Oppanna.com

ಪುಸ್ತಕ – 03 “ ಜಗದೋದ್ದಾರ – ನಾ ”

ಬರದೋರು :   ತೆಕ್ಕುಂಜ ಕುಮಾರ ಮಾವ°    on   27/04/2011    7 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಈ ಸರ್ತಿಯ ಪುಸ್ತಕ ಕಾರಂತರ “ ಜಗದೋದ್ದಾರ – ನಾ ” ಕಾದಂಬರಿ.  ಕಾರಂತರೇ  ಹೇಳಿದಾಂಗೆ ಇದು ಅವರ  ‘ದೇವದೂತರು ’ ಕಾದಂಬರಿಯ  ಹಾಂಗೆ   ಒಂದು  ವ್ಯಂಗ್ಯ  ಬರಹ . 1959 ರಲ್ಲಿ  ‘ಕರ್ಮವೀರ ’ಲ್ಲಿ  ಧಾರಾವಾಹಿಯಾಗಿ  ಪ್ರಕಟ  ಆಗಿ , 1960 ರಲ್ಲಿ  ಪುಸ್ತಕ ರೂಪಲ್ಲಿ ಮದಲು  ಬಂತು.. ನಮ್ಮ  ಸಮಾಜಲ್ಲಿ  ಆಗಾಗ  ಅವತಾರ ಎತ್ತುವ ‘ಡೋಂಗಿ’ ಸನ್ಯಾಸಿಗಳ, ಅವರ  ಪೂರ್ವಾಪರ  ಗೊಂತಿಲ್ಲದ್ದೆ  ಬರಿ  ಮರುಳು  ಮಾತಿಂದ  ನಂಬಿ , ಅವರ  ತಲೆ  ಮೇಲೆ  ಹೊರುವ  ಜೆನಂಗಳ  ಬಗ್ಗೆ ಇಲ್ಲಿ  ಪ್ರಸ್ತಾಪ  ಬತ್ತು . ಜೆನಂಗಳ  ನಂಬಿಕೆಯ  ಸ್ವಂತ  ಲಾಭಕ್ಕೆ  ಬಳಸಿಗೊಂಬ  ‘ದೇವ  ಮಾನವ ’ ರ  ನಂಬುವ  ಜೆನಂಗಳಲ್ಲಿ  ವಿದ್ಯಾವಂತರೂ  ಇದ್ದವು  ಹೇಳ್ತ ಸತ್ಯವ  ನೋಡಿ  ಅವರ  ಬಗ್ಗೆ  ಮರುಕವೋ , ಕೋಪವೋ ಅಂತೂ, ಕಾರಂತರು  ಇಂಥವರ ಬಗ್ಗೆ ವಿಡಂಬನಾತ್ಮಕವಾಗಿ ಬರದ್ದವು.

ಪುಸ್ತಕದ ಮೋರೆಪುಟ

ಇದರಲ್ಲಿ ಬಪ್ಪ ಕಥಾನಿರೂಪಕನ  ಹೆಸರು  ಕೋಟ  ಶಿವರಾಮಯ್ಯ, ವೃತ್ತಿಲಿ ಸಾಹಿತಿ. ಇಲ್ಲಿ ಕಥಾನಿರೂಪಕನೂ  ಒಂದು ಕಥಾಪಾತ್ರವಾಗಿ ತೀಕ್ಷ್ಣ ವಿಡಂಬನಾ ಶೈಲಿಲಿ  – ದೇವರು  , ಧರ್ಮಂಗಳ ಹೆಸರಿಲಿ  ಹಿಂದು  ಮುಂದು  ಯೋಚನೆ  ಮಾಡದ್ದೆ  ಕಪಟ ಸನ್ಯಾಸಿಗಳ, ಅವತಾರ  ಪುರುಷಂಗಳ ನಂಬಿ, ಮೋಸ  ಹೋಪ  ಚಿತ್ರಣ  ಬಯಿಂದು. ಕಾದಂಬರಿ  ಉದ್ದಕ್ಕೂ  ಕಾರಂತರ  ಹಾಸ್ಯ ಶೈಲಿಯ  ಪರಿಚಯ  ಸಿಕ್ಕುತ್ತು. ಇದರಲ್ಲಿ ಬಪ್ಪ ಕತೆ ನಿರೂಪಕನ ಉರಿನವನೇ  ಅದ  ವಿಷ್ಣುವಿನದ್ದು. ಇದರ ಕಾರಂತರು ಶುರುವಿಲಿ ಹಿಂಗೆ  ಪ್ರಸ್ತಾಪ  ಮಾಡ್ತವು. “ಈ  ಕಥಾನಕ  ನಮ್ಮೂರಿನ  ಒಬ್ಬ  ವಿಷ್ಣುವಿಗೆ  ಸಂಬಂದಿಸಿದ್ದೇ ಹೊರತು ಜನಗಳ  ಅಜ್ಞಾನಕ್ಕೆ  ಗುರಿಯಾಗಿ  ಪೂಜೆಗೆ ಪಾತ್ರನಾದ  ಆ  ಮಹಾವಿಷ್ಣುವಿಗೆ  ಸಂಬಂಧಿಸಿದ್ದಲ್ಲ”.  ಅ  ಮಹಾವಿಷ್ಣು  ಹತ್ತು  ಅವತಾರ ಎತ್ತಿದ. ಇದರಲ್ಲಿ  ಬಪ್ಪ  ವಿಷ್ಣು  ಹನ್ನೆರಡು ಅವತಾರ  ಎತ್ತಿದ್ದ.. ಅವನ  ಊರು ” ಕೋಟವೆಂಬ ಯಾರಿಗೂ  ಬೇಡದ  ಊರು ”.

“ಇದು   ನನ್ನ  ವಿಳಾಸ  ಅಂದರೆ  ಹೆಚ್ಚಾಗಿ  ಇರುವ  ಸ್ತಳ , ಕರ್ಮ  ಧರ್ಮ  ಸಂಯೋಗದಿಂದ  ಮೈಸೂರಿಗೆ  ಬಂದರೆ  ಬನ್ನಿ  ನಮ್ಮಲ್ಲಿಗೆ ” – ಕಾರಂತ  ವಿಷ್ಣುವಿನ  ಚಿತ್ರಣವ  ವಿವರ್ಸುತ್ತ  ಶೈಲಿ ಹೀಂಗೆ ಮುಂದುವರಿತ್ತು.

–  ಆ ಮನೆ  ಹೆಸರು  ಜ್ಞಾನ  ಮಂದಿರ. ಮನೆ  ಒಳಾಣ  ದಿವಾನಖಾನೆ ನೋಡಿ “ ಎಷ್ಟು  ದೊಡ್ಡ ಕೋಣೆ, ಏನು  ಅಲಂಕಾರ , ಏನು  ಶ್ರೀಮದ್ಗಾಂಭೀರ್ಯ. ನಾಲ್ಕು  ಸುತ್ತ  ಬೀರುಗಳು , ಬೀರುಗಳು, ಬೀರುಗಳು, ಬೀರುಗಳ  ತುಂಬಾ  ಬುಕ್ಕುಗಳು ….ನಾನಾಗ ಶುದ್ದ  ಭೀರುವಾದೆ”

“ಆಗ ನಾಲ್ಕು ಪುಸ್ತಕಗಳು ಮಾತ್ರ  ಇದ್ದದ್ದು . ಈಗ  ನಾಲ್ಕು ಲಕ್ಷ  ಅಲ್ಲ  ಕೋಟಿ ಗ್ರಂಥಗಳಿವೆ . ನನ್ನ  ಯಥಾನುಶಕ್ತಿ  ಅವನ್ನೆಲ್ಲ ಉದ್ದರಿಸಿ ಇರಿಸಿದ್ದೇನೆ! ಅದು ಹತ್ತಾರು  ಊರುಗಳಲ್ಲಿ  ಈ ಮೊದಲೇ  ಉದ್ದರಿಸಿದವರಿಂದ ನಾನು  ಇನ್ನೊಮ್ಮೆ  ಉದ್ದರಿಸಿ  ತಂದು  ಇರಿಸಿದ್ದೇನೆ”. ಲೈಬ್ರೆರಿಂದ ತಂದ  ಪುಸ್ತಕಂಗಳ  ವಾಪಸು  ಮಾಡದ್ದೆ  ಮಡಿಕ್ಕೊಂಬವವರ ಬಗ್ಗೆ ಇದು. ಹೀಂಗಿಪ್ಪ ವ್ಯಂಗ, ಹಾಸ್ಯ ಪುಸ್ತಕದ  ಉದ್ದಕ್ಕೂ ಬತ್ತು . ಕೆಲವು ಹಾಸ್ಯ  ಸಂವಾದಂಗಳ ಆನು  ಇಲ್ಲಿ  ಕೊಡ್ತಾ  ಇದ್ದೆ .

“ಕಡಂಬಳಿತ್ತಾಯರೇ, ಈ ತಿಗಣೆಗಳಿಗೆ ನನ್ನ  ಹೆದರಿಕೆಯೂ ಇಲ್ಲ , ನಿಮ್ಮ  ಹೆದರಿಕೆಯೂ ಇಲ್ಲ. ಅಲ್ಲವಾದರೆ , ಕಡಂಬಳಿತ್ತಾಯರು  ಎಂದರೆ  ಎಷ್ಟು  ಭಯ , ಭೀತಿ  ಇರಬೇಡ !” ಎಂದೆ .

ಯಾಕೋ  – ನನ್ನ  ವಿಷಯದಲ್ಲಿ  ಅವಕ್ಕೆ  ಅಷ್ಟು  ಭಯ , ಭೀತಿ ?”

“ನೀವು  ‘ಕಡಂಬಳ ’ ಎಂದ  ಮೇಲೆ ”

“ಅಂದರೆ ”

“ಕಡಂಬಳ  ಏನೆಂದು  ಗೊತ್ತಿಲ್ಲವೇ  ನಿಮಗೆ ? ಕಟ್ಟಿನ ಹಾವು  ತಿಳಿದಿಲ್ಲವೇ  ? ಅದಕ್ಕೆ  ಎಷ್ಟು  ವಿಷ ,  ಏನು  ಕತೆ !!….

ಕಡಂಬಳಿತ್ತಾಯ ಹೇಳಿರೆ  ಶಿವಳ್ಳಿ  ಬ್ರಾಮ್ಮರಲ್ಲಿ ಇಪ್ಪ ಒಂದು  ಉಪನಾಮ.

ಕಥಾನಿರೂಪಕ ಇಲ್ಲಿ ಊರೂರು  ಸುತ್ತುವ  ಹವ್ಯಾಸದವ. ಹಿಂಗೆ ಹೋದಲ್ಲಿ ಸಿಕ್ಕಿದ ವಿಶೇಷ ವ್ಯಕ್ತಿಗಳೊಟ್ಟಿಂಗೆ ಒಡನಾಟ  ಮಡಿಕ್ಕೊಂಡು ವಿಷ್ಣುವಿನ  ಹನ್ನೆರಡು  ಅವತಾರಂಗಳ ಅನಾವರಣ  ಮಾಡಿಗೊಂಡು  ಹೋಪದು  ಈ ಕಾದಂಬರಿಯ  ಕಥೆ. ಪ್ರತಿಯೊಂದು ಅಧ್ಯಾಯಲ್ಲಿಯೂ, ಕಾರಂತರ  ಹಾಸ್ಯ  ಶೈಲಿಯ  ಪರಿಚಯ  ಅವುತ್ತು . ಪ್ರತಿ  ಅಧ್ಯಾಯಕ್ಕೆ  ಮಡಗಿದ  ಹೆಸರಿಲಿಯೂ ವ್ಯಂಗ್ಯ ಇದ್ದು. ಕೆಲವು ಉದಾಹರಣೆ ಹೀ೦ಗಿದ್ದು.

ವೇದೋದ್ದರಣಂ- ಎಲ್ಲೆಲ್ಲಿ  ನೋಡಿದರು ಅಲ್ಲಿ ನಿನ್ನ  ಮುರೂತಿ – ವಿಚಾರ  ದೈತ್ಯ  ಸಂಹಾರಕ  ನಾರಾಸಿಂಹ – ನಿಧಿ  ಲಿಖಿತ – ಮಹಾಬಲ  ಯಾಗ – ಪಾಕಶಾಸನ  ತೇಜಸ – ಇಸೋಕೋ  ಉದಾರ  ಜಗಮಾಹೆ- ಬತ್ತಲೆ  ಬುದ್ದಗೆ  ಮಂಗಳಂ  ಜಯ  ಮಂಗಳಂ – ಕ್ರಾಂತ್ಯಾವತಾರ – ಸಂಕ್ರಾಂತ್ಯಾವತಾರ – ಇದು  ಅಕೆರಿಯಾಣದ್ದು . ಇದರಲ್ಲಿ  ಬಪ್ಪ ಒಂದು ಸನ್ನಿವೇಶ  ಹಿಂಗಿದ್ದು:

ಒಂದು ಬೆಳಗ್ಗೆ  ಎದ್ದು , ಮುಖ  ತೊಳೆದು, ಕಾಪಿ ಬಟ್ಟಲಿನ  ಮುಂದೆ ಕುಳಿತು  ಅದರ  ಬಿಸಿ  ತಣಿಯಲಿ  – ಎಂದು  ಕುಳಿತಿದ್ದೆ. ಮನೆಯಲ್ಲಿ  ಎದುರಿನ  ಅಂಗಣದ  ದೂರದಿಂದಲೇ  “ ಓ  ಶಿವರಾಮಯ್ಯ; ಶಿವರಾಮಯ್ಯನವರಿರುವುದು  ಇದೇ ಮನೆಯೇ ? “ ಯಾರೋ  ಕಿರುಚಿ  ಕೂಗುವುದು  ಕೇಳಿಸಿತು ! ಏನೋ  ಗಾಬರಿಯಾದ ಹಾಗೆ, ಏನೋ ಅಪತ್ತು  ಬಂದ  ಹಾಗೆ  ಕೇಳಿಸಿತು  ಧ್ವನಿ …………

…..ಮನೆಯ  ಅಂಗಣದ  ಮುಂದೆ  ಪ್ರೇತ  ಶರೀರಿಯಂತೆ  ಕಾಣುತ್ತಿದ್ದ , ಕೊಳಕು  ಚಿಂದಿಯನ್ನುಟ್ಟ , ಒಂದು ವಿಚಿತ್ರ ಜೀವಿ ನನಗಿದಿರಾಯಿತು !…

……” ಯಾರು , ಏನು  ಬೇಕು ? “ ಎಂದು  ದೂರದಿಂದಲೇ ಮಾತನಾಡಿಸಿದೆ . ಆತ  ಪಿಳಿ  ಪಿಳಿ  ನನ್ನನ್ನೇ  ನೋಡಿದ. ಹೋಗಲಿ , ಆತ ಭಿಕ್ಷೆಗೆ  ಬಂದಿರಬಹುದು  ಎಂದು , ನನ್ನ  ಹುಡುಗನೊಡನೆ  ಒಂದಾಣೆ  ಕೊಟ್ಟು  ‘ಅದನ್ನವಿನಿಗೆ  ಕೊಟ್ಟು  ಕಳುಹಿಸು ” ಎಂಬುದಾಗಿ  ತಿಳಿಸಿ  ಒಳಕ್ಕೆ  ಬಂದೆ , ಕುಡಿಯದೆ  ಹೋದ  ಕಾಫಿಯನ್ನು  ಕುಡಿದು  ಮುಗಿಸಲು  ಬಂದೆ !

ನನ್ನ  ಹುಡುಗ ದುಡ್ಡು  ಕೊಟ್ಟರೆ  ಎಸೆದು  ಬಿಟ್ಟ  ಎಂದು  ತಿಳಿಸಿದ !

“ಅಯ್ಯೋ, ಇಂಥವನನ್ನು  ನಿವಾರಿಸಿಕೊಳ್ಳುವ  ಬಗೆ ಏನು ’ ಎಂದು  ಯೋಚಿಸಿ, ಇನ್ನೊಮ್ಮೆ  ಅವನ  ಬಳಿಗೆ  ಹೋದೆ. ಆತನ  ಗುರುತೇ  ಹತ್ತಲಿಲ್ಲ ; ಆದರೆ  ಅವನು  ನನ್ನನ್ನೇ  ಬಿರಬಿರನೆ  ನೋಡುತ್ತಿದ್ದ .

“ಯಾರು  ನೀನು , ದುಡ್ಡು  ಕೊಟ್ಟರೆ  ಬೇಡ  ಎಂದು  ಎಸೆದೆಯಂತೆ ! ತೆಗೆದುಕೊಂಡು  ಹೋಗಬಾರದೆ  ಸುಮ್ಮನೆ ”

“ಶಿವರಾಮಯ್ಯನ  ಮನೆ  ಇದೇನು ? ”

“ಯಾವ  ಶಿವರಾಮಯ್ಯ ” ಎಂದೇ  ನಾನು .

‘ ಒಬ್ಬ ಬೂಕು ಬರೆಯುವವ ’ ಎಂದು  ಏಕವಚನದಿಂದ  ಉಗ್ರ ಸಾಹಿತಿಯನ್ನು ಅವಮಾನಿಸಿದರೆ  ಹೇಗೆ ?

ಹಿಂಗೆ ನಮ್ಮ ಸುತ್ತಲಿಪ್ಪ ಎಲ್ಲೋರು ಕಾರಂತರ ತೀಕ್ಷ್ಣ ನೋಟಕ್ಕೆ ಒಳಪಟ್ಟಿದವು.

ಮುನ್ನುಡಿಲಿ  ಕಾರಂತರು  ಒಂದು  ಮಾತು  ಪ್ರಸ್ತಾಪ  ಮಾಡುತ್ತವು . “ ದೇಶಕ್ಕೆ  ಗ್ಲಾನಿ  ಬಂದಾಗ  ದೇವರು  ಅವತರಿಸುವ  ಬದಲು, ಗ್ಲಾನಿಗೆ  ಗಿರಾಕಿ  ಹೆಚ್ಚಿರುವುದರಿಂದ, ಅದರ ವೃದ್ದಿಗೆ , ಅದರದೇ  ವ್ಯಾಪಾರ, ವ್ಯವಹಾರ  ಬೆಳೆಯಲು ಆತ ಆಗಾಗ  ಅವತರಿಸುತ್ತಿದ್ದಾನೆ – ಎಂದು  ತಿಳಿಯಬೇಕು. ಹಾಗಾಗಿ , ಈ ಬರಹದ  ಒಬ್ಬ  ವಿಷ್ಣು  ಅನಿವಾರ್ಯವಾಗಿ  ಒಂದೇ  ಜೀವನದಲ್ಲಿ  ತೆರತೆರನ  ಅವತಾರಗಳನ್ನು  ತಳೆಯಬೇಕಾದ  ಸಂಕಷ್ಟ  ಪ್ರಾಪ್ತಿಸಿತು ” ಕಾದಂಬರಿಯ  ಒಟ್ಟಾರೆ  ಭಾವನೆ  ಇಲ್ಲಿ  ಗೊಂತಾವುತ್ತು .

ಇಲ್ಲಿ ಬಪ್ಪ  ವಿಷ್ಣುವಿನ  ಹನ್ನೆರಡು  ಅವತಾರಂಗೊ ಈಗಳೂ  ಸಮಾಜಲ್ಲಿ  ನಮ್ಮ ನಡುಕೆ  ಒಬ್ಬ  ವ್ಯಕ್ತಿಲಿ  ಅಥವಾ  ಬೇರೆಬೇರೆ  ವ್ಯಕ್ತಿಗಳ ರೂಪಲ್ಲಿ  ಕಾಂಬಲೆ ಸಿಕುತ್ತು . ಮಾಲಿನಿ  ಮಲ್ಯ  ಹೇಳಿದಾಂಗೆ  ಕಾರಂತರ  ಚಿಂತನೆಗೋ  ಅವರ   ದ್ರಷ್ಟಾರತನದ  ಮುನ್ನೋಟದ ಮೂಲಕ  ತಾವು  ಬರದ  ಕಾಲಕ್ಕಿಂತ  ಎಷ್ಟೋ  ಎಷ್ಟೋ  ದಶಕಂಗಳಿಂದಲೂ ಮುಂದೆ  ಇತ್ತಿದ್ದು  ಹೇಳುವ  ಸತ್ಯ  ಈ  ಕಾದಂಬರಿ  ಓದಿಯಪ್ಪಗ  ತಿಳಿವಲೆಡಿಗು.

7 thoughts on “ಪುಸ್ತಕ – 03 “ ಜಗದೋದ್ದಾರ – ನಾ ”

  1. ಶಿವರಾಮ ಕಾರಂತರ ಈ ಪುಸ್ತಕದ ಬಗ್ಗೆ ಗೊಂತಿತ್ತಿಲ್ಲೆ. ಕಾದಂಬರಿಯ ವಿಮರ್ಶೆ ಭಾರೀ ಲಾಯಕಾಯಿದು. ಪುಸ್ತಕವ ಎಂತಾದರು ಮಾಡಿ ಓದೆಕು ಹೇಳಿ ಆವ್ತಾ ಇದ್ದು. ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದ.

  2. ಶಿವರಾಮ ಕಾರಂತರಿಂಗೆ ಶಿವರಾಮ ಕಾರಂತರೇ ಸಾಟಿ ಹೇಳಿ ತೋರ್ಸಿದಿ. ನಿಂಗೊ ಬರದ್ದೂ ಲಾಯಕ್ಕಾಯ್ದು ಹೇಳಿ ಒಪ್ಪ.

  3. ಕುಮಾರಣ್ಣ,
    ಈ ಪುಸ್ತಕದ ವಿಷಯ ಗೊ೦ತಿತ್ತಿಲ್ಲೆ.ನಿ೦ಗೊ ಕೊಟ್ಟ ಉದಾಹರಣೆಗಳೇ ಓದುವ ಆಸೆಯ ಹೆಚ್ಚುಸಿತ್ತು. ಇದೇ ವಸ್ತು ಆಧಾರಲ್ಲಿ ಕಾರ೦ತರ ಇನ್ನೊ೦ದು ಕಾದ೦ಬರಿ ಓದಿದ್ದೆ,ಹೆಸರು ನೆ೦ಪಾವುತ್ತಿಲ್ಲೆನ್ನೆ. ಸಮಕಾಲಲ್ಲಿ ಬದುಕ್ಕುವ ಸನ್ಯಾಸಿ ಮತ್ತೆ ಅಜ್ಜಿಯ ಬದುಕುವ ರೀತಿಗೊ,ಹೋಲಿಕೆಗೊ ಇತ್ಯಾದಿ..

  4. ಕಾರಂತರ ದೃಷ್ಟಿ ತುಂಬಾ ಮುಂದೆ ಇತ್ತು-ಅವರ ಕಾಲಂದ.
    ಅವು ಬರೆದ ಗೊಂಡಾರಣ್ಯ ಕಾದಂಬರಿ ೧೯೫೪ರದು.ಅದರಲ್ಲಿ ಸಮ್ಮಿಶ್ರ ಸರಕಾರದ ವಿಷಯ ಎಷ್ಟು ಚಂದಕೆ ಬರೆದ್ದವು!ಆಶ್ಚರ್ಯ ಆವುತ್ತು.ಸಮ್ಮಿಶ್ರ ಸರಕಾರ ಕರ್ನಾಟಕಲ್ಲಿ ಬಂದದು೨೦೦೪ರಲ್ಲಿ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×