Oppanna.com

ಸ್ವಯಂವರ : ಕಾದಂಬರಿ : ಭಾಗ 31 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   06/01/2020    3 ಒಪ್ಪಂಗೊ

ಅಕ್ಕನಿಂದಲೂ ಚೆಂದದ ,ಶ್ರೀಮಂತಿಕೆಯ ಬದುಕಿನ ಕನಸು ಕಂಡ ಸುಶೀಲನ ಹೊಸ ಬದುಕು ಅದರ ಪಾಲಿಂಗೆ ನರಕ ಸದೃಶ ಅಪ್ಪಲೆ ಹೆಚ್ಚು ದಿನ ಬೇಕಾಯಿದಿಲ್ಲೆ.

ಚಂದ್ರಣ್ಣ ಬಂದು ಸುಶೀಲನನ್ನು, ದಿನೇಸನನ್ನು ಕರಕ್ಕೊಂಡು ಹೋಕು, ಇವರತ್ರೆ ಪೈಸೆ ಇಲ್ಲದ್ದ ಕಾರಣ ಮಗಳಿಂಗೆ ಬೇಕಾಗಿಯಾದರೂ ಒಂದು ವೆವಸ್ಥೆ ಮಾಡಿಕೊಡುಗು, ಅವರೊಟ್ಟಿಂಗೆ ಎನಗೂ ಶ್ರೀಮಂತಿಕೆಯ ಬದ್ಕು ಸಿಕ್ಕುಗು ಹೇಳಿ ಗ್ರೇಶಿದ ತಂಗಮ್ಮನ ಕನಸು ನನಸಾಗದ್ದಿಪ್ಪಗ ಅದಕ್ಕೆ ಸುಶೀಲನತ್ರೆ ಕೋಪ ಬಪ್ಪಲೆ ಸುರುವಾತು.
ಮದುವೆಯಾಗಿ ಎರಡು ತಿಂಗಳಪ್ಪಗ ಸುಶೀಲ ಬಸರಿಯಾತು. ಉದಿಯಪ್ಪಗಲೇ ಹೊಟ್ಟೆ ತೊಳಸಿದಾಂಗಪ್ಪಲೆ ,ಕಾರ್ಲೆ ಬಪ್ಪಲೆ ಸುರುವಪ್ಪಗ ದಿನೇಸಂಗೂ ಅದರತ್ರೆ ಅಸಮಾಧಾನ !!

“ಇಷ್ಟು ಬೇಗ ಬೇಕಾತ ನಿನಗೆ ಬಾಲೆ ? ಎಂತ ಅಷ್ಟುದೆ ಅಂಬ್ರೆಪ್ಪು” ಹೇಳಿ ‘ಬಚ್ಚುತ್ತು’ ಹೇಳಿ ಮನುಗಿದ ಸುಶೀಯ ಎಳಕ್ಕೊಂಡು ಬಕ್ಕದು.
ಆ ಮನೆ ಹೇಳುವ ಗೂಡಿಲ್ಲಿ ನಾಲ್ಕೈದು ಜೆನರೊಟ್ಟಿಂಗೆ ಎಲ್ಲರ ಹಾಂಗೆ ಗೋಣೀಲೇ ಮನುಗುವ ಇವಕ್ಕೆ ಬೇರೆ ರೂಮು, ಸರಿಯಾದ ಹಾಸಿಗೆ, ಹೊದಕ್ಕೆ ಎಂತದೂ ಇಲ್ಲೆ. ಉದಿಯಪ್ಪಗ ಕಾಪಿ ಇಲ್ಲೆ, ಮೀನು ಕೋಳಿ ಕೊರದ ಅಡಿಗೆ ..ಇದೆಲ್ಲ ಕಾಂಬಗ ನಿತ್ಯವೂ ಸುಶೀಗೆ ಬೇಜಾರ ತಡಕ್ಕೊಂಬಲೆ ಬಂಙಪ್ಪದು.
ದಿನೇಸ ಹತ್ತರೆ ಬಪ್ಪದೇ ಅದಕ್ಕೆ ಹೆದರಿಕೆ. ಅದಕ್ಕೆ ಕುಡಿವ ಅಭ್ಯಾಸವೂ ಇದ್ದು ಹೇಳಿ ಇಲ್ಲಿಗೆ ಬಂದ ಮತ್ತೆ ಗೊಂತಾದ್ದದು. ಅವೆಲ್ಲ ಇಲ್ಲಿ ಹೀಂಗಿದ್ದ ವಾತಾವರಣಲ್ಲಿ ಹೇಂಗೆ ಬದ್ಕುತ್ತವು ಹೇಳಿ ಆಶ್ಚರ್ಯ ಆಗಿಂಡಿದ್ದತ್ತು ಸುಶೀಲಂಗೆ. ಅಂಬಗ ಎಲ್ಲ ಅಬ್ಬೆ ಹೇಳುವ ” ಕುಲ ನೋಡಿ ಕೂಸು ಕೊಡೆಕು, ಮರ ನೋಡಿ ಬಳ್ಳಿ ನೆಡೆಕು” ಹೇಳುವ ಮಾತು ನೆಂಪಕ್ಕು.

‘ನಮ್ಮ ಹೆರಿಯರು ಯೇವದನ್ನೂ ಅರಡಿಯದ್ದೆ ಹೇಳಿದ್ದವಿಲ್ಲೆ. ಅವರ ಬಾಯಿಂದ ಬಂದ ಹೀಂಗಿದ್ದ ಗಾದೆಗೊ ನಿಜವಾದ ಬದುಕಿನ ಸತ್ಯವೇ. ಅದರ ಎಲ್ಲ ಪೊಟ್ಟು ವಿಚಾರ ಹೇಳಿ ಕರೇಂಗೆ ನೂಕಿಕ್ಕಿ ಈಗಾಣ ಸಿನೆಮಾ, ನಾಟಕ ನೋಡಿಂಡು ಅದರ್ಲಿಪ್ಪ ಕತೆಗೊ ಸತ್ಯ ಹೇಳಿ ನಂಬಿ ಹಾಂಗೆ ಬದ್ಕುಲೆ ಹೆರಟ ಎನ್ನ ಹಾಂಗಿದ್ದವಕ್ಕೆ ಸಮಾ ಬಡಿಯೆಕು. ಅಲ್ಲದ್ರೂ ದಿನೇಸನ, ತಂಗಮ್ಮನ ಕ್ರಮ ನೋಡಿರೆ ಅವರೊಟ್ಟಿಂಗೆ ಬದ್ಕುಲೆ ಎಡಿಯ ಹೇಳಿ ಹೇಂಗಿದ್ದ ಕೂಸುಗೊಕ್ಕೂ ಗೊಂತಾಯೆಕಾತು‌. ಆದರೆ ಎನಗೇಕೆ ಅಂಬಗ ಅದೆಲ್ಲ ತಲಗೋಯಿದಿಲ್ಲೆ!! ಎನ್ನ ಗ್ರಾಚಾರ!! ಹೀಂಗೆಲ್ಲ ಅನುಭವಿಸೆಕೂಳಿ ಇಕ್ಕು ‘ ಹೇಳಿ ಒಂದೊಂದರಿ ಸಂಕಟ ಪಡುಗದು.

ಅಕ್ಕ ಬಸರಿಯಾದ ಶುದ್ದಿ ತಿಳುಶುಲೆ ಭಾವ° ಎಷ್ಟು ಕೊಶೀಲಿ ಸ್ವೀಟು ತೆಕ್ಕೊಂಡು ಬಯಿಂದವು. ಅಬ್ಬಗೆ ಅಪ್ಪಂಗೆ ಎಷ್ಟು ಕೊಶೀ, ಅಣ್ಣಂಗೆ ಎಷ್ಟು ಸಂಭ್ರಮ!!
‘,ಆನು ಸೋದರ ಮಾವ° ಆವ್ತೆ’ ಹೇಳಿ ಹೇಳಿಂಡು ಸಂತೋಶಲ್ಲಿ ಮಕ್ಕಳ ಹಾಂಗೆ ಮಾಡಿದ್ದ°. ಈಗ !!!!

ಆನು ಬಸರಿ ಹೇಳಿ ಗೊಂತಾದರೆ ಎಂತ ಮಾಡುಗು? ಅವಕ್ಕೆ ತಲೆ ನೆಗ್ಗಿ ನಡವಲೆಡಿಗೋ? ಈಗ ದಿನೇಸಂಗೆ ಎಷ್ಟು ಕೋಪ ಬತ್ತು..ತಂಗಮ್ಮನೂ ಹಾಂಗೇ.
ಎಷ್ಟು ಬೊಡುಶುತ್ತು. ಬಾವಿಂದ ನೀರು ತಪ್ಪಲೆ ಎಲ್ಲ ಎನ್ನನ್ನೇ ಕಳ್ಸೆಕದಕ್ಕೆ‌ .
“ನೀರು ಹೆಚ್ಚು ಬೇಕಪ್ಪದು ಅದಕ್ಕದಾ.ಹಾಂಗೆ ಅದುವೇ ತರ್ಲಿ ” ಹೇಳುಗು, ಮನೆಯೊಳ ಕೋಳಿಗೊ ಕೊಳಕು ಮಾಡಿದ್ದರ ಎಲ್ಲ ತೆಗೆಕು, ವಾರಕ್ಕೊಂದರಿ ಎಲ್ಲೋರ ವಸ್ತ್ರ ತೆಕ್ಕೊಂಡು ನೀರು ತಪ್ಪ ಬಾವಿ ಹತ್ರಂಗೆ ಕೊಂಡೋಗಿ ಒಗದು ಹಾಕೆಕು. ಆ ವಸ್ತ್ರ ಒಗದು ಆರ್ಸುಲೆ ಒಂದು ಬಳ್ಳಿಯೋ, ಸರಿಗೆಯೋ ಎಂತದೂ ಇಲ್ಲೆ. ಪಾರೆಕಲ್ಲಿನ ಮೇಗೆ ಹಾಕಿ ಒಣಗ್ಸೆಕು. ಗಾಳಿಗೆ ಹಾರಿ ಹೋಗದ್ದ ಹಾಂಗೆ ಸಣ್ಣ ಸಣ್ಣ ಕಲ್ಲುಗಳ ಮಡುಗಿ ಒಣಗುವನ್ನಾರ ಕಾದು ಕೂದಿಕ್ಕಿ ಅದರ ಮಡ್ಸಿ ಮಾರಾಪು ಕಟ್ಟಿ ತರೆಕು. ಹಾಂಗೆ ತಂದದರ ಮಡುಗಲೂ ನೇರ್ಪ ಜಾಗೆ ಇಲ್ಲೆ….’ ಹೀಂಗಿದ್ದ ಕೆಲಸಂಗೊ ಸುಶೀಲಂಗೆ ಬೊಡಿವಾಂಗಪ್ಪಲೆ ಸುರುವಾತು. ಅಂದರೂ ಹೇಳುದಾರತ್ರೆ!!

ಉದ್ದ ಜೆಡೆಯ ತಲೆಕಸವೆಲ್ಲ ಉದುರಿ ಸಪೂರದ ಪುಚ್ಚೆ ಬೀಲದ ಹಾಂಗಪ್ಪಲೆ ಸುರುವಾತು. ಅಬ್ಬೆ ಲಾಯ್ಕಲ್ಲಿ ಗರುಗ, ಭೃಂಗರಾಜ ಎಲ್ಲ ಹಾಕಿ ಎಣ್ಣೆ ಕಾಸಿ ಕಿಟ್ಟಿಕೊಂಡಿದ್ದ ತಲಗೆ ಈಗ ಎಣ್ಣೆ ಪಸೆಯೇ ಇಲ್ಲದ್ದಾಂಗಾಗಿ ಜೆಡಕ್ಕು ಕಟ್ಟಿತ್ತು. ಕೆಲಸ ಮಾಡಿ ಅಭ್ಯಾಸ ಇಲ್ಲದ್ದ ಮೃದುವಾದ ಕೈ ಕಾಲುಗೊ ಎಲ್ಲ ಕೆಂಪು ಕೆಂಪಾಗಿ ಚೋಲಿ ಎಳಕ್ಕಿ ಬೇನೆ ಅಪ್ಪಗ ಸುಶೀ ಕೂಗುಗು.

“ಹ್ಹೋ..ಎಷ್ಟೊತ್ತಿಂಗೂ ಕೂಗಲೊಂದು ಗೊಂತಿದ್ದು, ಬೇರೆಂತದೂ ಗೊಂತಿಲ್ಲೆ” ಹೇಳಿ ತಂಗಮ್ಮ ಅಂಬಗಂಬಗ ಹಂಗುಸುಗ ಒಂದರಿ ಸತ್ತರೆ ಸಾಕು ಹೇಳಿ ಅಪ್ಪಲೆ ಸುರುವಾತು ‌.

ತಂಗಮ್ಮನ ತಮ್ಮಂದ್ರು ಒಂದು ದಿನ ಇಲ್ಲಿಗೆ ಬಂದಪ್ಪಗ ಇಲ್ಲಿ ಸುಶೀಲನ ಕಂಡು ಆಶ್ಚರ್ಯವೂ, ಬೇಜಾರವೂ ಆತವಕ್ಕೆ

“ಅಯ್ಯೋ.. ಇದೆಂತ ಮಾಡಿದ್ದು ಕುಞಕ್ಕಾ ನಿಂಗೊ! ಹೋಗಿ ಹೋಗಿ ಎಂಗಳ ಹಾಂಗಿದ್ದ ಮಧು ಮಾಂಸ ತೆಕ್ಕೊಂಬ ಜಾತಿಯ ಮದುವೆ ಆದಿರನ್ನೇ.. ನಿಂಗಳ ಅಬ್ಬೆ ಅಪ್ಪಂಗೆ ಇನ್ನು ಆ ಊರಿಲ್ಲಿ ತಲೆ ನೆಗ್ಗಿ ನಡವಲೆಡಿಗೋ..!! ಅಷ್ಟು ಒಳ್ಳೆ ಬದ್ಕು ಬಿಟ್ಟಿಕ್ಕಿ ಈ ದಿನೇಸನೊಟ್ಟಿಂಗೆ ಬಂದಿರನ್ನೇ..!! ಶ್ಶೋ……” ಹೇಳಿ ಸಂಕಟ ಪಟ್ಟವು.

ಅಶನ ಕೊಟ್ಟ ದಣಿ ಹೇಳಿರೆ ಅವಕ್ಕೆ ದೇವರ ಹಾಂಗೆ. ಮನೆಲಿ ಇಪ್ಪಷ್ಟು ದಿನವೂ ಯೇವದೇ ಕೊರತೆ ಆಗದ್ದಾಂಗೆ ನೋಡಿ ಕೊಂಡ ಚಂದ್ರಣ್ಣ ಅವರ ಪಾಲಿಂಗೆ ದೊಡ್ಡ ಮನುಷ್ಯ°. ಅವಕ್ಕೆ ಆ ಊರಿಲ್ಲಿ ಎಷ್ಟು ಗೌರವ ಇದ್ದು ಹೇಳಿ ತಂಗಮ್ಮನ ತಮ್ಮಂದ್ರಿಂಗೆ ಗೊಂತಿದ್ದು.

ಸುಶೀಲ ಮಾತಾಡಿದ್ದಿಲ್ಲೆ. ಈಗೀಗ ಅದಕ್ಕೆ ಬದುಕಿನ ಅರ್ಥ ಗೊಂತಪ್ಪಲೆ ಸುರುವಾಯಿದು. ಇನ್ನು ವಾಪಾಸು ಅಪ್ಪನಮನೆಗೆ ಹೋದರೆ ಮರ್ಯಾದೆ ಇಲ್ಲೆ ಹೇಳಿ ಅಂದಾಜಾವ್ತದಕ್ಕೆ. ದಿನೇಸನ ಜಾತಿಯವರ ಮದುವೆಯೋ, ಕೋಡಿಯೋ ಇದ್ದರೆ ಅಲ್ಲಿಗೆ ಹೋದರೆ ಇದಕ್ಕೆ ಅವರೊಟ್ಟಿಂಗೆ ಸೇರ್ಲೆ ಎಡಿತ್ತಿಲ್ಲೆ. ಅವೆಲ್ಲ ಇದರ ರೆಜ ದೂರವೇ ಮಡುಗಿಂಡಿತ್ತವು. ಇದಕ್ಕೂದೆ ಅವರ ಕ್ರಮಂಗೊ ನೋಡುಗ ಹೇಸಿಗೆ ಅಪ್ಪದು..!

ದೇವಸ್ಥಾನಕ್ಕೆಲ್ಲ ಹೋದರೆ ಈಗ ಬ್ರಾಹ್ಮರ ಹಂತಿಲಿ ಕೂಬ ಅವಕಾಶ ಇಲ್ಲೆ. ಆರು ಹೇಳಿ ಗುರ್ತ ಹೇಳಿಂಡು ಅವರೆಡೆಲಿ ಹೋಗಿ ಕೂಬದು? ಆಳುಗಳೊಟ್ಟಿಂಗೆ ಕೂಬಗ ಮನಸ್ಸು, ಹೃದಯ ಸಂಕಟ ಪಟ್ಟುಕೊಂಡಿದ್ದತ್ತು. ಕೆಲವು ಜೆನ ಎಲ್ಲ “ನಿನ್ನ ಅಪ್ಪನಮನೆ ಎಲ್ಲಿ? ಆರ ಮಗಳು? ” ಹೇಳಿ ಎಲ್ಲ ಕೇಳಿರೆ ಅಪ್ಪನ ಹೆಸರು ಹೇಳಿ ಅವರ ಹೆಸರಿಂಗೆ ಮಸಿ ಬಳಿವ ಮನಸ್ಸಿಲ್ಲದ್ದೆ
“ಎನಗೆ ಅಬ್ಬೆ ಅಪ್ಪ° ಇಲ್ಲೆ, ಆಶ್ರಮಲ್ಲಿ ಬೆಳದ್ದದು” ಹೇಳುಗದು. ಅಂದರೂ ಯೇವ ಕೆಲಸ ಮಾಡ್ಲೂ ಸರಿಯಾಗಿ ಅಭ್ಯಾಸ ಇಲ್ಲದ್ದ ಅದರ ಕಾಂಬಗಳೇ ಹೆಚ್ಚಿನವಕ್ಕೂ ಅದೊಂದು ಶ್ರೀಮಂತರ ಮನೆ ಮಗಳಾದಿಕ್ಕು’ ಹೇಳಿ ಸಂಶಯ ಬಂದೊಂಡಿದ್ದತ್ತು‌.

ಬಸರಿಯಾದ ಮತ್ತೆ ಅದಕ್ಕೆ ನಿತ್ಯ ಕಣ್ಣೀರಿಲ್ಲಿ ಕೈ ತೊಳವ ಹಾಂಗಿಪ್ಪ ಅನುಭವಂಗ ಮಾಂತ್ರ ಇದ್ದದು. ದಿನೇಸ ಈಗ ಕೂಲಿ ಕೆಲಸಕ್ಕೆ ಹೋಪದು. ಇರುಳು ಮನಗೆ ಬಪ್ಪಗ ಕೊರಳುಮುಟ್ಟ ಕುಡುದು ಮಾಲಿಂಡು ಖಾಲಿ ಕೈಲಿ ಬಪ್ಪ ಕಾರಣ ಮನೆ ಸಾಮಾನು ತಪ್ಪಲೆ ಪೈಸೆ ಎಲ್ಲಿಂದ ಕೊಡುದು? ಎಷ್ಟೋ ದಿನ ದಿನಕ್ಕೆ ಒಂದು ಹೊತ್ತು ಮಾಂತ್ರ ರಜಾ ಹೆಜ್ಜೆತೆಳಿ ಸಿಕ್ಕಿಂಡಿದ್ದದು. ಅಂದರೂ ಅದರತ್ರೆ ಇಪ್ಪ ಪೈಸೆಯ ಹೆರ ತೆಗದ್ದಿಲ್ಲೆ ಸುಶೀಲ.

ಅಪ್ಪನಮನೆಂದ ಬಪ್ಪಗ ತಂದ ಪೈಸೆ ಬೇಗಿಲ್ಲಿ ಇಪ್ಪದರ ಒಂದು ದಿನ ಅಲ್ಲಿಂದ ತೆಗದು ಒಂದು ವಸ್ತ್ರದ ಕಟ್ಟದೊಳ ಹುಗ್ಗುಸಿ ಮಡಿಗಿದ್ದು ಸುಶೀಲ. ಇಲ್ಲಿಗೆ ಬಂದು ಒಂದು ವಾರಪ್ಪಗಳೇ ಆ ಕೆಲಸ ಮಾಡಿದ ಕಾರಣ ದಿನೇಸ, ತಂಗಮ್ಮ ಬೇಗು ಹುಡ್ಕುಗ ಅದು ಸಿಕ್ಕಿದ್ದಿಲ್ಲೆ.
“ಒಂದು ಪೈಸೆ ತಯಿಂದಿಲ್ಲೆ ಇದು. ನಾವೇ ಇದರ ಸಾಂಕೆಕಕ್ಕು” ಹೇಳಿ ತಂಗಮ್ಮ ಪರಂಚುಗ ಬೇಜಾರಾದರೂ ‘ಆನಾಗಿ ಬಲ್ಗಿ ಹಾಕಿಕೊಂಡ ಬದುಕಿದು. ಬಂದದರ ಅನುಭವಿಸುವ°’ ಹೇಳಿ ತಳಿಯದ್ದೆ ಕೂದತ್ತು. ಅಂಬಗಂಬಗ ಪೈಸೆ ಮಡುಗಿದ ಜಾಗೆಯ ಬದಲ್ಸುಗದು. ಅದು ಯಾವಗಾದರು ತಂಗಮ್ಮನ ಕೈಗೆ ಸಿಕ್ಕಿರೆ ಹೋತು! ಮತ್ತೆ ಬದುಕಿಂಗೆ ಧೈರ್ಯ ಇಲ್ಲೆ. ಎಷ್ಟಿದ್ದೂಳಿ ಕೂಡ ಎಣುಸದ್ದೆ ಪುಚ್ಚೆ ಕುಞಿಗಳ ಅಲ್ಲಲ್ಲಿ ಬದಲ್ಸುವ ಹಾಂಗೆ ಈ ಪೈಸಿನ ಕಟ್ಟವನ್ನುದೆ ಆರಿಂಗೂ ಗೊಂತಾಗದ್ದಾಂಗೆ ಬದಲ್ಸಿಂಡಿಕ್ಕು.

ತಿಂಗಳು ತುಂಬಿದ ಬಸರಿಯಾದರೂ ತಂಗಮ್ಮ ರಜವೂ ಪಾಪಪುಣ್ಯ ತೋರ್ಸಿದ್ದಿಲ್ಲೆ ಸುಶೀಲನತ್ರೆ. ದಿನೇಸಂಗೆ ಅದರ ಅಗತ್ಯ ಇಪ್ಪಗ ಮಾಂತ್ರ ಪ್ರೀತಿ. ಸುಶೀಯ ಕೆಮಿಯ ರಿಂಗು, ಕಾಲಿನ ಗೆಜ್ಜೆ ಎಲ್ಲಾ ತಂಗಮ್ಮ ಅಂದೇ ತೆಗದು ಮಡುಗಿದ್ದು.
“ಈ ಊರಿಲ್ಲಿ ಆರೂ ಹೀಂಗೆಲ್ಲ ಚಿನ್ನ ಕಟ್ಟುವವಿಲ್ಲೆ, ಗೆಜ್ಜೆ ಹಾಕುತ್ತವಿಲ್ಲೆ , ಅದರ ಜಾಗ್ರತೆಲಿ ತೆಗದು ಮಡುಗುವ° ” ಹೇಳಿ ಮಂಕಾಡ್ಸಿಯಪ್ಪಗ ಸುಶೀಲಂಗೂ ಅಂಬಗ ಅದು ಸರಿ ಹೇಳಿ ಕಂಡು ತೆಗವಲೆ ಒಪ್ಪಿದ್ದು. ಅದೆಲ್ಲಿಗೆ ಹೋತು ಹೇಳಿ ಇಷ್ಟನ್ನಾರ ಗೊಂತಾಯಿದಿಲ್ಲೆ.
ಬಸರಿಯಾಗಿ ಇಷ್ಟು ಸಮಯ ಆದರೂ ಒಂದರಿಯೂ ಆಸ್ಪತ್ರೆಗೆ ಕರಕ್ಕೊಂಡು ಹೋಯಿದಿಲ್ಲೆ ದಿನೇಸ!. ಹಾಂಗಿದ್ದದೆಲ್ಲ ಸುಶೀಲಂಗೆ ಗೊಂತೂ ಇಲ್ಲೆ. ಈಗ ಮಾಂತ್ರ ಕಾಲಿಲ್ಲಿ ನೀರು ಬಂದು ಬೀಗಿದ ಹಾಂಗಾತು. ನಡವಲೆ ಬಂಙಪ್ಪಲೆ ಸುರುವಾತು. ಆದರೂ ಅದಕ್ಕೆ ಯೇವ ಕೆಲಸಕ್ಕಾದರೂ ದಿನಕ್ಕೆ ಒಂದು ಮೈಲು ನಡೆಯದ್ದೆ ಆಗಲೇ ಆಗ.
“ಒಂದರಿ ಇದರ ಡಾಕ್ಟರನ ಹತ್ರಂಗೆ ಕರಕ್ಕೊಂಡು ಹೋಗಿ, ಇಲ್ಲದ್ರೆ ಹೆರಿಗೆಲಿ ಸಾಯಿಗು ಇದು” ಹೇಳಿ ಹತ್ರಾಣ ಮನೆಯ ಒಂದು ಅಜ್ಜಿ ಬಂದು ಹೇಳಿತ್ತು. ಅದಕ್ಕೆ ತಂಗಮ್ಮ ದೊಡ್ಡಕೆ ನೆಗೆ ಮಾಡಿಂಡು ಹೇಳಿದ್ದದು ಕೇಳಿ ಸುಶೀಲನ ಕೆಮಿಗೆ ಆರೋ ಕಾದ ಸೀಸವ ಎರದ ಹಾಂಗಾತು.

“ಸತ್ತರೆ ಸಾಯಲಿ! ಅದರಪ್ಪನ ಆಸ್ತಿ ಕಂಡು ಅದರ ಒಳ ಹಾಕಿದ್ದು. ಅವಕ್ಕೆ ಮಗಳು ಬೇಡಾಳಿಯಾದರೆ ನವಗೆಂತಕೆ ಇದು! ಇದರ ಕೋಲವಾ, ಮನಾರವಾ….ಆರಿಂಗೆ ಪೂರೈಸುಗು? ನಮ್ಮ ಜಾತಿಂದ ಮದುವೆ ಆಗಿದ್ದರೆ ಕೂಲಿ ಕೆಲಸಕ್ಕಾರು ಕಳ್ಸಲಾವ್ತಿತು. ಇದರಿಂದ ಆರಿಂಗೂ ಒಂದು ಪೈಸಿನಷ್ಟು ಪ್ರಯೋಜನ ಇಲ್ಲೆ. ಮತ್ತೆ ಇದು ಸತ್ತರೆಂತ! ಹಾಂಗೆಂತಾರಾದರೆ ಆಚ ಮನೆ ಬೆಟ್ಟಪ್ಪನ ಮಗಳು ಜಾನುವಿನ ದಿನೇಸಂಗೆ ಮದುವೆ ಮಾಡ್ಸುವೆ”

ಸುಶೀಲನ ತಲಗೆ ಆರೋ ಜೆಪ್ಪಿದಷ್ಟು ಬೇನೆ ಆತು.
‘ಅಯ್ಯೋ.. ಅಪ್ಪನ ಆಸ್ತಿ ಕಂಡು ಎನ್ನತ್ರೆ ಚೆಂದಕೆ ಮಾತಾಡಿ ಒಳ ಹಾಕಿದ್ದಾ!! ಅಯ್ಯೋ.. ಆನೆಂಥ ಪೆದ್ದು! ಅಂದು ಯೇವದೂ ತಲಗೆ ಹೋಯಿದಿಲ್ಲೆ, ಅಣ್ಣ ಹೇಳಿದ ಬುದ್ದಿ ಮಾತುಗೊ ಎಷ್ಟು ಸತ್ಯ! ಇನ್ನು ಇವು ಬಡುದು ಕೊಂದರೂ ಸಮ ಅಪ್ಪನಮನೆಗೆ ಹೋವ್ತಿಲ್ಲೆ’ ಹೇಳಿ ಮನಸ್ಸಿಲ್ಲೇ ಶಪಥ ಮಾಡಿತ್ತು.
‘ಎನ್ನ ಅವು ಇನ್ನು ಕಾಂಬಲಾಗ, ಅವರ ಕೊಂಗಾಟದ ಸುಶೀ ಸತ್ತತ್ತು. ಇನ್ನೆಂತ ಇದ್ದರೂ ಅದರ ಪ್ರೇತ ಇದು! ಮುಕ್ತಿ ಸಿಕ್ಕದ್ದೆ ಅಲೆದಾಡುವ ಪ್ರೇತದ ಹಾಂಗೆ ಇವರೊಟ್ಟಿಂಗೆ ಇವರ ಹಾಂಗೇ ಇಪ್ಪದಿನ್ನು ಹೇಳಿ ಜಾನ್ಸಿಂಡು ಕೋಪಲ್ಲಿ ಹಲ್ಲು ಮುಟ್ಟೆ ಕಚ್ಚಿಯಪ್ಪಗ ಕೆಳ ಹೊಟ್ಟೆಲೆಲ್ಲೋ ಸಣ್ಣಕೆ ಬೇನೆ ಅಪ್ಪಲೆ ಸುರುವಾತು.

“ಜಾನುವಿನ ಮನಗೆ ದಿನೇಸ ಈಗಲೇ ನಿತ್ಯ ಹೋವ್ತು. ಅಂಬಗ ವಿಶಯ ಹೀಂಗಾ! ಅಂದರೂ ಇದರ ಆಸ್ಪತ್ರೆಗೆ ಕರಕ್ಕೊಂಡು ಹೋಗಿ, ಜಾನು ಅಲ್ಲಿರ್ತು, ಇದು ಇಲ್ಲಿರ್ತು ಅಷ್ಟೇ. ಹೇಂಗಾರೂ ನಮ್ಮ ಜಾತಿಯ ಕೂಸುಗಳ ಸಮಕ್ಕೆ ಬಕ್ಕೋ ಈ ಸೊಪ್ಪು, ತುಪ್ಪ ತಿಂಬ ಕೂಸುಗೊ? ಮದಲೇ ಆಲೋಚನೆ ಮಾಡೆಕಾತು. ಅವು ನಮ್ಮ ಒಪ್ಪಿಕೊಳ್ಳವು‌ . ನಾವುದೆ ಹೇಂಗೆ ಅವರಾಂಗೆ ಬದ್ಕುದು?” ಆ ಅಜ್ಜಿ ಮತ್ತೂದೆ ಮಾತಾಡಿಂಡಿದ್ದತ್ತು.

“ಅವು ಒಪ್ಪದ್ದಿಪ್ಪಲೆಂತಾಯಿದು ನವಗೆ!? ಇದರ ಅಪ್ಪಂಗೆ ಹಾಂಕಾರ! ಎಷ್ಟು ಪೈಸೆ ಇದ್ದು ಗೊಂತಿದ್ದಾ.. ರಜ್ಜ ಸಮಯ ಕಳುದರೆ ಕೇಸು ಮಾಡಿಯಾದರೂ ರೆಜ ಪೈಸೆ ತೆಕ್ಕೊಳೆಕು. ಅಪ್ಪನ ಆಸ್ತಿಲಿ ಇದಕ್ಕೂ ಪಾಲಿಲ್ಲೆಯಾ? ಮನ್ನೆ ದಿನೇಸ ಆ ಊರಿಂಗೆ ಹೋಗಿ ಬಯಿಂದು. ಅವು ಮಗಳ ಶುದ್ದಿಲಿಲ್ಲೇಡ, ಹಾಂಗೆ ಮಾಡ್ಲಕ್ಕೋ…?” ತಂಗಮ್ಮ ಒಟ್ಟಾರೆ ಬಾಯಿಗೆ ಬಂದದರ ಬೈವಗ ಒಳ ಒಂದು ಮೂಲೆಲಿ ಕೂದು ಮನಸಿಲ್ಲೇ ದುಃಖ ಪಟ್ಟುಕೊಂಡಿದ್ದ ಸುಶೀಲಂಗೆ ಹೊಟ್ಟೆ ಬೇನೆ ರಜ ರಜವೇ ಹೆಚ್ಚಾವ್ತಾ ಇದ್ದತ್ತು.

“ಅಯ್ಯೋ.. ಅಬ್ಬೇ…..” ಹೇಳಿ ಒಂದರಿ ದೊಡ್ಡಕೆ ಹೇಳಿ ಹೋತದಕ್ಕೆ. ಸುಶೀಲನ ದೆನಿ ಕೇಳಿ ಒಳ ಬಂದ ಆ ಅಜ್ಜಿಗೆ ಇದರ ಕಾಂಬಗಳೇ ಫಕ್ಕನೆ ವಿಶಯ ಅಂದಾಜಾತು. ಅದು ತಂಗಮ್ಮ ಹೇಳುವನ್ನಾರ ಕಾದು ನಿಲ್ಲದ್ದೆ ಅದರ ಗುಡಿಚ್ಚೆಲಿಂಗೆ ಹೋಗಿ ಅದರ ಮಗನತ್ರೆ ವಾಹನ ತಪ್ಪಲೆ ಹೇಳಿಕ್ಕಿ ಪುನಾ ಸುಶೀಲ ಇಪ್ಪಲ್ಲಿಗೆ ಬಂತು.
“ಆಸ್ಪತ್ರೆಗೆ ಕೊಂಡೋಪಲೆ ವಸ್ತ್ರ ಎಲ್ಲ ತೆಗದು ಮಡುಗಿದ್ದೆಯಾ?” ಕೇಳಿಯಪ್ಪಗಳೇ ಸುಶೀಲಂಗೆ ವಸ್ತ್ರ ಎಲ್ಲ ಬೇಕು ಹೇಳಿ ಗೊಂತಾದ್ದು.
‘ಎಂತ ವಸ್ತ್ರ? ಎಲ್ಲಿಂದ ವಸ್ತ್ರ! ‘ ಇಲ್ಲಿ ಲಾಯ್ಕದ ವಸ್ತ್ರ ಒಂದಾದರೂ ಇಕ್ಕಾ….’ ಫಕ್ಕನೆ ಅಬ್ಬೆಯ‌ನ್ನೇ ನೆಂಪಾತು.
ಶೈಲ ಬಸರಿ ಹೇಳಿ ಗೊಂತಾದ ಮತ್ತೆ ಅಬ್ಬೆ ಹಳೆಯ ಬೆಳಿ ವಸ್ತ್ರಂಗಳ ಎಲ್ಲ ಲಾಯ್ಕಲ್ಲಿ ಬೆಶಿನೀರು ಹಾಕಿ ತೊಳದು, ಬೆಶಿಲಿಲ್ಲಿ ಒಣಗಿಸಿ ಪೆಟ್ಟಿಗೆಲಿ ಮಡುಸಿ ಮಡುಗಿಂಡಿದ್ದದು ನೆಂಪಾತು.
“ಮಕ್ಕಳ ಮನುಶುಲೆ ಲಾಯ್ಕದ ವಸ್ತ್ರ ಆಯೆಕು. ಅವರ ನಾವು ಮುಟ್ಟುಗಳೂ ಲಾಯ್ಕಲ್ಲಿ ಕೈ ತೊಳದೇ ಮುಟ್ಟೆಕು. ಎಂತಕೇಳಿರೆ ಮಕ್ಕೊ ಹೂಗಿನ ಹಾಂಗೆ. ರಜ್ಜ ದೊಡ್ಡಪ್ಪನ್ನಾರ ಜಾಗ್ರತೆಲಿ ನೋಡೆಕು. ಬಾಳಂತನ ಸಮಯಕ್ಕಪ್ಪಗ ಗಡಿಬಿಡಿ ಮಾಡುದಕ್ಕಿಂತ ರಜ ಮದಲೇ ಹೇಮಾರ್ಸಿ ಮಡುಗಿರೆ ಮತ್ತಂಗೆ ಸುಲಭ ಆವ್ತು” ಹೇಳಿ ಹೇಳಿಂಡೇ ತೋಟಂದ ತಂದ ಅಗಲ ಹಾಳೆಯ ಕರೆ ಕೊರದು ತೊಟ್ಲಿನ ಅಡಿಲಿ ಮಡುಗಿಂಡಿದ್ದದೂ ನೆಂಪಿಂಗೆ ಬಂತದಕ್ಕೆ.
“ಪಾಪುವಿನ ಮನುಶುಲೆ ಆದಿಕ್ಕು ಆ ಹಾಳೆಗಳ ಅಬ್ಬೆ ತೆಗದು ಮಡುಗಿದ್ದದು, ಆದರೆ ಎನಗದೆಲ್ಲ ತಲಗೆ ಹೋಯಿದೇ ಇಲ್ಲೆ. ಎಲ್ಯಾದರು ಹೋದಲ್ಲಿ ಬೆಳಿ ಬೆಳಿ ವಸ್ತ್ರಲ್ಲಿ ಒಪ್ಪಕೆ ಮನುಗಿದ ಪುಟ್ಟು ಮಕ್ಕಳ ನೋಡಿ ಗುಲಾಬಿ ಎಸಳಿನ ಬಣ್ಣದ ಕೈ ಕಾಲುಗಳ ಮೆಲ್ಲಂಗೆ ಮುಟ್ಟಿ ನೋಡಿ ಮಾಂತ್ರ ಗೊಂತಿಪ್ಪದಷ್ಟೆ’

” ಬಾ…ಹೋಪೋ°.. ನಿನಗೊಂದು ವೆವಸ್ಥೆ ಮಾಡ್ತೆ. ಒಟ್ಟಿಂಗೆ ಓಡಿ ಬಪ್ಪಲೂ ಗಡಿಬಿಡಿ. ಇಲ್ಲಿ ಬಂದಪ್ಪಗ ಕೂದು ಕಾಲು ನೀಡುವಂದ ಮದಲೇ ಅದಕ್ಕೆ ಮಕ್ಕಳೂ ಬೇಕು” ತಂಗಮ್ಮ ಪರಂಚಿಂಡೇ ಒಂದು ತೊಟ್ಟೆಲಿ ಹಳೆ ಸೀರೆ ತುಂಡುಗಳ ಹಾಕಿ ತೆಕ್ಕೊಂಡತ್ತು.
ಸುಶೀಗೆ ಏಕೋ ಆ ಸೀರೆ ತುಂಡಿಲ್ಲಿ ಪಾಪುವಿನ ಮನುಶುದು ಜಾನ್ಸುಗಳೇ ಎಂತೋ ಆತು. ಹೊಟ್ಟೆ ಬೇನೆ ಆವ್ತಾಯಿದ್ದರೂ ಹೇಂಗೋ ಹೋಗಿ ಬೇಗಿಂದ ಒಂದು ಸೀರೆ ತೆಕ್ಕೊಂಡತ್ತು. ಪಟ್ಟೆ ಸೀರೆಯ ಹಾಂಗೆ ಕಾಂಬ ನೂಲಿನ ಸೀರೆ ಅದು. ಅಣ್ಣ ಒಂದರಿ ಎಲ್ಲಿಗೋ ಹೋದಿಪ್ಪಗ ಚೆಂದ ಕಂಡು ತೆಗದ ಸೀರೆ.
“ಕೋಟನ್ ಸೀರೆ ಆದರೂ ಚೆಂದ ಕಾಣ್ತಬ್ಬೇ. ನಮ್ಮ ರಾಜಕುಮಾರಿಗೆ ಅಕ್ಕು” ಹೇಳಿ ತಮಾಶೆ ಮಾಡಿಕ್ಕಿ ಸುಶೀಯ ಹೆಗಲಿಂಗೆ ಹಾಕಿ ಅಬ್ಬಗೆ ತೋರ್ಸಿದ್ದ°.

ದಿನೇಸನೊಟ್ಟಿಂಗೆ ಹೆರಡುವ ಗಡಿಬಿಡಿಲಿ ಕೈಗೆ ಸಿಕ್ಕಿದ ಎರಡು ಮೂರು ಸೀರೆ ತುಂಬುಸುಗ ಆ ಸೀರೆಯೂ ಇದ್ದತ್ತು. ಒಂದರಿಯೂ ಹೆರ ತೆಗೆಯದ್ದ ಆ ಸೀರೆಯ ಸಣ್ಣಕೆ ಮಡುಸಿ ಕೈಲಿ ಹಿಡ್ಕೊಂಡು ಮನೆಂದ ಹೆರ ಇಳುದತ್ತು.
ಅಷ್ಟಪ್ಪಗ ದಿನೇಸನೂ ರಿಕ್ಷಾ ತೆಕ್ಕೊಂಡು ಆ ಅಜ್ಜಿಯ ಮಗನೊಟ್ಟಿಂಗೆ ಬಂತು. ಹಾಂಗೆ ತಂಗಮ್ಮ, ದಿನೇಸ, ಅಜ್ಜಿಯೊಟ್ಟಿಂಗೆ ಸುಶೀಲ ಆಸ್ಪತ್ರೆಯೊಳಾಂಗೆ ಹತ್ತಿತ್ತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

3 thoughts on “ಸ್ವಯಂವರ : ಕಾದಂಬರಿ : ಭಾಗ 31 – ಪ್ರಸನ್ನಾ. ವಿ. ಚೆಕ್ಕೆಮನೆ

  1. Susheelana appa amma ondari aadaru adara nodule barekkathu.. hengaru madi adara ee narakanda thapsekkatu.. madida thappinge pashchataapa padta ippaga bere shiksheye beda..

  2. ರವಿ ಕಾಣದ್ದು ಕವಿ ಕಂಡ ಹೇಳುದು ಸತ್ಯ.. ಹೇಂಗಿದ್ದ ಕೂಸಿನ ಜೀವನ ಹೆಂಗಾತು..ಮನಸ್ಸು ಚುರುಕ್ ಹೇಳ್ತು..ಸಿನೆಮಾ ನಾಟಕ ನೋಡಿ ಸುಖಲ್ಲಿ ಬದುಕ್ಕುವೆ ಹೇಳಿ ಅದು ಗ್ರೈಶಿದ್ದು ..ಇದರಿಂದ ಎಲ್ಲೋರಿಂಗೂ ಬುದ್ದಿ ಬರೆಕ್ಕು..ಎಂಥಾ ಸ್ಥಿತಿಗೆ ಸುಶಿ ಎತ್ತಿತ್ತು..ಮುಂದೆ ಇನ್ನೂ ಯಾವ ಶಿಕ್ಷೆ ಇದ್ದೋ ದೇವರೇ ಬಲ್ಲ..ಕಥೆ ಹೆಣೆದ ರೀತಿ ಮೆಚ್ಚೆಕ್ಕು ಪ್ರಸನ್ನ…

  3. ಓಹ್!! ಕತೆ ಓದಿ ಮನಸ್ಸು ಒಂದರಿ ಚುರುಕ್ ಹೇಳಿ ಆತು. ಚೆ. ನಮ್ಮ ಸುಶೀಲನ ಅವಸ್ಥೆ ಎಂತದು. ಏವ ಕೂಸುಗವಕ್ಕು ಈ ಗತಿ ಬಪ್ಪಲಾಗಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×