Oppanna.com

ಮೂರ್ತಿ ನೋಡಿರೆ ಭಕ್ತಿ ಬಪ್ಪ ಹಾಂಗಿರೆಕ್ಕು; ಪಿಸುರು ಬಪ್ಪ ಹಾಂಗಲ್ಲ!

ಬರದೋರು :   ಒಪ್ಪಣ್ಣ    on   18/09/2015    6 ಒಪ್ಪಂಗೊ

ವಾರ ಒಂದು ಕಳಾತು ಹೇದರೆ ಊರಿಂಗೆ ಊರೇ ಬದಲ್ತು, ಅಪ್ಪೋ!
ಕಳುದ ವಾರ ನೇತ್ರಾವತಿಯ ಗೌಜಿ ಇದ್ದತ್ತು. ಈ ವಾರ – ಗೌರೀ ಹಬ್ಬ- ಗಣೇಶ ಚತುರ್ಥಿಯ ಗೌಜಿ. ಬಪ್ಪವಾರ? ಇನ್ನೆಂತಾರು ಸಿಕ್ಕುತ್ತು ಗೌಜಿ ಮಾಡ್ಳೆ.
ಹಾಂಗಾಗಿ – ಪ್ರತಿ ವಾರವೂ ಅದರದ್ದೇ ಆದ ವೈಶಿಷ್ಠ್ಯವ ಮಡಿಕ್ಕೊಳ್ತು.
ಇಂದ್ರಾಣ ವಾರಲ್ಲಿ ಗೆಣವತಿ ಚೌತಿಯೇ ವಿಶೇಷ, ಅಪ್ಪೋ!

ನಾವು ಗೆಣವತಿ ಆರಾಧನೆಯ ಬಗ್ಗೆ, ಚೌತಿಯ ಬಗ್ಗೆ ಬೈಲಿಲಿ ತುಂಬ ಸರ್ತಿ ಮಾತಾಡಿಗೊಂಡಿದು. ವಿಶೇಷವಾಗಿ ಆರಾಧನಾ ಕ್ರಮವನ್ನೂ ಹೇಳಿಗೊಂಡಿದು.
ತೂಷ್ಣಿಲಿ ಗೆಣವತಿ ಹವನ ಮಾಡುದು ಹೇಂಗೇ’ದುದೇ ತಿಳ್ಕೊಂಡಿದು.
ಇದೆಲ್ಲವುದೇ ಬೈಲಿನ ನೆಂಟ್ರಿಂಗೆ ಉಪಯೋಗಕ್ಕೆ ಬಂತು – ಹೇದು ಗ್ರೇಶುತ್ತು.
ಇಂದಲ್ಲ, ಪ್ರತಿವರ್ಷ, ಸದಾ ಉಪಯೋಗಕ್ಕೆ ಬತ್ತ ಹಾಂಗಿಪ್ಪ ವ್ಯವಸ್ಥೆಯೇ ಬೈಲು ಅಲ್ದೋ?
ಅದಿರಳಿ.
~

ಪ್ರತಿ  ಒರಿಶದ ಹಾಂಗೆ ಈ ಒರಿಶವೂ ಗೆಣವತಿ ಚೌತಿ ಆಚರಣೆಗೆ ತಯಾರಿ ಜೋರಿಲಿಯೇ ಇದ್ದತ್ತು.
ಬೈಲಕರೆ ಸಾರ್ವಜನಿಕ ಗಣೇಶೋತ್ಸವ, ಕೊಗ್ಗು ಆಚಾರಿಯ ಮಣ್ಣಿನ ಮೂರ್ತಿ, ಬಟ್ಟಮಾವನ ಗೆಣವತಿ ಹೋಮ, ಪೂಜೆ, ಮೆರವಣಿಗೆಗೆ ಬಟ್ಯನ ಮಕ್ಕಳ ಬೇಂಡು ವಾಲಗ, ಕರೆಂಟು ಹೋಪದಕ್ಕೆ ದಿನೇಸನ ಜನರೇಟ್ರು, ಬೆಡಿ ಸಾಯ್ಬನ ಪಟಾಕಿ-ಗರ್ನಾಲು-ಕದಿನ – ಇದೆಲ್ಲವೂ ಇದ್ದು, ಯೇವತ್ರಾಣಂತೆ.
ಬೈಲಕರೆ ದೇವಸ್ಥಾನದ ಗೋಪುರಲ್ಲಿ ಒಂದು ದಿನ ಉದಿಯಪ್ಪಗಳೇ ಮೂರ್ತಿ ಪ್ರತಿಷ್ಠೆ ಮಾಡಿ, ಆದಿನ ಇಡೀ ಪೂಜೆ ಮಾಡಿ, ಮರದಿನವೂ ಪೂಜೆ ಮಾಡಿ, ಮತ್ತಾಣ ದಿನ ಹೊತ್ತಪ್ಪಗ ವಿಸರ್ಜನೆ ಮಾಡುದು – ಸಾರಡಿ ತೋಡಿಂಗೆ.
ಇದು ಅಂದಿಂದಲೂ ನೆಡಕ್ಕೊಂಡು ಬಂದ ಪ್ರತೀತಿ.
ಊರೋರು ಹೋಪಗ ಭಕ್ತೀಲಿ ಹಣ್ಣುಕಾಯಿಯೋ, ಕರಿಕ್ಕೆಯೋ, ಬಾಳೆಲೆಯೋ, ಬಾಳೆಣ್ಣೋ – ಎಂತಾರು ಹಿಡ್ಕೊಂಡು ಹೋಕು. ಗೆಣವತಿ ಚಾಮಿಯ ಕಾಂಬಲೆ ಹೋಪದಿದಾ.

ಸಂಕು ಮಗ° ಸೂರಿಗೆ ಗೌಜಿಯೇ ಗೌಜಿ. ಊರಿಲಿ ರೈಸುಲೆ ಎಡಿಗಪ್ಪ ಕೆಲವೇ ಕೆಲವು ದಿನ ಅಲ್ದೋ? ಬಣ್ಣದ ಶಾಲು ಹಾಕಿಂಡು, ಮೋರೆಗೆ ದೊಡ್ಡ ಕುಂಕುಮ ನಾಮ ಹೊಡಕ್ಕೊಂಡು, ಬಾಯಿಲಿ ಎಲೆಡಕ್ಕೆ ತುಂಬುಸಿಗೊಂಡು, ತಲಗೊಂದು ರಿಬ್ಬನು ಕಟ್ಟಿಗೊಂಡು – ಊಕೇ ಊಕು ಕೆಲಸ ಮಾಡ್ಳೆ.
ಬಟ್ಟಮಾವಂಗೂ ಅಂತವರ ಕಂಡ್ರೆ ಕುಶಿಯೇ. ಎಷ್ಟಾರೂ ನಮ್ಮ ಧರ್ಮವನ್ನೇ ಅಲ್ದೋ ಜೀವಿಸುದು – ಹೇಳುಗು ಕೇಳಿರೆ.
ಬಟ್ಟಮಾವ° ಶುದ್ಧಲ್ಲಿ ಪೂಜೆ ಮಾಡುಗು, ಹೆರಾಣ ಹೊಡೆಲಿ ಶ್ರದ್ಧೆಲಿ ಗೌಜಿ ಮಾಡುಗು.
ಅಂತೂ ಮೂರನೇ ದಿನ ವಿಸರ್ಜನೆ ಮಾಡುಗು. ಊರೋರೆಲ್ಲ ಕುಶಿಲಿ ಇಕ್ಕು.
~

ಈ ಸಾರ್ವಜನಿಕ ಗಣೇಶೋತ್ಸವ ಸುರು ಆತು ಎಂತಗೆ?
ಪೂಜಾ ವಿಧಿಗಳಲ್ಲಿ ಅವಂಗೆ ಮೊದಲ್ನೇ ನಮಸ್ಕಾರ ಇದ್ದು. ಅವನ ಆಚರಣೆಯೂ ಕರ್ಮಪ್ರಧಾನವಾಗಿ ನಮ್ಮ ಪ್ರಯೋಗ ರೀತಿಲಿ ನೆಡೆತ್ತಾ ಇರ್ತು.
ಆದರೆ, ಈ ಭಕ್ತಿಪ್ರಧಾನ ರೂಪಲ್ಲಿ ನೆಡವ ಗಣೇಶ ಆಚರಣೆ ಬೆಳದ್ದು ಎಂತಗೆ ಹೇದರೆ – ಬ್ರಿಟಿಶರ ವಿರುದ್ಧದ ಹೋರಾಟಲ್ಲಿ ಜೆನರ ಸಂಘಟನೆ ಮಾಡ್ಳೆ ಧರ್ಮದ ಮೂಲಕ ದಾರಿ ಕಂಡು ಹುಡ್ಕಿದವು ಬಾಲಗಂಗಾಧರ ಟಿಲಖರು. ಅವರ ಮುಂದಾಲೋಚನೆಂದಾಗಿ ಎಲ್ಲೋರುದೇ ಗಣೇಶನ ಮೂರ್ತಿಯ ಮನೆಲಿ ಮಡಗಿ, ಅದರ ಪೂಜೆ ಮಾಡಿ ಒಂದು ನಿರ್ದಿಷ್ಟ ದಿನ ವಿಸರ್ಜನೆ ಮಾಡ್ಳೆ ಮೆರವಣಿಗೆಲಿ ಬಂದು ಸೇರಿದವು.
ಧರ್ಮದ ಕ್ರಮಲ್ಲಿ ಬಂದು ಸೇರಿದ ಕಾರಣ ಆರಿಂಗೂ ಎಂತೂ ಹೇಳಿಕ್ಕಲೆ ಗೊಂತಿಲ್ಲೆ. ಹಾಂಗಾಗಿ ಬ್ರಿಟಿಷರು ಎಂತದೂ ಮಾಡ್ಳೆ ಹೋಯಿದವಿಲ್ಲೆ.
ಆದರೆ, ಈ ಗಣೇಶ ಮೆರವಣಿಗೆಯ ಲೆಕ್ಕಲ್ಲಿ ಆದ ಭಾಷಣ ಪ್ರವಚನಂಗೊ – ಧಾರ್ಮಿಕವಾಗಿ ಇದ್ದರೂ ಅದರ್ಲಿ ಮಾರ್ಮಿಕವಾಗಿ ನಮ್ಮ ಅಂಬಗಾಣ ರಾಜಕೀಯ ಪರಿಸ್ಥಿತಿ, ಸ್ವಾತಂತ್ರ್ಯದ ಅನಿವಾರ್ಯತೆ, ಅದಕ್ಕಾಗಿ ಹೋರಾಟದ ಅಗತ್ಯ – ಇವುಗಳನ್ನೇ ಜೆನರ ಮನಸ್ಸಿಂಗೆ ತುಂಬುಸಿತ್ತಿದ್ದವು.
ಇದು ಮುಂದೆ ಜೆನರ ರಾಜಕೀಯ ಒಗ್ಗಟ್ಟಿಂಗೂ, ಸ್ವಾತಂತ್ರ್ಯ ಹೋರಾಟಕ್ಕೂ ಕಾರಣ ಆತು.
~

ಇದೆಲ್ಲ ಈಗ ಮಾತಾಡ್ಳೆ ಏಕೆ ನೆಂಪಾತು ಹೇದರೆ – ಓ ಮೊನ್ನೆ ಪೆರ್ಲದಣ್ಣ ಹೇಳಿದ ಒಂದು ಸಂಗತಿಂದಾಗಿ.
“ಈಗೀಗ ದೊಡ್ಡ ದೊಡ್ಡ ಪೇಟೆಗಳಲ್ಲಿ ನೆಡವ ಗಣೇಶೋತ್ಸವ ಗೌಜಿ ನೋಡಿರೆ – ಒಪ್ಪಣ್ಣಾ, ಭಕ್ತಿ ಬತ್ತಿಲ್ಲೆ, ಪಿಸುರು ಬತ್ತು’ – ಹೇಳ್ತ° ಒಂದೊಂದರಿ.
ಅಪ್ಪಡ, ಈ ಗಣೇಶೋತ್ಸವ ಆಚರಣೆ ಹೇದರೆ, ಅದು ಆರಂಭ ಆದ ಮೂಲ ಉದ್ದೇಶವೇ ಮರದು ಹೋಪ ಹಾಂಗೆ ಆಯಿದಾಡ!

ಪ್ರತಿ ಮಾರ್ಗಲ್ಲಿ, ಪ್ರತಿ ಮಾರ್ಗದ ಕರೆಲಿ ಗಣೇಶನ ಮೂರ್ತಿ ಮಡಗುದು ಹೇದು ಬೋರ್ಡು ಹಾಕುತ್ತವು.
ಅದರ ಉಸ್ತುವಾರಿಲಿ ಒಂದು ಊರಿನ ತುಂಡಾಳು. ಅದಕ್ಕೊಂದು ಹತ್ತು ಹದಿನೈದು ಜೆನ ಆಳುಗೊ – ಆಣುಗೊ.
ದೈವಭಕ್ತಿಂದ ಹಾಂಗೆ ಮಡುದಲ್ಲ, ಬದಲಾಗಿ – ಇದು ಪೈಶೆ ಮಾಡ್ಳೆ ಬೇಕಾಗಿ.
ಆ ಪುಡಾರಿಗೆ ಒಂದು ಬೇನರು; ಅದಕ್ಕೊಂದು ರಶೀದಿ ಪುಸ್ತಕ. ಈ ಆಣುಗೊ ಅಂಗುಡಿ ಅಂಗುಡಿ ಹೋಗಿ, ಮಾರ್ಗಲ್ಲಿ ಹೋವುತ್ತ ಬತ್ತವರ ಹಿಡುದು ಪೀಡುಸಿ ಪೈಶೆ ಸಂಪಾದನೆ ಮಾಡುಸ್ಸು.
ಗೆಣವತಿ ಮೂರ್ತಿ ನಿಜವಾಗಿಯೂ ಮಡಗುತ್ತವೋ – ಉಮ್ಮಪ್ಪ.
ಅದಕ್ಕೆ ಪೂಜೆ ಮಾಡ್ತವೋ – ಅದೂ ಇಲ್ಲೆ.
ಗೆಣವತಿ ಮೂರ್ತಿ ಇಪ್ಪನ್ನಾರವೂ, ಅದರ ಮಡಗಿಪ್ಪನ್ನಾರವೂ – ಗೌಜಿ ಒಂದೇ ಇಪ್ಪದು.
ದೊಡಾಕೆ ಮೈಕ್ಕ ಹಾಕಿ, ಕುರೆ ಸಿನೆಮಾ ಪದ್ಯಂಗಳ ಹಾಕಿ ಅದರ ಸುತ್ತಲೂ ಕೊಣಿವದು.
ಸಂಪಾದನೆ ಆದ ಪೈಶೆಲಿ ಇರುಳು ಬಣ್ಣದ ಕುಪ್ಪಿ ಕುತ್ತ ಮಾಡ್ತವು ಹೇದು ಕೆಲವು ಜೆನ ಹೇಳ್ತವು; ಒಪ್ಪಣ್ಣಂಗರಡಿಯ.
ಎಷ್ಟೋ ದಿನ ಕಳುದು – ಅವಕ್ಕೆಲ್ಲೋರಿಂಗೂ ತಿಂಬಷ್ಟು ಮಾಡಿ ಬೊಡುದಪ್ಪಗ – ಬೊಬ್ಬೆ ಬೇಂಡಿನ ಎಡೆಲಿ ಮೂರ್ತಿಯ ಕೊಂಡೋಗಿ ಕೆರೆಗೆ ಹಾಕುತ್ತವತ್ಲಾಗಿ.
ಮೆರವಣಿಗೆಲಿಯೂ ಹಾಂಗೇ – ಕೊಣಿತ್ತೋರ ಹತ್ತರೆ ಹೋದರೆ ಎಣ್ಣೆ ವಾಸನೆ ಬತ್ತಾಡ!

ಭಕ್ತಿಯ ಸಂತಾನ ಹೇಳುಸ್ಸು ಇರ್ತಿಲ್ಲೆ. ಧರ್ಮ ಕಾಳಜಿಯೂ ಇರ್ತಿಲ್ಲೆ.
ಇದಕ್ಕೆಲ್ಲ ಇಪ್ಪದೆಂತರ ಹೇದರೆ – ಸ್ವ ಪ್ರತಿಷ್ಠೆಯ ಪ್ರೇರೇಪಣೆ, ಅಷ್ಟೇ.
ಆರ ಗಣೇಶೋತ್ಸವ ಗೌಜಿಯೋ, ಬಪ್ಪ ಸರ್ತಿಯಾಣ ಓಟಿಂಗೆ ಆ ಜೆನಕ್ಕೆ ಅವಕಾಶ ಸಿಕ್ಕುಗು – ಹೇಳ್ತ ಲೆಕ್ಕಾಚಾರ.
ಮತ್ತೆ, ಸಂಗ್ರಹ ಆದ್ಸರಲ್ಲಿ ನಾಕು ರುಪಾಯಿ ಒಳುದರೆ ಅವಕ್ಕಾವುತ್ತನ್ನೇ’ದು.
~

ಈಗ ಪೆರ್ಲದಣ್ಣಂಗೆ ಅದೈಂದಲೂ ಬೇಜಾರಪ್ಪದು ಎಂತ್ಸರ ಹೇದರೆ – ಮೂರ್ತಿಗೊ.

ಊರಿಲಿ ಕೊಗ್ಗು ಆಚಾರಿ ಮಾಡುದು ಜೇಡಿ ಮಣ್ಣಿನ ಮೂರ್ತಿ.
ಸುಮಾರು ಮದಲೇ ಅದಕ್ಕಿಪ್ಪ ಮಣ್ಣಿನ ಪರಿಶ್ಕರಣೆ ಮಾಡಿ, ಹುಳಿ ಬರುಸಿ – ಶುದ್ದಲ್ಲಿದ್ದುಗೊಂಡು ಆ ಮೂರ್ತಿ ಮಾಡುಸ್ಸು.
ಎಷ್ಟು ಬೇಕೋ ಅಷ್ಟೇ ಪೈಂಟು ಕೊಡುಸ್ಸು ಅದಕ್ಕೆ.
ನೆಲ್ಲಿಯ ಪಚ್ಚೆ, ಕರಿಯ ಕಪ್ಪು, ಕುಂಕುಮದ ಕೆಂಪು – ಇಷ್ಟೆ.
ಈಗೀಗ ರಜ ರಜ ಯಕ್ಷಗಾನದ ಚುಟ್ಟಿ ಬಣ್ಣ ಉಪಯೋಗುಸುತ್ತೋ ಏನೋ.
ಅಂತೂ – ಸಂಪೂರ್ಣ ನೈಸರ್ಗಿಕ. ಬೇರೆಂತೂ ಮಿಶ್ರ ಇಲ್ಲೆ.
ಗೆಣವತಿಯ ಚರ್ಯೆಯೂ ಹಾಂಗೇ – ಗಂಭೀರವದನ ಆಗಿ, ಸುಮುಖನಾಗಿ, ಲಂಬೋದರನಾಗಿ – ಆ ಗಾಂಭೀರ್ಯ ನೋಡಿ ಅಪ್ಪಗಳೇ ಕೈ ಮುಗಿವೊ° – ಹೇದು ಕಾಣ್ತು.
ಆ ಮೂರ್ತಿಯ ಹೊಳಗೆ ವಿಸರ್ಜನೆ ಮಾಡಿರೆ – ಮುಳುಗಿ ಪೂರ್ಣ ರೂಪಲ್ಲಿ ಮಣ್ಣಾಗಿ ಪುನಾ ಪ್ರಕೃತಿಗೇ ಸೇರ್ತು.

ಆದರೆ, ಬೆಂಗ್ಳೂರಿನ ಮೂರ್ತಿಗೊ?
ಅದರ ನೋಡಿರೆ ಭಕ್ತಿ ಬತ್ತಿಲ್ಲೆ, ಪಿಸುರು ಬತ್ತು!
ಪೇರಿಸ್ ಪ್ಲೇಷ್ಟರು ಹೇಳ್ತ ಬೆಳಿ ರಾಸಾಯನಿಕ ಹೊಡಿಯ ಮಿಶ್ರ ಮಾಡಿ, ಆ ಪೇಷ್ಟಿಲಿ ಮೂರ್ತಿ ಮಾಡ್ತದು.
ಮೂರ್ತಿಗೊ ಬಲು ದೊಡ್ಡ ಇರ್ತು – ಎಷ್ಟು ದೊಡ್ಡ ಇದ್ದರೆಂತ – ಅದರ ಒಳ ಗೋಳೆ; ಹಾಂಗಾಗಿ ತುಂಬ ಹಗುರ!
ಆ ರಾಸಾಯನಿಕ ಪೇಷ್ಟಿನ ಮೂರ್ತಿಗೆ ಪುನಾ ರಾಸಾಯನಿಕ ಬಣ್ಣಂಗೊ.
ಕೆಂಪು, ಪಿಂಕು, ಹಳದಿ, ಪಚ್ಚೆ ಮಿಶ್ರಿತ ಹಳದಿ, ಹಳದಿ ಮಿಶ್ರಿತ ಪಚ್ಚೆ – ಹೀಂಗಿರ್ಸ ನೂರೈವತ್ತು ನಮುನೆ ಬಣ್ಣಂಗೊ.
ಪಳ ಪಳ ಹೊಳೆತ್ತು.
ಚಿತ್ರಲ್ಲಿ ನೋಡುವ, ಟೀವಿಲಿ ಕಾಂಬ ಕಾರ್ಟೂನು ಚಿತ್ರದ ನಮುನೆ ಮಾಡಿರ್ತವು.
ಅಷ್ಟೇ ಅಲ್ಲ, ಅದಕ್ಕೆ ಪ್ಲೇಷ್ಟಿಕ್ಕು ಹೂಗುಗೊ – ಒಂದರಿ ಹಾಕಿರೆ ಮೂರು ದಿನವೂ ಒಣಗುಲೆ ಇಲ್ಲೆ ಇದಾ!
ಅದರ ಮೇಗಂಗೆ ಕರೆಂಟು ಚುಕುಬುಕು ಲೈಟುಗೊ.

ಇದೆಲ್ಲ ಆಡಂಬರ ನೋಡಿರೆ, ಅಲ್ಲಿಗೆ ಗೆಣವತಿ ಬಿಡಿ – ಎಲಿಯೂ ಬಾರ ಹೆದರಿ.
ಅಲ್ದೋ?
ಹಾಂಗೆ ಹೇಳಿ ವಿಸರ್ಜನೆ ಮಾಡಿದ ಮೇಲೆ ನೀರಿಲಿ ಕರಗಿ ಮಣ್ಣಿಲಿ ಒಂದಾಗದ್ದೆ ವಿಸರ್ಜನೆ ಮಾಡಿದ ಜಾಗೆಲಿ ಪೂರ್ತಿ ತೇಲಿಗೊಂಡು ಇರ್ತು.
ಕೆಲವು ಸರ್ತಿ ಕೈ ಬೇರೆ, ಕಾಲು ಬೇರೆ!! ಅಯ್ಯೋ!! ನೋಡ್ಲೆ ಮಣ್ಣ ಎಡಿಯ!! ನಾವು ಭಕ್ತಿಲಿ ಪೂಜೆ ಮಾಡಿದ್ದದು ಈ ರೀತಿ ತುಂಡಾಗಿಪ್ಪದರ ನೋಡಿಗೊಂಡು ಇಪ್ಪದು ಹೇಂಗೆ?

ಈಗೀಗ ಅಂತೂ – ಚೆಂಡೆ ಬಾರ್ಸುವ ಗೆಣವತಿ, ಮೊಬೈಲಿಲಿ ಪಟ ತೆಗಕ್ಕೊಂಬ ಗೆಣವತಿ, ಬೇಟು ಹಿಡಿಸ್ಸ ಗೆಣವತಿ, ಚೆಂಡು ಇಡ್ಕುತ್ತ ಗೆಣವತಿ, ಸಿನೆಮದ ಬಾಹುಬಲಿ ಗೆಣವತಿ – ಏನಕ್ಕೇನಾರು ಮಾಡ್ತಾ ಇದ್ದವು.
ದೇವರ ದೇವರ ಹಾಂಗೇ ಕಾಣೇಕು. ಆ ಗಾಂಭೀರ್ಯವ ಪೂರಾ ಮಣ್ಣು ಮಾಡಿ – ದೇವರ ಮೂರ್ತಿಯ ಆಟದ ವಸ್ತು ಆಗಿ ಮಾಡಿದ್ದವು.
ಲೋಕಲ್ಲಿ ನೆಡವ ವಿಷಯವ ತೆಕ್ಕೊಂಡು ಗೆಣಪತಿಯ ಮಾಡ್ತವು.
ಅಂದು ನಮ್ಮ ಹೆರಿಯೋರು ಸಮಾಜದ ಒಗ್ಗಟ್ಟಿಂಗೆ, ಸಂಘಟನೆಗೆ, ನಮ್ಮ ಸಂಸ್ಕಾರದ ಚೌಕಟ್ಟಿಲಿ ಮಾಡಿದ ಗಣೇಶೋತ್ಸವ ಇಂದು ಜನಂಗಳ ಕೈಲಿ ಮಂಗನ ಕೈಲಿ ಮಾಣಿಕ್ಯ ಕೊಟ್ಟ ಹಾಂಗಿಪ್ಪ ಪರಿಸ್ಥಿತಿಗೆ ಮುಟ್ಟಿದ್ದು.
ಅಂದು ಯೇವ ಗಣೇಶನ ನೋಡಿ ಜನಂಗಳಲ್ಲಿ ಭಗ್ತಿ ತುಂಬಿ, ಪ್ರವಚನಲ್ಲಿ ದೇಶಭಗ್ತಿ ತುಂಬಿ ಹರ್ಕೊಂಡು ಇತ್ತೋ, ಇಂದು ಗಣೇಶನ ನಾನಾ ವಿಧದ ನಮ್ಮ ಧರ್ಮವನ್ನೇ ಅವಹೇಳನ ಮಾಡುವಂತ ಮೂರ್ತಿ ಮಾಡಿ, ಸಹಿಸುಲೆ ಎಡಿಯದ್ದ ವಾತಾವರಣ ಇಪ್ಪದು ಕಾಂಬಗ ನಮ್ಮ ಮುಂದಾಣವಕ್ಕೆ ನಾವು ಯಾವ ಸಂಸ್ಕಾರ ಪಾಠ ಹೇಳ್ತಾ ಇದ್ದು ಹೇಳಿ ಬೇಜಾರಾವುತ್ತು.
ಇದರ ಕಂಡ್ರೆ ಭಕ್ತಿ ಬಪ್ಪದಲ್ಲ, ಪಿಸುರು ಬತ್ತು. – ಹೇಳ್ತ° ಪೆರ್ಲದಣ್ಣ.

~

ದೇವತಾರಾಧನೆಲಿ ಪರಿಶುದ್ಧತೆ ಇರ್ಲಿ. ಆ ಕರ್ಮ ಮಾಡಿದ ಸಾಕ್ಷಾತ್ಕಾರ, ತೃಪ್ತಿ ಸಿಕ್ಕೇಕಾರೆ – ಅದರ್ಲಿ ಕರ್ಮ ಶುದ್ಧತೆ ಇರೆಕ್ಕು.
ಹಾಂಗೆ ಇರೆಕ್ಕಾರೆ – ಶುದ್ಧಲ್ಲಿ ಮಾಡಿದ ಶುದ್ಧ ಮೂರ್ತಿಯೂ, ಅಷ್ಟೇ ಶುದ್ಧಲ್ಲಿ ಮಾಡಿದ ಪೂಜೆಯೂ ಇರೆಕ್ಕು.
ಶುದ್ಧ ಮನಸ್ಸಿದ್ದರೆ ಎಲ್ಲವೂ ಶುದ್ಧಲ್ಲಿಯೇ ಆವುತ್ತು.

ಎಂತ ಹೇಳ್ತಿ?

ಒಂದೊಪ್ಪ: ಒಳ ಗೋಳೆ ಇದ್ದುಗೊಂಡು ದೊಡ್ಡ ಕಾಂಬದರಿಂದ ಒಳವೂ ತುಂಬಿದ ಸಣ್ಣ ಮೂರ್ತಿಗೆ ಹೆಚ್ಚು ಬಾಳ್ವಿಕೆ. ಅಲ್ದೋ?

6 thoughts on “ಮೂರ್ತಿ ನೋಡಿರೆ ಭಕ್ತಿ ಬಪ್ಪ ಹಾಂಗಿರೆಕ್ಕು; ಪಿಸುರು ಬಪ್ಪ ಹಾಂಗಲ್ಲ!

  1. ಬರೆದ್ದು ಚೆಂದ ಆಯ್ದಾತ
    ವಿಷಯ ಗಂಭೀರವೂ , ಮನುಷ್ಯನ ನಡವಳಿಕೆಯ ನಾಚಿಕೆಯೂ ಅಪ್ಪು

  2. ಗಣಪತಿಯ ಕೂರುಸಲೇ ತೋರುಸುತ್ತಕ್ಕಿಂತ ಹೆಚ್ಚು ಉತ್ಸಾಹ ಮುಳುಗುಸಲೆ ತೋರುಸುತ್ತವು.
    ಪೇಯಿಂಟ್ ಹಾಕಿದ ಮೂರ್ತಿ ಮಡುಗೆಡಿ, ಮಣ್ಣಿನ ಮೂರ್ತಿ ಮಡುಗಿ, ಹೇಳಿ ಪ್ರತಿ ವರ್ಷವೂ ಎಷ್ಟು ವಿನಂತಿ ಮಾಡಿದರೂ ಸಮಯಕ್ಕಪ್ಪಗ , ಅದೇ ಬಪ್ಪದು.
    ಬಣ್ಣಕ್ಕೆ, ಅಲಂಕಾರಕ್ಕೆ, ಆಡಂಬರಕ್ಕೆ ಪ್ರಾಮುಖ್ಯತೆ ಹೊರತು ಭಕ್ತಿಗೆ ಅಲ್ಲ. ಇದು ಹೆಚ್ಚಿನ ದಿಕ್ಕೆ ಕಾಂಬ ಸಾಮಾನ್ಯ ನೋಟ.

  3. ಅಯ್ಯೋ, ಕೆಲವು ದಿಕ್ಕಾಣ ಗಣಪತಿ ಉತ್ಸವದ ಅವಸ್ಥೆ ನೋಡಿರೆ ಪಿಸುರು ಬಪ್ಪದಂತೂ ನಿಜ.
    ಸಾರ್ವಜನಿಕವಾಗಿ ಪೈಸೆ ಕಲೆಕ್ಶನು ಮಾಡಿ ಡಿಂಗು ಡಾಂಗು ಮಾಡ್ತದು ಕಾಂಬಗ ಕೋಪ ಬತ್ತು. ಬೆಡಿ ಹೊಟ್ಟುಸುವ ಲೆಕ್ಕಲ್ಲಿ ಬೇಕಾರೂ ಬೇಡದ್ರೂ ಪಟಾಕಿ/ದುರುಸು ಬಿಟ್ಟು ಲಕ್ಷಗಟ್ಳೆ ಪೈಸೆ ಹೊತ್ತುಸುತ್ತವು. ಪೈಸೆಯೂ ಹಾಳು, ವಾತಾವರಣವೂ ಹಾಳು. ಅಂತೂ ಈ ಉತ್ಸವಂಗಳಿಂದಲಾದರೂ ಜವ್ವನಿಗರು ಒಗ್ಗಟ್ಟಾವ್ತವಾನೇ ಹೇಳಿ ಸಂತೋಷ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×