Oppanna.com

ಶಬ್ದ ಬ್ರಹ್ಮ

ಬರದೋರು :   ಅನಿತಾ ನರೇಶ್, ಮಂಚಿ    on   06/06/2015    12 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

ಮೊನ್ನೆ ಮೊನ್ನೆ ಒಂದು ಕಥೆ ಆದ್ದಿದಾ..

ಎನಗೆ ಉದೆಕಾಲಕ್ಕೆ ಐದು ಗಂಟೆಗೆ ಎದ್ದು ಅಭ್ಯಾಸ. ಚಳಿ ಇರಲಿ ಮಳೆ ಇರಲಿ ಆನು ಆ ಹೊತ್ತಿಂಗೆ ಏಳುದೇ..
ಎನ್ನ ಹೆಂಡತಿ ಈಶ್ವರಿಗೆ ಹಾಂಗಲ್ಲ. ಬೆಣ್ಚಿ ಕಾಲ ಬುಡಂದ ಹತ್ತಿಕೊಂಡು ತಲೆಯತ್ತರಂಗೆ ಬಪ್ಪಗಳೇ ಅದಕ್ಕೆ ಉದಿಯಪ್ಪದು. ಅಲ್ಲ ಸುಮ್ಮನೆ ಹೇಳುಲಾಗ. ಅದರ ಪ್ರಾಯದ ಕಾಲಲ್ಲಿ ಅದೂ ಬೊಡಿಯಪ್ಪಷ್ಟು ಕೆಲಸ ಮಾಡಿದ ಜನವೇ.. ಎನ್ನಂದಲೂ ಮೊದಲು ಎದ್ದು ಅಬ್ಬಿ ಕೊಟ್ಟಗೆಗೆ ಕಿಚ್ಚು ಹಾಕಿ, ಕೆದೆ ಕೆಲಸ ಮಾಡಿ, ಎಂಗೊಗೆಲ್ಲಾ ಕಾಲ ಕಾಲಕ್ಕೆ ಹೊಟ್ಟೆಗೆ ಬೇಶಿ ಹಾಕಿ ಮಾಡಿದ್ದಿದೋ.. ಈಗ ಹಾಂಗೆ ಎದ್ದು ಆಯೆಕ್ಕು ಹೇಳುವ ಅಂಬೆರ್ಪು ಎಂತ ಇಲ್ಲೆ. ಮಕ್ಕ ಆರೂ ಊರಿಲಿಲ್ಲೆ. ಇಪ್ಪದು ಆನುದೆ ಅದುದೆ.. ಎಲ್ಲಿಗೂ ಹೆರಡುವ ಅಮಸರ ಇಲ್ಲೆ..ಉದಿ ಆದರೆ ಇರುಳಪ್ಪದು ಯಾವಾಗಾ .. ಇರುಳಾದರೆ ಉದಿಯಪ್ಪದು ಯಾವಾಗ ಹೇಳಿ ಕಾವದೇ ಕೆಲಸ ಅಷ್ಟೇ.. ಎದ್ದರೂ ಮಾಡ್ಲೆಂತ ಇದ್ದು.. ಇಬ್ರಿಂಗೂ ಒಂದು ಮುಷ್ಠಿ ಚೋರು ಬೇಶಿ ಹಾಕುದು ಮತ್ತೆ ಇಡೀ ದಿನ ಹಳೇ ಸುದ್ದಿಗಳ ಮಾತಾಡುದೋ, ನೆಂಪು ಮಾಡಿಕೊಂಡು ಪರಂಚುದೋ ಮಾಡುದು ಅಷ್ಟೇ..

ಅಲ್ಲಾ.. ಆನೆಂತಕೆ ಇನ್ನುದೇ ಈ ಏಳುವ ಉದಯ ರಾಗವನ್ನೇ ಹಾಡ್ತಾ ಇಪ್ಪದು .. ಕಥೆ ಹೇಳುಲಿಪ್ಪದು ಇದಲ್ಲ ಬೇರೆಯೇ ಇದ್ದು.. ಅದೂ ಮೊನ್ನೆ ಆದ್ದಪ್ಪ..
ಆನು ಯಾವಾಗಣಾಂಗೆ ಎದ್ದೆ. ಮನುಗಿದ ಬಚ್ಚೆಲು ಹೋಯೆಕ್ಕನ್ನೆ ಅದಕ್ಕೆ ರಜ್ಜ ಕಾಲಾಡ್ಸುವ ಹೇಳಿ ಜಾಲಿಲೇ ಸುತ್ತ ಬಪ್ಪದು ಎನ್ನ ಕ್ರಮ. ಅದೆಲ್ಲಾ ಮುಗುಶಿ ಮನೆ ಒಳ ಬಪ್ಪಗ ಗೋಡೇಲಿಪ್ಪ ಗಡಿಯಾರ ಏಳು ಗಂಟೆ ಬಡುತ್ತು. ಈಶ್ವರಿ ಇನ್ನುದೇ ಎದ್ದಿದಿಲ್ಲೆ. ನಿನ್ನೆ ಮನುಗುವಾಗಲೇ ರಜ್ಜ ಮೈ ಕೈ ಬೇನೆ. ಜ್ವರ ಬಪ್ಪ ಹಾಂಗಿದ್ದು ಹೇಳಿಕೊಂಡಿತ್ತು. ಒಂದು ಮಾತ್ರೆ ತೆಕ್ಕ ಹೇಳಿರೆ ಕೇಳ. ನಾಳಂಗೆ ಕಮ್ಮಿ ಅಕ್ಕು ಹೇಳಿ ಹಾಂಗೇ ಮನುಗಿತ್ತು. ಈಗ ಜ್ವರ ಬೈಂದೇನೋ.. ಇಂದ್ರಾಣ ತಿಂಡಿ ಅಡುಗೆ ಎಲ್ಲಾ ಎನ್ನ ತಲೆಗೇ ಬಿದ್ದತ್ತಾ ದೇವರೇ ಹೇಳಿಕೊಂಡು ಹತ್ತರೆ ಹೋಗಿ ಹಣೆ ಮುಟ್ಟಿ ನೋಡಿದೆ.

ಏಯ್ ಜ್ವರವೂ ಇಲ್ಲೆ ಎಂತದೊ ಇಲ್ಲೆ.. ಆದರೆ ಆನು ಹಣೆ ಮುಟ್ಟುವಾಗ ಪಕ್ಕನೆ ಎಚ್ಚರ ಆತದಕ್ಕೆ. ಗೋಡೆಲಿಪ್ಪ ಗಡಿಯಾರವ ನೋಡಿ ತಲೆ ತಲೆ ಬಡ್ಕೊಂಡು ಎಂತದೋ ಹೇಳುಲೆ ಹೆರಟತ್ತು, ಕೈ ಕಾಲೆಲ್ಲ ಹನ್ಸುದು ಕಾಣ್ತು ಆದರೆ ಅದರ ಗಂಟಲಿಂದ ಸ್ವರ ಬಾರ. ಎನಗೆ ಎಂತಾತಪ್ಪಾ ಇದಕ್ಕೆ ಹೇಳಿ ಹೆದರಿಕೆ ಆದರೆ ಅದು ಬಡ ಬಡನೆ ಎದ್ದು ಅದರ ಕೆಲಸಕ್ಕೆ ಹೋತು. ಮೊದಾಲಿಂದಲೂ ಹಾಂಗೆ ಈಶ್ವರಿಗೆ ಅದರ ಆರೋಗ್ಯದ ಬಗ್ಗೆ ರಜ್ಜವೂ ಚಿಂತೆ ಇಲ್ಲೆ. ನಿನ್ನೆಯೇ ಮೈ ಕೈ ಬೇನೆಯೊಟ್ಟಿಂಗೆ ಗಂಟ್ಲೂ ಬೇನೆ ಇತ್ತೇನೋ.. ಜೋರಾಗದ್ದೆ ಎಂತದನ್ನಾದರೂ ಹೇಳ. ಮೊದಲಿಂದಲೂ ಇದರದ್ದೊಂದು ಕೆಟ್ಟ ಬುದ್ಧಿ ಇದು. ಅಖೇರಿಗೆ ಗೊಂತಕ್ಕಷ್ಟೆ. ಮತ್ತೆ ಆಸ್ಪತ್ರೆಗೆ ಓಡುದು ಹೇಳಿ ಅಸಬಡಿವದು.

ಅಷ್ಟಪ್ಪಗ ಒಳಂದ ದೋಸೆ ಪರಿಮಳ ಬಂತು. ಪಾಪ ಎಡಿಯದ್ದರೂ ದೋಸೆ ಮಾಡಿತ್ತನ್ನೇ ಹೇಳಿ ಮಾತಾಡದ್ದೇ ತಿಂಬಲೆ ಕೂದೆ. ಆನು ತಿಂಡಿ ತಿಂಬಗ ಯಾವಾಗಳು ಎಂಗಳ ಪುಚ್ಚೆ ಮಿಯಾಂವ್ ಹೇಳಿ ಹರಟೆ ಮಾಡುಗು. ಇಂದೆಂತಪ್ಪ ಅದರ ರಾಗ ಇಲ್ಲೆ ಹೇಳಿ ಅತ್ತಿತ್ತ ನೋಡ್ತೆ ಅದು ಎನ್ನ ಬೆನ್ನ ಹಿಂದೆ ತಳಿಯದ್ದೆ ಕೂಯ್ದು. ಆನು ಈಶ್ವರಿಯ ಹತ್ರೆ ನೆಗೆ ಮಡಿಕೊಂಡು ಹೇಳಿದೆ. ‘ಇಂದು ನಿನ್ನ ಖಾಲೆ ಪುಚ್ಚೆಗೂ ಅಂಟಿದ್ದು ನೋಡು, ಅದುದೇ ಸ್ವರ ತೆಗೆಯದ್ದೆ ಅಂತೆ ಕೂಯ್ದು ಹೇಳಿ’. ಈಶ್ವರಿ ಪಾಪ ಎಂತದನ್ನೋ ಹೇಳುಲೆ ಮತ್ತೆ ಮತ್ತೆ ಹೆರಟತ್ತು. ಒಂದು ಶಬ್ಧ ಹೆರ ಬಾರ. ಎನಗೆ ಕಂಡಾಬಟ್ಟೆ ಬೇಜಾರಾತು. ಅಲ್ಲ ಹೀಂಗಪ್ಪ ಕ್ರಮ ಇದ್ದ. ಪಾಪ ಇದಕ್ಕಿನ್ನು ಸ್ವರವೇ ಬಾರದ್ದರೆ ಎಂತ ಗತಿ.ಇಷ್ಟರವರೆಗೆ ಮನೆಲಿ ಅದೊಂದು ಜೀವ ಆದರೂ ಮಾತಾಡುದು ಎನ್ನ ಕೆಮಿಗೆ ಬಿದ್ದುಕೊಂಡಿತ್ತು. ಈ ಪ್ರಾಯದ ಕಾಲಲ್ಲಿ ಬೇರಾರಿಂಗೆ ನಮ್ಮೊಟ್ಟಿಂಗೆ ಮಾತಾಡುವ ತಾಳ್ಮೆ ಸಮಯ ಇದ್ದು ಹೇಳಿ? ಆನು ದೂರುದು ಹೇಳಿ ಅಲ್ಲ. ಎಲ್ಲೊಂರಿಂಗೂ ಅವರವರದ್ದೇ ಕೆಲಸ ಇದ್ದನ್ನೇ.. ಮಕ್ಕ ದೂರಲ್ಲಿದ್ದರೂ ದಿನಕ್ಕೊಂದರಿಯಾದರೂ ಫೋನಿಲಿ ಮಾತಾಡುಗು. ಅದೂ ಫೋನ್ ರಿಂಗಾದರೆ ಸಾಕು ಆನು ನೆಗ್ಗುವ ಮೊದಲೇ ಅದುವೇ ಓಡುದು. ಅಪ್ಪ ಉಷಾರಿದ್ದವು. ನಿಂಗಳೆಲ್ಲಾ ಕೇಳ್ತಾ ಇದ್ದವು ಹೇಳಿ ಎನ್ನ ಮಾತನ್ನೂ ಅದುವೇ ಸೇರ್ಸಿ ಹೇಳಿ ಮಾತು ಮುಗಿಶುಗೇ ವಿನಃ ಎನಗೆ ಫೋನ್ ಕೊಡ. ಮಾತಾಡುದು ಹೇಳಿರೆ ಅಷ್ಟು ಪ್ರೀತಿ ಅದಕ್ಕೆ.
ಅವರೊಟ್ಟಿಂಗೆ ಹೇಳಿ ಅಲ್ಲ. ಮನೆಗೆ ಆರೇ ಬರಲಿ .. ಅವು ಹೆರಟು ಜಾಲ ಕೊಡಿಯಂಗೆ ಎತ್ತಿದರೂ ಇದರ ಮಾತು ಮುಗಿಯ.

ಇಂದಿನ್ನು ಕಾದರೆ ಆಗ. ಅದರೊಂದರಿ ಡಾಕ್ಟ್ರ ಹತ್ತರೆ ತೋರ್ಸೆಕ್ಕು ಹೇಳಿ ಗ್ರೇಶಿದೆ. ಅಷ್ಟಪ್ಪಗ ಅದುವೇ ಒಂದು ಚೀಟಿಲಿ ಸೊಟ್ಟ ಸೊಟ್ಟಾ ಅಕ್ಷರಲ್ಲಿ ‘ನಾವೀಗ ಡಾಕ್ಟ್ರ ಹಾತ್ರೆ ಹೋಪ ಹೆರಡಿ’ ಹೇಳಿ ಬರದು ತೋರ್ಸಿತ್ತು. ಆನು ಪಕ್ಕ ಪಕ್ಕನೆ ಹೆರಡುವ ಅಟ್ಟಣೆ ಮಾಡಿದೆ.

ಜಾಲಿಲಿ ರಜ್ಜ ಹೊತ್ತಪ್ಪಗ ಬಾಡಿಗೆ ಕಾರು ಬಂದು ನಿಂದತ್ತು. ಇದು ಸುಮ್ಮನೆ ಕೂಪದು ಬಿಟ್ಟು ಅದರತ್ತರವೂ ಎಂತದೋ ಸನ್ನೆ ಮಾಡಿಕೊಂಡು ಮಾತಾಡಿತ್ತು. ಅದಿನ್ನು ಊರಿಡೀ ಹೇಳಿಕೊಂಡು ಬಕ್ಕು. ಈಶ್ವರಿ ಅಕ್ಕಂಗೆ ಸ್ವರ ಬತ್ತಿಲ್ಲೆ ಹೇಳಿ.. ಇದಕ್ಕೊಂದು ಅಷ್ಟು ಅರ್ಥವೇ ಆವ್ತಿಲ್ಲೆ.
ಕಾರು ಸೀದಾ ಪೇಟೆಯ ಕಡೆಂಗೆ ಹೋತು. ಅಲ್ಲಿ ಎಂಗಳ ಗುರ್ತದ ಇ ಎನ್ ಟಿ ಸ್ಪೆಷಲಿಷ್ಟ್ ಡಾಕ್ಟ್ರ ಇದ್ದ. ಅಲ್ಲಿಗೇ ಹೋಗು ಹೇಳಿದೆ. ಎ ಸಿ ಕಾರು. ಹೆರಾಣ ಎಂತ ಶಬ್ಧವೂ ಒಳ ಕೇಳ. ಒಳ್ಳೇ ತಂಪಪ್ಪಗ ಎನಗೆ ಲಾಯ್ಕಲ್ಲಿ ವರಕ್ಕು ಬಂತು. ಎಚ್ಚರಿಗೆ ಅಪ್ಪಗ ಕ್ಲಿನಿಕ್ ಬೈಂದು.
ಇಬ್ರೂ ಡಾಕ್ಟ್ರ ಹತ್ತರೆ ಹೋದೆಯ. ಆನು ಮಾತಾಡ್ಲೆ ಬಾಯಿ ತೆಗೆಯಕ್ಕಾರೆ ಮೊದಲೇ ಈಶ್ವರಿಯೇ ಡಾಕ್ಟ್ರನತ್ತರೂ ಬಾಯಿ ಹನ್ಸಿಕೊಂಡು ಮಾತಾಡ್ಲೇ ಶುರು ಮಾಡಿತ್ತು. ಅವಂದೇ ಅದರ ಹಾಂಗೆ ಕೈ ಬಾಯಿ ಹನ್ಸುತ್ತಾ ಇದ್ದ. ಎನಗೆ ಆಗಲೇ ಹೆದರಿಕೆ ಆತು. ಇನ್ನು ಈ ಕಡೇ ಕಾಲಕ್ಕಪ್ಪಗ ಆನುದೇ ಈ ಸನ್ನೆ ಭಾಷೆ ಕಲ್ತು ಎನ್ನ ಹೆಂಡತಿಯತ್ತರೆ ಮಾತಾಡೆಕ್ಕನ್ನೇ ಹೇಳಿ.. ಎಂತೆಲ್ಲಾ ಅನುಭವಿಸೆಕ್ಕೋ ಇನ್ನು ..!!

ಅಷ್ಟಪ್ಪಗ ಡಾಕ್ಟ್ರ ಅಂತೆ ತಲೆ ಆಡ್ಸಿಕೊಂಡು ಎನ್ನ ಅಲ್ಲಿಯೇ ಒಂದು ಕುರ್ಚಿಲಿ ಕೂಪಲೆ ಕೈ ಭಾಷೆ ಮಾಡಿದ. ಈಶ್ವರಿಯೂ ಅಲ್ಲೇ ಹತ್ತರೆ ಕೂದತ್ತು.
ಡಾಕ್ಟ್ರ ಮೆಲ್ಲಂಗೆ ಎನ್ನ ಹತ್ತರೆ ಬಂದು ಕೆಮಿಯ ಒಳ ಟಾರ್ಚ್ ಹಾಕಿ, ಮತ್ತೆಂತದೋ ಲೋಶನ್ ಹಾಕಿ ಕೂರ್ಸಿದ. ಎನಗೆ ಕೋಪ ಬಂತು. ಅಲ್ಲಾ ಡಾಕ್ಟ್ರೇ .. ಈಶ್ವರಿಗೆ ಸ್ವರ ಬಿದ್ದಿದು ಹೇಳಿ ಕರಕ್ಕೊಂಡು ಬಂದರೆ ಎನ್ನ ಕೆಮಿಗೆ ಮದ್ದು ಹಾಕುತ್ತಿ ಅನ್ನೇ ಹೇಳಿದೆ. ಅವ ಎಂತದೂ ಹೇಳದ್ದೆ, ಎಂತದೊ ಹಿಡ್ಕೊಂಡು ಕೆಮಿ ಕ್ಲೀನ್ ಮಾಡಿದ.

ಅಷ್ಟಪ್ಪಗ ಪಕ್ಕ ಕೇಳಿತ್ತು..

‘ನೋಡಿ ಡಾಕ್ಟ್ರೆ ಉದಿಯಂದ ಅಷ್ಟು ಮಾತಾಡಿದ್ದೆ ಒಂದು ಶಬ್ಧ ಕೇಳ್ತಿಲ್ಲೆ ಅವಕ್ಕೆ.. ಕೆಮಿ ಎಂತ ಗುಣ ಅಕ್ಕನ್ನೇ.. ಪೂರಾ ಕೆಪ್ಪಾಗಿ ಹೋತಾ ಹೇಳಿ ಎನಗಂತೂ ಕಂಡಾಬಟ್ಟೆ ಹೆದರಿಕೆ ಆತು. ಎಂಗಳ ಪುಚ್ಚೆ ಅರೆಬ್ಬಾಯಿ ಹಾಕಿ ಕೂಗಿರೂ ಇವು ಈಶ್ವರಿ ನಿನ್ನ ಖಾಯಿಲೆ ಪುಚ್ಚೆಗೂ ಅಂಟಿದ್ದು ಹೇಳ್ತಾ ಇದ್ದವು.. ಎಂತಾಯ್ದು ಡಾಕ್ಟ್ರೇ” ಹೇಳಿ ಹೇಳ್ತಾ ಇದ್ದು..
ಆಗಳೇ ಎನಗೆ ಗೊಂತಾದ್ದಿದ.. ಈಶ್ವರಿಗೆ ಸ್ವರ ಬಾರದ್ದದಲ್ಲ.. ಎನಗೆ ಕೆಮಿ ಕೇಳದ್ದದು ಹೇಳಿ..

12 thoughts on “ಶಬ್ದ ಬ್ರಹ್ಮ

  1. ಸಮಸ್ಯೆ ಎಲ್ಲಿ ಹೇಳಿ ಹುದುಕ್ಕಲೆ ಅಷ್ಟು ಕಷ್ಟ ಅತ್ಹೋ ಮಾರಾಯ !!!!!!!!!!!!

  2. ಕತೆ ಸಣ್ಣ ಅಂದರೂ ಚೊಕ್ಕ ಆಯಿದು.

  3. ಇದು ಕತೆ ಪಷ್ಟಾಯ್ದೀಗ!!!! ಭಲೆ ಭಲೆ. ಡಾಕುಟ್ರ ಕೆಮಿಗೆ ಟಾರ್ಚಿ ಹಿಡುದು ಲೋಶನ ಹಾಕುವನ್ನಾರ ಈಶ್ವರಿ ಅತ್ತಗೆ ಎಂತಾತಾಪ್ಪಾ ಹೇದು ಆನೂ ಜಾಂನ್ಸಿದೆ. ಇನ್ನೀಗ ಎನ್ನಾರೂ ಡಾಕುಟ್ರತ್ರಂಗೆ ಕೊಂಡೋಗದ್ರೆ ಸಾಕು !

  4. ಅನಿತಕ್ಕಾ!
    ‘ನಮ್ಮ ವೈಕಲ್ಯ/ಊನತೆ ಇನ್ನೊಬ್ಬರ ಬಗ್ಗೆ ಅನ್ಯಥಾ ಭಾವಿಸುವ ಹಾಂಗೆ ಮಾಡ್ತು’ ಹೇಳುವ ನೀತಿಯ ಬೋಧಿಸುವ ಕಥೆ !
    ತುಂಬಾ ಲಾಯಕ ಇದ್ದು!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×