಸುದು ಈಗಳೇ ಇದಾ!ಪಾಪ!!
(ಅಡ್ಕತ್ತಿಮಾರು ಮಾವ ಆ ರಂಗೋಲಿ ಗೆರೆಗಳ ಪಟತೆಗದ್ದವೋ ಗೊಂತಿಲ್ಲೆ, ತೆಗದ್ದು ಇದ್ದರೆ ಕಳುಸುಗು!)

ದೇವರೊಳ, ಒಳಾಣ ಹೊಡೆಲಿ ಕೂದ ಹೆಮ್ಮಕ್ಕೊ, ಹೂಗಿನ ಹರಿವಾಣಂದ ಒಂದೊಂದೇ ಸುವಸ್ತುಗಳ ಹೊಸ್ತಿಲಿಂಗೆ ಮಡುಗುಲೆ ಸುರು.

  • ಮೊದಲು ಗಂಧದ ಬೊಟ್ಟು, ಹೊಸ್ತಿಲಿನ ಎರಡೂ ಕರೆಂಗೆ, ಮತ್ತೆ ನೆಡುಕಂಗೆ ಎರಡು – ಒಟ್ಟು ನಾಕು,
  • ಮತ್ತೆ ಎರಡೆರಡು ಅಕ್ಕಿ ಕಾಳು, ಆ ಗಂಧದ ಬೊಟ್ಟುಗಳ ಮೇಲೆ,
  • ಮತ್ತೆ ಹೂಗುಗೊ, ಆ ಗಂಧಾಕ್ಷತೆ ಮೇಗಂಗೆ,
  • ಮತ್ತೆ ಸೋಣೆ ಅಜ್ಜಿಯ ವಿಶೇಷದ ಹೂಗುಗೊ – ಸೋಣೆ ಹೂಗುದೇ, ಕೆರಮಣೆ ಹೂಗದೇ, ಕೊಡೆ ಹೂಗುದೇ,
  • ಮತ್ತೆ ನಿನ್ನೆಯೇ ಸುಟ್ಟಾಕಿ ಮಡಗಿದ ಬೀಜದ ಬೊಂಡು,ಹಲಸಿನ ಬೇಳೆ, ಎರಡೆರಡು…
  • ಮತ್ತೆ ಕೆಲವುದಿಕ್ಕೆ ಎಲೆತಿಂತ ಸಾಮಗ್ರಿದೇ ಮಡಗುತ್ತವು. ಅದು ಮನೆಕ್ರಮ – ಅಜ್ಜಿಯಕ್ಕೊ ಹೇಳಿರೆ ಮಾಂತ್ರ, ಎಲ್ಲ ದಿಕ್ಕೆ ಇಲ್ಲೆ.

ಇಷ್ಟೆಲ್ಲ ಮಡಗಿಕ್ಕಿ ಹೆಮ್ಮಕ್ಕೊ ಎಲ್ಲರುದೇ ಒಂದು ನಮಸ್ಕಾರ ಮಾಡುದು, ಹೊಸ್ತಿಲಿಂಗೆ – ಒಳಂದ, ಹೆರಾಣ ಹೊಡೆಂಗೆ.

ಕೆಲವು ಮನೆಲಿ ಒಂದು ಹವ್ಯಕ ಪದ್ಯ (ಗದ್ಯ, ಮಂತ್ರದ ನಮುನೆ ಹೇಳ್ತದು)ದೇ ಹಾಡ್ತ ಕ್ರಮ ಇದ್ದು.
ಅದು ಹೀಂಗಿದ್ದು:

ಹೊಸ್ತಿಲೆ ಹೊಸ್ತಿಲೆ ಹೊನ್ನ ಹೊಸ್ತಿಲೆ |
ಚಿನ್ನದ ಗಿಂಡಿಲಿ ನೀರುತತ್ತೆ |
ಬೆಳ್ಳೀ ತಟ್ಟೆಲಿ ಹೂಗುತತ್ತೆ ||
ಗೌರೀ ದೇವಿಯ ಸೊಸೆ ಅಪ್ಪೆ|*
ಗಂಗಾ ದೇವಿಯ ಮಗಳಪ್ಪೆ ||**
ಒಲೆ ಹೊತ್ತುಸುವ ಸೌಭಾಗ್ಯ ಕೊಡು ಹೊಸ್ತಿಲೆ ||***
ಸರ್ವ ಮಂಗಲ ಮಾಂಗಲ್ಯೇ…..
….. ನಮೋಸ್ತುತೇ ||
ಹೇಳುಗು.
ಪೂಜೆಗೆ ಕೂದುಗೊಂಡು – ಶುದ್ಧಸ್ಫಾಟಿಕ ಭಿತ್ತಿಕಾ ವಿಲಸಿತೈಃ ಸ್ತಂಭೈಶ್ಚ ಹೈಮೈಃ ಶುಭೈಃ – ಹೇಳಿ ಬಟ್ಟಮಾವ ಹೇಳುದುದೇ ಸಾಮಾನ್ಯ ಇದೇ ಅರ್ತ ಬತ್ತಲ್ದಾ?

(* ಗೌರೀ ದೇವಿಯ ಸೊಸೆ ಹೇಳಿರೆ, ಶ್ರೀಮಂತರ ಮನೆ ಸೊಸೆ ಅಪ್ಪ ಹಾಂಗೆ ಮಾಡು,
** ’ಗಂಗಾ ದೇವಿಯಷ್ಟೇ ಪವಿತ್ರ ಜೀವನಪರ್ಯಂತ ಇಪ್ಪೆ’ ಹೇಳಿ ಅರ್ತ.
*** ನಿತ್ಯ ಒಲೆಹೊತ್ತುಸುವ ಜವಾಬ್ದಾರಿಯ, ಸುಮಂಗಲೆ ಮನೆಹೆಮ್ಮಕ್ಕೊ ಆಗಿ ಮಾಡು ಹೇಳಿ ಹೊಸ್ತಿಲದೇವರ ಹತ್ರೆ ಪ್ರಾರ್ಥನೆ.)

ಮಾಷ್ಟ್ರುಮನೆ ಅತ್ತೆ ಹೇಳಿದ ಪ್ರಕಾರ ಒಂದೊಂದು ಮನೆಲಿ ರಜ ರಜ ವೆತ್ಯಾಸ ಇಕ್ಕು, ಮನೆಪಾಟ ಹೇಳಿ ಇರ್ತನ್ನೆ, ಹಾಂಗೆಡ!

ಇಷ್ಟೆಲ್ಲ ಹೇಳಿ ಆದ ಮತ್ತೆ, ಗಿಂಡಿನೀರಿನ ತೀರ್ಥ ಹೇಳಿಗೊಂಡು ಕುಡಿಗು, ಹೊಸ್ತಿಲಿಂದ ಎರಡೆರಡು ಹೂಗು ತೆಗದು ಪ್ರಸಾದ ಹೇಳಿಗೊಂಡು ಸೂಡುಗು, ಬೀಜದಬೊಂಡು ಪ್ರಸಾದಕ್ಕೆ ಕಾದುಗೊಂಡು ಇದ್ದ ಮಕ್ಕೊಗೆ ಎರಡೆರಡು ಕೊಡುಗು. 🙂

ಕೆಲವು ಮನೆಲಿ ಹೆಮ್ಮಕ್ಕ ಹಿರಿಯೋರಿಂಗೆ (ಗಂಡ, ಮಾವ, ಅತ್ತೆ … ) ಹೊಡಾಡ್ತಕಾರ್ಯ ಮಾಡ್ತವು.

ಶ್ರದ್ಧೆಲಿ ಇಷ್ಟು ಪೂಜೆ ಮಾಡಿಕ್ಕಿ ಎಲ್ಲ ಬಿರುದವು ಅಲ್ಲಿಂದ.
’ಒಳ ಇದ್ದೋರು ಹೆರ ಹೋಪಲಕ್ಕು’ ಹೇಳಿ ಹೆಮ್ಮಕ್ಕೊ ಅನುಮತಿ ಕೊಡ್ತವು. ಮಕ್ಕಳ ಅರ್ಗೆಂಟುದೇ ನಿಂದತ್ತು. ’ಹೊಸ್ತಿಲಿಂಗೆ ಮೆಟ್ಟೆಡೀ’ ಹೇಳಿ ಅಜ್ಯಕ್ಕೊ ಜೋರು ಮಾಡಿ ಹೇಳುಗು, ಅದು ಬೇರೆ ಪೂಜೆ ಆದ ಹೊಸ್ತಿಲು – ಬೆಳಿ ಬೆಳಿ ಗೆರೆ, ಹೂಗು, ಬೇಳೆ, ಬೀಜದಬೊಂಡು ಮಡಿಕ್ಕೊಂಡು ಇದ್ದು – ಆ ಹೆದರಿಕೆಲಿ ಮಕ್ಕೊ ಒಂದು ಅಡಿ ಮೊದಲಿಂದಲೇ ಕಾಲು ನೇಗ್ಗಿ – ಮಡಗುದೆಲ್ಲಿಗೆ? ಹೊಸ್ತಿಲಿನ ನೆಡು ಮದ್ಯಕ್ಕೆ – ಅಜ್ಜಿಗೆ ಬೀಪಿ ಏರಿತ್ತತ್ತೆ! ಮಕ್ಕೊ ಇನ್ನೊಂದು ಕಾಲನ್ನುದೇ ಹೊಸ್ತಿಲಿಂಗೆ ಮೆಟ್ಟಿ, ತೆಗದ್ದು ಪುಡ್ಚ(ಓಡಿದವು).

ಅಂತೂ ಇದಾದ ಮತ್ತೆ ಒಳ ಬೀಜದ ಬೊಂಡಿನ -ನಿನ್ನೆ ಸುಟ್ಟಾಕಿದ್ದು -ಹಂಚುವ ಕಾರ್ಯ. ಮಕ್ಕೊ ಎಲ್ಲ ಇಷ್ಟೊತ್ತು ಕಾದುಕೂದ್ದೇ ದೊಡ್ಡದು. ಇನ್ನು ಮನಸ್ಸು ಕೇಳ.ಪಾಪ! ಮತ್ತೆ ಅದರ ತಿಂದುಗೊಂಡೇ ಉದಿಯಪ್ಪಗಾಣ ಕಾಪಿ, ತಿಂಡಿ. ಕಾಪಿ ಎಲ್ಲ ಕುಡುದು, ಒಂದರಿಯಾಣ ಒತ್ತರೆ ಆದ ಮತ್ತುದೇ ಅಮ್ಮನ ತಲೆಲಿ ಬೆಳಿ ಜೊಟ್ಟು ಹಾಂಗೇ ಇಕ್ಕು. ಮೋರೆಲಿ ಎರಡು ಅಕ್ಕಿಕಾಳುದೇ, ಗಂಧಕ್ಕೆ ಅಂಟಿಗೊಂಡು. 🙂
ಅಮ್ಮ ಕೂದುಗೊಂಡು ಇದ್ದರೆ ಆ ಬೆಳಿಜೊಟ್ಟು ಬಿಡುಸುದು ಮಕ್ಕೊಗೆ ಒಂದು ಕುಶಿ, ಅಲ್ದಾ? 😉

ಆ ದಿನ ಹೆಮ್ಮಕ್ಕೊಗೆ ವ್ರತ. ಕೊಳೆದು ಎಂತದೂ ತಿಂಬಲಿಲ್ಲೆ. ಸಜ್ಜಿಗೆಯೋ, ಹಸರೋ, ಹೀಂಗೆಂತಾರು. ಮದ್ಯಾನ್ನಕ್ಕೆ ಬೆಳಿಅಶನ. ಇರುಳಿಂಗೆ ಮತ್ತೆ ಪಲಾರ.
ಎಡೆಲಿ ಎಂತ ಆಹಾರ ಇಲ್ಲೆ – ನೀರದೇ ಕುಡಿಯವು!
ಇದು ಸೋಣೆ ಶೆಂಕ್ರಾಂತಿ ಶುದ್ದಿ.

ಆ ತಿಂಗಳಿಲಿ ಬತ್ತ ಶೆನಿವಾರವನ್ನುದೇ ’ಸೋಣೆಶೆನಿವಾರ’ ಹೇಳಿ ಆಚರಣೆ ಮಾಡ್ತವು. ಬೀಜದ ಬೊಂಡು, ಬೇಳೆ ಎರಡು ಬಿಟ್ಟು, ಮತ್ತೆಲ್ಲ ಹೀಂಗೇ. ಹೊಸ್ತಿಲಿಂಗೆ

~~

ಹಳೆಕಾಲಲ್ಲಿ ಅಜ್ಜಿಯಕ್ಕೊ ನಿತ್ಯವೂ ಉದಿಯಪ್ಪಗ ಮಿಂದು, ನೀರುತಂದು, ಹೊಸ್ತಿಲಿಂಗೆ ಹೊಡಾಡಿ ಯೇ ದಿನ ಸುರು ಮಾಡಿಗೊಂಡು ಇದ್ದದಡ, ಮಾಷ್ಟ್ರುಮಾವ ಮೊನ್ನೆ ನೆಂಪುಮಾಡಿಗೊಂಡು ಇತ್ತಿದ್ದವು, ಒಪ್ಪಕ್ಕನತ್ರೆ ಮಾತಾಡುವಗ.

ಮನೆ, ಮನೆಯ ಹೊಸ್ತಿಲು, ಬಾಗಿಲು, ದೇವರೊಳ, ಅಡಿಗೆಕೋಣೆ, ಎಲ್ಲದರ್ಲಿಯುದೇ ಚಾಮಿಯ ಕಾಂಬದು ನಮ್ಮ ಕ್ರಮ.
ಪ್ರತಿಯೊಂದನ್ನೂ ಅದರದ್ದೇ ರೀತಿಲಿ ಆರಾಧನೆ ಮಾಡುದು ನಮ್ಮ ಹಿರಿಯವಕ್ಕೆ ಗೊಂತಿತ್ತು. ಒರಿಷದ ವಿವಿಧ ಕಾಲಕ್ಕೆ ಅನುಗುಣವಾಗಿ ಪೂಜಾಕ್ರಮಲ್ಲಿದೇ ವಿಶೇಷತೆಯ ಸೇರಿಸಿಗೊಂಡು ಕಾಲನ ಮಿತಿಯನ್ನುದೇ ಗಮನಲ್ಲಿ ಮಡಿಕ್ಕೊಂಡು ಇತ್ತಿದ್ದವು. ಸೋಣೆಹೂಗು, ಬೇಳೆ – ಇಂತಹ ವಸ್ತುಗಳೇ ಇದಕ್ಕೆ ಸಾಕ್ಷಿ. ಎಂತ ಸರಳ ಆಚರಣೆ, ಅಲ್ದಾ?

ಈಗ ಮಾಂತ್ರ ಎಲ್ಲ ಮರದ್ದು. ಟೀವಿಲಿ ಬತ್ತ ದಾರವಾಹಿಲಿ ಕಾಂಬ ವರಮಹಾಲಕ್ಷ್ಮಿ ವ್ರತದ ಪೂಜೆ ಮಾಂತ್ರ ಗೊಂತು. ಛೇ!
ನಮ್ಮ ಅಜ್ಜಿಯಕ್ಕಳ ಇಂತಾ ಮನೆ ಕ್ರಮಂಗ ಮರದೇ ಹೋಪದು ಬೇಡ. ಎಂತ ಹೇಳ್ತಿ?

ದಶಂಬರಲ್ಲಿ ಬತ್ತ ಕ್ರಿಸ್ಸುಮಸ್ಸಿಂಗೆ ಬೇಳದ ರೋಸಮ್ಮನಲ್ಲಿಗೆ ಬೆಳಿಗೆಡ್ಡದ ಅಜ್ಜ ಬತ್ತಡ, ಕೆಂಪಂಗಿ ಹಾಯ್ಕೊಂಡು. ಎಂತೆಂತದೋ ಒಸಗೆ ಕೊಡ್ತಡ. ಅದು ಮೂಡನಂಬಿಕೆ ಅಲ್ಲ ಹೇಳಿ ಅವು ಹೇಳ್ತವು. ಸೋಣೆಅಜ್ಜಿ ಎಂತಕೆ ಮೂಡನಂಬಿಕೆ ಆಯೆಕ್ಕು?
ಎಂಗಳಲ್ಲಿಗೆ ಸೋಣೆಅಜ್ಜಿ ಬಯಿಂದು ಈ ಸರ್ತಿ – ಹೇಳಿ ಆನು ಎದೆತಟ್ಟಿಗೊಂಡು ಹೇಳ್ತೆ. ನಿಂಗಳೂ ಹೇಳ್ತಿರನ್ನೆ?
ಗೆಡ್ಡ ಬಿಟ್ಟ ಕೆಲವು ಜೆನ ಇದರ ಕಂದಾಚಾರ ಹೇಳಿ ಹೇಳುಗು, ಸ್ತ್ರೀಗಳ ಮನೆ ಹೆರ ಕಳುಸದ್ದಕ್ಕೆ ಹೀಂಗೆಲ್ಲ ಮಾಡುಗು ಹೇಳಿ ಬೈಗು, ಆದರೆ ಪ್ರಕೃತಿ ಸಹಜವಾದ ಚಿಂತನೆಗೊ ಕಂದಾಚಾರ ಎಂದಿಂಗೂ ಆವುತ್ತಿಲ್ಲೆ!

ಹೊಸ್ತಿಲಿಂಗೆ ಹೊಡಾಡುವಗ ಆ ಮನೆ ಹೆಮ್ಮಕ್ಕಳ ತಲೆಲಿ ಆ ಹೊಸ್ತಿಲಿನ ಬಗೆಗೆ ಎಂತ ಆಲೋಚನೆ ಇರ್ತು?
ತನ್ನ ಕಟ್ಟಿ ಹಾಕಿದ ತಡೆಗೋಡೆಯ ಹಾಂಗೆ ಕಾಣ್ತೋ, ಅಲ್ಲ ತನಗೆ, ತನ್ನ ಮನೆಗೆ ರಕ್ಷಣೆ ಕೊಡ್ತ ಪೂಜನೀಯ ಕವಚದ ಹಾಂಗೆ ಕಾಣ್ತೋ?
ಎನಗೆ ಈ ಮನೆಲಿ ಸ್ವಾತಂತ್ರ ಕಮ್ಮಿ ಆಯಿದು ಹೇಳಿಯೋ? ಅಲ್ಲ ಎನ್ನ ಮನೆ ಇನ್ನುದೇ ಬೆಳಗಲಿ ಹೇಳಿಯೋ?
ಎನ್ನ ಗಂಡ ಆನು ಹೇಳಿದಾಂಗೆ ಕೇಳಲಿ ಹೇಳಿಯೋ? ಅಲ್ಲ, ಎನ್ನ ಮನೆಯೋರು ಸಮಾಜಲ್ಲಿ ಇನ್ನುದೇ ಬೆಳೆಯಲಿ ಹೇಳಿಯೋ?

ಸ್ತ್ರೀ ಸ್ವಾತಂತ್ರ್ಯ, ಅದು ಇದು ಹೇಳಿ ಎಲ್ಲ ಬೊಬ್ಬೆ ಹೊಡವವಕ್ಕೆ ಈ ಸುಂದರ ಕಲ್ಪನೆಗೊ ಹೇಂಗೆ ಅರ್ತ ಅಕ್ಕು? ಗ್ರೇಶಿರೆ ಬೇಜಾರಾವುತ್ತು!!

ಮನೆಗೆ ಬೇಕಾಗಿ ಸರ್ವಸ್ವವನ್ನುದೇ ತ್ಯಾಗಮಾಡುವ ಎಷ್ಟೋ ಜನ ಅಮ್ಮಂದ್ರಿಂಗಾಗಿ ಈ ಶುದ್ದಿ.

ಒಂದೊಪ್ಪ: ನಿಂಗಳಲ್ಲಿಗೂ ನಿಂಗಳ ಅಮ್ಮನ ನಂಬಿಕೆಗೆ ಬೇಕಾಗಿ ಸೋಣೆ ಅಜ್ಜಿ ಬರಳಿ, ಕೊಶಿ – ಸೌಭಾಗ್ಯ ತರಳಿ. ಆತೋ?

ಸೂ: ಒಪ್ಪಣ್ಣ ಒಟ್ಟಿಂಗೆ ಬಪ್ಪವು ಒಟ್ಟು ಐವತ್ತು ಜೆನ ಆದವು. ಆಗಲಿ, ಆವುತ್ತಷ್ಟು ಜೆನ ಆಗಲಿ, ಎಲ್ಲೊರು ಒಟ್ಟಿಂಗೆ ಹೋಪ, ದಾರಿ ಬಚ್ಚಲು ಗೊಂತಪ್ಪಲಿಲ್ಲೆ ಇದಾ!

17 thoughts on “ನಿಂಗಳಲ್ಲಿಗೂ ಸೋಣೆ ಅಜ್ಜಿ ಹೊಸ್ತಿಲು ದಾಂಟಿ ಬಯಿಂದಾ?

  1. ಕಳುದೊರುಷದ ಸೋಣೆ ಸಮಯದ ಶುದ್ದಿ.. 🙂
    ನಿನ್ನೆ ಸಂಕ್ರಮಣ ಅದಾ. ಸೋಣೆ ಅಜ್ಜಿ ನಿನ್ನೆಂದ ಬಪ್ಪಲೆ ಸುರು ಆಯಿದು.
    ಬೈಲಿನ ಅತ್ತೆಕ್ಕೊ, ಚಿಕ್ಕಮ್ಮಂದ್ರು, ಹಿರಿಯಕ್ಕಂದ್ರು ಎಲ್ಲ ಹೊಡಾಡುಲೆ ಸುರು ಮಾಡಿಕ್ಕು. ಅಲ್ಲದಾ..?

  2. ಸೂಪರ್….
    ಎಂಗಳಲ್ಲಿಗೂ ಬತ್ತು ಸೋಣೆಜ್ಜಿ….
    ಸಣ್ಣಾದಿಪ್ಪಾಗ [ಈಗಳೂ.. :P] ಆ ಬೀಜದಬೊಂಡಿಂಗೆ ಆಸೆಬಿಟ್ಟೊಂಡಿದ್ದದು, ಅಮ್ಮನ ಬೆಶಿ ಬೆಶಿ ಬೈಗಳು, ಅಮ್ಮ 'ಹೊಸ್ತಿಲೆ ಹೊಸ್ತಿಲೆ…' ಪದ್ಯ ಹೇಳುದು ಎಲ್ಲ ನೆಂಪಾತು….

    ಹೇಳಿದ ಹಾಂಗೆ, ಅಜ್ಜಿಯಕ್ಕಳ ಹೊಗಳಿದ್ದು ಕೇಳಿ ಕುಶೀ ಆತು…. 😉

  3. Thumba thumba layika aayidu oppaNNa baraddu.
    Hariyolmelippaga ajji, abbe, chikkammandru hingella (kelavu steps rajja vyathyaasa ippaloo saaku) soNe sankraanthi aacharaNe maadiddu kaNNinge kattida hange nenapaathu. Ella steps bhari laykalli baradde… Thumba laaykalli photos mulaka bhari chendakke moodi bayindu lEkhana. Haangaare, InnaaNa vaarakke kaayivuva saradi allado?

  4. laikaidu baraddu aata oppanno.hostilinge estondu mahatva kottide blogili.namma hiriyara aachara anubhava ella blogili eegana generationinge tilushutte. olledagali good luck.

  5. @ ವಜ್ರೋತ್ತಮ:

    << ಅದೆಂತಕೆ ಬಾವ ಸರ್ವ ಮಂಗಲ ಮಾಂಗಲ್ಯ ಮಂತ್ರ ಅರ್ದಲ್ಲೆ ಕಟ್ಟಿದ್ದು… >>
    ಎಂತಕೆ ಡೈಮಂಡುಬಾವಂಗೆ ಈ ಕನುಪ್ಯೂಸು ಬಂದದು ಒಪ್ಪಣ್ಣನ ಮೇಲೆ?
    ಅಲ್ಲಿ ನೋಡು, ಆರು ಗೆರೆಯ ಒಂದೇ ಉಸುಲಿಲಿ ಹೇಳಿದೆ, ಏಳುನೇದಕ್ಕಪ್ಪಗ ಪಕ್ಕನೆ ಉಸುಲು ಸಾಕಾತಿಲ್ಲೆ. ಉಸುಲು ಎಳದಪ್ಪಗ ಶ್ಲೋಕ ಮುಗುತ್ತು. ಎಂತ ಮಾಡುಸ್ಸು? 🙁
    ಡೈಮಂಡು ಬಾವಂಗೆ ಬತ್ತಲ್ದಾ ಆ ಶ್ಲೋಕ? ಬಾರದ್ದಕ್ಕೆ ಹಾಂಗೆ ಕೇಳಿದ್ದು ಹೇಳಿ ಮುಳಿಯಾಲದಪ್ಪಚ್ಚಿ ತಿಳ್ಕೊಂಡವು ಇದಾ! :=)

  6. ಎಂತ ಸ್ತ್ರೀ ಗೆ ಸ್ವಾತಂತ್ರ್ಯಕ್ಕೆ ಬತ್ತಿ ಹೇಳಿ ಹೇಳುಲೆ ಎಂತ ಇದ್ದು? ಅಷ್ಟಕ್ಕು ಸ್ತೀಸ್ವತಂತ್ರೆ ಅಲ್ಲ ಹೇಳಿ ಒಪ್ಪಿಗೊಳೆಕ್ಕಾದ್ದೆಂತ ಇದ್ದು ಹೇಳಿ………….ಅದಿರ್ಲಿ ಏಯ್, ಈ ಪೇಪರಿನವಕ್ಕೆ ಮನ್ನು ಪುರುಂಚುವ ಕೆಲಸ ಎಂತಕಪ್ಪ????????!!!!!!!!!!ತಳಿಯದ್ದೆ ಬರವಣಿಗೆ ಮಾಡ್ಯೊಂದು ಕೂಪದು ಬಿಟ್ಟು……..ಓಯ್ ಎಂತ ಹೇಳ್ತಿ???

  7. ಒಪ್ಪಣ್ಣ ಬಾವ…
    ಎನ್ನ ಇ-ಮೇಲ್ ಪಾಸ್‌ವರ್ಡ್ ಆರಿಂಗೋ ಗೊಂತಾಯಿದು… ಎನ್ನ ಹೆಸರಲ್ಲಿ ಕಾಮೆಂಟು ಮಾಡಿದ್ದವು. ಅವ ಹೇಳಿದ ಹಾಂಗೆ ಆನು ಚಿನ್ನ ಎಲ್ಲ ತೆಗತ್ತಿಲ್ಲೆ. ಕೃಷಿಗೆ ಲೋನು ಮಾಡಿದ್ದೆ. ಅದು ಪ್ರಸಾದನ ಬಾವನ ಇನ್‌ಫ್ಲುಯೆನ್ಸಿಂದ…ಅದರ ಸರಿ ಕಟ್ಟುತ್ತೆ ಹೇಳಿ ಪ್ರಸಾದ ಬಾವನ ಹತ್ತರೆ ಹೇಳು ಮಿನಿಯಾ. ಅವ ಕೋಪ ಮಾಡದು ಬೇಡಾ ಇನ್ನಣ ಸರ್ತಿ ಲೋನು ಬೇಕಿದಾ..

  8. ಅಲ್ಲ ಒಪ್ಪಣ್ಣ ಬಾವ..ಅವನ ಮಾತಿನ ನೀನು ನಂಬುತ್ತನೇ.. ಹಾಂ… ಬೇಂಕಿನ ಪ್ರಸಾದ ಬಾವ ಆರು ಹೇಳಿ ಎನಗೆ ಗೊಂತಾತು… ಅಲ್ಲ ಬಾವ ಆ ಡೈಮಂಡು ಬಾವ ಡೈಮಂಡು ತೆಗವಗಳೆ ಕೇಶು ಕೊಟ್ಟು ತೆಗವದಾ ಹೇಳಿ ಕಾಣ್ತು.. ಹಾಂಗಿಪ್ಪಗ ಚಿನ್ನಕ್ಕೆ ಲೋನು ಮಾಡ್ತನಾ?.. ಉಮ್ಮಪ್ಪಾ ಎನಗರಡಿಯ. ಅವಂಗೆ ಕೃಷಿ ಮಾಡುವ ಮರ್ಲಿದ್ದು..ಬಹುಶಃ ಅದಕ್ಕೆ ಮಣ್ಣ ಲೋನು ಮಾಡಿಪ್ಪಲೂ ಸಾಕು..ಆದರೆ ಒಂದು ಬಾವ.. ಅವನ ಮನೆ ಮಾಡಾವಿನ ಹತ್ರೆ ಹೇಳಿ ಆಚಕರೆ ಮಾಣಿ ಹೇಳಿದ ನೆಂಪು…ಅವ ಲೋನು ಮಾಡ್ಲೆ ನೀರ್ಚಾಲು ಬೇಂಕಿಂಗೆ ಹೋಕಾ? ಅಥವಾ ಅಲ್ಲಿ ಲೋನು ಕೊಡುಗಾ? ಉಮ್ಮಪ್ಪ…ಎಂತಾದರೂ ಆಗಲಿ ಬಾವ…ಆಚಕರೆ ಮಾಣಿಗು ಬೇಂಕಿನ ಪ್ರಸಾದ ಬಾವಂಗೂ ನೊಗ ಕಟ್ಟುಲೆ ಅಡ್ಡಿ ಇಲ್ಲೆ ಅಂಬಗಾ…

  9. ದಿನಾ ಹೊತ್ತೊಪ್ಪಗ 'ಹೋವ್ತೆ' ಹೇಳಿ ಹೋಪಲೇ ನೋಡುವ ಲಕ್ಷ್ಮಿ ದೇವರಿಂಗೆ 'ಹೋಗೆಡ' ಹೇಳಿ ಬಾಗಿಲಿನ ದೇವರು ಇದ್ದನ್ನೇ, ಅಂವ ಹೇಳುಲೇ ಬೇಕಾಗಿ ನಾವು ಹೊಸ್ತಿಲಿಂಗೆ ಕೈ ಮುಗಿವದಡ. ಅಮ್ಮ ಹೇಳುಗು. ಇ ಪೇಟೇಲಿ ನೀನು ಹೇಳಿದ್ದು ಕೇಳಿರೆ 'ಅಪ್ಪಾ' ಹೇಳಿ ಬಾಯಿ ದೊಡ್ಡ ಮಾಡಿ ಕೆಳುಗಷ್ಟೇ !
    ಎಂತ ಬಾವ ಬಾವಂದ್ರದ್ದು ಪಿರಿಪಿರಿ..?ಕಾಲೆಳದೂ , ಎಳದೂ ಕೊನೆಗೆ ಹೊಂಡಕ್ಕೆ ಬಿದ್ದಿಕ್ಕಡಿ ಮತ್ತೆ?
    ಒಯ್.. ಅಂದಾಂಗೆ ಸ್ತ್ರೀ ಸ್ವಾತಂತ್ರ್ಯಕ್ಕೆ ಬತ್ತಿ ಮಡುಗಿದಿರೋ ಎನಗೆ ಪಿಸುರು ಬತ್ತು. ಆತೋ? ನಿಂಗೋ ಗಂಡುಸ್ರು ಎಲ್ಯೇಲ್ಲಿಗೋ ಲಿಂಕು ಕೊಟ್ಟಿಕ್ಕಿ ಮಾತಾಡುಲೇ ಭಾರಿ ಜೋರಿದ್ದಿ. ಮತ್ತೆ ಅದನ್ನೇ ಎಂತೆಂತದೋ ಮಾಡಿ ಎಂಗಳ ಬುಡಕ್ಕೆ ಬಂದು, ನಿಂಗೋಗೆ ಬೇಕಾದ ಹಾಂಗೆ ತಿರುಗಿಸಿಕೊಂಬದು, ತಮ್ಮ ಬೇಳೆ ಬೇಯ್ಸಿಕೊಂಬದು. ಕೊನೆಗೆ ಸಪೋರ್ಟು ಬೇರೆ! ಸರ್ತಿ ಸಂಗಟನೆಗೆ ಹೇಳಿಕ್ಕಿ ಧರಣಿ ಕೂಪಲಿದ್ದು .. ಹಾಂ.. ಜಾಗ್ರತೆ !.ಕಬರ್ದಾರ..:-)

  10. @ ವಜ್ರೋತ್ತಮ:
    ಏ ಡೈಮಂಡ್ ಬಾವ,
    ಈ ಬೇಂಕಿನ ಪ್ರಸಾದ ಬಾವನೂ, ಆಚಕರೆ ಮಾಣಿಯೂ ಅವಳಿ-ಜೆವಳಿ ಎಂತ ಅಲ್ಲ.
    ಪ್ರಸಾದಬಾವನ ಸೋದರತ್ತೆ ಮಗಂಗೆ, ಆಚಕರೆ ಮಾಣಿಯ ತಂಗೆಯ ಕೊಟ್ಟದು! ಹಾಂಗೆ ಸಂಬಂದ – ಅಷ್ಟೆ. 🙂 ಈಗ ನೀರ್ಚಾಲು ಕರ್ನಾಟಕ ಬೇಂಕಿಲಿ ಅಷ್ಟಂಟು ಮೆನೇಜರ ಹೇಳಿ ಕಾಣ್ತು.
    ಅವಿಬ್ರೂ ಒಂದೇ ಪ್ರಾಯದವು. ಒಂದೇ ಕೋಲೇಜಿಂಗೆ ಹೋದ್ದದು, ಒಂದೇ ನಮುನೆ ಆಲೋಚನೆಗೊ.ಅಂದಿಂದಲೇ ಬಾರೀ ಚೆಂಙಾಯಿಗೊ. ಆಚಕರೆ ಮಾಣಿ ಬದಿಯಡ್ಕ ಕೆಮ್ಕಂದ ಬಪ್ಪಗ ಅವರ ಮನೆಗೆ ಹೋಗಿ ಒಂದು ಕಷಾಯ ಕುಡುದಿಕ್ಕಿ ಬತ್ತ ಕ್ರಮ.
    ಆಚಕರೆ ಮಾಣಿ ಇನ್ನು ಕುತ್ತಿಕೊಟ್ಟಿದನೋ – ಅದರಡಿಯ ಒಪ್ಪಣ್ಣಂಗೆ,"ಡೈಮಂಡು ಬಾವ° ಚಿನ್ನ ತೆಗವಲೆ ಲೋನು ಮಾಡಿ ಕಂತು ಕಟ್ಟುತ್ತನೇ ಇಲ್ಲೆ" ಹೇಳಿ ಅವಕ್ಕೆ ಪಿಸುರಡ, ಮೊನ್ನೆ ಕೇಳಿಅಪ್ಪಗ ಹೇಳಿದವು.
    ಪಾಪ ಡೈಮಂಡು ಬಾವ, ಬಿಡೆಡ ಆತೋ!!!

  11. ಒಪ್ಪಣ್ಣ ಬಾವ ಎಲ್ಲಿಯಾರು ಕಂಬಳ ಇದ್ದರೆ ಹೇಳು..ಈ ಬೇಂಕಿನ ಪ್ರಸಾದ ಬಾವನನ್ನೂ ಆಚಕರೆ ಮಾಣಿಗೂ ನೊಗ ಕಟ್ಟಿ ಓಡ್ಸಲಕ್ಕಿದಾ….ಅವಿಬ್ಬರು ಬರವ ಶೈಲಿ ಕಾಂಬಗ ಅವಳಿಗಳ ಹಾಂಗೆ ಕಾಣ್ತು…

  12. ಅದಾ…. ಇದಾರು ಡೈಮಂಡ್ ಭಾವ ಹೇಳ್ತ ಹೆಸರಿನ ಎನ್ನ ಹತ್ತರಂದ ಕದ್ದದು? ಅದಕ್ಕೆ copyright ಇದ್ದು…
    ಮತ್ತೆ ಈ ಒಪ್ಪಣ್ಣಂಗೆ ಸೋಣೆ ತಿಂಗಳಿನ ಬಗ್ಗೆ ಎಂತಕೆ ಇಷ್ಟೊಂದು ಇಂಟ್ರೆಷ್ಟು?
    ಮತ್ತೆ…. ಈ ಲೇಖನಲ್ಲಿಪ್ಪ ಹೊಸ್ತಿಲಿನ ಎಲ್ಲಿಯೊ ನೋಡಿದ ಹಾಂಗಾವ್ತನ್ನೇ…. ಎಲ್ಲಿ ಹೇಳಿ ನೆಂಪಾವ್ತಿಲ್ಲೆ. ಎಂಗಳ ಹೊಡೆಯಾಣ ಸಾಜ ಇದ್ದು ಅದಕ್ಕೆ.
    ಗೊಂತಾದರೆ ಹೇಳು ಒಪ್ಪಣ್ಣೋ ಆತಾ?

  13. ಡೈಮಂಡ್ ಭಾವಂಗೆ ಲಾಷ್ಟಿನ ಎರಡು ಪ್ಯಾರ ಮಾತ್ರ ಅರ್ಥ ಆದ್ದದಾ ಹೇಳಿ ಎನಗೆ ಡೌಟು… ಅವಂಗೆ ಅದು ಮಾತ್ರ ಸಹಮತ ಅಡ.
    ಮತ್ತೆ ಈ ಸೋಣೆ ತಿಂಗಳಿನ ವಿಶೇಷತೆಗಳ ಬಗ್ಗೆ ತುಂಬಾ ಒಳ್ಳೆಯ ಲೇಖನ ಇದು. ತುಂಬಾ ಇಷ್ಟ ಆತು… ಹೀಂಗೆಯೆ ಬರೆತ್ತಾ ಇರು. ಮುಂದಂಗೆ ಒಳ್ಳೆಯ ಭವಿಶ್ಯ ನಿನ್ನದಾಗಲಿ. keep it up.
    ಮತ್ತೆ ಆ oppakka.blogspot.com ಯಾರದ್ದು? ನಿನ್ನ ತಂಗೆದೇ ಕೆಲಸವಾ ಅದು?

  14. ಬರದ್ದರ ಬಗ್ಗೆ ಎನ್ನದು ಯಾವ ಕಂಪ್ಲೇಟುದೇ ಇಲ್ಲೆ ಬಾವ….ಈ ಲೇಖನವ ಓದಿಯಪ್ಪಗ ಎನಗೊಂದು ಅನಿಸಿದ್ದು… ಈ ಹುಳಿಮಾವು ಬಾವನ ಮದುವೆ ಆವ್ತ ಕೂಸಿಂಗೆ ಏನು ಗೊಂತಿಲ್ಲದ್ದರೂ ನಡತ್ತು. ಎಂತಕೆ ಹೇಳಿದರೆ ಎಲ್ಲವೂ ಇವಂಗೆ ಗೊಂತಿದ್ದು ಇದಾ….
    ಆ ಮಂತ್ರ,, ಈ ಮಂತ್ರ…ಇಂಟರ್ನೆಟ್ಟು, ಆಟಿ ಸೋಣೆ, ಜ್ಯೋತಿಷ್ಯ…
    ಎಲ್ಲಾವುದೇ….
    ಕೊನೆಯ ಎರಡು, ಮೂರು ಪ್ಯಾರಲ್ಲಿ ಬರದ್ದಕ್ಕೆ ಎನ್ನದೂ ಸಹ ಮತ ಇದ್ದು ಮಿನಿಯಾ…
    ಅದೆಂತಕೆ ಬಾವ ಸರ್ವ ಮಂಗಲ ಮಾಂಗಲ್ಯ ಮಂತ್ರ ಅರ್ದಲ್ಲೆ ಕಟ್ಟಿದ್ದು…
    ಹೋಗಲಿ ಬಿಡು ಬಾವಾ ಎಲ್ಲಾ ನಾವೆ ಹೇಳಿದರೆ ಹೆಮ್ಮಕ್ಕ ಹೇಳುದೆಂತರ ಅಲ್ಲದಾ…

    ಕೊನೆಗೊಂದು ಎನ್ನದುದೆ ಒಪ್ಪ ತೆಕ್ಕೊ: ಲೇಖನ ಒಳ್ಳೆದಾಯಿದು, ಭರಪೂರ ಮಾಹಿತಿ ಇದ್ದು….ಇನ್ನು ಮುಂದೆಯೂ ಲೇಖನಂಗ ಬರಲಿ ಎಂಬ ’ಆಗ್ರಹ’ ಎನ್ನದು…

  15. ಅಜ್ಜಕಾನ ರಾಮ ಹೇಳಿದ ಹಾಂಗೆ ಬೀಜದ ಬೊಂದಿನ ಕಥೆ ಹೇಳಿರೆ ಮುಗ್ಯ……ಅವನ ಅಜ್ಜಿಯು ಎನ್ನ ಅಜ್ಜಿಯು ಬೀಜ ಸುಡುದು ,,, ಎಂಗೊ ಆಸೆ ಬಿಟ್ಟೋಂಡು ಅವರ ಎದುರು ಕೂರುದು…..ಸೊನೆ ರಟ್ಟುತ್ತು ಮಕ್ಕಳೇ ಹೇಳಿ ಅಜ್ಜಿಗೊ ಇಬ್ರೂ ಬೈಯ್ಯುದು……….ಆಹ ……..ಅಂದ್ರಾಣ ಸುಖವೇ ಬೇರೆ……..ಗ್ರೇಶಿರೆ ಯಾವಾಗ್ಲೂ ಮಕ್ಕೊ ಆಗಿಯೇ ಇರಕಿತ್ತು ಹೇಳಿ ಆವ್ತಿಲ್ಯೋ…….

  16. ಭಾವಾ ಹತ್ತನ್ನೆರಡು ವರುಶ ಹಿಂದೆಯ ಘಟನೆಗ ನೆಂಪಾತು ಇದರ ಓದಿ.. ಹಿಂದಾಣ ದಿನಂದ ಬಾಯಿಲಿ ನೀರು ಅರೆಶಿಯೊಂಡು ಕಾದು ಬೀಜದ ಬೊಂಡು.. ತಿಂದದ್ದು.. ನೀನೇ ಹೇಳಿದ ಹಾಂಗೆ ಹೊಸ್ತಿಲು ಮೆಟ್ಟಿ ಪುಡ್ಚ ಆದ್ದು… ಎಲ್ಲಾ ನೆಂಪಾತು.. ಸೋಣೆ ಸುರುವಾದ್ದೆ ಆದ್ದು ಪುರುಸೊತ್ತೆ ಇಲ್ಲೆ.. ಮದ್ಯಾಹ್ನ ಇರುಳಿಂಗೆ ಹೇಳಿ ಎರಡೆರಡು ಜಂಬ್ರಂಗ. ಒಟ್ಟಿಂಗೆ ನವರಾತ್ರಿ ಪೂಜೆದೆ. ಗುಣಾಜೆ ಮಾಣಿ ಎರಡೆರಡು ಸೋಡದ ಕುಪ್ಪಿ ತಂದು ಮಡಗಿದ್ದ ಹೇಳಿ ಮಾಸ್ಟ್ರಪ್ಪಚ್ಚಿ ಹೇಳಿಯೊಂದಿತ್ತವು ಹೇಳಿ ಅವನ್ತ್ರೆ ಕೇಳಿದರೆ "ಅಪ್ಪು ಮಾರಾಯಾ ಗೇಸು ತೆಗವಲೆ ಬೇಕಿದಾ" ಹೇಳಿ ನಮಸ್ತೆ ಪ್ರೋಗ್ರಾಮ್ ಇದ್ದು ಹೇಳಿ ಅಂಬ್ರೆಪ್ಪಿಲಿ ಕೊಡೆಯಾಲಕ್ಕೆ ಹೋದ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×